ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 27, 2018

Mahabharata Tatparya Nirnaya Kannada 11.16-11.21


   ಪೂರ್ವೋದಧೇಸ್ತೀರಗತೇsಬ್ಜಸಮ್ಭವೇ ಗಙ್ಗಾಯುತಃ ಪರ್ವಣಿ ಘೂರ್ಣ್ಣಿತೋsಬ್ಧಿಃ        
   ಅವಾಕ್ಷಿಪತ್ ತಸ್ಯ ತನೌ ನಿಜೋದಬಿನ್ದುಂ ಶಶಾಪೈನಮಥಾಬ್ಜಯೋನಿಃ ॥೧೧.೧೬  

ಒಮ್ಮೆ ಬ್ರಹ್ಮದೇವರು ಪೂರ್ವದಿಕ್ಕಿನ ಸಮುದ್ರ ತೀರದಲ್ಲಿ ಇರುತ್ತಿರಲು, ಹುಣ್ಣಿಮೆಯ ಕಾಲದಲ್ಲಿ ವರುಣನು ಗಂಗೆಯಿಂದ ಕೂಡಿದವನಾಗಿ ಮೇಲೆ ಉಕ್ಕಿ ಬರುತ್ತಾನೆ. ಹೀಗೆ ಉಕ್ಕಿದ ಆತ  ಬ್ರಹ್ಮದೇವರ ಶರೀರದ ಮೇಲೆ ತನ್ನ ನೀರಿನ ಹನಿಗಳನ್ನು ಸಿಡಿಸುತ್ತಾನೆ. ನಿರ್ಲಕ್ಷದಿಂದೆಸಗಿದ ಈ ಕಾರ್ಯಕ್ಕಾಗಿ  ಬ್ರಹ್ಮದೇವರು ಆತನನ್ನು ಶಪಿಸುತ್ತಾರೆ. 

ಮಹಾಭಿಷಙ್   ನಾಮ ನರೇಶ್ವರಸ್ತ್ವಂ ಭೂತ್ವಾ ಪುನಃ ಶನ್ತನುನಾಮಧೇಯಃ
ಜನಿಷ್ಯಸೇ ವಿಷ್ಣುಪದೀ ತಥೈಷಾ ತತ್ರಾಪಿ ಭಾರ್ಯ್ಯಾ ಭವತೋ ಭವಿಷ್ಯತಿ       ॥೧೧.೧೭

“ನೀನು ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುವೆ. ನಂತರ (ಮಹಾಭಿಷಕ್ ರಾಜನ ದೇಹವೀಯೋಗವಾದ ನಂತರ)  ಶಂತನು ಎಂಬ ನಾಮಧೇಯವನ್ನು ಧರಿಸಿ ಹುಟ್ಟುತ್ತೀಯ. ಹಾಗೆಯೇ, ಈ ಗಂಗೆಯೂ ಕೂಡಾ ‘ಅಲ್ಲಿಯೂ’ ನಿನ್ನ ಪತ್ನಿಯಾಗುತ್ತಾಳೆ” ಎನ್ನುವ ಶಾಪವನ್ನು ಬ್ರಹ್ಮದೇವರು ವರುಣನಿಗೆ ನೀಡುತ್ತಾರೆ.
 (ಈ ಶ್ಲೋಕದಲ್ಲಿ ಬಳಕೆಯಾದ ‘ತತ್ರಾಪಿ’ ಎನ್ನುವ ಪದ ‘ಅಲ್ಲಿಯೂ’ ಎನ್ನುವ ಅರ್ಥವನ್ನು ನೀಡುತ್ತದೆ. ಅಂದರೆ: ಅವತಾರರೂಪದಲ್ಲಿ ವರುಣ ಶನ್ತನುವಾಗಿ ಹುಟ್ಟಿದರೆ,  ಗಂಗೆ ಮೂಲರೂಪದಲ್ಲಿ ಅಲ್ಲಿಯೂ ಆತನ ಪತ್ನಿಯಾಗುತ್ತಾಳೆ ಎಂದರ್ಥ. ಜಲವನ್ನು ಸೇಚಿಸಿರುವುದರಿಂದ ಮಹಾಭಿಷಕ್ ಎನ್ನುವ ನಾಮ ಅವನಿಗಾಯಿತು).

ಶಾನ್ತೋ ಭವೇತ್ಯೇವ ಮಯೋದಿತಸ್ತ್ವಂ ತನುತ್ವಮಾಪ್ತೋsಸಿ ತತಶ್ಚ ಶನ್ತನುಃ       
ಇತೀರಿತಃ ಸೋsಥ ನೃಪೋ ಬಭೂವ ಮಹಾಭಿಷಙ್ ನಾಮ ಹರೇಃ ಪದಾಶ್ರಯಃ        ॥೧೧.೧೮

 “ ‘ಶಾಂತನಾಗು’ ಎಂದು ನನ್ನಿಂದ ಹೇಳಿಸಿಕೊಳ್ಳಲ್ಪಟ್ಟ ನೀನು, ನಿನ್ನ ಪ್ರವಾಹದ ವಿಸ್ತಾರವನ್ನು ಕಡಿಮೆ ಮಾಡಿಕೊಂಡಿರುವ ಕಾರಣದಿಂದ ‘ಶನ್ತನು’ ಎನ್ನುವ ನಾಮಧೇಯನಾಗಿ ಹುಟ್ಟುತ್ತೀಯ” ಎನ್ನುತ್ತಾರೆ ಬ್ರಹ್ಮದೇವರು. ಈ ರೀತಿಯಾಗಿ ಶಪಿಸಲ್ಪಟ್ಟ ವರುಣನು  ನಾರಾಯಣನ  ಪಾದ ಭಕ್ತನಾದ ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುತ್ತಾನೆ.

   ಸ ತತ್ರ ಭುಕ್ತ್ವಾ ಚಿರಕಾಲಮುರ್ವೀಂ ತನುಂ ವಿಹಾಯಾsಪ ಸದೋ ವಿಧಾತುಃ        
   ತತ್ರಾಪಿ ತಿಷ್ಠನ್ ಸುರವೃನ್ದಸನ್ನಿಧೌ ದದರ್ಶ ಗಙ್ಗಾಂ ಶ್ಲಥಿತಾಮ್ಬರಾಂ ಸ್ವಕಾಮ್         ॥೧೧.೧೯

ಮಹಾಭಿಷಕ್ ಎನ್ನುವ ರಾಜನು ಬಹಳಕಾಲ ಭೂಮಿಯನ್ನು ಆಳಿ, ತನ್ನ ಶರೀರವನ್ನು ಬಿಟ್ಟು ಬ್ರಹ್ಮಲೋಕವನ್ನು ಹೊಂದುತ್ತಾನೆ. ಆ ಬ್ರಹ್ಮಲೋಕದಲ್ಲಿಯೂ,  ದೇವತೆಗಳ ಸನ್ನಿಧಿಯಲ್ಲಿ ಇರುತ್ತಾ, ತನ್ನವಳೇ ಆಗಿರುವ ಗಂಗೆಯನ್ನು ಅಸ್ತವ್ಯಸ್ತವಾದ ಬಟ್ಟೆಯುಳ್ಳವಳಾಗಿದ್ದಾಗ ಕಾಣುತ್ತಾನೆ.

ಅವಾಙ್ಮುಖೇಷು ಧ್ಯುಸದಸ್ಸು ರಾಗಾನ್ನಿರೀಕ್ಷಮಾಣಂ ಪುನರಾತ್ಮಸಮ್ಭವಃ ।
ಉವಾಚ ಭೂಮೌ ನೃಪತಿರ್ಭವಾsಶು ಶಪ್ತೋ ಯಥಾ ತ್ವಂ ಹಿ ಪುರಾ ಮಯೈವ ॥೧೧.೨೦

ಗಂಗೆಯ ಬಟ್ಟೆ ಅಸ್ತವ್ಯಸ್ತವಾದಾಗ, ಉಳಿದ ಎಲ್ಲಾ ದೇವತೆಗಳು ತಮ್ಮ ತಲೆಯನ್ನು ತಗ್ಗಿಸುತ್ತಾರೆ. ಆದರೆ ಮಹಾಭಿಷಕ್ ಮಾತ್ರ ಆಕೆಯನ್ನು ಅತ್ಯಂತ ಬಯಕೆಯಿಂದ ನೋಡುತ್ತಿರುತ್ತಾನೆ. ಇದರಿಂದಾಗಿ ಆತನನ್ನು ಕುರಿತು ನಾರಾಯಣ ಸೂನುವಾದ ಬ್ರಹ್ಮದೇವರು  ಮತ್ತೆ ಹೇಳುತ್ತಾರೆ: “ಹಿಂದೆ ನನ್ನಿಂದಲೇ ಪಡೆದ ಶಾಪದಂತೆ ನೀನು ಮತ್ತೆ ಭೂಮಿಯಲ್ಲಿ ರಾಜನಾಗಿ ಹುಟ್ಟು” ಎಂದು.

  ಇತೀರಿತಸ್ತತ್ಕ್ಷಣತಃ ಪ್ರತೀಪಾದ್ ಬಭೂವ ನಾಮ್ನಾ ನೃಪತಿಃ ಸ ಶನ್ತನುಃ    
  ಅವಾಪ್ಯ ಗಙ್ಗಾಂ ದಯಿತಾಂ ಸ್ವಕೀಯಾಂ ತಯಾ ಮುಮೋದಾಬ್ದಗಣಾನ್ ಬಹೂಂಶ್ಚ       ॥೧೧.೨೧

ಈರೀತಿಯಾಗಿ ಹೇಳಲ್ಪಟ್ಟ ಆ ಮಹಾಭಿಷಕ್, ಆ ಕ್ಷಣದಲ್ಲಿಯೇ,  ಪ್ರತೀಪನೆನ್ನುವ ರಾಜನಲ್ಲಿ ಶನ್ತನು ಎನ್ನುವ ಹೆಸರುಳ್ಳವನಾಗಿ ಭೂಮಿಯಲ್ಲಿ ಹುಟ್ಟಿದನು. ಅಲ್ಲಿ ತನ್ನವಳೇ ಆಗಿರುವ ಗಂಗೆಯನ್ನು ಪತ್ನಿಯಾಗಿ ಹೊಂದಿ, ಅವಳ ಜೊತೆಗೂಡಿ ಭೂಮಿಯಲ್ಲಿ ಬಹಳ ವರ್ಷಗಳ ಕಾಲ ಕ್ರೀಡಿಸಿದನು.











ಪದ್ಯ ರೂಪ:  https://go-kula.blogspot.com/

Friday, October 26, 2018

Mahabharata Tatparya Nirnaya Kannada 11.10-11.15


ಪ್ರತೀಪಪುತ್ರತಾಮಾಪ್ಯ [1]ಬಾಹೀಕೇಷ್ವಭವತ್ ಪತಿಃ ।
ರುದ್ರೇಷು ಪತ್ರತಾಪಾಖ್ಯಃ ಸೋಮದತ್ತೋsಸ್ಯ ಚಾsತ್ಮಜಃ      ॥೧೧.೧೦

ಪ್ರತೀಪನ ಮಗನಾಗಿ ಹುಟ್ಟಿಬಂದ ಪ್ರಹ್ಲಾದ, ಪುತ್ರಿಕಾಪುತ್ರತ್ವ ನಿಯಮದಂತೆ  ಬಾಹ್ಲೀಕ[2] ದೇಶದ ರಾಜನಾದ. ಬಾಹ್ಲೀಕನ ಮಗ ಸೋಮದತ್ತ. ಈತ ಮೂಲತಃ ಏಕಾದಶ ರುದ್ರರಲ್ಲಿ ‘ಪತ್ರತಾಪ’  ಎನ್ನುವ ಹೆಸರಿನ ರುದ್ರ. (ಪತ್ರತಾಪನನ್ನು ಮೃಗವ್ಯಾಧ, ವಾಮದೇವ ಇತ್ಯಾದಿ ಹೆಸರಿನಿಂದ ಪುರಾಣಗಳು ಸಂಬೋಧಿಸುತ್ತವೆ).

ಅಜೈಕಪಾದಹಿರ್ಬುಧ್ನಿರ್ವಿರೂಪಾಕ್ಷ ಇತಿ ತ್ರಯಃ ।
ರುದ್ರಾಣಾಂ ಸೋಮದತ್ತಸ್ಯ ಬಭೂವುಃ ಪ್ರಥಿತಾಃ ಸುತಾಃ ॥೧೧.೧೧

ವಿಷ್ಣೋರೇವಾಙ್ಗತಾಮಾಪ್ತುಂಭೂರಿರ್ಭೂರಿಶ್ರವಾಃ ಶಲಃ
ಶಿವಾದಿಸರ್ವರುದ್ರಾಣಾಮಾವೇಶಾದ್ ವರತಸ್ತಥಾ         ॥ ೧೧.೧೨

ಭೂರಿಶ್ರವಾ ಅತಿಬಲಸ್ತತ್ರಾsಸೀತ್ ಪರಮಾಸ್ತ್ರವಿತ್ ।
ತದರ್ಥಂ ಹಿ ತಪಶ್ಚೀರ್ಣ್ಣಂ ಸೋಮದತ್ತೇನ ಶಮ್ಭವೇ   ॥೧೧.೧೩
ಏಕಾದಶ ರುದ್ರರಲ್ಲಿ ಮೂವರಾದ  ಅಜೈಕಪಾತ್, ಅಹಿರ್ಬುಧ್ನಿ ಮತ್ತು ವಿರೂಪಾಕ್ಷ ಎನ್ನುವ ರುದ್ರರು  ಸೋಮದತ್ತನ ಮಕ್ಕಳಾಗಿ ಹುಟ್ಟಿ ಅತ್ಯಂತ ಪ್ರಖ್ಯಾತಿಯನ್ನು ಹೊಂದಿದರು.  ಈ ಮೂವರು ನಾರಾಯಣನ ಸೇವೆಯನ್ನು ಮಾಡಲು(ಸಹಾಯ ಮಾಡಲು) ಭೂರಿ, ಭೂರಿಶ್ರವಸ್ಸು  ಮತ್ತು ಶಲಃ ಎನ್ನುವ ಹೆಸರಿನಲ್ಲಿ ಭೂಮಿಯಲ್ಲಿ ಅವತರಿಸಿದರು. ಈ ಮೂವರಲ್ಲಿ ಭೂರಿಶ್ರವಸ್ಸು ಬಹಳ ಶ್ರೇಷ್ಠನಾಗಿದ್ದನು.
ಶಿವನೂ ಸೇರಿದಂತೆ ಸಮಸ್ತ ರುದ್ರರ ಆವೇಶ ಹಾಗು ವರದಿಂದಲೂ, ಭೂರೀಶ್ರವಸ್ಸು ಅತ್ಯಂತ ಸಾಮರ್ಥ್ಯವುಳ್ಳವನೂ, ಉತ್ಕೃಷ್ಟವಾದ ಅಸ್ತ್ರವಿದ್ಯೆಯನ್ನು ಬಲ್ಲವನೂ ಆಗಿದ್ದನು. ಭೂರೀಶ್ರವನಂತಹ ಮಗನನ್ನು ಪಡೆಯಬೇಕೆಂದೇ ಸೋಮದತ್ತನು ಹಿಂದೆ ರುದ್ರನನ್ನು ಕುರಿತು ತಪಸ್ಸು ಮಾಡಿದ್ದನು.
[ಏಕಾದಶ ರುದ್ರರ ವಿವರ ಈ ಕೆಳಗಿನಂತಿದೆ. ಇವರಲ್ಲಿ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರುಗಳ ಉಲ್ಲೇಖವನ್ನು ನಾವು ಕಾಣುತ್ತೇವೆ].

೧. ಮೃಗವ್ಯಾಧಃ, ವಾಮದೇವಃ, [ಪತ್ರತಾಪಃ]
೬. ಪಿನಾಕಿ, ಅಪರಾಜಿತಃ , ಭೀಮಃ
೨. ಸರ್ಪಃ[ಸರ್ವಃ], ಶರ್ವಃ, ಓಜಃ[ಅಜಃ]
೭. ದಹನಃ, ಬಹುರೂಪಃ, ಉಗ್ರಃ  
೩. ನಿಋತಿಃ, ತ್ರ್ಯಮ್ಬಕಃ, ವಿರೂಪಾಕ್ಷ
೮. ಕಪಾಲಿ, ಭವಃ [ವಿಷ್ಕಂಭಃ]
೪. ಅಜೈಕಪಾತ್, ಕಪರ್ದೀ
೯. ಸ್ಥಾಣುಃ, ವೃಷಾಕಪಿಃ
೫. ಅಹಿರ್ಬುಧ್ನಿಃ, ಶಂಭುಃ
೧೦. ಭಗಃ, ರೈವತಃ

೧೧. ಈಶ್ವರಃ, ಹರಃ, ಮಹಾದೇವಃ


ದತ್ತೋ ವರಶ್ಚ ತೇನಾಸ್ಯ ತ್ವತ್ ಪ್ರತೀಪಾಭಿಭೂತಿಕೃತ್ ।
ಬಲವೀರ್ಯ್ಯಗುಣೋಪೇತೋ ನಾಮ್ನಾ ಭೂರಿಶ್ರವಾಃ ಸುತಃ     ॥೧೧.೧೪

ತಪಸ್ಸಿಗೆ ಮೆಚ್ಚಿದ ರುದ್ರನಿಂದ ಸೋಮದತ್ತನಿಗೆ ‘ಶತ್ರುಗಳಿಗೆ ಪರಾಜಯವನ್ನು ಉಂಟುಮಾಡುವ, ಬಲ-ವೀರ್ಯ-ಗುಣದಿಂದ ಕೂಡಿದ, ಉದ್ದೇಶವನ್ನು ಈಡೇರಿಸುವ, ಖ್ಯಾತಿಯನ್ನು ಹೆಚ್ಚಿಸುವ   ‘ಭೂರಿಶ್ರವಾಃ’ ಎನ್ನುವ ಮಗನು ಹುಟ್ಟುತ್ತಾನೆ’ ಎನ್ನುವ ವರವು ಕೊಡಲ್ಪಟ್ಟಿತು.

ಭವಿಷ್ಯತಿ ಮಯಾssವಿಷ್ಟೋ ಯಜ್ಞಶೀಲ ಇತಿ ಸ್ಮ ಹ ।
          ತೇನ ಭೂರಿಶ್ರವಾ ಜಾತಃ ಸೋಮದತ್ತಸುತೋ ಬಲೀ ॥೧೧.೧೫

‘ನನ್ನ ಆವೇಶವುಳ್ಳವನಾಗಿ ನಿರಂತರವಾದ ಯಜ್ಞವನ್ನು ನಿನ್ನ ಮಗ  ಮಾಡುತ್ತಿರುತ್ತಾನೆ’ ಎನ್ನುವ ರುದ್ರದೇವರ  ವರದಂತೆ  ಸೋಮದತ್ತನಿಗೆ ಬಲಿಷ್ಠನಾದ   ‘ಭೂರಿಶ್ರವಸ್’ ಎನ್ನುವ ಹೆಸರುಳ್ಳ ಮಗನು ಹುಟ್ಟುತ್ತಾನೆ .



[1] ಬಾಹ್ಲೀಕೇ
[2] ಇಂದು ಭಾರತಕ್ಕೆ ಸೇರಿರುವ ಪಂಜಾಬ್ ಪ್ರಾಂತ್ಯ

Thursday, October 25, 2018

Mahabharata Tatparya Nirnaya Kannada 11.05-11.09


ತದ್ವಂಶಜಃ ಕುರುರ್ನ್ನಾಮ ಪ್ರತೀಪೋsಭೂತ್ ತದನ್ವಯೇ ।
ಪ್ರತೀಪಸ್ಯಾಭವನ್ ಪುತ್ರಾಸ್ತ್ರಯಸ್ತ್ರೇತಾಗ್ನಿವರ್ಚ್ಚಸಃ ॥೧೧.೦೫

ದೇವಾಪಿರಥ ಬಾಹ್ಲೀಕೋ ಗುಣಜ್ಯೇಷ್ಠಶ್ಚ ಶನ್ತನುಃ ।
ತ್ವಗ್ದೋಷಯುಕ್ತೋ ದೇವಾಪಿರ್ಜ್ಜಗಾಮ ತಪಸೇ ವನಮ್ ॥೧೧.೦೬

ಭರತನ ವಂಶದಲ್ಲಿ ‘ಕುರು’ ಎಂದು ಪ್ರಸಿದ್ಧನಾದ ರಾಜನ ಜನನವಾಯಿತು. ಅವನ ವಂಶದಲ್ಲೇ ಪ್ರತೀಪ ರಾಜನ ಜನನವಾಯಿತು. ಪ್ರತೀಪನಿಗೆ ಮೂರು ಅಗ್ನಿಗಳಂತೆ ಕಾಂತಿಯುಳ್ಳ ದೇವಾಪಿ,  ಬಾಹ್ಲೀಕ ಮತ್ತು  ಗುಣಜೇಷ್ಠನಾದ^ ಶಂತನು ಎನ್ನುವ  ಮೂರು ಜನ ಮಕ್ಕಳು ಹುಟ್ಟಿದರು. ದೇವಾಪಿಗೆ ತೊನ್ನುರೋಗದ ದೋಷವಿದ್ದುದರಿಂದ ಆತ ಕಾಡಿಗೆ ಹೊರಟುಹೋದ.

[^ಆಚಾರ್ಯರು ಇಲ್ಲಿ ಈ ರೀತಿಯ ವಿವರಣೆ ನೀಡಲು ಕಾರಣವಿದೆ: ದೇವಾಪಿ,  ಬಾಹ್ಲೀಕ ಮತ್ತು ಶನ್ತನು ಈ ಮೂವರ ಕುರಿತಾಗಿ ಬೇರೆ ಬೇರೆ ಗ್ರಂಥಗಳಲ್ಲಿ ಬೇರೆಬೇರೆ ರೀತಿಯ ವಿವರಣೆ ಕಾಣಸಿಗುತ್ತದೆ.  ಭಾಗವತದಲ್ಲಿ(೯.೧೯.೧೨) ದೇವಾಪಿಃ ಶನ್ತನುಸ್ತಸ್ಯ ಬಾಹ್ಲೀಕ ಇತಿ ಚಾsತ್ಮಜಾಃ ಎನ್ನುವ ವಿವರಣೆ ಇದೆ.  ಇಲ್ಲಿ ಮೊದಲನೆಯವನು ದೇವಾಪಿ, ಎರಡನೆಯವನು ಶನ್ತನು ಮತ್ತು ಮೂರನೆಯವನು ಬಾಹ್ಲೀಕ ಎಂದು ಹೇಳಿದಂತೆ ಕಾಣುತ್ತದೆ. ಮಹಾಭಾರತದಲ್ಲೇ ಇನ್ನೊಂದು ಕಡೆ  (ಆದಿಪರ್ವ ೧೦೧.೪೯) ದೇವಾಪಿಃ ಶನ್ತನುಶ್ಚೈವ ಬಾಹ್ಲೀಕಶ್ಚ ಮಹಾರಥಃ ಎಂದು ಹೇಳಲಾಗಿದೆ. ಆದರೆ ಹರಿವಂಶಪರ್ವದಲ್ಲಿ(೩೨.೧೦೬)  ಪ್ರತೀಪೋ ಭೀಮಸೇನಸ್ಯ ಪ್ರತೀಪಸ್ಯ ತು ಶನ್ತನುಃ ದೇವಾಪಿರ್ಬಾಹ್ಲಿಕಶ್ಚೈವ  ತ್ರಯ ಏವ ಮಹಾರಥಾಃ ಎಂದು ವಿವರಿಸಲಾಗಿದೆ.  ಹೀಗಾಗಿ  ಇಲ್ಲಿ ಶನ್ತನು ಜೇಷ್ಠ ಎಂದು ಹೇಳಿದಂತೆ ಕಾಣುತ್ತದೆ.  ಆದ್ದರಿಂದ ಆಚಾರ್ಯರು ನಿರ್ಣಯ ನೀಡುತ್ತಾ, ‘ಗುಣಜ್ಯೇಷ್ಠಶ್ಚ ಶನ್ತನುಃ’ ಎಂದು ವಿವರಿಸಿದ್ದಾರೆ.  ಅಂದರೆ ಹರಿವಂಶ ಪರ್ವದ ವಿವರಣೆ ಗುಣಜ್ಯೇಷ್ಠತೆಯ ಲೆಕ್ಕದಲ್ಲಿ ನೀಡಲಾಗಿದೆ. ಒಟ್ಟಿನಲ್ಲಿ ಮಹಾಭಾರತದ ಉದ್ಯೋಗ ಪರ್ವದಲ್ಲಿ(೧೪೯.೧೬) ದೇವಾಪಿರಭವಚ್ಛ್ರೇಷ್ಠೋ ಬಾಹ್ಲೀಕಸ್ತದನಂತರಂ । ತೃತೀಯಃ ಶಂತನುಸ್ತಾತ ಧೃತಿಮಾನ್ಮೇ ಪಿತಾಮಹಃ ಎನ್ನುವ ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಮಾತೇನಿದೆ, ಅದು ಅವರ ಹುಟ್ಟಿನ ಸರಿಯಾದ ಕ್ರಮವನ್ನು ತಿಳಿಸುತ್ತದೆ].  
[ಭರತನಿಂದ ಪ್ರಾರಂಭವಾಗಿ ಶಂತನುವಿನ ತನಕದ ವಂಶ ವೃಕ್ಷದ ವಿವರ ಬೇರೆಬೇರೆ ಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಾಗಿ ಕಾಣಸಿಗುತ್ತದೆ.  ಮಹಾಭಾರತ, ಹರಿವಂಶ, ಭಾಗವತ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿ ಸಿಗುವ ಈ ವಂಶವೃಕ್ಷದ ಸಂಗ್ರಹವನ್ನು ಈ ಕೆಳಗೆ ನೀಡಲಾಗಿದೆ:


ಮಹಾಭಾರತ
ಹರಿವಂಶ
ಭಾಗವತ
ವಿಷ್ಣುಪುರಾಣ
ಗರುಡಪುರಾಣ
೧. ಭರತಃ
೧. ಭರತಃ
೧. ಭರತಃ
೧. ಭರತಃ
೧. ಭರತಃ
. ಭೂಮನ್ಯುಃ
. ವಿತಥಃ
. ವಿತಥಃ
. ವಿತಥಃ
. ವಿತಥಃ
. ಸುಹೋತ್ರಃ
ಸುಹೋತ್ರಃ 
. ಮನ್ಯುಃ
. ಮನ್ಯುಃ
. ಮನ್ಯುಃ
ಹಸ್ತೀ
. ಬೃಹನ್
. ಬೃಹತ್ಕ್ಷತ್ರಃ
. ಬೃಹತ್ಕ್ಷತ್ರಃ
. ಬೃಹತ್ಕ್ಷತ್ರಃ
. ವಿಕುಣ್ಠನಃ
. ಅಜಮೀಢಃ
ಸುಹೋತ್ರಃ 
ಸುಹೋತ್ರಃ 
ಸುಹೋತ್ರಃ 
ಅಜಮೀಢಃ 
ಋಕ್ಷಃ
. ಹಸ್ತಿ
. ಹಸ್ತಿ
. ಹಸ್ತಿ
.ಸಂವರಣಃ
.ಸಂವರಣಃ
ಅಜಮೀಢಃ
ಅಜಮೀಢಃ
ಅಜಮೀಢಃ
. ಕುರುಃ
. ಕುರುಃ
. ವೃಕ್ಷಃ
. ವೃಕ್ಷಃ
ಋಕ್ಷಃ
. ವಿಡೂರಥಃ
. ಪರೀಕ್ಷಿತ್
. ಸಂವರಣಃ
. ಸಂವರಣಃ
. ಸಂವರಣಃ
೧೦ಅನಶ್ವಾನ್
೧೦.ಜನಮೇಜಯಃ
೧೦. ಕುರುಃ
೧೦. ಕುರುಃ
೧೦. ಕುರುಃ
೧೧. ಪರೀಕ್ಷಿತ್
೧೧. ಸುರಥಃ
೧೧ಜನ್ಹುಃ
೧೧ಜನ್ಹುಃ
೧೧ಜನ್ಹುಃ
೧೨. ಭೀಮಸೇನಃ
೧೨. ವಿಡೂರಥಃ
೧೨. ಸುರಥಃ
೧೨. ಸುರಥಃ
೧೨. ಸುರಥಃ
೧೩. ಪ್ರತಿಶ್ರವಾಃ
೧೩ಋಕ್ಷಃ
೧೩. ವಿಡೂರಥಃ
೧೩. ವಿಡೂರಥಃ
೧೩. ವಿಡೂರಥಃ
೧೪. ಪ್ರತೀಪಃ
೧೪. ಭೀಮಸೇನಃ
೧೪.ಸಾರ್ವಭೌಮಃ
೧೪.ಸಾರ್ವಭೌಮಃ
೧೪.ಸಾರ್ವಭೌಮಃ
೧೫. ಶನ್ತನುಃ
೧೫. ಪ್ರತೀಪಃ
೧೫ . ಜಯತ್ಸೇನಃ
೧೫ . ಜಯತ್ಸೇನಃ
೧೫ . ಜಯತ್ಸೇನಃ
---
೧೬. ಶನ್ತನುಃ
೧೬. ರಾಧಿತಃ
೧೬. ಆರಾಧಿತಃ
೧೬. ಆರಾಧಿತಃ
---
---
೧೭. ಧ್ಯೂಮಾನ್
೧೭. ಅಯುತಾಯುಃ
೧೭. ಅಯುತಾಯುಃ
---
---
೧೮. ಅಕ್ರೋಧನಃ
೧೮. ಅಕ್ರೋಧನಃ
೧೮. ಅಕ್ರೋಧನಃ
---
---
೧೯. ದೇವಾತಿಥಿಃ
೧೯. ದೇವಾತಿಥಿಃ
೧೯. ಅತಿಥಿಃ
---
---
೨೦. ಋಕ್ಷಃ
೨೦. ಋಕ್ಷಃ
೨೦. ಋಕ್ಷಃ
---
---
೨೧. ದಿಲೀಪಃ
೨೧. ಭೀಮಸೇನಃ
೨೧. ಭೀಮಸೇನಃ
---
---
೨೨. ಪ್ರತೀಪಃ
೨೨. ದಿಲೀಪಃ
೨೨. ದಿಲೀಪಃ
---
---
೨೩. ಶನ್ತನುಃ
೨೩. ಪ್ರತೀಪಃ
೨೩. ಪ್ರತೀಪಃ
---
---
---
೨೪. ಶನ್ತನುಃ
೨೪. ಶನ್ತನುಃ



ಎಲ್ಲಾ ಗ್ರಂಥಗಳನ್ನು ಒಟ್ಟಿಗೆ ಸೇರಿಸಿ, ನಾಮಾನ್ತರವನ್ನು ಕಂಡುಕೊಂಡು ಜೋಡಿಸಿದಾಗ,  ಭರತನಿಂದ ಶನ್ತನುವಿನ ತನಕದ ವಂಶವೃಕ್ಷವನ್ನು ಈ ರೀತಿಯಾಗಿ ಕಾಣಬಹುದು:

೧. ಭರತಃ
ಋಕ್ಷಃ
೧೮. ಆರಾಧಿತಃ
. ವಿತಥಃ [ಭೂಮನ್ಯುಃ,
೧೦. ಸಂವರಣಃ
೧೯. ಅಯುತಾಯುಃ[ಧ್ಯೂಮಾನ್]
ಭರಧ್ವಾಜಃ ,ಭಾರಧ್ವಾಜಃ]
೧೧. ಕುರುಃ
೨೦. ಅಕ್ರೋಧನಃ
. ಮನ್ಯುಃ
೧೨. ಪರೀಕ್ಷಿತ್
೨೧. ದೇವಾತಿಥಿಃ
. ಬೃಹತ್ಕ್ಷತ್ರಃ
೧೩.ಜನಮೇಜಯಃ
೨೨. ಋಕ್ಷಃ
ಸುಹೋತ್ರಃ 
೧೪. ಸುರಥಃ
೨೩. ಭೀಮಸೇನಃ
ಹಸ್ತೀ
೧೫ವಿಡೂರಥಃ
೨೪. ದಿಲೀಪಃ[ಪ್ರತಿಶ್ರವಾಃ, ಹವಿಃಶ್ರವಾಃ]
. ವಿಕುಣ್ಠನಃ
೧೬.ಸಾರ್ವಭೌಮಃ
೨೫. ಪ್ರತೀಪಃ
ಅಜಮೀಢಃ 
೧೭ . ಜಯತ್ಸೇನಃ
೨೬. ಶನ್ತನುಃ



ವಿಷ್ಣೋಃ ಪ್ರಸಾದಾತ್ ಸ ಕೃತೇ ಯುಗೇ ರಾಜಾ ಭವಿಷ್ಯತಿ ।
ಪುತ್ರಿಕಾಪುತ್ರತಾಂ ಯಾತೋ ಬಾಹ್ಲೀಕೋ ರಾಜಸತ್ತಮಃ ॥೧೧.೦೭

ಚರ್ಮರೋಗವಿದ್ದ ಕಾರಣ ಕಾಡಿಗೆ ಹೋದ ಪ್ರತೀಪನ ಜೇಷ್ಠಪುತ್ರ ದೇವಾಪಿಯು ವಿಷ್ಣುವಿನ ಅನುಗ್ರಹದಂತೆ ಭವಿಷ್ಯದಲ್ಲಿ ರಾಜನಾಗುವ ಯೋಗವನ್ನು ಹೊಂದಿದ್ದ. ಎರಡನೇ ಮಗ ಬಾಹ್ಲೀಕನು ಪುತ್ರಿಕಾಪುತ್ರತ್ವವನ್ನು^ ಹೊಂದಿದನು.
[ಭಾಗವತದಲ್ಲಿ ಹೇಳುವಂತೆ(೯.೧೯.೧೭) ದೇವಾಪಿರ್ಯೋಗಮಾಸ್ಥಾಯ ಕಲಾಪಗ್ರಾಮಮಾಶ್ರಿತಃ ಸೋಮವಂಶೇ ಕಲೌ ನಷ್ಟೇ ಕೃತಾದೌ ಸ್ಥಾಪಯಿಷ್ಯತಿ ತಪಸ್ಸನ್ನು ಮಾಡುತ್ತಾ ಕಲಾಪಗ್ರಾಮದಲ್ಲಿರುವ ದೇವಾಪಿಯು, ಕಲಿಯುಗದಲ್ಲಿ ಚಂದ್ರವಂಶ ನಷ್ಟವಾಗಲು, ಮುಂದಿನ ಕೃತಯುಗದಲ್ಲಿ ಆ ವಂಶಪ್ರವೃತ್ತಕನಾಗುವ ಅನುಗ್ರಹವನ್ನು  ಭಗವಂತನಿಂದ ಪಡೆದಿದ್ದ.   ಮೇಲ್ನೋಟಕ್ಕೆ ತೊನ್ನು ದೋಷ. ಆದರೆ ಭಗವಂತನ ಪರಮಾನುಗ್ರಹ ಅವನ ಮೇಲಿತ್ತು.
^ಪುತ್ರಿಕಾಪುತ್ರತ್ವ ಎಂದರೆ: ‘ಮಗಳ ಮಗನೇ ತನ್ನ ಪುತ್ರನು’ ಎಂದು ಸಂಕಲ್ಪಿಸಿ ಯಾವ ಕನ್ನಿಕೆಯನ್ನು ತಂದೆ ಮದುವೆ ಮಾಡಿ ಕೊಡುತ್ತಾನೋ, ಆ ಕನ್ನಿಕೆಯ ಮಗನು ಪುತ್ರಿಕಾಪುತ್ರನೆನಿಸುತ್ತಾನೆ. ಹೀಗಾಗಿ ಬಾಹ್ಲೀಕ ತನ್ನ ತಾಯಿಯ ತಂದೆಯ ದೇಶದ ಅಧಿಪತಿಯಾದನು. ಮೂಲತಃ ಈ ಬಾಹ್ಲೀಕ ಯಾರು ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ].   

ಹಿರಣ್ಯಕಶಿಪೋಃ ಪುತ್ರಃ ಪ್ರಹ್ಲಾದೋ ಭಗವತ್ಪರಃ ।
ವಾಯುನಾ ಚ ಸಮಾವಿಷ್ಟೋ ಮಹಾಬಲಸಮನ್ವಿತಃ      ॥೧೧.೦೮

ಯೇನೈವ ಜಾಯಮಾನೇನ ತರಸಾ ಭೂರ್ವಿದಾರಿತಾ ।
ಭೂಭಾರಕ್ಷಪಣೇ ವಿಷ್ಣೋರಙ್ಗತಾಮಾಪ್ತುಮೇವ ಸಃ     ॥೧೧.೦೯


ಪೂರ್ವದಲ್ಲಿ ಹಿರಣ್ಯಕಶಿಪುವಿನ ಮಗನಾಗಿದ್ದ ಪ್ರಹ್ಲಾದನೇ^ ಈ ಬಾಹ್ಲೀಕ. ಈತ ಪರಮಾತ್ಮನ ಪರಮ ಭಕ್ತ. ಮುಖ್ಯಪ್ರಾಣನಿಂದಲೂ ಕೂಡಾ ಆತ ಆವಿಷ್ಟನಾಗಿದ್ದ. ಯಾರು ಹುಟ್ಟಿದಾಗ ಭೂಮಿಯೇ ಸೀಳಿತೋ, ಅಂತಹ  ಮಹಾಬಲಿಷ್ಠ ಈತನಾಗಿದ್ದ.  ಭೂ-ಭಾರ ಕ್ಷಪಣ(ನಾಶ) ಕಾರ್ಯದಲ್ಲಿ ನಾರಾಯಣನ ಸೇವೆ ಮಾಡಲಿಕ್ಕಾಗಿಯೇ ಈತ ಈರೀತಿ ಹುಟ್ಟಿ ಬಂದಿದ್ದ.
[^‘ಪ್ರಹ್ಲಾದೋ ನಾಮ ಬಾಹ್ಲೀಕಃ ಸ ಬಭೂವ ನರಾದಿಪಃ’ ಎಂದು ಈ ಅಂಶವನ್ನು ಮಹಾಭಾರತದ ಅಂಶಾವತರಣ ಪರ್ವದಲ್ಲೇ(೬೮.೩೧)  ಹೇಳಲಾಗಿದೆ].