ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 20, 2019

Mahabharata Tatparya Nirnaya Kannada 1307_1313


ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದದ್ಧ್ಯಮತ್ರಕಮ್ ॥೧೩.೦೭॥

ಒಮ್ಮೆ ಶ್ರೀಕೃಷ್ಣ ತಾಯಿಯ ಮೊಲೆಯನ್ನುಣ್ಣುತ್ತಿರುವಾಗ, ಒಲೆಯಮೇಲೆ ಇಟ್ಟ ಹಾಲು ಉಕ್ಕಿತೆಂದು  ಯಶೋದೆ ಆತನನ್ನು ನೆಲದಮೇಲಿಟ್ಟು,  ಹಾಲಿನ ಪಾತ್ರೆಯನ್ನು ಒಲೆಯಿಂದ ಇಳಿಸಲು ಹೋಗುತ್ತಾಳೆ. ಆಗ ನೆಲದಲ್ಲಿ ಇಡಲ್ಪಟ್ಟವನಾದ ಕೃಷ್ಣ ಅಲ್ಲಿದ್ದ  ಮೊಸರಿನ ಪಾತ್ರೆಯನ್ನು ಒಡೆಯುತ್ತಾನೆ.

ಸ ಮತ್ಥ್ಯಮಾನದದ್ಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥

ಮಥಿಸಲ್ಪಟ್ಟ ಮೊಸರಿನಿಂದ ಉಕ್ಕಿಬಂದಿರುವ, ಚಂದ್ರನಿಗೆ ಸದೃಶವಾದ, ಆಗಷ್ಟೇ ಕಡೆದಿಟ್ಟಿರುವ  ಬೆಣ್ಣೆಯನ್ನು ತೆಗೆದುಕೊಂಡ ಶ್ರೀಕೃಷ್ಣ,  ಏಕಾಂತದಲ್ಲಿ ಅದನ್ನು ತಿನ್ನುತ್ತಾನೆ ಕೂಡ.

ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥


ಇತಿ ಸ್ವಧರ್ಮ್ಮಮುತ್ತಮಂ ದಿವೌಕಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥

ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥

ಯಾವ ಕುಲದಲ್ಲಿ ಹುಟ್ಟುತ್ತಾನೋ, ಯಾವ ಯುಗದಲ್ಲಿ ಹುಟ್ಟುತ್ತಾನೋ, ಯಾವ ವಯಸ್ಸಿನಲ್ಲಿ ತೋರಿಸಿಕೊಳ್ಳುತ್ತಾನೋ, ಹಾಗೇ ದೇವತೆಗಳ ಹುಟ್ಟಿನಲ್ಲಿ ಆರೀತಿಯ ಪ್ರವೃತ್ತಿಗಳು ಇರಬೇಕು ಎಂಬ  ಉತ್ಕೃಷ್ಟವಾದ ಧರ್ಮವನ್ನು ದೇವತೆಗಳಿಗೆ ತೋರಿಸುತ್ತಾ, ಅಧರ್ಮಕ್ಕೆ ಬೆಂಕಿಯಂತಿದ್ದರೂ ಜನಾರ್ದನನು ಎಲ್ಲವನ್ನೂ ಅನುಕರಿಸಿ ತೋರಿದನು.
ಅಂದರೆ: ದೇವರು ಮನುಷ್ಯ, ಪ್ರಾಣಿ ಮೊದಲಾದ ರೂಪಗಳನ್ನು ತಳೆದಾಗ,  ಆ ಕಾಲದ, ಆ ಯುಗದ, ಆ ಯೋನಿಗೆ ಅನುಗುಣವಾದ ಬಾಲ್ಯ-ಯೌವನ ಮೊದಲಾದವುಗಳನ್ನು ತೋರಿಸುತ್ತಾ, ಆಯಾ ಯೋನಿಯಲ್ಲಿ ಉಂಟಾದ ಕ್ರಿಯೆಗಳನ್ನು ಮಾಡಿ ತೋರುತ್ತಾನೆ. ವಸ್ತುತಃ ಭಗವಂತ  ನಿತ್ಯನಾದವನು(ಒಂದೇರೀತಿ ಇರುವವನು). ಆದರೆ ಅವತಾರದಲ್ಲಿ  ಬಾಲ್ಯಬಂದಾಗ ಬಾಲ್ಯದ ಚೇಷ್ಟೆಗಳು, ಯೌವನ ಬಂದಾಗ ಯೌವನದ ಚೇಷ್ಟೆಗಳು ಈರೀತಿ ಕ್ರಿಯೆಯ ಬದಲಾವಣೆಯನ್ನು ಅವನು ಮಾಡಿ ತೋರುತ್ತಾನೆ.

ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥

ಅವನು ಬ್ರಾಹ್ಮಣನಾಗಿ, ರಾಜನಾಗಿ, ಗೋಪಸ್ವರೂಪವುಳ್ಳವನಾಗಿ, ಆಯಾಯೋನಿಗಳಲ್ಲಿ ಉಂಟಾದ ಕ್ರಿಯೆಗಳನ್ನು ದೇವತಾ ಶಿಕ್ಷಣಕ್ಕಾಗಿ ಭಗವಂತ ಮಾಡುತ್ತಾನೆ(ದೇವರ ಕ್ರಿಯೆಗಳು ದೇವತೆಗಳಿಗೆ ಶಿಕ್ಷಣ ರೂಪದಲ್ಲಿರುತ್ತವೆ).

ತಥಾsಪ್ಯನನ್ಯದೇವತಾಸಮಂ ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥

ಹೀಗೆ ಮಾಡುತ್ತಿದ್ದಾಗಲೂ, ಎಲ್ಲ ದೇವತೆಗಳಿಗಿಂತಲೂ ಮಿಗಿಲಾದ, ತನ್ನ ಬಲವನ್ನು ಮತ್ತೆ ಮತ್ತೆ ತೋರಿಸುತ್ತಾ, ತನ್ನ ಅಸಾದಾರಣವಾದ ಗುಣಗಳನ್ನು ತೋರಿಸುತ್ತಾನೆ.
[ದೇವರು ತೀರ ಸಾಮಾನ್ಯನಾಗಿ ಕಂಡರೂ ನಮಗೆ ಅದರಿಂದ ಪ್ರಯೋಜನವಿಲ್ಲ. ಯಾವಾಗಲೂ ಅಸಾಮಾನ್ಯನಾಗಿ ಕಂಡರೂ ಕೂಡಾ ನಮಗೆ ಪ್ರಯೋಜನವಿಲ್ಲ. ಹಾಗಿದ್ದಲ್ಲಿ ನಾವು ಅವನನ್ನು ಅನುಸರಿಸುವುದಿಲ್ಲ. ಆದ್ದರಿಂದ ಭಗವಂತ ಸಾಮಾನ್ಯನಾಗಿಯೂ, ಅಲ್ಲಲ್ಲಿ ಶ್ರೇಷ್ಠ ಬಲವನ್ನು ತೋರಿಸುತ್ತಾ ಅಸಾಮಾನ್ಯನಾಗಿಯೂ  ಕಾಣುತ್ತಾನೆ.  ಈರೀತಿಯಾದ ಮಿಶ್ರಣ ಇರುವುದರಿಂದಲೇ ನಮಗೆ ದೇವರ ಮೆಲಿನ ಭಕ್ತಿ ಹೆಚ್ಚುತ್ತದೆ.  ದೇವರಿಂದ ಶಿಕ್ಷಣವೂ ದೊರೆಯುತ್ತದೆ.]  

Sunday, May 19, 2019

Mahabharata Tatparya Nirnaya Kannada 13_04-13_06


ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ 
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯಾನಾಮ್ ॥೧೩.೦೪॥

ಎಲ್ಲರಿಗೂ ಒಡೆಯನಾದ ಶ್ರೀಕೃಷ್ಣನು ಒಮ್ಮೆ ‘ಇದು ನನ್ನಮಗು’ ಎನ್ನುವ ಭಾವನೆಯನ್ನು ತೋರುತ್ತಿರುವ ತಾಯಿಗೆ, ಆರೀತಿಯ ಭಾವನೆಯನ್ನು ನಾಶಮಾಡಲು, ಗೆಳೆಯರೆಲ್ಲರೂ ನೋಡುತ್ತಿರಲು, ಮಣ್ಣನ್ನು ತಿಂದ.  

ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ
ಪಶ್ಯೇತ್ಯಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್ ।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥

ತಾಯಿಯಿಂದ ‘ಬಾಯಿತೆರೆ’ ಎಂದು ಗದರಿಸಲ್ಪಟ್ಟವನಾದ ಸರ್ವಸಮರ್ಥನಾದ ಕೃಷ್ಣನು 'ಅಮ್ಮಾ, ನಾನು ಮಣ್ಣನ್ನು ತಿನ್ನಲಿಲ್ಲಾ ನೋಡು’ ಎಂದು ಹೇಳಿ ತನ್ನ ಬಾಯನ್ನು ತೆರೆದನು. ಆಗ ಯಶೋದೆಯು ಅವನ ಬಾಯಲ್ಲಿ ಪ್ರಕೃತಿ ಹಾಗು ವಿಕೃತಿಯಿಂದ ಕೂಡಿರುವ ಜಗತ್ತನ್ನು ಕಂಡಳು. ಈರೀತಿಯಾಗಿ ನಾರಾಯಣನು ಯಾರಿಗೂ ಚಿಂತಿಸಲಾಗದ, ಬೇರೊಬ್ಬರಿಗೆ ತಿಳಿಯಲಾಗದ ಉತ್ಕೃಷ್ಟವಾದ ಸ್ವರೂಪ ಶಕ್ತಿಯನ್ನು ತಾಯಿಗೆ ತೋರಿಸಿ,  ಹೆಚ್ಚಾಗಿ ತನ್ನನ್ನು ತಿಳಿದ ಆ ಯಶೋದೆಯನ್ನು ಮತ್ತೆ ತನ್ನ ಸಾಮರ್ಥ್ಯದಿಂದ (ಮೊದಲಿನಂತೆ)ಆವರಿಸಿದ.

ಇತಿ ಪ್ರಭುಃ ಸ ಲೀಲಯಾ  ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥

ಈರೀತಿಯಾಗಿ, ಸರ್ವಸಮರ್ಥನಾದ  ಶ್ರೀಕೃಷ್ಣನು ತನ್ನ ಲೀಲೆಯಿಂದ ಜಗತ್ತನ್ನು ಅನುಕರಿಸುವವನಾಗಿ, ಆ ಗೋವುಗಳ ಗ್ರಾಮದಲ್ಲಿ, ಎಣೆಯಿರದ ಸುಖದಿಂದಲೂ, ಜ್ಞಾನದಿಂದಲೂ ತುಂಬಿರುವವನಾಗಿ ಸಂಚರಿಸಿದನು.

Mahabharata Tatparya Nirnaya Kannada 13_01-13_03


೧೩. ಕಂಸವಧಃ


ಓಂ ॥
ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧

ಯಾದವರ ಪುರೋಹಿತರಾಗಿರುವ ಗರ್ಗ ಎಂಬ ಋಷಿಯು ವಸುದೇವನ ಮಾತಿನಂತೆ ವ್ರಜಕ್ಕೆ ಬಂದು, ಕೃಷ್ಣ ಹಾಗು ಬಲರಾಮರಿಗೆ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು(ಜಾತಕರ್ಮಾದಿ ಸಂಸ್ಕಾರಗಳನ್ನು) ಮಾಡಿದರು.
[ಪಾದ್ಮಪುರಾಣದಲ್ಲಿ ಈ ಮಾತಿನ ಉಲ್ಲೇಖವಿದೆ: ತತೋ ಗರ್ಗಃ ಶುಭದಿನೇ ವಸುದೇವೇನ ನೋದಿತಃ’ (ಉತ್ತರಖಂಡ ೧೪೫.೬೭)   ನಾಮ ಚಾತ್ರಾಕರೋದ್ ದಿವ್ಯಂ ಪುತ್ರಯೋರ್ವಾಸುದೇವಯೋಃ’ (೬೮).  ಭಾಗವತದಲ್ಲಿ(೧೦.೧.೧೧) ಹೇಳುವಂತೆ: ಚಕಾರ ನಾಮಕರಣಂ ಗೂಢೋ ರಹಸಿ ಬಾಲಯೋಃ’.  ಬ್ರಾಹ್ಮಪುರಾಣದಲ್ಲಿ(೭೬.೧-೨)) ಹೀಗಿದೆ: ‘ಗರ್ಗಶ್ಚ ಗೋಕುಲೇ ತತ್ರ ವಸುದೇವಪ್ರಚೋದಿತಃ । ಪ್ರಚ್ಛನ್ನ ಏವ ಗೋಪಾನಾಂ  ಸಂಸ್ಕಾರಮಕರೋತ್ ತಯೋಃ ॥  ಜೇಷ್ಠಂ ಚ ರಾಮಮಿತ್ಯಾಹ ಕೃಷ್ಣಂ ಚೈವ ತಥಾsಪರಮ್’. ಕಂಸನಿಗೆ ಸುದ್ದಿಮುಟ್ಟುವ ಸಾಧ್ಯತೆ ಇರುವುದರಿಂದ, ಶ್ರೀಕೃಷ್ಣನಿಗೆ ಗೋಪ್ಯವಾಗಿ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರ ನಡೆಯಿತು. ಕೃಷ್ಣ ಬೆಳೆದದ್ದು ವೈಶ್ಯ ಕುಟುಂಬದಲ್ಲಾದರೂ ಕೂಡಾ, ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು ಹೊಂದಿ ಕ್ಷತ್ರೀಯನೇ ಆಗಿದ್ದ. (ಇದೇ ಪರಿಸ್ಥಿತಿ ಕರ್ಣನಿಗೂ ಇತ್ತು. ಆದರೆ ಅವನಿಗೆ ಈರೀತಿಯ ಸಂಸ್ಕಾರ ಆಗಿರಲಿಲ್ಲ. ಆದ್ದರಿಂದ ಅವನನ್ನು ಸಮಾಜ ‘ಸೂತ’ ಎಂದೇ ಪರಿಗಣಿಸಿತು.  ಗರ್ಗಾಚಾರ್ಯರಿಂದ ಸಂಸ್ಕಾರಗೊಂಡ ಶ್ರೀಕೃಷ್ಣನನ್ನು ಸಮಾಜ ಕ್ಷತ್ರಿಯನನ್ನಾಗಿ ಕಂಡಿತು)].

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨

ಸಮಸ್ತ ಸಂಸ್ಕಾರಗಳನ್ನು ಪೂರೈಸಿದ ಗರ್ಗಾಚಾರ್ಯರು ಹೇಳುತ್ತಾರೆ: ‘ಎಲೋ ನಂದಗೋಪನೇ, ಈ ನಿನ್ನ ಸುತನು ನಾರಾಯಣನಿಗೆ ಎಲ್ಲಾ ಗುಣಗಳಿಂದಲೂ ಕಡಿಮೆ ಇಲ್ಲದವನು (ನಾರಾಯಣನಿಗೆ ಸಮನಾದವನು. ಅಂದರೆ ಸ್ವಯಂ ನಾರಾಯಣ ಒಬ್ಬನೇ). ನೀನೇ ಮೊದಲಾಗಿರುವ ಎಲ್ಲರೂ ಕೂಡಾ ಇವನಿಂದ ರಕ್ಷಿಸಲ್ಪಟ್ಟವರಾಗಿ ಉತ್ಕೃಷ್ಟವಾದ ಸುಖವನ್ನು ಹೊಂದುತ್ತೀರಿ’.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥

ಈರೀತಿಯಾಗಿ ಗರ್ಗಾಚಾರ್ಯರಿಂದ ಹೇಳಲ್ಪಟ್ಟಾಗ ನಂದನು ಸಂತಸವನ್ನು ಹೊಂದಿದನು. ಗರ್ಗಾಚಾರ್ಯರೂ  ಕೂಡಾ ಅವನ ಅನುಜ್ಞೆಯನ್ನು ಪಡೆದು ಅಲ್ಲಿಂದ ತೆರಳಿದರು. ತದನಂತರ ಎಲ್ಲರಿಗೂ ಮೊದಲೆನಿಸಿರುವ(ಆದಿಪುರುಷನಾದ) ಕೇಶವನು ಅಣ್ಣನಿಂದ ಕೂಡಿಕೊಂಡು, ಆ ಪ್ರಾಂತ್ಯದಲ್ಲಿ ಸಂಚರಿಸುತ್ತಾ ತನ್ನ ಪಾದಗಳಿಂದ ಆ ಗ್ರಾಮವನ್ನು ಪವಿತ್ರವನ್ನಾಗಿ ಮಾಡಿದನು. 

Wednesday, May 15, 2019

Mahabharata Tatparya Nirnaya Kannada 12.126-12.136


ಪುನರ್ಮ್ಮನೋಃ ಫಲವತ್ತ್ವಾಯ ಮಾದ್ರೀ ಸಮ್ಪ್ರಾರ್ತ್ಥಯಾಮಾಸ ಪತಿಂ ತದುಕ್ತಾ ।
ಪೃಥಾsವಾದೀತ್ ಕುಟಿಲೈಷಾ ಮದಾಜ್ಞಾಮೃತೇ ದೇವಾವಾಹ್ವಯಾಮಾಸ ದಸ್ರೌ ॥೧೨.೧೨೬

ಅತೋ ವಿರೋಧಂ ಚ ಮದಾತ್ಮಜಾನಾಂ ಕುರ್ಯ್ಯಾದೇಷೇತ್ಯೇವ ಭೀತಾಂ ನ ಮಾಂ ತ್ವಮ್ । 
ನಿಯೋಕ್ತುಮರ್ಹಃ ಪುನರೇವ ರಾಜನ್ನಿತೀರಿತೋsಸೌ ವಿರರಾಮ ಕ್ಷಿತೀಶಃ ॥೧೨.೧೨೭ 

ಎರಡು ಮಕ್ಕಳನ್ನು ಪಡೆದ ನಂತರ ಪುನಃ ಮಂತ್ರದ ಫಲವತ್ತತೆಗಾಗಿ ಮಾದ್ರಿಯು ಪಾಂಡುವನ್ನು ಬೇಡಿಕೊಳ್ಳುತ್ತಾಳೆ! ಆದರೆ ಪಾಂಡುವಿನಿಂದ ಮತ್ತೆ ಮಂತ್ರ ನೀಡುವಂತೆ ಹೇಳಲ್ಪಟ್ಟಾಗ  ಕುಂತಿಯು ಹೇಳುತ್ತಾಳೆ: ‘ಇವಳು ಕುಟಿಲಬುದ್ಧಿಯುಳ್ಳವಳು. ನಮ್ಮ ಆಜ್ಞೆ ಇಲ್ಲದೇ ಅಶ್ವಿನೀದೇವತೆಗಳನ್ನು ಈಕೆ ಆಹ್ವಾನಮಾಡಿದಳು.’ (ಮಾದ್ರಿ ಮಂತ್ರಪ್ರಯೋಗ ಮಾಡುವ ಮುನ್ನ  ಪಾಂಡುವಿನೊಂದಿಗಾಗಲೀ, ಕುಂತಿಯೊಂದಿಗಾಗಲೀ ಮಂತ್ರಾಲೋಚನೆ ಮಾಡಲೇ ಇಲ್ಲಾ. ತಾನೇ ಸ್ವತಂತ್ರವಾಗಿ ನಿರ್ಧರಿಸಿ ಆಹ್ವಾನ ಮಾಡಿದಳು. ಆದ್ದರಿಂದ ಅವಳನ್ನು ಕುಂತಿ ಇಲ್ಲಿ ಕುಟಿಲಬುದ್ಧಿಯುಳ್ಳವಳು ಎಂದು ಕರೆದಿದ್ದಾಳೆ)
‘ಆದಕಾರಣ ಈಕೆ  ನನ್ನ ಮಕ್ಕಳಿಗೆ ನಿಶ್ಚಯವಾಗಿ ವಿರೋಧ ಮಾಡುವವಳೇ ಆಗಿದ್ದಾಳೆ. ಈರೀತಿಯಾಗಿ ಭಯಗೊಂಡ ನನ್ನನ್ನು ನೀನು ಮತ್ತೆ ಮಂತ್ರನೀಡುವಂತೆ  ಪ್ರಚೋದನೆ ಮಾಡಬೇಡ’ ಎಂದು ಕುಂತಿಯಿಂದ ಹೇಳಲ್ಪಟ್ಟಾಗ ಪಾಂಡುವು ಸುಮ್ಮನಾಗುತ್ತಾನೆ.

ಮಾದ್ರಿ ಅಶ್ವಿನೀ ದೇವತೆಗಳನ್ನು ಆಹ್ವಾನಿಸಿ ಅವಳಿ ಮಕ್ಕಳನ್ನು ಪಡೆದ ಘಟನೆಯ ಹಿಂದಿನ ತಾಂತ್ರಿಕ ರಹಸ್ಯವನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:

ವಿಶೇಷನಾಮ್ನೈವ ಸಮಾಹುತಾಃ ಸುತಾನ್ ದಧ್ಯುಃ ಸುರಾ ಇತ್ಯವಿಶೇಷಿತಂ ಯಯೋಃ। 
ವಿಶೇಷನಾಮಾಪಿ ಸಮಾಹ್ವಯತ್ ತೌ ಮನ್ತ್ರಾವೃತ್ತಿರ್ನ್ನಾಮಭೇದೇsಸ್ಯ ಚೋಕ್ತಾ ॥೧೨.೧೨೮॥      

ದೇವತೆಗಳನ್ನು ಅವರ ವಿಶೇಷವಾದ ಹೆಸರಿನಿಂದ ಕರೆದಲ್ಲಿ ಮಾತ್ರ ಮಕ್ಕಳನ್ನು ಕೊಡುತ್ತಾರೆ. ಕರೆಯಲ್ಪಡುವ ದೇವತೆಗಳಿಗೆ ನಾಮಭೇದವಿದ್ದರೆ ಮಾತ್ರ ಮಂತ್ರಕ್ಕೆ ಪುನರುಚ್ಛಾರ ಹೇಳಲ್ಪಟ್ಟಿದೆ.

[ಮಂತ್ರ ಒಂದೇ. ಆದರೆ ಪ್ರತಿಯೊಂದು ದೇವತೆಯ ವಿಶೇಷ ನಾಮದೊಂದಿಗೆ ಅದನ್ನು ಪುನರುಚ್ಛಾರ ಮಾಡಿದಾಗ ಅದು ಆ ವಿಶೇಷ ನಾಮವುಳ್ಳ ನಿರ್ದಿಷ್ಟ ದೇವತೆಯನ್ನು ತಲುಪುತ್ತದೆ. ಅಂದರೆ ಒಬ್ಬ ದೇವತೆಯನ್ನು ಕರೆಯಲು ಆ ದೇವತೆಯ ವಿಶೇಷ ನಾಮದೊಂದಿಗೆ ಮಂತ್ರೋಚ್ಛಾರ ಮಾಡಬೇಕು. ಹಾಗಾಗಿ ಒಂದಕ್ಕಿಂತ ಹೆಚ್ಚು ದೇವತೆಯನ್ನು ಕರೆಯಬೇಕಾದರೆ ಮಂತ್ರವನ್ನು ಪುನರುಚ್ಛಾರ ಮಾಡಲೇಬೇಕಾಗುತ್ತದೆ. ಇಲ್ಲಿ ಅಶ್ವಿನಿದೇವತೆಗಳು ಮಾತ್ರ ವಿಶೇಷ. ಅವರು ನಮ್ಮ ಮೂಗಿನ ಎರಡು ಹೊರಳೆಗಳಂತೆ.  ಬೇರ್ಪಡದ ಅವಳಿಗಳು.  ಅಂದರೆ ಅವರಲ್ಲಿ ಯಾರನ್ನು ಒಮ್ಮೆ ಕರೆದರೂ ಕೂಡಾ, ಇಬ್ಬರೂ(ನಾಸತ್ಯ ಮತ್ತು ದಸ್ರ) ಒಟ್ಟಿಗೇ ಬರುತ್ತಾರೆ. ಇದನ್ನು ತಿಳಿದೇ  ಮಾದ್ರಿಯು ಒಂದಾವರ್ತಿ ಮಂತ್ರವನ್ನು ಬಳಸಿ ಇಬ್ಬರು ಮಕ್ಕಳನ್ನು ಪಡೆಯುತ್ತಾಳೆ. ನಾಸತ್ಯನು ನಕುಲನಾಗಿ ಹುಟ್ಟಿದರೆ, ದಸ್ರನು ಸಹದೇವನಾಗಿ ಜನ್ಮತಾಳಿದನು.]

ಯುಧಿಷ್ಠಿರಾದ್ಯೇಷು ಚತುರ್ಷು ವಾಯುಃ ಸಮಾವಿಷ್ಟಃ ಫಲ್ಗುನೇsಥೋ ವಿಶೇಷಾತ್       
ಯುಧಿಷ್ಠಿರೇ ಸೌಮ್ಯರೂಪೇಣ ವಿಷ್ಟೋ ವೀರೇಣ ರೂಪೇಣ ಧನಞ್ಜಯೇsಸೌ ॥೧೨.೧೨೯  

ಯುಧಿಷ್ಠಿರ ಮೊದಲಾದ ನಾಲ್ಕು ಜನರಲ್ಲೂ ಕೂಡಾ ಮುಖ್ಯಪ್ರಾಣನು ಸಮಾವಿಷ್ಟನಾಗಿದ್ದಾನೆ. ಯುಧಿಷ್ಠಿರ, ನಕುಲ-ಸಹದೇವರಿಗಿಂತ ಅರ್ಜುನನಲ್ಲಿ ವಾಯುದೇವರು  ವಿಶೇಷವಾಗಿ ಆವಿಷ್ಟರಾಗಿದ್ದಾರೆ.
ಯುಧಿಷ್ಠಿರನಲ್ಲಿ ಶಾಂತವಾದ ರೂಪದಿಂದಿರುವ ಪ್ರವಿಷ್ಟರಾಗಿರುವ  ಮುಖ್ಯಪ್ರಾಣ, ವೀರರೂಪದಿಂದ ಅರ್ಜುನನಲ್ಲಿ ಆವಿಷ್ಟರಾಗಿದ್ದಾರೆ.

ಶೃಙ್ಗಾರರೂಪಂ ಕೇವಲಂ ದರ್ಶಯಾನೋ ವಿವೇಶ ವಾಯುರ್ಯ್ಯಮಜೌ ಪ್ರಧಾನಃ ।  
ಶೃಙ್ಗಾರಕೈವಲ್ಯಮಭೀಪ್ಸಮಾನಃ ಪಾಣ್ಡುರ್ಹಿ ಪುತ್ರಂ ಚಕಮೇ ಚತುರ್ತ್ಥಮ್ ೧೨.೧೩೦ 

ಕೇವಲ ಶೃಂಗಾರರೂಪವನ್ನು ತೋರಿಸುವವರಾಗಿ ಮುಖ್ಯಪ್ರಾಣ ದೇವರು ಅವಳಿಗಳನ್ನು(ನಕುಲ-ಸಹದೇವರನ್ನು)  ಪ್ರವೇಶಿಸಿದರು. ಪಾಂಡುವು ಶೃಂಗಾರ ರೂಪವನ್ನು ಹೊಂದಿದ ನಾಲ್ಕನೆಯ ಮಗ ಬೇಕು ಎಂದು ಬಯಸಿದ್ದನಷ್ಟೇ.

ಶೃಙ್ಗಾರರೂಪೋ ನಕುಲೋ ವಿಶೇಷಾತ್ ಸುನೀತಿರೂಪಃ ಸಹದೇವಂ ವಿವೇಶ ।
ಗುಣೈಃ ಸಮಸ್ತೈಃ ಸ್ವಯಮೇವ ವಾಯುರ್ಬಭೂವ ಭೀಮೋ ಜಗದನ್ತರಾತ್ಮಾ ॥೧೨.೧೩೧   

ವಿಶೇಷವಾದ ಶೃಂಗಾರ ರೂಪನಾಗಿ ನಕುಲನನ್ನು ಪ್ರವೇಶಿಸಿದ ವಾಯುದೇವರು, ಸುನೀತಿ ರೂಪನಾಗಿ ಸಹದೇವನನ್ನು ಪ್ರವೇಶಿಸಿದರು. ಜಗತ್ತಿನ ಅಂತರ್ನಿಯಾಮಕನಾದ, ಸಮಸ್ತಗುಣಗಳಿಂದ ತುಂಬಿದ ವಾಯುದೇವರು ಸ್ವಯಂ ಭೀಮಸೇನ ರೂಪದಲ್ಲಿ ನಿಂತರು. 
[ಭೀಮಾರ್ಜುನರು ಹುಟ್ಟಿದ ನಂತರ ಪಾಂಡು ಸುಂದರನಾದ ಮಗ ಬೇಕು ಎಂದು ಅಪೇಕ್ಷೆ ಪಟ್ಟ ಎಂದರೆ ಭೀಮಾರ್ಜುನರರು ಸುಂದರರಾಗಿಲ್ಲ ಎಂದು ಅರ್ಥವಾಗುತ್ತದೆ. ಆದರೆ ಆದಿಪರ್ವದ ಹಿಡಿಂಬಾ ಪ್ರಣಯ ಪ್ರಸಂಗದಲ್ಲಿ ಭೀಮಸೇನ ರೂಪಶಾಲಿ ಎಂದು ವಿವರಿಸಲಾಗಿದೆ. ಹಾಗಿದ್ದರೆ ಪಾಂಡು ಬಯಸಿದ ಶೃಂಗಾರ ರೂಪ ಯಾವುದು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ  ಆಚಾರ್ಯರು ಸ್ಪಷ್ಟಪಡಿಸಿದ್ದಾರೆ:]

ಸುಪಲ್ಲವಾಕಾರತನುರ್ಹಿ ಕೋಮಳಃ ಪ್ರಾಯೋ ಜನೈಃ ಪ್ರೋಚ್ಯತೇ ರೂಪಶಾಲೀ ।
ತತಃ ಸುಜಾತಂ ವರವಜ್ರಕಾಯೌ ಭೀಮಾರ್ಜ್ಜುನಾವಪ್ಯೃತೇ ಪಾಣ್ಡುರೈಚ್ಛತ್ ॥೧೨.೧೩೨॥  

ಮೃದುವಾಗಿರುವ, ಕೋಮಲವಾಗಿರುವ ದೇಹವುಳ್ಳವನು ಪ್ರಾಯಃ ಹೆಚ್ಚಿನಪಕ್ಷದಲ್ಲಿ ಜನರಿಂದ ರೂಪಶಾಲೀ ಎಂದು ಹೇಳಲ್ಪಡುತ್ತಾನೆ. ಆಕಾರಣದಿಂದ, ಉತ್ಕೃಷ್ಟವಾಗಿರುವ ವಜ್ರದಂತೆ ಶರೀರವುಳ್ಳ ಭೀಮ ಹಾಗು ಅರ್ಜುನರನ್ನು ಬಿಟ್ಟು, ಪಾಂಡುವು ಕೋಮಲ ಶರೀರವುಳ್ಳ ಸುಂದರನಾಗಿರುವ ಮಗನೊಬ್ಬ ಬೇಕು ಎಂದು ಬಯಸಿದ.

ಅಪ್ರಾಕೃತಾನಾಂ ತು ಮನೋಹರಂ ಯದ್ ರೂಪಂ ದ್ವಾತ್ರಿಂಶಲ್ಲಕ್ಷಣೋಪೇತಮಗ್ರ್ಯಮ್
ತನ್ಮಾರುತೋ ನಕುಲೇ ಕೋಮಳಾಭ ಏವಂ ವಾಯುಃ ಪಞ್ಚರೂಪೋsತ್ರ ಚಾsಸೀತ್ ॥೧೨.೧೩೩

ಅಪ್ರಾಕೃತವಾದ,  ೩೨  ಲಕ್ಷಣಗಳಿಂದ ಕೂಡಿರುವ, ಉತ್ಕೃಷ್ಟವಾದ ಮನೋಹರವಾದ ರೂಪವನ್ನು ಸ್ವಯಂ ಭೀಮಸೇನ ಧರಿಸಿದ್ದ. (ಅರ್ಜುನನಿಗೆ ಭೀಮಸೇನನಿಗಿಂತ ಸ್ವಲ್ಪ ಕಡಿಮೆ ಲಕ್ಷಣವಿತ್ತು). ಆ ಕಾರಣದಿಂದ ಭೀಮಸೇನ ಪಾಂಡುವಿನ ಇಚ್ಛೆಗೆ ಅನುಗುಣವಾಗಿ ನಕುಲನಲ್ಲಿ ಕೋಮಲನಂತೆ ಕಾಣುತ್ತಿದ್ದ. ಹೀಗೆ ಮುಖ್ಯಪ್ರಾಣನು ನಾಲ್ಕು ಜನ ಪಾಂಡವರಲ್ಲಿ ಚತುಃಸ್ವರೂಪದಿಂದ ಆವಿಷ್ಟರಾಗಿದ್ದು, ಪಂಚಪಾಂಡವರಲ್ಲಿ ಪಂಚ  ರೂಪವುಳ್ಳವರಾಗಿದ್ದರು.


ಅತೀತೇನ್ದ್ರಾ ಏವ ತೇ ವಿಷ್ಣುಷಷ್ಠಾಃ ಪೂರ್ವೇನ್ದ್ರೋsಸೌ ಯಜ್ಞನಾಮಾ ರಮೇಶಃ
ಸ ವೈ ಕೃಷ್ಣೋ ವಾಯುರಥ ದ್ವಿತೀಯಃ ಸ ಭೀಮಸೇನೋ ಧರ್ಮ್ಮ ಆಸೀತ್ ತೃತೀಯಃ ॥೧೨.೧೩೪॥
                                                                                            
ಯಧಿಷ್ಠಿರೋsಸಾವಥ ನಾಸತ್ಯದಸ್ರೌ ಕ್ರಮಾತ್ ತಾವೇತೌ ಮಾದ್ರವತೀಸುತೌ ಚ ।
ಪುರನ್ದರಃ ಷಷ್ಠ ಉತಾತ್ರ ಸಪ್ತಮಃ ಸ ಏವೈಕಃ ಫಲ್ಗುನೋ ಹ್ಯೇತ ಇನ್ದ್ರಾಃ ॥೧೨.೧೩೫

ವಿಷ್ಣುವನ್ನೇ ಆರನೆಯವನನ್ನಾಗಿ ಹೊಂದಿರುವ ಪಾಂಡವರು, ಆಗಿಹೋದ ಇಂದ್ರರೇ ಆಗಿದ್ದಾರೆ. (ಪರಮಾತ್ಮನೂ ಸೇರಿದಂತೆ ಆರುಜನ ಇಂದ್ರರ ಕಥೆ ಈ ಮಹಾಭಾರತ. ಅದನ್ನೇ ಸಂಸ್ಕೃತದಲ್ಲಿ ವಿಷ್ಣುಷಷ್ಠಃ ಎಂದಿದ್ದಾರೆ.)
ಸ್ವಾಯಮ್ಭುವ ಮನ್ವಂತರದಲ್ಲಿ ಇಂದ್ರನಾಮಕನಾಗಿ ಸ್ವಯಂ ಭಗವಂತನಿದ್ದ. ಋಷಿಪ್ರಜಾಪತಿ ಮತ್ತು ಆಕೂತಿಯರ ದಾಂಪತ್ಯದಲ್ಲಿ ‘ಯಜ್ಞಾ’ ಎನ್ನುವ ಹೆಸರಿನಿಂದ ಹುಟ್ಟಿದ ನಾರಾಯಣ ಇಂದ್ರ ಪದವಿಯನ್ನು ನಿರ್ವಹಿಸಿದ. ಅವನೇ ಈ ಮಹಾಭಾರತದ ಶ್ರೀಕೃಷ್ಣ.
ತದನಂತರ, ಸ್ವಾರೋಚಿಷ ಮನ್ವಂತರದಲ್ಲಿ  ಮುಖ್ಯಪ್ರಾಣನು ಎರಡನೇ ಇಂದ್ರನಾದ (ಭಾಗವತದ ೮ನೇ ಸ್ಕಂಧದಲ್ಲಿ  ‘ರೋಚನ’ ಎನ್ನುವ ರೂಪದಿಂದ ಮುಖ್ಯಪ್ರಾಣ ಇಂದ್ರಪದವಿಯನ್ನು ಅಲಂಕರಿಸಿದ ಎನ್ನುವುದನ್ನುವಿವರಿಸಿದ್ದಾರೆ).  ಅವನೇ ಮಹಾಭಾರತದ ಭೀಮಸೇನ.
ಮೂರನೆಯ ಮನ್ವಂತರದಲ್ಲಿ(ಉತ್ತಮ ಮನ್ವಂತರದಲ್ಲಿ) ಮೂರನೆಯ ಇಂದ್ರ ಸಾಕ್ಷಾತ್ ಯಮ. ಅವನ ಹೆಸರು ವಿಭುಃ. ಈತನೇ ಮಹಾಭಾರತದ ಯಧಿಷ್ಠಿರ.
ತಾಪಸ ಮನ್ವಂತರದಲ್ಲಿ ‘ಸತ್ಯಜಿತ್’ ಎನ್ನುವ ಇಂದ್ರನಿದ್ದಾನೆ. ಅವನಿಲ್ಲಿ ನಕುಲನಾಗಿದ್ದಾನೆ. ರೈವತಮನ್ವಂತರದಲ್ಲಿ  ‘ತ್ರಿಶಿಖ’ ಎನ್ನುವ ಇಂದ್ರ. ಅವನಿಲ್ಲಿ ಸಹದೇವನಾಗಿದ್ದಾನೆ.
ಚಾಕ್ಷುಶ ಮನ್ವಂತರದಲ್ಲಿ ಮಂದ್ರದ್ಯುಮ್ನ ಎನ್ನುವ ಹೆಸರಿನಿಂದಿರುವ ಇಂದ್ರ, ಪರಮಾತ್ಮನ ವಿಶೇಷ ಅನುಗ್ರಹದಿಂದ ಏಳನೇ ಮನ್ವನ್ತರದಲ್ಲೂ(ವೈವಸ್ವತ ಮನ್ವನ್ತರದಲ್ಲೂ) ಕೂಡಾ ಇಂದ್ರಪದವಿಯನ್ನು ಪಡೆದ. ಈತನೇ  ಪುರಂದರ. ಅವನೇ ಮಹಾಭಾರತದ ಅರ್ಜುನ.
[ಇದನ್ನೇ  ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ (೭೬.೨೨) ‘ಪಞ್ಚೇದ್ರಾಃ ಪಾಣ್ಡವಾ ಜಾತಾ ವಿದುರೋ ಧರ್ಮ ಏವ ಚ’ - ಐದು ಜನ ಇಂದ್ರರೇ ಪಾಂಡವರಾಗಿ ಹುಟ್ಟಿದ್ದಾರೆ ಎಂದು ಹೇಳಲಾಗಿದೆ. ತಥಾಚ, ಈ ಏಳು ಜನ ಇಂದ್ರರ ಕಥೆಯೇ ಮಹಾಭಾರತ. ವೇದದಲ್ಲಿ ಏಳು ಮಂಡಲದಲ್ಲಿ ಇರತಕ್ಕಂತಹ ಕಥೆಯಲ್ಲಿ ಮಹಾಭಾರತದ ವಿಸ್ತಾರವನ್ನು ನಾವು ಕಾಣಬಹುದು.  ]

ಕ್ರಮಾತ್ ಸಂಸ್ಕಾರಾನ್ ಕ್ಷತ್ರಿಯಾಣಾಮವಾಪ್ಯ ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ ।
ಸರ್ವೇ ಸರ್ವಜ್ಞಾಃ ಸರ್ವಧರ್ಮ್ಮೋಪಪನ್ನಾಃ ಸರ್ವೇ ಭಕ್ತಾಃ ಕೇಶವೇsತ್ಯನ್ತಯುಕ್ತಾಃ ॥೧೨.೧೩೬॥

ಕ್ರಮವಾಗಿ ಕ್ಷತ್ರಿಯರ ಸಂಸ್ಕಾರವನ್ನು ಹೊಂದಿದ ಈ ಪಾಂಡವರು,  ತಮ್ಮ ಮಹಿಮೆಯಿಂದ ಸ್ವರೂಪಭೂತವಾದ ಸಾಮರ್ಥ್ಯವುಳ್ಳವರಾಗಿ ಬೆಳೆದರು. ಇವರೆಲ್ಲರೂ ಯೋಗ್ಯತೆಗನುಗುಣವಾಗಿ ಎಲ್ಲವನ್ನೂ ಬಲ್ಲವರಾಗಿದ್ದರು.  ಧರ್ಮದಿಂದ ಯುಕ್ತರಾಗಿದ್ದ ಅವರು ನಾರಾಯಣನಲ್ಲಿ ಆತ್ಯಂತಿಕವಾಗಿ ಭಕ್ತಿ ಮಾಡುತ್ತಿದ್ದರು.
[ಋಗ್ವೇದ ಸಂಹಿತದಲ್ಲಿ (೧.೮೫.೫) ಹೇಳುವಂತೆ: ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ  ನಾಕಂ ತಸ್ಥುರುರು ಚಕ್ರಿರೇ ಸದಃ   ವಿಷ್ಣುರ್ಯದ್ಧಾವದ್ ವೃಷಣಂ  ಮದಚ್ಯುತಂ ವಯೋ ನ ಸೀದನ್ನಧಿ ಬರ್ಹಿಷಿ ಪ್ರಿಯೇ’
ಈ ಮಂತ್ರ ಮರುದ್ಧೇವತೆಗಳನ್ನು ಹೇಳಲು ಹೊರಟಿದೆ. ಮರುದ್ಧೇವತೆಗಳಲ್ಲಿ ಪ್ರಧಾನ ಮುಖ್ಯಪ್ರಾಣ. ಮುಖ್ಯಪ್ರಾಣನ ಸನ್ನಿಧಾನ ಎನ್ನುವುದು ಉಳಿದ ನಾಲ್ವರಲ್ಲಿದೆ ಎನ್ನುವುದಕ್ಕೆ ವೇದದ ಒಂದು ಸಂವಾದವೂ ಇದೆ ಎಂದು ತೋರಿಸುವುದಕ್ಕಾಗಿ,  ಮರುದ್ಧೇವತಾಕವಾದ ಸೂತ್ರದ ಖಂಡವನ್ನು ಆಚಾರ್ಯರು ಇಲ್ಲಿ ಜೋಡಿಸಿ ಹೇಳಿದ್ದಾರೆ. ಇದರಿಂದ- ‘ವೇದದಲ್ಲಿ ಮರುದ್ಧೇವತಾಕವಾದ ಸೂತ್ರವೇನಿದೆ, ಅದರಲ್ಲಿ ಪಾಂಡವರ ಕಥೆಯನ್ನು ಅನುಸಂಧಾನ ಮಾಡಿ’ ಎನ್ನುವ  ಸಂದೇಶ ನೀಡಿದಂತಾಯಿತು. ಹೀಗೆ ವೇದದೊಂದಿಗೆ ಹೇಗೆ ಮಹಾಭಾರತವನ್ನು ಜೋಡಿಸಬೇಕು ಎನ್ನುವ ದಾರಿಯನ್ನು ಆಚಾರ್ಯರು ಇಲ್ಲಿ ತೋರಿಸಿಕೊಟ್ಟಿದ್ದಾರೆ.  

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವೋತ್ಪತ್ತಿರ್ನ್ನಾಮ ದ್ವಾದಶೋsಧ್ಯಾಯಃ ॥


Tuesday, May 14, 2019

Mahabharata Tatparya Nirnaya Kannada 12.120-12.125


ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ ಸಿಂಹಸ್ಥಯೋರ್ಗ್ಗುರುರವ್ಯೋಃ ಪರೇಶಃ ।
ಉದೈತ್ ತತಃ ಫಾಲ್ಗುನೇ ಫಲ್ಗುನೋsಭೂದ್ ಗತೇ ತತೋ ಮಾದ್ರವತೀ ಬಭಾಷೇ ॥೧೨.೧೨೦

ಜಾತಾಃ ಸುತಾಸ್ತೇ ಪ್ರವರಾಃ ಪೃಥಾಯಾಮೇಕಾsನಪತ್ಯಾsಹಮತಃ ಪ್ರಸಾದಾತ್ ।
ತವೈವ ಭೂಯಾಸಮಹಂ ಸುತೇತಾ ವಿಧತ್ಸ್ವ ಕುನ್ತೀಂ ಮಮ ಮನ್ತ್ರದಾತ್ರೀಮ್ ॥೧೨.೧೨೧॥


ಯಾವ ವರ್ಷದಲ್ಲಿ,  ಭಾದ್ರಪದ ಮಾಸದಲ್ಲಿ,  ಸಿಂಹರಾಶಿಯಲ್ಲಿ ಗುರು ಮತ್ತು ಸೂರ್ಯ ಇರುತ್ತಿರಲು ಕೃಷ್ಣನು ಆವಿರ್ಭವಿಸಿದನೋ, ಅಲ್ಲಿಂದ  ಮುಂದಿನ ಫಲ್ಗುಣ ಮಾಸದಲ್ಲಿ ಅರ್ಜುನನ ಜನನವಾಯಿತು. (ಅಂದರೆ ಅರ್ಜುನ ಶ್ರೀಕೃಷ್ಣ ಜನಿಸಿದ ಆರು ತಿಂಗಳುಗಳ ನಂತರ ಜನಿಸಿದ).
ಅರ್ಜುನನ ಜನನಾನಂತರ ಮಾದ್ರಿಯು ಪಾಂಡುವನ್ನು ಕುರಿತು ಈರೀತಿ ಹೇಳುತ್ತಾಳೆ: ‘ನಿನಗೆ ಕುಂತಿಯಲ್ಲಿ ಉತ್ಕೃಷ್ಟರಾದ ಮಕ್ಕಳು ಹುಟ್ಟಿದ್ದಾರೆ. ಆದರೆ ನಾನೊಬ್ಬಳೇ ಮಕ್ಕಳಿಲ್ಲದವಳು. ಆಕಾರಣದಿಂದ ನಿನ್ನ ಅನುಗ್ರಹದಿಂದಲೇ ನಾನು ಮಕ್ಕಳೊಂದಿಗಳಾಗುತ್ತೇನೆ. ಅದರಿಂದ ಕುಂತಿಯನ್ನು ನನಗೆ ಮಂತ್ರವನ್ನು ಕೊಡುವವಳನ್ನಾಗಿ ಮಾಡು’ ಎಂದು.

ಇತೀರಿತಃ ಪ್ರಾಹ ಪೃಥಾಂ ಸ ಮಾದ್ರ್ಯೈ ದಿಶಸ್ವ ಮನ್ತ್ರಂ ಸುತದಂ ವರಿಷ್ಠಮ್
ಇತ್ಯೂಚಿವಾಂಸಂ ಪತಿಮಾಹ ಯಾದವೀ ದದ್ಯಾಂ ತ್ವದರ್ತ್ಥೇ ತು ಸಕೃತ್ ಫಲಾಯ ॥೧೨.೧೨೨॥      

ಈರೀತಿಯಾಗಿ ಮಾದ್ರಿಯಿಂದ ಹೇಳಲ್ಪಟ್ಟ ಪಾಂಡುವು ಕುಂತಿಯನ್ನು ಕುರಿತು ಹೇಳುತ್ತಾನೆ: ‘ಮಾದ್ರಿಗೆ ಉತ್ಕೃಷ್ಟವಾದ ಮಕ್ಕಳನ್ನು ಕೊಡುವ ಮಂತ್ರವನ್ನು ಕೊಡು’ ಎಂದು.
ಈ ರೀತಿಯಾಗಿ ಪತಿಯಿಂದ ಹೇಳಲ್ಪಟ್ಟ ಯದುಕುಲೋತ್ಪನ್ನಳಾದ ಕುಂತಿಯು  ‘ನಿನಗಾಗಿ ಒಮ್ಮೆಮಾತ್ರ ಫಲ ಬರುವಹಾಗೆ ಮಂತ್ರವನ್ನು ಕೊಡುತ್ತೇನೆ’ ಎನ್ನುತ್ತಾಳೆ.

ಉವಾಚ ಮಾದ್ರ್ಯೈ ಸುತದಂ ಮನುಂ ಚ ಪುನಃ ಫಲಂ ತೇ ನ ಭವಿಷ್ಯತೀತಿ ।
ಮನ್ತ್ರಂ ಸಮಾದಾಯ ಚ ಮದ್ರಪುತ್ರೀ ವ್ಯಚಿನ್ತಯತ್ ಸ್ಯಾಂ ನು ಕಥಂ ದ್ವಿಪುತ್ರಾ ॥೧೨.೧೨೩॥

ಹೀಗೆ ಮಾದ್ರಿಗೆ ಮಕ್ಕಳನ್ನು ಕೊಡುವ ಮಂತ್ರವನ್ನು ಉಪದೇಶಿಸಿದ ಕುಂತಿ,  ‘ನಿನಗೆ ಇನ್ನೊಮ್ಮೆ ಫಲವು ಆಗಲಾರದು(ಒಮ್ಮೆ ಮಾತ್ರ ಈ ಮಂತ್ರ ನಿನಗೆ ಫಲಪ್ರದವಾಗಲಿದೆ, ಇನ್ನೊಮ್ಮೆ ಆಗಲಾರದು)’  ಎಂದು ಹೇಳಿದಳು. ಕುಂತಿಯಿಂದ ಮಂತ್ರವನ್ನು ಪಡೆದ ಮಾದ್ರಿಯು ‘ಹೇಗೆ ತಾನು ಇಬ್ಬರು ಮಕ್ಕಳನ್ನು ಹೊಂದಿಯೇನು’ ಎಂದು ಯೋಚನೆ ಮಾಡಲಾರಂಭಿಸಿದಳು.

ಸದಾsವಿಯೋಗೌ ದಿವಿಜೇಷು ದಸ್ರೌ ನಚೈತಯೋರ್ನ್ನಾಮಭೇದಃ ಕ್ವಚಿದ್ಧಿ।
ಏಕಾ ಭಾರ್ಯ್ಯಾ ಸೈತಯೋರಪ್ಯುಷಾ ಹಿ ತದಾಯಾತಃ ಸಕೃದಾವರ್ತ್ತನಾದ್ ದ್ವೌ ॥೧೨.೧೨೪

‘ದೇವತೆಗಳಲ್ಲಿ ಅಶ್ವೀದೇವತೆಗಳು ಯಾವಾಗಲೂ ಬೇರ್ಪಡಲಾರರು. ಅವರಿಗೆ ನಾಮಭೇದವೂ ಇಲ್ಲಾ.  ಯಾವಾಗಲೂ ಒಂದಿಗೇ ಇರುವ ಅವರಿಬ್ಬರಿಗೆ ಉಷಾ ಒಬ್ಬಳೇ ಹೆಂಡತಿ. ಆ ಕಾರಣದಿಂದ ಒಂದಾವರ್ತಿ  ಮಂತ್ರವನ್ನು ಹೇಳುವುದರಿಂದ ಅವರಿಬ್ಬರೂ ಬರುತ್ತಾರೆ’.

ಇತೀಕ್ಷನ್ತ್ಯಾssಕಾರಿತಾವಶ್ವಿನೌ ತೌ ಶೀಘ್ರಪ್ರಾಪ್ತೌ ಪುತ್ರಕೌ ತತ್ಪ್ರಸೂತೌ ।
ತಾವೇವ ದೇವೌ ನಕುಲಃ ಪೂರ್ವಜಾತಃ ಸಹದೇವೋsಭೂತ್ ಪಶ್ಚಿಮಸ್ತೌ ಯಮೌ ಚ ॥೧೨.೧೨೫

ಈರೀತಿಯಾಗಿ ಯೋಚನೆ ಮಾಡಿದ ಅವಳಿಂದ  ಕರೆಯಲ್ಪಟ್ಟ ಅಶ್ವಿನೀದೇವತೆಗಳು, ಶೀಘ್ರದಲ್ಲಿಯೇ ಬಂದು, ಪುತ್ರೋತ್ಪತ್ತಿ ಮಾಡುವವರಾಗಿ, ತಾವೇ ಮಾದ್ರಿಯಲ್ಲಿ  ಹುಟ್ಟಿ ಬಂದರು. ಮೊದಲು ಹುಟ್ಟಿದವ ನಕುಲ, ನಂತರ ಸಹದೇವ. ಅವರು ಅವಳಿಗಳೂ ಕೂಡಾ.
[ವಿಶೇಷವಾಗಿ ಅವಳಿಗಳಲ್ಲಿ ಮೊದಲು ಹುಟ್ಟುವವನು ಚಿಕ್ಕವನು ಹಾಗು ನಂತರ ಹುಟ್ಟುವವನು ದೊಡ್ಡವನು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸಹದೇವ ಅಣ್ಣ ಹಾಗು ನಕುಲ ತಮ್ಮ.
ಸಂಸ್ಕೃತ ಭಾಷೆಯಲ್ಲಿ ‘ಅಲ್ಪಾsಚಿತರಂ ಪೂರ್ವಂ’ ಎಂಬ ನಿಯಮದಂತೆ  ಅಲ್ಪ ಅಚ್ಚು ಯಾವುದಕ್ಕಿದೆಯೋ ಅದನ್ನು ಪೂರ್ವದಲ್ಲಿ ಉಚ್ಛಾರ ಮಾಡಬೇಕು.  (ಉದಾಹರಣೆಗೆ : ಕೃಷ್ಣಾರ್ಜುನ)  ಹಾಗಾಗಿ ಇವರನ್ನು ನಕುಲಸಹದೇವ ಎಂದು ಕರೆಯುತ್ತಾರೆ.] 

Monday, May 13, 2019

Mahabharata Tatparya Nirnaya Kannada 12.116-12.119


ಕದಾಚಿತ್ ತಂ ಲಾಳಯನ್ತೀ ಯಶೋದಾ ವೋಢುಂ ನಾಶಕ್ನೋದ್ ಭೂರಿಭಾರಾಧಿಕಾರ್ತ್ತಾ ।
ನಿಧಾಯ ತಂ ಭೂಮಿತಳೇ ಸ್ವಕರ್ಮ್ಮ ಯದಾ ಚಕ್ರೇ ದೈತ್ಯ ಆಗಾತ್ ಸುಘೋರಃ ೧೨.೧೧೬

ಒಮ್ಮೆ ಯಶೋದೆಯು ಶ್ರೀಕೃಷ್ಣನನ್ನು ಮುದ್ದಿಸುತ್ತಿರುವಾಗ, ಇದ್ದಕ್ಕಿದ್ದಂತೆ ಆತ ಬಹಳ ಭಾರವುಳ್ಳವನಾದ. ಇದರಿಂದ ಸಂಕಟಗೊಂಡವಳಾದ ಯಶೋದೆ, ಕೃಷ್ಣನನ್ನು ಹೊರಲು ಶಕ್ತಳಾಗದೇ ಆತನನ್ನು ನೆಲದ ಮೇಲೆ  ಇಟ್ಟು, ತನ್ನ ಕೆಲಸಗಳನ್ನು ಮಾಡುತ್ತಿದ್ದಳು. ಆಗಲೇ ಅತ್ಯಂತ ಘೋರರೂಪನಾದ ದೈತ್ಯನೊಬ್ಬನ ಆಗಮನವಾಗುತ್ತದೆ.

ತೃಣಾವರ್ತ್ತೋ ನಾಮತಃ ಕಂಸಭೃತ್ಯಃ ಸೃಷ್ಟ್ವಾsತ್ಯುಗ್ರಂ ಚಕ್ರವಾತಂ ಶಿಶುಂ ತಮ್ ।
ಆದಾಯಾsಯಾದನ್ತರಿಕ್ಷಂ ಸ ತೇನ ಶಸ್ತಃ ಕಣ್ಠಗ್ರಾಹಸಂರುದ್ಧವಾಯುಃ ೧೨.೧೧೭

ಹೆಸರಿನಿಂದ ತೃಣಾವರ್ತನಾಗಿರುವ ಆ ದೈತ್ಯ ಕಂಸನ ಭೃತ್ಯನಾಗಿದ್ದ. ಅವನು ಅತ್ಯಂತ ಭಯಂಕರವಾದ ಸುಂಟರಗಾಳಿಯನ್ನು ಸೃಷ್ಟಿಸಿ, ನೆಲದಮೇಲಿದ್ದ ಮಗುವನ್ನು (ಶ್ರೀಕೃಷ್ಣನನ್ನು) ಆಕಾಶಕ್ಕೆ ಕೊಂಡೊಯ್ದ. ಆದರೆ ಅಂತಹ ತೃಣಾವರ್ತನು ‘ಕೃಷ್ಣನು ಕತ್ತನ್ನು ಒತ್ತಿ ಹಿಡಿದಿದ್ದರಿಂದ’ ಉಸಿರುಗಟ್ಟಿ ನಿಗ್ರಹಿಸಲ್ಪಟ್ಟ.

ಪಪಾತ ಕೃಷ್ಣೇನ ಹತಃ ಶಿಲಾತಳೇ ತೃಣಾವರ್ತ್ತಃ ಪರ್ವತೋದಗ್ರದೇಹಃ ।
ಸುವಿಸ್ಮಯಂ ಚಾsಪುರಥೋ ಜನಾಸ್ತೇ ತೃಣಾವರ್ತ್ತಂ ವೀಕ್ಷ್ಯ ಸಞ್ಚೂರ್ಣ್ಣಿತಾಙ್ಗಮ್  ॥೧೨.೧೧೮

ಕೃಷ್ಣನಿಂದ ಕೊಲ್ಲಲ್ಪಟ್ಟ,  ಪರ್ವತದಂತೆ ದೊಡ್ಡ ದೇಹವುಳ್ಳ ತೃಣಾವರ್ತನು ಬಂಡೆಯಮೇಲೆ ಬಿದ್ದ. ಆಗ ಅಲ್ಲಿದ್ದ  ಜನರೆಲ್ಲರು ಪುಡಿಪುಡಿಯಾದ ಅವಯವಗಳುಳ್ಳ ತೃಣಾವರ್ತನನ್ನು ಕಂಡು ಅಚ್ಚರಿಪಟ್ಟರು.

ಅಕ್ರುದ್ಧ್ಯತಾಂ ಕೇಶವೋsನುಗ್ರಹಾಯ ಶುಭಂ ಸ್ವಯೋಗ್ಯಾದಧಿಕಂ ನಿಹನ್ತುಮ್ ।
ಸ ಕ್ರುದ್ಧ್ಯತಾಂ ನವನೀತಾದಿ ಮುಷ್ಣಂಶ್ಚಚಾರ ದೇವೋ ನಿಜಸತ್ಸುಖಾಮ್ಬುಧಿಃ ॥೧೨.೧೧೯

ಶ್ರೀಕೃಷ್ಣನು ಕೋಪಗೊಳ್ಳದ ಜನರ ಅನುಗ್ರಹಕ್ಕಾಗಿ ಮತ್ತು ಕೋಪಗೊಳ್ಳುವವರಿಗೆ ಅವರ ಯೋಗ್ಯತೆಗಿಂತ ಅಧಿಕವಾದ ಪುಣ್ಯವನ್ನು ನಾಶಮಾಡಲು,  ಬೆಣ್ಣೆ ಮೊದಲಾದವುಗಳನ್ನು ಕದ್ದುಕೊಳ್ಳುವವನಾಗಿ ಸಂಚರಿಸಿದ. (ಕೃಷ್ಣನ ಮೇಲೆ ಕೊಪಗೊಂಡವರಿಗೆ ಅಧಿಕ ಪುಣ್ಯವಿದ್ದಿದ್ದು ನಾಶವಾದರೆ, ಕೊಪಗೊಳ್ಳದವರ ಪುಣ್ಯ ವೃದ್ಧಿಯಾಯಿತು. ಇದು ಕೃಷ್ಣನ ಬೆಣ್ಣೆ ಕದಿಯುವುದರ ಹಿಂದಿನ ಔಚಿತ್ಯವಾಗಿತ್ತು.)

Mahabharata Tatparya Nirnaya Kannada 12.110-12.115


ಯದಾ ತ್ರಿಮಾಸಃ ಸ ಬಭೂವ ದೇವಸ್ತದಾssವಿರಾಸೀತ್ ಪುರುಷೋತ್ತಮೋsಜಃ ।
ಕೃಷ್ಣಶೇಷಾವಾಪ್ತುಕಾಮೌ ಸುತೌ ಹಿ ತಪಶ್ಚಕ್ರಾತೇ ದೇವಕೀಶೂರಪುತ್ರೌ ॥೧೨.೧೧೦

ಯಾವಾಗ ಬಲರಾಮನಿಗೆ ಮೂರು ತಿಂಗಳು ಕಳೆಯಿತೋ, ಆಗ ಎಂದೂ ಹುಟ್ಟದ ಪುರುಷೋತ್ತಮನಾದ ನಾರಾಯಣನು ಆವಿರ್ಭವಿಸಿದ.
ಹಿಂದೆ ದೇವಕೀ ಹಾಗು ವಸುದೇವರು ಕೃಷ್ಣ ಹಾಗು ಶೇಷರನ್ನು ಮಕ್ಕಳನ್ನಾಗಿ ಪಡೆಯಲು ತಪಸ್ಸು ಮಾಡಿದ್ದರಿಂದ ಅವರಲ್ಲಿ  ಭಗವಂತ ಆವಿರ್ಭವಿಸಿದ. 

ವಿಷ್ಣ್ವಾವೇಶೀ ಬಲವಾನ್ ಯೋ ಗುಣಾಧಿಕಃ ಸ ಮೇ ಸುತಃ ಸ್ಯಾದಿತಿ ರೋಹಿಣೀ ಚ ।
ತೇಪೇ ತಪೋsತೋ ಹರಿಶುಕ್ಲಕೇಶಯುತಃ ಶೇಷೋ ದೇವಕೀರೋಹಿಣೀಜಃ ೧೨.೧೧೧

‘ಯಾರು ವಿಷ್ಣುವಿನ ಆವೇಶ ಉಳ್ಳವನೋ, ಬಲಿಷ್ಠನೋ, ಗುಣಗಳಿಂದ ಶ್ರೇಷ್ಠನೋ, ಅಂಥವನು ನನ್ನ ಮಗನಾಗಬೇಕು’ ಎಂದು ರೋಹಿಣಿಯೂ ಕೂಡಾ ತಪಸ್ಸು ಮಾಡಿದ್ದಳು. ಆ ಕಾರಣದಿಂದ ಶೇಷನು ಪರಮಾತ್ಮನ ಶುಕ್ಲಕೇಶದಿಂದ ಕೂಡಿದವನಾಗಿ (ಸಂಕರ್ಷಣನ ಆವೇಶದಿಂದ ಕೂಡಿದವನಾಗಿ) ದೇವಕಿ ಹಾಗು ರೋಹಿಣಿಯರಿಬ್ಬರಲ್ಲೂ ಹುಟ್ಟಿದ.
[ಮೊದಲು ಶೇಷ ದೇವಕಿಯ ಗರ್ಭವನ್ನು ಪ್ರವೇಶಿಸಿದ. ನಂತರ ಭಗವಂತನ ಆಜ್ಞೆಯಂತೆ ದುರ್ಗೆ ದೇವಕಿಯ ಮೂರು ತಿಂಗಳ ಗರ್ಭವನ್ನು ರೋಹಿಣಿಯ ಉದರಕ್ಕೆ ವರ್ಗಾವಣೆ  ಮಾಡಿದ್ದಳು. ಆಗ ಕಂಸ ಹಾಗು ಜನರೆಲ್ಲರೂ ದೇವಕಿಗೆ ಗರ್ಭಸ್ತ್ರಾವವಾಯಿತು ಎಂದುಕೊಂಡರು.  ಹೀಗೆ ವರ್ಗಾವಣೆಗೊಂಡ ಗರ್ಭ  ರೋಹಿಣಿಯ ಉದರದಲ್ಲಿ  ಬೆಳೆಯಿತು. ಹೀಗೆ ಬಲಭದ್ರ ದೇವಕಿ ಹಾಗು ರೋಹಿಣಿಯರ ತಪಸ್ಸಿನ ಫಲದಿಂದ ಇಬ್ಬರಿಂದಲೂ ಹುಟ್ಟಿದ]

ಅವರ್ದ್ಧತಾಸೌ ಹರಿಶುಕ್ಲಕೇಶಸಮಾವೇಶೀ ಗೋಕುಲೇ ರೌಹಿಣೇಯಃ ।
ಕೃಷ್ಣೋsಪಿ ಲೀಲಾ ಲಳಿತಾಃ ಪ್ರದರ್ಶಯನ್ ಬಲದ್ವಿತೀಯೋ ರಮಯಾಮಾಸ ಗೋಷ್ಠಮ್ ॥೧೨.೧೧೨

ಹೀಗೆ ಸಂಕರ್ಷಣರೂಪಿ ಭಗವಂತನ ಆವೇಶವನ್ನು ಹೊಂದಿದ ರೋಹಿಣಿ ಪುತ್ರ ಬಲರಾಮನು ಗೊಕುಲದಲ್ಲಿಯೇ ಬೆಳೆದ. ಕೃಷ್ಣನೂ ಕೂಡಾ ಮನೋಹರವಾದ ಆಟಗಳನ್ನು ತೋರಿಸುತ್ತಾ, ಬಲರಾಮನೊಡಗೂಡಿ ಗೋಕುಲಕ್ಕೆ ಸಂತಸವನ್ನು ನೀಡಿದ.

ಸ ಪ್ರಾಕೃತಂ ಶಿಶುಮಾತ್ಮಾನಮುಚ್ಚೈರ್ವಿಜಾನನ್ತ್ಯಾ ಮಾತುರಾದರ್ಶನಾಯ
ವಿಜೃಮ್ಭಮಾಣೋsಖಿಲಮಾತ್ಮಸಂಸ್ಥಂ ಪ್ರದರ್ಶಯಾಮಾಸ ಕದಾಚಿದೀಶಃ ॥೧೨.೧೧೩

ಒಮ್ಮೆ ಆ ಕೃಷ್ಣನು ತನ್ನನ್ನು ಪ್ರಾಕೃತಶಿಶು(ಸಾಮಾನ್ಯ ಮಗು) ಎಂದು ತಿಳಿದಿರುವ ತಾಯಿಯ ಸಮ್ಯಜ್ಞಾನಕ್ಕಾಗಿ, ಆಕಳಿಸುತ್ತಾ, ತನ್ನಲ್ಲಿರುವ ಬ್ರಹ್ಮಾಂಡ ಮೊದಲಾದವುಗಳನ್ನು ತಾಯಿಗೆ ಬಾಯಲ್ಲಿ ತೋರಿದ.

ಸಾsಣ್ಡಂ ಮಹಾಭೂತಮನೋsಭಿಮಾನಮಹತ್ಪ್ರಕೃತ್ಯಾವೃತಮಬ್ಜಜಾದಿಭಿಃ ।
ಸುರೈಃ ಶಿವೇತೈರ್ನ್ನರದೈತ್ಯಸಙ್ಘೈರ್ಯ್ಯುತಂ ದದರ್ಶಾಸ್ಯ ತನೌ ಯಶೋದಾ ॥೧೨.೧೧೪

ಆ ಯಶೋದೆಯು ಪಂಚಭೂತಗಳು, ಮನೋಭಿಮಾನ, ಮಹತತ್ತ್ವ, ಪ್ರಕೃತಿ ಇವುಗಳಿಂದ ಕೂಡಿದ, ಬ್ರಹ್ಮನೇ ಮೊದಲಾಗಿರುವ, ರುದ್ರನನ್ನೂ ಒಳಗೊಂಡಿರುವ, ದೇವತೆಗಳಿಂದಲೂ, ಮನುಷ್ಯರೂ, ದೈತ್ಯರೂ ಮೊದಲಾದವರಿಂದಲೂ ಕೂಡಿರುವ ಬ್ರಹ್ಮಾಂಡವನ್ನು  ಶ್ರೀಕೃಷ್ಣನ ಬಾಯಿಯಲ್ಲಿ ಕಂಡಳು. 

ನ್ಯಮೀಲಯಚ್ಚಾಕ್ಷಿಣೀ ಭೀತಭೀತಾ ಜುಗೂಹ ಚಾsತ್ಮಾನಮಥೋ ರಮೇಶಃ ।
ವಪುಃ ಸ್ವಕೀಯಂ ಸುಖಚಿತ್ಸ್ವರೂಪಂ ಪೂರ್ಣ್ಣಂ ಸತ್ಸು ಜ್ಞಾಪಯಂಸ್ತದ್ಧ್ಯದರ್ಶಯತ್ ೧೨.೧೧೫

ಶ್ರೀಕೃಷ್ಣನ ಬಾಯಲ್ಲಿ ಬ್ರಹ್ಮಾಂಡವನ್ನು ಕಂಡು ಅತ್ಯಂತ  ಭಯಭೀತಳಾದ ಯಶೋದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಆಗ ಶ್ರೀಕೃಷ್ಣನು ತಾಯಿಗೆ ತೋರಿದ ತನ್ನ ಸ್ವರೂಪವನ್ನು ಮುಚ್ಚಿಕೊಂಡನು.
ಸುಖ-ಜ್ಞಾನಗಳೇ ಮೈದಾಳಿರುವ ತನ್ನ ದೇಹವು ಸದಾ ಪೂರ್ಣವೇ ಎಂದು ಸಜ್ಜನರಿಗೆ ತಿಳಿಸಿಕೊಡುವವನಾಗಿ ಶ್ರೀಕೃಷ್ಣ ತಾಯಿಗೆ ತನ್ನ ವ್ಯಾಪ್ತರೂಪವನ್ನು ಈರೀತಿ ತೋರಿದ.