ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, July 31, 2020

Mahabharata Tatparya Nirnaya Kannada 17176_17180

ಜನಾರ್ದ್ದನಶ್ಚ ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್ ।

ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥

 

ಶ್ರೀಕೃಷ್ಣನೂಕೂಡಾ ಶುಭದಿನದಲ್ಲಿ ರುಗ್ಮಿಣಿಯ ಕೈಹಿಡಿದನು. ಈ ಪಾಣೀಗ್ರಹಣ ದ್ವಾರಕಾಪಟ್ಟಣದಲ್ಲಿರುವವರಿಗೆ ಅತ್ಯಂತ ದೊಡ್ಡ ಉತ್ಸವವಾಯಿತು.

 

ಚತುರ್ಮ್ಮುಖೇಶಪೂರ್ವಕಾಃ ಸುರಾ ವಿಯತ್ಯವಸ್ಥಿತಾಃ ।

ಪ್ರತುಷ್ಟುವುರ್ಜ್ಜನಾರ್ದ್ದನಂ ರಮಾಸಮೇತಮವ್ಯಯಮ್ ॥೧೭.೧೭೭॥

 

ಚತುರ್ಮುಖ, ರುದ್ರ, ಮೊದಲಾಗಿರತಕ್ಕಂತಹ ದೇವತೆಗಳು ಆಕಾಶದಲ್ಲಿ ನಿಂತು, ಲಕ್ಷ್ಮೀಯಿಂದ ಒಡಗೂಡಿದ, ನಾಶವಿಲ್ಲದ ಪರಮಾತ್ಮನನ್ನು ಸ್ತೋತ್ರಮಾಡಿದರು.

 

ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।

ವಿಚೇರುರುತ್ತಮೋತ್ಸವೇ ರಮಾರಮೇಶಯೋಗಿನಿ ॥೧೭.೧೭೮॥

 

ಮುನಿಶ್ರೇಷ್ಠರು, ಗಂಧರ್ವರೇ ಮೊದಲಾದವರು, ಯಾದವರಿಂದ ಕೂಡಿಕೊಂಡು, ಲಕ್ಷ್ಮೀ ಹಾಗೂ ನಾರಾಯಣರಿಗೆ ಸಂಬಂಧಿಸಿದ ಅತ್ಯಂತ ಉತ್ಕೃಷ್ಟವಾದ ಈ ಉತ್ಸವದಲ್ಲಿ ವಿಹರಿಸಿದರು.

 

ಸುರಾಂಶಕಾಶ್ಚ ಯೇ ನೃಪಾಃ ಸಮಾಹುತಾ ಮಹೋತ್ಸವೇ ।

ಸಪಾಣ್ಡವಾಃ ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥

 

ದೇವತಾಂಶವುಳ್ಳ ಯಾವ ರಾಜರು ಈ ಮಹೋತ್ಸವದಲ್ಲಿ ಕರೆಸಲ್ಪಟ್ಟರೋ, ಅವರು ಪಾಣ್ಡವರಿಂದ ಕೂಡಿದವರಾಗಿ ರುಗ್ಮಿಣಿಯಿಂದ ಕೂಡಿರುವ ಕೃಷ್ಣನ ಮದುವೆಯ ಮಹೋತ್ಸವಕ್ಕೆ ಬಂದರು.  

 

ಸಮಸ್ತಲೋಕಸುನ್ದರೌ ಯುತೌ ರಮಾರಮೇಶ್ವರೌ ।

ಸಮೀಕ್ಷ್ಯಮೋದಮಾಯಯುಃ ಸಮಸ್ತಲೋಕಸಜ್ಜನಾಃ ॥೧೭.೧೮೦॥

 

ಸಮಸ್ತ ಲೋಕದಲ್ಲಿಯೇ ಅತ್ಯಂತ ಸುಂದರರೆನಿಸಿದ ರುಗ್ಮಿಣಿ-ಕೃಷ್ಣರು ಕೂಡಿರುವುದನ್ನು ನೋಡಿ, ಸಮಸ್ತ ಲೋಕದಲ್ಲಿರುವ ಸಜ್ಜನರು ಸಂತಸವನ್ನು ಹೊಂದಿದರು.


Mahabharata Tatparya Nirnaya Kannada 17164_17175

ಅಥಾsಸಸಾದ ಸೌಭರಾಡ್ ಹರಿಂ ಶರಾಮ್ಬುವರ್ಷಣಃ ।

ಹರಿಃ ಶರಂ ಯಮೋಪಮಂ ಮುಮೋಚ ತಸ್ಯ ವಕ್ಷಸಿ ॥೧೭.೧೬೪॥

 

ರುಗ್ಮಿ ಸೋತನಂತರ ಸೌಭಸಾಲ್ವನು ಬಾಣಗಳ ಮಳೆಗರೆಯುವವನಾಗಿ ಪರಮಾತ್ಮನನ್ನು ಕುರಿತು ತೆರಳಿದನು. ಪರಮಾತ್ಮನು ಯಮದಂಡದಂತೆ ಇರುವ ಬಾಣವನ್ನು ಆ ಸಾಲ್ವನ ವಕ್ಷಸ್ಥಳಕ್ಕೆ ಬಿಟ್ಟನು.   

 

ಶರೇಣ ತೇನ ಪೀಡಿತಃ ಪಪಾತ ಮನ್ದಚೇಷ್ಟಿತಃ ।

ಚಿರಾತ್ತಸಙ್ಜ್ಞಕೋsಗಮತ್ ತ್ರಿನೇತ್ರತೋಷಣೇಚ್ಛಯಾ ॥೧೭.೧೬೫॥

 

ಆ ಬಾಣದಿಂದ ಪೀಡಿತನಾಗಿ ಒದ್ದಾಡುತ್ತಾ ಬಿದ್ದ  ಸಾಲ್ವನು, ಬಹಳ ಹೊತ್ತಿನ ನಂತರ ಮೂರ್ಛೆ ಬಂದವನಾಗಿ ಮೇಲೆದ್ದು, ರುದ್ರನನ್ನು ಪ್ರೀತಿಗೊಳಿಸಲೋಸುಗ ತೆರಳಿದನು(ರುದ್ರನನ್ನು ಕುರಿತು ತಪಸ್ಸನ್ನಾಚರಿಸಲು ಕಾಡಿಗೆ ತೆರಳಿದನು)

 

ಸಮಸ್ತರಾಜಸನ್ನಿಧಾವಯಾದವಾಂ ಮಹೀಮಹಮ್ ।

ಕರಿಷ್ಯ ಇತ್ಯುದೀರ್ಯ ಸ ವ್ಯಧಾತ್ ತಪೋsತಿದುಶ್ಚರಮ್ ॥೧೭.೧೬೬॥

 

ಎಲ್ಲಾ ರಾಜರ ಸಮಕ್ಷಮದಲ್ಲಿ ಸೌಭಸಾಲ್ವನು “ನಾನು ಭೂಮಿಯನ್ನು ಯಾದವಹೀನರನ್ನಾಗಿ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿ, ಅತ್ಯಂತ ದುಶ್ಚರವಾದ ತಪಸ್ಸನ್ನು ಮಾಡಿದನು.

 

ಅಥೋ ವಿವೇಶ ಕೇಶವಃ ಪುರೀಂ ಕುಶಸ್ಥಲೀಂ ವಿಭುಃ ।

ಪ್ರಿಯಾಯುತೋsಬ್ಜಜಾದಿಭಿಃ ಸಮೀಡಿತಃ ಸುರೇಶ್ವರೈಃ  ॥ ೧೭.೧೬೭॥

 

ತದನಂತರ, ಸರ್ವಸಮರ್ಥನಾದ ಕೇಶವನು ರುಗ್ಮಿಣಿಯಿಂದ ಕೂಡಿಕೊಂಡು, ಚತುರ್ಮುಖನೇ  ಮೊದಲಾಗಿರುವ ದೇವತೆಗಳಿಂದ ಸ್ತುತನಾಗಿ, ದ್ವಾರಕಾ ಪಟ್ಟಣವನ್ನು ಪ್ರವೇಶಮಾಡಿದನು.  

 

ಪುರಾ ತತೋ ಹಲಾಯುಧಃ ಪ್ರಿಯಾಂ ನಿಜಾಂ ಪುರಾSಪಿ ಹಿ ।

ಸ ವಾರುಣೀಸಮಾಹ್ವಯಾಮವಾಪ ರೈವತೀಂ ವಿಭುಃ ॥೧೭.೧೬೮ ॥

 

ಇದಕ್ಕೂ ಮೊದಲು ಬಲರಾಮನು, ಮೂಲರೂಪದಲ್ಲಿಯೂ ಕೂಡಾ ವಾರುಣೀ ಎಂದು ಹೆಸರುಳ್ಳ, ತನ್ನ ಹೆಂಡತಿಯಾದ, ಭೂಮಿಯಲ್ಲಿ  ರೇವತ ರಾಜನ ಮಗಳಾಗಿ ಅವತರಿಸಿರುವ ರೇವತೀದೇವಿಯನ್ನು  ಮದುವೆಯಾದನು.

 

(ಈ ಹಿನ್ನೆಲೆಯಲ್ಲಿರುವ ಕಥೆಯನ್ನು ವಿವರಿಸುತ್ತಾರೆ: )

 

ಪತಿಂ ಯಥಾsನುರೂಪಿಣಂ ತದೀಯಮೇವ ಪೂರ್ವಕಮ್ ।

ಪಿತಾ ತದೀಯ ಐಚ್ಛತ ಪ್ರವೇತ್ತುಮಬ್ಜಸಮ್ಭವಾತ್ ॥೧೭.೧೬೯॥

 

 ರೇವತೀದೇವಿಯ ತಂದೆಯು ಅವಳ ರೂಪಕ್ಕೆ ಅನುರೂಪನಾದ, ಪೂರ್ವಜನ್ಮದಲ್ಲಿ ಅವಳ ಗಂಡನಾಗಿರತಕ್ಕವನೇ ಅವಳಿಗೆ ಗಂಡನಾಗಿ ಸಿಗಬೇಕು ಎಂದು ಬಯಸಿ, ಅಂಥಹ ಗಂಡು ಯಾರೆಂದು ಬ್ರಹ್ಮದೇವರಿಂದ ತಿಳಿಯಲು ಬಯಸಿದ.

 

ಸ ತತ್ಸದೋ ಗತೋ ವರಾತ್ ತದೀಯತಃ ಪ್ರಗೀತಿಕಾಮ್ ।

ನಿಶಮ್ಯ ನಾವಿದದ್ ಗತಂ ಯುಗೋರುಕಾಲಪರ್ಯ್ಯಯಮ್ ॥೧೭.೧೭೦॥

 

ಸದೇಹನಾಗಿ ಸತ್ಯಲೋಕಕ್ಕೆ ಹೋಗಿ ಬರಬಲ್ಲ ವರವನ್ನು ಬ್ರಹ್ಮದೇವರಿಂದ ಹೊಂದಿದ್ದ ಆತನು, ಮಗಳೊಂದಿಗೆ ಸತ್ಯಲೋಕಕ್ಕೆ ತೆರಳಿದನು. ಬ್ರಹ್ಮದೇವರ ಆಸ್ಥಾನದಲ್ಲಿ ನಡೆಯುತ್ತಿರುವ ಗಾನ ವಿಶೇಷವನ್ನು  ಕೇಳುತ್ತಾ, ಅವನಿಗೆ ಯುಗ-ಯುಗಗಳೇ ಸರಿದು ಹೋದದ್ದು ತಿಳಿಯಲಿಲ್ಲ.  

 

ನರಾನಯೋಗ್ಯಗೀತಿಕಾ ವಿಮೋಹಯೇತ್ ತತೋ ನೃಪಃ ।

ಸುಮೂಢಬುದ್ಧಿರನ್ತತೋsಲ್ಪಕಾಲ ಇತ್ಯಮನ್ಯತ ॥೧೭.೧೭೧॥

 

ಮನುಷ್ಯರನ್ನು ಅವರ ಯೋಗ್ಯತೆಗಿಂತ ಮೇಲ್ಪಟ್ಟ ವಿಷಯಗಳು (ಗೀತೆ, ಸೌಂದರ್ಯ,  ಮೊದಲಾದವುಗಳು) ಮೋಹಗೊಳಿಸುತ್ತವೆ. ಆ ಕಾರಣದಿಂದ ರಾಜನು ಬ್ರಹ್ಮದೇವರ ಸಭೆಯಲ್ಲಿನ ಗಾನವಿಶೇಷದಿಂದ ಅತ್ಯಂತ ಮೋಹಗೊಂಡ ಬುದ್ಧಿಯುಳ್ಳವನಾಗಿ, ‘ಅಲ್ಪಕಾಲವಷ್ಟೇ ಕಳೆಯಿತು’ ಎಂದು ತಿಳಿದನು.

 

ಸ ಮೂರ್ಚ್ಛಿತಃ ಪ್ರಬೋಧಿತೋsಬ್ಜಜೇನ ತಂ ತ್ವಪೃಚ್ಛತ ।

ಸುತಾಪತಿಂ ಬಲಂ ಚ ಸೋsಬ್ರವೀದ್ ಯುಗಾತ್ಯಯೇ ಬಹೌ ॥೧೭.೧೭೨॥

 

ಹೀಗೆ ಬಹಳ ಯುಗಗಳು ಉರುಳಲು, ಮೂರ್ಛೆಹೊಂದಿದ್ದ ಅವನು ಬ್ರಹ್ಮದೇವರಿಂದ ಎಬ್ಬಿಸಲ್ಪಟ್ಟವನಾಗಿ, ಬ್ರಹ್ಮನಿಂದ ತನ್ನ ಮಗಳಿಗೆ ಗಂಡನನ್ನು ಕೇಳಿದನು. ಬ್ರಹ್ಮದೇವರಾದರೋ, ಆ ರೇವತಿಗೆ ಬಲರಾಮನನ್ನು ಗಂಡನನ್ನಾಗಿ ಹೇಳಿದರು.

 

ಸ ರೈವತೋ ಬಲಾಯ ತಾಂ ಪ್ರದಾಯ ಗನ್ಧಮಾದನಮ್ ।

ಗತೋsತ್ರ ಚೀರ್ಣ್ಣಸತ್ತಪಾ ಅವಾಪ ಕೇಶವಾನ್ತಿಕಮ್ ॥೧೭.೧೭೩॥

 

ಸತ್ಯಲೋಕದಿಂದ ಹಿಂದಿರುಗಿದ ಆ ರೈವತ ರಾಜನು, ಬಲರಾಮನಿಗೆ ತನ್ನ ಮಗಳನ್ನಿತ್ತು, ಗನ್ಧಮಾದನ ಪರ್ವತಕ್ಕೆ ತೆರಳಿ, ಆ ಪರ್ವತದಲ್ಲಿ ತಪಸ್ಸನ್ನು ಮಾಡುತ್ತಾ, ಪರಮಾತ್ಮನ ಬಳಿ ತೆರಳಿದನು.

 

ಬಲೋsಪಿ ತಾಂ ಪುರಾತನಪ್ರಮಾಣಸಮ್ಮಿತಾಂ ವಿಭುಃ ।

ಹಲೇನ ಚಾSಜ್ಞಯಾ ಸಮಾಂ ಚಕಾರ ಸತ್ಯವಾಞ್ಛಿತಃ ॥೧೭.೧೭೪॥

 

ಸತ್ಯಕಾಮನೂ, ಸಮರ್ಥನೂ ಆದ ಬಲರಾಮನು, ಪೂರ್ವಯುಗದಲ್ಲಿನ ಮನುಷ್ಯರ ಎತ್ತರವಿರುವ ಅವಳನ್ನು, ತನ್ನ ನೇಗಿಲಿನಿಂದ ಜಗ್ಗಿ, ತನ್ನ ಎತ್ತರಕ್ಕೆ ಸಮಳನ್ನಾಗಿ ಮಾಡಿದನು.    

 

ತಯಾ ರತಃ ಸುತಾವುಭೌ ಶಠೋಲ್ಮುಕಾಭಿಧಾವಧಾತ್ ।

ಪುರಾSರ್ಯಮಾಂಶಕೌ ಸುರಾವುದಾರಚೇಷ್ಟಿತೋ ಬಲಃ ॥೧೭.೧೭೫॥

 

ಆ ಸುವೃತೆಯಿಂದ ಸಂತಸಪಟ್ಟವನಾದ ಬಲರಾಮನು, ಮೊದಲು ‘ಆರ್ಯಮ’ ಹಾಗೂ ‘ಅಂಶಕ’ ಎಂದು ಹೆಸರುಳ್ಳ ದೇವತೆಗಳಾದವರನ್ನು,  ಶಠ ಹಾಗೂ ಉಲ್ಮುಕ ಎಂಬ ಹೆಸರಿನ ಮಕ್ಕಳಾಗಿ ಪಡೆದನು.