ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, February 20, 2023

Mahabharata Tatparya Nirnaya Kannada 26-89-100

 

ತದಾSSಸದತ್ ಕೃತವರ್ಮ್ಮಾ ರಥೇನ ಸೇನಾಂ ಪಾಣ್ಡೂನಾಂ ಶರವರ್ಷಂ ಪ್ರಮುಞ್ಚನ್ ।

ದದೌ ವರಂ ತಸ್ಯ ಹಿ ಪೂರ್ವಮಚ್ಯುತಃ ಪ್ರೀತಃ ಸ್ತುತ್ಯಾ ಸರ್ವಜಯಂ ಮೂಹೂರ್ತ್ತೇ ॥ ೨೬.೮೯ ॥

 

ಇನ್ನೊಂದು ಕಡೆಯಿಂದ ಕೃತವರ್ಮನು ರಥವನ್ನೇರಿ, ಬಾಣಗಳನ್ನು ಬಿಡುತ್ತಾ ಪಾಂಡವರ ಸೇನೆಯ ಬಳಿಗೆ ಬಂದನು. ಹಿಂದೆ ಶ್ರೀಕೃಷ್ಣ ಪರಮಾತ್ಮನು ಈ ಕೃತವರ್ಮನ ಸ್ತೋತ್ರದಿಂದ ಪ್ರೀತನಾಗಿ ಒಂದು   ಮುಹೂರ್ತ ಕಾಲದಲ್ಲಿ  ಎಲ್ಲರನ್ನೂ ಗೆಲ್ಲಬಲ್ಲ  ವರವನ್ನು ಅವನಿಗೆ ಕೊಟ್ಟಿರುವನು.

 

ಸ ತೇನ ಪಾಞ್ಚಾಲಗಣಾನ್ ವಿಜಿಗ್ಯೇ ಯಮೌ ಚ ಭೀಮಸ್ಯ ಪುರೋSಥ ತಂ ಚ ।

ವಿವ್ಯಾಧ ಬಾಣೇನ ಸ ವಾಸುದೇವವರಂ ವಿಜಾನನ್ ನ ತದಾ ಸಮಭ್ಯಯಾತ್ ॥ ೨೬.೯೦ ॥

 

ಕೃತವರ್ಮನು ವರಬಲದಿಂದ ಧೃಷ್ಟದ್ಯುಮ್ನ ಮೊದಲಾದವರನ್ನು, ನಕುಲ-ಸಹದೇವರನ್ನೂ ಕೂಡಾ ಭೀಮಸೇನನ ಮುಂದೆಯೇ ಗೆದ್ದ ಮತ್ತು ಭೀಮಸೇನನನ್ನೂ ಕೂಡಾ ತನ್ನ ಬಾಣದಿಂದ ಹೊಡೆದ. ಆದರೆ ಭೀಮಸೇನನು ಕೃಷ್ಣನ ವರವನ್ನು ತಿಳಿದು, ಆ ಮುಹೂರ್ತದಲ್ಲಿ  ಕೃತವರ್ಮನನ್ನು ಎದುರಿಸಲಿಲ್ಲ.

[‘ಜಿತ್ವಾ ಪಾಣ್ಡುಸುತಾನ್ ಯುದ್ಧೇ ಭೀಮಸೇನಪುರೋಗಮಾನ್ । ಹಾರ್ದಿಕ್ಯಃ ಸಮರೇSತಿಷ್ಠದ್ ವಿಧೂಮ ಇವ ಪಾವಕಃ’ (ದ್ರೋಣಪರ್ವ ೧೧೪.೧೦೨)- ಭೀಮಸೇನನ ಮುಂದಾಳತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದ ಹಾರ್ದಿಕ್ಯನು ಧೂಮರಹಿತ ಬೆಂಕಿಯಂತೆ ಪ್ರಕಾಶಿಸಿದನು]

 

 

ವಿನೈವ ವೃಷ್ಣೀನ್ ವಿಜಯೇ ವರೋ  ಯದಮುಷ್ಯ ತೇನಾಸ್ಯ ಹಯಾನ್ ಸ ಸಾತ್ಯಕಿಃ ।

ನಿಹತ್ಯ ಬಾಣೈರತುದತ್ ಸ ಯಾನಮನ್ಯತ್ ಸಮಾಸ್ಥಾಯ ತತೋSಪಜಗ್ಮಿವಾನ್ ॥ ೨೬.೯೧ ॥

 

‘ಯಾದವರನ್ನು ಬಿಟ್ಟು ಎಲ್ಲರನ್ನೂ ಒಂದು ಮುಹೂರ್ತ ಗೆಲ್ಲಬಲ್ಲೆ’ ಎನ್ನುವ ವರ ಅದಾಗಿದ್ದುದರಿಂದ  ಯಾದವ ವೀರನಾದ ಸಾತ್ಯಕಿಯು ಕೃತವರ್ಮನನ್ನು ಎದುರಿಸಿ, ಅವನ ಕುದುರೆಗಳನ್ನು ಕೊಂದು, ಬಾಣಗಳಿಂದ ಹಿಂಸೆಗೊಳಿಸಿದ. ಆಗ ಕೃತವರ್ಮ ಇನ್ನೊಂದು ರಥವನ್ನೇರಿ ರಣಭೂಮಿಯಿಂದ ಪಲಾಯನ ಮಾಡಿದನು.

 

ತದಾ ಹರಿಃ ಪಾಞ್ಚಜನ್ಯಂ ಸುಘೋಷಮಾಪೂರಯಾಮಾಸ ಜಯೇSಭಿಯುದ್ಧ್ಯತಿ ।

ಕರ್ಣ್ಣಾದಿಭಿರ್ದ್ದ್ರೌಣಿಮುಖೈ ರಿಪೂಣಾಂ ಬಲಪ್ರಹಾಣಾಯ ಪರಃ ಪರೇಭ್ಯಃ ॥ ೨೬.೯೨ ॥

 

ಇತ್ತ ರಣಭೂಮಿಯ ಇನ್ನೊಂದು ಭಾಗದಲ್ಲಿ ಅರ್ಜುನನು ಅಶ್ವತ್ಥಾಮಾಚಾರ್ಯರೇ ಪ್ರಧಾನರಾಗಿರುವ,  ಕರ್ಣನೇ ಮೊದಲಾದವರಿಂದ ಯುದ್ಧಮಾಡುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಶತ್ರುಗಳ ಬಲದ ನಾಶಕ್ಕಾಗಿ ಚೆನ್ನಾದ ಧ್ವನಿಯುಳ್ಳ ಪಾಂಚಜನ್ಯವನ್ನು ಮೊಳಗಿಸಿದನು. 

 

‘ಸ ಪಾಞ್ಚಜನ್ಯೋSಚ್ಯುತವಕ್ತ್ರವಾಯುನಾ ಭೃಶಂ ಸುಪೂರ್ಣ್ಣೋದರನಿಸ್ಸೃತಧ್ವನಿಃ ।

ಜಗದ್ ವಿರಿಞ್ಚೇಶಸುರೇನ್ದ್ರಪೂರ್ವಕಂ ಪ್ರಕಮ್ಪಯಾಮಾಸ ಯುಗಾತ್ಯಯೇ ಯಥಾ’ ॥ ೨೬.೯೩ ॥

 

ಶ್ರೀಕೃಷ್ಣನ ಮುಖದ ಗಾಳಿಯಿಂದ ಚೆನ್ನಾಗಿ ತನ್ನ ಒಡಲನ್ನು ತುಂಬಿಕೊಂಡ ಆ ಪಾಂಚಜನ್ಯದಿಂದ ಹೊರ ಹೊಮ್ಮಿದ ಧ್ವನಿಯು, ಪ್ರಳಯಕಾಲದಲ್ಲಿ ಹೇಗೋ ಹಾಗೇ, ಬ್ರಹ್ಮಾದಿಗಳನ್ನೊಳಗೊಂಡ ಜಗತ್ತನ್ನು ಅಲ್ಲಾಡುವಂತೆ ಮಾಡಿತು.

 

ಗಾಣ್ಡೀವಘೋಷೇ ಚ ತದಾSಭಿಭೂತೇ ಯುಧಿಷ್ಠಿರೋ ಭೀತಭೀತಸ್ತದೇತ್ಯ ।

ಶೈನೇಯಮೂಚೇ ಪರಸೈನ್ಯಮಗ್ನೇ ಪಾರ್ಥ್ಥೇ ಸ್ವಯಂ ಯುದ್ಧ್ಯತಿ ಕೇಶವಃ ಸ್ಮ  ॥ ೨೬.೯೪ ॥

 

ನ ಶ್ರೂಯತೇ ಗಾಣ್ಡಿವಸ್ಯಾದ್ಯ ಘೋಷಃ ಸಂಶ್ರೂಯತೇ ಪಾಞ್ಚಜನ್ಯಸ್ಯ ಘೋಷಃ ।

ತದ್ ಯಾಹಿ ಜಾನೀಹಿ ತಮದ್ಯ ಪಾರ್ತ್ಥಂ ಯದಿ ಸ್ಮ ಜೀವತ್ಯಸಹಾಯ ಏಷಃ ॥ ೨೬.೯೫ ॥

 

ಶ್ರೀಕೃಷ್ಣ ಪಾಂಚಜನ್ಯವನ್ನು ಊದಿದಾಗ ಜೊತೆಗೆ ಗಾಣ್ಡೀವ ಬಿಲ್ಲಿನ ಶಬ್ದವು ಕೇಳಿಸದೇ ಇರುತ್ತಿರಲು, ಭಯಗೊಂಡ ಯುಧಿಷ್ಠಿರನು ಸಾತ್ಯಕಿಯನ್ನು ಹೊಂದಿ- (ಅರ್ಜುನನಿಗೆ ಏನಾದರೂ ಆಪತ್ತು ಉಂಟಾಗಿದೆಯೋ ಏನೋ ಎನ್ನುವ ದುಗುಡದಿಂದ ಹೇಳುತ್ತಾನೆ:) ‘ಅರ್ಜುನನು ಕೌರವ ಸೇನೆಯಲ್ಲಿ ಮುಳುಗುತ್ತಿರಲು, ಶ್ರೀಕೃಷ್ಣನು ತಾನೇ ಯುದ್ಧ ಮಾಡುತ್ತಿರುವನೇ? ಗಾಣ್ಡೀವದ ಧ್ವನಿ ಈಗ ಕೇಳಿಸುತ್ತಿಲ್ಲ, ಕೇವಲ ಶಂಖದ ಧ್ವನಿ ಮಾತ್ರ ಕೇಳಿಸುತ್ತಿದೆ. ಅದರಿಂದ ನೀನು ಈಗಲೇ ತೆರಳು, ಆ ಅರ್ಜುನನನ್ನು ತಿಳಿ. ಸಹಾಯಕರಹಿತನಾಗಿ  ಅರ್ಜುನ ಬದುಕಿರುವನೋ ಇಲ್ಲವೋ.’

 

ಇತೀರಿತಃ ಸಾತ್ಯಕಿರತ್ರ ವಿಪ್ರಾನ್ ಸಮ್ಪೂಜ್ಯ ವಿತ್ತೈಃ ಪರಮಾಶಿಷಶ್ಚ ।

ಜಯಾಯ ತೇಭ್ಯಃ ಪ್ರತಿಗೃಹ್ಯ ಸೇನಾಮುಖಂ ಯಯೌ ಭೀಮಸೇನಾನುಯಾತಃ ॥ ೨೬.೯೬ ॥

 

ಈರೀತಿಯಾಗಿ ಹೇಳಲ್ಪಟ್ಟ ಸಾತ್ಯಕಿಯು (ಶಿಬಿರಕ್ಕೆ ಬಂದು), ದ್ರವ್ಯಗಳಿಂದ ಬ್ರಾಹ್ಮಣರನ್ನು ಪೂಜಿಸಿ, ಅವರಿಂದ ಜಯಕ್ಕಾಗಿ ಆಶೀರ್ವಾದವನ್ನು ಪಡೆದು, ಭೀಮಸೇನನ ಬೆಂಗಾವಲಿನೊಂದಿಗೆ ಸೈನ್ಯದ ದ್ವಾರವನ್ನು ಕುರಿತು ತೆರಳಿದನು.

 

ಭೀಮಸ್ತು ಸೇನಾಮುಖಮಾಶು ಭಿತ್ತ್ವಾ ಪ್ರಾವೇಶಯದ್ ಯುಯುಧಾನಂ ಚಮೂಂ ತಾಮ್ ।

ಸ ಯುದ್ಧ್ಯಮಾನೋ ಗುರುಣಾSಭ್ಯುಪೇಕ್ಷಿತಃ ಸೂತಂ ನಿಹತ್ಯ ದ್ರಾವಯಾಮಾಸ ಚಾಶ್ವಾನ್ ॥ ೨೬.೯೭ ॥

 

ಭೀಮಸೇನನಾದರೋ ಸೇನೆಯ ಮುಂಭಾಗವನ್ನು ಭೇದಿಸಿ, ಸಾತ್ಯಕಿಯು ಆ ಸೇನೆಯನ್ನು ಪ್ರವೇಶಿಸುವಂತೆ ಅನುವುಮಾಡಿಕೊಟ್ಟನು. ಸಾತ್ಯಕಿಯು ದ್ರೋಣಾಚಾರ್ಯರೊಂದಿಗೆ ಯುದ್ಧಮಾಡಿ ಉಪೇಕ್ಷಿಸಲ್ಪಟ್ಟನು. ಆದರೂ ಸಾತ್ಯಕಿಯು ಅವರ ಸೂತನನ್ನು ಕೊಂದು, ಕುದುರೆಗಳನ್ನು ಓಡುವಂತೆ ಮಾಡಿದನು.    

 

ಬಲಂ ವಿವೃದ್ಧಂ ಚ ತದಾSಸ್ಯ ಸಾತ್ಯಕೇರ್ವಿಪ್ರಾಶೀರ್ಭಿಃ ಕೃಷ್ಣವರಾದಪಿ ಸ್ಮ ।

ಬಲಸ್ಯ ವೃದ್ಧಿರ್ಹಿ ಪುರಾSಸ್ಯ ದತ್ತಾ ಕೃಷ್ಣೇನ ತುಷ್ಟೇನ ದಿನೇ ಹಿ ತಸ್ಮಿನ್ ॥ ೨೬.೯೮ ॥

 

ವ್ಯೂಹವನ್ನು ಪ್ರವೇಶಿಸಿದ ಸಾತ್ಯಕಿಯ ಬಲವು ಬ್ರಾಹ್ಮಣರ ಆಶೀರ್ವಾದದಿಂದಲೂ, ಕೃಷ್ಣನ ವರದಿಂದಲೂ ಬೆಳೆದಿತ್ತು. ಹಿಂದೆ ಅತ್ಯಂತ ಸಂತುಷ್ಟನಾದ ಕೃಷ್ಣನಿಂದ ಸಾತ್ಯಕಿಗೆ ಈ ಒಂದು ದಿವಸದಲ್ಲಿ ಬಲದ ಅಭಿವೃದ್ದಿಯು ವರವಾಗಿ ಕೊಡಲ್ಪಟ್ಟದ್ದಾಗಿತ್ತು.

 

ತತೋ ವಿವೃದ್ಧೋರುಬಲಾತ್ ಸ ಸಾತ್ಯಕಿಃ ಸಂಸ್ಥಾಪ್ಯ ಭೀಮಂ ಪ್ರಯಯೌ ರಥೇನ ।

ತಂ ಬಾಣವರ್ಷೈಃ ಪೃತನಾಂ ಸಮನ್ತಾನ್ನಿಘ್ನನ್ತಮಾಜೌ ಹೃದಿಕಾತ್ಮಜೋSಭ್ಯಯಾತ್ ॥ ೨೬.೯೯ ॥

 

ತದನಂತರ ಬಲವನ್ನು ಚೆನ್ನಾಗಿ ಬೆಳೆಸಿಕೊಂಡ ಸಾತ್ಯಕಿಯು ಭೀಮನನ್ನು ಅಲ್ಲೇ ನಿಲ್ಲಿಸಿ, ರಥದಿಂದ ಮುಂದೆ ಸಾಗಿದನು. ಬಾಣದ ಸಮೂಹದಿಂದ ಎಲ್ಲೆಡೆ ಸೇನೆಯನ್ನು ಕೊಲ್ಲುತ್ತಿರುವ ಸಾತ್ಯಕಿಯನ್ನು ಕೃತವರ್ಮನು ಎದುರುಗೊಂಡ.

 

ತಯೋರಭೂದ್ ಯುದ್ಧಮತೀವ ದಾರುಣಂ ತತ್ರಾಕರೋತ್ ತಂ ವಿರಥಂ ಸ ಸಾತ್ಯಕಿಃ ।

ವಿಜಿತ್ಯ ತಂ ಸಾತ್ಯಕಿರುಗ್ರಧನ್ವಾ ಯಯಾವತೀತ್ಯೈವ ಶಿರಾಂಸಿ ಯೂನಾಮ್ ॥ ೨೬.೧೦೦ ॥

 

ಅವರಿಬ್ಬರಿಗೂ ಅತ್ಯಂತ ಭಯಂಕರವಾದ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಸಾತ್ಯಕಿಯು ಕೃತವರ್ಮನನ್ನು ರಥಹೀನನನ್ನಾಗಿ ಮಾಡಿದ. ಹೀಗೆ ಕೃತವರ್ಮನನ್ನು ಗೆದ್ದ  ಭಯಂಕರವಾದ ಧನುಸ್ಸುಳ್ಳ ಸಾತ್ಯಕಿಯು, ಯುವಕರ ತಲೆಗಳನ್ನು ಕತ್ತರಿಸುತ್ತಾ ಮುಂದೆ ಸಾಗಿದ.

Sunday, February 19, 2023

Mahabharata Tatparya Nirnaya Kannada 26-79-88

 

ದ್ರೋಣಂ ತತಃ ಶೈಶುಪಾಲಿಃ ಸಪುತ್ರೋ ಜಾರಾಸನ್ಧಿಃ ಕಾಶಿರಾಜಃ ಸಶೈವ್ಯಃ ।

ಸಮಾಸದನ್ ಕೈಕಯಾಶ್ಚೈವ ಪಞ್ಚ ಸಮಾರ್ದ್ದಯನ್ ಬಾಣಗಣೈಶ್ಚ ಸರ್ವಶಃ ॥ ೨೬.೭೯ ॥

 

ತದನಂತರ ಶಿಶುಪಾಲನ ಮಗನಾದ ಧೃಷ್ಟಕೇತು (ಯುಧಿಷ್ಠಿರನ ಪತ್ನಿ ದೇವಕಿಯ ಅಣ್ಣ), ಜರಾಸಂಧನ ಮಗ ಸಹದೇವ, ಭೀಮನ ಮಾವನಾದ ಕಾಶೀರಾಜ, ಶೈಬ್ಯ, ಐದುಜನ ಕೇಕಯರು ದ್ರೋಣಾಚಾರ್ಯರನ್ನು ಎದುರುಗೊಂಡರು ಹಾಗೂ ಎಲ್ಲೆಡೆಯಿಂದ ಬಾಣಗಳಿಂದ ದಾಳಿ ನಡೆಸಿ ಅವರನ್ನು ಪೀಡಿಸಿದರು.

 

ಸ ತಾನ್ ಕ್ರಮೇಣೈವ ನಿಕೃತ್ತಕನ್ಧರಾಞ್ಛರೋತ್ತಮೈರತ್ರ ವಿಧಾಯ ವಿಪ್ರಃ ।

ನಿನಾಯ ಲೋಕಂ ಪರಮರ್ಕ್ಕಮಣ್ಡಲಂ ವ್ರಜನ್ತಿ ನಿರ್ಭಿದ್ಯ ಯಮೂರ್ಧ್ವರೇತಸಃ ॥ ೨೬.೮೦ ॥

 

ಹೀಗೆ ಬಂದ ಅವರೆಲ್ಲರನ್ನೂ ಕ್ರಮವಾಗಿ ಆ ದ್ರೋಣಾಚಾರ್ಯರು ತನ್ನ ಬಾಣಗಳಿಂದ ಕತ್ತರಿಸಲ್ಪಟ್ಟ ಕತ್ತುಳ್ಳವರನ್ನಾಗಿ ಮಾಡಿ, ಸೂರ್ಯಮಂಡಲದ ಆಚೆ ಇರುವ ಲೋಕಕ್ಕೆ ಕಳುಹಿಸಿದರು. ಯಾವ ಲೋಕವನ್ನು ಸನ್ಯಾಸಿಗಳು ಸೂರ್ಯಮಂಡಲವನ್ನು ಭೇದಿಸಿ ಹೋಗುತ್ತಾರೋ, ಆ ಲೋಕವನ್ನು ಅವರಿಗೆ ದ್ರೋಣಾಚಾರ್ಯರು ಹೊಂದಿಸಿಕೊಟ್ಟರು.

 

ವಿಧೂಯಮಾನೇ ಗುರುಣೋರುಸೈನ್ಯೇ ಪೃಥಾಸುತಾನಾಂ ಪೃತನಾಃ ಪರೇಷಾಮ್ ।

ಪ್ರಾಯೋ ರಣೇ ಮಾರುತಸೂನುನೈವ ಹತಪ್ರವೀರಾ ಮೃದಿತಾಃ ಪರಾದ್ರವನ್ ॥೨೬.೮೧॥

 

ಹೀಗೆ ದ್ರೋಣಾಚಾರ್ಯರಿಂದ ಪಾಂಡವರ ಸೈನ್ಯವು ನಾಶಮಾಡಲ್ಪಡುತ್ತಿರಲು, ಅತ್ತ ಕೌರವರ ಸೇನೆಯು ಭೀಮನಿಂದ ತಮ್ಮ ವೀರರನ್ನು ಕಳೆದುಕೊಂಡು, ಪೀಡಿತವಾಗಿ, ಪಲಾಯನ ಮಾಡಿದವು.

 

ಅಲಮ್ಭುಸೋ ನಾಮ ತದೈವ ರಾಕ್ಷಸಃ ಸಮಾಸದನ್ಮಾರುತಿಮುಗ್ರಪೌರುಷಮ್ ।

ಸ ಪೀಡಿತಸ್ತೇನ ಶರೈಃ ಸುತೇಜನೈಃ ಕ್ಷಣಾದದೃಶ್ಯತ್ವಮವಾಪ ಮಾಯಯಾ ॥೨೬.೮೨ ॥

 

ಆಗಲೇ ಅಲಮ್ಭುಸ ಎನ್ನುವ ರಾಕ್ಷಸನು ಉಗ್ರವಾದ ಪರಾಕ್ರಮವುಳ್ಳ ಭೀಮಸೇನನನ್ನು ಹೊಂದಿದನು. ಅವನು ಭೀಮನ ತೀಕ್ಷ್ಣವಾದ ಬಾಣಗಳಿಂದ ನೋವುಂಡು ಕ್ಷಣದಲ್ಲೇ ಮಾಯಾ ವಿದ್ಯೆಯಿಂದ ಅದೃಶ್ಯತ್ವವನ್ನು ಹೊಂದಿದನು.

 

ಸೋSದೃಶ್ಯರೂಪೋSನುಚರಾನಪೀಡಯದ್ ಭೀಮಸ್ಯ ತದ್ ವೀಕ್ಷ್ಯ ಚುಕೋಪ ಮಾರುತಿಃ ।

ಅಸ್ತ್ರಜ್ಞತಾಮಾತ್ಮನಿ ಕೇಶವಾಜ್ಞಯಾ ಸನ್ದರ್ಶಯನ್ನಾಗತಧರ್ಮ್ಮಸಙ್ಕಟಃ ॥೨೬.೮೩ ॥

 

ತ್ವಾಷ್ಟ್ರಾಸ್ತ್ರಮಾದತ್ತ ಸ ಕಾಮ್ಯಕರ್ಮ್ಮಹೀನೋSಪಿ ಭೀಮಸ್ತತ ಉತ್ಥಿಥಾಃ ಶರಾಃ ।

ತೇ ಬಾಣವರ್ಯ್ಯಾಸ್ತದದೃಶ್ಯವೇಧಿನೋ ರಕ್ಷೋ ವಿದಾರ್ಯ್ಯಾSವಿವಿಶುರ್ದ್ಧರಾತಳಮ್ ॥ ೨೬.೮೪ ॥

 

ಅಲಮ್ಭುಸನು ಅದೃಶ್ಯರೂಪನಾಗಿ ಭೀಮಸೇನನ ಬೆಂಗಾವಲು ಪಡೆಯನ್ನು ಹಿಂಸೆ ಮಾಡಿದನು. ಅದನ್ನು ನೋಡಿ, ಭೀಮಸೇನ ಕೋಪಗೊಂಡ. ಪರಮಾತ್ಮನ ಆಜ್ಞೆಯಿಂದ ತನ್ನಲ್ಲಿ ಅಸ್ತ್ರ ವಿದ್ಯೆಯೂ ಇದೇ ಎನ್ನುವುದನ್ನು ಪ್ರಪಂಚಕ್ಕೆ ತೋರಿಸುತ್ತಾ, ಕಾಮ್ಯಕರ್ಮವಿಲ್ಲದ ಭೀಮಸೇನನು ತ್ವಷ್ಟ್ರ ದೇವತಾಕವಾದ ಅಸ್ತ್ರವನ್ನು ತೆಗೆದುಕೊಂಡ. ಆ ಅಸ್ತ್ರದಿಂದ ಮೇಲೆದ್ದ ಬಾಣಗಳು ಯಾರಿಗೂ ಕಾಣದ ಅಲಮ್ಭುಸನನ್ನು ಸೀಳಿಕೊಂಡು ಭೂಮಿಯನ್ನು ಪ್ರವೇಶ ಮಾಡಿತು.

[ಭೀಮಸೇನ ದ್ರೋಣಾಚಾರ್ಯರಲ್ಲಾಗಲೀ  ಅಥವಾ ಇನ್ನೆಲ್ಲೋ ಅಸ್ತ್ರವಿದ್ಯೆ ಕಲಿತ  ವಿವರ ನಮಗೆ ಕಾಣಸಿಗುವುದಿಲ್ಲ. ಆದರೆ ಇಲ್ಲಿ ಅವನು ಅಸ್ತ್ರವನ್ನು ಅನುಸಂಧಾನ ಮಾಡಿದ ಎಂದು ಹೇಳಿದ್ದಾರೆ. ಹೌದು, ಭೀಮ ಅಸ್ತ್ರವನ್ನು ಕಲಿಯಲಿಲ್ಲ. ಆದರೆ ಪ್ರತಿಭೆ ಇರುವುದರಿಂದ ಅಸ್ತ್ರದ ಮಂತ್ರ ಗೊತ್ತಿತ್ತು. ಕಾಮ್ಯಕರ್ಮ ಮಾಡದ ಭೀಮಸೇನ ಆ ಮಂತ್ರಗಳನ್ನು ಉಪಯೋಗಿಸುತ್ತಿರಲಿಲ್ಲ ಅಷ್ಟೇ. ಮಹಾಭಾರತದಲ್ಲಿ ಭೀಮಸೇನ ಅಸ್ತ್ರಪ್ರಯೋಗಿಸುವುದನ್ನು ಹೀಗೆ ವಿವರಿಸಿದ್ದಾರೆ: ‘ಸಾ ರಾಕ್ಷಸವಿಸೃಷ್ಟಾ ತು ಶರವೃಷ್ಟಿಃ ಸುದಾರುಣಾ । ಜಘಾನ ಪಾಂಡುಪುತ್ರಸ್ಯ ಸೈನಿಕಾನ್ ರಣಮೂರ್ಧನಿ’ (ದ್ರೋಣಪರ್ವ ೧೦೮.೩೦) ‘ತತಃ ಕ್ರೋಧಾಭಿತಾಮ್ರಾರಾಕ್ಷೋ ನಿರ್ದಹನ್ನಿವ ಪಾವಕಃ । ಸನ್ದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ  ಮಾರುತಿಃ’ (೩೮) ] 

 ವಿವರ ನಮಗೆ ಕಾಣಸಿಗುವುದಿಲ್ಲ

ತದ್ಧನ್ಯಮಾನಂ ಪ್ರವಿಹಾಯ ಭೀಮಮಪಾದ್ರವದ್ ದೂರತರಂ ಸುಭೀತಮ್ ।

ತತಸ್ತು ಭೀಮೋ ದ್ವಿಷತಾಂ ವರೂಥಿನೀಂ ವಿದ್ರಾವಯಾಮಾಸ ಶರೈಃ ಸುಮುಕ್ತೈಃ ॥ ೨೬.೮೫ ॥

 

ಆ ರಾಕ್ಷಸನು ಭೀಮನಿಂದ ಪೆಟ್ಟು ತಿಂದು, ಭೀಮನನ್ನು ಬಿಟ್ಟು, ಅತಿ ಭಯಗೊಂಡು ಬಹಳ ದೂರ ಓಡಿಹೋದನು. ತದನಂತರ ಭೀಮಸೇನನು ಶತ್ರುಗಳ ಸೇನೆಯನ್ನು ಉತ್ಕೃಷ್ಟವಾದ ಬಾಣಗಳಿಂದ ಓಡಿಸಿದನು.

[ತದಸ್ತ್ರಂ ಪ್ರೇರಿತಂ ತೇನ ಭೀಮಸೇನೇನ ಸಂಯುಗೇ ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ಧಯತ್’ (ದ್ರೋಣಪರ್ವ ೧೦೮.೪೦)- ರಾಕ್ಷಸನ ಮಾಯೆಯನ್ನು ಯಾವುದೇ ಶ್ರಮವಿಲ್ಲದೇ ಭೀಮಸೇನ ನಾಶಮಾಡಿದನು]

 

ತದೈವ ಕೃಷ್ಣಾತನಯಾಃ ಸಮೇತಾ ಜಘ್ನುಃ ಶಲಂ ಸಂಯತಿ ಸೌಮದತ್ತಿಮ್ ।

ಅಲಮ್ಭುಸಂ ಪ್ರಾಪ ತದಾ ಘಟೋತ್ಕಚಃ ಪರಸ್ಪರಂ ತೌ ರಥಿನಾವಯುದ್ಧ್ಯತಾಮ್ ॥ ೨೬.೮೬ ॥

 

ಆಗಲೇ ದ್ರೌಪದಿಯ ಮಕ್ಕಳು ಒಟ್ಟುಗೂಡಿ ಸೋಮದತ್ತನ ಮಗನಾದ ಶಲನನ್ನು ಯುದ್ಧದಲ್ಲಿ ಕೊಂದುಹಾಕಿದರು. ಆಗ ಘಟೋತ್ಕಚನು  ಅಲಮ್ಭುಸನನ್ನು ಎದುರುಗೊಂಡನು. ಅವರಿಬ್ಬರೂ ಪರಸ್ಪರ ಯುದ್ಧಮಾಡಲಾರಂಭಿಸಿದರು.

 

 

ಘಟೋತ್ಕಚಸ್ತಂ ವಿರಥಂ ವಿಧಾಯ ಖಸ್ಥಂ ಖ ಏವಾಭಿಯುಯೋಧ ಸಂಸ್ಥಿತಃ ।

ತತಸ್ತು ತಂ ಭೀಮಸುತೋ ನಿಗೃಹ್ಯ ನಿಪಾತ್ಯ ಭೂಮೌ ಪ್ರದದೌ ಪ್ರಹಾರಮ್ ॥ ೨೬.೮೭ ॥

 

ಪದಾ ಶಿರಸ್ಯೇವ ಸ ಪಿಷ್ಟಮಸ್ತಕೋ ಮಮಾರ ಮದ್ಧ್ಯೇ ಪೃಥಿವೀಪತೀನಾಮ್ ।

ತಸ್ಮಿನ್ ಹತೇ ಭೈಮಸೇನಿಃ ಕುರೂಣಾಂ ವ್ಯದ್ರಾವಯದ್ ರಥವೃನ್ದಂ ಸಮನ್ತಾತ್ ॥ ೨೬.೮೮ ॥

 

ಘಟೋತ್ಕಚನು ಅಲಮ್ಭುಸನನ್ನು ರಥಹೀನನನ್ನಾಗಿ ಮಾಡಿ ಆಕಾಶದಲ್ಲಿರುವ ಅವನೊಂದಿಗೆ  ಆಕಾಶದಲ್ಲಿಯೇ ನಿಂತು ಯುದ್ಧಮಾಡಿದನು. ಕೆಲವು ಹೊತ್ತು ಯುದ್ಧವಾದಮೇಲೆ ಘಟೋತ್ಕಚನು ಅಲಮ್ಭುಸನನ್ನು ನಿಗ್ರಹಿಸಿ, ಭೂಮಿಯಲ್ಲಿ ಬೀಳಿಸಿ, ಕಾಲಿನಿಂದ ಪ್ರಹಾರಮಾಡಿದನು. ಆಗ ಚೂರು-ಚೂರಾದ ತಲೆಯುಳ್ಳವನಾದ ಅಲಮ್ಭುಸನು ರಾಜರ ಮಧ್ಯದಲ್ಲಿ ಸತ್ತುಹೋದನು. ಅವನು ಸಾಯುತ್ತಿರಲು ಭೀಮಸೇನನ ಮಗನಾದ ಆ ಘಟೋತ್ಕಚನು ಅವನ ಬೆಂಗಾವಲು ಪಡೆಯನ್ನು ಓಡಿಸಿದನು.

Mahabharata Tatparya Nirnaya Kannada 26-74-78

 

ಪಾರ್ತ್ಥೇ ಪ್ರವಿಷ್ಟೇ ಕುರುಸೈನ್ಯಮದ್ಧ್ಯಂ ದ್ರೋಣೋSವಿಶತ್ ಪಾಣ್ಡವಸೈನ್ಯಮಾಶು ।

ಸ ತದ್ರಥಾನೀಕಮುದಗ್ರವೇಗೈಃ ಶರೈರ್ವಿಧೂಯ ನ್ಯಹನಚ್ಚ ವೀರಾನ್ ॥೨೬.೭೪॥

 

ಅರ್ಜುನನು ಕೌರವ ಸೈನ್ಯ ನಡುವಲ್ಲಿ ಪ್ರವೇಶಮಾಡುತ್ತಿರಲು, ಇತ್ತ ದ್ರೋಣಾಚಾರ್ಯರು ಪಾಂಡವರ ಸೇನೆಯನ್ನು ಹೊಕ್ಕರು. ಅವರು ಪಾಂಡವರ ರಥಿಕರ ಸಮೂಹವನ್ನು ಉಗ್ರವಾದ, ವೇಗವಾದ ಬಾಣಗಳಿಂದ ಹೊಡೆದು ಓಡಿಸಿ, ಬಹಳ ಜನ ಪರಾಕ್ರಮಶಾಲಿಗಳನ್ನು ಕೊಂದರು.

 

ಸ ವೀರವರ್ಯ್ಯಃ ಸ್ಥವಿರೋSಪಿ ಯೂನಾಂ ಯುವೇವ ಮದ್ಧ್ಯೇ ಪ್ರಚಚಾರ ಧನ್ವಿನಾಮ್ ।

ಪ್ರಪಾತಯನ್ ವೀರಶಿರಾಂಸಿ ಬಾಣೈರ್ಯ್ಯುಧಿಷ್ಠಿರಂ ಚಾSಸದದುಗ್ರವೀರ್ಯ್ಯಃ ॥೨೬.೭೫॥

 

ವೀರರಲ್ಲಿಯೇ ಹಿರಿಯರಾದ ಆ ದ್ರೋಣಾಚಾರ್ಯರು ವೃದ್ಧರಾದರೂ ಕೂಡಾ, ಯುವಕರ ಮಧ್ಯದಲ್ಲಿ ಯುವಕನಂತೆ ಹೋರಾಡಿದರು. ಬಾಣಗಳಿಂದ ವೀರರ ತಲೆಗಳನ್ನು ಉರುಳಿಸುತ್ತಾ, ಮಹೋಗ್ರಪರಾಕ್ರಮವುಳ್ಳವರಾಗಿ ಯುಧಿಷ್ಠಿರನನ್ನು ಹೊಂದಿದರು.

 

ನೃಪಗ್ರಹೇಚ್ಛುಂ ತಮವೇತ್ಯ ಸತ್ಯಜಿನ್ನ್ಯವಾರಯದ್ ದ್ರೌಪದಿರಾಶು ವೀರ್ಯ್ಯವಾನ್ ।

ನಿವಾರಿತಸ್ತೇನ ಶಿರಃ ಶರೇಣ ಚಕರ್ತ್ತ ಪಾಞ್ಚಾಲಸುತಸ್ಯ ವಿಪ್ರಃ ॥ ೨೬.೭೬ ॥

 

ಯುಧಿಷ್ಠಿರನನ್ನು ಹಿಡಿಯಬೇಕು ಎಂದು ಬಯಸುವ ದ್ರೋಣಾಚಾರ್ಯರನ್ನು ತಿಳಿದು, ದ್ರುಪದನ ಮಗನಾದ, ವೀರ್ಯವಂತನಾದ ಸತ್ಯಜಿತ್ ಎನ್ನುವವನು ಅವರನ್ನು ಶೀಘ್ರದಲ್ಲಿ ತಡೆದನು. ಅವನಿಂದ ತಡೆಹಿಡಿಯಲ್ಪಟ್ಟ ದ್ರೋಣಾಚಾರ್ಯರು ಸತ್ಯಜಿತನ ತಲೆಯನ್ನು ಬಾಣದಿಂದ ಕತ್ತರಿಸಿದರು.

 

ನಿಹತ್ಯ ತಂ ವೀರತಮಂ ರಣೋತ್ಕಟಂ ಯುಧಿಷ್ಠಿರಂ ಬಾಣಗಣೈಃ ಸಮಾರ್ದ್ದಯತ್ ।

ಸ ಶಕ್ತಿತಸ್ತೇನ ವಿಧಾಯ ಸಙ್ಗರಂ ನಿರಾಯುಧೋ ವ್ಯಶ್ವರಥಃ ಕೃತಃ ಕ್ಷಣಾತ್ ॥ ೨೬.೭೭ ॥

 

ವೀರಗ್ರೇಸರರಾದ ದ್ರೋಣಾಚಾರ್ಯರು ರಣೋತ್ಕಟ ಸತ್ಯಜಿತನನ್ನು ಕೊಂದು, ಯುಧಿಷ್ಠಿರನನ್ನು ಬಾಣಗಳ ಸಮೂಹದಿಂದ ಪೀಡಿಸಿದರು. ಯುಧಿಷ್ಠಿರನಾದರೋ ಶಕ್ತಿ ಇದ್ದಷ್ಟು, ದ್ರೋಣಾಚಾರ್ಯರೊಡನೆ ಯುದ್ಧವನ್ನು ಮಾಡಿದನು. ಅವನು ದ್ರೋಣಾಚಾರ್ಯರಿಂದ ಒಂದು ಕ್ಷಣದಲ್ಲಿ ನಿರಾಯುಧನಾಗಿಯೂ, ಕುದುರೆ-ರಥಗಳನ್ನು ಕಳೆದುಕೊಂಡವನಾಗಿಯೂ  ಮಾಡಲ್ಪಟ್ಟನು.

 

ಸ ಊರ್ಧ್ವಬಾಹುರ್ಭುವಿ ಸಂಸ್ಥಿತೋSಪಿ ಗೃಹೀತುಮಾಜೌ ಗುರೂಣಾSಭಿಪನ್ನಃ ।

ಮಾದ್ರೀಸುತಸ್ಯಾವರಜಸ್ಯ ಯಾನಮಾರುಹ್ಯ ವೇಗಾದಪಜಗ್ಮಿವಾಂಸ್ತತಃ ॥ ೨೬.೭೮ ॥

 

ಆಗ ಧರ್ಮರಾಜನು ಕೈಗಳನ್ನು ಮೇಲೆತ್ತಿ, ಭೂಮಿಯಲ್ಲಿ ಇದ್ದರೂ ಕೂಡಾ ಯುದ್ಧದಲ್ಲಿ ಹಿಡಿಯಲು ದ್ರೋಣಾಚಾರ್ಯರಿಂದ ಅಭಿಮುಖವಾಗಿ ಹೊಂದಲ್ಪಟ್ಟವನಾಗಿ, ಏನೂ ಮಾಡಲು ತೋಚದೇ, ಮಾದ್ರೀಸುತ ಸಹದೇವನ ರಥವನ್ನೇರಿ ಅಲ್ಲಿಂದ ದೂರ ಹೊರಟು ಹೋದನು.

[ಕೈಗಳನ್ನು ಮೇಲೆತ್ತಿ ನಿಲ್ಲುವುದು ಎಂದರೆ- ನನಗೆ ನಿನ್ನ ಹತ್ತಿರ ಯುದ್ಧ ಮಾಡುವ ಬಯಕೆ ಇಲ್ಲ. ಆದರೂ ಯುದ್ಧವನ್ನು ಕರ್ತವ್ಯದಂತೆ ಮಾಡಿದ್ದೇನೆ. ನನ್ನ ಹತ್ತಿರ ಯಾವುದೇ ಆಯುಧವಿಲ್ಲ. ನಾನು ನಿನ್ನನ್ನು ಯಾವುದೇ ರೀತಿಯಲ್ಲಿ ಛಲದಿಂದ ನೋಡುತ್ತಿಲ್ಲ, ಇತ್ಯಾದಿಯನ್ನು ಸೂಚಿಸುವುದು. ಹೀಗೆ ಕೈ ಎತ್ತಿದರೂ ದ್ರೋಣಾಚಾರ್ಯರು ಆಕ್ರಮಿಸಿ ಬಂದಾಗ ಯುಧಿಷ್ಠಿರ ಅವರಿಂದ ತಪ್ಪಿಸಿಕೊಂಡು ಸಹದೇವನ ರಥವನ್ನೇರಿ ಅಲ್ಲಿಂದ ಪಲಾಯನ ಮಾಡಿದನು.]

Mahabharata Tatparya Nirnaya Kannada 26-68-73

ಹತೇಷು ವೀರೇಷು ನಿಜೇಷು ಸಙ್ಘಶೋ ವಿದ್ರಾವಿತೇಷ್ವಾಲುಳಿತೇ ಚ ಸೈನ್ಯೇ ।

ದುರ್ಯ್ಯೋಧನೋ ದ್ರೋಣಮುಪೇತ್ಯ ದೀನಮುವಾಚ ಹಾ ಪಾರ್ತ್ಥ ಉಪೇಕ್ಷಿತಸ್ತ್ವಯಾ ॥೨೬.೬೮॥

 

ತನ್ನ ವೀರರು ಒಟ್ಟೊಟ್ಟಿಗೆ ಸಾಯುತ್ತಿರಲು, ಉಳಿದವರು ಗುಂಪಾಗಿ ಓಡಿಹೋಗುತ್ತಿರಲು, ಸೈನ್ಯವು ಉಲ್ಲೋಲಕಲ್ಲೋಲವಾಗಲು, ದುರ್ಯೋಧನನು ದ್ರೋಣಾಚಾರ್ಯರ ಬಳಿ ಬಂದು, ದೀನನಾಗಿ ಹೇಳಿದ- ‘ಅಯ್ಯೋ, ಅರ್ಜುನನು ನಿಮ್ಮಿಂದ ಉಪೇಕ್ಷಿಸಲ್ಪಟ್ಟಿರುವನು’ ಎಂದು.

 

ಇತೀರಿತೇSಭೇದ್ಯಮಮುಷ್ಯ ವರ್ಮ್ಮ  ಬಧ್ವಾ ಮಹಾಮನ್ತ್ರಬಲಾತ್ ಸ ವಿಪ್ರಃ ।

ಜಗಾದ ಯೇನೈವ ಬಲೇನ ಪಾರ್ತ್ಥೈರ್ವಿರುದ್ಧ್ಯಸೇ ತೇನ ಹಿ ಯಾಹಿ ಫಲ್ಗುನಮ್ ॥೨೬.೬೯॥

 

ಈರೀತಿ ಹೇಳಲ್ಪಟ್ಟ ದ್ರೋಣಾಚಾರ್ಯರು ಮಹಾಮಂತ್ರ ಬಲದಿಂದ ಅವನಿಗೆ ಅಭೇದ್ಯ ಕವಚವನ್ನು ಅಭಿಮಂತ್ರಿಸಿ ಕಟ್ಟಿ, ‘ಎಷ್ಟು ಬಲದಿಂದ ಪಾಂಡವರ ಜೊತೆ ಯುದ್ಧಮಾಡಬಲ್ಲೆಯೋ, ಅಷ್ಟೂ ಬಲದಿಂದ ಅರ್ಜುನನೊಡನೆ ಹೋರಾಡು’ ಎಂದು ಹೇಳಿದರು.

 

ಇತೀರಿತೋ ಧಾರ್ತ್ತರಾಷ್ಟ್ರಃ ಸ ಚಾಪಮಾದಾಯ ಸೌವರ್ಣ್ಣರಥೋಪರಿಸ್ಥಃ ।

ಜಗಾಮ ಪಾರ್ತ್ಥಂ ತಮವಾರಯಚ್ಚ ಶರೈರನೇಕೈರನಲಪ್ರಕಾಶೈಃ ॥೨೬.೭೦॥

 

ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು ಬಿಲ್ಲನ್ನು ಹಿಡಿದು, ಬಂಗಾರದ ರಥದಮೇಲೆ ಕುಳಿತವನಾಗಿ, ಅರ್ಜುನನನ್ನು ಹೊಂದಿ, ವಿಚಿತ್ರವಾಗಿರುವ, ಬೆಂಕಿಯಂತೆ ಪ್ರಕಾಶಮಾನವಾದ ತೀಕ್ಷ್ಣವಾಗಿರುವ ಬಾಣಗಳಿಂದ ಅರ್ಜುನನನ್ನು ತಡೆದ.

 

ವಿವ್ಯಾಧ ಪಾರ್ತ್ಥೋSಪಿ ತಮುಗ್ರವೇಗೈಃ ಶರೈರ್ನ್ನ ತೇ ತಸ್ಯ ಚ ವರ್ಮ್ಮಭೇದಮ್ ।

ಚಕ್ರುಸ್ತತೋ ವಾಸವಿರ್ದಿವ್ಯಮಸ್ತ್ರಂ ತದ್ವರ್ಮ್ಮಭೇದಾಯ ಸಮಾದದೇ ರುಷಾ ॥೨೬.೭೧॥

 

ಅರ್ಜುನನೂ ಕೂಡಾ ದುರ್ಯೋಧನನನ್ನು ಉಗ್ರವಾಗಿರುವ, ವೇಗವುಳ್ಳ ಬಾಣಗಳಿಂದ ಹೊಡೆದ. ಆ ಬಾಣಗಳು ದುರ್ಯೋಧನನ ಕವಚದ ತುಂಡರಿಸುವಿಕೆಯನ್ನು ಮಾಡಲಿಲ್ಲ. ಅದರಿಂದ ಸಿಟ್ಟುಗೊಂಡ ಅರ್ಜುನನು ಅಲೌಕಿಕವಾದ ಅಸ್ತ್ರವನ್ನು, ದುರ್ಯೋಧನನ ಕವಚವನ್ನು ಕತ್ತರಿಸಲೆಂದು ಬತ್ತಳಿಕೆಯಿಂದ ತೆಗೆದುಕೊಂಡನು.

 

ಸನ್ಧೀಯಮಾನಂ ತು ಗುರೋಃ ಸುತಸ್ತಚ್ಚಿಚ್ಛೇದ ಪಾರ್ತ್ಥೋSಥ ಸುಯೋಧನಾಶ್ವಾನ್ ।

ಹತ್ವಾ ತಳೇSವಿದ್ಧ್ಯದಥೈನಮುಗ್ರೈರ್ದ್ದ್ರೌಣಿಃ ಶರೈಃ ಪಾರ್ತ್ಥಮವಾರಯದ್ ಯುಧಿ ॥೨೬.೭೨॥

 

ಅರ್ಜುನ ಬಿಲ್ಲಿನಲ್ಲಿ ಬಾಣವನ್ನು ಹೂಡುತ್ತಿರಬೇಕಾದರೆ ಅಶ್ವತ್ಥಾಮನು ಆ ದಿವ್ಯಾಸ್ತ್ರವನ್ನು ಛೇದಿಸಿದನು. ಆಗ  ಅರ್ಜುನನು ಸುಯೋಧನನ ಕುದುರೆಗಳನ್ನು ಕೊಂದು, ಅವನ ಕವಚವಿರದ ಭಾಗದಲ್ಲಿ ಉಗ್ರವಾದ ಬಾಣಗಳಿಂದ ಹೊಡೆದು ಗಾಯಗೊಳಿಸಿದನು. ಆಗ ಅಶ್ವತ್ಥಾಮನು ತನ್ನ ಬಾಣಗಳಿಂದ (ದುರ್ಯೋಧನನ ಮೇಲೆ ಹೆಚ್ಚಿಗೆ ದಾಳಿ ಮಾಡದಂತೆ) ಅರ್ಜುನನನ್ನು ತಡೆದ.

 

ಸ ದ್ರೌಣಿಕರ್ಣ್ಣಪ್ರಮುಖೈರ್ದ್ಧನಞ್ಜಯೋ ಯುಯೋಧ ತೇ ಚೈನಮವಾರಯಞ್ಛರೈಃ ।

ಬಭೂವ ಯುದ್ಧಂ  ತದತುಲ್ಯಮದ್ಭುತಂ ಜಯದ್ರಥಾರ್ತ್ಥೇSದ್ಭುತವೀರ್ಯ್ಯಕರ್ಮ್ಮಣಾಮ್ ॥೨೬.೭೩॥

 

ಆ ಅರ್ಜುನನು ಅಶ್ವತ್ಥಾಮ, ಕರ್ಣ, ಮೊದಲಾದ ಪ್ರಮುಖರಿಂದ ತಡೆಯಲ್ಪಟ್ಟವನಾಗಿ ಯುದ್ಧಮಾಡಿದ. ಜಯದ್ರಥನಿಗಾಗಿ ನಡೆದ ಆ ಯುದ್ಧವು ಆಶ್ಚರ್ಯಾದ್ಭುತವಾಗಿತ್ತು.   

Mahabharata Tatparya Nirnaya Kannada 26-59-67

 

ವಿಜಿತ್ಯ ಹಾರ್ದ್ದಿಕ್ಯಮಥಾಪ್ರಯತ್ನತಃ  ಸ ಇನ್ದ್ರಸೂನುಃ ಪ್ರವಿವೇಶ ತದ್ ಬಲಮ್ ।

ವಿಲೋಳಯಾಮಾಸ ಚ ಸಾಯಕೋತ್ತಮೈರ್ಯ್ಯಥಾ ಗಜೇನ್ದ್ರೋ ನಳಿನೀಂ ಬಲೋದ್ಧತಃ ॥೨೬.೫೯॥

 

ದ್ರೋಣರನ್ನು ದಾಟಿದಮೇಲೆ ಎದುರಾದ ಕೃತವರ್ಮನನ್ನು ಅರ್ಜುನನು ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ಆ ಕೌರವಸೇನೆಯನ್ನು ಪ್ರವೇಶಿಸಿ, ಉತ್ಕೃಷ್ಟವಾದ ಬಾಣಗಳಿಂದ ಸೇನೆಯನ್ನು ಉಲ್ಲೋಲಕಲ್ಲೋಲ  ಮಾಡಿದ. ಹೇಗೆ ಮದ್ದಾನೆ ಪದ್ಮಗಳುಳ್ಳ ಸರೋವರವನ್ನು ಉಲ್ಲೋಲಕಲ್ಲೋಲ ಮಾಡುತ್ತದೋ ಹಾಗೆ.

 

ಸ ಉಚ್ಚಕಾಶೇSತಿರಥೋ ರಥೋತ್ತಮೇ ಸವಾಸುದೇವೋ ಹರಿಣಾ ಯಥೇನ್ದ್ರಃ ।

ಚಕರ್ತ್ತ ಚೋಗ್ರೋ ದ್ವಿಷತಾಂ ಶಿರಾಂಸಿ ಶರೈಃ ಶರೀರಾನ್ತಕರೈಃ ಸಮನ್ತತಃ ॥೨೬.೬೦॥

 

ಹೇಗೆ ಇಂದ್ರನು ಉಪೇಂದ್ರನಿಂದ ಕೂಡಿದರೆ ಶೋಭಿಸಬೇಕೋ ಹಾಗೆ ಶ್ರೀಕೃಷ್ಣನಿಂದೊಡಗೂಡಿದ ಅರ್ಜುನ ರಥದಲ್ಲಿ ಶೋಭಿಸಿದ. ಶತ್ರುಭಯಂಕರನಾದ ಅರ್ಜುನನು  ಸಿಟ್ಟಿನಿಂದ ಶತ್ರುಗಳ ತಲೆಗಳನ್ನು ಎಲ್ಲೆಡೆಯಿಂದ ಕತ್ತರಿಸಿದನು.

 

ದೃಢಾಯುಮಚ್ಯುತಾಯುಂ ಚ ಹತ್ವಾ ವಿನ್ದಾನುವಿನ್ದಕೌ ।

ಶರಾಭ್ಯಾಂ ಪ್ರೇಷಯಾಮಾಸ ಯಮಾಯ ವಿಜಯೋ ಯುಧಿ ॥೨೬.೬೧॥

 

ಅರ್ಜುನನು ಯುದ್ಧದಲ್ಲಿ ಎರಡು ಬಾಣಗಳಿಂದ ದೃಢಾಯು ಅಚ್ಯುತಾಯುವನ್ನು ಸಂಹರಿಸಿ, ಪುನಃ ವಿನ್ದ-ಅನುವಿನ್ದರನ್ನು ಇನ್ನೆರಡು ಬಾಣಗಳಿಂದ ಯಮಲೋಕಕ್ಕೆ ಕಳುಹಿಸಿದನು.  

 

ಸುದಕ್ಷಿಣಂ ಚ ಕಾಮ್ಬೋಜಂ ನಿಹತ್ಯಾಮ್ಬಷ್ಠಮೇವ ಚ ।

ಶ್ರುತಾಯುಧಂ ನದೀಜಾತಂ ವರುಣಾದಾಸಸಾದ  ಹ ॥೨೬.೬೨॥

 

ಯಸ್ಯಾದಾದ್ ವರುಣೋ ದಿವ್ಯಾಮಮೋಘಾಂ ಮಹತೀಂ ಗದಾಮ್ ।

ಸ ತು ತೇನ ಶರೈಸ್ತೀಕ್ಷ್ಣೈರರ್ಪ್ಪಿತೋ ವಿರಥಂ ಕ್ಷಣಾತ್ ॥೨೬.೬೩॥

 

ಚಕಾರ ಪಾರ್ತ್ಥಸ್ಯ ರಥಮಾರುಹ್ಯಾರಿಧರಾಯ ತಾಮ್ ।

ಗದಾಂ ಚಿಕ್ಷೇಪ ಸಾ ತಸ್ಯ ವಾರುಣೇಃ ಶಿರ ಏವತು ॥೨೬.೬೪॥

 

ಬಿಭೇದ ಶತಧಾ ಶೀರ್ಣ್ಣಮಸ್ತಿಷ್ಕಃ ಸೋSಪತದ್ ಭುವಿ ।

ಅಯುದ್ಧ್ಯನ್ತಂ ಸ್ವಗದಯಾ ಯದಿ ತಾಡಯಸಿ ಸ್ವಯಮ್ ॥೨೬.೬೫॥

 

ತಯಾ ವಿಶೀರ್ಣ್ಣಮಸ್ತಿಷ್ಕೋ ಮರಿಷ್ಯಸಿ ನ ಸಂಶಯಃ ।

ಅಮೋಘಾ ಚಾನ್ಯಥಾ ಸೇಯಂ ಗದಾ ತವ ಭವಿಷ್ಯತಿ ॥೨೬.೬೬॥

 

ಇತ್ಯಬ್ರವೀತ್ ತಂ ವರುಣಃ ಪುರಾ ತೇನ ಸ ಕೇಶವೇ ।

ಅಯುದ್ಧ್ಯತಿ ಗದಾಕ್ಷೇಪಾತ್ ತಯಾ ಶೀರ್ಣ್ಣಶಿರಾ ಅಭೂತ್ ॥೨೬.೬೭॥

 

ಅರ್ಜುನನು ಕಾಮ್ಬೋಜದ  ಸುದಕ್ಷಿಣನನ್ನು ಹಾಗೂ ಅಮ್ಬಷ್ಠನನ್ನೂ ಕೂಡಾ ಸಂಹಾರಮಾಡಿ, ನಂತರ  ವರುಣನಿಂದ ನದಿಯಾಭಿಮಾನಿ ದೇವತೆಗೆ ಹುಟ್ಟಿದ ಶ್ರುತಾಯುಧ ಎನ್ನುವವನನ್ನು ಯುದ್ಧಕ್ಕೆಂದು ಎದುರುಗೊಂಡ.

ಯಾರಿಗೆ ವರುಣನು ಎಂದೂ ವ್ಯರ್ಥವಾಗದ ದೊಡ್ಡ ಅಲೌಕಿಕವಾದ ಗದೆಯನ್ನು ಕೊಟ್ಟಿದ್ದನೋ, ಅಂತಹ ಶ್ರುತಾಯುಧ ಕ್ಷಣದಲ್ಲಿ ಅರ್ಜುನನ ಚೂಪಾದ ಬಾಣಗಳಿಂದ ಗಾಯಗೊಂಡು ವಿರಥನಾದ.   

ವಿರಥನಾದ ಅವನು ಅರ್ಜುನನ ರಥವನ್ನೇರಿ, ಶ್ರೀಕೃಷ್ಣನಿಗೆ ಗದೆಯಿಂದ ಹೊಡೆದ. ಆಗ ಶ್ರುತಾಯುಧನ ತಲೆಯೇ ನೂರು ಚೂರಾಗಿ ಸಿಡಿದುಹೋಯಿತು. ಹೀಗೆ ಪುಡಿಯಾದ ತಲೆಯುಳ್ಳವನಾಗಿ ಅವನು ಭೂಮಿಯಲ್ಲಿ ಬಿದ್ದ.

(ಈರೀತಿ ಆಗಲು ಕಾರಣವೇನೆಂದು ಹೇಳುತ್ತಾರೆ-)

‘ಯುದ್ಧ ಮಾಡದವನನ್ನು ಒಂದುವೇಳೆ ನಿನ್ನ ಗದೆಯಿಂದ ನೀನು ಹೊಡೆದರೆ  ಆಗ ನೀನೇ ಒಡೆದ ತೆಲೆಯುಳ್ಳವನಾಗಿ ಸಾಯುತ್ತೀಯ, ಇದರಲ್ಲಿ ಸಂಶಯವಿಲ್ಲ. ಅನ್ಯತಾ ನಿನ್ನ ಗದೆಯು ವ್ಯರ್ಥವಾಗುವುದಿಲ್ಲ’ ಎಂದು  ವರುಣ ಹಿಂದೆ ಗದೆಯನ್ನು ಕೊಡುವಾಗಲೇ ಹೇಳಿದ್ದ. ಹೀಗಾಗಿ ಯುದ್ಧಮಾಡದಿರುತ್ತಿರುವ  ಕೃಷ್ಣನಲ್ಲಿ ಗದೆಯನ್ನು ಹೊಡೆದುದ್ದರಿಂದ ಶ್ರುತಾಯುಧ ತನ್ನ ತಲೆಯನ್ನೇ ಕಳೆದುಕೊಂಡ.