ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 29, 2019

Mahabharata Tatparya Nirnaya Kannada 1334_1337


ಜ್ಯೇಷ್ಠಂ ವಿಹಾಯ ಸ ಕದಾಚಿದಚಿನ್ತ್ಯಶಕ್ತಿರ್ಗ್ಗೋಗೋಪಗೋಗಣಯುತೋ ಯಮುನಾ ಜಲೇಷು।
ರೇಮೇ ಭವಿಷ್ಯದನುವೀಕ್ಷ್ಯ ಹಿ ಗೋಪದುಃಖಂ ತತ್ಬಾಧನಾಯ ನಿಜಮಗ್ರಜಮೇಷು ಸೋsಧಾತ್ ॥೧೩.೩೪

ಒಮ್ಮೆ ಅಚಿನ್ತ್ಯಶಕ್ತಿಯುಳ್ಳ  ಶ್ರೀಕೃಷ್ಣನು ಜ್ಯೇಷ್ಠನಾದ ಬಲರಾಮನನ್ನು ಬಿಟ್ಟು, ಗೋವುಗಳಿಂದಲೂ, ಗೋಪಾಲಕರಿಂದಲೂ ಕೂಡಿಕೊಂಡು ಯಮುನಾ ಜಲದಲ್ಲಿ ಕ್ರೀಡಿಸುತ್ತಿದ್ದನು. 
ಮುಂದೆ  ಗೋಪಾಲಕರು ಎದುರಿಸಬೇಕಾಗಿರುವ ದುಃಖವನ್ನು ಮನಗಂಡು, ಅವರೊಂದಿಗಿದ್ದು, ಅವರ ದುಃಖವನ್ನು ಪರಿಹರಿಸುವುದಕ್ಕಾಗಿ ಅಣ್ಣ ಬಲರಾಮನನ್ನು ಶ್ರೀಕೃಷ್ಣ  ಗೋಪಾಲಕರಿಗಾಗಿ ಹಾಗೆ ಬಿಟ್ಟಿದ್ದನು.  
[ಮುಂದೆ ಕಾಳಿಯಮರ್ದನವೆಂಬ ಅತ್ಯಂತ ಭಯಂಕರ ಘಟನೆ ನಡೆಯಲಿದ್ದು, ಆ ಸಮಯದಲ್ಲಿ ಭಯಭೀತರಾಗುವ ಗೋಪಾಲಕರನ್ನು ನೋಡಿಕೊಳ್ಳುವುದಕ್ಕಾಗಿ ಅಣ್ಣ ಬಲರಾಮನನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು, ಯಮುನಾನದಿಯಲ್ಲಿ ಕೃಷ್ಣ ಕ್ರೀಡಿಸುತ್ತಿದ್ದನು]


ಸ ಬ್ರಹ್ಮಣೋ ವರಬಲಾದುರಗಂ ತ್ವವದ್ಧ್ಯಂ ಸರ್ವೈರವಾರ್ಯ್ಯವಿಷವೀರ್ಯ್ಯಮೃತೇ ಸುಪರ್ಣ್ಣಾತ್ ।
ವಿಜ್ಞಾಯ ತದ್ವಿಷವಿದೂಷಿತವಾರಿಪಾನಸನ್ನಾನ್ ಪಶೂನಪಿ ವಯಸ್ಯಜನಾನ್ ಸ ಆವೀತ್ ॥೧೩.೩೫॥

ಬ್ರಹ್ಮದೇವರ ವರಬಲದಿಂದ ಅವಧ್ಯನಾಗಿದ್ದ, ಗರುಡನನ್ನು ಬಿಟ್ಟು ಉಳಿದ ಯಾರಿಂದಲೂ ತಡೆಯಲು ಅಸಾಧ್ಯವಾದ ವಿಷದ ಪರಾಕ್ರಮವುಳ್ಳ ಅವನು(ಕಾಳಿಯಃ) ಅಲ್ಲಿದ್ದಾನೆ ಎಂದು ತಿಳಿದು, ವಿಷದಿಂದ ಕೊಳಕಾದ ನೀರನ್ನು ಕುಡಿದುದ್ದರಿಂದ ಸತ್ತ ಪಶುಗಳನ್ನೂ,  ಮಿತ್ರರೆಲ್ಲರನ್ನೂ ಕೃಷ್ಣ ರಕ್ಷಣೆ ಮಾಡಿದನು.

ಹೇಗೆ ರಕ್ಷಣೆ ಮಾಡಿದ ಅಂದರೆ:

ತದ್ದೃಷ್ಟಿದಿವ್ಯಸುಧಯಾ ಸಹಸಾsಭಿವೃಷ್ಟಾಃ  ಸರ್ವೇಪಿ ಜೀವಿತಮವಾಪುರಥೋಚ್ಚಶಾಖಮ್ ।
ಕೃಷ್ಣಃ ಕದಮ್ಬಮಧಿರುಹ್ಯ ತತೋsತಿತುಙ್ಗಾದಾಸ್ಪೋಟ್ಯ ಗಾಢರಶನೋ ನ್ಯಪತದ್ ವಿಷೋದೇ॥೧೩.೩೬॥

ಪರಮಾತ್ಮನ ಕಣ್ನೋಟವೆಂಬ ಅಮೃತದಿಂದ ಪುಳಕಿತರಾದ ಎಲ್ಲರೂ ಕೂಡಾ ಕೂಡಲೇ ಮರುಜೀವವನ್ನು ಹೊಂದಿದರು.
ತದನಂತರ, ಎತ್ತರದ ಕೊಂಬೆಗಳುಳ್ಳ ಕದಂಬ(ಕಡವೆ) ವೃಕ್ಷವನ್ನು ಏರಿ, ಅತ್ಯಂತ ಎತ್ತರವಾಗಿರುವ ಅಲ್ಲಿಂದ, ದೃಢವಾದ ಕಟಿಬಂಧನವುಳ್ಳವನಾಗಿ, ತನ್ನ ಭುಜಗಳನ್ನು ತಟ್ಟುತ್ತಾ, ವಿಷಪೂರಿತವಾದ ಅಗಾಧ ಜಲಕ್ಕೆ ಹಾರಿದನು ಕೃಷ್ಣ.
[ಈ ಕುರಿತಾದ ವಿವರ ಭಾಗವತದಲ್ಲಿ(೧೦.೧೪.೬) ಕಾಣಸಿಗುತ್ತದೆ: ‘ತಂ ಚಣ್ಡವೇಗವಿಷವೀರ್ಯಮವೇಕ್ಷ್ಯ ತೇನ ದುಷ್ಟಾಂ ನದೀಂ ಚ ಖಲಸಂಯಮನಾವತಾರಃ ಕೃಷ್ಣಃ ಕದಂಬಮಧಿರುಹ್ಯ ತತೋsತಿತುಙ್ಗಾದಾಸ್ಫೋಟ್ಯ ಗಾಢರಶನೋ ನ್ಯಪತದ್ ವಿಶೋದೇ’]

ಸಾರ್ಪ್ಪಹ್ರದಃ ಪುರುಷಸಾರನಿಪಾತವೇಗಸಙ್ಕ್ಷೋಭಿತೋರಗವಿಷೋಚ್ಛ್ವಸಿತಾಮ್ಬುರಾಶಿಃ 
ಪರ್ಯ್ಯುತ್ಪ್ಲುತೋ ವಿಷಕಷಾಯವಿಭೀಷಣೋರ್ಮ್ಮಿಭೀಮೋ ಧನುಃಶತಮನನ್ತಬಲಸ್ಯ ಕಿಂ ತತ್ ॥೧೩.೩೭॥

ಆ ಕಾಳಿಯಸರ್ಪವಿರುವ ಮಡುವು, ಪುರುಷರಲ್ಲಿ ಶ್ರೇಷ್ಠನಾದ ಕೃಷ್ಣನ ಬೀಳುವಿಕೆಯ ವೇಗದಿಂದ ಉಲ್ಲೋಲಕಲ್ಲೋಲವಾಯಿತು.  ನದಿ ಹಾವಿನ ವಿಷಭರಿತವಾದ ನಿಟ್ಟುಸಿರಿನಿಂದ ಉಲ್ಲೋಲಕಲ್ಲೋಲವಾಗಿ ನೀರಿನ ಭಯಂಕರವಾದ ಅಲೆಗಳುಳ್ಳದ್ದಾಗಿ ಎಲ್ಲೆಡೆ ಉಕ್ಕಿ ಹರಿಯಿತು. ಆದರೆ ಈರೀತಿ ನೂರು ಮಾರು ಎಗರಿದ ನೀರು  ಅನಂತಬಲನಾಗಿರುವ ಕೃಷ್ಣನಿಗೆ ಯಾವ ಲೆಕ್ಕ. 

Thursday, June 27, 2019

Mahabharata Tatparya Nirnaya Kannada 1330_1333


ದೈತ್ಯಂ ಸ ವತ್ಸತನುಮಪ್ರಮಯಃ ಪ್ರಗೃಹ್ಯ ಕಂಸಾನುಗಂ ಹರವರಾದಪರೈರವದ್ಧ್ಯಮ್ ।
ಪ್ರಕ್ಷಿಪ್ಯ ವೃಕ್ಷಶಿರಸಿ ನ್ಯಹನದ್ ಬಕೋsಪಿ ಕಂಸಾನುಗೋsಥ ವಿಭುಮಚ್ಯುತಮಾಸಸಾದ ॥೧೩.೩೦

ಸಂಪೂರ್ಣವಾಗಿ  ಯಾರಿಂದಲೂ ತಿಳಿಯಲಾಗದ ಪರಾಕ್ರಮವುಳ್ಳ ಶ್ರೀಕೃಷ್ಣನು, ರುದ್ರದೇವರ ವರದಿಂದ ಇನ್ನ್ಯಾರಿಂದಲೂ ಕೊಲ್ಲಲಾಗದ ಕಂಸನ ಭೃತ್ಯನಾದ, ಗೋವಿನಂತೆ(ಕರುವಿನಂತೆ) ಶರೀರವಿರುವ ದೈತ್ಯನನ್ನು ವೃಕ್ಷದ ಮೇಲುಗಡೆ ಎಸೆದು ಕೊಂದನು. ಹೀಗೆ ಕಂಸನನ್ನೇ ಅನುಸರಿಸಿರುವ ಬಕನೂ ಕೂಡಾ ಗುಣಗಣಾದಿಗಳಿಂದ ಎಂದೂ ಜಾರದ, ಸೃಷ್ಟಿಕರ್ತ ಪರಮಾತ್ಮನನ್ನು ಹೊಂದಿದನು.

ಸ್ಕನ್ದಪ್ರಸಾದಕವಚಃ ಸ ಮುಖೇ ಚಕಾರ ಗೋವಿನ್ದಮಗ್ನಿವದಮುಂ ಪ್ರದಹನ್ತಮುಚ್ಚೈಃ ।
ಚಚ್ಛರ್ದ್ದ ತುಣ್ಡಶಿರಸೈವ ನಿಹನ್ತುಮೇತಮಾಯಾನ್ತಮೀಕ್ಷ್ಯ ಜಗೃಹೇsಸ್ಯ ಸ ತುಣ್ಡಮೀಶಃ ॥೧೩.೩೧॥     

ಸ್ಕನ್ದನ ಅನುಗ್ರಹವೆಂಬ ಕವಚವುಳ್ಳ ಬಕನು, ಶ್ರೀಕೃಷ್ಣನನ್ನು ತನ್ನ ಬಾಯಿಯಿಂದ ನುಂಗಿದನು. ಆದರೆ ಬೆಂಕಿಯಂತೆ ಚೆನ್ನಾಗಿ ಸುಡುತ್ತಿರುವ ಶ್ರೀಕೃಷ್ಣನು ಆ ಬಕನನ್ನು ವಾಂತಿಮಾಡಿಸಿದನು. ತನ್ನ ಕೊಕ್ಕಿನಿಂದಲೇ ಕೊಲ್ಲಲು ಬಂದಿರುವ  ಬಕನ ಕೊಕ್ಕನ್ನು ಶ್ರೀಕೃಷ್ಣ ಹಿಡಿದನು.

ತುಣ್ಡದ್ವಯಂ ಯದುಪತಿಃ ಕರಪಲ್ಲವಾಭ್ಯಾಂ ಸಙ್ಗೃಹ್ಯ ಚಾsಶು ವಿದದಾರ ಹ ಪಕ್ಷಿದೈತ್ಯಮ್ ।
ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ  ಸಾಯಂ ಯಯೌ ವ್ರಜಭುವಂ ಸಹಿತೋsಗ್ರಜೇನ ॥೧೩.೩೨॥

ಯದುಪತಿಯಾದ ಶ್ರೀಕೃಷ್ಣನು ತನ್ನ ಎರಡು ಕೈಗಳಿಂದ ಆ ಪಕ್ಷಿದೈತ್ಯನ ಕೊಕ್ಕನ್ನು ಹಿಡಿದು  ಸೀಳಿದನು. ಪುಷ್ಪವೃಷ್ಟಿಯನ್ನು ಸುರಿಸುವ ಬ್ರಹ್ಮಾದಿಗಳಿಂದ ಸ್ತೋತ್ರಮಾಡುವವನಾದ ಶ್ರೀಕೃಷ್ಣನು ಅಣ್ಣನಿಂದ ಕೂಡಿಕೊಂಡು ಸಂಜೆ ವ್ರಜಕ್ಕೆ ತೆರಳಿದನು.

ಏವಂ ಸ ದೇವವರವನ್ದಿತಪಾದಪದ್ಮೋ ಗೋಪಾಲಕೇಷು ವಿಹರನ್ ಭುವಿ ಷಷ್ಠಮಬ್ದಮ್ ।
ಪ್ರಾಪ್ತೋ ಗವಾಮಖಿಲಪೋsಪಿ ಸ ಪಾಲಕೋsಭೂದ್ ವೃನ್ದಾವನಾನ್ತರಗಸಾನ್ದ್ರಲತಾವಿತಾನೇ ॥೧೩. ೩೩॥

ಈರೀತಿಯಾಗಿ ಶ್ರೇಷ್ಠ ದೇವತೆಗಳಿಂದಲೂ ವನ್ದ್ಯವಾದ ಪಾದಕಮಲಗಳುಳ್ಳ ಕೃಷ್ಣನು, ಗೋಪಾಲಕರೊಂದಿಗೆ ಕ್ರೀಡಿಸುತ್ತಾ,  ಈ ಭೂಮಿಯಲ್ಲಿ ಆರನೆಯ ವರ್ಷವನ್ನು ಹೊಂದಿದನು. ಎಲ್ಲವನ್ನೂ ಪಾಲನೆ ಮಾಡುವವನಾದರೂ ಕೂಡಾ, ವೃಂದಾವನದ ನಿಬಿಡವಾಗಿರುವ ಬಳ್ಳಿಗಳ ಮಧ್ಯದಲ್ಲಿ ಶ್ರೀಕೃಷ್ಣ ಗೋವುಗಳನ್ನು ಕಾಯುವವನಾಗಿ ಕಂಡನು.

Wednesday, June 26, 2019

Mahabharata Tatparya Nirnaya Kannada 1326_1329


ವೃನ್ದಾವನಯಿಯಾಸುಃ ಸ  ನನ್ದಸೂನುರ್ಬೃಹದ್ವನೇ ।
ಸಸರ್ಜ್ಜ ರೋಮಕೂಪೇಭ್ಯೋ ವೃಕಾನ್ ವ್ಯಾಘ್ರಸಮಾನ್ ಬಲೇ ॥೧೩.೨೬॥  

ನಂದಗೋಪನ ಮಗನಾಗಿರುವ ಶ್ರೀಕೃಷ್ಣನು, ಪ್ರಸ್ತುತ ತಾವಿರುವ ಸ್ಥಳವನ್ನು ಬಿಟ್ಟು ವೃಂದಾವನಕ್ಕೆ ತೆರಳಬೇಕೆಂಬ ಇಚ್ಛೆಯುಳ್ಳವನಾಗಿ, ಆ ಬೃಹದ್ವನದಲ್ಲಿ ತನ್ನ ರೋಮಕೂಪದಿಂದ, ಬಲದಲ್ಲಿ ಹುಲಿಗೆ ಸಮಾನವಾದ ಅನೇಕ ತೋಳಗಳನ್ನು ಸೃಷ್ಟಿಮಾಡಿದನು.
[ಈಕುರಿತು ಹರಿವಂಶದಲ್ಲಿ ವಿವರಣೆ ಕಾಣಸಿಗುತ್ತದೆ: ಶ್ರೂಯತೇ ಹಿ ವನಂ ರಮ್ಯಂ ಪರ್ಯಾಪ್ತತೃಣಸಂಸ್ತರಮ್  ನಾಮ್ನಾ ವೃನ್ದಾವನಂ ನಾಮ  ಸ್ವಾದುವೃಕ್ಷಫಲೋದಕಮ್ (ವಿರಾಟಪರ್ವ ೮.೨೨) ವೃಂದಾವನ ಎನ್ನುವುದು ಒಂದು ಕಾಡು ಪ್ರದೇಶ. ಅಲ್ಲಿ ನೀರೂ ಸೇರಿದಂತೆ ಎಲ್ಲವೂ ಸಮಗ್ರವಾಗಿದೆ.  ತತ್ರ ಗೋವರ್ಧನಂ ಚೈವ ಭಾನ್ಡೀರಂ ಚ ವನಸ್ಪತಿಮ್ ಕಾಳಿನ್ದೀಂ ಚ ನದೀಂ ರಮ್ಯಾಂ ದ್ರಕ್ಷ್ಯಾವಶ್ಚರತಃ ಸುಖಂ (೨೮).... ಅಲ್ಲಿ ಗೋವರ್ಧನ ಎನ್ನುವ ಪರ್ವತ,  ಭಾನ್ಡೀರ ಎನ್ನುವ ದೊಡ್ಡ ವಟವೃಕ್ಷ, ಕಾಳಿಂದಿ ನದಿ, ಮಡು ಎಲ್ಲವೂ ಇದೆ. ಅದಕ್ಕಾಗಿ ಈಗ ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿ, ... ಸಂತ್ರಾಸಯಾವೋ ಭದ್ರಂ ತೇ ಕಿಞ್ಚಿದುತ್ಪಾದ್ಯ  ಕಾರಣಮ್ ಏವಂ ಕಥಯತಸ್ತಸ್ಯ ವಾಸುದೇವಸ್ಯ ಧೀಮತಃ ಪ್ರಾದುರ್ಬಭೂವುಃ ಶತಶೋ ರಕ್ತಮಾಂಸವಸಾಶನಾಃ ಘೋರಾಶ್ಚಿನ್ತಯತಸ್ತಸ್ಯ ಸ್ವತನೂರುಹಜಾಸ್ತದಾ ವಿನಿಷ್ಪೇತುರ್ಭಯಕರಾಃ  ಸರ್ವಶಃ ಶತಶೋ ವೃಕಾಃ [೨೯-೩೧]. ಪ್ರಸ್ತುತ ತಾವಿರುವ ಪ್ರದೇಶವನ್ನು ಬಿಡುವುದಕ್ಕಾಗಿ, ಯಾವುದೋ ಒಂದು ಕಾರಣದಿಂದ ಎಲ್ಲರನ್ನೂ ಹೆದರಿಸಬೇಕು ಎಂದು ತನ್ನ ಕೂದಲಿನಿಂದ ನೂರಾರು ತೋಳಗಳನ್ನು ಸೃಷ್ಟಿಸಿದನು]      

ಅನೇಕಕೋಟಿಸಙ್ಘೈಸ್ತೈಃ ಪೀಡ್ಯಮಾನಾ ವ್ರಜಾಲಯಾಃ ।
ಯಯುರ್ವೃನ್ದಾವನಂ ನಿತ್ಯಾನನ್ದಮಾದಾಯ ನನ್ದಜಮ್ ॥೧೩.೨೭॥

ಅನೇಕ ಕೋಟಿ ಸಂಘವಾಗಿರುವ ಆ ತೋಳಗಳಿಂದ ಪೀಡೆಗೊಳಗಾದ ಗೋಪರು, ನಿತ್ಯಾನಂದಮೂರ್ತಿಯಾದ, ನಂದಪುತ್ರ   ಶ್ರೀಕೃಷ್ಣನನ್ನು ಕರೆದುಕೊಂಡು ವೃಂದಾವನಕ್ಕೆ ತೆರಳಿದರು.

ಇನ್ದಿರಾಪತಿರಾನನ್ದಪೂರ್ಣ್ಣೋ ವೃನ್ದಾವನೇ ಪ್ರಭುಃ ।
ನನ್ದಯಾಮಾಸ ನನ್ದಾದೀನುದ್ದಾಮತರಚೇಷ್ಟಿತೈಃ ॥೧೩.೨೮॥

ಆನಂದಪೂರ್ಣನೂ,  ಸರ್ವಸಮರ್ಥನೂ ಆಗಿರುವ ಇಂದಿರಾಪತಿ ಶ್ರೀಕೃಷ್ಣನು,  ನಂದ ಮೊದಲಾದವರನ್ನು ತನ್ನ ಉತ್ಕೃಷ್ಟವಾದ ಕ್ರಿಯೆಗಳಿಂದ ಸಂತಸಗೊಳಿಸಿದನು.

ಸ ಚನ್ದ್ರತೋ ಹಸತ್ಕಾನ್ತವದನೇನೇನ್ದುವರ್ಚ್ಚಸಾ ।
ಸಂಯುತೋ ರೌಹಿಣೇಯೇನ ವತ್ಸಪಾಲೋ ಬಭೂವ ಹ ॥೧೩.೨೯॥

ಚಂದ್ರನಿಗಿಂತಲೂ ಮಿಗಿಲಾಗಿ ಮುಗುಳುನಗುವ ಮನೋಹರವಾಗಿರುವ ಮುಖವುಳ್ಳ ಶ್ರೀಕೃಷ್ಣನು, ಚಂದ್ರನ ಕಾಂತಿಯಂತೆ ಕಾಂತಿಯುಳ್ಳ ಬಲರಾಮನಿಂದ ಕೂಡಿಕೊಂಡು ಕರುಮೇಯಿಸತಕ್ಕವನಾದನು. 

Saturday, June 15, 2019

Mahabharata Tatparya Nirnaya Kannada 1319_1325


ಸುತಸ್ಯ ಮಾತೃವಶ್ಯತಾಂ ಪ್ರದರ್ಶ್ಯ ಧರ್ಮ್ಮಮೀಶ್ವರಃ
ಬಭಞ್ಜ ತೌ ದಿವಿಸ್ಪೃಶೌ ಯಮಾರ್ಜ್ಜುನೌ ಸುರಾತ್ಮಜೌ ॥೧೩.೧೯

‘ಮಗನು ತಾಯಿಯ ಸೆರೆಯಾಗಬೇಕು’ ಎನ್ನುವ ಲೋಕನಿಯಮವನ್ನು ತೋರಿಸಿದ ಭಗವಂತ, ಕುಬೇರನ ಮಕ್ಕಳಾಗಿರುವ, ಅವಳಿಮರಗಳ ರೂಪದಲ್ಲಿ ಬೆಳೆದುನಿಂತಿರುವ, ಗಗನಚುಂಬಿಯಾಗಿರುವ, ಮತ್ತೀಮರಗಳ  ಮಧ್ಯ ಸಾಗಿ ಆ ಮರಗಳನ್ನು ಮುರಿದನು.

ಪುರಾ ಧುನಿಶ್ಚುಮುಸ್ತಥಾsಪಿ ಪೂತನಾಸಮನ್ವಿತೌ ।
ಅನೋಕ್ಷಸಂಯುತೌ ತಪಃ ಪ್ರಚಕ್ರತುಃ ಶಿವಾಂ ಪ್ರತಿ ।
ತಯಾ ವರೋsಪ್ಯವದ್ಧ್ಯತಾ ಚತುರ್ಷು ಚ ಪ್ರಯೋಜಿತಃ ॥೧೩.೨೦

ಹಿಂದೆ ಧುನಿ ಮತ್ತು ಚುಮು ಎನ್ನುವ ಅಸುರರಿಬ್ಬರು ಪೂತನೆ ಮತ್ತು ಶಕಟಾಸುರನೊಂದಿಗೆ  ಕೂಡಿಕೊಂಡು ಪಾರ್ವತಿಯನ್ನು ಕುರಿತು ತಪಸ್ಸನ್ನು ಮಾಡಿದ್ದರು.  ಹೀಗೆ ತಪಸ್ಸು ಮಾಡಿದ ಈ ನಾಲ್ವರು ‘ಅವಧ್ಯತ್ವದ’ ವರವನ್ನು ಪಡೆದಿದ್ದರು.

ಅನನ್ತರಂ ತೃಣೋದ್ಭೃಮಿಸ್ತಪೋsಚರದ್ ವರಂ ಚ ತಮ್ ।
ಅವಾಪ ತೇ ತ್ರಯೋ ಹತಾಃ ಶಿಶುಸ್ವರೂಪವಿಷ್ಣುನಾ ॥೧೩.೨೧

ಧುನಿಶ್ಚುಮುಶ್ಚ ತೌ ತರೂ ಸಮಾಶ್ರಿತೌ ನಿಸೂದಿತೌ ।
ತರುಪ್ರಭಙ್ಗತೋsಮುನಾ ತರೂ ಚ ಶಾಪಸಮ್ಭವೌ ॥೧೩.೨೨॥

ಪುರಾ ಹಿ ನಾರದಾನ್ತಿಕೇ ದಿಗಮ್ಬರೌ ಶಶಾಪ ಸಃ ।
ಧನೇಶಪುತ್ರಕೌ ದ್ರುತಂ ತರುತ್ವಮಾಪ್ನುತಂ ತ್ವಿತಿ ॥೧೩.೨೩॥


ಧುನಿ ಮತ್ತು ಚುಮು ಅವಧ್ಯತ್ವದ ವರವನ್ನು ಪಡೆದಮೇಲೆ, ತೃಣಾವರ್ತನೂ  ಕೂಡಾ ತಪಸ್ಸು ಮಾಡಿ ಅವಧ್ಯತ್ವದ ವರವನ್ನು ಹೊಂದಿದನು. ಆ ಮೂವರು(ಪೂತನೆ, ಶಕಟಾಸುರ ಮತ್ತು  ತೃಣಾವರ್ತ) ಮಗುವಿನ ರೂಪದಲ್ಲಿರುವ ಕೃಷ್ಣನಿಂದ ಕೊಲ್ಲಲ್ಪಟ್ಟರು.
ಮತ್ತೀಮರದಲ್ಲಿ ಸೇರಿಕೊಂಡಿದ್ದ ಧುನಿ ಮತ್ತು ಚುಮು ಇಬ್ಬರನ್ನೂ ಶ್ರೀಕೃಷ್ಣ ಮರವನ್ನುಕಿತ್ತು ಸಂಹಾರಮಾಡಿದ. ಕೃಷ್ಣನಿಂದ ನಾಶವಾದ ಮರದಲ್ಲಿ ಧುನಿ ಮತ್ತು ಚುಮು ಅಲ್ಲದೇ ಶಾಪದಿಂದ ಹುಟ್ಟಿದ ಇನ್ನಿಬ್ಬರಿದ್ದರು. (ಅವರೇ ನಾರದರಿಂದ ಶಾಪಗ್ರಸ್ಥರಾದ ಕುಬೇರನ ಮಕ್ಕಳಾದ ನಳಕೂಬರ-ಮಣಿಗ್ರೀವ)
ಹಿಂದೆ ನಾರದರ ಸಮೀಪದಲ್ಲಿ ಬತ್ತಲೆಯಾಗಿ ಓಡಾಡಿದ ಕುಬೇರನ ಇಬ್ಬರು ಮಕ್ಕಳನ್ನು ‘ಶೀಘ್ರದಲ್ಲಿಯೇ ಮರವಾಗಿ ಹುಟ್ಟಿ’ ಎಂದು  ನಾರದರು ಶಪಿಸಿದ್ದರು.

ತತೋ ಹಿ ತೌ ನಿಜಾಂ ತನುಂ ಹರೇಃ ಪ್ರಸಾದತಃ ಶುಭೌ ।
ಅವಾಪತುಃ ಸ್ತುತಿಂ ಪ್ರಭೋರ್ವಿಧಾಯ ಜಗ್ಮತುರ್ಗ್ಗೃಹಮ್ ॥೧೩.೨೪॥

ಇದೀಗ ಕೃಷ್ಣನ ಅನುಗ್ರಹದಿಂದ ಸಾತ್ವಿಕರಾಗಿರುವ  ಈ ಇಬ್ಬರು ಕುಬೇರನ ಮಕ್ಕಳು, ತಮ್ಮ ನಿಜ ಶರೀರವನ್ನು ಹೊಂದಿ, ನಾರಾಯಣನ ಸ್ತೋತ್ರವನ್ನು ಮಾಡಿ, ತಮ್ಮ ಮನೆಯನ್ನು ಕುರಿತು ತೆರಳಿದರು.(ಶ್ರೀಕೃಷ್ಣ ಮತ್ತೀಮರವನ್ನು ಕಿತ್ತು, ಅಸುರರಾದ ಧುನಿ ಮತ್ತು ಚುಮುವನ್ನು ಕೊಂದು,  ನಳಕೂಬರ-ಮಣಿಗ್ರೀವರಿಗೆ  ಶಾಪ ವಿಮೊಚನೆಯನ್ನು ನೀಡಿದನು)

ನಳಕೂಬರಮಣಿಗ್ರೀವೌ ಮೋಚಯಿತ್ವಾ ತು ಶಾಪತಃ ।
ವಾಸುದೇವೋsಥ ಗೋಪಾಲೈರ್ವಿಸ್ಮಿತೈರಭಿವೀಕ್ಷಿತಃ ॥೧೩.೨೫॥

ಹೀಗೆ ನಳಕೂಬರ ಮತ್ತು ಮಣಿಗ್ರೀವ ಎನ್ನುವ ಅವರಿಬ್ಬರನ್ನು ಶಾಪದಿಂದ ಬಿಡುಗಡೆಗೊಳಿಸಿದ ಶ್ರೀಕೃಷ್ಣನು, ಅಚ್ಚರಿಗೊಂಡ ಗೋಪಾಲಕರಿಂದ ಕಾಣಲ್ಪಟ್ಟನು.

Sunday, June 9, 2019

Mahabharata Tatparya Nirnaya Kannada 1314_1318


ಅಥಾsತ್ತಯಷ್ಟಿಮೀಕ್ಷ್ಯ ತಾಂ ಸ್ವಮಾತರಂ ಜಗದ್ಗುರುಃ ।
ಪ್ರಪುಪ್ಲುವೇ ತಮನ್ವಯಾನ್ಮನೋವಿದೂರಮಙ್ಗನಾ ॥೧೩.೧೪॥

ತದನಂತರ ಕೋಲನ್ನು ತೆಗೆದುಕೊಂಡ ತನ್ನ ತಾಯಿಯನ್ನು ಕಂಡ ಜಗದ್ಗುರು ಶ್ರೀಕೃಷ್ಣನು ತನ್ನ ಲೀಲೆಯನ್ನು ತೋರುತ್ತಾ  ಹಾರಿ ಓಡಿದನು. ಮನಸ್ಸಿಗೇ ನಿಲುಕದ ಅವನನ್ನು ಆ ಯಶೋದೆಯು ಅನುಸರಿಸಿ ಓಡಿದಳು.

ಪುನಃ ಸಮೀಕ್ಷ್ಯ ತಚ್ಛ್ರಮಂ ಜಗಾಮ ತತ್ಕರಗ್ರಹಮ್ ।
ಪ್ರಭುಃ ಸ್ವಭಕ್ತವಶ್ಯತಾಂ ಪ್ರಕಾಶಯನ್ನುರುಕ್ರಮಃ ॥೧೩.೧೫॥

ಉತ್ಕೃಷ್ಟವಾದ ಪಾದವಿನ್ಯಾಸವುಳ್ಳ ಭಗವಂತನು ಮತ್ತೆ ಅವಳ ಶ್ರಮವನ್ನು ನೋಡಿ(ತಾಯಿ ಬಳಲಿರುವುದನ್ನು ನೋಡಿ), ಅವಳ ಕೈಸೆರೆಯಾಗಿ ಸಿಕ್ಕಿದನು. ಹೀಗೆ  ಸರ್ವಸಮರ್ಥನಾದ ಶ್ರೀಕೃಷ್ಣನು  ತಾನು ತನ್ನ ಭಕ್ತರಿಗೆ ವಶನಾಗಿದ್ದೇನೆ ಎನ್ನುವುದನ್ನು ತೋರಿಸುತ್ತಾ, ತಾಯಿಯ ಕೈಯಲ್ಲಿ ಸಿಕ್ಕಿದನು.

ಸದಾ ವಿಮುಕ್ತಮೀಶ್ವರಂ ನಿಬದ್ಧುಮಞ್ಜಸಾssದದೇ ।
ಯದೈವ ದಾಮ ಗೋಪಿಕಾ ನ ತತ್ ಪುಪೂರ ತಂ ಪ್ರತಿ ॥೧೩.೧೬

ಯಾವಾಗಲೂ ವಿಮುಕ್ತನಾಗಿರುವ(ಬಂಧನರಹಿತನಾದ) ಭಗವಂತನನ್ನು ಚನ್ನಾಗಿ ಕಟ್ಟುವುದಕ್ಕಾಗಿ ಯಶೋದೆ ಯಾವಾಗ ಹಗ್ಗವನ್ನು ತೆಗೆದುಕೊಂಡಳೋ, ಆಗ ಆ ಹಗ್ಗವು , ಅವನನ್ನು ಕುರಿತು ಪೂರ್ತಿಯಾಗಲಿಲ್ಲ.

[ಯಾವಾಗಲೂ ವಿಮುಕ್ತ ಅಂದರೆ ಅವನು ಮನಸ್ಸಿಗೇ ನಿಲುಕದವನು. ಅಂತಹ ಶ್ರೀಕೃಷ್ಣನ ಹಿಂದೆ ಯಶೋದೆ ಅವನನ್ನು ಹಿಡಿದು ಕಟ್ಟುವುದಕ್ಕಾಗಿ ಓಡುತ್ತಾಳೆ. ಭಗವಂತ ಯಾವಾಗಲೂ ಒಂದೇರೀತಿ ಇರುತ್ತಾನೆ. ಆದರೂ ಬಾಲ್ಯ ಯೌವನಾದಿಗಳಿಗೆ ತಕ್ಕನಾದ ಲೀಲಾ ನಾಟಕವಾಡುತ್ತಾನೆ]

ಸಮಸ್ತದಾಮಸಞ್ಚಯಃ ಸುಸನ್ಧಿತೋsಪ್ಯಪೂರ್ಣ್ಣತಾಮ್ ।
ಯಯಾವನನ್ತವಿಗ್ರಹೇ ಶಿಶುತ್ವಸಮ್ಪ್ರದರ್ಶಕೇ ॥೧೩.೧೭॥

ಯಶೋದೆ ಅಲ್ಲಿದ್ದ ಎಲ್ಲಾ ಹಗ್ಗಗಳ ಸಮೂಹವನ್ನು ಸೇರಿಸಿದರೂ ಸಹ,  ಶಿಶುವಿನ ರೂಪವನ್ನು ತೋರುವ, ಎಣೆಯಿರದ ದೇಹವುಳ್ಳ ಶ್ರೀಕೃಷ್ಣನಲ್ಲಿ ಅದು ಅಪೂರ್ಣತೆಯನ್ನೇ ಹೊಂದಿತು.

ಅಬನ್ಧಯೋಗ್ಯತಾಂ ಪ್ರಭುಃ ಪ್ರದರ್ಶ್ಯ ಲೀಲಯಾ ಪುನಃ ।
ಸ ಏಕವತ್ಸಪಾಶಕಾನ್ತರಂ ಗತೋsಖಿಲಮ್ಭರಃ ॥೧೩.೧೮॥

ಹೀಗೆ ಸರ್ವಸಮರ್ಥನಾದ ಶ್ರೀಕೃಷ್ಣನು ತಾನು ಅನಾಯಾಸದಿಂದ ಬಂಧನಕ್ಕೆ  ಯೋಗ್ಯನಲ್ಲ ಎನ್ನುವುದನ್ನು ತೋರಿಸಿ, ತಕ್ಷಣ  ಕರುವನ್ನು ಕಟ್ಟುವ ಒಂದು ಚಿಕ್ಕ ಹಗ್ಗದ ಒಳಗಡೆ ಸೇರಿದನು(ಕಟ್ಟಿಸಿಕೊಂಡನು).