ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 17, 2023

Mahabharata Tatparya Nirnaya Kannada 32-176-180

 

ತನುಸ್ತೃತೀಯಾ ಪವನಸ್ಯ ಸೇಯಂ ಸದ್ಭಾರತಾರ್ತ್ಥಪ್ರತಿದೀಪನಾಯ ।

ಗ್ರನ್ಥಂ ಚಕಾರೇಮಮುದೀರ್ಣ್ಣವಿದ್ಯಾ ಯಸ್ಮಿನ್ ರಮನ್ತೇ ಹರಿಪಾದಭಕ್ತಾಃ ॥ ೩೨.೧೭೬ ॥

 

ಮುಖ್ಯಪ್ರಾಣನ ಈ ಮೂರನೇ ಅವತಾರದಲ್ಲಿ, ನಿರ್ದುಷ್ಟವಾದ ಮಹಾಭಾರತದ ಅರ್ಥವನ್ನು ಪ್ರಕಾಶಪಡಿಸುವುದಕ್ಕಾಗಿ ಈ ಗ್ರಂಥವು ರಚಿಸಲ್ಪಟ್ಟಿತು. ವಿದ್ಯೆಯನ್ನು ಚೆನ್ನಾಗಿ ಬಲ್ಲ ಭಗವದ್ಭಕ್ತರು ಈ ಮಹಾಭಾರತ ತಾತ್ಪರ್ಯದಲ್ಲೇ ಆಸಕ್ತರಾಗಿ ನಿರಂತರ ಹರಿಪಾದಲ್ಲಿ ಕ್ರೀಡಿಸುತ್ತಾರೆ.

 

[ಋಗ್ವೇದದಲ್ಲಿ ಹೇಳಿರುವ, ಈಗಾಗಲೇ ಎರಡನೇ ಅಧ್ಯಾಯದಲ್ಲಿ ವಿವರಿಸಿರುವ ಮುಖ್ಯಪ್ರಾಣನ ಮೂರು ಅವತಾರದ ಕುರಿತಾದ ಮಾತನ್ನು ಮತ್ತೆ ಇಲ್ಲಿ ನಮಗೆ ನೆನಪಿಸುತ್ತಾರೆ:]

 

‘ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ।

‘ನಿರ್ಯ್ಯದೀಂ ಬುಧ್ನಾನ್ಮಹಿಷಸ್ಯ ವರ್ಪ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ॥ ೩೨.೧೭೭ ॥

 

‘ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ’ ।

ಇತ್ಯಾದಿವಾಕ್ಯೋಕ್ತಮಿದಂ ಸಮಸ್ತಂ ತಥಾ ಪುರಾಣೇಷು ಚ ಪಞ್ಚರಾತ್ರೇ ॥ ೩೨.೧೭೮ ॥

 

ವೇದಾಭಿಮಾನಿಗಳಾದ ತಾಯಂದಿರು ಪರಮಾತ್ಮನನ್ನು ವೇದಗಳ ರಹಸ್ಯ ಸಾರ ಎಂದು ತಿಳಿಸಿಕೊಡುವುದಕ್ಕಾಗಿ ಮಧ್ವನನ್ನಾಗಿ ಹುಟ್ಟಿಸಿದರು.  ಇದು ಮುಖ್ಯಪ್ರಾಣನ ಮೂರನೇ ರೂಪ.

ಜ್ಞಾನಿಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣನ ಅನುಗ್ರಹದಿಂದ, ಶ್ರೇಷ್ಠನಾದ  ಪರಮಾತ್ಮನ ಗುಣಗಳನ್ನು ಜ್ಞಾನಿಗಳು ಸುಖವಾಗಿ ತಿಳಿಯುತ್ತಾರೆ.  ಯಾವ  ಪರಮಾತ್ಮನ ಚಿಂತನೆಯಿಂದ ಸಜ್ಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾದ್ಯವೋ,  ಅಂತಹ  ಪರಮಾತ್ಮನ ಗುಣಗಳನ್ನು ಸಾಧನೆ ಮಾಡಲು ಮುಖ್ಯಪ್ರಾಣನು ನಮ್ಮ ಹೃದಯ ಗುಹೆಯಲ್ಲೇ ಇರುವ ಅಂತರ್ಯಾಮಿಯಾದ ಪರಮಾತ್ಮನನ್ನು ಮಥನ ಮಾಡಿ ಕೊಡುತ್ತಾನೆ. ಇತ್ಯಾದಿ ವಾಕ್ಯಗಳಿಂದ ಇದೆಲ್ಲವೂ ಕೂಡಾ ಹೇಳಲ್ಪಟ್ಟಿದೆ. ವೇದದಲ್ಲಷ್ಟೇ ಅಲ್ಲಾ,  ಪುರಾಣಗಳಲ್ಲಿಯೂ, ಪಂಚರಾತ್ರದಲ್ಲಿಯೂ ಇದನ್ನು ಹೇಳಿದ್ದಾರೆ.  

 

ಅತ್ರೋದಿತಾ ಯಾಶ್ಚ ಕಥಾಃ ಸಮಸ್ತಾ ವೇದೇತಿಹಾಸಾದಿವಿನಿರ್ಣ್ಣಯೋಕ್ತಾಃ ।

ತಸ್ಮಾದಯಂ ಗ್ರನ್ಥವರೋSಖಿಲೋರುಧರ್ಮ್ಮಾದಿಮೋಕ್ಷಾನ್ತಪುಮರ್ತ್ಥಹೇತುಃ ।

ಕಿಂ ವೋದಿತೈರಸ್ಯ ಗುಣೈಸ್ತತೋSನ್ಯೈರ್ನ್ನಾರಾಯಣಃ ಪ್ರೀತಿಮುಪೈತ್ಯತೋSಲಮ್ ॥ ೩೨.೧೭೯ ॥

 

ಇಲ್ಲಿ ಹೇಳಿದ ಎಲ್ಲಾ ಕಥೆಗಳೂ ಕೂಡಾ ವೇದ, ಇತಿಹಾಸ, ಇತ್ಯಾದಿಗಳ ನಿರ್ಣಯದಿಂದ ಬಂದಿರುವುವಂಥದ್ದು. ಅದರಿಂದ ಈ ಶ್ರೇಷ್ಠವಾದ ಗ್ರಂಥವು ಧರ್ಮ, ಅರ್ಥ, ಕಾಮ, ಮೋಕ್ಷ,  ಮೊದಲಾದ ಎಲ್ಲಾ ಪುರುಷಾರ್ಥಗಳಿಗೆ ಸಾಧನ. ಇದನ್ನು ಓದಿದರೆ ನಾರಾಯಣನು ಅತ್ಯಂತ ಪ್ರೀತನಾಗುತ್ತಾನೆ.  ಆದಕಾರಣ ಬೇರೆ ಎಷ್ಟು ಗುಣಗಳನ್ನು ಹೇಳಿ ಏನು ಪ್ರಯೋಜನ.

 

ಯಃ ಸರ್ವಗುಣಸಮ್ಪೂರ್ಣ್ಣಃ ಸರ್ವದೋಷವಿವರ್ಜ್ಜಿತಃ ।

ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮ್ಮೇ ಪರಮಃ ಸುಹೃತ್ ॥ ೩೨.೧೮೦ ॥

 

ಎಲ್ಲಾ ಗುಣಗಳಿಂದ ತುಂಬಿರುವ, ಯಾವ ಕೊರತೆಯೂ ಇಲ್ಲದ, ಎಲ್ಲಾ ಕೊರತೆಗಳನ್ನು ಮೀರಿ ನಿಂತಿರುವ, ನನ್ನಲ್ಲಿ ಯಾವಾಗಲೂ ಪ್ರೀತನೇ ಆಗಿರುವ,  ಪ್ರಿಯನಾದ ಶ್ರೀಹರಿಯು ಅತ್ಯಂತ ಪ್ರೀತನಾಗಲಿ.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವಸ್ವರ್ಗ್ಗಾರೋಹಣರ್ನ್ನಾಮ  ದ್ವಾತ್ರಿಂಶೋsಧ್ಯಾಯಃ ॥

[ ಆದಿತಃ ಶ್ಲೋಕಾಃ ೫೦೦೦ + ೧೮೦=೫೧೮೦ ]

*********

ಸಮಾಪ್ತೋಯಂ ಗ್ರನ್ಥಃ

 

ಶ್ರೀಕೃಷ್ಣಾರ್ಪಣಮಸ್ತು ॥

Mahabharata Tatparya Nirnaya Kannada 32-170-175

 

ಆನನ್ದತೀರ್ತ್ಥಾಖ್ಯಮುನಿಃ ಸುಪೂರ್ಣ್ಣಪ್ರಜ್ಞಾಭಿಧೋ ಗ್ರನ್ಥಮಿಮಂ ಚಕಾರ ।

ನಾರಾಯಣೇನಾಭಿಹಿತೋ ಬದರ್ಯ್ಯಾಂ ತಸ್ಯೈವ ಶಿಷ್ಯೋ ಜಗದೇಕಭರ್ತ್ತುಃ ॥ ೩೨.೧೭೦ ॥

 

ಜಗತ್ತಿಗೇ ಒಡೆಯನಾಗಿರುವ ವೇದವ್ಯಾಸರ ಶಿಷ್ಯನಾಗಿರುವ ಈ ಆನಂದತೀರ್ಥ ಎಂಬ ಮುನಿಯು, ಬದರಿಯಲ್ಲಿ ನಾರಾಯಣನಿಂದ ಆದೇಶಿಸಲ್ಪಟ್ಟವನಾಗಿ, ಪೂರ್ಣಪ್ರಜ್ಞಾ ಎಂಬ ಹೆಸರಿನವನಾಗಿ ಈ ಗ್ರಂಥವನ್ನು ರಚಿಸಿದನು.

 

ಯಸ್ತತ್ಪ್ರಸಾದಾದಖಿಲಾಂಶ್ಚ ವೇದಾನ್ ಸಪಞ್ಚರಾತ್ರಾನ್ ಸರಹಸ್ಯಸಙ್ಗ್ರಹಾನ್ ।

ವೇದೇತಿಹಾಸಾಂಶ್ಚ ಪುರಾಣಯುಕ್ತಾನ್ ಯಥಾವದನ್ಯಾ ಅಪಿ ಸರ್ವವಿದ್ಯಾಃ ॥ ೩೨.೧೭೧ ॥

 

ಭಗವಂತನ ಅನುಗ್ರಹದಿಂದ ಈ ಪೂರ್ಣಪ್ರಜ್ಞ ಎಲ್ಲಾ ಪಂಚರಾತ್ರ, ಬ್ರಹ್ಮಸೂತ್ರಾದಿಗಳಿಂದ ಒಡಗೂಡಿರುವ, ಪುರಾಣ, ವೇದ-ಇತಿಹಾಸಗಳಿಂದ ಕೂಡಿರುವ ಎಲ್ಲಾ ವಿದ್ಯೆಗಳನ್ನೂ ಕೂಡಾ ಬಲ್ಲವನಾಗಿದ್ದ.   

 

ಸಮಸ್ತಶಾಸ್ತ್ರಾರ್ತ್ಥವಿನಿರ್ಣ್ಣಯೋSಯಂ ವಿಶೇಷತೋ ಭಾರತವರ್ತ್ಮಚಾರೀ ।

ಗ್ರನ್ಥಃ ಕೃತೋSಯಂ ಜಗತಾಂ ಜನಿತ್ರಂ ಹರಿಂ ಗುರುಂ ಪ್ರೀಣಯತಾSಮುನೈವ ॥ ೩೨.೧೭೨ ॥

 

ಈ ಗ್ರಂಥ ಸಮಸ್ತ ಶಾಸ್ತ್ರದ ಅರ್ಥನಿರ್ಣಯ. ಇದು ವಿಶೇಷವಾಗಿ ಮಹಾಭಾರತದಲ್ಲಿ ಸಂಚರಿಸುತ್ತದೆ. ಜಗತ್ತಿನ ಜನಕನಾಗಿರುವ, ತನ್ನ ಗುರುವಾಗಿರುವ ನಾರಾಯಣನನ್ನು ಸಂತೋಷಗೊಳಿಸುವ ಸಲುವಾಗಿ ಈ ಆನಂದತೀರ್ಥನಿಂದಲೇ ಈ ಗಂಥವು ರಚಿಸಲ್ಪಟ್ಟಿದೆ.

 

ವಿನಿರ್ಣ್ಣಯೋ ನಾಸ್ತ್ಯಮುನಾ ವಿನಾ ಯದ್ ವಿಪ್ರಸ್ಥಿತಾನಾಮಿವ ಸರ್ವವಾಚಾಮ್ ।

ತದ್ ಬ್ರಹ್ಮಸೂತ್ರಾಣಿ ಚಕಾರ ಕೃಷ್ಣೋ ವ್ಯಾಖ್ಯಾSಥ ತೇಷಾಮಯಥಾ ಕೃತಾSನ್ಯೈಃ ॥ ೩೨.೧೭೩ ॥

 

ಈ ಗ್ರಂಥಕ್ಕಿಂತ ಅತಿರಿಕ್ತವಾದ ನಿರ್ಣಯವು ಇಲ್ಲ. ಇತಿಹಾಸ-ಪುರಾಣಗಳ ಪರಸ್ಪರ ವಿರುದ್ಧವಾಗಿರುವ ಎಲ್ಲಾ ಮಾತುಗಳ ನಿರ್ಣಯಕ್ಕಾಗಿ ಬ್ರಹ್ಮಸೂತ್ರಗಳನ್ನು ವೇದವ್ಯಾಸರು ರಚಿಸಿದರು. ಅದರ ವ್ಯಾಖ್ಯಾನವೂ ಕೂಡಾ ಬೇರೆಯವರಿಂದ ಬೇರೇ ರೀತಿಯಾಗಿ ಮಾಡಲ್ಪಟ್ಟಿದೆ.

 

ನಿಗೂಹಿತಂ ಯತ್ ಪುರುಷೋತ್ತಮತ್ವಂ ಸೂತ್ರೋಕ್ತಮಪ್ಯತ್ರ ಮಹಾಸುರೇನ್ದ್ರೈಃ ।

ಜೀವೇಶ್ವರೈಕ್ಯಂ ಪ್ರವದದ್ಭಿರುಗ್ರೈರ್ವ್ಯಾಖ್ಯಾಯ ಸೂತ್ರಾಣಿ ಚಕಾರ ಚಾSವಿಃ ॥ ೩೨.೧೭೪ ॥

 

ಬ್ರಹ್ಮ ಹಾಗೂ ಜೀವರಿಗೆ ಐಕ್ಯವನ್ನು ಹೇಳುವ ದೈತ್ಯರಿಂದ ಮುಚ್ಚಲ್ಪಟ್ಟ, ಸೂತ್ರದಲ್ಲಿ ಹೇಳಿದ ಪುರುಷೋತ್ತಮತ್ವವನ್ನೂ ಈ ಮುಖ್ಯಪ್ರಾಣನು, ಸೂತ್ರಗಳನ್ನು ವ್ಯಾಖ್ಯಾನಮಾಡಿ ಜನರ ಮುಂದಿಟ್ಟ.  

 

ವ್ಯಾಸಾಜ್ಞಯಾ ಭಾಷ್ಯವರಂ ವಿಧಾಯ ಪೃಥಕ್ಪೃಥಕ್ ಚೋಪನಿಷತ್ಸುಭಾಷ್ಯಮ್ ।

ಕೃತ್ವಾSಖಿಲಾನ್ಯಂ ಪುರುಷೋತ್ತಮಂ ಚ ಹರಿಂ ವದನ್ತೀತಿ ಸಮರ್ತ್ಥಯಿತ್ವಾ ॥ ೩೨.೧೭೫ ॥

 

ವೇದವ್ಯಾಸರ ಅಣತಿಯಂತೆ ಶ್ರೇಷ್ಠವಾದ ಭಾಷ್ಯವನ್ನು ರಚಿಸಿ, ಪ್ರತ್ಯೇಕ-ಪ್ರತ್ಯೇಕವಾಗಿ ಉಪನಿಷತ್ತುಗಳ ಭಾಷ್ಯವನ್ನೂ ಕೂಡಾ ಬರೆದು, ಈ ಜೀವ ಹಾಗೂ ಜಡ ಪ್ರಪಂಚಕ್ಕಿಂತ ವಿಲಕ್ಷಣನಾದ, ಅದರಿಂದಲೇ ಪುರುಷೋತ್ತಮ ಎಂಬ ಹೆಸರಿನವನಾದ ನಾರಾಯಣನನ್ನು ಈ ಎಲ್ಲಾ ಶಾಸ್ತ್ರಗಳು ಹೇಳುತ್ತವೆ ಎಂದು ಸಮರ್ಥನೆ ಮಾಡಿದನು.

Mahabharata Tatparya Nirnaya Kannada 32-165-169

 

ತತಃ ಕಲೇರನ್ತಮವಾಪ್ಯ ಧರ್ಮ್ಮಜ್ಞಾನಾದಿಕಲ್ಯಾಣಗುಣಪ್ರಹೀನೇ ।

ಲೋಕೇ ವಿರಿಞ್ಚತ್ರಿಪುರಘ್ನಶಕ್ರಪೂರ್ವಾಃ ಪಯೋಬ್ಧಿಂ ತ್ರಿದಶಾಃ ಪ್ರ ಜಗ್ಮುಃ ॥ ೩೨.೧೬೫ ॥

 

ದುರ್ಗಾವತಾರದ ನಂತರ, ಕಲಿಯುಗದ ಸಮಾಪ್ತಿ ಕಾಲದಲ್ಲಿ, ಭೂಲೋಕವು ಧರ್ಮ, ಜ್ಞಾನ ಮೊದಲಾದ ಕಲ್ಯಾಣಗುಣಗಳಿಂದ ಹೀನವಾಗಲು, ಬ್ರಹ್ಮ, ರುದ್ರ, ಇಂದ್ರ ಮೊದಲಾದವರು ಕ್ಷೀರಸಮುದ್ರವನ್ನು ಹೊಂದಿದರು. 

 

ನಾರಾಯಣಸ್ತೈಃ ಸ್ತುತಿಪೂರ್ವಮರ್ತ್ಥಿತೋ ಭವಾಯ ಲೋಕಸ್ಯ ಸ ಶಮ್ಭಳಾಖ್ಯೇ ।

ಗ್ರಾಮೇ ಮುನೇರ್ವಿಷ್ಣುಯಶೋSಭಿದಸ್ಯ ಗೃಹೇ ಬಭೂವಾSವಿರಚಿನ್ತ್ಯಶಕ್ತಿಃ ॥ ೩೨.೧೬೬ ॥

 

ನಾರಾಯಣನು ಅವರಿಂದ ಸ್ತೋತ್ರಪೂರ್ವಕವಾಗಿ ಪ್ರಾರ್ಥಿತನಾಗಿ, ಸಜ್ಜನರ ಅಸ್ತಿತ್ವಕ್ಕಾಗಿ ಶಮ್ಭಳಾ ಎಂಬ ಗ್ರಾಮದಲ್ಲಿ ವಿಷ್ಣುಯಶಸ್ಸು ಎಂಬ ಹೆಸರಿನ ಮುನಿಯ ಮನೆಯಲ್ಲಿ, ಎಣೆಯಿರದ ಶಕ್ತಿಯವನಾಗಿ ಅವತರಿಸಿದನು.(ಅವತರಿಸುತ್ತಾನೆ)

 

ಕಲೇಸ್ತು ಕಾತ್ಕಾರತ ಏಷ ಕಲ್ಕೀ ಜ್ಞಾನಂ ಕಲಂ ಕಂ ಸುಖಮೇವ ತದ್ವಾನ್ ।

ಕಲ್ಕೀತಿ ವಾ ತೇನ ಸಮಸ್ತದಸ್ಯುವಿನಾಶನಂ ತೇನ ದಿನಾದ್ ವ್ಯಧಾಯಿ ॥ ೩೨.೧೬೭ ॥

 

ಕಲಿಯ ನಿಗ್ರಹದಿಂದ ಇವನು ಕಲ್ಕೀ ಎಂಬ ಹೆಸರಿನವನು. ಕಂ ಎಂದರೆ ಸುಖ, ಕಲ ಎಂದರೆ ಜ್ಞಾನ. ಹೀಗೆ ಜ್ಞಾನಾನಂದ ಸ್ವರೂಪನಾದ ಇವನಿಗೆ ಕಲ್ಕೀ ಎಂದು ಹೆಸರು. ಇಂತಹ ಕಲ್ಕಿಯಿಂದ ಒಂದೇ ದಿನದಲ್ಲಿ ಎಲ್ಲಾ ದಸ್ಯುಗಳ ಕೊಲ್ಲುವಿಕೆಯು ಮಾಡಲ್ಪಟ್ಟಿತು.  

 

ಅಧರ್ಮ್ಮವೃತ್ತಂ ವಿಮುಖಂ ಹರೇಶ್ಚ ನಿಹತ್ಯ ನಿಃಶೇಷಜನಂ ತುರಙ್ಗೀ ।

ಸಂಸ್ಥಾಪಯಾಮಾಸ ಸ ಧರ್ಮ್ಮಸೇತುಂ ಜ್ಞಾನಂ ಸ್ವಭಕ್ತಿಂ ಚ ನಿಜಪ್ರಜಾಸು ॥ ೩೨.೧೬೮ ॥

 

ಕುದುರೆಯನ್ನೇರಿ ಬರುವ ಕಲ್ಕಿಯು ಅಧರ್ಮದಲ್ಲಿರುವ, ಪರಮಾತ್ಮನಿಗೆ ವಿಮುಖರಾಗಿರುವ ಎಲ್ಲಾ ದುರ್ಜನರನ್ನೂ ಕೊಂದು, ಧರ್ಮದ ಮರ್ಯಾದೆಯನ್ನು, ಯೋಗ್ಯರಲ್ಲಿ ಜ್ಞಾನವನ್ನೂ, ತನ್ನ ಭಕ್ತಿಯನ್ನೂ ಮತ್ತೆ ನೆಲೆಗೊಳಿಸಿದನು.

 

ಇತ್ಯಾದ್ಯನನ್ತಾನಿ ಹರೇರುದಾರಕರ್ಮ್ಮಾಣಿ ರೂಪಾಣಿ ಚ ಸದ್ಗುಣಾಶ್ಚ ।

ನಿತ್ಯವ್ಯಪೇತಾಖಿಲದೋಷಕಸ್ಯ ಬ್ರಹ್ಮೇತ್ಯನನ್ತೇತಿ ಚ ನಾಮ ಯೇನ ॥ ೩೨.೧೬೯ ॥

 

ಇವೇ ಮೊದಲಾದ ಕೊನೆಯಿರದ ಶ್ರೇಷ್ಠವಾದ ಕರ್ಮಗಳು ನಾರಾಯಣನದ್ದು. ಆ ಪರಮಾತ್ಮನ ರೂಪಗಳು, ಸದ್ಗುಣಗಳೂ ಅನಂತ. ಸದಾ ದೋಷ ರಹಿತನಾಗಿರುವ ಈ ನಾರಾಯಣನಿಗೆ ‘ಬ್ರಹ್ಮ’ ಎಂದೂ, ‘ಅನಂತ’ ಎಂದೂ ಹೆಸರಿದೆ.

 

Mahabharata Tatparya Nirnaya Kannada 32-160-164

 

ತತಸ್ತು ಬುದ್ಧೋದಿತಪಕ್ಷಸಂಸ್ಥೋ ಜಿನೋSಪಿ ಚಕ್ರೇ ಮತಮನ್ಯದೇವ ।

ಬೌದ್ಧೇನ ಜೈನೇನ ಮತೇನ ಚೈವ ದೈತ್ಯಾಂಶಕಾಃ ಪ್ರೀತಿಮಗುಃ ಸಮಸ್ತಾಃ ॥ ೩೨.೧೬೦ ॥

 

ತದನಂತರ ಬುದ್ಧಹೇಳಿದ ಪಕ್ಷದಲ್ಲಿದ್ದು ಜಿನನೂ ಕೂಡಾ ಇನ್ನೊಂದು ಮತವನ್ನು ಆರಂಭಿಸಿದನು. ಹೀಗೆ ದೈತ್ಯರ ಅಂಶಭೂತರಾದ ಎಲ್ಲರೂ ಬೌದ್ಧಾಖ್ಯವಾದ, ಜಿನಾಖ್ಯವಾದ ಮತದಿಂದ ಆನಂದವನ್ನು ಅನುಭವಿಸಿದರು.

 

ಪ್ರಶಾನ್ತವಿದ್ಯೇತ್ಯಭಿಧಂ ತಥಾSನ್ಯದ್ ಬುದ್ಧೋಕ್ತಶಾಸ್ತ್ರಂ ತ್ರಿದಶಾ ಅವಾಪ್ಯ ।

ತೋಷಂ ಯಯುರ್ವೇದಸಮಸ್ತಸಾರಂ ಯಾಮಾಸ್ಥಿತಾನಾಮಚಿರೇಣ ಮುಕ್ತಿಃ ॥ ೩೨.೧೬೧ ॥

 

ಇತ್ತ ದೇವತೆಗಳು ಬುದ್ಧನಿಂದ ಹೇಳಲ್ಪಟ್ಟ, ಸಮಸ್ತ ವೇದದ ಸಾರವಾಗಿರುವ, ಯಾವುದನ್ನು ಹೊಂದಿದವರಿಗೆ ವೇಗದಲ್ಲಿಯೇ ಮುಕ್ತಿಯೋ, ಅಂತಹ ‘ಪ್ರಶಾಂತವಿದ್ಯಾ’ ಎನ್ನುವ ಬುದ್ಧಶಾಸ್ತ್ರವನ್ನು ಹೊಂದಿ, ಸಂತೋಷವನ್ನು ಹೊಂದಿದರು.

 

ಅನ್ಯೇ ಮನುಷ್ಯಾ ಅಪಿ ಭಾರತಾದ್ಯಂ ಸತ್ಸಮ್ಪ್ರದಾಯಂ ಪರಿಗೃಹ್ಯ ವಿಷ್ಣುಮ್ ।

ಯಜನ್ತ ಆಪುಃ ಪರಮಾಂ ಗತಿಂ ತನ್ನ ಸೇಹಿರೇ ಕ್ರೋಧವಶಾದಿದೈತ್ಯಾಃ ॥ ೩೨.೧೬೨ ॥

 

ದೇವತೆಗಳಿಂದ ಇತರರಾದ ಇನ್ನೂ ಕೆಲವು ಮನುಷ್ಯೋತ್ತಮರೂ ಕೂಡಾ, ಮಹಾಭಾರತವೇ ಮೊದಲಾದವುಗಳಿಂದ  ಪ್ರವೃತ್ತವಾದ ಒಳ್ಳೆಯ ಸಂಪ್ರದಾಯವನ್ನು ಹಿಡಿದು, ನಾರಾಯಣನನ್ನು ಪೂಜಿಸುತ್ತಾ, ಉತ್ಕೃಷ್ಟವಾದ ಗತಿಯನ್ನು ಹೊಂದಿದರು. ಇದನ್ನು ಕ್ರೋಧವಶ ದೈತ್ಯರು ಸಹಿಸಲಿಲ್ಲ.

 

ಶೈವಂ ತಪಸ್ತೇ ವಿಪುಲಂ ವಿಧಾಯ ಜಗದ್ವಿಮೋಹೋರ್ಜ್ಜಿತಶಕ್ತಿಮಸ್ಮಾತ್ ।

ಪ್ರಾಪ್ಯ ಪ್ರಜಾತಾ ಭುವಿ  ಮೋಹನಂ ಚ ಚಕ್ರುಃ ಕುತರ್ಕ್ಕೈರಭಿದಾಂ ವದನ್ತಃ ॥ ೩೨.೧೬೩ ॥

 

ಆ ಕ್ರೋಧವಶ ದೈತ್ಯರು ಶಿವ ಸಂಬಂಧಿಯಾದ ಬಹಳವಾದ ತಪಸ್ಸನ್ನು ಮಾಡಿ, ಶಿವನಿಂದ, ಜಗತ್ತನ್ನೇ ಮೋಹದಿಂದ ದಿಕ್ಕುಗೆಡಿಸುವ ಉತ್ಕೃಷ್ಟವಾದ ಶಕ್ತಿಯನ್ನು ಹೊಂದಿ, ಭೂಮಿಯಲ್ಲಿ ಹುಟ್ಟಿದವರಾಗಿ, ಕೆಟ್ಟ ತರ್ಕಗಳಿಂದ ಜೀವ-ಪರಮಾತ್ಮನ ನಡುವೆ ಅಭೇದವನ್ನು ಹೇಳುತ್ತಾ ಮೋಹಗೊಳಿಸಿದರು.  

 

ತೇಷಾಂ ಪ್ರಪಾತಾಯ ಸತಾಂ ಚ ಮಕ್ತ್ಯೈ ಜನ್ಮಾSಸ ಭೀಮಸ್ಯ ಯದುಕ್ತಮತ್ರ ।

ದುರ್ಗ್ಗಾ ಪುನರ್ವಿಪ್ರಕುಲೇSವತೀರ್ಣ್ಣಾಹನಿಷ್ಯತಿ ವ್ರಾತಮಥಾಸುರಾಣಾಮ್ ॥ ೩೨.೧೬೪ ॥

 

ಆ ಕ್ರೋಧವಶ ದೈತ್ಯರನ್ನು ಬೀಳಿಸುವುದಕ್ಕೊಸ್ಕರ,  ಸಜ್ಜನರ ಬಿಡುಗಡೆಗಾಗಿ, ಹಿಂದೆ ಹೇಳಿದ ಭೀಮನ (ಬ್ರಾಹ್ಮಣ ಶರೀರದಲ್ಲಿ) ಅವತಾರವಾಯಿತು. ಆಮೇಲೆ ದುರ್ಗಾದೇವಿಯು (ಕೇರಳದ) ಬ್ರಾಹ್ಮಣ ಕುಟುಂಬದಲ್ಲಿ  ಅವತರಿಸಿ, ಮ್ಲೇಚ್ಚರೂಪವಾದ ಅಸುರರ ಸಮೂಹವನ್ನು ಕೊಲ್ಲುತ್ತಾಳೆ. [ಆಚಾರ್ಯರು ಈ ಗ್ರಂಥ ನೀಡಿದ ಕಾಲದಲ್ಲಿ ಅಲ್ಲಿ ಮ್ಲೇಚ್ಚರಿರಲಿಲ್ಲ, ಈಗಿನ ಪರಿಸ್ಥಿತಿ ನಮಗೆ ತಿಳಿದಿದೆ].

Saturday, December 16, 2023

Mahabharata Tatparya Nirnaya Kannada 32-154-159

 

ಕ್ಷಣಾದಯಂ ಕ್ಷಣಿಕಾಸ್ತದ್ವಿಶೇಷಾ ಯತಃ ಪ್ರಯಾನ್ತ್ಯೇವ ನಿಸರ್ಗ್ಗತೋSಖಿಲಾಃ ।

ತತಃ ಸ್ಥಿರತ್ವೇSಪಿ ವಿಶೇಷಸಂಶ್ರಯಾದುಕ್ತಂ ಕ್ಷಣಸ್ಥಾಯಿ ಮಯಾ ಸಮಸ್ತಮ್ ॥ ೩೨.೧೫೪ ॥

 

 

ತದ್ವಾನ್ ವಿಶೇಷಶ್ಚ ಯತೋ ನ ಭಿನ್ನೌ ಸದಾ ಸ್ವನಿರ್ವಾಹಕಶಕ್ತಿಯುಕ್ತೌ ।

ಅತಃ ಕ್ಷಣಸ್ಥಾಯಿ ಸಮಸ್ತಮೇತತ್ ಸ್ಥಿರಾತ್ಮಕಂ ಚೇತಿ ಹಿ ನಾಸ್ತಿ ಭೇದಃ  ॥ ೩೨.೧೫೫ ॥

 

ಕ್ಷಣದಿಂದ ಈ ಇಡೀ ಪ್ರಪಂಚವಿದೆ. ಕಾಲವೂ ಕೂಡಾ ‘ಕ್ಷಣ’ ಎಂದೇ ಇರುವುದು. ಅದರ ವಿಶೇಷಗಳೆಲ್ಲವೂ ಕೂಡಾ ಕ್ಷಣಿಕಗಳೇ. ಯಾವ ಕಾರಣದಿಂದ ಎಲ್ಲಾ ಕ್ಷಣಗಳೂ ಕೂಡಾ ಸ್ವಾಭಾವಿಕವಾಗಿವೆಯೋ, ಆ ಕಾರಣದಿಂದ ಕಾಲ ಒಂದೇ ಆದರೂ ‘ವಿಶೇಷ’ ಎಂದಿರುವುದರಿಂದ ಅದು ನನ್ನಿಂದ ‘ಎಲ್ಲವೂ ಕೂಡಾ ಕ್ಷಣಿಕವಾದದ್ದು’ ಎಂದು ಹೇಳಲ್ಪಟ್ಟಿತು.

‘ಕ್ಷಣ’ ಈ ಪ್ರಪಂಚವನ್ನು ಒಳಗೊಂಡಿದೆ. ಅನಾದಿ ಕಾಲವೂ ಕೂಡಾ ಕ್ಷಣ ಎಂದು ಪರಿಗಣಿಸಲ್ಪಡುತ್ತದೆ.  ‘ವಿಶೇಷ’ ಎನ್ನುವ ಸಾಮರ್ಥ ಇರುವುದರಿಂದಲೇ ವಸ್ತುವಿನ ಗುಣ ಹಾಗೂ ವಸ್ತು ಒಂದೇ ಆದರೂ ಭಿನ್ನವಾಗಿ ಹೇಳುವ ಸಾಮರ್ಥ್ಯ ನಮಗೆಲ್ಲರಿಗೂ ಬಂದಿದೆ.

[ತಾತ್ಪರ್ಯ: ರೂಪ ಬೇರೆ ಅಲ್ಲ, ಮಡಿಕೆ ಬೇರೆ ಅಲ್ಲ. ಮಡಿಕೆಯೇ ರೂಪ, ರೂಪವೇ ಮಡಿಕೆ. ಬಣ್ಣ ಮತ್ತು ಬಟ್ಟೆ ಎರಡೂ ಒಂದೇ. ಬಿಳಿ ಬಣ್ಣವೇ ಬಟ್ಟೆ, ಬಟ್ಟೆಯೇ ಬಿಳಿ ಬಣ್ಣ. ಇವೆರಡರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಆದರೂ ಕೂಡಾ ‘ಬಿಳಿಯ ಬಣ್ಣದ ಬಟ್ಟೆ’ ಎಂದು ನಾವು ಹೇಳುತ್ತೇವೆ. ಏಕೆಂದರೆ ‘ವಿಶೇಷ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ. ವಸ್ತುತಃ ಭೇದವಿಲ್ಲ, ಆದರೆ ಭೇದದ ವ್ಯವಹಾರವನ್ನು ತಂದುಕೊಡುತ್ತದೆ. ಅದನ್ನೇ ‘ವಿಶೇಷ ಎಂದು ಕರೆಯುತ್ತಾರೆ. ಇದೇ ರೀತಿ ಕ್ಷಣವೂ ಕೂಡಾ. ಕಲ್ಪವೂ ಒಂದು ಕ್ಷಣವೇ. ಒಂದು ಕ್ಷಣಕ್ಕೂ ಒಂದು ಕಲ್ಪಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ನಾವು ವ್ಯವಹಾರಕ್ಕಾಗಿ ಈ ಕ್ಷಣ ಕಳೆದುಹೋಯಿತು ಎನ್ನುತ್ತೇವೆ. ಅಂದರೆ ಕ್ರಿಯೆಯನ್ನು ಮಾಧ್ಯಮದಲ್ಲಿಟ್ಟುಕೊಂಡು ಕಾಲವನ್ನು ಅಳೆಯುತ್ತೇವೆ. ಕಾಲಕ್ಕೆ ವಸ್ತುತಃ ಅಳತೆ ಇಲ್ಲ. ಅದು ಯಾವಾಗಲೂ ಇರುತ್ತದೆ. ಸೂರ್ಯನ ಹುಟ್ಟನ್ನು ನೋಡಿಕೊಂಡು ನಾವು ‘ಬೆಳಗಾಯಿತು’ ಎನ್ನುತ್ತೇವೆ. ಸೂರ್ಯ ಕಾಣದಾದಾಗ ‘ರಾತ್ರಿಯಾಯಿತು’ ಎನ್ನುತ್ತೇವೆ.  ಇರುಳು  ಮತ್ತು ಬೆಳಗುಗಳನ್ನು ನಾವು ಸೂರ್ಯನ ಕ್ರಿಯೆಯಿಂದ ಕಾಣುತ್ತೇವೆ. ಇದು ನಮ್ಮ ಮಾನದಂಡ. ಅದನ್ನು ‘ವಿಶೇಷ’ ಎಂದು ಕರೆಯುತ್ತೇವೆ. ವಸ್ತುತಃ ಮಹಾಕಾಲಕ್ಕೂ ಕ್ಷಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜಗತ್ತಿನಲ್ಲಿ ಬಹಳ ಕಾಲ ಬದುಕಿದವನೂ ಕೂಡಾ ಕ್ಷಣಕಾಲ ಬದುಕಿದವನೇ. ದೇವರ ಪ್ರಕಾರ ಕಾಲ ಎಂದರೆ ಒಂದು ಕ್ಷಣವೂ ಹೌದು, ಒಂದು ಕಲ್ಪವೂ ಹೌದು. ಅವನಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಈ ಕಾರಣದಿಂದ ಇದೆಲ್ಲವನ್ನೂ ಬುದ್ಧ ಕ್ಷಣಿಕ ಎಂದು ಹೇಳಿದ. ಇದನ್ನು ಆ ದೈತ್ಯರು ‘ಕ್ಷಣದಲ್ಲಿ ಮಾತ್ರ ಇರುತ್ತದೆ ಮತ್ತೆ ನಾಶವಾಗುತ್ತದೆ’ ಎಂಬ ಅರ್ಥದಲ್ಲಿ, ಅಂದರೆ ‘ಮಿಥ್ಯಾ’ ಎಂದುಕೊಂಡರು. ಈ ‘ವಿಶೇಷ ಎನ್ನುವುದು ದೊಡ್ಡ ಪರಿಕಲ್ಪನೆ. ಗುಣ ಹಾಗೂ ಗುಣಿ, ಅವುಗಳ ನಡುವೆ ಯಾವ ಸಂಬಂಧ ಇದೇ ಎಂದು ತಿಳಿಯುವುದೇ ಬಹಳ ಕಷ್ಟ. ಅದನ್ನು ಬೇರೆಯವರು ಅರ್ಥೈಸಲು ವಿಫಲರಾಗಿದ್ದಾರೆ, ಆದರೆ ಆಚಾರ್ಯ ಮಧ್ವರು ವಸ್ತು ಹಾಗೂ ಗುಣ ಅವುಗಳ ನಡುವೆ ಸರಿಯಾದ ಸಂಬಂಧ ಏನು ಎನ್ನುವುದನ್ನು ವಿವೇಚನೆ ಮಾಡಿ ಹೇಳಿದ್ದಾರೆ.]

 

 

ಜ್ಞೋSಹಂ ಸದೈಕಃ ಪರಮೋ ಮಯೈತತ್ ಸದಾSನನೀಯಂ ಹಿ ಯತೋSಸ್ವತನ್ತ್ರಮ್ ।

ಜ್ಞಾನಾತ್ಮಕಂ ವಿಶ್ವಮತೋ ಮಯೋಕ್ತಂ ಜಡಸ್ವರೂಪಂ ಚ ಕಿಮು ಸ್ಮ ಚೇತನಮ್ ॥ ೩೨.೧೫೬ ॥

 

‘ಜ್ಞಾ’ ಎಂದರೆ ಎಲ್ಲವನ್ನೂ ಬಲ್ಲ, ಜ್ಞಾನ ಸ್ವರೂಪನಾಗಿರುವ ನಾನು. ಇಂತಹ ‘ಜ್ಞಾ’ ಎನಿಸಿಕೊಂಡಿರುವ ನನ್ನಿಂದ ಯಾವಾಗಲೂ  ಅಸ್ವತಂತ್ರ ಪ್ರಪಂಚವು ವ್ಯಾಪಾರೀಕರಣಗೊಳ್ಳಬೇಕಷ್ಟೇ? (ಯಾವುದೇ ಕ್ರಿಯೆ ಆಗಬೇಕಿದ್ದರೂ ನನ್ನಿಂದ ಆಗಬೇಕಷ್ಟೆ?) ಅಂದರೆ  ‘ಜ್ಞಾ’ ಆದ ನನ್ನಿಂದ ಅದು ಕ್ರಿಯೆಯನ್ನು ಹೊಂದುತ್ತದೆ. ಇದನ್ನೇ ನಾನು  ಜ್ಞಾನಂ-ಜ್ಞಾನಂ ಎಂದು ಹೇಳಿರುವುದು. (ಇಡೀ ಪ್ರಪಂಚಕ್ಕೆ ಜ್ಞಾನ ಮಾತ್ರ ಎಂದು ಹೇಳಿರುವುದು) ಅದನ್ನು ಅವರು ತಪ್ಪಾಗಿ ದೃಷ್ಟಿ-ಸೃಷ್ಟಿ, ಭೌತಿಕ ವಸ್ತು ಇಲ್ಲಾ ಎಂದು ಗ್ರಹಿಸಿದರು. ಜಡ ಬೇರೆ, ಚೇತನ ಬೇರೆ. ಆದರೆ ನಾನು ಹೇಳಿದ ‘ಜ್ಞಾನ’ ಎನ್ನುವುದನ್ನು ಅವರು ಈ ಪ್ರಪಂಚ ಎಂದರೆ ಕೇವಲ ‘ಜ್ಞಾನ, ಅದನ್ನು ಬಿಟ್ಟು ಇನ್ನೇನೂ ಇಲ್ಲಾ, ಎನ್ನುವ ಅರ್ಥದಲ್ಲಿ ತಪ್ಪಾಗಿ ಗ್ರಹಿಸಿದರು.

 

ಶಂಶೀಲಕೋSಹಂ ಯತ ಏವ ಚೋಚ್ಚಃ ಶೂನಾಮಕಸ್ತದ್ಧಿ ಮಯಾ ನಿಧೇಯಮ್ ।

ಶೂನ್ಯಾಭಿದಂ ದೋಷವಿರುದ್ಧರೂಪೋ ದೋಷೋಜ್ಝಿತೋSನ್ಯಸ್ತ್ವಖಿಲಾದನಾಮಾ ॥ ೩೨.೧೫೭ ॥

 

ಏನೈವ ಸಾದ್ಯಂ ತ್ವಸದೇವ ನಾಮತಸ್ತ್ವಭಾವ ಏನೈವ ಭವೇದ್ ಯತಸ್ತತ್ ।

ಇತ್ಯಾದಿ ಬೋದ್ಧವ್ಯಮಿದಂ ಸಮಸ್ತಂ ಮಯೋದಿತಂ ಕ್ವಾಪಿ ನ ಹೇಯಮಸ್ತಿ ॥ ೩೨.೧೫೮ ॥

 

‘ಶಂ’ ಎಂದರೆ ಆನಂದಾತ್ಮಕ, ‘ಉ’ ಎಂದರೆ ಉಚ್ಚ ಎಂದರ್ಥ. ಅದರಿಂದಾಗಿ ನನ್ನ ಹೆಸರು ‘ಶೂ. ಇಂತಹ ನನ್ನಿಂದ ಎಲ್ಲವೂ ನಿಯಂತ್ರಿಸಲ್ಪಡುತ್ತದೆ. ಅದರಿಂದಾಗಿ ‘ಶೂನ್ಯ’ ಎನ್ನುವುದು ನನ್ನ ಹೆಸರು. (ಶೂ ಅನ್ನುವುದು ನನ್ನ ಹೆಸರು, ನನ್ನಿಂದ ಈ ಪ್ರಪಂಚ ನಿಯಂತ್ರಿತವಾಗಿದೆ) ಅದರಿಂದಾಗಿ ಶೂನ್ಯಂ-ಶೂನ್ಯಂ ಎಂದು ಹೇಳಿರುವುದು. ಅದನ್ನು ಅವರು ಆಕಾಶ (absolute space) ಎನ್ನುವ ಅರ್ಥದಲ್ಲಿ ಗ್ರಹಿಸಿದರು.

ಅದರಿಂದ ಇಂತಹ ನಿರ್ದುಷ್ಟನಾಗಿರುವ ನಾರಾಯಣನಿಂದ ಕೂಡಿದೆಯಾದ್ದರಿಂದಾಗಿ ‘ಅಸತ್’. (‘ಅ ಎಂದರೆ ನಾರಾಯಣ, ಅವನಿಂದಾಗಿ ಈ ಪ್ರಪಂಚ ಅಸ್ತಿತ್ವವನ್ನು ಪಡೆದಿದೆ. ಹಾಗಾಗಿ ಇದು ಅಸತ್). ಇದೇ ರೀತಿಯಾಗಿ ತಿಳಿಯತಕ್ಕದ್ದು. ಹೀಗಾಗಿ ನಾನು ಹೇಳಿರುವುದರಲ್ಲಿ ಬಿಡಬೇಕಾಗಿರುವುದು ಯಾವುದೂ ಇಲ್ಲ. ಆದರೆ ಇದೆಲ್ಲವನ್ನೂ ಅವರು ತಪ್ಪಾಗಿ ತಿಳಿದರು. (ಹೀಗೆ ಬುದ್ಧ  ದೇವತೆಗಳಿಗೆ ತನ್ನ ಶಾಸ್ತ್ರದ ಮೂಲಾರ್ಥವನ್ನು ತಿಳಿಸಿದ).

 

ಇತ್ಯಾದಿ ದೇವಾನ್ ಪ್ರತಿಬೋಧಯಂಶ್ಚ ದೇವೈಃ ಸಹೋವಾಸ ಸ ಬುದ್ಧದೇವಃ ।

ಗತ್ವಾ ಸ್ವಧಾಮಾಪ್ಯಪರೇಣ ರೂಪೇಣಾSಸ್ತೇ ಪೃಥಕ್ ಚೈಕತನುರ್ಯ್ಯಥೇಷ್ಟಮ್ ॥ ೩೨.೧೫೯ ॥

 

ಇವೇ ಮೊದಲಾಗಿ ದೇವತೆಗಳಿಗೆ ಬೋಧನೆ ಮಾಡುತ್ತಾ, ದೇವತೆಗಳ ಜೊತೆಗೆ ಬುದ್ಧದೇವನು ಆವಾಸಮಾಡಿದನು ಹಾಗೂ ಬೇರೆ ರೂಪದಿಂದ ಸ್ವಧಾಮಕ್ಕೆ ತೆರಳಿದನು. ಹೀಗೆ ಭಗವಂತ ಬುದ್ಧರೂಪದಲ್ಲಿಯೂ,  ಮೂಲರೂಪದಿಂದ ಏಕೀಭೂತನಾಗಿ ತನ್ನ ಇಚ್ಛಾನುಸಾರ ಇರುತ್ತಾನಷ್ಟೇ?