ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 26, 2022

Mahabharata Tatparya Nirnaya Kannada 22-219-226

ನಿಹತ್ಯ ತೌ ಕೇಶವೋ ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।

ಸ ಚೈಕಲವ್ಯೋ ರಾಮಜಿತಃ ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥

 

ಪೌಣ್ಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಕೊಂದ ಬಳಿಕ ಶ್ರೀಕೃಷ್ಣ ರುಗ್ಮಿಣಿಯಲ್ಲಿ ಮಗನನ್ನು (ಪ್ರದ್ಯುಮ್ನನನ್ನು) ಹುಟ್ಟಿಸಿದ. ಇತ್ತ ಬಲರಾಮನಿಂದ ಸೋತ ಏಕಲವ್ಯ ಶಿವನನ್ನು ಕುರಿತು ತಪಸ್ಸನ್ನು ಮಾಡಿ, ಶಿವನಿಂದ ಅಜೇಯತ್ವದ ವರವನ್ನು ಪಡೆದ.

 

ಸ ಶರ್ವದತ್ತೇನ ವರೇಣ ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।

ತಸ್ಯಾಸ್ತ್ರಶಸ್ತ್ರಾಣಿ ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್             ॥೨೨.೨೨೦॥

 

ಏಕಲವ್ಯನು ರುದ್ರ ಕೊಟ್ಟ ವರದಿಂದ ದರ್ಪವನು ಹೊಂದಿ, ಮತ್ತೆ ಯುದ್ಧಮಾಡಲೆಂದು ಕೃಷ್ಣನ ಬಳಿ ಬಂದನು. ಶ್ರೀಕೃಷ್ಣನಾದರೋ, ಅವನ ಶಸ್ತ್ರಾಸ್ತ್ರಗಳನ್ನು ನಿಗ್ರಹಿಸಿ, ಚಕ್ರದಿಂದ ಅವನ ಶಿರಚ್ಛೇದ ಮಾಡಿದ.  

 

ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।

ಏವಂ ಯದೂನಾಮೃಷಭೇಣ ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ             ॥೨೨.೨೨೧॥

 

ಕಾಶೀಶಪುತ್ರಸ್ತು ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ ।

ಪ್ರತ್ಯಕ್ಷಗಂ ತಂ ಶಿವಂ ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ             ॥೨೨.೨೨೨॥

 

ಪಾಪಿಷ್ಠನಾದ  ಏಕಲವ್ಯ ಕೃಷ್ಣನನ್ನು ದ್ವೇಷಿಸಿದ ಫಲವಾಗಿ ನಿತ್ಯದುಃಖವಿರುವ  ಘೋರವಾದ ಅನ್ಧಂತಮಸ್ಸನ್ನು ಹೊಂದಿದನು.  ಈರೀತಿಯಾಗಿ ಯಾದವರಲ್ಲಿಯೇ ಶ್ರೇಷ್ಠನಾದ ಶ್ರೀಕೃಷ್ಣನಿಂದ ಪೌಣ್ಡ್ರಕ ವಾಸುದೇವ, ಪಾಪಿಷ್ಠನಾದ ಕಾಶಿರಾಜನು ಸಾಯಲು, ಸುದಕ್ಷಿಣ ಎನ್ನುವ ಕಾಶಿರಾಜನ ಮಗನು ಶಂಕರನನ್ನು ಕುರಿತು ಬಹಳ ಭಕ್ತಿಯಿಂದ ತಪಸ್ಸನ್ನು ಮಾಡಿದನು. ಪ್ರತ್ಯಕ್ಷನಾದ ಶಿವನಲ್ಲಿ ಪಾಪಬುದ್ಧಿಯವನಾದ ಸುದಕ್ಷಿಣನು ಕೃಷ್ಣನ ನಾಶವನ್ನು ಬೇಡಿದನು.

 

ಕೃತ್ಯಾಮಸ್ಮೈ ದಕ್ಷಿಣಾಗ್ನೌ ಶಿವೋSಪಿ ದೈತ್ಯಾವೇಶಾದದದಾದಾವೃತಾತ್ಮಾ ।

ಸ ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ             ॥೨೨.೨೨೩॥

 

ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।

ಕೃಷ್ಣಸ್ತಸ್ಯ ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ             ॥೨೨.೨೨೪॥

 

ದೈತ್ಯಾವೇಷಕ್ಕೆ ಒಳಗಾದ ಶಿವ ದಕ್ಷಿಣಾಗ್ನಿ ಕುಂಡದಲ್ಲಿರುವ  ದಕ್ಷಿಣಾಗ್ನಿಸ್ವರೂಪಭೂತವಾದ ಕೃತ್ಯಾದೇವತೆಯನ್ನು ಸುದಕ್ಷಿಣನಿಗೆ ಕೊಟ್ಟ. (ಪರಮಾತ್ಮನ ಭಕ್ತನಾಗಿರುವ ಶಿವ ದೈತ್ಯಾವೇಷಕ್ಕೆ ಒಳಗಾಗಿ ಈ ರೀತಿ ಮಾಡಿದ. ಇಲ್ಲಿ ಕೃತ್ಯಾದೇವತೆ ಎಂದರೆ ಅದು ದಕ್ಷಿಣಾಗ್ನಿಗೆ  ಅಭಿಮಾನಿ ದೇವತೆ)  ಅಸುರಾವೇಶದಿಂದ ಕೂಡಿದ್ದ ಆ ದಕ್ಷಿಣಾಗ್ನಿಸ್ವರೂಪವಾದ ಕೃತ್ಯಾದೇವತೆಯು ಕಾಶೀರಾಜನ ಮಗನಿಂದ ಚೆನ್ನಾಗಿ ಪೂಜಿಸಲ್ಪಟ್ಟದ್ದಾಗಿ,  ಸದಾಶಿವನ ವರದಿಂದ ಹೆಚ್ಚಿದ ಸಾಮರ್ಥ್ಯವುಳ್ಳದ್ದಾದ  ಕೃಷ್ಣನಿದ್ದೆಡೆಗೆ ಹೋಯಿತು. ಕೃಷ್ಣನಾದರೋ ಅದರ ನಾಶಕ್ಕಾಗಿ ಸುದರ್ಶನ ಚಕ್ರವನ್ನು ಆದೇಶಿಸಿದ.  

 

ಜಾಜ್ವಲ್ಯಮಾನಂ ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।

ಕೃತ್ಯಾತ್ಮಕೋ ವಹ್ನಿರಸೌ ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ ॥೨೨.೨೨೫॥

 

ಸಹಾನುಬನ್ಧಂ ಚ ಸುದಕ್ಷಿಣಂ ತಂ ಭಸ್ಮೀಚಕಾರಾSಶು  ಸಪುತ್ರಭಾರ್ಯ್ಯಮ್ ।

ದಗ್ಧ್ವಾ ಪುರೀಂ ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್

ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ ॥೨೨.೨೨೬॥

 

ಪ್ರಜ್ವಲಿಸುತ್ತಿರುವ, ಎಂದೂ ವ್ಯರ್ಥವಾಗದ ಪೌರುಷವುಳ್ಳ ಆ ಸುದರ್ಶನವು ದಕ್ಷಿಣಾಗ್ನಿ ಸ್ವರೂಪಭೂತವಾದ ಕೃತ್ಯಾಗ್ನಿಯನ್ನು ಅತಿದೂರಕ್ಕೆ  ಓಡಿಸಿತು. ಆ ದಕ್ಷಿಣಾಗ್ನಿಯು ಪ್ರಧಾನ ವಹ್ನಿಯ ಮಗನು.

ಕೃಷ್ಣನನ್ನು ನಾಶಮಾಡಲೆಂದು ಬಂದು, ಸುದರ್ಶನ ಚಕ್ರದಿಂದ ಓಡಿಸಲ್ಪಟ್ಟ ಆ ಕೃತ್ಯಾಗ್ನಿಯು ಬಂಧುಬಾಂಧವರಿಂದ ಕೂಡಿದ, ಹೆಂಡತಿ ಮಕ್ಕಳೊಂದಿಗೆ ಕೂಡಿದ ಸುದಕ್ಷಿಣನನ್ನು ಬಸ್ಮೀಕರಿಸಿತು.  ಕೃತ್ಯಾಗ್ನಿಯನ್ನು ಬೆನ್ನೆತ್ತಿ ಬಂದ ಸುದರ್ಶನ ವಾರಣಸಿ ಪಟ್ಟಣವನ್ನೇ ಸುಟ್ಟು ಮರಳಿ ಪರಮಾತ್ಮನ ಬಳಿ ಬಂದಿತು. ಹೀಗೆ ಕೃಷ್ಣನನ್ನು ದ್ವೇಷಿಸಿದ ಸುದಕ್ಷಿಣ, ತನ್ನ ಬಂಧುಬಾಂಧವರೊಂದಿಗೆ ಅನ್ಧಂತಮಸ್ಸನ್ನೇ ಹೊಂದಿದನು.  


Monday, July 25, 2022

Mahabharata Tatparya Nirnaya Kannada 22-211-218

 

ರಾಮೋ ವಿಜಿತ್ಯಾತಿಬಲಂ ರಣೇ ರಿಪುಂ ಮುದೈವ ದಾಮೋದರಮಾಸಸಾದ ।

ಪೌಣ್ಡ್ರಸ್ತ್ವವಜ್ಞಾಯ ಶಿನಿಪ್ರವೀರಂ ನಿವಾರ್ಯ್ಯಮಾಣೋSಪಿ ಯಯೌ ಜನಾರ್ದ್ದನಮ್ ॥೨೨.೨೧೧॥

 

ಬಲರಾಮನು ಅತ್ಯಂತ ಬಲಿಷ್ಠ ಶತ್ರುವಾಗಿರುವ ಏಕಲವ್ಯನನ್ನು ಯುದ್ಧದಲ್ಲಿ ಗೆದ್ದು, ಸಂತೋಷದಿಂದ ಕೃಷ್ಣನ ಬಳಿ ಬಂದ. ಇತ್ತ ಪೌಣ್ಡ್ರಕ ವಾಸುದೇವ ಸಾತ್ಯಕಿಯಿಂದ ತಡೆಯಲ್ಪಟ್ಟವನಾದರೂ ಕೂಡಾ, ಅವನನ್ನು ಧಿಕ್ಕರಿಸಿ, ಕೃಷ್ಣನ ಬಳಿ ತೆರಳಿದ.

 

ತಂ ಕೇಶವೋ ವಿರಥಂ ವ್ಯಾಯುಧಂ ಚ ಕ್ಷಣೇನ ಚಕ್ರೇ ಸ ಯಯೌ ನಿಜಾಂ ಪುರೀಮ್ ।

ಪ್ರಸ್ಥಾಪಯಾಮಾಸ ಪುನಶ್ಚ ದೂತಂ ಕೃಷ್ಣಾಯೈಕೋ ವಾಸುದೇವೋSಹಮಸ್ಮಿ ॥೨೨.೨೧೨॥

 

ಮದೀಯಲಿಙ್ಗಾನಿ ವಿಸೃಜ್ಯ ಚಾsಶು ಸಮಾಗಚ್ಛೇಥಾಃ ಶರಣಂ ಮಾಮನನ್ತಮ್ ।

ತದ್ದೂತೋಕ್ತಂ ವಾಕ್ಯಮೇತನ್ನಿಶಮ್ಯ ಯದುಪ್ರವೀರಾ ಉಚ್ಚಕೈಃ ಪ್ರಾಹಸನ್ ಸ್ಮ ॥೨೨.೨೧೩॥

 

ಶ್ರೀಕೃಷ್ಣನು ಪೌಣ್ಡ್ರಕ ವಾಸುದೇವನನ್ನು ಕ್ಷಣದಲ್ಲಿ ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದನು. ಹೀಗೆ ಕೃಷ್ಣನಿಂದ ರಥ ಮತ್ತು ಆಯುಧವನ್ನು ಕಳೆದುಕೊಂಡ ಪೌಣ್ಡ್ರಕ ತನ್ನ ದೇಶಕ್ಕೆ ಹಿಂತಿರುಗಿದ ಮತ್ತು ನಂತರ ‘ನಾನೊಬ್ಬನೇ ವಾಸುದೇವನಾಗಿರುತ್ತೇನೆ’ ಎಂದು ಕೃಷ್ಣನಲ್ಲಿಗೆ ಒಬ್ಬ ಧೂತನ ಮುಖೇನ ಸಂದೇಶವನ್ನು ಕಳುಹಿಸಿದನು.

‘ನನ್ನದೇ ಆದ ಚಕ್ರ, ಶಂಖ, ಗದೆ, ಗರುಡವಾಹನ, ಶ್ರೀವತ್ಸ, ಈ ಎಲ್ಲಾ ಚಿಹ್ನೆಗಳನ್ನು  ನೀನು ಉಪಯೋಗಿಸುತ್ತಿರುವೆ. ಅದರಿಂದಾಗಿ ಅವುಗಳೆಲ್ಲವನ್ನು ನನಗೆ ಬಿಟ್ಟುಕೊಟ್ಟು, ಎಣೆಯಿರದ ಪರಾಕ್ರಮವುಳ್ಳ ನನ್ನಲ್ಲಿ ಶರಣು ಹೊಂದು’. ಎನ್ನುವ ಪೌಣ್ಡ್ರಕ ವಾಸುದೇವನ ಸಂದೇಶವನ್ನು ಕೇಳಿ ಯಾದವರೆಲ್ಲರೂ ಗಟ್ಟಿಯಾಗಿ ನಕ್ಕರು.

 

ಕೃಷ್ಣಃ ಪ್ರಹಸ್ಯಾSಹ ತವಾSಯುಧಾನಿ ದಾಸ್ಯಾಮ್ಯಹಂ ಲಿಙ್ಗಭೂತಾನಿ ಚಾSಜೌ ।

ಇತ್ಯುಕ್ತೋSಸೌ ದೂತ ಏತ್ಯಾSಹ ತಸ್ಮೈ ಸ ಚಾಭ್ಯಾಗಾದ್ ಯೋದ್ಧುಕಾಮೋ ಹರಿಶ್ಚ ॥೨೨.೨೧೪॥

 

ಕೃಷ್ಣನು ನಕ್ಕು ಹೇಳುತ್ತಾನೆ: ‘ನಿನಗೆ ಆಯುಧಗಳನ್ನು ಕೊಡುತ್ತೇನೆ, ಆದರೆ ಯುದ್ಧದಲ್ಲಿ’ ಎಂದು. ಈರೀತಿಯಾಗಿ ಹೇಳಲ್ಪಟ್ಟ ಧೂತನು ಹಿಂತಿರುಗಿ ಪೌಣ್ಡ್ರಕ ವಾಸುದೇವನಲ್ಲಿ ಎಲ್ಲವನ್ನೂ ಹೇಳುತ್ತಾನೆ. ಅವನಾದರೋ, ಕೃಷ್ಣನೊಂದಿಗೆ ಯುದ್ಧವನ್ನು ಬಯಸಿ ಬಂದ. ಶ್ರೀಕೃಷ್ಣನೂ ಕೂಡಾ ಯುದ್ಧಕ್ಕೆ ಸಿದ್ಧನಾದ.

 

ತಂ ಶಾತಕೌಮ್ಭೇ ಗರುಡೇ ರಥಸ್ಥೇ ಸ್ಥಿತಂ ಚಕ್ರಾದೀನ್ ಕೃತ್ರಿಮಾನ್ ಸನ್ದಧಾನಮ್ ।

ಶ್ರೀವತ್ಸಾರ್ತ್ಥೇ ದಗ್ಧವಕ್ಷಸ್ಥಲಂ ಚ ದೃಷ್ಟ್ವಾ ಕೃಷ್ಣಃ ಪ್ರಾಹಸತ್ ಪಾಪಬುದ್ಧಿಮ್ ॥೨೨.೨೧೫॥

 

ರಥದ ಮೇಲೆ ಸ್ಥಾಪಿತವಾಗಿರುವ ಬಂಗಾರಮಯವಾದ  ಗರುಡನ ಮೇಲೆ ಕುಳಿತಿರುವ ಪೌಣ್ಡ್ರಕ ವಾಸುದೇವ,  ಚಕ್ರ, ಶಂಖ, ತೋಳುಗಳು, ಇತ್ಯಾದಿಯನ್ನು ಕೃತಕವಾಗಿ ಜೋಡಿಸಿಕೊಂಡಿದ್ದ. ಶ್ರೀವತ್ಸ ಚಿಹ್ನೆಗಾಗಿ ಅನೇಕ ಬಾರಿ ಸುಟ್ಟ ಎದೆಯುಳ್ಳವನಾಗಿ ಬಂದಿದ್ದ ಪಾಪಿಷ್ಠ ಬುದ್ಧಿಯುಳ್ಳ ಅವನನ್ನು ಕಂಡು  ಶ್ರೀಕೃಷ್ಣ ನಕ್ಕನು.

[ ‘ದೃಷ್ಟ್ವಾ ತಮಾತ್ಮನಾ ತುಲ್ಯಂ ಕೃತ್ರಿಮಂ ವೇಷಮಾಸ್ಥಿತಮ್ । ಯಥಾ ನಟಂ ರಙ್ಗಗತಂ ವಿಜಹಾಸ ಭೃಶಂ ಹರಿಃ- ಪೌಣ್ಡ್ರಕ ವಾಸುದೇವ ಒಬ್ಬ ನಟನಂತೆ ಬಂದಿದ್ದ ಎನ್ನುತ್ತದೆ ಭಾಗವತ(೧೦.೬೯.೨೮)]

 

ತತೋsಸ್ತ್ರಶಸ್ತ್ರಾಣ್ಯಭಿವರ್ಷಮಾಣಂ ವಿಜಿತ್ಯ ತಂ ವಾಸುದೇವೋSರಿಣೈವ ।

ಚಕರ್ತ್ತ ತತ್ಕನ್ಧರಂ ತಸ್ಯ ಚಾನು ಮಾತಾಮಹಸ್ಯಾಚ್ಛಿನತ್ ಸಾಯಕೇನ ॥೨೨.೨೧೬॥

 

ತದನಂತರ ಅಸ್ತ್ರ-ಶಸ್ತ್ರಗಳನ್ನು ವರ್ಷಿಸುತ್ತಿರುವ ಪೌಣ್ಡ್ರಕ ವಾಸುದೇವನ ಗೆದ್ದು, ಚಕ್ರದಿಂದ ಅವನ ಕತ್ತನ್ನು ಶ್ರೀಕೃಷ್ಣ  ಕತ್ತರಿಸಿದ. ಅವನಾದಮೇಲೆ ಪೌಣ್ಡ್ರಕ ವಾಸುದೇವನ ತಾತನ ಕತ್ತನ್ನು ಬಾಣದಿಂದ ಕತ್ತರಿಸಿದ.

 

ಅಪಾತಯಚ್ಚಾSಶು ಶಿರಃ ಸ ತೇನ ಕಾಶೀಶ್ವರಸ್ಯೇಶ್ವರೋ ವಾರಣಸ್ಯಾಮ್ ।

ಸ ಚ ಬ್ರಹ್ಮಾಹಂ ವಾಸುದೇವೋSಸ್ಮಿ ನಿತ್ಯಮಿತಿ ಜ್ಞಾನಾದಗಮತ್ ತತ್ ತಮೋSನ್ಧಮ್ ॥೨೨.೨೧೭॥

 

ಶ್ರೀಕೃಷ್ಣನು ಕಾಶೀರಾಜನ ತಲೆಯನ್ನು ಬಾಣದಿಂದ ಹೊಡೆದು, ಅದು ವಾರಾಣಾಸಿಯಲ್ಲಿ ಬೀಳುವಂತೆ ಮಾಡಿದನು. ತಾನೇ ಬ್ರಹ್ಮ, ತಾನೇ ವಾಸುದೇವ ಎಂದು ನಿತ್ಯವೂ ಅನುಸಂಧಾನ ಮಾಡುತ್ತಿದ್ದ ದುಷ್ಟ ಪೌಣ್ಡ್ರಕ ವಾಸುದೇವ ಅನ್ಧಂತಮಸ್ಸನ್ನು ಹೊಂದಿದನು.

 

ಸಹಾಯ್ಯಕೃಚ್ಚಾಸ್ಯ ಚ ಕಾಶಿರಾಜೋ ಯಥೈವ ಕಿರ್ಮ್ಮೀರಹಿಡಿಮ್ಬಸಾಲ್ವಾಃ ।

ಅನ್ಯೇ ಚ ದೈತ್ಯಾ ಅಪತಂಸ್ತಮೋSನ್ಧೇ ತಥೈವ ಸೋSಪ್ಯಪತತ್ ಪಾಪಬುದ್ಧಿಃ ॥೨೨.೨೧೮॥

 

ಹೇಗೆ ಕಿರ್ಮೀರ, ಹಿಡಿಂಬ, ಸಾಲ್ವಾ, ಇತ್ಯಾದಿ ಇತರ ದೈತ್ಯರೆಲ್ಲರೂ ಕೂಡ ಅನ್ಧಂತಮಸ್ಸಿನಲ್ಲಿ ಬಿದ್ದರೋ, ಅದೇ ರೀತಿ, ಪೌಣ್ಡ್ರಕ ವಾಸುದೇವನಿಗೆ ಸಹಾಯ ಮಾಡಿರುವ ಪಾಪಬುದ್ಧಿಯವನಾಗಿರುವ ಕಾಶಿರಾಜನು ಅನ್ಧಂತಮಸ್ಸನ್ನು ಹೊಂದಿದನು.

Sunday, July 24, 2022

Mahabharata Tatparya Nirnaya Kannada 22-201-210

 

ಕೃಷ್ಣೇ ಪ್ರಯಾತೇ ನಿಲಯಂ ಪುರದ್ವಿಷೋ ರಾತ್ರೌ ಪೌಣ್ಡ್ರೋ ವಾಸುದೇವಃ ಸಮಾಗಾತ್ ।

ಸಹೈಕಲವ್ಯೇನ ನಿಜೇನ ಮಾತುಃ ಪಿತ್ರಾ ತಥಾSಕ್ಷೋಹಿಣಿಕತ್ರಯೇಣ ॥೨೨.೨೦೧॥

 

ಇತ್ತ ಶ್ರೀಕೃಷ್ಣನು ಕೈಲಾಸಕ್ಕೆ ತಪಸ್ಸಿಗೆಂದು ತೆರಳುತ್ತಿದ್ದಂತೆಯೇ ಪೌಣ್ಡ್ರಕ ವಾಸುದೇವನು ಏಕಲವ್ಯ ಹಾಗು ತನ್ನ ತಾಯಿಯ ತಂದೆಯಿಂದಲೂ ಕೂಡಿಕೊಂಡು, ಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ದ್ವಾರಕಾಪಟ್ಟಣಕ್ಕೆ ಬಂದ.

[ಪೌಣ್ಡ್ರಕವಾಸುದೇವ ಸಮಯ ಕಾಯುತ್ತಿದ್ದ. ಯಾವಾಗ ಕೃಷ್ಣ ತಪಸ್ಸಿಗೆ ಹೋದನೋ, ಆಗ ದಾಳಿಮಾಡಲೆಂದು ಬಂದ. ಕೃಷ್ಣ ಇಲ್ಲದಾಗ ಯಾದವರ ನಾಶಮಾಡಬೇಕು ಎನ್ನುವ ಉದ್ದೇಶ ಅವನದ್ದಾಗಿತ್ತು.  

 

ಪುರೀಂ ಪ್ರಭಞ್ಜನ್ತಮಮುಂ ವಿದಿತ್ವಾ ಸರಾಮಶೈನೇಯಯದುಪ್ರವೀರಾಃ ।

ಸಂಯೋಧಯಾಮಾಸುರಥಾಭ್ಯವರ್ಷಚ್ಛರೈರ್ನ್ನಿಷಾದಾಧಿಪ ಏಕಲವ್ಯಃ ॥೨೨.೨೦೨॥

 

ಪೌಣ್ಡ್ರಕ ವಾಸುದೇವ ಪಟ್ಟಣವನ್ನು ಹಾಳುಗೆಡುತ್ತಿದ್ದಾನೆ ಎನ್ನುವುದನ್ನು ತಿಳಿದು, ಬಲರಾಮ, ಸಾತ್ಯಕಿ ಮೊದಲಾದ ಯಾದವ ವೀರರು,  ಪೌಣ್ಡ್ರಕ ವಾಸುದೇವನೊಂದಿಗೆ ಕಾದಾಡಿದರು. ಬೇಡರ ಒಡೆಯನಾದ ಏಕಲವ್ಯನು ಬಾಣಗಳಿಂದ ಎಲ್ಲರನ್ನೂ ಪೀಡಿಸಿದನು.

 

ತದಸ್ತ್ರಶಸ್ತ್ರೈಃ ಸಹಸಾ ವಿಷಣ್ಣಾ ಯದುಪ್ರವೀರಾ ವಿಹತಪ್ರದೀಪಾಃ ।

ಸಹೈವ ರಾಮೇಣ ಶಿನೇಶ್ಚ ನಪ್ತ್ರಾ ಸಮಾವಿಶನ್ ಸ್ವಾಂ ಪುರಮೇವ ಸರ್ವೇ ॥೨೨.೨೦೩॥

 

ರಾತ್ರಿ ನಡೆದ ಯುದ್ಧದಲ್ಲಿ ಏಕಲವ್ಯನ ಬಾಣವರ್ಷದಿಂದ ದೊಂದಿಗಳನ್ನು(ಬೆಳಕನ್ನು) ಕಳೆದುಕೊಂಡ  ಯಾದವರು ದುಃಖಪಡುತ್ತಾ, ಬಲರಾಮ, ಸಾತ್ಯಕಿಯ ಜೊತೆಗೆ ದ್ವಾರಕಾಪಟ್ಟಣದ ಒಳಗೆ ಹೋದರು.

 

ಪುನಃ ಸಮಾದಾಯ ತಥೋರುದೀಪಿಕಾ ಅಗ್ರೇ ಸಮಾಧಾಯ ಚ ರೌಹಿಣೇಯಮ್ ।

ವಿನಿಸ್ಸೃತಾ ಆತ್ತಶಸ್ತ್ರಾಃ ಸ್ವಪುರ್ಯ್ಯಾಃ ಸಿಂಹಾ ಯಥಾ ಧರ್ಷಿತಾಃ ಸದ್ಗುಹಾಯಾಃ ॥೨೨.೨೦೪॥

 

ಪುನಃ, ಬಹಳ ದೊಡ್ಡ ದೀವಟಿಗೆಳನ್ನು ಹಚ್ಚಿಕೊಂಡು, ಬಲರಾಮನನ್ನು ಮುಂದೆ ಮಾಡಿಕೊಂಡು, ಶಸ್ತ್ರಗಳನ್ನೆಲ್ಲ ತೆಗೆದುಕೊಂಡು ಯಾದವರು ಕೆರಳಿದ ಸಿಂಹಗಳು ಗುಹೆಯಿಂದ ಹೊರಬರುವಂತೆ ತಮ್ಮ ಪಟ್ಟಣದಿಂದ ಈಚೆ ಬಂದರು.

 

ಅಥಾsಸಸಾದೈಕಲವ್ಯಂ ರಥೇನ ರಾಮಃ ಶೈನೇಯಃ ಪೌಣ್ಡ್ರಕಂ ವಾಸುದೇವಮ್ ।

ಅಯುದ್ಧ್ಯತಾಂ ತೌ ಸಾತ್ಯಕಿಃ ಪೌಣ್ಡ್ರಕಶ್ಚ ತಥಾSನ್ಯೋನ್ಯಂ ವಿರಥಂ ಚಕ್ರತುಶ್ಚ ॥೨೨.೨೦೫॥

 

ತದನಂತರ ಬಲರಾಮನು ರಥದಲ್ಲಿ ಕುಳಿತು ಏಕಲವ್ಯನನ್ನು ಎದುರುಗೊಂಡ. ಸಾತ್ಯಕಿಯು ಪೌಣ್ಡ್ರಕ ವಾಸುದೇವನನ್ನು ಎದುರುಗೊಂಡ. ಪೌಣ್ಡ್ರಕ ವಾಸುದೇವ ಹಾಗೂ ಸಾತ್ಯಕಿ ಘೋರವಾಗಿ ಯುದ್ಧ ಮಾಡಿದರು. ಸಮಬಲದ ಹೋರಾಟದಲ್ಲಿ ಅವರು ಪರಸ್ಪರ ರಥಹೀನರನ್ನಾಗಿ ಮಾಡಿಕೊಂಡರು.

 

ತತೋ ಗದಾಯುದ್ಧಮಭೂತ್ ತಯೋರ್ದ್ದ್ವಯೋಸ್ತಥಾ ರಾಮಶ್ಚೈಕಲವ್ಯಶ್ಚ ವೀರೌ ।

ಕೃತ್ವಾSನ್ಯೋನ್ಯಂ ವಿರಥಂ ಗದಾಭ್ಯಾಮಯುದ್ಧ್ಯತಾಂ ಜಾತದರ್ಪ್ಪೌ ಬಲಾಗ್ರ್ಯೌ ॥೨೨.೨೦೬॥

 

ರಥಹೀನರಾದ ಅವರಿಬ್ಬರ ನಡುವೆ ಗದಾಯುದ್ಧ ಪ್ರಾರಂಭವಾಯಿತು. ಇತ್ತ ಏಕಲವ್ಯ ಮತ್ತು ಬಲರಾಮ ಪರಸ್ಪರ ರಥವನ್ನು ಮುರಿದುಕೊಂಡು, ಅವರೂ ಕೂಡಾ ಗದಾಯುದ್ಧವನ್ನು ಪ್ರಾರಂಭಿಸಿದರು.

 

ತಸ್ಮಿನ್ ಕಾಲೇ ಕೇಶವೋ ವೈನತೇಯಮಾರು̐ಹ್ಯಾSಯಾದ್ ಯತ್ರ ತೇ ಯುದ್ಧಸಂಸ್ಥಾಃ ।

ದೃಷ್ಟ್ವಾ ಕೃಷ್ಣಂ ಹರ್ಷಸಮ್ಪೂರಿತಾತ್ಮಾ ರಾಮೋ ಹನ್ತುಂ ಚೈಕಲವ್ಯಂ ಸಮೈಚ್ಛತ್ ॥೨೨.೨೦೭॥

 

ಹೀಗೆ ಕೆಲವು ಕಾಲ ಯುದ್ಧನಡೆಯಲು ಕೃಷ್ಣನು ಗರುಡನನ್ನು ಏರಿ ಶಂಖ ಮೊಳಗಿಸುತ್ತಾ ಬಂದನು. ಆಗ ಯುದ್ಧದಲ್ಲಿದ್ದ ಯಾದವರೆಲ್ಲರೂ ಕೃಷ್ಣನನ್ನು ನೋಡಿದರು. ವಿಶೇಷತಃ ಬಲರಾಮ ಕೃಷ್ಣನನ್ನು ಕಂಡು ಆನಂದ ತುಂಬಿದವನಾಗಿ ಏಕಲವ್ಯನನ್ನು ಕೊಲ್ಲಲು ಸಂಕಲ್ಪ ಮಾಡಿದನು.   

 

ಉದ್ಯಮ್ಯ ದೋರ್ಭ್ಯಾಂ ಸ ಗದಾಂ ಜವೇನೈವಾಭ್ಯಾಪತದ್ ರೌಹಿಣೇಯೋ ನಿಷಾದಮ್ ।

ಬಲಂ ಕೋಪಂ ಚಾಸ್ಯ ದೃಷ್ಟ್ವೈಕಲವ್ಯಃ ಪರಾದ್ರವಜ್ಜೀವಿತೇಚ್ಛುಃ ಸುದೂರಮ್ ॥೨೨.೨೦೮॥

 

ಬಲರಾಮನು ಎರಡು ಕೈಗಳಿಂದ ಗದೆಯನ್ನು ಎತ್ತಿ ಹಿಡಿದು, ವೇಗದಿಂದಲೇ ಏಕಲವ್ಯನನ್ನು ಕುರಿತು ಓಡಿಬಂದ. ಬಲ್ಲರಾಮನ ಬಲವನ್ನೂ, ಸಿಟ್ಟನ್ನೂ ಕಂಡ ಏಕಲವ್ಯ ಜೀವ ಉಳಿಸಿಕೊಳ್ಳಲು ಬಯಸಿ ಬಹಳ ದೂರ ಓಡಿ ಹೋದ.

 

ವಿದ್ರಾವಯನ್ ರೌಹಿಣೇಯೋSನ್ವಯಾತ್ ತಂ ಭೀತೋSಪತಚ್ಚೈಕಲವ್ಯೋSಮ್ಬುಧೌ ಸಃ ।

ವೇಲಾನ್ತಂ ತಂ ದ್ರಾವಯಿತ್ವಾSತ್ರ ತಸ್ಥೌ ರಾಮೋ ಗದಾಪಾಣಿರದೀನಸತ್ತ್ವಃ ॥೨೨.೨೦೯॥

 

ಬಲರಾಮನು  ಏಕಲವ್ಯನನ್ನು ಓಡಿಸುತ್ತಾ ಹಿಂಬಾಲಿಸಿದ. ಅಳುಕಿದ ಏಕಲವ್ಯನು ಓಡುತ್ತಾ, ಸಮುದ್ರದಲ್ಲಿ ಬಿದ್ದನು. ಸಮುದ್ರ ತೀರದತನಕ ಓಡಿಸಿಕೊಂಡುಹೋದ ಬಲರಾಮ ತನ್ನ ಗದೆಯನ್ನು ನೆಲಕ್ಕೂರಿ ಹಿಡಿದುಕೊಂಡು ಗಾಂಭೀರ್ಯದಿಂದ ಅಲ್ಲೇ ನಿಂತ.  

 

ಸುಪಾಪೋSಸಾವೇಕಲವ್ಯಃ ಸುಭೀತೋ ರಾಮಂ ಮತ್ವೈವಾನುಯಾತಂ ಪುನಶ್ಚ ।

ಸಮುದ್ರೇSಶೀತಿಂ ಯೋಜನಾನಾಮತೀತ್ಯ ಪಶ್ಚಾದೈಕ್ಷದ್ ದ್ವೀಪಮೇವಾಧಿರು̐ಹ್ಯ ॥೨೨.೨೧೦॥

 

ಅತ್ಯಂತ ಪಾಪಿಷ್ಠನಾದ ಏಕಲವ್ಯನು ಬಹಳ ಭಯಗೊಂಡು, ಬಲರಾಮ ತನ್ನನ್ನು ಹಿಂಬಾಲಿಸಿದ್ದಾನೆ ಎಂದು ತಿಳಿದು, ಸಮುದ್ರದಲ್ಲಿ ೮೦ ಯೋಜನವನ್ನು ದಾಟಿ ಸಮುದ್ರದ ನಡುಗಡ್ಡೆಯನ್ನೇರಿ ಮತ್ತೆ ಹಿಂದೆ ತಿರುಗಿ ನೋಡಿದ.

[ಹರಿವಂಶ(ಭ.ಪ. ೧೦೨.೭) ಈ ಕುರಿತು ಹೀಗೆ ಹೇಳಿದೆ: ‘ಕಿಞ್ಚಿದ್ ದ್ವೀಪಾನ್ತರಂ ರಾಜನ್ ಪ್ರವಿಷ್ಯ ನ್ಯವಸತ್ ತದಾ’ ಏಕಲವ್ಯ ಆ ದ್ವೀಪದಲ್ಲೇ ಕೆಲವುದಿನ ವಾಸ ಮಾಡಬೇಕಾಗಿ ಬಂದಿತು].

Thursday, July 21, 2022

Mahabharata Tatparya Nirnaya Kannada 22-188-200

ತತಃ ಕೃಷ್ಣಃ ಸುತವರಂ ತ್ವತ್ತ ಆದಾಸ್ಯ ಇತ್ಯಜಃ ।

ಯದುಕ್ತವಾಞ್ಛಿವಂ ಪೂರ್ವಂ ಸತ್ಯಂ ಕರ್ತ್ತುಂ ತದಬ್ರವೀತ್             ॥೨೨.೧೮೮॥

 

ಪುತ್ರಂ ದೇಹೀತಿ ಸೋsಪ್ಯಾಹ ಪೂರ್ವಮೇವ ಸುತಸ್ತವ ।

ಜಾತಃ ಪ್ರದ್ಯುಮ್ನನಾಮಾ ಯಃ ಸ ಮದ್ದತ್ತಃ ಪ್ರವಾದತಃ             ॥೨೨.೧೮೯॥

 

ತದನಂತರ ಶ್ರೀಕೃಷ್ಣನು ‘ನಿನ್ನಿಂದ ಮಗನನ್ನು ಪಡೆಯುತ್ತೇನೆ’ ಎಂದು ಹಿಂದೆ ರುದ್ರನಿಗೆ ತಾನು ಹೇಳಿದ ಮಾತನ್ನು ಜಗತ್ತಿನ ಜನರ ಮುಂದೆ ಸತ್ಯವನ್ನಾಗಿಸಲು-‘ಮಗನನ್ನು ಕೊಡು’ ಎಂದು ರುದ್ರನನ್ನು ಕೇಳಿದ. ಹೀಗೆ ಕೇಳಿದ ಭಗವಂತನನ್ನು ಕುರಿತು ಸದಾಶಿವ ಹೇಳುತ್ತಾನೆ: ‘ಯಾವ ಪ್ರದ್ಯುಮ್ನ ನಾಮಕ ಮಗನು ನಿನಗೆ ಹುಟ್ಟಿರುವನೋ, ಆ ಪ್ರದ್ಯುಮ್ನ ಎಂಬ ಹೆಸರಿನ ಮಗನು ನನ್ನಿಂದ ಕೊಡಲ್ಪಟ್ಟವನೆಂದು ಜನರು ತಿಳಿಯಲಿ’ ಎಂದು.

 

ಪೂರಾ ದಗ್ಧೋ ಮಯಾ ಕಾಮಸ್ತದಾsಯಾಚತ ಮಾಂ ರತಿಃ ।

ದೇಹಿ ಕಾನ್ತಂ ಮಮೇತ್ಯೇವ ತದಾ ತಾಮಹಮಬ್ರವಮ್             ॥೨೨.೧೯೦॥

 

ಉತ್ಪತ್ಸ್ಯತೇ ವಾಸುದೇವಾದ್ ಯದಾ ತಂ ಪತಿಮಾಪ್ಸ್ಯಸಿ ।

ಇತ್ಯತೋsಸೌ ಮಯಾ ದತ್ತ ಇವ ದೇವ ತ್ವದಾಜ್ಞಯಾ             ॥೨೨.೧೯೧॥

 

ಬಹಳ ಹಿಂದೆ ನನ್ನಿಂದ ಕಾಮನು ಸುಟ್ಟುಹೋದಾಗ, ಕಾಮನ ಹೆಂಡತಿಯಾದ ರತಿಯು ‘ತನಗೆ ಗಂಡನನ್ನು ಕೊಡು’  ಎಂದು ನನ್ನನ್ನು ಬೇಡಲು- ಅವಳನ್ನು ಕುರಿತು ನಾನು: ‘ಮುಂದೆ ಶ್ರೀಕೃಷ್ಣ ಪರಮಾತ್ಮನಿಂದ ಈಗ ದೇಹ ಕಳೆದುಕೊಂಡ ನಿನ್ನ ಗಂಡನು ಮತ್ತೆ ಹುಟ್ಟುತ್ತಾನೆ, ಆಗ ನೀನು ಅವನನ್ನು ಗಂಡನಾಗಿ ಹೊಂದುವೆ’ ಎಂದು ಹೇಳಿರುವೆನು. ಹೀಗಾಗಿ ಪ್ರದ್ಯುಮ್ನ ನನ್ನಿಂದ ಕೊಡಲ್ಪಟ್ಟವನಂತೆ  ಆಗುವನು.  ಆ ಮಾತನ್ನು ಕೂಡಾ ನಾನು ನಿನ್ನ ಆಜ್ಞೆಯಂತೆಯೇ ಹೇಳಿರುವುದು- ಎನ್ನುತ್ತಾನೆ ಶಿವ.

[ಹೀಗೆ ‘ಪ್ರದ್ಯುಮ್ನನನ್ನು ನಾನು ಮೊದಲೇ ಕೊಟ್ಟಿರುವೆ ಹಾಗು ಅವನು ಈಗಾಗಲೇ ಹುಟ್ಟಿದ್ದಾನೆ’- ಎನ್ನುತ್ತಾನೆ ಶಿವ. ಹರಿವಂಶದಲ್ಲಿ ಈ ವಿವರ ಕಾಣಸಿಗುತ್ತದೆ:  ಪುತ್ರೋ ದತ್ತೋ ಮಯಾ ದೇವ ಪೂರ್ವಮೇವ ಜಗತ್ಪತೇ’ (೮೮.೫) ‘ಜ್ಯೇಷ್ಠಸ್ತವ ಸುತೋ ದೇವ ಪ್ರದ್ಯುಮ್ನೇತ್ಯಭಿವಿಶ್ರುತಃ’(೧೩)]

 

ದಾಸೋsಸ್ಮಿ ತವ ದೇವೇಶ ಪಾಹಿ ಮಾಂ ಶರಣಾಗತಮ್ ।

ಇತ್ಯುಕ್ತ್ವಾsಭಿಪ್ರಣಮ್ಯೈನಂ ಪುನರಾಹ ಸುರಾನ್ ಹರಃ ॥೨೨.೧೯೨॥

 

‘ಓ ದೇವೇಶ, ನಾನು ನಿನ್ನ ದಾಸನಾಗಿದ್ದೇನೆ. ಶರಣಾಗಿರುವ ನನ್ನನ್ನು ರಕ್ಷಿಸು’ ಎಂದು ಹೇಳಿದ ಸದಾಶಿವನು, ಶ್ರೀಕೃಷ್ಣನಿಗೆ ನಮಸ್ಕರಿಸಿ, ದೇವತೆಗಳನ್ನು ಕುರಿತು ಪುನಃ ಮಾತನಾಡಿದ:

 

[ಪರಮಾತ್ಮನ ಒಂದು ಕ್ರಿಯೆ/ಲೀಲೆ ಬಹಳ ಅರ್ಥ(ಪ್ರಯೋಜನ)ಗಳನ್ನು, ಭಾವಗಳನ್ನು ಒಳಗೊಂಡಿರುತ್ತದೆ. ಅದು ಅನೇಕ ಸಿದ್ಧಿಗಳನ್ನು ಜಗತ್ತಿನಲ್ಲಿ ತೋರಿಸಿರುತ್ತದೆ. ಇದು ಶಾಸ್ತ್ರ ಸಿದ್ಧವಾದ ವಿಷಯ. ಅದರಂತೆ ಇಲ್ಲಿ ತಪಸ್ಸಿಗೆಂದು ಬಂದಿರುವ ಶ್ರೀಕೃಷ್ಣ ಇನ್ನೊಂದು ಕೆಲಸಕ್ಕಾಗಿ ಬಂದಿದ್ದ ಎಂದು ಹೇಳುತ್ತಾರೆ. ಅದನ್ನು ಮಹಾಭಾರತದ ಅನುಶಾಸನ ಪರ್ವದಲ್ಲಿಯೂ(೨೦೩.೩೧) ಹೇಳಿದ್ದಾರೆ: ‘ಅಸುರಃ ಸಾಮ್ಪ್ರತಂ ಕಶ್ಚಿದಹಿತೋ ಲೋಕನಾಶನಃ’ ಅಲ್ಲಿ ಬಂದ ಕಥೆಯನ್ನು ಯಾವ ಸಂದರ್ಭದಲ್ಲಿ ಜೋಡಿಸಿಕೊಳ್ಳಬೇಕು ಎನ್ನುವುದು ಇಲ್ಲಿ ನಮಗೆ ತಿಳಿಯುತ್ತದೆ.]

 

ಯದರ್ತ್ಥಮೇಷ ಆಯಾತಃ ಕೇಶವಃ ಶೃಣುತಾಮರಾಃ ।

ಯೋsಸುರೋ ವಕ್ರನಾಮಾssಸೀದವದ್ಧ್ಯೋ ಬ್ರಹ್ಮಣೋ ವರಾತ್             ॥೨೨.೧೯೩॥

 

ಕೃಷ್ಣನು ಏಕಾಗಿ ಬಂದನೆಂದು ಓ ದೇವತೆಗಳೇ ಕೇಳಿರಿ:  ವಕ್ರ ಎನ್ನುವ ಹೆಸರಿನ ಅಸುರ ಇದ್ದ. ಅವನೋ ಬ್ರಹ್ಮನ ವರದಿಂದ, ಅವಧ್ಯನಾಗಿದ್ದ.  

 

ತದಾಜಾತಾದ್ ವಾಸುದೇವಪುತ್ರಾತ್ ಕಾಮಾದೃತೇ ಕ್ವಚಿತ್ ।

ತಂ ಹನ್ತುಮೇವ ಪುತ್ರಂ ಸ್ವಂ ಪ್ರದ್ಯುಮ್ನಮುದರೇsರ್ಪ್ಯ ಚ             ॥೨೨.೧೯೪॥

 

ಆಯಾತ ಇಹ ತಂ ಚಾಪಿ ದದಾಹ ಸ್ವೋದರಾತ್ ಸುತಮ್ ।

ನಿಸ್ಸಾರಯಿತ್ವಾ ಕಕ್ಷಂ ಚ ದಗ್ಧಂ ಪಶ್ಯತ ದೇವತಾಃ                     ॥೨೨.೧೯೫॥

 

ಬ್ರಹ್ಮದೇವರು ವರವನ್ನು ಕೊಡುವಾಗ ‘ಆಗತಾನೇ ಹುಟ್ಟಿದ ದೇವರ ಮಗುವನ್ನು ಹೊರತುಪಡಿಸಿ ಇನ್ಯಾರಿಂದಲೂ ನನಗೆ ಮರಣ ಬರಬಾರದು’ ಎನ್ನುವ ವರವನ್ನು ವಕ್ರ ಪಡೆದಿದ್ದ. ಅಂತಹ ದೈತ್ಯನನ್ನು ಕೊಲ್ಲಲು ಶ್ರೀಕೃಷ್ಣ ಕಾಮಾವತಾರಿಯಾದ, ಈಗಾಗಲೇ ಹುಟ್ಟಿ ಬೆಳೆದಿದ್ದ ಪ್ರದ್ಯುಮ್ನನನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ನನ್ನ ಆಶ್ರಮಕ್ಕೆ ಬಂದವನಾಗಿ, ತನ್ನ ಹೊಟ್ಟೆಯಿಂದ ಪ್ರದ್ಯುಮ್ನನನ್ನು ಹೊರಗೆ ಇರತಕ್ಕವನನ್ನಾಗಿ ಮಾಡಿ, ಅರಣ್ಯವನ್ನು ವ್ಯಾಪಿಸಿಕೊಂಡಿದ್ದ ವಕ್ರನನ್ನು ಸುಟ್ಟ.’ ಹೀಗೆ ಹೇಳಿದ  ರುದ್ರದೇವರು, ಸುಡಲ್ಪಟ್ಟ ಅರಣ್ಯವನ್ನು ದೇವತೆಗಳಿಗೆ ತೋರಿಸಿದರು.

[ವಕ್ರ ಹಿಮಾಲಯದ ಕಾಡೆಲ್ಲವನ್ನು ಆವರಿಸಿಕೊಂಡಿದ್ದ. ಹಾಗಾಗಿ ಕೃಷ್ಣ ಕಾಡನ್ನು ಸುಟ್ಟ. ಇಲ್ಲಿ ರುದ್ರದೇವರು ದೇವತೆಗಳಿಗೆ  ‘ನೀವೂ ಕೂಡಾ ನೋಡಿ, ಯಾವ ರೀತಿ ಕೃಷ್ಣ ಅರಣ್ಯವನ್ನು ಸುಟ್ಟಿದ್ದಾನೆ’ ಎಂದು ಹೇಳಿ ನಾಶವಾದ ಅರಣ್ಯವನ್ನು ತೋರಿಸುತ್ತಾರೆ].

 

ಜ್ವಾಲಾಮಾಲಾಕರಾಳೇನ ಸ್ವತೇಜೋವರ್ದ್ಧಿತೇನ ಚ ।

ಪ್ರದ್ಯುಮ್ನೇನೈವ ತಂ ದೈತ್ಯಂ ದಗ್ಧ್ವಾ ವನಸಮನ್ವಿತಮ್             ॥೨೨.೧೯೬॥

 

ಪುನಶ್ಚ ಸ್ವೋದರೇ ಪುತ್ರಂ ಸ್ಥಾಪಯಾಮಾಸ ಕೇಶವಃ ।

ಸದ್ಯೋಗರ್ಭಂ ಪುನಸ್ತಂ ಚ ರುಗ್ಮಿಣ್ಯಾಂ ಜನಯಿಷ್ಯತಿ   ॥೨೨.೧೯೭॥

 

ಬೆಂಕಿಯಿಂದ ಕೂಡಿರುವ, ತನ್ನ ತೇಜಸ್ಸಿನಿಂದಲೂ ಕೂಡಿರುವ ಪ್ರದ್ಯುಮ್ನನಿಂದಲೇ, ಕಾಡನ್ನು ಆವರಿಸಿಕೊಂಡಿದ್ದ ದೈತ್ಯನನ್ನು ಸುಟ್ಟು, ಮತ್ತೆ  ತನ್ನ ಹೊಟ್ಟೆಯ ಒಳಗಡೆ ಮಗನನ್ನು ಇಟ್ಟುಕೊಂಡ. ಶ್ರೀಕೃಷ್ಣ ದ್ವಾರಕೆಗೆ ಹಿಂತಿರುಗಿದಮೇಲೆ ‘ಹುಟ್ಟಿದ ತಕ್ಷಣ ಬೆಳೆಯುವ’ ಅವನನ್ನು ಮತ್ತೆ ರುಗ್ಮಿಣಿ ಹೆರುತ್ತಾಳೆ.

[ಅನುಶಾಸನ ಪರ್ವದಲ್ಲಿ ಸಂಕ್ಷೇಪವಾಗಿ ಈಕುರಿತು ಹೇಳಿದ್ದಾರೆ: ‘ಅಸುರಃ ಸಾಮ್ಪ್ರತಂ ಕಶ್ಚಿದಹಿತೋ ಲೋಕನಾಶನಃ’ (೨೦೩.೩೧) ]

 

ಪೂರ್ವವತ್ ಕ್ಷಣಮಾತ್ರೇಣ ಯುವಾ ಚ ಸ ಭವಿಷ್ಯತಿ ।

ದೃಷ್ಟಮೇತನ್ನಾರದಾದ್ಯೈರ್ಮ್ಮುನಿಭಿಃ ಸರ್ವಮೇವ ಚ               ॥೨೨.೧೯೮॥

 

ಆಗ ಪ್ರದ್ಯುಮ್ನ ಮೊದಲಿನಂತೆಯೇ ಹುಟ್ಟಿದ ಕ್ಷಣದಲ್ಲಿ ಯುವಕನಾಗುತ್ತಾನೆ. ಈ ಎಲ್ಲಾ ಅತ್ಯಂತ ಅಭೂತಪೂರ್ವವಾದ ಅದ್ಭುತ ಘಟನೆಗಳಿಗೆ ನಾರದಾದಿ ಮುನಿಗಳೇ ಸಾಕ್ಷಿ (ಅವರಿಂದ ಕಾಣಲ್ಪಟ್ಟಿದೆ).  

 

ಏವಂ ಕ್ರೀಡತ್ಯಯಂ ದೇವಃ ಪೂರ್ಣ್ಣೈಶ್ವರ್ಯ್ಯೇಣ ಕೇವಲಮ್ ।

ಇತ್ಯುಕ್ತೇ ಕೇಶವಂ ನೇಮುರ್ದ್ದೇವಾಃ ಶಕ್ರಪುರೋಗಮಾಃ             ॥೨೨.೧೯೯॥

 

ಈರೀತಿ ಅದ್ಭುತವಾದ ಶಕ್ತಿಗಳಿರುವ ದೇವರು ಜಗದೊಡನೆ ಕ್ರೀಡಿಸುತ್ತಾನೆ. ಹೀಗೆ ರುದ್ರದೇವರು ಎಲ್ಲಾ ದೇವತೆಗಳಿಗೆ ಹೇಳುತ್ತಿರಲು, ಇಂದ್ರನೇ ಮೊದಲಾದ ದೇವತೆಗಳು ಭಗವಂತನಿಗೆ ನಮಸ್ಕರಿಸಿದರು.  

[ಪರಮಾತ್ಮ ಪ್ರದ್ಯುಮ್ನನನ್ನು ತನ್ನ ಉದರದಲ್ಲಿ ಧರಿಸಿ, ರುದ್ರದೇವರನ್ನು ತಪಸ್ಸು ಮಾಡಿ, ಅವರಿಂದ ಮಗನನ್ನು ವರವಾಗಿ ಪಡೆದಂತೆ ತೋರಿ, ಆ ಮೂಲಕ ರುಗ್ಮಿಣಿಯ ಸಹಾಯ ಇಲ್ಲದೇ ಪ್ರದ್ಯುಮ್ನನನ್ನು ಹುಟ್ಟಿಸಿ, ಅವನ ಮೂಲಕ ವಕ್ರನನ್ನು ಕೊಂದು, ಹಿಂತಿರುಗಿ ರುಗ್ಮಿಣಿಯಲ್ಲಿ ಪ್ರದ್ಯುಮ್ನನನ್ನಿಟ್ಟು ವಿಚಿತ್ರಲೀಲೆಯನ್ನು ತೋರಿದ]  

 

ತತೋ ಹರಿರ್ಬ್ರಹ್ಮಸುರೇನ್ದ್ರಮುಖ್ಯೈಃ ಸುರೈಃ ಸ್ತುತೋ ಗರುಡಸ್ಕನ್ಧಸಂಸ್ಥಃ ।

ಪುನಃಪುನಃ ಪ್ರಣತಃ ಶಙ್ಕರೇಣ ಸ್ತುತಸ್ತೃತೀಯೇsಹ್ನಿ ನಿಜಾಂ ಪುರೀಮಗಾತ್ ॥೨೨.೨೦೦॥

 

ತದನಂತರ ಬ್ರಹ್ಮ, ಇಂದ್ರ ಮೊದಲಾದ ದೇವತೆಗಳಿಂದ ಕೊಂಡಾಡಲ್ಪಟ್ಟ ನಾರಾಯಣನು, ಗರುಡನ ಹೆಗಲೇರಿ, ಶಂಕರನಿಂದ ಮತ್ತೆ ಮತ್ತೆ ನಮಸ್ಕೃತನಾಗಿಯೂ, ಸ್ತೋತ್ರಮಾಡಲ್ಪಟ್ಟವನಾಗಿಯೂ, ಮೂರನೇ ದಿವಸದಲ್ಲಿ ತನ್ನ ಪಟ್ಟಣವನ್ನು ಕುರಿತು ತೆರಳಿದನು.