ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 30, 2022

Mahabharata Tatparya Nirnaya Kannada 22-372-378

 

ಗತೇ ಭೀಮೇ ನಿಮಿತ್ತಾನಿ ದೃಷ್ಟ್ವಾ ರಾಜಾ ಯುಧಿಷ್ಠಿರಃ ।

ಪಪ್ರಚ್ಛ ಕ್ವ ಗತೋ ಭೀಮ ಇತಿ ಕೃಷ್ಣಾಂ ಚಲನ್ಮನಾಃ ॥೨೨.೩೭೨॥

 

ಇತ್ತ, ಯಾವಾಗ ಭೀಮಸೇನ ಹೊರಟಿದ್ದನೋ ಆನಂತರ ನಡೆದ ನಿಮಿತ್ತಗಳನ್ನು ಕಂಡು, ಕಳವಳಗೊಂಡ ಮನಸ್ಸಿನವನಾದ ಧರ್ಮರಾಜನು ‘ಭೀಮಸೇನ ಎಲ್ಲಿಗೆ ಹೋಗಿದ್ದಾನೆ ಎಂದು  ದ್ರೌಪದಿಯನ್ನು ಕೇಳಿದನು.

 

ಯಾತಂ ಮೃಗಾರ್ತ್ಥಂ ಸ ನಿಶಮ್ಯ ತಸ್ಯಾಸ್ತದೂರುವೇಗಾತ್ ಪತಿತಾನ್ ನಗೇನ್ದ್ರಾನ್ ।

ದೃಷ್ಟ್ವಾ ಪಥಾ ತೇನ ಯಯೌ ಸ ತತ್ರ ದೃಷ್ಟ್ವಾ ಚ ಸರ್ಪ್ಪಾವೃತಮನ್ವಪೃಚ್ಛತ್ ॥೨೨.೩೭೩॥

 

ಸ ಕಾರಣಂ ನಹುಷಾತ್ ಸರ್ವಮೇವ ಶುಶ್ರಾವ ತತ್ಪ್ರಶ್ನಮಶೇಷತಶ್ಚ ।

ಭ್ರಾತೃಸ್ನೇಹಾದ್ ವ್ಯಾಕರೋದ್ ಧರ್ಮ್ಮಸೂನುಸ್ತದೈವ ಸೋSಪ್ಯಾರುಹತ್ ಸ್ವರ್ಗ್ಗಲೋಕಮ್ ॥೨೨.೩೭೪॥

 

‘ಬೇಟೆಗಾಗಿ ತೆರಳಿದ್ದಾನೆ’ ಎಂದು ದ್ರೌಪದಿಯಿಂದ ಕೇಳಿದ ಧರ್ಮರಾಜನು, ಭೀಮನ ನಡಿಗೆಯ ರಭಸಕ್ಕೆ, ಅವನ ಸಂಸ್ಪರ್ಶದಿಂದ ಬಿದ್ದಿರುವ ಮರಗಳಿಂದ ಸೂಚಿತವಾದ, ಅವನು ಹೋಗಿರುವ ದಾರಿಯನ್ನು ಹಿಡಿದು,  ಆ ದಾರಿಯಲ್ಲೇ ಹೆಬ್ಬಾವಿನಿಂದ ಸುತ್ತಲ್ಪಟ್ಟ  ಭೀಮನನ್ನು ನೋಡಿ ನಹುಷನನ್ನು ಕುರಿತು ಕೇಳಿದನು: 

ಧರ್ಮರಾಜನು ನಹುಷನಿಂದ ಎಲ್ಲಾ ಕಾರಣವನ್ನು ಕೇಳಿ, ತನ್ನ ತಮ್ಮನ ಮೇಲಿನ ಪ್ರೀತಿಯಿಂದ ಸಂಪೂರ್ಣವಾಗಿ ಅವನ ಪ್ರಶ್ನೆಗೆ ಉತ್ತರವನ್ನೂ ಕೊಟ್ಟನು. ಅದಾಗಲೇ ಶಾಪದಿಂದ ಮುಕ್ತನಾದ ನಹುಷ  ಸ್ವರ್ಗಲೋಕವನ್ನೇರಿದನು.

 

 

ದಿವ್ಯಾಮ್ಬರೇ ಕುಣ್ಡಲಿನಿ ಸ್ವಪೂರ್ವೇ ಗತೇ ವಿಮಾನೇನ ಸ ಧರ್ಮ್ಮರಾಜಃ ।

ಭೀಮಶ್ಚಾSಯಾತ್ ಸ್ವಾಶ್ರಮಾಯೈವ ಸರ್ವಂ ಯುಧಿಷ್ಠಿರಃ ಕಥಯಾಮಾಸ ತತ್ರ ॥೨೨.೩೭೫॥

 

ತನ್ನ ವಂಶದ ಮೂಲಪುರುಷನಾಗಿರುವ ನಹುಷನು ದಿವ್ಯವಾದ ವಸ್ತ್ರವುಳ್ಳವನಾಗಿಯೂ, ಕುಂಡಲಧಾರಿಯಾಗಿಯೂ, ಆಕಾಶರಥದಲ್ಲಿ ಸ್ವರ್ಗಲೋಕಕ್ಕೆ ತೆರಳಲು, ಧರ್ಮರಾಜ ಮತ್ತು ಭೀಮಸೇನ ತಮ್ಮ ಆಶ್ರಮಕ್ಕೆ ಮರಳಿ ಬಂದರು. ಅಲ್ಲಿ ಯುಧಿಷ್ಠಿರ ಎಲ್ಲರ ಮುಂದೆ ಎಲ್ಲಾ ಕಥೆಯನ್ನೂ ಹೇಳಿದನು.

 

ಶ್ರುತ್ವಾ ಕೃಷ್ಣಾ ಭ್ರಾತರಶ್ಚಾಸ್ಯ ಸರ್ವೇ ಸರ್ವೇ ಮುನೀನ್ದ್ರಾ ಭೀಮಸೇನೇSತಿಭಕ್ತಾಃ ।

ವ್ರೀಳಾಂ ಯಯುರ್ಭೀಮಸೇನಗ್ರಹೇಣ ತಥಾSಬ್ರುವನ್ ಸ್ನೇಹತೋ ಭೀಮಸೇನಮ್ ॥೨೨.೩೭೬॥

 

ಭೀಮಸೇನನಲ್ಲಿ ಅತ್ಯಂತ ಭಕ್ತರಾಗಿರುವ ದ್ರೌಪದಿಯು, ಅವನ ಸಹೋದರರು, ಎಲ್ಲಾ ಮುನಿಶ್ರೇಷ್ಠರೂ ಕೂಡಾ, ನಹುಷನ ಕೈಯಲ್ಲಿ ಭೀಮಸೇನ ಸಿಕ್ಕಿದ್ದ ಎನ್ನುವುದನ್ನು ಕೇಳಿ ಬಹಳ ನಾಚಿಕೊಂಡರು. ಹಾಗೆಯೇ ಭೀಮಸೇನನಲ್ಲಿ ಪ್ರೀತಿಯಿಂದ ಹೀಗೆ ಹೇಳಿದರು:

 

ನೈತಾದೃಶಂ ಸಾಹಸಂ ತೇSನುರೂಪಂ  ಶಕ್ತೋSಪಿ ಯತ್ ಸ್ವಾತ್ಮನೋ ಮೋಕ್ಷಣಾಯ ।

ನೈವಾSಚರೋ ಯತ್ನಮತೋ ನಿಜಾನಾಂ ಮಹದ್ ದುಃಖಂ ಹೃದಯೇ ಪ್ರಾರ್ಪ್ಪಯಸ್ತ್ವಮ್ ॥೨೨.೩೭೭॥

 

‘ಈರೀತಿಯಾಗಿರುವ ಸಾಹಸವು ನಿನಗೆ ಯೋಗ್ಯವಾದುದ್ದಲ್ಲ.. ಯಾವ ಕಾರಣದಿಂದ ತನ್ನನ್ನು ಬಿಡಿಸಿಕೊಳ್ಳಲು ಶಕ್ತನಾದರೂ ಪ್ರಯತ್ನವನ್ನೂ ಕೂಡಾ ನೀನು ಮಾಡಲಿಲ್ಲವೋ, ಅದರಿಂದ ನಿನ್ನವರಿಗೆ ಮಹಾದುಃಖವನ್ನು ಹೃದಯದಲ್ಲಿ ಉಂಟು ಮಾಡಿರುವೆ’.

 

ಮೈವಂ ಪುನಃ ಕಾರ್ಯ್ಯಮಿತಿ ಬ್ರುವನ್ತಃ ಸಮಾಶ್ಲಿಷನ್ ಸರ್ವ ಏವೈತ್ಯ ಭೀಮಮ್ ।

ತತೋSಹೋಭಿಃ ಕೈಶ್ಚಿದಾಪುಃ ಕುರೂಣಾಂ ರಾಷ್ಟ್ರಂ ಪಾರ್ತ್ಥಾ ಮುನಿಮುಖ್ಯೈಃ ಸಮೇತಾಃ ॥೨೨.೩೭೮॥

 

‘ಈರೀತಿಯಾಗಿ ಮತ್ತೆ ಮಾಡಬೇಡ’ ಎಂದು ಹೇಳುತ್ತಾ, ಎಲ್ಲರೂ ಭೀಮನನ್ನು ಹೊಂದಿ ಆಲಿಂಗಿಸಿದರು. ತದನಂತರ ಕೆಲವು ದಿನಗಳಾದ ಮೇಲೆ ಪಾಂಡವರು ಮುನಿಗಳಿಂದ ಕೂಡಿದವರಾಗಿ ಹಸ್ತಿನಾವತಿಯ ಹತ್ತಿರದ ಕಾಡಿಗೆ ಬಂದರು. 

Mahabharata Tatparya Nirnaya Kannada 22-366-371

 

ಭ್ರಾತೃಮಾತ್ರಾದಿಷು ಸ್ನೇಹಾತ್ ಕ್ಷಿಪ್ರಮಾತ್ಮವಿಮೋಕ್ಷಣಮ್ ।

ಇಚ್ಛನ್ನಪಿ ನ ಮೋಕ್ಷಾಯ ಯತ್ನಂ ಚಕ್ರೇ ವೃಕೋದರಃ ॥೨೨.೩೬೬॥

 

ತನ್ನ ಅಣ್ಣ-ತಮ್ಮಂದಿರಲ್ಲಿ, ತಾಯಿ ಹಾಗೂ ದ್ರೌಪದಿ ಮೊದಲಾದವರಲ್ಲಿನ ಸ್ನೇಹದಿಂದಾಗಿ, ಬೇಗನೆ ತನ್ನ ಬಿಡುಗಡೆಯನ್ನು ಬಯಸಿದರೂ(ತಡವಾದಲ್ಲಿ ಅವರು ಸಂಕಟಪಡಬಹುದು ಎಂದು ಚಿಂತಿಸಿದರೂ), ಭೀಮಸೇನನು ತನ್ನನ್ನು ಬಿಡಿಸಿಕೊಳ್ಳುವ ಪ್ರಯತ್ನವನ್ನು ಮಾತ್ರ ಮಾಡಲಿಲ್ಲ.  

 

ಸರ್ವದೇವಮುನೀನ್ದ್ರಾಣಾಂ ತಪ ಆದಾತುಮತ್ರಗಮ್ ।

ಭ್ರಾತ್ರಾದಿಷು ಸ್ನೇಹವಶಾನ್ನ ಸ್ಥಾತವ್ಯಮಿಹೇತ್ಯಪಿ  ॥೨೨.೩೬೭॥

 

ಮನ್ವಾನಃ ಕಾಲತೋ ಭಙ್ಗಂ ಸ್ವಯಮೇವೈಷ ಯಾಸ್ಯತಿ ।

ಆಜ್ಞಯಾ ವಾಸುದೇವಸ್ಯ ದಾರ್ಢ್ಯಾದ್ ದೇಹಸ್ಯ ಮೇ ತಥಾ ॥೨೨.೩೬೮॥

 

‘ಎಲ್ಲಾ ದೇವತೆಗಳ, ಮುನಿಶ್ರೇಷ್ಠರ ತಪಸ್ಸನ್ನು ನಹುಷನಿಂದ ಸ್ವೀಕರಿಸಲು ನಾನು ಇಲ್ಲಿ ಈ ಹಾವಿನ ತೆಕ್ಕೆಯಲ್ಲಿ  ಇರಬೇಕು. ಆದರೆ ಅಣ್ಣ-ತಮ್ಮಂದಿರ ಸ್ನೇಹಾತಿಶಯವಶದಿಂದ ಹೆಚ್ಚುಕಾಲ ಇಲ್ಲಿ ಇರಬಾರದು’ ಎಂದು ಭೀಮಸೇನ ಮನಸ್ಸಿನಲ್ಲಿ ಚಿಂತಿಸಿದರೂ, ಈ ಅಜಗರರೂಪಿ ನಹುಷ ಕಾಲಾಂತರದಲ್ಲಿ (ಸ್ವಲ್ಪ ಸಮಯದ ನಂತರ) ಪರಮಾತ್ಮನ ಆಜ್ಞೆಯ ಕಾರಣದಿಂದಲೂ, ಹಾಗೆಯೇ ನನ್ನಲ್ಲಿರುವ ದೇಹದಾರ್ಢ್ಯ ಸಹಿಸದೇ ಅವನಾಗಿಯೇ ಬಿಟ್ಟು ಹೋಗುತ್ತಾನೆ ಎಂದುಕೊಂಡು ಸುಮ್ಮನಿದ್ದನು.

 

ಸ್ರಸ್ತಾಙ್ಗೇ ಪತಿತೇ ಸರ್ಪ್ಪೇ ಯಾಸ್ಯಾಮೀತಿ ವಿಚಿನ್ತಯನ್ ।

ತಸ್ಥೌ ಭೀಮೋ ಹರಿಂ ದ್ಧ್ಯಾಯನ್ ಸ್ವಭಾವಾನ್ನ ತದಿಚ್ಛಯಾ ॥೨೨.೩೬೯॥

 

‘ನಹುಷನು ತನ್ನ ಬಲಹ್ರಾಸಗೊಂಡು ಬಿದ್ದ ಮೇಲೆ ನಾನು ಇಲ್ಲಿಂದ ತೆರಳುತ್ತೇನೆ ಎಂದು ಚಿಂತಿಸಿದ ಭೀಮಸೇನನು, ಪರಮಾತ್ಮನನ್ನು ತನ್ನ ಸ್ವಭಾವದಂತೆ ಧ್ಯಾನ ಮಾಡುತ್ತಾ ನಿಂತನು. ಅವನು ಸ್ವಭಾವಸಹಜವಾಗಿ ಧ್ಯಾನ ಮಾಡುತ್ತಿದ್ದನೇ ಹೊರತು ಅಜಗರದಿಂದ ಬಿಡುಗಡೆ ಬಯಸಿ ಧ್ಯಾನಿಸುತ್ತಿರಲಿಲ್ಲ.  

 

ತದೈವ ಬ್ರಹ್ಮವಚನಾತ್  ಪೂರ್ವೋಕ್ತಾತ್  ಕೇಶವಾಜ್ಞಯಾ ।

ಬಲಂ ತಪಶ್ಚ ಸರ್ವಸ್ಯ ತತ್ಸ್ಥಮಾಯಾದ್ ವೃಕೋದರಮ್ ॥೨೨.೩೭೦॥

 

ಆಗಲೇ, ಬ್ರಹ್ಮದೇವರ ಮಾತಿನಿಂದಲೂ, ಭಗವಂತನ ಆಜ್ಞೆಯಿಂದಲೂ, ನಹುಷನಲ್ಲಿದ್ದ ದೇವಾದಿಗಳೆಲ್ಲರ  ಬಲ ಹಾಗೂ ತಪಸ್ಸು ಭೀಮಸೇನನನ್ನು ಆಶ್ರಯಿಸಿತು.

 

ಪೂರಿತೇ ನಹುಷಸ್ಥೇನ ತಪಸಾ ಚ ಬಲೇನ ಚ ।

ಭೀಮೇ ಸ ನಹುಷೋSಥಾSಸೀತ್ ಸ್ರಸ್ತಭೋಗಃ ಶನೈಃ ಶನೈಃ ॥೨೨.೩೭೧॥

 

ನಹುಷನಲ್ಲಿರುವ ತಪಸ್ಸಿನಿಂದ ಹಾಗೂ ಬಲದಿಂದ ಭೀಮಸೇನನು ತುಂಬಲ್ಪಡುತ್ತಿರಲು, ನಹುಷನು ಬಲಹ್ರಾಸಗೊಂಡ ಮೈಯುಳ್ಳವನಾಗಿ ನಿಧಾನವಾಗಿ ಭೀಮಸೇನನ ಮೇಲಿನ ಬಂಧನವನ್ನು ಸಡಿಲಗೊಳಿಸಿದನು.  

Saturday, October 29, 2022

Mahabharata Tatparya Nirnaya Kannada 22-356-365

 

ತಸ್ಮಿನ್ನೇವಂ ನಿಪತಿತೇ ಬ್ರಹ್ಮಣಃ ಶಾಪಕಾರಣಾತ್ ।

ಅಷ್ಟಾವಿಂಶತಿಮೇ ಪ್ರಾಪ ಯುಗೇ ಭೀಮಸ್ತಮುಲ್ಬಣಮ್ ॥೨೨.೩೫೬॥

 

ಈ ರೀತಿಯಾಗಿ ನಹುಷನು ಬ್ರಹ್ಮಶಾಪದ ನಿಮಿತ್ತವಾಗಿ ಅಜಗರನಾಗಿ ಭೂಮಿಯಲ್ಲಿ ಬಿದ್ದ. ಇದೀಗ ೨೮ನೆಯ ದ್ವಾಪರಯುಗದಲ್ಲಿ ಭೀಮನು ಅವನನ್ನು ಹೊಂದಿದ.[ಅಂದರೆ ಇದು ಯುಗ-ಯುಗಗಳ ಕಥೆ]

 

ಜಾನನ್ನೇವ ತದೀಯಂ ತತ್ ತಪ ಆದಾತುಮೀಪ್ಸಯಾ ।

ಯತ್ತತ್ ಸುರಾಣಾಂ ಸರ್ವೇಷಾಂ ಮುನೀನಾಂ ಚ ತಪಃ ಸ್ಥಿತಮ್ ॥೨೨.೩೫೭॥

 

ತದ್ ಗೃಹೀತುಂ ವಶಗವದಿಚ್ಛಯೈವಾSಸ ಮಾರುತಿಃ ।

ದೇವಾನಾಂ ಹಿ ನೃಜಾತಾನಾಮಲ್ಪಂ ವ್ಯಕ್ತಂ ಭವೇದ್ ಬಲಮ್  ॥೨೨.೩೫೮॥

 

ಇಚ್ಛಯಾ ವ್ಯಕ್ತತಾಂ ಯಾತಿ ವಾಯೋರನ್ಯೇಷು ತಚ್ಚ ನ ।

ನಿತ್ಯವ್ಯಕ್ತಾ ಗುಣಾ ವಿಷ್ಣೋರಿತಿ ಶಾಸ್ತ್ರಸ್ಯ ನಿರ್ಣ್ಣಯಃ ॥೨೨.೩೫೯॥

 

ಅಜಗರ ರೂಪದಲ್ಲಿರುವವನು ನಹುಷ ಎಂದು ತಿಳಿದರೂ ಕೂಡಾ, ಅವನ ಒಳಗಡೆ ಇರುವ, ಅವನ ಯೋಗ್ಯತೆಗೆ ಮೀರಿದ ತಪಸ್ಸನ್ನು, ದೇವತೆಗಳ ಹಾಗು ಎಲ್ಲಾ ಮುನಿಗಳ ಯಾವ ವಿಶೇಷವಾದ ತಪಸ್ಸು ನಹುಷನಲ್ಲಿತ್ತೋ, ಅವೆಲ್ಲವನ್ನೂ ಸ್ವೀಕರಿಸುವುದಕ್ಕಾಗಿಯೇ ಭೀಮಸೇನನು ಸ್ವಇಚ್ಛೆಯಿಂದಲೇ ಅಜಗರನ  ವಶಕ್ಕೆ ಒಳಗಾದಂತೆ ಹೋಗಿ ಸಿಕ್ಕಿಕೊಂಡ.

ಪರಮಾತ್ಮನಿಗೆ ಅವತಾರ ಕಾಲದಲ್ಲೇ ಆಗಲೀ, ಯಾವುದೇ ರೂಪದಲ್ಲೇ ಆಗಲಿ, ಮೂಲ ಗುಣಗಳು ನಿತ್ಯವ್ಯಕ್ತ. ಇದು ಶಾಸ್ತ್ರದ ನಿರ್ಣಯ.

 

ಏವಮನ್ಯೇSಪಿ ಹಿ ಗುಣಾ ಮಾನುಷಾದಿಷು ಜನ್ಮಸು ।

ದೇವಾನಾಂ ಮಾನುಷಾದೌ ತು ಶಕ್ಯೇSಪ್ಯವ್ಯಕ್ತತಾಕೃತೇಃ ॥೨೨.೩೬೦॥

 

ಧರ್ಮ್ಮವೃದ್ಧಿರ್ಭವೇತ್ ತೇಷಾಂ ಪ್ರೀತೋ ಭವತಿ ಕೇಶವಃ ।

ತನ್ಮಾನುಷೇ ಬಲೇ ತಸ್ಯ ವರಾದ್ ವಾರಿತವತ್ ಸ್ಥಿತೇ ॥೨೨.೩೬೧॥

 

ದೈವಂ ಬಲಂ ನ ಶಕ್ತೋSಪಿ ವ್ಯಕ್ತಂ ಚಕ್ರೇ ನ ಮಾರುತಿಃ ।

ಆತ್ಮಮೋಕ್ಷಾಯ ನ ಪ್ರಶ್ನಾನ್ ವ್ಯಾಜಹಾರ ಸ ಚಾಭಿಭೂಃ  ॥೨೨.೩೬೨॥

 

ಮನುಷ್ಯರಾಗಿ ಅವತರಿಸಿದ ದೇವತೆಗಳಿಗೆ ಅವರ ಸ್ವರೂಪದ ಬಲವು ಯಥಾಯೋಗ್ಯವಾಗಿ ಸ್ವಲ್ಪಸ್ವಲ್ಪ ಅಭಿವ್ಯಕ್ತವಾಗುತ್ತದೆ. ಆದರೆ  ಮುಖ್ಯಪ್ರಾಣನಿಗೆ ಮಾನವ ಅವತಾರದಲ್ಲೂ ಕೂಡಾ ಅವನ ಇಚ್ಛೆಯಂತೆ ಜ್ಞಾನ-ಬಲಾದಿ ಗುಣಗಳು  ಸಂಪೂರ್ಣವಾಗಿ ಅಭಿವ್ಯಕ್ತವಾಗುತ್ತದೆ. 

ದೇವತೆಗಳು ಮನುಷ್ಯಜನ್ಮದಲ್ಲಿ ಬಂದಾಗ, ಶಕ್ತಿ ಇದ್ದೂ ತಮ್ಮ ಸ್ವರೂಪಬಲವನ್ನು ಸಂಪೂರ್ಣವಾಗಿ ಅಭಿವ್ಯಕ್ತಿಗೊಳಿಸದಿದ್ದರೆ, ಆಗ ಅವರ ಪುಣ್ಯದ ಅಭಿವೃದ್ಧಿಯಾಗುತ್ತದೆ ಮತ್ತು ಇದು ಭಗವಂತನಿಗೆ ಅತ್ಯಂತ ಪ್ರಿಯ.

ಮನುಷ್ಯಜನ್ಮದಲ್ಲಿನ ಭೀಮನ ಬಲವು ಬ್ರಹ್ಮನ ವರದ ಕಾರಣದಿಂದ ಇಲ್ಲಿ ತಡೆಯಲ್ಪಟ್ಟಂತೆ ಇರಲು, ಅವನು ತನ್ನ ಮೂಲಸ್ವರೂಪದ ಬಲವನ್ನು ವ್ಯಕ್ತಪಡಿಸಲು ಶಕ್ತನಾಗಿದ್ದರೂ ಕೂಡಾ, ಅದನ್ನು ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲ, ತನ್ನ ಬಿಡುಗಡೆಗಾಗಿ ನಹುಷ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಸಮರ್ಥನಿದ್ದರೂ ಉತ್ತರಿಸಲಿಲ್ಲ.

 

[ತನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ ನಿನ್ನನ್ನು ಬಿಡುಗಡೆಗೊಳಿಸುತ್ತೇನೆ ಎಂದು ನಹುಷ ಹೇಳಿದಾಗ, ಆತನ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದರೂ ಕೂಡಾ ಭೀಮ ಉತ್ತರಿಸಲಿಲ್ಲ. ಏಕೆ ಉತ್ತರಿಸಲಿಲ್ಲ ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾರೆ:]

 

ವಿದ್ಯೋಪಜೀವನಂ ಧರ್ಮ್ಮೋ ವಿಪ್ರಾಣಾಮಪಿ ನೋ ಯತಃ ।

ಕಿಮುತ ಕ್ಷತ್ರಿಯಸ್ಯೇತಿ ಜಾನನ್ನಪಿ ವೃಕೋದರಃ  ॥೨೨.೩೬೩॥

 

ತತ್ಪ್ರಶ್ನಪರಿಹಾರೇಣ ನಾSತ್ಮಮೋಕ್ಷಂ ಸಮೈಚ್ಛತ ।

ಅಯತನ್ತಮಪಿ ಹ್ಯೇನಂ ಚಾಲನಾಯಾಪಿ ನಾಶಕತ್ ॥೨೨.೩೬೪॥

 

ಪೂರ್ಣ್ಣೋSಪಿ ಸರ್ವಲೋಕಾನಾಂ ಬಲೇನ ನಹುಷಸ್ತದಾ ।

ವೇಷ್ಟಯಿತ್ವೈವ ತಂ ಭೀಮಂ ಸ್ಥಿತೋSಸೌ ನಾಶಕತ್ ಪರಮ್ ॥೨೨.೩೬೫॥

 

ಯಾವ ಕಾರಣದಿಂದ ವಿದ್ಯೆಯಿಂದ ಉಪಜೀವನ ಮಾಡುವುದು ಬ್ರಾಹ್ಮಣರಿಗೂ ಧರ್ಮವಲ್ಲವೋ, ಇನ್ನು ಕ್ಷತ್ರಿಯರಿಗೆ ಇದು ಒಳ್ಳೆಯದಲ್ಲವೆಂದು ಏನು ಹೇಳಬೇಕು? ಈ ಕಾರಣದಿಂದ ಭೀಮಸೇನ ನಹುಷನ ಪ್ರಶ್ನೆಗೆ ಉತ್ತರ ತಿಳಿದಿದ್ದರೂ,  ಅವನ ಪ್ರಶ್ನೆಗೆ ಉತ್ತರ ಕೊಡುವಿಕೆಯಿಂದ ತನ್ನ ಬಿಡುಗಡೆಯನ್ನು ಬಯಸಲಿಲ್ಲ(ಉತ್ತರಿಸಲಿಲ್ಲ). ಆದರೆ ಬಿಡಿಸಿಕೊಳ್ಳಲು ಯಾವುದೇ ಪ್ರಯತ್ನಮಾಡದ ಭೀಮಸೇನನನ್ನು ಅಲುಗಾಡಿಸಲೂ ಕೂಡ ನಹುಷ ಶಕ್ತನಾಗಲಿಲ್ಲ. ಎಲ್ಲಾ ಲೋಕಗಳ ಬಲದಿಂದ ಪೂರ್ಣನಾದರೂ ಕೂಡಾ, ನಹುಷ ಭೀಮನನ್ನು ಸುತ್ತಿಕೊಂಡು ಇದ್ದನೇ ಹೊರತು ಇನ್ನೇನನ್ನೂ ಮಾಡಲು ಅವನಿಂದಾಗಲಿಲ್ಲ.

Tuesday, October 25, 2022

Mahabharata Tatparya Nirnaya Kannada 22-351-355

[ವೃತ್ರನನ್ನು ಕೊಂದದ್ದರಿಂದ ಬಂದ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಇಂದ್ರ ತಪಸ್ಸು ಮಾಡಿದ ಎನ್ನುವುದನ್ನು ತಿಳಿದೆವು. ಇಲ್ಲಿ ಸಾಮಾನ್ಯವಾಗಿ ನಮಗೆ ಒಂದು ಕುತೂಹಲ ಏನೆಂದರೆ- ದೇವತೆಗಳ ಪಾಪ-ಪುಣ್ಯಕ್ಕೂ ಮನುಷ್ಯರ ಪಾಪ-ಪುಣ್ಯಕ್ಕೂ ಏನಾದರು ವ್ಯತ್ಯಾಸವಿದೆಯೇ ಎನ್ನುವುದು. ಈ ಪ್ರಶ್ನೆಗೆ ಆಚಾರ್ಯರು ಮುಂದೆ ಉತ್ತರ ನೀಡಿರುವುದನ್ನು ನಾವು ಕಾಣಬಹುದು:]

 

ಧರ್ಮ್ಮವೃದ್ಧ್ಯರ್ತ್ಥಮೇವೈತತ್ ಪಾಪಮಾಸೀಚ್ಛಚೀಪತೇಃ ।

ನಹಿ ಲೋಕಾವನಂ ಪಾಪಂ ತ್ರೈಲೋಕ್ಯೇಶಸ್ಯ ವಜ್ರಿಣಃ ॥೨೨.೩೫೧॥

 

ಹೇಗೆ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬಂತೋ ಆ ರೀತಿಯ ದೋಷ ಇತರ ದೇವತೆಗಳೆಲ್ಲರಿಗೂ ಬರಬಹುದು. ಆದರೆ ದೇವತೆಗಳಲ್ಲಿ ಅವರ ಪಾಪ  ಪುಣ್ಯವನ್ನು ಹೆಚ್ಚಿಸಿಕೊಳ್ಳವ ಸಾಧನವಾಗುತ್ತದೆ. ಮೂರುಲೋಕಕ್ಕೂ ಒಡೆಯನಾಗಿರುವ ಇಂದ್ರನ ಪಾಪ ಎನ್ನುವುದು ಅವನಿಗೆ ನರಕಾದಿಗಳಿಗೆ ಸಾಧನವಲ್ಲ.

 

ವೃತ್ರಂ ಹತ್ವಾ ಮಹಾನಾಸೇತ್ಯಾದಿ ವೇದಪದಂ ಚ ಯತ್ ।

‘ಕ್ವಚಿತ್ ಪಾಪಂ ಚ ಪುಣ್ಯಾನಾಂ ವೃದ್ಧಯೇ ಭವತಿ ಸ್ಫುಟಮ್ ॥೨೨.೩೫೨॥

 

‘ವೃತ್ರಹತ್ಯಾ ಯಥೇನ್ದ್ರಸ್ಯ ಜಾತಾ ಧರ್ಮ್ಮಸ್ಯ ವೃದ್ಧಯೇ ।

‘ದೇವಾನಾಂ ವಾ ಮುನೀನಾಂ ವಾ ಭವೇದೇವಂ ನವೈ ನೃಣಾಮ್ ॥೨೨.೩೫೩॥

 

‘ಪಾಪಂ ಯತ್ ಪುಣ್ಯಮೇವೈತದಸುರಾಣಾಂ ವಿಲೋಮತಃ’ ।

ಏವಂ ಸ್ಕಾನ್ದೇ ಹಿ ವಚನಂ ನ ಪಾಪಂ ತಚ್ಛಚೀಪತೇಃ ॥೨೨.೩೫೪॥ ॥

 

ವೃತ್ರನನ್ನು ಕೊಂದು ಇಂದ್ರ ಶ್ರೇಷ್ಠನಾದ ಎನ್ನುವ ವೇದವಚನವಿದೆ (‘ಇಂದ್ರೋ ವೈ ವೃತ್ರಂ ಹತ್ವಾ ಮಹಾನಭವತ್’). ಸ್ಕಂಧಪುರಾಣದಲ್ಲಿ ಹೇಳಿರುವಂತೆ: ‘ದೇವತೆಗಳಿಗೆ ಪಾಪ ಬಂದರೂ ಕೂಡಾ ಅದು ಅವರ ಪುಣ್ಯವೃದ್ಧಿಗೆ ಸಾಧನವಾಗುತ್ತದೆ. ಯಾವ ರೀತಿ ಇಂದ್ರನಿಗೆ ವೃತ್ರನ ಕೊಲೆಯು ಪುಣ್ಯದ ಅಭಿವೃದ್ಧಿಗೆ ಕಾರಣವಾಯಿತೋ, ಆ ರೀತಿ ದೇವತೆಗಳಲ್ಲಿ ಅಥವಾ ಮುನಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಆದರೆ ಮನುಷ್ಯರ ಪಕ್ಷದಲ್ಲಿ ಈರೀತಿ ಆಗುವುದಿಲ್ಲ.  ಇನ್ನು ಅಸುರರಲ್ಲಿ ಅವರು ಪುಣ್ಯಮಾಡಿದರೂ ಕೂಡಾ ಅದು ಪಾಪದಲ್ಲಿಯೇ ಕೊನೆಗೊಳ್ಳುತ್ತದೆ’. ಹೀಗಾಗಿ ಶಚೀಪತಿಗೆ ವೃತ್ರ ಸಂಹಾರದ ಪಾಪವಿಲ್ಲ.

[ಏಕೆ ದೇವತೆಗಳು ಪುರಂದರನ ಅನುಪಸ್ಥಿತಿಯಲ್ಲಿ ನಹುಷನಿಗೆ ಇಂದ್ರಪದವಿಯನ್ನು ನೀಡಿದರು? ದೇವತೆಗಳಲ್ಲೇ ಒಬ್ಬ ಹಿರಿಯ ದೇವತೆ ಏಕೆ ಹಂಗಾಮಿ ಇಂದ್ರನಾಗಿ ಕಾರ್ಯನಿರ್ವಹಿಸಲಿಲ್ಲಾ ?  ಇದು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಈ ಪ್ರಶ್ನೆಗೆ ಆಚಾರ್ಯರು ಉತ್ತರ ನೀಡುವುದನ್ನು ನಾವು ಮುಂದಿನ ಶ್ಲೋಕದಲ್ಲಿ ಕಾಣಬಹುದು:]

 

ನಾನ್ಯಸ್ಯ ಪದಮಾಪ್ಸ್ಯನ್ತಿ ತದ್ ದೇವಾನಾಂ ವ್ರತಂ ಪರಮ್ ।

ತಸ್ಮಾತ್ ತೇ ನಹುಷಂ ಶಕ್ರಪದೇ ನಿದಧುರೀಶ್ವರಾಃ ॥೨೨.೩೫೫॥

 

‘ಇನ್ನೊಬ್ಬನ ಪದವಿಯನ್ನು ಹೊಂದುವುದಿಲ್ಲ’ ಎನ್ನುವುದು ದೇವತೆಗಳ ಶ್ರೇಷ್ಠ ವ್ರತ. ಆ ಕಾರಣದಿಂದ ಸಮರ್ಥರಿದ್ದರೂ ಕೂಡಾ ದೇವತೆಗಳು ನಹುಷನನ್ನು ಇಂದ್ರಪದವಿಯಲ್ಲಿ ಸ್ಥಾಪಿಸಿದರು. 

Sunday, October 16, 2022

Mahabharata Tatparya Nirnaya Kannada 22-344-350

 

ಸ ಶಚೀಪ್ರತಿಷೇಧಾರ್ತ್ಥಮಗಸ್ತ್ಯೇನ ಮಹಾತ್ಮನಾ ।

ವೇದಪ್ರಾಮಾಣ್ಯವಿಷಯೇ ಪೃಷ್ಟೋ ನೇತ್ಯಾಹ ಮೂಢಧೀಃ ।

ಪ್ರಮಾಣಮಿತಿ ತೇನೋಕ್ತಃ ಶಿರಸ್ಯೇನಂ ಪದಾSಹನತ್ ॥೨೨.೩೪೪॥

 

ಶಚೀದೇವಿಯನ್ನು ಬಯಸುತ್ತಿರುವ ನಹುಷನನ್ನು ಪ್ರತಿಷೇಧ ಮಾಡಲು, ಮಹಾತ್ಮನಾಗಿರುವ ಅಗಸ್ತ್ಯರಿಂದ ವೇದಪ್ರಾಮಾಣ್ಯ ವಿಷಯದಲ್ಲಿ ಪ್ರಶ್ನೆಮಾಡಲ್ಪಟ್ಟವನಾಗಿ, ಮೊಹಿತವಾಗಿರುವ ಬುದ್ಧಿಯುಳ್ಳವನಾದ ನಹುಷ ‘ವೇದಗಳು ಪ್ರಮಾಣವಲ್ಲ’ ಎಂದು ಹೇಳಿದ. ಅಗಸ್ತ್ಯರಿಂದ ಪ್ರತಿಯಾಗಿ ‘ವೇದವು ಪ್ರಮಾಣ’ ಎಂದು ಹೇಳಲ್ಪಟ್ಟಾಗ ನಹುಷ ಅಗಸ್ತ್ಯರ ತಲೆಗೆ ಕಾಲಿನಿಂದ ಒದ್ದ.

[ಪಲ್ಲಕ್ಕಿಯನ್ನು ಹೊತ್ತ ಅಗಸ್ತ್ಯರು ದಾರಿಯಲ್ಲಿ ನಹುಷನನ್ನು ಕುರಿತು ‘ವೇದ ಪ್ರಮಾಣ ಹೌದೋ-ಅಲ್ಲವೋ ಎಂದು ಪ್ರಶ್ನಿಸಿದರು. ಏಕೆ ಹೀಗೆ ಕೇಳಿದರು ಎಂದರೆ- ವೇದ ಪ್ರಮಾಣ ಎಂದು ನಹುಷ ಒಪ್ಪಿದರೆ- ಪರಸ್ತ್ರೀ ಸಂಗವನ್ನು ಬಯಸಬಾರದು ಎಂದು ವೇದ ಹೇಳುತ್ತದೆ(ಶಚೀದೇವಿಯ ಸಂಸರ್ಗವನ್ನು ಮಾಡಬಾರದು ಎಂದಾಗುತ್ತದೆ). ಇನ್ನು ವೇದ ಪ್ರಾಮಾಣ್ಯವನ್ನು ಒಪ್ಪುವುದಿಲ್ಲ ಎಂದು ಇಂದ್ರಪದವಿಯನ್ನು ಅನುಭವಿಸುತ್ತಿರುವ ನಹುಷ ಹೇಳಿದರೆ, ಅವನ ಅನುಭವಗಳೆಲ್ಲವೂ ಸುಳ್ಳು ಎಂದಾಗುತ್ತದೆ. ಹೀಗಾಗಿ ನಹುಷನನ್ನು ಶಚೀದೇವಿಯ ಬಳಿ ಹೋಗದಂತೆ ತಡೆಯಲು ಅಗಸ್ತ್ಯರು ಈ ರೀತಿ ಪ್ರಶ್ನೆ ಮಾಡಿದರು. ನಹುಷ ಸಜ್ಜನನೇ, ಆದರೆ ಮಿತಿಮೀರಿದ ಅಹಂಕಾರದಿಂದ ಆ ರೀತಿ ವೇದವನ್ನು ನಿರಾಕರಿಸಿ ಮಾತನಾಡಿದ.  (ದುರ್ಜನರು, ನಾಸ್ತಿಕರು ತಮ್ಮ ಕೆಟ್ಟ ಕೆಲಸಕ್ಕೆ ವೇದದಲ್ಲಿ ಅವಕಾಶವಿರುವುದಿಲ್ಲ ಎಂದು ವೇದವನ್ನು ನಿರಾಕರಿಸಿ ಮಾತನಾಡುವುದು ಸರ್ವೇ ಸಾಮಾನ್ಯ)]

 

ತದಾ ಭೃಗುಂ ತಸ್ಯ ಜಟಾಸು ಲೀನಂ ಕದಾSಪಿ ತಸ್ಯಾಕ್ಷಿಪಥಂ ನ ಯಾತಮ್ ।

ಆವಿಶ್ಯ ಕಞ್ಜಪ್ರಭವಃ ಶಶಾಪ ವ್ರಜಾSಶು ಪಾಪಾಜಗರತ್ವಮೇವ ॥೨೨.೩೪೫॥

 

ಆಗ ನಹುಷನ ಕಣ್ಣಿಗೆ ಕಾಣದ, ಅಗಸ್ತ್ಯರ ಜಟೆಯಲ್ಲಿ ಅಡಗಿರುವ ಭೃಗುಋಷಿಯನ್ನು ಬ್ರಹ್ಮದೇವರು ಪ್ರವೇಶಮಾಡಿ ‘ಪಾಪಿಷ್ಠನಾದ ನಹುಷನೇ, ನೀನು ಉರಗ ಶರೀರವನ್ನು ಹೊಂದು ಎಂದು  ಶಾಪಕೊಟ್ಟರು.

[ಮಹಾಭಾರತದಲ್ಲಿ ಈ ಕುರಿತ ವಿವರಗಳನ್ನು ಕಾಣಬಹುದು: ‘ಅಥಾಗಸ್ತ್ಯಮೃಷಿಶ್ರೇಷ್ಠಂ ವಾಹನಾಯಾSಜುಹಾವ ಹ । ......ತತೋ ಭೃಗುರ್ಮಹಾತೇಜಾ ಮೈತ್ರಾವರುಣಿಮಬ್ರವೀತ್ । ನಿಮೀಲಯ ಸ್ವನಯನೇ ಜಟಾಂ ಯಾವದ್ ವಿಶಾಮಿ ತೇ ।  ಸುರೇನ್ದ್ರಪಾತನಾಯೇತಿ ಸ ಚ ನೇತ್ರೇ ನ್ಯಮೀಲಯತ್ ।  ತತೋSಗಸ್ತ್ಯಸ್ಯಾಥ ಜಟಾಂ ದೃಷ್ಟ್ವಾ ಪ್ರಾವಿಶದಚ್ಯುತಃ  । ಭೃಗುಃ ಸ ಸುಮಹಾತೇಜಾ ಪಾತನಾಯ ನೃಪಸ್ಯ ಚ (ಅನುಶಾಸನಪರ್ವ ೧೫೭.೧೪-೧೬)

ತನ್ನನ್ನು ಹೊರಲೆಂದು ಅಗಸ್ತ್ಯನನ್ನು ನಹುಷ ಕರೆದ.  ‘ನಹುಷನನ್ನು ಕೆಳಗೆ ಬೀಳಿಸಬೇಕು. ಅದಕ್ಕಾಗಿ ನಾನು ನಿನ್ನ ಜಟೆಯೊಳಗೆ ಪ್ರವೇಶ ಮಾಡುತ್ತೇನೆ ಎಂದು ಅಗಸ್ತ್ಯರನ್ನು ಕುರಿತು ಭೃಗು ಮಹರ್ಷಿಗಳು ಹೇಳಿ ಅವರ ಜಟೆಯನ್ನು ಹೊಕ್ಕರು. ‘ಪಿತಾಮಹನಿಯೋಗೇನ ಭವನ್ತಂ ಸೋSಹಮಾಗತಃ । ಪ್ರತಿಕರ್ತುಂ ಬಲವತಿ ನಹುಷೇ ದರ್ಪಮೋಹಿತೇ’ (ಅನುಶಾಸನಪರ್ವ ೧೫೬.೨೨) ಬ್ರಹ್ಮದೇವರ ಆಜ್ಞೆಯಂತೆ ಮತ್ತು ಬ್ರಹ್ಮದೇವರ ಪ್ರವೇಶದಿಂದಕೂಡಿ ನಾನು ನಿನ್ನನ್ನು ಪ್ರವೇಶಮಾಡುತ್ತೇನೆ ಎಂದು ಭೃಗು ಹೇಳಿರುವ ಮಾತು ಇದಾಗಿದೆ.]

 

[ಬ್ರಹ್ಮದೇವರು ಯಾವ ಶಾಪ ನೀಡಿದರು ಎನ್ನುವುದನ್ನು ವಿವರಿಸುತ್ತಾರೆ:]

 

ಷಷ್ಠೇ ಕಾಲೇ ಯಸ್ತ್ವಯಾSಸಾದಿತಃ ಸ್ಯಾತ್ ಸ ತೇ ವಶಂ ಯಾತು ಬಲಾಧಿಕೋSಪಿ ।

ಯದಾ ಗೃಹೀತಂ ಪುರುಷಂ ನಿಹನ್ತುಂ ನ ಶಕ್ಷ್ಯಸೇ ಯದಿ ಸ ತ್ವದ್ಗೃಹೀತಃ ।

ಶಕ್ತೋSಪಿ ನಾSತ್ಮಾನಮಭಿಪ್ರಮೋಚಯೇತ್ ತದಾSಸ್ಯ ಸ್ಯಾತ್ ತ್ವತ್ತಪೋSಗ್ರ್ಯಂ ಬಲಂ ಚ ॥೨೨.೩೪೬॥

 

‘ನೀನು ಅಜಗರನಾಗಿ ಬೀಳು. ಒಮ್ಮೆ ಮೂರು ದಿನಗಳಾದಮೇಲೂ ಊಟ ಸಿಗದೇ ನೀನಿರುವಾಗ   (ಊಟವಿಲ್ಲದ ಆರನೆಯ ಕಾಲದಲ್ಲಿ) ನಿನ್ನಿಂದ ಹೊಂದಲ್ಪಟ್ಟ ಒಬ್ಬ ವ್ಯಕ್ತಿ,  ಬಲದಿಂದ ಶ್ರೇಷ್ಠನಾಗಿದ್ದರೂ ಕೂಡಾ, ಅವನು ನಿನ್ನ ವಶನಾಗಲಿ. ಯಾವಾಗ ನೀನು ಹಿಡಿದ ವ್ಯಕ್ತಿಯನ್ನು ಕೊಲ್ಲಲು ನೀನು ಸಮರ್ಥನಾಗುವುದಿಲ್ಲವೋ, ಒಂದುವೇಳೆ ನಿನ್ನಿಂದ ಗ್ರಹೀತನಾದ ಅವನೂ ನಿನ್ನನ್ನು ನಿಗ್ರಹಿಸಲು ಶಕ್ತನಾಗಿದ್ದರೂ ತನ್ನನ್ನು ಬಿಡಿಸಿಕೊಳ್ಳುವುದಿಲ್ಲವೋ, ಆಗ ನಿನ್ನ ಬಲವೂ, ನಿನ್ನ ತಪಸ್ಸೂ ಅವನಿಗೆ ವರ್ಗಾವಣೆಯಾಗುವುದು.  

 

ಸರ್ವದೇವಮುನೀನಾಂ ಯತ್ ತಪಸ್ತ್ವಾಂ ಸಮುಪಾಶ್ರಿತಮ್ ।

ತಚ್ಚ ಸರ್ವಂ ತಮೇವೈತಿ ನಾತ್ರ ಕಾರ್ಯ್ಯಾ ವಿಚಾರಣಾ            ॥೨೨.೩೪೭॥

 

ಯಾವ ದೇವತೆಗಳ ಮತ್ತು ಮುನಿಗಳ ತಪಸ್ಸು ನಿನ್ನನ್ನು ಆಶ್ರಯಿಸಿಕೊಂಡಿದೆಯೋ. ಅದೆಲ್ಲವೂ ಕೂಡಾ ಅವನನ್ನೇ ಹೊಂದುತ್ತದೆ. ಈ ವಿಚಾರದಲ್ಲಿ ಯಾವ ವಿಚಾರಣೆಯನ್ನೂ ಮಾಡಕೂಡದು.

 

ಯದಾ ಪ್ರಶ್ನಾಂಸ್ತ್ವದೀಯಾಂಶ್ಚ ಕಶ್ಚಿತ್ ಪರಿಹರಿಷ್ಯತಿ ।

ತದಾ ಗನ್ತಾSಸಿ ಚ ದಿವಂ ವಿಸೃಜ್ಯಾSಜಗರಂ ತನುಮ್  ॥೨೨.೩೪೮॥

 

ಯಾವಾಗ ನಿನ್ನೆಲ್ಲಾ ಪ್ರಶ್ನೆಗಳನ್ನು ಯಾರೋ ಒಬ್ಬ ಪರಿಹರಿಸುತ್ತಾನೋ, ಆಗ ಹೆಬ್ಬಾವಿನ ದೇಹವನ್ನು  ಬಿಟ್ಟು ನೀನು ಸ್ವರ್ಗವನ್ನು ಹೊಂದುವೆ.

 

ಸ್ಮೃತಿಶ್ಚ ಮತ್ಪ್ರಸಾದೇನ ಸರ್ವದಾ ತೇ ಭವಿಷ್ಯತಿ ।

ಭೃಗುದೇಹಗತೇನೈವಂ ಶಪ್ತಃ ಕಮಲಯೋನಿನಾ ॥೨೨.೩೪೯॥

 

ಪಪಾತಾಜಗರೋ ಭೂತ್ವಾ ನಹುಷಃ ಕ್ಷಣಮಾತ್ರತಃ ।

ಇನ್ದ್ರೋSಪ್ಯವಾಪ ಸ್ವಂ ಸ್ಥಾನಮಿಷ್ಟ್ವಾ ವಿಷ್ಣುಂ ವಿಪಾಪಕಃ ॥೨೨.೩೫೦॥

 

ನನ್ನ ಅನುಗ್ರಹದಿಂದ ನಿನಗೆ ಪೂರ್ವಜನ್ಮದ ಸ್ಮೃತಿ ಯಾವಾಗಲೂ ಇರುತ್ತದೆ’. ಹೀಗೆ ಭೃಗುವಿನ ದೇಹದಲ್ಲಿರುವ ಬ್ರಹ್ಮದೇವರಿಂದ ಶಪಿತನಾದ ನಹುಷ ಒಂದು ಕ್ಷಣದಲ್ಲಿಯೇ ಹೆಬ್ಬಾವಾಗಿ ಕೆಳಗಡೆ ಬಿದ್ದ. ಅದೇ ಸಮಯದಲ್ಲಿ ಇತ್ತ ಇಂದ್ರ  ತನ್ನ ಪಾಪವನ್ನು ಕಳೆದುಕೊಂಡು ವಿಷ್ಣುವನ್ನು ಅಶ್ವಮೇದದಿಂದ ಹೋಮಿಸಿ, ತನ್ನ ಸ್ಥಾನವಾದ ಸ್ವರ್ಗವನ್ನು ಹೊಂದಿದ.