ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 27, 2022

Mahabharata Tatparya Nirnaya Kannada 22: 31-40

 

[‘ನಾನು ನಿಮ್ಮ ಸಮೀಪ ಇಲ್ಲದಿದ್ದುದರಿಂದ ಹೀಗಾಯಿತು’ ಎಂದು ಹೇಳಿರುವುದರ ಅರ್ಥ  ಭಗವಂತನಿಗೆ ದೇಶ-ಕಾಲದ ವ್ಯಾಪ್ತಿಯಿಲ್ಲವೆಂದಲ್ಲ. ಅದನ್ನು ವಿವರಿಸುತ್ತಾರೆ:]

 

ಸನ್ನಿಧಾನೇSಥ ದೂರೇ ವಾ ಕಾಲವ್ಯವಹಿತೇsಪಿ ವಾ ।

ಸ್ವಭಾವಾದ್ ವಾ ವ್ಯವಹಿತೇ ವಸ್ತುವ್ಯವಹಿತೇSಪಿ ವಾ                ॥ ೨೨.೩೧॥

 

ನಾಶಕ್ತಿರ್ವಿದ್ಯತೇ ವಿಷ್ಣೋರ್ನ್ನಿತ್ಯಾವ್ಯವಹಿತತ್ವತಃ ।

ತಥಾSಪಿ ನರಲೋಕಸ್ಯ ಕರೋತ್ಯನು ಕೃತಿಂ ಪ್ರಭುಃ                 ॥ ೨೨.೩೨॥

 

ಹತ್ತಿರ ಇದ್ದರೂ, ಕಾಲದ ತಡೆ ಇದ್ದರೂ, ಸ್ವಭಾವದಿಂದ ತಡೆ ಇದ್ದರೂ, ವಸ್ತುವಿನಿಂದ ತಡೆ ಇದ್ದರೂ, ನಾರಾಯಣನಿಗೆ ಅಶಕ್ತಿಯೆನ್ನುವುದು ಇಲ್ಲವೇ ಇಲ್ಲ. ಅವನು ಎಲ್ಲಾಕಾಲದಲ್ಲೂ ಎಲ್ಲಾ ಶಕ್ತಿಯಿಂದ ಕೂಡಿರುತ್ತಾನೆ. ಸರ್ವತ್ರ ವ್ಯಾಪ್ತನಾಗಿರುವುದರಿಂದ ಅವನಿಗೆ ಸಮೀಪ-ದೂರದ ತಡೆ ಇಲ್ಲ. ಆದರೂ  (ಶ್ರೀಕೃಷ್ಣ ಏಕೆ ಹಾಗೆ ಹೇಳಿದ ಎಂದರೆ: )  ಮನುಷ್ಯಲೋಕದ ಅನುಕರಣೆಯನ್ನು ದೇವರು ಮಾಡುತ್ತಾನೆ.

 

ದುಷ್ಟಾನಾಂ ದೋಷವೃದ್ಧ್ಯರ್ತ್ಥಂ ಭೀಮಾದೀನಾಂ ಗುಣೋನ್ನತೇಃ ।

ಯುಧಿಷ್ಠಿರೇSತಿವೃದ್ಧಂ ತು ರಾಜಸೂಯಾದಿಸಮ್ಭವಮ್            ॥ ೨೨.೩೩॥

 

ಧರ್ಮ್ಮಂ ಚ ಸಙ್ಕ್ರಾಮಯಿತುಂ ಕೃಷ್ಣಾಯಾಮನುಜೇಷು ಚ ।

ಯೋಗ್ಯತಾಕ್ರಮತೋ ವಿಷ್ಣುರಿಚ್ಛಯೇತ್ಥಮಚೀಕ್ಲ್ ಪತ್               ॥ ೨೨.೩೪॥

 

ದುಷ್ಟರ ದೋಷದ ಅಭಿವೃದ್ಧಿಗಾಗಿ, ಭೀಮಸೇನ ಮೊದಲಾದವರ ಗುಣೋನ್ನತಿಗಾಗಿ ಕೃಷ್ಣ ಹೀಗೆ ಮಾಡಿದ. ಯುಧಿಷ್ಠಿರನಲ್ಲಿ ಅವನ ಯೋಗ್ಯತೆಗಿಂತ ಮಿಗಿಲಾದ, ರಾಜಸೂಯಯಾಗ ಮೊದಲಾದ ಕರ್ಮಗಳಿಂದ ಉಂಟಾದ ಪುಣ್ಯ ಇದೆಯಷ್ಟೇ. ಭೀಮಸೇನ, ದ್ರೌಪದಿ, ಹೀಗೆ ಯೋಗ್ಯತಾಕ್ರಮದಲ್ಲಿ ಯುಧಿಷ್ಠಿರನಲ್ಲಿದ್ದ  ಯೋಗ್ಯತೆಗಿಂತ ಜಾಸ್ತಿಯಾಗಿರುವ ಪುಣ್ಯವನ್ನು ದಾಟಿಸಲು ಬಯಸಿ ಶ್ರೀಕೃಷ್ಣನು ಈರೀತಿಯಾಗಿ ಮಾಡಿದ.

 

ಏಧಮಾನದ್ವಿಳಿತ್ಯೇವ ವಿಷ್ಣೋರ್ನ್ನಾಮ ಹಿ ವೈದಿಕಮ್ ।

ಸ್ವಯೋಗ್ಯತಾಯ ಅಧಿಕಧರ್ಮ್ಮಜ್ಞಾನಾದಿಜಂ ಫಲಮ್             ॥ ೨೨.೩೫॥

 

ಭೀಷ್ಮದ್ರೋಣಾಮ್ಬಿಕೇಯಾದೇಃ ಪಾರ್ತ್ಥೇಷ್ವೇವ ನಿಧಾಪಿತುಮ್ ।

ಪುನಶ್ಚ ಪಾಪವೃದ್ಧ್ಯರ್ತ್ಥಮಜೋ ದುರ್ಯ್ಯೋಧನಾದಿಷು             ॥ ೨೨.೩೬॥

 

ವ್ಯಾಸೋSಮ್ಬಿಕಾಸುತಂ ಪ್ರಾಹ ಪಾರ್ತ್ಥಾ ಮೇSಭ್ಯಧಿಕಂ ಪ್ರಿಯಾಃ ।

ತೇಷಾಂ ಪ್ರವಾಸನಂ ಚೈವ ಪ್ರಿಯಂ ನ ಮಮ ಸರ್ವಥಾ           ॥ ೨೨.೩೭॥

 

ಇತಿ ದುರ್ಯ್ಯೋಧನಾದೀನಾಂ ಪಾಪವೃದ್ಧ್ಯರ್ತ್ಥಮೇವ ಸಃ ।

ಪ್ರಿಯಾ ಇತ್ಯೇವ ಕಥನಾತ್ ಪಾಣ್ಡವಾನಾಂ ಶುಭೋನ್ನತೇಃ       ॥ ೨೨.೩೮॥

 

ತನ್ನ ಯೋಗ್ಯತೆಗಿಂತ ಮಿಗಿಲಾಗಿ ಬೆಳೆಯುವ ಯಾರನ್ನೇ ಆಗಲಿ ದೇವರು ಸಹಿಸುವುದಿಲ್ಲ. (ಅವರ ಯೋಗ್ಯತೆಗೆ ಅನುಗುಣವಾಗಿಯೇ ಫಲವನ್ನು ಕೊಡುತ್ತಾನೆ). ಹೀಗಾಗಿ ಭಗವಂತನಿಗೆ ಏಧಮಾನದ್ವಿಟ್ ಎನ್ನುವ ವೈದಿಕ ನಾಮವಿದೆ. [ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್ನನ್ಯಮನ್ಯಮತಿನೇನೀಯಮಾನಃ । ಏಧಮಾನದ್ವಿಳುಭಯಸ್ಯ ರಾಜಾ ಚೋಷ್ಕೂಯತೇ ವಿಶ ಇಂದ್ರೋ ಮನುಷ್ಯಾನ್ ॥ (ಋಗ್ವೇದ ಸಂಹಿತ ೬.೪೭.೧೬)] ವೈದಿಕ ನಾಮ ಹೀಗಿರುವುದರಿಂದ ತಮ್ಮ ಯೋಗ್ಯತೆಗಿಂತ ಅಧಿಕವಾಗಿರುವ ಧರ್ಮ, ಪುಣ್ಯ, ಶಾಸ್ತ್ರಜ್ಞಾನ, ಇತ್ಯಾದಿಗಳಿಂದ ಉಂಟಾದ ಫಲವನ್ನು ಪಾಂಡವರಲ್ಲಿ ಇಡುವುದಕ್ಕಾಗಿಯೇ  ಜೂಜು ನಡೆಯುವ ಸಮಯದಲ್ಲಿ  ಕೃಷ್ಣಪರಮಾತ್ಮ ಅಲ್ಲಿರಲಿಲ್ಲ. ಕೇವಲ ಧರ್ಮರಾಜನದು ಮಾತ್ರವಲ್ಲ, ಭೀಷ್ಮ, ದ್ರೋಣ, ಧೃತರಾಷ್ಟ್ರ, ಇವರೆಲ್ಲರೂ ಕೂಡಾ ಅವರ ಯೋಗ್ಯತೆಗಿಂತ ಮಿಗಿಲಾಗಿ ಪುಣ್ಯವನ್ನು ಮಾಡಿದ್ದರು. [ಅದರಿಂದಾಗಿ ದ್ಯೂತ ಎನ್ನುವ ಪ್ರಸಂಗದಲ್ಲಿ ಬೇಕಂತಲೇ ತಾನು ಇರದೇ, ಅವರೆಲ್ಲರ ಯೋಗ್ಯತೆಗಿಂತ ಹೆಚ್ಚಿನ  ಪುಣ್ಯಕ್ಷಯಕ್ಕೆ ಕೃಷ್ಣ ಕಾರಣನಾದ]. ಮತ್ತೆ ದುರ್ಯೋಧನ ಮೊದಲಾದವರ ಪಾಪ ವೃದ್ಧಿಗಾಗಿ ವೇದವ್ಯಾಸರು ಧೃತರಾಷ್ಟ್ರನ ಹತ್ತಿರ ಹೀಗೆ ಹೇಳಿದರು: ‘ಪಾಂಡವರು ನನಗೆ ಬಹಳ ಪ್ರಿಯ. ಅವರ ಕಾಡಿಗೆ ತೆರಳುವಿಕೆಯು ನನಗೆ ಸರ್ವಥಾ ಇಷ್ಟವಿಲ್ಲ’.  ವೇದವ್ಯಾಸರು ಹೀಗೆ ಹೇಳಿದ್ದರಿಂದ ಪಾಂಡವರ ಪುಣ್ಯ ವೃದ್ಧಿಯಾಗುವಂತಾದರೆ,  ದುರ್ಯೋಧನಾದಿಗಳಿಗೆ ವಿಪರೀತ ಅಸೂಯೆ ಉಂಟಾಗಿ ಅವರ ಪಾಪ ವೃದ್ಧಿಯಾಗುವಂತಾಯಿತು.

 

ಗುರುತ್ವಾದ್ ಭೀಮಸೇನಸ್ಯ ಕ್ಷಮಾ ದ್ಯೂತೇSರ್ಜ್ಜುನಾದಿನಾಮ್ ।

ನಾತಿಧರ್ಮ್ಮಸ್ವರೂಪೋSತ್ರ ಧರ್ಮ್ಮೋ ಭೀಮೇ ನಿರೌಪಧಃ       ॥ ೨೨.೩೯॥

 

ಜೂಜಿನಲ್ಲಿ ಅರ್ಜುನ ಮೊದಲಾದವರ ಸಹನೆಯಿಂದ ಅವರಿಗೆ ಪೂರ್ತಿ ಪುಣ್ಯ ಬರಲಿಲ್ಲ. ಆದರೆ ಭೀಮಸೇನ ಎಲ್ಲರಿಗೂ ಗುರುವಾದ್ದರಿಂದ, ಅವನಿಗೆ ಎಣೆಯಿಲ್ಲದ ಪುಣ್ಯ ಬಂತು. (ಭೀಮ ಪ್ರತಿಭಟನೆ ಮಾಡುವುದನ್ನೂ ಮಾಡಿದ, ದೇವರ ಇಚ್ಛೆಯಂತೆ ದುರ್ಯೋಧನಾದಿಗಳ ಪಾಪವನ್ನು ಬೆಳೆಸಲು ಸಹನೆಯನ್ನೂ ತೋರಿದ).

 

ದ್ರೌಪದ್ಯಾ ಅಪ್ಯತಿಕ್ಲೇಶಾತ್ ಕ್ಷಮಾ ಧರ್ಮ್ಮೋ ಮಹಾನಭೂತ್ ।

ಸಾ ಹಿ ಭೀಮಮನೋ ವೇದ ನ ಕಾರ್ಯ್ಯಃ ಶಾಪ ಇತ್ಯಲಮ್     ॥ ೨೨.೪೦॥

 

ದ್ರೌಪದಿಗೆ ಬಹಳ ಕಷ್ಟ ಆದರೂ ಕೂಡಾ ಅವಳು ಅದನ್ನು ಸಹಿಸಿಕೊಂಡಳು. (ಅತ್ಯಂತ ಉನ್ನತ ಸ್ಥಾನದಲ್ಲಿದ್ದ ಹೆಣ್ಣು ಸಭೆಯಲ್ಲಿ ವಸ್ತ್ರಾಪಹಾರವನ್ನು ಸಹಿಸುವುದು ಸಣ್ಣ ವಿಷಯವಲ್ಲ. ಇಡೀ ಪ್ರಪಂಚವನ್ನು ಗೆದ್ದು ಬಂದವರ ಹೆಂಡತಿ, ರಾಜಸೂಯ ಯಾಗದಲ್ಲಿ ಯಜ್ಞಪತ್ನಿಯಾಗಿ ಭಾಗವಹಿಸಿದವಳು. ಇಷ್ಟು ಅರ್ಹತೆ ಇರುವ ಹೆಣ್ಣು ತನ್ನ ಎಲ್ಲಾ ಅವಮಾನಗಳನ್ನು ಸಹಿಸುತ್ತಾಳೆ ಅಂದರೆ ಅದು ಸಾಮಾನ್ಯವಲ್ಲ.) ಹೀಗಾಗಿ ದೊಡ್ಡ ಪುಣ್ಯ ಅವಳಿಗೆ ಬಂದಿತು. ಅವಳಿಗೆ ಭೀಮನ ಮನಸ್ಸು ಗೊತ್ತಿತ್ತು. ಹೀಗಾಗಿ ‘ನಾನು ಯಾರಿಗೂ ಶಾಪ ಕೊಡಬಾರದು’ ಎನ್ನುವುದನ್ನು ಅವಳು ತಿಳಿದಿದ್ದಳು. (ಶಾಪ ಕೊಡಬಾರದು, ಬಾಹುಬಲದಿಂದಲೇ ಇವರನ್ನೆಲ್ಲ ಕೊಲ್ಲಬೇಕು ಎನ್ನುವುದು ಭೀಮಸೇನನ ಅಭಿಪ್ರಾಯವಾಗಿತ್ತು. ಭೀಮಸೇನನ ಮನಸ್ಸಿಗೆ ಅನುಗುಣವಾಗಿ ದ್ರೌಪದಿ ನಡೆದಳು).

Saturday, March 26, 2022

Mahabharata Tatparya Nirnaya Kannada 22: 24-30

 

ಕೃಷ್ಣೇ ಸೋSಪಿ ದ್ರುತಮಾಯಾತ್ ಸಸತ್ಯಃ ಸಮ್ಬನ್ಧಿನೋ ಯೇ ಚ ಪಾಞ್ಚಾಲಮುಖ್ಯಾಃ ।

ಕ್ರುದ್ಧಂ ಕೃಷ್ಣಂ ಧಾರ್ತ್ತರಾಷ್ಟ್ರಾಯ ಪಾರ್ತ್ಥಾಃ  ಕ್ಷಮಾಪಯಾಮಾಸುರುಚ್ಚೈರ್ಗ್ಗೃಣನ್ತಃ ॥ ೨೨.೨೪॥

 

ಗುಣಾಂಸ್ತದೀಯಾನಮಿತಾನ್ ಪ್ರಣಮ್ಯ ತದಾ ರುದನ್ತೀ ದ್ರೌಪದೀ ಚಾSಪ ಪಾದೌ ।

ಸಾ ಪಾದಯೋಃ ಪತಿತಾ ವಾಸುದೇವಮಸ್ತೌತ್ ಸಮಸ್ತಪ್ರಭುಮಾತ್ಮತನ್ತ್ರಮ್ ॥ ೨೨.೨೫॥

 

ಕೃಷ್ಣನಾದರೋ, ತಕ್ಷಣ ಸತ್ಯಭಾಮೆಯಿಂದ ಕೂಡಿಕೊಂಡು ಪಾಂಡವರ ಕಡೆಗೆ ಓಡಿಬಂದ. ಪಾಂಚಾಲ ಮೊದಲಾಗಿರುವ ಪಾಂಡವರ ಸಂಬಂಧಿಕರೂ ಓಡಿಬಂದರು. ದುರ್ಯೋಧನನ ಮೇಲೆ ಶ್ರೀಕೃಷ್ಣ ಕೋಪಗೊಂಡಾಗ ಪಾಂಡವರು ಭಗವಂತನ ಅನಂತವಾದ ಗುಣಗಳನ್ನು ಗಟ್ಟಿಯಾಗಿ ಸ್ತೋತ್ರಮಾಡುತ್ತಾ, ನಮಸ್ಕರಿಸಿ, ಅವನನ್ನು  ಕ್ಷಮಿಸುವಂತೆ ಬೇಡಿದರು. ದ್ರೌಪದಿಯು ಅಳುತ್ತಾ ಅವನ ಕಾಲ್ಗಳಿಗೆ ಬಿದ್ದು, ಎಲ್ಲಕ್ಕೂ ಒಡೆಯನಾಗಿರುವ, ಸ್ವತಂತ್ರನಾಗಿರುವ ಶ್ರೀಕೃಷ್ಣನನ್ನು ಸ್ತೋತ್ರಮಾಡಿದಳು.  

 

ಅಚಿನ್ತ್ಯನಿತ್ಯಾವ್ಯಯಪೂರ್ಣ್ಣಸದ್ಗುಣಾರ್ಣ್ಣವೈಕದೇಹಾಖಿಲದೋಷದೂರ ।

ರಮಾಬ್ಜಜೇಶೇರಸುರೇನ್ದ್ರಪೂರ್ವವೃನ್ದಾರಕಾಣಾಂ ಸತತಾಭಿವನ್ದ್ಯ       ॥ ೨೨.೨೬॥

 

ಸಮಸ್ತಚೇಷ್ಟಾಪ್ರದ ಸರ್ವಜೀವಪ್ರಭೋ ವಿಮುಕ್ತಾಶ್ರಯ ಸರ್ವಸಾರ ।

ಇತಿ ಬ್ರುವನ್ತಿ ಸಕಲಾನುಭೂತಂ ಜಗಾದ ಸರ್ವೇಶಿತುರಚ್ಯುತಸ್ಯ            ॥ ೨೨.೨೭॥

 

ಪೂರ್ತಿ ಚಿಂತಿಸಲಾಗದವನೇ, ಯಾವಾಗಲೂ ಇರುವ, ನಾಶವಾಗದ, ತುಂಬಿದ, ಒಳ್ಳೆಯ ಗುಣಗಳ ಕಡಲೇ, ಗುಣವೇ ಮೈವೆತ್ತುಬಂದ  ಶರೀರದವನೇ, ಎಲ್ಲಾ ಕೊಳೆಗಳಿಂದ ದೂರನಾದವನೇ, ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಮುಖ್ಯಪ್ರಾಣ ಇವರೇ ಮೊದಲಾದ ಸಮಸ್ತ ದೇವತೆಗಳಿಂದ ಯಾವಾಗಲೂ ನಮಸ್ಕರಿಸಲ್ಪಡುವವನೇ, ಸಮಸ್ತ ಜಗತ್ತಿಗೆ ಕ್ರಿಯೆಯನ್ನು ಈಯುವವನೇ, ಎಲ್ಲಾ ಜೀವರಿಗೆ ಒಡೆಯನೇ, ಈ ಭವದಿಂದ ಬಿಡುಗಡೆಗೊಂಡವರಿಗೂ ಕೂಡಾ ಆಶ್ರಯನಾದವನೇ, ಎಲ್ಲದರ ಸಾರವೇ, ನಾರಾಯಣನೇ, ಎಂದು ಹೇಳುತ್ತಾ, ಶ್ರೀಕೃಷ್ಣನಿಗೆ ತಾವು ಅನುಭವಿಸಿದ ದುಗುಡದುಮ್ಮಾನಗಳನ್ನು ಹೇಳಿಕೊಂಡಳು.

 

ಯಸ್ಯಾಧಿಕಾನುಗ್ರಹಪಾತ್ರಭೂತಾ ಸ್ವಯಂ ಹಿ ಶೇಷೇಶವಿಪಾದಿಕೇಭ್ಯಃ ।

ಶ್ರುತ್ವಾ ಸಮಸ್ತಂ ಭಗವಾನ್ ಪ್ರತಿಜ್ಞಾಂ ಚಕಾರ ತೇಷಾಮಖಿಲಾಶ್ಚ ಯೋಷಾಃ   ॥ ೨೨.೨೮॥

 

ಅವಳು ಪರಮಾತ್ಮನ ಅಧಿಕವಾದ ಅನುಗ್ರಹಕ್ಕೆ ಪಾತ್ರಳಷ್ಟೇ. ಸದಾಶಿವನಿಗಿಂತಲೂ, ಶೇಷನಿಗಿಂತಲೂ, ಗರುಡನಿಗಂತಲೂ ಹೆಚ್ಚಿನ ಭಗವಂತನ ಅನುಗ್ರಹ ದ್ರೌಪದಿಯಮೇಲಿದೆಯಷ್ಟೇ. ಅಂತಹ ಕೃಷ್ಣನು ಎಲ್ಲವನ್ನೂ ಕೇಳಿ, ಪ್ರತಿಜ್ಞೆಯನ್ನು ಮಾಡಿದ:

 

ಪತೀನ್ ಸಮಾಲಿಙ್ಗ್ಯ ವಿಮುಕ್ತಕೇಶ್ಯಾನ್ ಭೀಮಾಹತಾನ್ ದರ್ಶಯೇ ನಾನ್ಯಥೇತಿ ।

ತಾಂ ಸಾನ್ತ್ವಯಿತ್ವಾ ಮಧುರೈಃ ಸುವಾಕ್ಯೈರ್ನಾರಾಯಣೋ ವಾಚಮಿಮಾಂ ಜಗಾದ ॥ ೨೨.೨೯॥

 

ಆ ದುರ್ಯೋಧನ ಮೊದಲಾದವರ ಹೆಂಡತಿಯರು ಭೀಮಸೇನನಿಂದ ಹತರಾಗಿ ಬಿದ್ದ ತಮ್ಮ ಗಂಡಂದಿರನ್ನು ಅಪ್ಪಿ, ಕೂದಲನ್ನು ಬಿಚ್ಚಿಕೊಂಡು ಅಳುತ್ತಿರುವ ಘಟನೆಯನ್ನು ನಾನು ನಿನಗೆ ತೋರಿಸುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಹೇಳಿದ. ತದನಂತರ ಅವಳನ್ನು ಮಧುರವಾದ ಮಾತುಗಳಿಂದ ಸಾಂತ್ವಾನಗೊಳಿಸಿದ ಶ್ರೀಕೃಷ್ಣನು ಈ ಮಾತನ್ನು ಹೇಳಿದ:

 

ಯದೀಹಾಹಂ ಸ್ಥಿತೋ ನೈವಂ ಭವಿತಾSಹಂ ತ್ವಯೋಧಯಮ್ ।

ಸಾಲ್ವರಾಜಂ ದುರಾತ್ಮಾನಂ ಹತಶ್ಚಾಸೌ ಸುಪಾಪಕೃತ್           ॥ ೨೨.೩೦॥

 

ಒಂದುವೇಳೆ ನಾನು ನಿಮ್ಮ ಸಮೀಪದಲ್ಲಿಯೇ ಇದ್ದಿದ್ದರೆ  ಈರೀತಿ ಆಗುತ್ತಿರಲಿಲ್ಲ.  ದ್ವಾರಕಾಪಟ್ಟಣಕ್ಕೆ ದುರಾತ್ಮನಾದ ಸಾಲ್ವರಾಜ ಬಂದಿದ್ದ. ಅವನನ್ನು ಕುರಿತು ಯುದ್ಧಮಾಡಿದೆ. ಅತ್ಯಂತ ಪಾಪಿಷ್ಠನಾದ ಅವನು ಹತನಾದ.

Mahabharata Tatparya Nirnaya Kannada 22: 19-23

 

    ಸರ್ವಾಶ್ಚ ಚೇಷ್ಟಾ ಭಗವನ್ನಿಯುಕ್ತಾಃ ಸದಾ ಸಮಸ್ತಸ್ಯ ಚಿತೋSಚಿತಶ್ಚ।

    ತಥಾSಪಿ ವಿಷ್ಣುರ್ವಿನಿವಾರಯೇತ್ ಕ್ವಚಿದ್ ವಾಚಾ ವಿಧತ್ತೇ ಚ ಜನಾನ್ ವಿಡಮ್ಬಯನ್ ॥ ೨೨.೧೯॥

 

ಇಡೀ ಜಗತ್ತಿನಲ್ಲಿ ಎಲ್ಲಾ ಚೇತನ ಹಾಗೂ ಅಚೇತನಗಳ ಸಮಸ್ತ ಕ್ರಿಯೆಗಳೂ ಕೂಡಾ ಪರಮಾತ್ಮನ ಆಳ್ವಿಕೆಗೆ ಸಂಬಂಧಿಸಿದೆ. ಆದರೂ ನಾರಾಯಣನು ಆಗಾಗ ಜನರನ್ನು ಅನುಕರಿಸುತ್ತಾ, ಮಾತಿನಿಂದಲೇ ಅಕಾರ್ಯದ ವಿನಿವೃತ್ತಿ ಹಾಗೂ ಕಾರ್ಯದ ಪ್ರವೃತ್ತಿಯನ್ನು ಮಾಡುವನು. (ಹೀಗೆ  ಮಾಡೆಂದು ಹೇಳುವನು).

 

    ಮೈತ್ರೇಯ ಆಗಾದಥ ಭೂಪತಿಶ್ಚ ಪುತ್ರಾನ್ ಸಮಾಹೂಯ ಸಕರ್ಣ್ಣಸೌಬಲಾನ್ ।

    ಸಮ್ಪೂಜಯಾಮಾಸ ಮುನಿಂ ಸ ಚಾSಹ ದಾತುಂ ರಾಜ್ಯಂ ಪಾಣ್ಡವಾನ್ ಸಮ್ಪ್ರಶಂಸನ್ ॥ ೨೨.೨೦॥

 

ತದನಂತರ ಮೈತ್ರೇಯರು ಅಲ್ಲಿಗೆ ಬಂದರು. ಧೃತರಾಷ್ಟ್ರನಾದರೋ, ಕರ್ಣ-ಶಕುನಿಗಳಿಂದ ಒಡಗೂಡಿರುವ ಮಕ್ಕಳನ್ನು ಕರೆದು, ಮುನಿಗಳಿಗೆ ಪೂಜೆ ಮಾಡಿಸಿದನು. ಆ ಮೈತ್ರೇಯರು ಪಾಂಡವರ ಗುಣಗಳ ಬಗ್ಗೆ ಹೊಗಳುತ್ತಾ, ರಾಜ್ಯವನ್ನು ಹಿಂತಿರುಗಿಸುವಂತೆ ಹೇಳಿದರು.

 

ವಿಶೇಷತೋ ಭೀಮಬಲಂ ಶಶಂಸ ಕಿರ್ಮ್ಮೀರನಾಶಾದಿ ವದನ್ ಮುನೀನ್ದ್ರಃ ।

ಶ್ರುತ್ವಾSಸಹಂಸ್ತದ್ ಧೃತರಾಷ್ಟ್ರಪುತ್ರ ಆಸ್ಫಾಲಯಾಮಾಸ ನಿಜೋರುಮುಗ್ರಃ ॥ ೨೨.೨೧॥

 

ಮೈತ್ರೇಯರು ವಿಶೇಷವಾಗಿ ಕಿರ್ಮೀರನ ನಾಶ ಹೇಗಾಯಿತು ಎನ್ನುವುದನ್ನು ಹೇಳುತ್ತಾ, ಭೀಮಸೇನನ ಬಲವನ್ನು ಹೊಗಳಿದರು. ಅದನ್ನು ಕೇಳಿ ಸಹಿಸಲಾಗದೇ, ದುರ್ಯೋಧನನು ತನ್ನ ತೊಡೆಯನ್ನು ಅವಹೇಳನಕಾರಿಯಾಗಿ ತಟ್ಟಿದನು.

 

ಶಶಾಪ ಚೈನಂ ಮುನಿರುಗ್ರತೇಜಾಸ್ತವೋರುಭೇದಾಯ ಭವೇತ್ ಸುಯುದ್ಧಮ್ ।

ಇತ್ಯೂಚಿವಾನ್ ಧೃತರಾಷ್ಟ್ರಾನತೋsಪಿ ಯಯೌ ನ ಚೇದ್ ರಾಜ್ಯದಸ್ತ್ವಂ ತಥೇತಿ ॥ ೨೨.೨೨॥

 

ಆಗ ಉಗ್ರವಾದ ತಪಸ್ಸುಳ್ಳ ಮೈತ್ರೇಯರು ‘ನಿನ್ನ ತೊಡೆಯನ್ನು ಮುರಿಯಲಿಕ್ಕಾಗಿ ದೊಡ್ಡ ಯುದ್ಧ ನಡೆಯುತ್ತದೆ’ ಎಂದು ದುರ್ಯೋಧನನನ್ನು ಶಪಿಸಿದರು.  ಧೃತರಾಷ್ಟ್ರ ನಮಸ್ಕರಿಸಿದಾಗಿ(ಅವಿವೇಕಿಯಾದ ನನ್ನ ಮಗನ ಪರವಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದು ನಮಸ್ಕರಿಸಿದಾಗ) ‘ನೀನು ರಾಜ್ಯವನ್ನು ಕೊಟ್ಟರೆ ಹಾಗೆ ಆಗುವುದಿಲ್ಲ’ ಎಂದು ಹೇಳಿ ಹೊರಟುಹೋದರು.

 

[ಮೈತ್ರೇಯರಿಗೆ ಕಿರ್ಮೀರ ವಧೆಯ ಕುರಿತು ಪೂರ್ತಿಯಾಗಿ ಹೇಳಲು ದುರ್ಯೋಧನ ಬಿಡಲಿಲ್ಲ. ಆನಂತರ ಮೈತ್ರೇಯರು ಅಲ್ಲಿಂದ ಹೊರಡುವಾಗ ‘ವಿದುರನಲ್ಲಿ ಕಿರ್ಮೀರ ವಧೆಯ ಕುರಿತು ಕೇಳು ಎಂದು ಹೇಳಿ ಹೊರಟುಹೋದರು. ಮುಂದೆ ಧೃತರಾಷ್ಟ್ರನಿಂದ ಕೇಳಲ್ಪಟ್ಟ ವಿದುರ, ಯುದ್ಧನಡೆದ ಸ್ಥಳದಲ್ಲಿ ಯುದ್ಧದ ರಭಸಕ್ಕೆ ಮರಗಳು, ಪರ್ವತಗಳು ಪುಡಿಯಾಗಿರುವುದನ್ನು, ವಿವರಿಸಿ, ಯಾವ ರೀತಿ ಕಿರ್ಮೀರ ನಾಶವಾದ ಎನ್ನುವುದನ್ನು ವಿವರಿಸುತ್ತಾನೆ.]  

 

ಶ್ರುತ್ವಾ ತು ಕಿರ್ಮ್ಮೀರವಧಂ ಸ್ವಪಿತ್ರಾ ಪೃಷ್ಟಕ್ಷತ್ತ್ರೋಕ್ತಂ ಸೋSತ್ರಸದ್ ಧಾರ್ತ್ತರಾಷ್ಟ್ರಃ ।

ವನೇ ವಸನ್ತೋSಥ ಪೃಥಾಸುತಾಸ್ತೇ ವಾರ್ತ್ತಾಂ ಸ್ವಕೀಯಾಂ ಪ್ರಾಪಯಾಮಾಸುರಾಶು  ॥೨೨.೨೩॥

 

ತನ್ನ ತಂದೆಯಿಂದ ಕೇಳಲ್ಪಟ್ಟ, ವಿದುರನಿಂದ ಹೇಳಲ್ಪಟ್ಟ ಕಿರ್ಮೀರನ ವಧೆಯ ಕುರಿತು ಕೇಳಿ ದುರ್ಯೋಧನನು ತರತರನೆ ನಡುಗಿದ. ಇತ್ತ ಪಾಂಡವರು ತಮ್ಮ ಈ ವಾರ್ತೆಯನ್ನು(ನಡೆದ ಘಟನೆಯನ್ನು) ಕೃಷ್ಣನಿಗೆ ತಿಳಿಸಿದರು.

Thursday, March 24, 2022

Mahabharata Tatparya Nirnaya Kannada 22: 12-18

 

    ತಸ್ಮಿನ್ ಗತೇ ಭ್ರಾತೃವಿಯೋಗಕರ್ಶಿತಃ ಪಪಾತ ಭೂಮೌ ಸಹಸೈವ ರಾಜಾ ।

    ಸಙ್ಜ್ಞಾಮವಾಪ್ಯಾSದಿಶದಾಶು ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥

 

ವಿದುರನು ಹೊರಡಲು, ತಮ್ಮನ ಬೇರ್ಪಡೆಯಿಂದ ಸಂಕಟಗೊಂಡ ಧೃತರಾಷ್ಟ್ರನು ನೆಲಕ್ಕೆ ಕುಸಿದ. ಮಧ್ಯದಲ್ಲಿ ಮೂರ್ಛೆ ತಿಳಿದೆದ್ದಾಗ- ಸಂಜಯನನ್ನು ಕುರಿತು ಹೇಳಿದ: ‘ನಾನು ಬದುಕಬೇಕು ಎಂದಿದ್ದರೆ ಕೂಡಲೇ ನನ್ನ ತಮ್ಮನಾದ ವಿದುರನನ್ನು ಕರೆದು ತಾ ಎಂದು.

 

  ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್ ವಿದುರಂ ಶೀಘ್ರಮೇವ ।

  ಸೋSಪ್ಯಾಗತಃ ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ ಚೈನಮಾಶ್ಲಿಷತ್ ।

  ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ ಚೈನಮಾಘ್ರಾಯ ಲೇಭೇ ಪರಮಾಂ ಮುದಂ ತದಾ             ॥ ೨೨.೧೩॥

 

ಈರೀತಿಯಾಗಿ ಹೇಳಲ್ಪಟ್ಟ ಸಂಜಯನು ಪಾಂಡವರಿರುವಲ್ಲಿಗೆ ಹೋಗಿ, ಶೀಘ್ರದಲ್ಲಿಯೇ ವಿದುರನನ್ನು ಕರೆತಂದ. ಅವನಾದರೋ, ಬೇಗದಲ್ಲಿಯೇ ಅಣ್ಣನಿಂದ ಆದ ಅಪಕಾರ-ಅವಮಾನಗಳನ್ನು ಮರೆತು, ಅಣ್ಣನನ್ನು ನಮಿಸಿದ. ಧೃತರಾಷ್ಟ್ರ ವಿದುರನನ್ನು ಗಟ್ಟಿಯಾಗಿ ತಬ್ಬಿಕೊಂಡ. ತೊಡೆಯಮೇಲೆ ಏರಿಸಿಕೊಂಡು ವಿದುರನ ನೆತ್ತಿಯನ್ನು ಮೂಸಿ ಆನಂದವನ್ನು ಹೊಂದಿದ.

 

ಕ್ಷತ್ತಾರಮಾಯಾನ್ತಮುದೀಕ್ಷ್ಯ ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।

ಸಮ್ಮನ್ತ್ರ್ಯಹನ್ತುಂ ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ  ॥ ೨೨.೧೪॥

 

ಮರಳಿ ಬಂದಿರುವ ವಿದುರನನ್ನು ಕಂಡು ಶಕುನಿಯಿಂದ ಕೂಡಿದ ದುರ್ಯೋಧನಾದಿಗಳೆಲ್ಲರೂ ಹೊಟ್ಟೆಕಿಚ್ಚಿನಿಂದ, ಸಹಿಸಲಾಗದೇ, ತಾವೆಲ್ಲರೂ ಕೂಡಾ ಮಂತ್ರಾಲೋಚನೆ ಮಾಡುತ್ತಾ, ಪಾಂಡವರಲ್ಲಿ ಕನಿಷ್ಠಪಕ್ಷ ಒಬ್ಬನನ್ನು ಮೋಸದಿಂದ ಕೊಲ್ಲಲು ಕರ್ಣನಿಂದೊಡಗೂಡಿ ತೆರಳಿದರು.

 

ವಿಜ್ಞಾಯ ತೇಷಾಂ ಗಮನಂ ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।

ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥

 

ಈ ದುರ್ಯೋಧನಾದಿಗಳ ತೆರಳುವಿಕೆಯನ್ನು ತಿಳಿದು, ಎಲ್ಲಾ ಜನರ ಅಂತರ್ಯಾಮಿಯಾಗಿರುವ,  ಬ್ರಹ್ಮರುದ್ರಾದಿಗಳಿಗೂ ಒಡೆಯನಾಗಿರುವ ವೇದವ್ಯಾಸರು ಆಗಮಿಸಿ, ಧೃತರಾಷ್ಟ್ರನ ಕುರಿತು ‘ನಿನ್ನ ಮಗನನ್ನು ಕೂಡಲೇ ತಡೆಹಿಡಿ’ ಎಂದು ಹೇಳಿದರು.

 

ಅವಾಪ್ಯ ಪಾರ್ತ್ಥಾನಯಮದ್ಯ ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।

ಇತೀರಿತೇ ತೇನ ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥

 

 ‘ಈ ದುರ್ಯೋಧನನು ಈಗಲೇ ಪಾಂಡವರನ್ನು ಹೊಂದಿ ಅವನ ಎಲ್ಲಾ ಬಂಧುಗಳ ಜೊತೆಗೆ ನಾಶವಾಗುತ್ತಾನೆ. ಇದರಲ್ಲಿ ಸಂಶಯವಿಲ್ಲ’. ಎಂದು ವೇದವ್ಯಾಸರು ಹೇಳುತ್ತಿರಲು, ‘ನೀವೇ ತಡೆಯಬಹುದಲ್ಲ’ ಎನ್ನುತ್ತಾನೆ ಧೃತರಾಷ್ಟ್ರ. ಆಗ ವ್ಯಾಸರು ‘ನಾನು ಅವರೊಂದಿಗೆ ಮಾತನಾಡುವುದಿಲ್ಲ’ ಎನ್ನುತ್ತಾರೆ.

 

ಮೈತ್ರೇಯ ಆಯಾಸ್ಯತಿ ಸೋSಪಿ ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।

ತಾಂ ಚೇದ್ ಕರೋತ್ಯೇಷ ಸುತಸ್ತವಾಸ್ಯ ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥

 

‘ಮೈತ್ರೇಯನು ಬರುತ್ತಾನೆ, ಅವನೂ ಕೂಡಾ ತಿದ್ದುವ ಸಲುವಾಗಿ ದುರ್ಯೋಧನಾದಿಗಳಲ್ಲಿ ನೀತಿಯನ್ನು ಉಪದೇಶ ಮಾಡುತ್ತಾನೆ. ಅದನ್ನು ಪಾಲಿಸಿದರೆ ಇವನಿಗೆ ಮಂಗಳ ಉಂಟಾಗುತ್ತದೆ. ಇಲ್ಲದಿದ್ದರೆ ಮೈತ್ರೇಯನು ಶಾಪ ಕೊಡುತ್ತಾನೆ’.  

 

 ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ ತತ್ರಗತೇಷು ತೇಷು ।

ಸುಯೋಧನಾದ್ಯೇಷು ಹತೇಷು ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥

 

ಈರೀತಿಯಾಗಿ ಧೃತರಾಷ್ಟ್ರನಿಗೆ ಹೇಳಿದ, ಎಣೆಯಿರದ ಕಸುವಿನ ವೇದವ್ಯಾಸರು ಅಲ್ಲಿಂದ ತೆರಳಿದರು. ದುರ್ಯೋಧನಾದಿಗಳು ಕಾಡಿಗೆ ಹೋದರೆ ಬೇಗ ಸಾಯುತ್ತಾರೆ. ಆಗ ಭೂಭಾರ ನಾಶವಾಗುತ್ತಿರಲಿಲ್ಲ’ ಈ ಎಲ್ಲಾ ಕಾರಣದಿಂದ ವೇದವ್ಯಾಸರು ಸ್ವಯಂ ದುರ್ಯೋಧನನನ್ನು ಮಾತನಾಡಿಸಲಿಲ್ಲ.

Wednesday, March 23, 2022

Mahabharata Tatparya Nirnaya Kannada 22: 06-11

 

ಬಭಾರ ತೇನೈವ ಯುಧಿಷ್ಠಿರಸ್ತಾನ್ ಪ್ರತ್ಯೇಕಶಸ್ತ್ರಿಂಶತದಾಸಿದಾಸಕಾನ್ ।

ಸುವರ್ಣ್ಣಪಾತ್ರೇಷು ಹಿ ಭುಞ್ಜತೇ ಯೇ ಗೃಹೇ ತದೀಯೇ ಬಹುಕೋಟಿದಾಸಿಕೇ   ॥ ೨೨.೦೬॥

 

ಯುಧಿಷ್ಠಿರನು ಯಾವ ಋಷಿ-ಮುನಿಗಳು ಬಹಳಕೋಟಿ ದಾಸ-ದಾಸಿಯರನ್ನು ಹೊಂದಿದ್ದ ಧರ್ಮರಾಜನ ಮನೆಯಲ್ಲಿ(ಇಂದ್ರಪ್ರಸ್ಥದಲ್ಲಿ), ಬಂಗಾರದ ಪಾತ್ರೆಯಲ್ಲಿ ಉಣ್ಣುತ್ತಿದ್ದರೋ, ಅಂತಹ ಪ್ರತಿಯೊಬ್ಬರೂ ೩೦ ಮಂದಿ ದಾಸರೂ, ೩೦ ಮಂದಿ ದಾಸಿಯರೂ ಇರುವ ಆ ಯತಿಯಾದಿಗಳನ್ನು  ಈ ಅಕ್ಷಯ ಪಾತ್ರೆಯಿಂದಲೇ  ಪೋಷಿಸಿದನು.

 

ಸತ್ಸಙ್ಗಮಾಕಾಙ್ಕ್ಷಿಣ ಏವ ತೇSವಸನ್  ಪಾರ್ತ್ಥೈಃ ಸಹಾನ್ಯೇ ಚ ಮುನೀನ್ದ್ರವೃನ್ದಾಃ ।

ಶ್ರುಣ್ವನ್ತ ಏಭ್ಯಃ ಪರಮಾರ್ತ್ಥಸಾರಾಃ ಕಥಾ ವದನ್ತಶ್ಚ ಪುರಾತನಾಸ್ತಥಾ ॥ ೨೨.೦೭॥

 

ಆ ಎಲ್ಲಾ ಯತಿಗಳು ಸಜ್ಜನರ ಸಂಗವಾಗಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಪಾಂಡವರ ಜೊತೆಗೆ ವಾಸಮಾಡಿದರು. ಈ ಎಲ್ಲರ ಸಮೂಹವು ನಾರಾಯಣನ ಮಹಿಮೆಯನ್ನೇ ಸಾರವಾಗಿ ಉಳ್ಳ ಪುರಾತನ ಕಥೆಗಳನ್ನು ಹೇಳುತ್ತಾ, ಕೇಳುತ್ತಾ ವಾಸಮಾಡಿದರು.   

 

ಏವಂ ಗಜಾನಾಂ ಬಹುಕೋಟಿವೃನ್ದಾಂಸ್ತಥಾ ರಥಾನಾಂ ಚ ಹಯಾಂಶ್ಚ ವೃನ್ದಶಃ ।

ವಿಸೃಜ್ಯ ರತ್ನಾನಿ ನರಾಂಶ್ಚ ವೃನ್ದಶೋ ವನೇ ವಿಜಹ್ರುರ್ದ್ದಿವಿ ದೇವವತ್ ಸುಖಮ್             ॥ ೨೨.೦೮॥

 

ಪಾಂಡವರು ಇಂದ್ರಪ್ರಸ್ಥದಲ್ಲಿದ್ದ ಕೋಟಿ-ಕೋಟಿ ಸಂಖ್ಯೆಯ ಆನೆಗಳನ್ನೂ, ರಥಗಳನ್ನೂ, ಕುದುರೆಗಳ ವೃನ್ದವನ್ನೂ ಬಿಟ್ಟು, ರತ್ನ ಮೊದಲಾದವುಗಳನ್ನೂ ಬಿಟ್ಟು, ತಮ್ಮ ಸೇವೆ ಮಾಡುವ ಅಧಿಕಾರಿ ಮೊದಲಾದವರನ್ನೂ ಕೂಡಾ ಬಿಟ್ಟು,  ಯಾವರೀತಿ ದೇವತೆಗಳು ಸ್ವರ್ಗದಲ್ಲಿ ವಿಹಾರಮಾಡುತ್ತಾರೋ ಆರೀತಿ ಕಾಡಿನಲ್ಲಿ ಸುಖವಾಗಿ ವಿಹಾರ ಮಾಡಿದರು.

 

ಗವಾಂ ಚ ಲಕ್ಷಂ ಪ್ರದದಾತಿ ನಿತ್ಯಶಃ ಸುವರ್ಣ್ಣಭಾರಾಂಶ್ಚ ಶತಂ ಯುಧಿಷ್ಠಿರಃ ।

ಸಭ್ರಾತೃಕೋSಸೌ ವನಮಾಪ್ಯ ಶಕ್ರವನ್ಮುಮೋದ ವಿಪ್ರೈಃ ಸಹಿತೋ ಯಥಾಸುಖಮ್ ॥೨೨.೦೯ ॥

 

ಲಕ್ಷ ಹಸುಗಳನ್ನೂ, ಬಂಗಾರದ ಗಟ್ಟಿಗಳನ್ನೂ ನಿತ್ಯವೂ ದಾನ ಮಾಡುತ್ತಿದ್ದ ಯುಧಿಷ್ಠಿರ, ಈಗ ಕಾಡಿಗೆ ಬಂದು, ಬ್ರಾಹ್ಮಣರಿಂದ ಕೂಡಿಕೊಂಡು, ಸುಖವಾಗಿಯೇ ತನ್ನ ತಮ್ಮಂದಿರಿಂದ ಕೂಡಿ ಇಂದ್ರನಂತೆ ಸುಖಿಸಿದ.   

 

ಪಾರ್ತ್ಥೇಷು ಯಾತೇಷು ಕಿಮತ್ರ ಕಾರ್ಯ್ಯಮಿತಿ ಸ್ಮ ಪೃಷ್ಟೋ ವಿದುರೋSಗ್ರಜೇನ ।

ಆಹೂಯ ರಾಜ್ಯಂ ಪ್ರತಿಪಾದಯೇತಿ ಪ್ರಾಹೈನಮಾಹಾಥ ರುಷಾSSಮ್ಬಿಕೇಯಃ ॥೨೨.೧೦॥

 

ಪಾಂಡವರು ಕಾಡಿಗೆ ತೆರಳಲು, ‘ಈ ವಿಚಾರದಲ್ಲಿ ಏನು ಮಾಡಬೇಕು’ ಎಂದು ಅಣ್ಣನಾದ ಧೃತರಾಷ್ಟ್ರನಿಂದ ಕೇಳಲ್ಪಟ್ಟ ವಿದುರನು ‘ಪಾಂಡವರನ್ನು ಕರೆದು ರಾಜ್ಯವನ್ನು ಹಿಂತಿರುಗಿಸು ಎಂದ. ಆಗ ಅಂಬಿಕೆಯ ಮಗನಾದ ಧೃತರಾಷ್ಟ್ರನು ಸಿಟ್ಟಿನಿಂದ ಹೇಳಿದ:

 

ಜ್ಞಾತಂ ಪ್ರತೀಪೋSಸಿ ಮಮಾSತ್ಮಜಾನಾಂ ನ ಮೇ ತ್ವಯಾ ಕಾರ್ಯ್ಯಮಿಹಾಸ್ತಿ ಕಿಞ್ಚಿತ್ ।

ಯಥೇಷ್ಟತಸ್ತಿಷ್ಠ ವಾ ಗಚ್ಛ ವೇತಿ ಪ್ರೋಕ್ತೋ ಯಯೌ ವಿದುರಃ ಪಾಣ್ಡುಪುತ್ರಾನ್ ॥೨೨.೧೧ ॥

 

‘ಸ್ಪಷ್ಟವಾಗಿ ನೀನು ನನ್ನ ಮಕ್ಕಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಿನ್ನಿಂದ ನನಗೆ ಏನೂ ಆಗಬೇಕಾದ್ದಿಲ್ಲ. ಬಯಸಿದರೆ ಇಲ್ಲಿ ಇರಬಹುದು. ಇಲ್ಲವೆಂದರೆ ಇಲ್ಲಿಂದ ತೊಲಗಬಹುದು’ ಎಂದು. ಈರೀತಿ ಧೃತರಾಷ್ಟ್ರನಿಂದ ಗಟ್ಟಿಯಾಗಿ ಹೇಳಲ್ಪಟ್ಟ ವಿದುರನು ಪಾಂಡವರ ಬಳಿಗೆ ತೆರಳಿದ.