ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 22, 2020

Mahabharata Tatparya Nirnaya Kannada 2001_2004

೨೦. ಖಾಣ್ಡವದಾಹಃ

ಓಂ  

ಯಜ್ಞೋರುದಾನನರದೇವವನ್ದ್ಯತಾಪ್ರಶ್ನರ್ಷಿಪೂಜಾಸು ಯುಧಿಷ್ಠಿರೋsಭೂತ್ ।

ಧರ್ಮ್ಮಾನುಶಾಸ್ತಿಹರಿತತ್ವಶಂಸನಸ್ವರಾಷ್ಟ್ರರಕ್ಷಾದಿಷು ಭೀಮ ಆಸೀತ್ ॥೨೦.೦೧॥

 

ಯುಧಿಷ್ಠಿರನು ಯಜ್ಞ, ದಾನ, ರಾಜರು ಬಂದಾಗ ಅವರನ್ನು ಎದುರುಗೊಳ್ಳುವುದು, ಋಷಿಗಳೊಂದಿಗೆ ತತ್ವವಿಚಾರ, ಋಷಿಗಳ ಪೂಜೆ, ಇವುಗಳಲ್ಲಿ ತನ್ನನ್ನು ತೊಡಗಿಸಿಕೊಂಡನು. ಧರ್ಮದ ಅನುಶಾಸನ, ಪರತತ್ತ್ವದ ಚಿಂತನ ಮತ್ತು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಭೀಮಸೇನನಿದ್ದನು.   

 

ಸ್ತ್ರೀಧರ್ಮ್ಮಸಂಶಾಸನಭೃತ್ಯಕೋಶರಕ್ಷಾವ್ಯಯಾದೌ ಗುಣದೋಷಚಿನ್ತನೇ ।

ಅನ್ತಃಪುರಸ್ಥಸ್ಯ ಜನಸ್ಯ ಕೃಷ್ಣಾ ತ್ವಾಸೀದ್ಧರೇರ್ದ್ಧರ್ಮ್ಮನಿದರ್ಶನೀ ಚ ॥೨೦.೦೨॥

 

ದ್ರೌಪದಿಯು ಸ್ತ್ರೀಧರ್ಮಸಂಶಾಸನ (ಹೆಣ್ಣುಮಕ್ಕಳು ಹೇಗಿರಬೇಕು ಇತ್ಯಾದಿ ಧರ್ಮವನ್ನು ಹೇಳುವುದರಲ್ಲಿ), ಭೃತ್ಯರ ಪೋಷಣೆ, ಕೋಶರಕ್ಷಣೆ, ಯಾವ ರೀತಿ ಖರ್ಚು ಮಾಡಬೇಕು ಎನ್ನುವುದರಲ್ಲಿ, ಗುಣದೋಷ ಚಿಂತನೆ(ಯಾರ ಗುಣ ಹೇಗೆ, ಯಾರ ದೋಷ ಏನು, ಅದನ್ನು ಹೇಗೆ ಸರಿಪಡಿಸಬೇಕು ಎನ್ನುವ) ಇತ್ಯಾದಿ ವಿಷಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಪರಮಾತ್ಮನನ್ನು ಯಾವರೀತಿ ಒಲಿಸಿಕೊಳ್ಳಬೇಕು ಎನ್ನುವ ತತ್ವವನ್ನು ಅಂತಃಪುರದಲ್ಲಿರತಕ್ಕ ಜನರಿಗೆ ಉಪದೇಶಿಸುತ್ತಿದ್ದಳು.

[ಮಹಾಭಾರತದ ವನಪರ್ವದಲ್ಲಿ ಬರುವ ಸ್ತ್ರೀಧರ್ಮಪರ್ವದಲ್ಲಿ ಇಲ್ಲಿ ಹೇಳಿದ ‘ಸ್ತ್ರೀಧರ್ಮಸಂಶಾಸನ’ ಕುರಿತಾದ ಅದ್ಭುತ ವಿಷಯವನ್ನು ದ್ರೌಪದೀ-ಸತ್ಯಭಾಮಾ ಸಂವಾದ ರೂಪದಲ್ಲಿ ನಾವು ಕಾಣಬಹುದು.  ‘ಕ್ಷೇತ್ರಾದ್ ವನಾದ್ ವಾ ಗ್ರಾಮಾದ್  ವಾ ಭರ್ತಾರಂ  ಗೃಹಮಾಗತಮ್ । ಅಭ್ಯುತ್ಥಾಯಾಭಿನನ್ದಾಮಿ ಆಸನೇನೋದಕೇನ ಚ । ಪ್ರಮೃಷ್ಟಭಾಣ್ಡಾ ಮೃಷ್ಟಾನ್ನಾ ಕಾಲೇ ಭೋಜನದಾಯಿನೀ’ (ವನಪರ್ವ ೨೩೪.೩೬), ಕ್ಷೇತ್ರದಿಂದಾಗಲೀ, ಕಾಡಿನಿಂದಾಗಲೀ, ಹೀಗೆ ಎಲ್ಲಿಂದಲೇ ಆಗಲಿ, ಗಂಡ ಮನೆಗೆ ಬಂದರೆ ಎದ್ದು ನಾನೇ ಅವನನ್ನು ಎದುರುಗೊಳ್ಳುತ್ತೇನೆ, ಆಸನ ನೀಡಿ, ನೀರನ್ನುಕೊಟ್ಟು ಅವನನ್ನು ಸಂತೋಷಗೊಳಿಸುತ್ತೇನೆ, ಚೆನ್ನಾಗಿರುವ ಪಾತ್ರೆಯಲ್ಲಿ, ಒಳ್ಳೆಯ ಅನ್ನ, ಇತ್ಯಾದಿಗಳಿಂದ ಕಾಲಕ್ಕೆ ಸರಿಯಾಗಿ ಊಟವನ್ನು ಕೊಡುತ್ತೇನೆ. ‘ಯಚ್ಚ ಭರ್ತಾ ನ ಪಿಬತಿ ಯಚ್ಚ ಭರ್ತಾ ನ ಸೇವತೇ । ಯಚ್ಚ ನಾಶ್ನಾತಿ ಮೇ ಭರ್ತಾ ತತ್ ಸರ್ವಂ  ವರ್ಜಯಾಮ್ಯಹಮ್’ (೩೩) ಯಾವುದನ್ನು ಗಂಡ ಕುಡಿಯುವುದಿಲ್ಲವೋ, ಯಾವುದನ್ನು ಗಂಡ ತಿನ್ನುವುದಿಲ್ಲವೋ, ನಾನೂ ಅದನ್ನು ತಿನ್ನುವುದಿಲ್ಲ. (ಹೇಗೆ ತಾನು ತನ್ನ ಗಂಡಂದಿರೊಂದಿಗೆ ಸಂತೋಷವಾಗಿದ್ದೇನೆ ಎನ್ನುವುದನ್ನು ದ್ರೌಪದಿ ವಿವರಿಸುತ್ತಾ ಹೇಳಿದ ಮಾತುಗಳಿವು). ‘ಶತಂ ದಾಸೀಸಹಸ್ರಾಣಿ ಕೌನ್ತೇಯಸ್ಯ  ಮಹಾತ್ಮನಃ (೪೮)  ‘ತಾಸಾಂ ನಾಮ ಚ ರೂಪಂ ಚ ಭೋಜನಾಚ್ಛಾದನಾನಿ  ಚ । ಸರ್ವಾಸಾಮೇವ  ವೇದಾಹಂ ಕರ್ಮ ಚೈವ ಕೃತಾಕೃತಂ’ (೫೦) ಲಕ್ಷ ಮಂದಿ ದಾಸ-ದಾಸಿಯರ ನಾಮ, ರೂಪ, ಅವರು ಏನನ್ನು ಊಟ ಮಾಡುತ್ತಾರೆ, ಏನನ್ನು ಹೊದ್ದುಕೊಳ್ಳುತ್ತಾರೆ-ಎಲ್ಲವನ್ನೂ ನಾನು ಬಲ್ಲವಳಾಗಿದ್ದೆ. ‘ಅಂತಃಪುರಾಣಾಂ ಸರ್ವೇಷಾಂ ಭೃತ್ಯಾನಾಂ ಚೈವ ಸರ್ವಶಃ । ಆಗೋಪಲಾವಿಪಾಲೇಭ್ಯಃ ಸರ್ವಂ ವೇದ ಕೃತಾಕೃತಮ್ । ಸರ್ವಂ ರಾಜ್ಞಃ ಸಮುದಯಮಾಯಂ ಚ ವ್ಯಯಮೇವಚ । ಏಕಾsಹಂ ವೇದ್ಮಿ ಕಲ್ಯಾಣಿ  ಪಾಣ್ಡವಾನಾಂ ಯಶಸ್ವಿನಿ ।  ಮಯಿ ಸರ್ವಂ ಸಮಾಸಜ್ಯ ಕುಟುಮ್ಬಂ ಭರತರ್ಷಭಾಃ ।  ಉಪಾಸನರತಾಃ ಸರ್ವೇ ಘಟಯಂತಿ ವರಾನನೇ’ (೫೫-೫೬), ‘ ಅಧೃಷ್ಯಂ ವರುಣಸ್ಯೇವ ನಿಧಿಪೂರ್ಣಮಿವೋದಧಿಮ್ । ಏಕಾsಹಂ ವೇದ್ಮಿ ಕೋಶಂ ವೈ ಪತೀನಾಂ ಧರ್ಮಚಾರಿಣಾಂ । ಅನಿಶಾಯಾಂ ನಿಶಾಯಾಂ ಚ ವಿಹಾಯ ಕ್ಷುತ್ಪಿಪಾಸಯೋಃ । ಆರಾಧಯಂತ್ಯಾಃ  ಕೌರವ್ಯಾಂಸ್ತುಲ್ಯಾ ರಾತ್ರಿರಹಶ್ಚ ಮೇ’  (೫೮-೫೯) ಅಂತಃಪುರಕ್ಕೆ ಸಂಬಂಧಪಟ್ಟ ಗೋಪಾಲಕರಿರಲಿ, ಕುರಿ-ಮೇಕೆ ಇತ್ಯಾದಿಗಳನ್ನು ಸಾಕಿಕೊಂಡಿರುವ ಅವಿಪಾಲಕರಿರಲಿ, ಅವರೆಲ್ಲ ಏನು ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿರುತ್ತಿತ್ತು. ರಾಜ ಏನು ಮಾಡಲು ಹೊರಟಿದ್ದಾನೆ, ಅವನಿಗೆ ಎಷ್ಟು ಆದಾಯವಿದೆ, ಎಷ್ಟು ಖರ್ಚಿದೆ. ಎಲ್ಲರಲ್ಲಿರುವ  ಬೇರೆಬೇರೆ ತರದ ಸ್ವತ್ತುಗಳ ವಿವರ ನನಗೊಬ್ಬಳಿಗೇ ಗೊತ್ತಿತ್ತು. ನನಗೆ ಹಗಲೂ ಮತ್ತು ರಾತ್ರಿ ಎರಡೂ ಒಂದೇ ಆಗಿತ್ತು’].

 

ಭೀಭತ್ಸುರಾಸೀತ್ ಪರರಾಷ್ಟ್ರಮರ್ದ್ದನೇ ತೇನಾನಿಯಮ್ಯಾಂಸ್ತು ಜರಾಸುತಾದೀನ್ ।

ಸ ಕೀಚಕಾದೀಂಶ್ಚ ಮಮರ್ದ್ದ ಭೀಮಸ್ತಸ್ಯೈವ ತೇ ಬಲತೋ ನಿತ್ಯಭೀತಾಃ ॥೨೦.೦೩॥

 

ಅರ್ಜುನನು ಬೇರೆ ರಾಷ್ಟ್ರದವರನ್ನು ಯಾವ ರೀತಿ ಮರ್ದನ ಮಾಡಬೇಕು ಎನ್ನುವುದರಲ್ಲಿ ನಿಯುಕ್ತನಾಗಿದ್ದ. ಅರ್ಜುನನಿಂದ ನಿಗ್ರಹಿಸಲಾಗದ ಜರಾಸಂಧ, ಕೀಚಕ ಮೊದಲಾದವರನ್ನು ಭೀಮಸೇನನೇ ನಿಗ್ರಹಿಸಿದ. ಭೀಮಸೇನನ ಬಲದಿಂದಲೇ ಅವರು ಯಾವಾಗಲೂ ಹೆದರಿಕೊಂಡಿದ್ದರು.

 

ರಾಷ್ಟ್ರೇಷು ಭೀಮೇನ ವಿಮರ್ದ್ದಿತೇಷು ಜಿತಾಶ್ಚ ಯುದ್ಧೇಷು ನಿರುದ್ಯಮಾಸ್ತೇ ।

ಬಭೂವುರಾಸೀದ್ಧರಿಧರ್ಮ್ಮನಿಷ್ಠಃ  ಪ್ರಾಯೇಣ ಲೋಕಶ್ಚ ತದೀಯಶಾಸನಾತ್ ॥೨೦.೦೪॥

 

ಭೀಮಸೇನನಿಂದ ಶತ್ರುರಾಷ್ಟ್ರಗಳು ನಿಗ್ರಹಕ್ಕೆ ಒಳಗಾಗಲು, ಯುದ್ಧದಲ್ಲಿ ಸೋತ ಜರಾಸಂಧಾದಿಗಳು ಯಾವುದೇ ಕೆಲಸವನ್ನು ಮಾಡದವರಾದರು(ಜರಾಸಂಧ, ಕೀಚಕ, ಇವರೆಲ್ಲಾ ಪ್ರಕಟವಾಗಿ ಜನರಿಗೆ ತೊಂದರೆಯಾಗುವ ಯಾವ ಕೆಲಸವನ್ನೂ ಮಾಡುವಂತಿರಲಿಲ್ಲ). ಆ ಸಂದರ್ಭದಲ್ಲಿ ಲೋಕವು ಹೆಚ್ಚಾಗಿ ಭೀಮಸೇನನ ಆಡಳಿತದಿಂದ ಪರಮಾತ್ಮನ ಧರ್ಮದಲ್ಲಿಯೇ ರತವಾಯಿತು.

[ಮಹಾಭಾರತದ ಆದಿಪರ್ವದಲ್ಲಿ(೧೭೮.೭) ಹೇಳುವಂತೆ: ‘ತತಃ ಪ್ರಭೃತಿ ರಕ್ಷಾಂಸಿ ತತ್ರ ಸೌಮ್ಯಾನಿ ಭಾರತ । ನಗರೇ ಪ್ರತ್ಯದೃಶ್ಯನ್ತ ನರೈರ್ನಗರವಾಸಿಭಿಃ’ ಬಕಾಸುರನ ಸಂಹಾರ ಸಂದರ್ಭದಲ್ಲಿ ಹೇಳಿರುವ ಮಾತು ಇದಾಗಿದೆ: ‘ಅಂದಿನಿಂದ ಎಲ್ಲಾ ರಾಕ್ಷಸರು ಭಯಗೊಂಡು ಸೌಮ್ಯರಾದರು’. ಅದೇ ರೀತಿ ಈಗಲೂ ಕೂಡಾ ಎನ್ನುವುದು ಆಚಾರ್ಯರ ಮಾತಿನಿಂದ ತಿಳಿಯುತ್ತದೆ].


Sunday, October 18, 2020

Mahabharata Tatparya Nirnaya Kannada 19220_19223

 

ವಾಸಿಷ್ಠಪೇನ ಯದುಪೇನ ಚ ಪಾಣ್ಡವಾನಾಂ ರತ್ನೋತ್ಕರಂ ಕುರು ಪುರಂ ಪುರುಹೂತಪುರ್ಯ್ಯಾಃ  

ಸಾದೃಶ್ಯತಸ್ತ್ವಿತಿ ನಿಯುಕ್ತ ಉಭೌ ಪ್ರಣಮ್ಯ ಸರ್ವೇಶ್ವರೌ ಸ ಕೃತವಾಂಶ್ಚ ಪುರಂ ತಥೈವ ॥೧೯.೨೨೦॥

 

ವೇದವ್ಯಾಸರಿಂದಲೂ, ಯಾದವಕೃಷ್ಣನಿಂದಲೂ “ಪಾಂಡವರಿಗಾಗಿ ಇಂದ್ರನ ಅಮರಾವತಿಗೆ ಸಮನಾಗಿರುವ, ರತ್ನದಿಂದ ಉಜ್ವಲವಾಗಿರುವ ಪಟ್ಟಣವನ್ನು ಮಾಡು” ಎಂದು ನಿಯುಕ್ತನಾದ ವಿಶ್ವಕರ್ಮನು,  ಸರ್ವೇಶ್ವರರಾದ ಇಬ್ಬರನ್ನೂ ನಮಸ್ಕರಿಸಿ, ಅದೇರೀತಿಯಾದ ಭವನವನ್ನು ನಿರ್ಮಿಸಿದನು. 

 

ದೇಶಂ ಚ ನಾತಿಜನಸಂವೃತಮನ್ಯದೇಶಸಂಸ್ಥೈರ್ಜ್ಜನೈರಭಿಪುಪೂರಿರ ಆಶು ಪಾರ್ತ್ಥಾಃ ।

ತೇಷಾಂ ಗುಣೈರ್ಹರಿಪದಾನತಿಹೇತುತಶ್ಚ ರಾಷ್ಟ್ರಾನ್ತರಾ ಇಹ ಶುಭಾ ವಸತಿಂ ಸ್ಮ ಚಕ್ರುಃ ॥೧೯.೨೨೧॥

 

ಅತ್ಯಂತ ಜನಸಂಖ್ಯೆ ಇಲ್ಲದ ಆ ದೇಶವನ್ನು ಪಾಂಡವರು ಬೇರೆ ದೇಶದ ಜನರಿಂದ ತುಂಬಿದರು. ಪಾಂಡವರ ಸಜ್ಜನಿಕೆ ಮೊದಲಾದ ಗುಣ, ಜೊತೆಗೆ ಹರಿಭಕ್ತಿ ಎನ್ನುವ ಶ್ರೇಷ್ಠಗುಣದ ಕಾರಣದಿಂದ,  ಸಜ್ಜನರಾದ ಬೇರೆಬೇರೆ ರಾಷ್ಟ್ರದ ಜನರು ಇಲ್ಲಿಯೇ ವಾಸಮಾಡಿದರು. 

 

ಪ್ರಸ್ಥಾಪ್ಯ ದೂರಮನುಜಸ್ಯ ಸುತಾನ್ ಸ ರಾಜಾ ಚಕ್ರೇsಭಿಷೇಕಮಪಿ ತತ್ರ ಸುಯೋಧನಸ್ಯ ।

ದುಃಶಾಸನಂ ಚ ಯುವರಾಜಮಸೌ ವಿಧಾಯ ಮೇನೇ ಕೃತಾರ್ತ್ಥಮಿವ ಚ ಸ್ವಮಶಾನ್ತಕಾಮಃ ॥೧೯.೨೨೨॥

 

ಧೃತರಾಷ್ಟ್ರನು ತನ್ನ ತಮ್ಮನ ಮಕ್ಕಳನ್ನು ದೂರಕ್ಕೆ ಕಳುಹಿಸಿದ ನಂತರ ದುರ್ಯೋಧನನಿಗೆ   ಪಟ್ಟಾಭಿಷೇಕ  ಮಾಡಿದ. ದುಃಶಾಸನನನ್ನು ಯುವರಾಜನನ್ನಾಗಿ ಮಾಡಿದ ಅವನು, ತಾನು ಮಾಡಬೇಕಾದದ್ದನ್ನು ಮಾಡಿದೆ ಎಂದು ಅಂದುಕೊಂಡ. ಆದರೆ ಒಳಗಿನಿಂದ ಇನ್ನೂ ಅವನ ಕಾಮನೆ ಪೂರ್ತಿ ನಾಶವಾಗಿರಲಿಲ್ಲ.

 

ಪಾರ್ತ್ಥಾಶ್ಚ ತೇ ಮುಮುದುರತ್ರ ವಸಿಷ್ಠವೃಷ್ಣಿವರ್ಯ್ಯೋದಿತಾನಖಿಲತತ್ತ್ವವಿನಿರ್ಣ್ಣಯಾಂಸ್ತು

ಶೃಣ್ವನ್ತ ಏವ ಹಿ ಸದಾ ಪೃಥಿವೀಂ ಚ ಧರ್ಮ್ಮಾದ್ ಭುಞ್ಜನ್ತ ಆಶ್ರಿತರಮಾಪತಿಪಾದಯುಗ್ಮಾಃ ॥೧೯.೨೨೩॥

 

ಆ ಪಾಂಡವರು ಇಂದ್ರಪ್ರಸ್ಥದಲ್ಲಿ ವೇದವ್ಯಾಸರು ಮತ್ತು ಶ್ರೀಕೃಷ್ಣರಿಂದ ಹೇಳಲ್ಪಟ್ಟ ಸಮಸ್ತ ತತ್ತ್ವವಿನಿರ್ಣಯಗಳನ್ನು ಕೇಳತಕ್ಕವರಾಗಿ, ಭೂಮಿಯನ್ನು ಧರ್ಮದಿಂದ ಪಾಲಿಸುವವರಾಗಿ, ಪರಮಾತ್ಮನ ಪಾದವನ್ನು ಆಶ್ರಯಿಸಿ, ಸಂತಸಪಟ್ಟರು.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋ ನಾಮ ಏಕೋನವಿಂಶೋsದ್ಧ್ಯಾಯಃ

*********








Mahabharata Tatparya Nirnaya Kannada 19214_19219

 ಕೋಶಸ್ಯ ಚಾರ್ದ್ಧಸಹಿತಾಸ್ತು ಯದೈವ ಪಾರ್ತ್ಥಾ ಗಚ್ಛನ್ತಿ ತಾನನುಯಯುರ್ನ್ನಿಖಿಲಾಶ್ಚ ಪೌರಾಃ ।

ಊಚುಶ್ಚ ಹಾ ಬತ ಸುಯೋಧನ ಏಷ ಪಾಪೋ ದೂರೇ ಚಕಾರ ನನು ಪಾಣ್ಡುಸುತಾನ್ ಗುಣಾಢ್ಯಾನ್॥೧೯.೨೧೪॥

 

ಕೋಶದ ಅರ್ಧದಿಂದ ಕೂಡಿರುವ ಪಾಂಡವರು ಯಾವಾಗ ತೆರಳುತ್ತಿದ್ದರೋ, ಆಗ ಅವರನ್ನು ಎಲ್ಲಾ ಪ್ರಜೆಗಳೂ ಕೂಡಾ ಅನುಸರಿಸಿದರು ಮತ್ತು ಹೇಳಿದರೂ ಕೂಡಾ. ‘ಅಯ್ಯೋ, ಈ ಪಾಪಿಷ್ಠನಾಗಿರುವ ಸುಯೋಧನನು ಸದ್ಗುಣಸಂಪನ್ನರಾದ ಪಾಂಡವರನ್ನು ದೂರಮಾಡಿದನಲ್ಲಾ.

 

ಭೀಮಪ್ರತಾಪಮವಲಮ್ಬ್ಯ ಕಲಿಙ್ಗಬನ್ಧಾನ್ಮುಕ್ತಃ ಸುತಾಮಪಿ ಹಿ ತಸ್ಯ ಪುರಂ ನಿನಾಯ ।

ದ್ವೇಷ್ಟ್ಯೇವಮಪ್ಯತಿಬಲಾನ್ ಹಿ ಸದೈವ ಪಾರ್ತ್ಥಾನ್ ಯಾಮೋ ವಯಂ ಗುಣಿಭಿರದ್ಯ ಸಹೈವ ಪಾರ್ತ್ಥೈಃ ॥೧೯.೨೧೫॥

 

ಭೀಮನ ಪರಾಕ್ರಮವನ್ನು ಆಶ್ರಯಿಸಿ ಕಲಿಙ್ಗಬಂಧದಿಂದ ಮುಕ್ತನಾಗಿ, ಅವನ ಮಗಳನ್ನೂ ಕೂಡಾ ಮನೆಗೆ ತಂದ. (ಅಪಮಾನದಿಂದ ಬಿಡಿಸಿದ್ದಲ್ಲದೇ, ಆ ಹುಡುಗಿಯೊಂದಿಗೆ ಮದುವೆಯಾಗಲೂ ಭೀಮ ಕಾರಣನಾದ) ಆದರೂ ಕೂಡಾ ಅತ್ಯಂತ ಬಲವುಳ್ಳ ಪಾಂಡವರನ್ನು ಈ ದುರ್ಯೋಧನ ಸದಾ ದ್ವೇಷಮಾಡುತ್ತಾನೆ. ನಾವು ಗುಣವಂತರಾಗಿರುವ ಪಾಂಡವರೊಂದಿಗೆ ಕೂಡಿಕೊಂಡು ಹೊರಡೋಣ’ ಎಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

 

ಆಜ್ಞಾಪಯತ್ಯಪಿ ಸ ಭೇರಿರವೇಣ ಪಾರ್ತ್ಥಾನ್ ನೈವಾನುಗಚ್ಛತ ಯದಿ ವ್ರಜಥಾನು ವೋsದ್ಯ ।

ವಿತ್ತಂ ಹರಿಷ್ಯ ಇಹ ಸರ್ವಮಪೀತಿ ತಚ್ಚ ಪಾಪಃ ಕರೋತು ನ ವಯಂ ವಿಜಹಾಮ ಪಾರ್ತ್ಥಾನ್॥೧೯.೨೧೬॥

 

ಪಾಂಡವರೊಂದಿಗೆ ಜನರೂ ಹೊರಡುತ್ತಿದ್ದಾರೆ ಎನ್ನುವ ಸಮಾಚಾರವನ್ನು ಕೇಳಿ ತಿಳಿದ ದುರ್ಯೋಧನ, ಡಂಗುರ ಹೊಡೆಸಿ ಈರೀತಿ ಆಜ್ಞೆಮಾಡಿದ:  ‘ಪಾಂಡವರನ್ನು ಅನುಸರಿಸಬೇಡಿ. ಒಂದುವೇಳೆ ನೀವು ಅವರನ್ನು ಹೊಂದಿದಿರಾದರೆ, ನಿಮ್ಮೆಲ್ಲಾ ಆಸ್ತಿಯನ್ನು ಕಳೆದುಕೊಳ್ಳುತ್ತೀರಿ’ ಎಂದು. ಆದರೆ ಜನರು ಅದನ್ನು ಲೆಕ್ಕಿಸದೇ, ‘ಪಾಪಿಷ್ಠನಾದ ಅವನು ಮಾಡಲಿ, ನಾವು ಪಾಂಡವರನ್ನು ಬಿಡುವುದಿಲ್ಲಾ’ ಎಂದರು.

 

ಸದ್ಭಿರ್ಹಿ ಸಙ್ಗತಿರಿಹೈವ ಸುಖಸ್ಯ ಹೇತುರ್ಮ್ಮೋಕ್ಷ್ಯೈಕಹೇತುರಥ ತದ್ವಿಪರೀತಮನ್ಯತ್ ।

ತಸ್ಮಾದ್ ವ್ರಜೇಮ ಸಹ ಪಾಣ್ಡುಸುತೈರ್ಹಿ ಶಕ್ರಪ್ರಸ್ಥಂ ತ್ವಿತಿ ಸ್ಮ ಧೃತಚೇತಸ ಆಹ ಧಾರ್ಮ್ಮಃ ॥೧೯.೨೧೭॥

 

‘ಸಜ್ಜನರ ಸಹವಾಸವು ಇಲ್ಲಿ ಸುಖಕ್ಕೆ ಮುಖ್ಯ ಕಾರಣವು ಹಾಗೂ ಮೋಕ್ಷಕ್ಕೂ ಕಾರಣ ಕೂಡಾ. ಇದಕ್ಕಿಂತ ಬೇರೆಯಾದ ದುರ್ಜನ ಸಂಗ ಅದಕ್ಕೆ ವಿರುದ್ಧವಾದುದು(ಇಲ್ಲಿಯೂ ದುಃಖಕ್ಕೆ ಕಾರಣ, ಅಲ್ಲಿಯೂ ದುಃಖಕ್ಕೆ ಕಾರಣವಾದುದು). ಆಕಾರಣದಿಂದ ಪಾಂಡವರ ಜೊತೆಗೆ ಇಂದ್ರಪ್ರಸ್ಥಕ್ಕೆ ಹೋಗೋಣ ಎಂದು ಗಟ್ಟಿಯಾಗಿ ನಿರ್ಧಾರಮಾಡಿದ ಪ್ರಜೆಗಳನ್ನುದ್ದೇಶಿಸಿ ಯಮಧರ್ಮನ ಮಗನಾದ ಯುಧಿಷ್ಠಿರ ಮಾತನಾಡಿದನು:

 

ಪ್ರೀತಿರ್ಯ್ಯದಿ ಸ್ಮ ಭವತಾಂ ಮಯಿ ಸಾನುಜೇsಸ್ತಿ ತಿಷ್ಠಧ್ವಮತ್ರ ಪಿತುರೇವ ಹಿ ಶಾಸನೇ ಮೇ ।

ಕೀರ್ತ್ತಿರ್ಹಿ ವೋsನುಗಮನಾತ್ ಪಿತುರತ್ಯಯೇನ ನಶ್ಯೇನ್ನ ಇತ್ಯನುಸರಧ್ವಮಿಹಾsಮ್ಬಿಕೇಯಮ್ ॥೧೯.೨೧೮॥

 

‘ಒಂದುವೇಳೆ ನಿಮಗೆಲ್ಲರಿಗೂ ನಮ್ಮೆಲ್ಲರಲ್ಲಿ ಪ್ರೀತಿ ಇದ್ದದ್ದಾದರೆ, ಇಲ್ಲಿ ನನ್ನ ದೊಡ್ಡಪ್ಪನ ಆಳ್ವಿಕೆಯಲ್ಲಿಯೇ ಇರಿ. ನಿಮ್ಮ ಅನುಸರಣೆಯಿಂದ ಧೃತರಾಷ್ಟ್ರನ ಕೀರ್ತಿನಾಶವಾಗುತ್ತದೆ. ಈರೀತಿಯಾಗಿ ಚಿಂತಿಸಿ, ಧೃತರಾಷ್ಟ್ರನನ್ನೇ ರಾಜನನ್ನಾಗಿ ಒಪ್ಪಿಕೊಳ್ಳಿ, ಅವನ ಆಳ್ವಿಕೆಯಲ್ಲಿಯೇ ಇರಿ’.

 

ಇತ್ಯೇವ ತೈಃ ಪುರಜನಾ ನಿಖಿಲೈರ್ನ್ನಿಷಿದ್ಧಾಃ ಕೃಚ್ಛ್ರೇಣ ತಸ್ಥುರಪಿ ತಾನ್ ಮನಸಾsನ್ವಗಚ್ಛನ್ ।

ಪ್ರಾಪ್ಯಾಥ ಶಕ್ರಪುರಮಸ್ಮರತಾಂ ಚ ಕೃಷ್ಣೌ ದೇವೇಶವರ್ದ್ದಕಿಮಥಾsಗಮದತ್ರ ಸೋsಪಿ ॥೧೯.೨೧೯॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲ್ಪಟ್ಟು, ತಡೆಯಲ್ಪಟ್ಟವರಾದ ಜನರು ಅಲ್ಲೇ ನಿಂತರೂ, ಪಾಂಡವರನ್ನು ಮನಸ್ಸಿನಿಂದ ಅನುಸರಿಸಿದರು. ತದನಂತರ ಪಾಂಡವರು  ಖಾಣ್ಡವಪ್ರಸ್ಥವನ್ನು ಹೊಂದಿದರು. ಅಲ್ಲಿ ವಾಸಿಷ್ಠಯಾದವ ಕೃಷ್ಣರು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು  ನೆನಪಿಸಿಕೊಂಡಾಗ ಅವನು ಅಲ್ಲಿಗೆ ಬಂದ.

Mahabharata Tatparya Nirnaya Kannada 19206_19213

 

ದುರ್ಯ್ಯೋಧನೇsನುಜಜನೈಃ ಸಹ ತೈರ್ಗ್ಗೃಹೀತೇ ಭೀಷ್ಮಾಮ್ಬಿಕೇಯವಿದುರಾಗ್ರಜವಾಕ್ಯನುನ್ನಃ ।

ಭೀಮೋ ವಿಜಿತ್ಯ ನೃಪತೀನ್ ಸಜರಾಸುತಾಂಸ್ತಾನ್ ಹತ್ವಾ ಸುವಜ್ರಮಮುಚದ್ ಧೃತರಾಷ್ಟ್ರಪುತ್ರಾನ್॥೧೯.೨೦೬॥

 

ತಮ್ಮಂದಿರಿಂದ ಕೂಡಿಕೊಂಡು ದುರ್ಯೋಧನನು ಅವರಿಂದ ಸೆರೆಹಿಡಿಯಲ್ಪಡಲು, ಭೀಷ್ಮ, ಧೃತರಾಷ್ಟ್ರ, ವಿದುರ ಮತ್ತು ಧರ್ಮರಾಜ ಇವರ ವಾಕ್ಯದಿಂದ ಪ್ರೇರಿತನಾಗಿ ಭೀಮಸೇನನು ಜರಾಸಂಧನೇ ಮೊದಲಾಗಿರುವ ರಾಜರನ್ನು ಗೆದ್ದು, ಸುವಜ್ರನನ್ನು ಕೊಂದು ಧೃತರಾಷ್ಟ್ರನ ಪುತ್ರರನ್ನು ಬಿಡಿಸಿದನು.   

 

ತೇsಪಿ ಸ್ಮ ಕರ್ಣ್ಣಸಹಿತಾ ಮೃತಕಪ್ರತೀಕಾ ನಾಗಾಹ್ವಯಂ ಪುರಮಥಾsಯಯುರಪ್ಯಮೀಷಾಮ್ ।

ದೃಷ್ಟ್ವಾ ವಿರೋಧಮವದನ್ನೃಪತಿಶ್ಚ ಧರ್ಮ್ಮಪುತ್ರಂ ಪುರನ್ದರಕೃತಸ್ಥಲಮಾಶು ಯಾಹಿ ॥೧೯.೨೦೭॥

 

ಕರ್ಣನಿಂದ ಕೂಡಿರುವ ದುರ್ಯೋಧನಾದಿಗಳು ಸತ್ತ ಮೋರೆಯೊಂದಿಗೆ ಹಸ್ತಿನಾವತಿ ಪಟ್ಟಣವನ್ನು ಸೇರಿದರು. ಹೀಗಿದ್ದರೂ ಕೂಡಾ, ದುರ್ಯೋಧನನು ಪಾಂಡವರಿಗೆ ಸಲ್ಲಿಸುತ್ತಿರುವ ತೀವ್ರ ವಿರೋಧವನ್ನು ಕಂಡು, ಧೃತರಾಷ್ಟ್ರನು ಧರ್ಮಪುತ್ರನಿಗೆ  ‘ನೀನು ಇಂದ್ರಪ್ರಸ್ಥಕ್ಕೆ ಬೇಗ ಹೋಗು’ ಎಂದು ಹೇಳಿದನು.

 

ತತ್ರಾರ್ದ್ಧರಾಜ್ಯಮನುಭುಙ್ಕ್ಷ್ವಸಹಾನುಜೈಸ್ತ್ವಂ ಕೋಶಾರ್ದ್ಧಮೇವ ಚ ಗೃಹಾಣ ಪುರಾ ಹಿ ಶಕ್ರಃ ।

ತತ್ರಾಭಿಷಿಕ್ತ ಉತ ಕಞ್ಜಭವಾದಿದೇವೈಸ್ತತ್ರಸ್ಥ ಏವ ಸ ಚಕಾರ ಚಿರಂ ಚ ರಾಜ್ಯಮ್ ॥೧೯.೨೦೮॥

 

‘ಅಲ್ಲಿ ನಿನ್ನ ತಮ್ಮಂದಿರಿಂದ ಕೂಡಿಕೊಂಡು ಅರ್ಧರಾಜ್ಯವನ್ನನುಭವಿಸು. ಅರ್ಧಕೋಶವನ್ನೂ ನೀನು ತೆಗೆದುಕೊಂಡು ಹೋಗು. ಹಿಂದೆ  ಶಕ್ರನು ಬ್ರಹ್ಮನೇ ಮೊದಲಾದ ದೇವತೆಗಳಿಂದ ಅಭಿಷಿಕ್ತನಾಗಿ, ಅಲ್ಲಿಯೇ ದೀರ್ಘಕಾಲ ರಾಜ್ಯವಾಳಿದ್ದನು.

 

ತ್ವಂ ವೀರ ಶಕ್ರಸಮ ಏವ ತತಸ್ತವೈವ ಯೋಗ್ಯಂ ಪುರಂ ತದತ ಆಶ್ವಭಿಷೇಚಯಾಮಿ ।

ಇತ್ಯುಕ್ತ ಆಹ ಸ ಯುಧಿಷ್ಠಿರ ಓಮಿತಿ ಸ್ಮ ಚಕ್ರೇsಭಿಷೇಕಮಪಿ ತಸ್ಯ ಸ ಆಮ್ಬಿಕೇಯಃ ॥೧೯.೨೦೯॥

 

ಓ ವೀರನೇ, ನೀನು ಇಂದ್ರನಿಗೆ ಸಮಾನನಾಗಿದ್ದೀಯ. ಆ ಕಾರಣದಿಂದ ಆ ಪಟ್ಟಣವು ನಿನಗೇ ಯೋಗ್ಯವಾದುದು. ಕೂಡಲೇ, ಇಲ್ಲೇ ನಾನು ನಿನಗೆ ಅಭಿಷೇಕ ಮಾಡುತ್ತೇನೆ’ ಎಂದು ಧೃತರಾಷ್ಟ್ರನು ಹೇಳಲು, ಯುಧಿಷ್ಠಿರನು ‘ಓಂ’ (ಆಯಿತು ) ಎಂದು ಹೇಳಿದ. ನಂತರ  ಅಂಬಿಕೆಯ ಮಗನಾದ ಧೃತರಾಷ್ಟ್ರನು ಅವನಿಗೆ ಪಟ್ಟಾಭಿಷೇಕವನ್ನೂ ಮಾಡಿದ.  

 

ತಸ್ಯಾಭಿಷೇಕಮಕರೋತ್ ಪ್ರಥಮಂ ಹಿ ಕೃಷ್ಣೋ ವಾಸಿಷ್ಠನನ್ದನ ಉರುರ್ಭವ ಚಕ್ರವರ್ತೀ ।

ಯಷ್ಟಾsಶ್ವಮೇಧನಿಖಿಲಾತ್ಮಕರಾಜಸೂಯಪೂರ್ವೈರ್ಮ್ಮಖೈಃ ಸತತಮೇವ ಚ ಧರ್ಮ್ಮಶೀಲಃ ॥೧೯.೨೧೦॥

 

ಮೊದಲು ವೇದವ್ಯಾಸರು ಧರ್ಮರಾಜನಿಗೆ ಅಭಿಷೇಕವನ್ನು ಮಾಡಿ, ‘ದೊಡ್ಡ ಚಕ್ರವರ್ತಿಯಾಗು. ಅಶ್ವಮೇಧದ ಸಮಸ್ತ ಸ್ವರೂಪಭೂತವಾದ ರಾಜಸೂಯ ಮೊದಲಾದ ಯಾಗಗಳಿಂದ ದೇವರನ್ನು ಪೂಜಿಸು. ಧರ್ಮಶೀಲನಾಗು’ ಎಂದು ಆಶೀರ್ವಾದ ಮಾಡಿದರು.

 

ಇತ್ಯೇವ ಪಾರ್ಷತಸುತಾಸಹಿತೇsಭಿಷಿಕ್ತೇ ಕೃಷ್ಣೋsಪಿ ವೃಷ್ಣಿವೃಷಭಃ ಸ ತಥಾsಭ್ಯಷಿಞ್ಚತ್ ।

ಏವಂ ಚ ಮಾರುತಿಶಿರಸ್ಯಭಿಷೇಕಮೇತೌ ಸಞ್ಚಕ್ರತುಃ ಸ್ಮ ಯುವರಾಜಪದೇ ಸಭಾರ್ಯ್ಯಮ್ ॥೧೯.೨೧೧॥

 

ಈರೀತಿಯಾಗಿ ದ್ರೌಪದಿಯಿಂದ ಕೂಡಿದ ಧರ್ಮರಾಜನು ಅಭಿಷಿಕ್ತನಾಗಲು, ತದನಂತರ ಯಾದವ ಕೃಷ್ಣನೂ ಕೂಡಾ ಅಭಿಷೇಕ ಮಾಡಿದನು. ಹಾಗೆಯೇ ದ್ರೌಪದಿಯೊಂದಿಗೆ ಭೀಮಸೇನನ ಶಿರಸ್ಸಿನಲ್ಲಿಯೂ ಕೂಡಾ ಇವರಿಬ್ಬರು(ಶ್ರೀಕೃಷ್ಣ ಮತ್ತು ವೇದವ್ಯಾಸರು) ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿದರು.

 

ಭೀಮೇ ಚ ಪಾರ್ಷತಸುತಾಸಹಿತೇsಭಿಷಿಕ್ತೇ ತಾಭ್ಯಾಮನನ್ತಸುಖಶಕ್ತಿಚಿದಾತ್ಮಕಾಭ್ಯಾಮ್ ।

ಅನ್ಯೈಶ್ಚ ವಿಪ್ರವೃಷಭೈಃ ಸುಕೃತೇಭಿಷೇಕೇ ಧರ್ಮ್ಮಾತ್ಮಜಾನು ಮುಮುದುರ್ನ್ನಿಖಿಲಾಶ್ಚ ಸನ್ತಃ ॥೧೯.೨೧೨॥

 

ಧರ್ಮರಾಜನ ರಾಜ್ಯಾಭಿಷೇಕ, ಜೊತೆಗೆ ದ್ರೌಪದಿಯಿಂದ ಕೂಡಿಕೊಂಡ ಭೀಮಸೇನನೂ  ಅನಂತ ಗುಣಶಕ್ತಿಜ್ಞಾನವುಳ್ಳ ಅವರಿಬ್ಬರಿಂದ ಅಭಿಷೇಕಕ್ಕೆ ಒಳಗಾಗಲು, ಉಳಿದ ಶ್ರೇಷ್ಠ ಬ್ರಾಹ್ಮಣರಿಂದಲೂ ಕೂಡಾ ಅಭಿಷೇಕವು ಚನ್ನಾಗಿ ಜರುಗಲು, ಎಲ್ಲಾ ಸಜ್ಜನರೂ ಕೂಡಾ ಸಂತಸಪಟ್ಟರು.

 

ತಸ್ಮಿನ್ ಮಹೋತ್ಸವವರೇ ದಿನಸಪ್ತಕಾನುವೃತ್ತೇ ವಸಿಷ್ಠವೃಷಭೇಣ ಚ ವೃಷ್ಣಿಪೇನ ।

ಕೃಷ್ಣೇನ ತೇ ಯಯುರಮಾ ಪೃಥಯಾ ತಯಾ ಚ ಪಾಞ್ಚಾಲರಾಜಸುತಯಾ ಸ್ಥಲಮಿನ್ದ್ರವಾಸಮ್ ॥೧೯.೨೧೩॥

 

ಏಳು ದಿನ ನಿರಂತರವಾಗಿ ನಡೆದ ಆ ಶ್ರೇಷ್ಠವಾದ ಮಹೋತ್ಸವದ ನಂತರ,  ವೇದವ್ಯಾಸರು ಮತ್ತು ಶ್ರೀಕೃಷ್ಣನ ಜೊತೆಗೇ, ಕುಂತಿದೇವಿಯಿಂದಲೂ, ದ್ರೌಪದಿಯಿಂದಲೂ ಕೂಡಾ ಕೂಡಿಕೊಂಡ ಪಾಂಡವರು  ಇಂದ್ರಪ್ರಸ್ಥಕ್ಕೆ ತೆರಳಿದರು.

Mahabharata Tatparya Nirnaya Kannada 19201_19205

 

ಉದ್ವಾಹ್ಯ ಕಾಶಿತನಯಾಂ ಗಿರಿಜಾಧಿವಿಷ್ಟಾಂ ಸಾಕ್ಷಾನ್ನರೇಷು ಜನಿತಾಂ ಪ್ರಥಮಾಮಲಕ್ಷ್ಮೀಮ್ ।

ತಸ್ಯಾಂ ಸುತಂ ತ್ವಜನಯತ್ ಪುರ ಆಸ ಯೋsಕ್ಷಃ ಕನ್ಯಾಂ ಪುರಾ ಪ್ರಿಯತಮಾಂ ಚ ಷಡಾನನಸ್ಯ ॥೧೯.೨೦೧॥

 

ಪಾರ್ವತಿಯಿಂದ ಆವಿಷ್ಟಳಾದ, ಮನುಷ್ಯರಲ್ಲಿ ಹುಟ್ಟಿದ, ಜ್ಯೇಷ್ಠ ಅಲಕ್ಷ್ಮಿಯಾಗಿರುವ ಕಾಶಿರಾಜನ ಮಗಳನ್ನು ಮದುವೆಯಾದ ದುರ್ಯೋಧನ, ಅವಳಲ್ಲಿ ಪೂರ್ವದಲ್ಲಿ ಯಾರು ‘ಅಕ್ಷಕುಮಾರ’ ಎಂಬ ಹೆಸರಿನಿಂದ ಕರೆಯಲ್ಪಪಟ್ಟಿದ್ದನೋ, (ರಾಮಾಯಣದಲ್ಲಿ ಹನುಮಂತನಿಂದ ಕೊಲ್ಲಲ್ಪಟ್ಟ ಅಕ್ಷಕುಮಾರ) ಅವನನ್ನೇ ಮಗನಾಗಿಯೂ ಮತ್ತು ಹಿಂದೆ ಯಾರು ಸ್ಕಂದನ(ಷಡಾನನ/ಷಣ್ಮುಖನ) ಪ್ರಿಯೆಯಾಗಿದ್ದಳೋ, ಅವಳನ್ನು ಮಗಳಾಗಿಯೂ ಪಡೆದನು.

 

ಪುತ್ರೋ ಬಭೂವ ಸ ತು ಲಕ್ಷಣನಾಮಧೇಯಃ ಸಾ ಲಕ್ಷಣೇತ್ಯಧಿಕರೂಪಗುಣಾssಸ ಕನ್ಯಾ ।

ತಸ್ಯಾನುಜಾಶ್ಚ ನಿಜಯೋಗ್ಯಗುಣಾ ಅವಾಪುರ್ಭಾರ್ಯ್ಯಾಃ ಪುನಶ್ಚ ಸ ಸುಯೋಧನ ಆಪ ಭಾರ್ಯ್ಯಾಃ ॥೧೯.೨೦೨॥

 

ಆ ಮಗನಾದರೋ ‘ಲಕ್ಷಣ’ ಎಂಬ ಹೆಸರುಳ್ಳವನಾದನು. ಆತ್ಯಂತಿಕ ಗುಣ-ರೂಪವನ್ನು ಹೊಂದಿದ ಆ ಕನ್ಯೆಯು ‘ಲಕ್ಷಣಾ’ ಎಂಬ ಹೆಸರುಳ್ಳವಳಾದಳು. ದುರ್ಯೋಧನನ ಉಳಿದ ತಮ್ಮಂದಿರೂ ಕೂಡಾ ತಮಗೆ ಯೋಗ್ಯವಾದ ಗುಣವುಳ್ಳ ಹೆಂಡಂದಿರನ್ನು ಹೊಂದಿದರು. ದುರ್ಯೋಧನನು ಇನ್ನೂ ಹಲವಾರು ಜನ ಹೆಂಡತಿಯರನ್ನು ಹೊಂದಿದನು.

 

ಪೂರ್ವಂ ಸುರಾನ್ತಕ ಇತಿ ಪ್ರಥಿತಃ ಸುತೋsಭೂದ್ ದುಃಶಾಸನಸ್ಯ ತದನು ಪ್ರತಿತಪ್ಯಮಾನಾಃ ।

ದೃಷ್ಟ್ವೈವ ಪಾರ್ತ್ಥಬಲವೀರ್ಯ್ಯಗುಣಾನ್ ಸಮೃದ್ಧಿಂ ತಾಂ ಚೈವ ತೇ ಪ್ರತಿ ಯಯುಃ ಸ್ಮ ಕಲಿಙ್ಗದೇಶಮ್ ॥೧೯.೨೦೩॥

 

ಹಿಂದೆ ಸುರಾನ್ತಕ ಎಂದು ಪ್ರಸಿದ್ಧನಾದ ರಾಕ್ಷಸ ದುಃಶಾಸನನ ಮಗನಾಗಿ ಹುಟ್ಟಿದನು. ಹೀಗಿರಲು,  ದ್ರೌಪದಿಯ ಮದುವೆಯಾದ ಮೇಲೆ, ಪಾಂಡವರ ಬಲ-ವೀರ್ಯ ಗುಣಾದಿಗಳನ್ನು, ಅವರ ಸಂಪತ್ತು ಸಮೃದ್ಧಿಗಳನ್ನು ಕಂಡೇ, ಹೊಟ್ಟೆಕಿಚ್ಚು ಪಡುತ್ತಾ,  ದುರ್ಯೋಧನಾದಿಗಳು ಕಲಿಙ್ಗದೇಶದತ್ತ ತೆರಳಿದರು.

 

ಆಸೀತ್ ಸ್ವಯಮ್ಬರ ಉತಾತ್ರ ಕಲಿಙ್ಗರಾಜಪುತ್ರ್ಯಾಃ ಸುವಜ್ರ ಇತಿ ಯಂ ಪ್ರವದನ್ತಿ ಭೂಪಾಃ ।

ರೌದ್ರಾದ್ ವರಾದವಿಜಿತಸ್ಯ ಚ ತಸ್ಯ ಕನ್ಯಾಂ ದೃಪ್ತೋ ಬಲಾತ್ ಸ ಜಗೃಹೇ ಧೃತರಾಷ್ಟ್ರಸೂನುಃ ॥೧೯.೨೦೪॥

 

ಕಲಿಙ್ಗದೇಶದಲ್ಲಿ  ರಾಜನ ಮಗಳ ಸ್ವಯಮ್ಬರವು ನಡೆದಿತ್ತು. ರುದ್ರದೇವರ ವರದಿಂದ ಸೋಲಿಲ್ಲದ ಯಾವ ಕಲಿಙ್ಗದೇಶದ ರಾಜನನ್ನು ಅರಸರು  ‘ಸುವಜ್ರ’ ಎಂದು ಹೇಳುತ್ತಿದ್ದರೋ,  ಅವನ ಕನ್ಯೆಯನ್ನು ದರ್ಪಿಷ್ಠನಾಗಿ, ಬಲಾತ್ಕಾರದಿಂದ ದುರ್ಯೋಧನ ಅಪಹರಿಸಿದ.

 

ತತ್ರಾಥ ರುದ್ರವರತಃ ಸ ಜರಾಸುತೇನ ಯುಕ್ತೋ ಬಬನ್ಧ ಚ ಸುಯೋಧನಮಾಶು ಜಿತ್ವಾ ।

ಕರ್ಣ್ಣಃ ಪರಾದ್ರವದಿಹ ಸ್ಮ ಸುತೇಷು ಪಾಣ್ಡೋರ್ಯ್ಯಸ್ಮಾತ್ ಸ್ಪೃಧಾsಗಮದತಃ ಸ ಪರಾಜಿತೋsಭೂತ್ ॥೧೯.೨೦೫॥

 

ಅಲ್ಲಿ ಜರಾಸಂಧನಿಂದಲೂ ಕೂಡಿದ ಸುವಜ್ರನು, ರುದ್ರದೇವರ ವರಬಲದಿಂದ,   ದುರ್ಯೋಧನನನ್ನು ಕೂಡಲೇ ಸೋಲಿಸಿ ಕಟ್ಟಿಹಾಕಿದನು. ಕರ್ಣನು ಯುದ್ಧರಂಗದಿಂದ ಪಲಾಯನ ಮಾಡಿದನು. ಯಾವಕಾರಣದಿಂದ ಪಾಂಡುವಿನ ಮಕ್ಕಳಾದ ಯುಧಿಷ್ಠಿರಾದಿಗಳಲ್ಲಿ ಸ್ಪರ್ಧೆಯಿಂದ^ ಕರ್ಣನು ಯುದ್ಧಕ್ಕೆ ಬಂದಿದ್ದನೋ, ಆಕಾರಣದಿಂದಲೇ ಅವನು  ಪರಾಜಿತನಾದನು.

[^ಸ್ಪರ್ಧಾ ಮನೋಭಾವ ಇಲ್ಲದೇ ಯುದ್ಧ ಮಾಡಿದರೆ ಮಾತ್ರ ಗೆಲ್ಲುವೆ ಎನ್ನುವ ಪರಶುರಾಮನ ವಾಕ್ಯವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]