ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 21, 2022

Mahabharata Tatparya Nirnaya Kannada 22-288-293

 

ತಯಾSರ್ತ್ಥಿತಃ ಸಗದಸ್ತುಙ್ಗಮೇನಂ ಗಿರಿಂ ವೇಗಾದಾರುಹದ್ ವಾಯುಸೂನುಃ।

ಪ್ರಶಸ್ಯಮಾನಃ ಸುರಸಿದ್ಧಸಙ್ಘೈಃ ಮೃದ್ನನ್ ದೈತ್ಯಾನ್ ಸಿಂಹಶಾರ್ದ್ದೂಲರೂಪಾನ್ ॥೨೨.೨೮೮॥

 

ತಾವರೆಗಾಗಿ ದ್ರೌಪದಿಯಿಂದ ಬೇಡಲ್ಪಟ್ಟ ಭೀಮಸೇನನು ಗದೆಯನ್ನು ಹಿಡಿದು, ಎತ್ತರವಾಗಿರುವ ಆ ಬೆಟ್ಟವನ್ನು ವೇಗದಿಂದ ಏರಿದನು. ದೇವತೆಗಳಿಂದಲೂ, ಸಿದ್ಧರಿಂದಲೂ ಸ್ತೋತ್ರಮಾಡಲ್ಪಟ್ಟವನಾಗಿ, ಸಿಂಹ-ಶಾರ್ದೂಲ ಮೊದಲಾದವುಗಳ ವೇಷದಲ್ಲಿರುವ ದೈತ್ಯರನ್ನು ತನ್ನ ಕಾಲಿನಿಂದ ಹೊಸಕಿಹಾಕುತ್ತಾ ಭೀಮ ಮುನ್ನೆಡೆದನು.

[ಮಹಾಭಾರತದ ವನಪರ್ವದಲ್ಲಿ (೧೪೮.೪೨) ಈ ವಿವರಣೆ ಕಾಣಸಿಗುತ್ತದೆ. ‘ಸಿಂಹವ್ಯಾಘ್ರಮೃಗಾಂಶ್ಚೈವ ಮರ್ದಯಾನೋ ಮಹಾಬಲಃ’ . ಸಿಂಹ-ವ್ಯಾಘ್ರ ಮೊದಲಾದ ಪ್ರಾಣಿಗಳನ್ನು ಹೊಸಕಿ ಹಾಕುತ್ತಾ ಭೀಮ ಮುಂದೆ ಸಾಗಿದ.  ಸಿಂಹವ್ಯಾಘ್ರಾಶ್ಚ ಸಙ್ಕ್ರುದ್ಧ ಭೀಮಸೇನಮಥಾSದ್ರವನ್ । ಶಕೃನ್ಮೂತ್ರಂ ಚ ಮುಞ್ಚಾನಾ ಭಯವಿಭ್ರಾನ್ತಮಾನಸಾಃ । ವ್ಯಾದಿತಾಸ್ಯಾ ಮಹಾರೌದ್ರಾ ವ್ಯನದನ್  ಭೀಷಣಾನ್ ರವಾನ್’ (೧೪೮.೫೦-೫೧). ]

 

ಆಸೇದಿವಾಂಸ್ತತ್ರ ಹನೂಮದಾಖ್ಯಂ ನಿಜಂ ರೂಪಂ ಪ್ರೋದ್ಯದಾದಿತ್ಯಭಾಸಮ್ ।

ಜಾನನ್ನಪ್ಯೇನಂ ಸ್ವೀಯರೂಪಂ ಸ ಭೀಮಶ್ಚಿಕ್ರೀಡ ಏತೇನ ಯಥಾ ಪರೇಣ ॥೨೨.೨೮೯॥

 

ಆ ಪರ್ವತದಲ್ಲಿ ಉದಯಿಸುವ ಸೂರ್ಯನಂತೆ ಪ್ರಕಾಶಿಸುತ್ತಿರುವ ‘ಹನುಮಂತ’ ಎಂಬ ತನ್ನದೇ ಆಗಿರುವ ಇನ್ನೊಂದು ರೂಪವನ್ನು ಭೀಮಸೇನ ಹೊಂದಿದನು. ಹನುಮಂತನನ್ನು ತನ್ನದ್ದಾದ ರೂಪವೆಂದು ತಿಳಿದಿದ್ದರೂ ಕೂಡಾ, ಬೇರೊಬ್ಬರೊಂದಿಗೆ ಯಾವ ರೀತಿ ಮಾತನ್ನಾಡುತ್ತಾರೋ ಹಾಗೆ ಅವನನ್ನು ಮಾತನಾಡಿಸಿ ಭೀಮ ಕ್ರೀಡಿಸಿದ.

 

ಧರ್ಮ್ಮೋ ದೇವಾನಾಂ ಪರಮೋ ಮಾನುಷತ್ವೇ ಸ್ವೀಯೇ ರೂಪೇSಪ್ಯನ್ಯವದೇವ ವೃತ್ತಿಃ ।

ಅನಾದಾನಂ ದಿವ್ಯಶಕ್ತೇರ್ವಿಶೇಷಾನ್ನರಸ್ವಭಾವೇ ಸರ್ವದಾ ಚೈವ ವೃತ್ತಿಃ ।

ತಸ್ಮಾದ್ ಭೀಮೋ ಹನುಮಾಂಶ್ಚೈಕ ಏವ ಜ್ಯಾಯಃಕನೀಯೋವೃತ್ತಿಮತ್ರಾಭಿಪೇದೇ ॥೨೨.೨೯೦॥

 

ದೇವತೆಗಳು ಮನುಷ್ಯರಾಗಿ ಅವತರಿಸಿದಾಗ, ಮನುಷ್ಯ ಸ್ವಭಾವದಂತೆ ವರ್ತಿಸುವುದು ಅವರಿಗೆ ಧರ್ಮವಾಗಿರುತ್ತದೆ. ದಿವ್ಯಶಕ್ತಿ ಇದ್ದರೂ ಕೂಡಾ ಅದನ್ನು ಅವರು ಬಳಸಬಾರದು. ವಿಶೇಷವಾಗಿ ಅವರು ನರಸ್ವಭಾವದಲ್ಲಿ(ಬೆವರುವುದು, ನಿದ್ರಿಸುವುದು, ಆಯಾಸಗೊಳ್ಳುವುದು, ಇತ್ಯಾದಿ ನರಸ್ವಭಾವದಲ್ಲಿ) ಯಾವಾಗಲೂ ಇರಬೇಕು. ಆ ಕಾರಣದಿಂದ ಭೀಮಸೇನ ಮತ್ತು ಹನುಮಂತ ಇಬ್ಬರೂ ಒಬ್ಬರೇ(ಮುಖ್ಯಪ್ರಾಣನೇ) ಆಗಿದ್ದರೂ ಕೂಡಾ ಹನುಮಂತ ದೊಡ್ಡಣ್ಣ ಹಾಗೂ ತಾನು ಚಿಕ್ಕವನು ಎನ್ನುವ ವರ್ತನೆಯನ್ನು ಭೀಮಸೇನ ಹೊಂದಿದನು.

 

ಸರ್ವೇ ಗುಣಾ ಆವೃತಾ ಮಾನುಷತ್ವೇ ಯುಗಾನುಸಾರಾನ್ಮೂಲರೂಪಾನುಸಾರಾತ್ ।

ಕ್ರಮಾತ್ ಸುರಾಣಾಂ ಭಾಗತೋSವ್ಯಕ್ತರೂಪಾ ಆದಾನತೋ ವ್ಯಕ್ತಿಮಾಯಾನ್ತ್ಯುರೂಣಾಮ್ ॥೨೨.೨೯೧॥

 

ಮನುಷ್ಯರಂತೆ ಬಂದಾಗ ದೇವತೆಗಳಿಗೆ ಯುಗಕ್ಕೆ ಅನುಸಾರವಾಗಿ ಅವರ ಮೂಲರೂಪದ ಎಲ್ಲಾ ಗುಣಗಳಿಗೂ ಆವರಣವಿರುತ್ತದೆ. (ದೇವತೆಗಳಿಗೆ ಜ್ಞಾನ, ಆನಂದ, ಬಲ, ಐಶ್ವರ್ಯ, ಎಲ್ಲವೂ ಇರಬಹುದು. ಆದರೆ ಮನುಷ್ಯತ್ವ ಹೊಂದಿದಾಗ ಅದು ಆವೃತವಾಗಿರುತ್ತದೆ). ಹೀಗಾಗಿ ಅವರವರ ಯೋಗ್ಯತೆಗೆ ಅನುಗುಣವಾಗಿ ಅವರ ಗುಣಗಳು ಅವ್ಯಕ್ತವಾಗಿರುತ್ತದೆ. ಸ್ವರೂಪಭೂತವಾದ ಅತ್ಯಂತ ದೊಡ್ಡ ಗುಣಗಳು ಸ್ವೀಕರಿಸಿದಾಗ ಅಭಿವ್ಯಕ್ತಿಯಾಗುತ್ತದೆ, ಇಲ್ಲದಿದ್ದರೆ ಅಭಿವ್ಯಕ್ತಿ ಆಗುವುದೇ ಇಲ್ಲ.

[ದೊಡ್ಡ ಗುಣವನ್ನು ಸ್ವೀಕರಿಸಿ ಅಭಿವ್ಯಕ್ತಗೊಳಿಸಿರುವುದಕ್ಕೆ  ಉತ್ತಮ ಉದಾಹರಣೆ ಬಲರಾಮ ಪ್ರಲಂಬಾಸುರನನ್ನು ಕೊಂದಿರುವ ಘಟನೆ.   ಆಟವಾಡುವಾಗ ಬಲರಾಮನಿಗೆ ಅವನು ರಾಕ್ಷಸ ಎನ್ನುವುದು ಗೊತ್ತಿರಲಿಲ್ಲ. ಪ್ರಲಂಬ ತನ್ನ ನಿಜರೂಪವನ್ನು ಆವಿಷ್ಕರಿಸಿ, ಬಲರಾಮನನ್ನು ಬೆನ್ನಿನಲ್ಲಿ ಹೊತ್ತು ಓಡಲು ಆರಂಭಿಸಿದಾಗ ಬಲರಾಮ ಭೀತನಾದ. ಆಗ ಕೃಷ್ಣ ಬಲರಾಮನಿಗೆ ಅವನ ಮೂಲರೂಪವನ್ನೂ ಮತ್ತು ಅವನ ಅಂತರ್ಯಾಮಿಯಾಗಿರುವ ತನ್ನ ವಿಶೇಷರೂಪವನ್ನು ನೆನಪಿಸಿದ. ಆಗ ಬಲರಾಮ ತನ್ನ ಮೂಲರೂಪದ ಗುಣವನ್ನು ಸ್ವೀಕರಿಸಿದ ಮತ್ತು  ಮುಷ್ಠಿಯಿಂದ ಗುದ್ದಿ ಪ್ರಲಂಬನನ್ನು ಕೊಂದ. ಮನುಷ್ಯರೂಪದಲ್ಲಿರುವ  ದೇವತೆಗಳು ತಮ್ಮ ದೊಡ್ಡಗುಣವನ್ನು ಈ ರೀತಿ ಸಾಂದರ್ಭಿಕವಾಗಿ ಸ್ವೀಕರಿಸುತ್ತಾರೆ.

ಇದೇ ಬಲರಾಮ ಲಕ್ಷ್ಮಣನಾಗಿದ್ದಾಗ, ರಾವಣನ ಆಯುಧದ ಹೊಡೆತ ತಿಂದು ಕೆಳಗೆ ಬಿದ್ದು ಮೂರ್ಛಿತನಾಗಿದ್ದ. ಆಗ ರಾವಣ ಅವನನ್ನು ಅಪಹರಿಸಿಕೊಂಡು ಹೋಗಲು ಪ್ರಯತ್ನಪಟ್ಟ. ಆದರೆ  ರಾವಣನಿಗೆ ಲಕ್ಷ್ಮಣನನ್ನು ಎತ್ತಲು ಸಾಧ್ಯವಾಗಲಿಲ್ಲ. ಏಕೆಂದರೆ ಲಕ್ಷ್ಮಣ ತನ್ನ ಮೂಲರೂಪದ ಚಿಂತನೆ ಮಾಡಿ(ಭೂಮಿಯನ್ನು ಹೊತ್ತ ಶೇಷನ  ಭಾರವನ್ನು ಚಿಂತನೆ ಮಾಡಿ) ಅದನ್ನು ಅಭಿವ್ಯಕ್ತಗೊಳಿಸಿದ. ಹೀಗಾಗಿ ರಾವಣನಿಂದ ಅವನನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ.]

 

ನೈವಾವ್ಯಕ್ತಿಃ ಕಾಚಿದಸ್ತೀಹ ವಿಷ್ಣೋಃ ಪ್ರಾದುರ್ಭಾವೇSಪ್ಯತಿಸುವ್ಯಕ್ತಶಕ್ತೇಃ ।

ಇಚ್ಛಾವ್ಯಕ್ತಿಃ ಪ್ರಾಯಶೋ ಮಾರುತಸ್ಯ ತದನ್ಯೇಷಾಂ ವ್ಯಕ್ತತಾ ಕಾರಣೇನ ॥೨೨.೨೯೨॥

 

ಅತ್ಯಂತ ವ್ಯಕ್ತವಾಗಿರುವ ಸ್ವರೂಪಶಕ್ತಿಯುಳ್ಳ ನಾರಾಯಣನಿಗೆ ಅವತಾರ ಕಾಲದಲ್ಲಿಯೂ ಕೂಡಾ ಬಲಜ್ಞಾನಾದಿ ಗುಣಗಳ ವಿಷಯದಲ್ಲಿ ಅನಭಿವ್ಯಕ್ತಿ ಎನ್ನುವುದು ಇರುವುದೇ ಇಲ್ಲ. ಇನ್ನು ಮುಖ್ಯಪ್ರಾಣನಿಗೆ ಬಹುತೇಕ ಎಲ್ಲಾ ಸಮಯದಲ್ಲಿ,  ಬಯಸಿದರೆ ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು ಬಿಟ್ಟು ಇತರ ದೇವತೆಗಳಿಗೆ ಯಾವುದೋ ಒಂದು ಕಾರಣ ಇದ್ದರೆ ಮಾತ್ರ ಅಭಿವ್ಯಕ್ತಿಯಾಗುತ್ತದೆ.

[ತಾತ್ಪರ್ಯ: ಇಂದ್ರಾದಿ ದೇವತೆಗಳು ಅವತಾರ ಎತ್ತಿದಾಗ (ಉದಾಹರಣೆಗೆ ರುದ್ರ ಅಶ್ವತ್ಥಾಮನಾದ, ಇಂದ್ರ ಅರ್ಜುನನಾದ, ಶೇಷ ಬಲರಾಮನಾದ) ಅವರಿಗೆ ಅವತಾರದ ಎಲ್ಲಾ ಕಾಲದಲ್ಲಿ ಬಲಜ್ಞಾನದ ಅಭಿವ್ಯಕ್ತಿ ಇರುವುದಿಲ್ಲ. ಹೀಗಾಗಿ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಬೇಕಾಯಿತು, ಬಲರಾಮನಿಗೆ ನೀನು ಶೇಷ, ಸಂಕರ್ಷಣ ರೂಪಿಯಾದ ನನ್ನ ಆವೇಶ ನಿನ್ನಲ್ಲಿದೆ ಎಂದು ಹೇಳಬೇಕಾಯಿತು. ಆದರೆ ಆ ರೀತಿ ಪರಮಾತ್ಮನಿಗಿಲ್ಲ. ಭಗವಂತ ರಾಮನಾದ, ವೇದವ್ಯಾಸನಾದ, ಕೃಷ್ಣನಾದ, ಇನ್ನೂ ಅನೇಕ ರೂಪದಿಂದ ಭೂಮಿಯಲ್ಲಿ ಅವತರಿಸಿದ. ಅಲ್ಲಿ ಅವನಿಗೆ ಮೂಲರೂಪದ ಬಲಜ್ಞಾನಾದಿಗಳು ಇರುವುದು-ಹೋಗುವುದು ಎಂಬುದಿಲ್ಲ. ಮುಖ್ಯಪ್ರಾಣನಿಗೆ(ಉದಾಹರಣೆಗೆ ಹನುಮಂತ, ಭೀಮ) ಬಹುತೇಕ ಎಲ್ಲಾ ಸಮಯದಲ್ಲಿ ಸ್ವೇಚ್ಛಾನುಸಾರ ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು ಬಿಟ್ಟು ಇತರ ದೇವತೆಗಳಿಗೆ ಯಾವುದೋ ಒಂದು ಕಾರಣ ಇದ್ದರೆ ಮಾತ್ರ ಮೂಲರೂಪದ ಬಲಜ್ಞಾನಾದಿ ಗುಣಗಳು ಅಭಿವ್ಯಕ್ತವಾಗುತ್ತದೆ].

 

ತಸ್ಮಾದ್ ಭೀಮೋ ಧರ್ಮ್ಮವೃದ್ಧ್ಯರ್ತ್ಥಮೇವ ಸ್ವೀಯೇ ರೂಪೇSಪ್ಯನ್ಯವದ್ ವೃತ್ತಿಮೇವ ।

ಪ್ರದರ್ಶಯಾಮಾಸ ತಥಾSಸುರಾಣಾಂ ಮೋಹಾಯೈವಾಶಕ್ತವಚ್ಛಕ್ತಿರೂಪಃ             ॥೨೨.೨೯೩॥

 

ಈ ಕಾರಣದಿಂದಲೇ ಭೀಮಸೇನನು ಧರ್ಮವೃದ್ಧಿಗಾಗಿ ಸ್ವಕೀಯನಾಗಿರುವ ಹನುಮಂತನ ಮುಂದೆ   ತನ್ನನ್ನು ಇತರರು ಹೇಗೋ ಹಾಗೆ ತೋರಿಸಿಕೊಂಡ. ಅಷ್ಟೇ ಅಲ್ಲ, ಅಸುರರನ್ನು ಮೊಹಿಸುವುದಕ್ಕಾಗಿಯೇ ಶಕ್ತಿರೂಪನಾದರೂ ಕೂಡಾ ಭೀಮ ಆಶಕ್ತನಂತೆ ತೋರಿದ. 

[ಹನುಮಂತನ ಬಾಲ ಎತ್ತುವ ಪ್ರಸಂಗ ನಡೆದಿರುವುದು ಭೀಮಸೇನನ ಅಜ್ಞಾನದಿಂದಾಗಲೀ, ಬಲಹೀನತೆಯಿಂದಾಗಲೀ ಅಲ್ಲ.   ಇದೆಲ್ಲವನ್ನೂ ಕೂಡಾ ನಾರಾಯಣ ಪಂಡಿತರು ಹೀಗೆ ವಿವರಿಸಿದ್ದಾರೆ: ‘ಗಚ್ಛನ್ ಸೌಗನ್ಧಿಕಾರ್ಥಂ ಪಥಿ ಸ ಹನುಮತಃ ಪುಚ್ಛಮಚ್ಛಸ್ಯ ಭೀಮಃ ಪ್ರೋದ್ಧರ್ತುಂನಾಶಕತ್ ಸ ತ್ವಮುಮುರುವಪುಷಾ ಭೀಷಯಾಮಾಸ ಚೇತಿ । ಪೂರ್ಣಜ್ಞಾನೌಜಸೋಸ್ತೇ ಗುರುತಮ ವಪುಷೋಃ ಶ್ರೀಮದಾನನ್ದತೀರ್ಥ ಕ್ರೀಡಾಮಾತ್ರಂ ತದೇತತ್ ಪ್ರಮದದ ಸುಧೀಯಾಂ ಮೋಹಕದ್ವೇಷಭಾಜಾಮ್’]


Wednesday, August 17, 2022

Mahabharata Tatparya Nirnaya Kannada 22-281-287

 

ಕ್ರಮೇಣ ಪಾರ್ತ್ಥಾ ಅಪಿ ಶೈಶಿರಂ ಗಿರಿಂ ಸಮಾಸದಂಸ್ತತ್ರ ಕೃಷ್ಣಾಂ ಸುದುರ್ಗ್ಗೇ ।

ವಿಷಜ್ಜನ್ತೀಮೀಕ್ಷ್ಯ ತೈಃ ಸಂಸ್ಮೃತೋSಥ ಹೈಡಿಮ್ಬ ಆಯಾತ್ ಸಹಿತೋ ನಿಶಾಚರೈಃ ॥೨೨.೨೮೧॥

 

ತದನಂತರ ಕೃಷ್ಣಪರಮಾತ್ಮನಿಂದ ಬೀಳ್ಕೊಂಡ ಪಾಂಡವರು ಪ್ರಭಾಸದಿಂದ ಹೊರಟು ಹಿಮಾಲಯ ಪರ್ವತವನ್ನು ಹೊಂದಿದರು. ಅಲ್ಲಿ ಕಡಿದಾದ ಪ್ರದೇಶದಲ್ಲಿ ಆಯಾಸಪಡುವ ದ್ರೌಪದಿಯನ್ನು ಕಂಡು ಪಾಂಡವರಿಂದ ಮನದಲ್ಲಿ ನೆನೆಯಲ್ಪಟ್ಟವನಾದ ಘಟೋತ್ಕಚನು ರಾಕ್ಷಸರಿಂದ ಒಡಗೂಡಿ ಅಲ್ಲಿಗೆ ಬಂದನು.

 

ಉವಾಹ ಕೃಷ್ಣಾಂ ಸ ತು ತಸ್ಯ ಭೃತ್ಯಾ ಊಹುಃ ಪಾರ್ತ್ಥಾಂಸ್ತೇ ಬದರ್ಯ್ಯಾಶ್ರಮಂ ಚ ।

ಪ್ರಾಪ್ಯಾತ್ರ ನಾರಾಯಣಪೂಜಯಾ ಕೃತಸ್ವಕೀಯಕಾರ್ಯ್ಯಾ ಯಯುರುತ್ತರಾಂ ದಿಶಮ್ ॥೨೨.೨೮೨॥

 

ಘಟೋತ್ಕಚ ತಾಯಿ ದ್ರೌಪದೀದೇವಿಯನ್ನು ಹೊತ್ತ. ಅವನ ದಾಸರೆಲ್ಲರೂ ಪಾಂಡವರನ್ನು ಹೊತ್ತರು. ಪಾಂಡವರು ಬದರೀಕಾಶ್ರಮವನ್ನು ಹೊಂದಿ, ಅಲ್ಲಿ ನರ-ನಾರಾಯಣರನ್ನು ಪೂಜಿಸುವವ ಮೂಲಕ ತಮ್ಮೆಲ್ಲ ಕಾರ್ಯಗಳನ್ನು ಮುಗಿಸಿಕೊಂಡು ಉತ್ತರದಿಕ್ಕಿಗೆ ತೆರಳಿದರು.

 

ಅತೀತ್ಯ ಶರ್ವಶ್ವಶುರಂ ಗಿರಿಂ ತೇ ಸುವರ್ಣ್ಣಕೂಟಂ ನಿಷಧಂ ಗಿರಿಂ ಚ ।

ಮೇರೋಃ ಪ್ರಾಚ್ಯಾಂ ಗನ್ಧಮಾದೇ ಗಿರೌ ಚ ಪ್ರಾಪುರ್ಬದರ್ಯ್ಯಾಶ್ರಮಮುತ್ತಮಂ ಭುವಿ ॥೨೨.೨೮೩॥

 

ರುದ್ರನ ಮಾವನಾದ ಹಿಮವತ್ಪರ್ವತವನ್ನು ದಾಟಿ, ಬಂಗಾರದ ಶಿಖರವನ್ನು ಹೊಂದಿರುವ ನಿಷಧ ಪರ್ವತವನ್ನೂ ದಾಟಿ, ಮೇರುಪರ್ವತದ ಪೂರ್ವದಿಕ್ಕಿನಲ್ಲಿರುವ ಗಂಧಮಾದನ ಗಿರಿಯಲ್ಲಿರುವ, ಭೂಲೋಕದಲ್ಲೇ ಉತ್ತಮವೆನಿಸಿರುವ ಇನ್ನೊಂದು ಬದರೀಕಾಶ್ರಮವನ್ನು ಕುರಿತು ಅವರು ತೆರಳಿದರು.

 

ತಸ್ಮಿನ್ ಮುನೀನ್ದ್ರೈರಭಿಪೂಜ್ಯಮಾನಾ ನಾರಾಯಣಂ ಪೂಜಯನ್ತಃ ಸದೈವ ।

ಚಕ್ರುಸ್ತಪೋ ಜ್ಞಾನಸಮಾಧಿಯುಕ್ತಂ ಸತ್ತತ್ವವಿದ್ಯಾಂ ಪ್ರತಿಪಾದಯನ್ತಃ ॥೨೨.೨೮೪॥

 

ಆ ಬದರಿಕಾಶ್ರಮದಲ್ಲಿ ಮುನಿಗಳಿಂದ ಸತ್ಕರಿಸಲ್ಪಟ್ಟವರಾದ ಪಾಂಡವರು, ಯಾವಾಗಲೂ ನಾರಾಯಣನನ್ನು ಪೂಜಿಸುವವರಾಗಿ, ವೇದಾಂತದ ಚಿಂತನೆಯನ್ನು ಮಾಡುತ್ತಾ, ಜ್ಞಾನ ಹಾಗೂ ಧ್ಯಾನದಿಂದ ಕೂಡಿರುವ ತಪಸ್ಸನ್ನು ಮಾಡಿದರು.

 

ಏವಂ ಬದರ್ಯ್ಯಾಂ ವಿಹರತ್ಸು ತೇಷು ಕ್ವಚಿದ್ ರಹಃ ಕೃಷ್ಣಯಾ ವಾಯುಸೂನೌ ।

ಸ್ಥಿತೇ ಗರುತ್ಮಾನುರಗಂ ಜಹಾರ ಮಹಾಹ್ರದಾದ್ ವಾಸುದೇವಾಸನಾಗ್ರ್ಯಃ ॥೨೨.೨೮೫

 

ಈರೀತಿಯಾಗಿ ಬದರಿಯಲ್ಲಿ ಪಾಂಡವರು ವಿಹಾರ ಮಾಡುತ್ತಿರಲು, ಒಮ್ಮೆ ಭೀಮಸೇನನು ದ್ರೌಪದಿಯೊಂದಿಗೆ ಏಕಾಂತದಲ್ಲಿರಲು, ಪರಮಾತ್ಮನ ವಾಹನದಲ್ಲಿಯೇ ಶ್ರೇಷ್ಠನಾದ ಗರುಡನು ಅಲ್ಲಿರುವ ದೊಡ್ಡ ಸರೋವರದಿಂದ ಹಾವಂದನ್ನು ಅಪಹರಿಸಿದನು.

 

ತತ್ಪಕ್ಷವಾತೇನ ವಿಚಾಲಿತೇ ತು ತಸ್ಮಿನ್ ಗಿರೌ ಕಮಲಂ ಹೈಮಮಗ್ರ್ಯಮ್ ।

ಪಪಾತ ಕೃಷ್ಣಾಭೀಮಯೋಃ ಸನ್ನಿಧಾನ ಉದ್ಯದ್ಭಾನೋರ್ಮ್ಮಣ್ಡಲಾಭಂ ಸುಗನ್ಧಮ್ ॥೨೨.೨೮೬॥

 

ಗರುಡನ ರೆಕ್ಕೆಯ ಬಡಿತದಿಂದ ಆ ಗಂಧಮಾದನ ಪರ್ವತವು ಅಲುಗಾಡಲು,  ಉದಯಿಸುವ ಸೂರ್ಯಮಂಡಲದಂತೆ ಹೊಳೆಯುವ, ಸುವರ್ಣಾತ್ಮಕವಾದ,  ಶ್ರೇಷ್ಠವಾದ, ಸುಗಂಧಿತವಾದ ತಾವರೆಯೊಂದು ದ್ರೌಪದಿ ಮತ್ತು ಭೀಮಸೇನರ ಹತ್ತಿರ ಬಂದು ಬಿದ್ದಿತು.

 

ದೃಷ್ಟ್ವಾSತಿಗನ್ಧಂ ವರಹೇಮಕಞ್ಜಂ ಕುತೂಹಲಾದ್ ದ್ರೌಪದೀ ಭೀಮಸೇನಮ್ ।

ಬಹೂನ್ಯಯಾಚತ್ ತಾದೃಶಾನ್ಯಾನುಭಾವಮವಿಷಹ್ಯಂ ಜಾನತೀ ದೇವದೈತ್ಯೈಃ ॥೨೨.೨೮೭॥

 

ದ್ರೌಪದಿಯು ಅತ್ಯಂತ ಪರಿಮಳಭರಿತವಾದ, ಶ್ರೇಷ್ಠವಾಗಿರುವ, ಬಂಗಾರವರ್ಣದ ಆ ತಾವರೆಯನ್ನು ಕಂಡು, ಕುತೂಹಲದಿಂದ, ಅದೇರೀತಿಯಾಗಿರುವ ಬಹಳ ಕಮಲಗಳು ತನಗೆ ಬೇಕು ಎಂದು ಭೀಮನನ್ನು ಕೇಳಿದಳು. ದೇವತೆಗಳು ಹಾಗೂ ದೈತ್ಯರಿಂದಲೂ ಎದುರಿಸಲಾಗದ ಬಲ ಭೀಮಸೇನನದ್ದು ಎಂದು ತಿಳಿದವಳಾಗಿಯೇ ದ್ರೌಪದಿ ಈ ರೀತಿ ಭೀಮಸೇನನನ್ನು ಕೇಳಿದಳು.  

Tuesday, August 16, 2022

Mahabharata Tatparya Nirnaya Kannada 22-273-280

 

ಏವಂ ವಸತ್ಯಮಿತಪೌರುಷವೀರ್ಯ್ಯಸಾರೇ ನಾರಾಯಣೇ ಸ್ವಪುರಿ ಶಕ್ರಧನಞ್ಜಯೋಕ್ತಃ ।

ಸಮ್ಪ್ರಾಪ್ಯ ಲೋಮಶಮುನಿಃ ಸಕಲಾನಿ ತೀರ್ತ್ಥಾನ್ಯಾಪ್ತುಂ ಸ ಪಾಣ್ಡುತನಯೇಷು ಸಹಾಯ ಆಸೀತ್ ॥೨೨.೨೭೩॥

 

ಈರೀತಿಯಾಗಿ ಶ್ರೀಕೃಷ್ಣ ಪರಮಾತ್ಮನು ಉತ್ಕೃಷ್ಟವಾಗಿರುವ ಪೌರುಷ ಮೊದಲಾದವುಗಳನ್ನು ಹೊಂದಿ ದ್ವಾರಕೆಯಲ್ಲಿ ಆವಾಸ ಮಾಡುತ್ತಿರಲು, ಇತ್ತ, ಇಂದ್ರನಿಂದಲೂ, ಅರ್ಜುನನಿಂದಲೂ ಹೇಳಿ ಕಳುಹಿಸಲ್ಪಟ್ಟ  ಲೋಮಶಮುನಿಗಳು ಯುಧಿಷ್ಠಿರನ ಬಳಿ ಬಂದು, ಎಲ್ಲಾ ತೀರ್ಥಕ್ಷೇತ್ರದಲ್ಲಿ ಸಂಚರಿಸಲು ಪಾಂಡವರಲ್ಲಿ ಮಾರ್ಗದರ್ಶಕರಾಗಿದ್ದರು.(ತಾತ್ಪರ್ಯ : ಸ್ವರ್ಗಲೋಕಕ್ಕೆ ಲೋಮಶಮುನಿಗಳು ಹೋಗಿದ್ದಾಗ, ಅರ್ಜುನ ಮತ್ತು ಇಂದ್ರ ಅವರಲ್ಲಿ - ಯುಧಿಷ್ಠಿರ, ಭೀಮಸೇನ , ನಕುಲ-ಸಹದೇವರು ಮತ್ತು ದ್ರೌಪದಿ - ಈ ಐದೂ ಜನರೂ ಕೂಡಾ ಭೂಮಿಯಲ್ಲಿರುವ ಸಕಲ ತೀರ್ಥಕ್ಷೇತ್ರಗಳನ್ನು ಸಂಚಾರ ಮಾಡಬೇಕು, ಇದು ದೈವೇಚ್ಛೆ ಎಂದು ಹೇಳಿ ಕಳುಹಿಸಿದ್ದರು. ಲೋಮಶಮುನಿಗಳು ಯುಧಿಷ್ಠಿರನಲ್ಲಿಗೆ ಬಂದು ವಿಷಯವನ್ನು ಹೇಳಿದರು ಮತ್ತು ತೀರ್ಥಯಾತ್ರೆಯಲ್ಲಿ ಪಾಂಡವರಿಗೆ ಮಾರ್ಗದರ್ಶಕರಾದರು).

 

ಪೃಥ್ವೀಂ ಪ್ರದಕ್ಷಿಣತ ಏತ್ಯ ಸಮಸ್ತತೀರ್ತ್ಥಸ್ನಾನಂ ಯಥಾಕ್ರಮತ ಏವ ವಿಧಾಯ ಪಾರ್ತ್ಥಾಃ।

ಸಮ್ಪೂಜ್ಯ ತೇಷು ನಿಖಿಲೇಷು ಹರಿಂ ಸುಭಕ್ತ್ಯಾ ಕೃಷ್ಣೇ ಸಮರ್ಪ್ಪಯಿತುಮಾಪುರಥ ಪ್ರಭಾಸಮ್ ।

ಸಮ್ಭಾವನಾಯ ಸಕಲೈರ್ಯ್ಯದುಭಿಃ ಸಮೇತಸ್ತೇಷಾಂ ಚ ರಾಮಸಹಿತೋ ಹರಿರಾಜಗಾಮ ॥೨೨.೨೭೪॥

 

ಪಾಂಡವರು ಇಡೀ ಭೂಮಿಯನ್ನು ಪ್ರದಕ್ಷಿಣೆ ಮಾಡಿ, ಕ್ರಮವಾಗಿ ಎಲ್ಲಾ ತೀರ್ಥಕ್ಷೇತ್ರಗಳ ಸ್ನಾನವನ್ನು ಶಾಸ್ತ್ರದಲ್ಲಿ ಹೇಳಿದಂತೆ ಮಾಡಿ, ಆ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪರಮಾತ್ಮನನ್ನು ಪೂಜಿಸಿ, ಎಲ್ಲವನ್ನೂ ಶ್ರೀಕೃಷ್ಣಪರಮಾತ್ಮನಿಗೆ ಸಮರ್ಪಿಸಲು ಪ್ರಭಾಸಕ್ಷೇತ್ರಕ್ಕೆ ಬಂದರು.  ಆಗ ಶ್ರೀಕೃಷ್ಣನೂ ಕೂಡಾ  ಎಲ್ಲಾ ಯಾದವರಿಂದ ಕೂಡಿಕೊಂಡು ಬಲರಾಮನೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಬಂದನು.

 

ಪಾರ್ತ್ಥೈಃ ಸಮ್ಪೂಜಿತಸ್ತತ್ರ ಕೃಷ್ಣೋ ಯದುಗಣೈಃ ಸಹ ।

ಪಾರ್ತ್ಥಾನ್ ಸಮ್ಪೂಜಯಾಮಾಸುರ್ವೃಷ್ಣಯಶ್ಚಾSಜ್ಞಯಾ ಹರೇಃ             ॥೨೨.೨೭೫॥

 

ಪ್ರಭಾಸಕ್ಷೇತ್ರದಲ್ಲಿ ಯಾದವರ ಸಮೂಹದಿಂದ ಕೂಡಿರುವ ಶ್ರೀಕೃಷ್ಣನು ಪಾಂಡವರಿಂದ ಪೂಜಿಸಲ್ಪಟ್ಟನು. ಪರಮಾತ್ಮನ ಅಣತಿಯಂತೆ ಯಾದವರೂ ಕೂಡಾ ಪಾಂಡವರನ್ನು ಸತ್ಕರಿಸಿದರು.

 

ತತ್ರ ಭೀಮಂ ತಪೋವೇಷಂ ದೃಷ್ಟ್ವಾSತಿಸ್ನೇಹಕಾರಣಾತ್ ।

ದುರ್ಯ್ಯೋಧನಂ ನಿನ್ದಯತಿ ರಾಮೇ ಸಾತ್ಯಕಿರಬ್ರವೀತ್                        ॥೨೨.೨೭೬॥

 

ಅಲ್ಲಿ ತಪಸ್ವಿಯ ವೇಷದಲ್ಲಿ ಕಾಣುತ್ತಿರುವ ಭೀಮಸೇನನನ್ನು ಕಂಡು, ಸ್ನೇಹ-ಪ್ರೀತಿ ಉಕ್ಕಿಬಂದ ಕಾರಣ, ಬಲರಾಮನು ದುರ್ಯೋಧನನನ್ನು ಬಯ್ಯುತ್ತಿರಲು, ಸಾತ್ಯಕಿಯು ಮಾತನ್ನಾಡಿದ:

 

ಸರ್ವೇ ವಯಂ ನಿಹತ್ಯಾದ್ಯ ಸಕರ್ಣ್ಣಾನ್ ಧೃತರಾಷ್ಟ್ರಜಾನ್ ।

ಅಭಿಮನ್ಯುಂ ಸ್ಥಾಪಯಾಮೋ ರಾಜ್ಯೇ ಯಾವತ್ ತ್ರಯೋದಶಮ್             ॥೨೨.೨೭೭॥

 

ಸಂವತ್ಸರಂ ಸಮಾಪ್ಯೈವ ಪುರಂ ಯಾಸ್ಯನ್ತಿ ಪಾಣ್ಡವಾಃ ।

ತತೋ ಯುಧಿಷ್ಠಿರೋ ರಾಜಾ ರಾಜ್ಯಂ ಶಾಸತು ಪೂರ್ವವತ್                ॥೨೨.೨೭೮॥

 

‘ಬಲರಾಮ, ತಡವೇಕೆ? ನಾವೆಲ್ಲರೂ ಕೂಡಾ ಕರ್ಣನಿಂದ ಕೂಡಿರುವ ದುರ್ಯೋಧನ ಮೊದಲಾದವರನ್ನು ಇವತ್ತೇ ಕೊಂದು, ಹದಿಮೂರನೇ ವರ್ಷ ಮುಗಿಯುವ ತನಕ ಅಭಿಮನ್ಯುವನ್ನು ರಾಜನನ್ನಾಗಿ  ಮಾಡೋಣ. ತಮ್ಮ ಅಜ್ಞಾತವಾಸವನ್ನು ಮುಗಿಸಿ ಪಾಂಡವರು ಹಸ್ತಿನಪುರಕ್ಕೆ ಬಂದ ನಂತರ ಯುಧಿಷ್ಠಿರನು ಹಿಂದಿನಂತೆಯೇ ರಾಜ್ಯವನ್ನಾಳಲಿ’ ಎಂದನು. (ಅಲ್ಲಿಯತನಕ ಪ್ರತಿನಿಧಿಯಂತೆ ಅಭಿಮನ್ಯುವನ್ನು ರಾಜನನ್ನಾಗಿರಿಸೋಣ ಎನ್ನುವ ಸಲಹೆ)   

 

ಏವಂ ವದತ್ಯೇವ ಶಿನಿಪ್ರವೀರೇ ಜನಾರ್ದ್ದನಃ ಪಾರ್ತ್ಥಮುಖಾನ್ಯುದೀಕ್ಷ್ಯ ।

ಉವಾಚ ಶೈನೇಯ ನ ಪಾಣ್ಡುಪುತ್ರಾಃ ಪರೇಣ ಸಂಸಾಧಿತರಾಜ್ಯಕಾಮಾಃ ॥೨೨.೨೭೯॥

 

ಸ್ವಬಾಹುವೀರ್ಯ್ಯೇಣ ನಿಹತ್ಯ ಶತ್ರೂನಾಪ್ಸ್ಯನ್ತಿ ರಾಜ್ಯಂ ತ ಇತೀರಿತೇSಮುನಾ ।

ತಥೇತಿ ಪಾರ್ತ್ಥಾ ಅವದಂಸ್ತತಸ್ತೇ ಕೃಷ್ಣಂ ಪುರಸ್ಕೃತ್ಯ ಯಯುರ್ದ್ದಶಾರ್ಹಾಃ ॥೨೨.೨೮೦॥

 

ಈರೀತಿಯಾಗಿ ಸಾತ್ಯಕಿಯು ಹೇಳುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಪಾಂಡವರ ಮುಖಗಳನ್ನು ಕಂಡು ಹೇಳಿದ: ಓ ಸಾತ್ಯಕಿಯೇ, ಪಾಂಡವರು ಬೇರೊಬ್ಬರು ರಾಜ್ಯವನ್ನು ಗೆದ್ದು ಕೊಟ್ಟರೆ, ಅದನ್ನು ಆಳಬೇಕೆಂದು ಬಯಸುವವರಲ್ಲ.  

ಪಾಂಡವರು  ಏನಿದ್ದರೂ ತಮ್ಮ ಸ್ವಂತ ತೋಳ್ಬಲದಿಂದ ಶತ್ರುಗಳನ್ನು ಕೊಂದು ರಾಜ್ಯವನ್ನು ಹೊಂದುತ್ತಾರೆ. (ಬೇರೊಬ್ಬರು ಸಹಾಯ ಮಾಡಬಹುದೇ ವಿನಃ, ಸ್ವಾಭಿಮಾನಿಗಳಾದ ಅವರು ಬೇರೊಬ್ಬರು ಗೆದ್ದುಕೊಟ್ಟರೆ ಅದನ್ನು ಸ್ವೀಕರಿಸಲಾರರು) ಎಂದನು.  ಆಗ ಪಾಂಡವರು ಕೃಷ್ಣನ ಅಭಿಪ್ರಾಯ ಸರಿ ಎಂದು ಹೇಳಿದರು. ತದನಂತರ ಯಾದವರು ಕೃಷ್ಣನನ್ನು ಮುಂದೆ ಮಾಡಿಕೊಂಡು ದ್ವಾರಕಾ ಪಟ್ಟಣಕ್ಕೆ ಹಿಂತಿರುಗಿದರು.

Monday, August 15, 2022

Mahabharata Tatparya Nirnaya Kannada 22-266-272

 

ಮೋಚಯಿತ್ವಾSನಿರುದ್ಧಂ ಚ ಯಯೌ ಬಾಣೇನ ಪೂಜಿತಃ ।

ಏವಮಗ್ನೀನಙ್ಗಿರಸಂ ಜ್ವರಂ ಸ್ಕನ್ದಮುಮಾಪತಿಮ್             ॥೨೨.೨೬೬॥

 

ಬಾಣಂ ಚಾಯತ್ನತೋ  ಜಿತ್ವಾ ಪ್ರಾಯಾದ್ ದ್ವಾರವತೀಂ ಪುನಃ ।

ಯೇನಾಯತ್ನೇನ ವಿಜಿತಃ ಸರ್ವಲೋಕಹರೋ ಹರಃ                 ॥೨೨.೨೬೭॥

 

ಕಿಂ ಜ್ವರಾದಿಜಯೋ ವಿಷ್ಣೋಸ್ತಸ್ಯಾನನ್ತಸ್ಯ ಕತ್ಥ್ಯತೇ ।

ಈದೃಶಾನನ್ತಸಙ್ಖ್ಯಾನಾಮ್ ಶಿವಾನಾಂ ಬ್ರಹ್ಮಣಾಮಪಿ             ॥೨೨.೨೬೮॥

 

ರಮಾಯಾ ಅಪಿ ಯದ್ವೀಕ್ಷಾಂ ವಿನಾ ನ ಚಲಿತುಂ ಬಲಮ್ ।

ನಚ ಜ್ಞಾನಾದಯೋ ಭಾವಾ ನಚಾಸ್ತಿತ್ವಮಪಿ ಕ್ವಚಿತ್                 ॥೨೨.೨೬೯॥

 

ಅನನ್ತಶಕ್ತೇಃ ಕೃಷ್ಣಸ್ಯ ನ ಚಿತ್ರಃ ಶೂಲಿನೋ ಜಯಃ ।

ಚಿತ್ರಲೇಖಾಸಮೇತೋಷಾನ್ವಿತಪೌತ್ರಸಮನ್ವಿತಃ                     ॥೨೨.೨೭೦॥

 

ಸರಾಮಃ ಸಸುತೋ ವೀನ್ದ್ರಮಾರು̐ಹ್ಯ ದ್ವಾರಕಾಂ ಗತಃ ।

ರೇಮೇ ತತ್ರ ಚಿರಂ ಕೃಷ್ಣೋ ನಿತ್ಯಾನನ್ದೋ ನಿಜೇಚ್ಛಯಾ             ॥೨೨.೨೭೧॥

 

ಶ್ರೀಕೃಷ್ಣನು ಅನಿರುದ್ಧನನ್ನು ಬಂಧನದಿಂದ ಬಿಡುಗಡೆಗೊಳಿಸಿ, ಬಾಣನಿಂದ ಸತ್ಕಾರಕ್ಕೆ ಒಳಗಾಗಿ ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಈರೀತಿಯಾಗಿ ಶ್ರೀಕೃಷ್ಣ ಅಗ್ನಿಗಳನ್ನೂ, ರುದ್ರನ ಭೃತ್ಯನಾಗಿರುವ ಅಂಗಿರಸನನ್ನೂ, ಜ್ವರನನ್ನೂ, ಷಣ್ಮುಖನನ್ನೂ, ಸದಾಶಿವನನ್ನೂ, ಬಾಣನನ್ನೂ, ಹೀಗೆ ಎಲ್ಲರನ್ನೂ ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಯಾವ ಪರಮಾತ್ಮನಿಂದ ಯಾವುದೇ ಯತ್ನವಿಲ್ಲದೆ ಪ್ರಳಯಕಾಲದಲ್ಲಿ ಎಲ್ಲಾ ಲೋಕವನ್ನು ನಾಶಮಾಡುವ ಸದಾಶಿವನು ಗೆಲ್ಲಲ್ಪಟ್ಟನೋ, ಅಂತಹ ನಾರಾಯಣನಿಗೆ ಜ್ವರ ಮೊದಲಾದವರ ಮೇಲಿನ ವಿಜಯವು  ಏನು ಆಶ್ಚರ್ಯ?

ಅನಂತ ಕಾಲದಲ್ಲಿ ಅನಂತ ಸಂಖ್ಯೆಯಲ್ಲಿರುವ ಬ್ರಹ್ಮ-ರುದ್ರಾದಿಗಳಿಗಾಗಲೀ, ಅಷ್ಟೇ ಅಲ್ಲದೇ ಲಕ್ಷ್ಮೀದೇವಿಗೂ ಕೂಡಾ, ಯಾರ ಕಡೆಗಣ್ಣ ನೋಟವು ಇಲ್ಲದೇ ಅಲುಗಾಡಲೂ ಕೂಡಾ ಬಲವಿಲ್ಲವೋ, ಜ್ಞಾನ ಮೊದಲಾಗಿರುವ ಸಂಗತಿಗಳು ಇರುವುದಿಲ್ಲವೋ, ಅಸ್ತಿತ್ವ ಕೂಡಾ ಸಾಧ್ಯವಾಗುವುದಿಲ್ಲವೋ, ಅಂತಹ  ಎಣೆಯಿರದ ಕಸುವಿರುವ ಶ್ರೀಕೃಷ್ಣ ಸದಾಶಿವನನ್ನು ಗೆಲ್ಲುವುದು ಆಶ್ಚರ್ಯಕರವಾದುದ್ದೇ ಅಲ್ಲ.

ಹೀಗೆ ಶ್ರೀಕೃಷ್ಣ ಚಿತ್ರಲೇಖೆಯೊಂದಿಗಿರುವ ಉಷಾದೇವಿಯಿಂದ ಕೂಡಿರುವ ಮೊಮ್ಮಗನಾದ ಅನಿರುದ್ಧನಿಂದ ಕೂಡಿಕೊಂಡು, ಬಲರಾಮ, ಪ್ರದ್ಯುಮ್ನನಿಂದಲೂ ಕೂಡಿಕೊಂಡು, ಗರುಡನನ್ನೇರಿ ದ್ವಾರಕೆಗೆ ತೆರಳಿದನು. ಅಲ್ಲಿ ಸದಾ ಆನಂದವನ್ನು ಹೊಂದಿರುವ ಶ್ರೀಕೃಷ್ಣನು ತನ್ನ ಬಯಕೆಯಂತೆ ಕ್ರೀಡಿಸಿದನು.

 

ಏವಂವಿಧಾನ್ಯಗಣಿತಾನಿ ಯದೂತ್ತಮಸ್ಯ ಕರ್ಮ್ಮಾಣ್ಯಗಣ್ಯಮಹಿಮಸ್ಯ ಮಹೋತ್ಸವಸ್ಯ ।

ನಿತ್ಯಂ ರಮಾಕಮಲಜನ್ಮಗಿರೀಶಶಕ್ರಸೂರ್ಯ್ಯಾದಿಭಿಃ ಪರಿನುತಾನಿ ವಿಮುಕ್ತಿದಾನಿ ॥೨೨.೨೭೨॥

 

ಎಣೆಯಿರದ ಮಹಿಮೆಯುಳ್ಳ, ಉತ್ಕೃಷ್ಟ ಆನಂದ ಸ್ವರೂಪನಾದ,  ಯಾವಾಗಲೂ ಕೂಡಾ ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಇಂದ್ರ, ಸೂರ್ಯ, ಇವರೇ ಮೊದಲಾಗಿರುವ ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವ ಪರಮಾತ್ಮನ ಕರ್ಮಗಳ ಸ್ತೋತ್ರ - ಮುಕ್ತಿಯನ್ನು ಕೊಡತಕ್ಕವುಗಳಾಗಿವೆ.

Sunday, August 14, 2022

Mahabharata Tatparya Nirnaya Kannada 22-261-265

 

ಯದಾ ಜ್ವರಾದ್ಯಾ ಅಖಿಲಾಃ ಪ್ರವಿದ್ರುತಾಸ್ತದಾ ಸ್ವಯಂ ಪ್ರಾಪ ಹರಿಂ ಗಿರೀಶಃ ।

ತಯೋರಭೂದ್ ಯುದ್ಧಮಥೈನಮಚ್ಯುತೋ ವಿಜೃಮ್ಭಯಾಮಾಸ ಹ ಜೃಮ್ಭಣಾಸ್ತ್ರತಃ ॥೨೨.೨೬೧॥

 

ಯಾವಾಗ ಜ್ವರ ಮೊದಲಾದ ಎಲ್ಲಾ ಭೃತ್ಯರು ಪಲಾಯನ ಮಾಡಿದರೋ, ಆಗ ಸ್ವಯಂ ರುದ್ರನು ಯುದ್ಧಕ್ಕಾಗಿ ನಾರಾಯಣನನ್ನು ಹೊಂದಿದನು. ಶ್ರೀಕೃಷ್ಣ ಹಾಗು ಸದಾಶಿವನ ನಡುವೆ ಯುದ್ಧವಾಯಿತು. ಸ್ವಲ್ಪ ಹೊತ್ತಿನ ನಂತರ ಶ್ರೀಕೃಷ್ಣ ಪರಮಾತ್ಮನು ಜೃಮ್ಭಣಾಸ್ತ್ರದಿಂದ ಸದಾಶಿವನ ಮೈಯನ್ನು ಕುಗ್ಗಿಸಿದ. (ಜೃಮ್ಭಣ ಎನ್ನುವುದಕ್ಕೆ  ಮೈ ಮರಗಟ್ಟುವುದು/ಸ್ತಂಭೀಕರಿಸುವುದು, ಪದೇ ಪದೇ ಆಕಳಿಸುವಂತಾಗುವುದು  ಇತ್ಯಾದಿ ಅರ್ಥಗಳಿವೆ).

 

ವಿಜೃಮ್ಭಿತೇ ಶಙ್ಕರೇ ನಿಷ್ಪ್ರಯತ್ನೇ ಸ್ಥಾಣೂಪಮೇ ಸಂಸ್ಥಿತೇ ಕಞ್ಜಜಾತಃ ।

ದೈತ್ಯಾವೇಶಾದ್ ವಾಸುದೇವಾನಭಿಜ್ಞಂ ಸಮ್ಬೋಧಯಾಮಾಸ ಸದುಕ್ತಿಭಿರ್ವಿಭುಃ ॥೨೨.೨೬೨॥

 

ಸದಾಶಿವನು ತನ್ನ ದೇಹದ ಎಲ್ಲಾ ಕ್ರಿಯೆಗಳನ್ನು ಕಳೆದುಕೊಂಡು, ಪ್ರಯತ್ನವೇ ಇಲ್ಲದ ಮೋಟು ಮರದಂತಾಗಲು, ಬ್ರಹ್ಮದೇವರು ದೈತ್ಯಾವೇಶದಿಂದಾಗಿ ಪರಮಾತ್ಮನನ್ನು ತಿಳಿಯದೇ ಯುದ್ಧ ಮಾಡುತ್ತಿರುವ  ಸದಾಶಿವನಿಗೆ ವೇದೊಕ್ತಿಯಿಂದ ತಿಳುವಳಿಕೆ(ನೆನಪಿಸಿ) ಕೊಟ್ಟರು.

 

ಪ್ರಗೃಹ್ಯ ಶರ್ವಂ ಚ ವಿವೇಶ ವಿಷ್ಣೋಃ ಸ ತೂದರಂ ದರ್ಶಯಾಮಾಸ ತತ್ರ ।

ಶಿವಸ್ಯ ರೂಪಂ ಸ್ತಮ್ಭಿತಂ ಬಿಲ್ವನಾಮ್ನಿ ವನೇ ಗಿರೀಶೇನ ಚ ಯತ್ ತಪಃ ಕೃತಮ್ ।

ಶೈವಂ ಪದಂ ಪ್ರಾಪ್ತುಮೇವಾಚ್ಯುತಾಚ್ಚ ತಚ್ಚಾವದತ್ ಕಞ್ಜಜಃ ಶಙ್ಕರಸ್ಯ ॥೨೨.೨೬೩॥

 

ಸದಾಶಿವನನ್ನು ಕರೆದುಕೊಂಡು ಬ್ರಹ್ಮದೇವರು ಶ್ರೀಕೃಷ್ಣನ ಉದರವನ್ನು ಪ್ರವೇಶಮಾಡಿದರು. (ಇದು ಹೊರಗಿರುವ ಅಯೋಗ್ಯರಿಗೆ ಕಾಣುವ ಕ್ರಿಯೆ ಅಲ್ಲ). ಅಲ್ಲಿ ಕೃಷ್ಣನ ಅಸ್ತ್ರದಿಂದ ಸ್ತಂಭಿತವಾದ ರುದ್ರನ ರೂಪಾಂತರವನ್ನು ತೋರಿಸಿ. ಬಿಲ್ವಾ ಎನ್ನುವ ಹೆಸರಿನ ಕಾಡಿನಲ್ಲಿ ಹಿಂದೆ ಸದಾಶಿವನಿಂದ ಶಿವಪದವಿಯನ್ನು ಹೊಂದಲು ಏನು ತಪಸ್ಸು ಮಾದಲ್ಪಟ್ಟಿತ್ತೋ, ಅದರ ಬಗೆಗೆ ಅರಿವು ನೀಡಿದರು. ಅಂದರೆ ಯಾವ ಪರಮಾತ್ಮನಿಂದ ಶಿವ ಪದವಿಯನ್ನು ಹೊಂದಿರುವೆಯೋ ಅದೇ ಪರಮಾತ್ಮನಿಗೆ ವಿರುದ್ಧ ನಿಂತಿರುವೆ  ಎಂದು ಬ್ರಹ್ಮದೇವರು ರುದ್ರದೇವರಿಗೆ ಬೋಧನೆ ಮಾಡಿದರು.  ಸದಾಶಿವ ಭಗವಂತನ ಯಾವ ರೂಪವನ್ನು ಉಪಾಸನೆ ಮಾಡುತ್ತಾನೋ ಆ ರೂಪದ ಬಗ್ಗೆಯೂ  ಬ್ರಹ್ಮ ದೇವರು ಹೇಳಿದರು.

 

ಅಪೇತಮೋಹೋsಥ ವೃಷಧ್ವಜೋ ಹರಿಂ ತುಷ್ಟಾವ ಬಾಣೋSಭಿಸಸಾರ ಕೇಶವಮ್ । 

ತಸ್ಯಾಚ್ಯುತೋ  ಬಾಹುಸಹಸ್ರಮಚ್ಛಿನತ್ ಪುನಶ್ಚಾರಿಂ ಜಗೃಹೇ ತಚ್ಛಿರೋರ್ತ್ಥೇ ॥೨೨.೨೬೪॥

 

ತದನಂತರ ಮೋಹವನ್ನು ಕಳೆದುಕೊಂಡ, ವೃಷಭವನ್ನೇ ಧ್ವಜದ ಚಿಹ್ನೆಯಾಗಿ ಹೊಂದಿರುವ ಸದಾಶಿವನು ಪರಮಾತ್ಮನನ್ನು ಸ್ತೋತ್ರ ಮಾಡಿದನು. ಆಗ ಬಾಣಾಸುರನು ಪರಮಾತ್ಮನ ಬಳಿ ಯುದ್ಧ ಮಾಡಲು ಬಂದ. ಶ್ರೀಕೃಷ್ಣನು ಅವನ ಸಾವಿರ ತೋಳುಗಳನ್ನು ಕತ್ತರಿಸಿದ ಮತ್ತು ಅವನ ತಲೆಯನ್ನು ಕತ್ತರಿಸಲು ಚಕ್ರವನ್ನು ಕೈಗೆತ್ತಿಕ್ಕೊಂಡ.

 

ತದಾ ಶಿವೇನ ಪ್ರಣತೋ ಬಾಣರಕ್ಷಣಕಾಮ್ಯಯಾ ।

ಕೃತ್ವಾ ಸ್ವಭಕ್ತಂ ಬಾಣಂ ತಂ ರರಕ್ಷ ದ್ವಿಭುಜೀಕೃತಮ್    ॥೨೨.೨೬೫॥

 

ಆಗ ಬಾಣಾಸುರನನ್ನು ರಕ್ಷಣೆ ಮಾಡಬೇಕು ಎನ್ನುವ ಬಯಕೆಯಿಂದ ಸದಾಶಿವನಿಂದ ನಮಸ್ಕೃತನಾದ ಶ್ರೀಕೃಷ್ಣನು,  ಬಾಣನನ್ನು ತನ್ನ ಭಕ್ತನನ್ನಾಗಿ ಮಾಡಿಕೊಂಡು, ಅವನ ಎರಡು ಭುಜವನ್ನಷ್ಟೇ ಉಳಿಸಿ ರಕ್ಷಿಸಿದ.

Friday, August 12, 2022

Mahabharata Tatparya Nirnaya Kannada 22-251-260

 

ಗೂಢಂ ಕನ್ಯಾಗೃಹೇ ತಂ ತು ಜ್ಞಾತ್ವಾ ಕನ್ಯಾಭಿರಕ್ಷಿಣಃ ।

ಊಚುರ್ಬಾಣಯಾದಿಶಚ್ಚ ಕಿಙ್ಕರಾನ್ ಗ್ರಹಣೇSಸ್ಯ ಸಃ ॥೨೨.೨೫೧॥

 

ಅಂತಃಪುರದಲ್ಲಿ ಅವಿತಿರುವ ಅನಿರುದ್ಧನನ್ನು ಅಂತಃಪುರದ ಕಾವಲುಗಾರರು ತಿಳಿದು ಬಾಣನಿಗೆ ತಿಳಿಸಿದರು. ಬಾಣಾಸುರನು ಅನಿರುದ್ಧನನ್ನು ಸೆರೆಹಿಡಿಯಲು ಭೃತ್ಯರಿಗೆ ಆಜ್ಞೆ ಮಾಡಿದನು.

 

ಆಗತಾನನಿರುದ್ಧಸ್ತಾನ್ ಪರಿಘೇಣ ಮಹಾಬಲಃ ।

ನಿಹತ್ಯ ದ್ರಾವಯಾಮಾಸ ಸ್ವಯಮಾಯಾತ್ ತತೋSಸುರಃ             ॥೨೨.೨೫೨॥

 

ಹಿಡಿಯಲು ಬಂದ ಆ ಎಲ್ಲಾ ಭೃತ್ಯರನ್ನು ಮಹಾಬಲನಾಗಿರುವ ಅನಿರುದ್ಧನು ಬಾಗಿಲಿಗೆ ಹಾಕಿದ ಚಿಲಕದಿಂದ ಕೊಂದು ಉಳಿದವರನ್ನು ಓಡಿಸಿದನು. ಆಗ ಬಾಣಾಸುರನೇ ಸ್ವಯಂ ಬಂದ.

 

ಸ ತು ಯುಧ್ವಾSತಿಕೃಚ್ಛ್ರೇಣ ನಾಗಾಸ್ತ್ರೇಣ ಬಬನ್ಧ ತಮ್ ।

ಅಥ ಕೃಷ್ಣಃ ಸಮಾರುಹ್ಯ ಗರುಡಂ ರಾಮಸಂಯುತಃ             ॥೨೨.೨೫೩॥

 

ಪ್ರದ್ಯುಮ್ನೇನ ಚ ತತ್ರಾಗಾತ್ ಪ್ರಥಮಂ ತತ್ರ ವಹ್ನಿಭಿಃ ।

ಯದ್ಧ್ವೈವಾಙ್ಗಿರಸಾ ಚೈವ  ಕ್ಷಣಾದ್ ವಿದ್ರಾಪ್ಯ ತಾನ್ ಹರಿಃ  ॥೨೨.೨೫೪॥

 

ವಿದ್ರಾಪ್ಯ ಸರ್ವಪ್ರಮಥಾನಾಸಸಾದ್ ಜ್ವರಂ ತತಃ ।

ತೇನ ಭಸ್ಮಪ್ರಹಾರೇಣ ಜ್ವರಿತಂ ರೋಹಿಣೀಸುತಮ್ ॥೨೨.೨೫೫॥

 

ಅನಿರುದ್ಧನೊಂದಿಗೆ ಸೆಣಸಿದ ಬಾಣನು, ಅತಿಕಷ್ಟದಿಂದ ಅನಿರುದ್ಧನನ್ನು ಸರ್ಪಾಸ್ತ್ರದಿಂದ ಬಂಧಿಸಿದನು. ಅನಿರುದ್ಧ ಬಾಣಾಸುರನ ಸೆರೆಗೆ ಒಳಗಾದ ವಿಷಯವನ್ನು(ನಾರದರಿಂದ) ತಿಳಿದ ಶ್ರೀಕೃಷ್ಣನು ಬಲರಾಮ, ಪ್ರದ್ಯುಮ್ನರೊಂದಿಗೆ ಕೂಡಿ ಗರುಡನನ್ನು ಏರಿ ಬಾಣಾಸುರನ ಪಟ್ಟಣವಾದ ಶೋಣಿತಪುರಕ್ಕೆ ಬಂದನು.  ನಗರವನ್ನು ಪ್ರವೇಶ ಮಾಡಬೇಕಾದರೆ  ಶುಚಿ, ಪಾವಕ ಮತ್ತು ಪವಮಾನ ಎನ್ನುವ ಮೂರು ಅಗ್ನಿರೂಪಗಳೊಂದಿಗೆ ಯುದ್ಧಮಾಡಿ, ರುದ್ರನ ಭೃತ್ಯರಲ್ಲಿ ಮುಖ್ಯಾದ ಅಂಗಿರಸನ ಜೊತೆಗೂ ಯುದ್ಧಮಾಡಿ, ಕ್ಷಣದಲ್ಲಿ ಎಲ್ಲರನ್ನು ಓಡಿಸಿ, ರುದ್ರನ ಇತರ ಗಣಗಳನ್ನೂ ಕೂಡಾ ಓಡಿಸಿ, ತದನಂತರ ಜ್ವರದ ಅಭಿಮಾನಿಯನ್ನು ಶ್ರೀಕೃಷ್ಣ ಇದಿರುಗೊಂಡ. ಜ್ವರನ ಬಸ್ಮ ಪ್ರಹಾರದಿಂದ ಬಲರಾಮನು ಜ್ವರಕ್ಕೊಳಗಾಗಿ  ಏನೂ ಮಾಡಲಾರದವನಾದ.

[ಈ ಕುರಿತು ವಿಷ್ಣುಪುರಾಣದಲ್ಲಿ, ಹರಿವಂಶದಲ್ಲಿ ವಿವರಣೆಯನ್ನು ಕಾಣಬಹುದು. ಅನಿರುದ್ಧನನ್ನು ಬಂಧಿಸಿರುವ ವಿಷಯವನ್ನು ನಾರದರು ಯಾದವರಿಗೆ ತಿಳಿಸುತ್ತಾರೆ]

 

ಆಶ್ಲಿಷ್ಯ ವಿಜ್ವರಂ ಚಕ್ರೇ ವಾಸುದೇವೋ ಜಗತ್ಪ್ರಭುಃ ।

ಸ್ವಯಂ ವಿಕ್ರೀಡ್ಯ ತೇನಾಥ ಕಞ್ಚಿತ್ ಕಾಲಂ ಜನಾರ್ದ್ದನಃ             ॥೨೨.೨೫೬॥

 

ನಿಷ್ಪಿಷ್ಯ ಮುಷ್ಟಿಭಿಶ್ಚಾನ್ಯಂ ಸಸರ್ಜ್ಜ  ಜ್ವರಮಚ್ಯುತಃ ।

ಸ್ವಯಂ ಜಿತ್ವಾSಪಿ ಗಿರಿಶಭೃತ್ಯಂ ನಾಲಮಿತಿ ಪ್ರಭುಃ                  ॥೨೨.೨೫೭॥

 

ಸ್ವಭೃತ್ಯೇನೈವ ಜೇತವ್ಯ ಇತ್ಯನ್ಯಂ ಸಸೃಜೇ ತದಾ ।

ಜ್ವರೇಣ ವೈಷ್ಣವೇನಾಸೌ ಸುಭೃಶಂ ಪೀಡಿತಸ್ತದಾ                     ॥೨೨.೨೫೮॥

 

ಜ್ವರಕ್ಕೊಳಗಾದ ಬಲರಾಮನನ್ನು ಆಲಂಗಿಸಿದ ಶ್ರೀಕೃಷ್ಣ, ಅವನನ್ನು  ಜ್ವರರಹಿತನನ್ನಾಗಿ ಮಾಡಿದನು. ಶ್ರೀಕೃಷ್ಣಪರಮಾತ್ಮನು ಕೆಲವು ಸಮಯದ ತನಕ ಜ್ವರದ ಅಭಿಮಾನಿಯೂ, ರುದ್ರನ ಭೃತ್ಯನೂ ಆದ  ಶೈವಜ್ವರನೊಂದಿಗೆ ತಾನೇ ಯುದ್ಧಮಾಡಿ, ಅವನ ಮೇಲೆ ಮುಷ್ಠಿಪ್ರಹಾರ ಮಾಡಿ, ತದನಂತರ ಶೈವ ಜ್ವರನನ್ನು ನಾಶ ಮಾಡಲು ಇನ್ನೊಂದು ಜ್ವರನನ್ನು ತಾನು ಸೃಷ್ಟಿಸಿದ. ರುದ್ರನ ಭೃತ್ಯನಾದ ಜ್ವರನನ್ನು ತಾನು ಗೆದ್ದಿದ್ದರೂ ಕೂಡಾ,  ಅದು ಸಾಲದು ಎಂದು, ತನ್ನ ಭೃತ್ಯನಿಂದಲೇ ಸೋಲಿಸಲ್ಪಡಬೇಕು ಎಂದು ಇನ್ನೊಬ್ಬ ಜ್ವರನನ್ನು ಶ್ರೀಕೃಷ್ಣ ಸೃಷ್ಟಿ ಮಾಡಿದ. ಕೃಷ್ಣ ಸೃಷ್ಟಿಸಿದ ಜ್ವರದಿಂದ ಶೈವಜ್ವರನು ಚೆನ್ನಾಗಿ ಪೀಡಿತನಾದ.

[ಲೋಕದಲ್ಲಿ ಜ್ವರ ಬಂದಾಗ ಮನಸ್ಸು ಮುದುಡುವುದು, ಮನಸ್ಸಿಗೆ ಕಷ್ಟವಾಗುವುದು, ಇತ್ಯಾದಿ ಆಗುವುದು ಈ ಶೈವಜ್ವರದಿಂದ. ವೈಷ್ಣವ ಜ್ವರ  ಎಲ್ಲಿಯೂ ಪ್ರಯೋಗದಲ್ಲಿ ಇಲ್ಲ. ದೇಹದಲ್ಲಿರುವ ಮಾಂಸಖಂಡಗಳು, ಇತ್ಯಾದಿ ಧಾತುಗಳೇನಿವೆ, ಅದೆಲ್ಲವೂ ಕೂಡಾ ಮನಸ್ಸಿನೊಂದಿಗೆ ಕೂಡಿ ಸಂಕಟಕ್ಕೆ ಒಳಗಾಗುವುದು ಶೈವಜ್ವರದಿಂದ]

 

ಗ್ರಾಸಾರ್ತ್ಥಮುಪನೀತಶ್ಚ ಜಗಾಮ ಶರಣಂ ಹರಿಮ್ ।

ತೇನ ಸ್ತುತಃ ಸ ಭಗವಾನ್ ಮೋಚಯಾಮಾಸ ತಂ ವಿಭುಃ             ॥೨೨.೨೫೯॥

 

ಶ್ರೀಕೃಷ್ಣನಿಂದ ಸೃಷ್ಟಿಸಲ್ಪಟ್ಟ ಜ್ವರನು ಶೈವಜ್ವರನನ್ನು ತಿನ್ನುವುದಕ್ಕಾಗಿ ಕೊಂಡೊಯ್ಯಲ್ಪಟ್ಟಾಗ, ಶೈವಜ್ವರನು ಕೃಷ್ಣನನ್ನೇ ಶರಣು ಹೊಂದಿದ. ಅವನಿಂದ ಸ್ತುತಿಸಲ್ಪಟ್ಟ ಶ್ರೀಕೃಷ್ಣನು ಅವನನ್ನು ಬಿಡುಗಡೆಗೊಳಿಸಿದ.

 

ಕ್ರೀಡಾರ್ತ್ಥಮತ್ಯಲ್ಪಜನೇಷ್ವಪಿ ಪ್ರಭುಃ ಕಥಞ್ಚಿದೇವ ವ್ಯಜಯದ್ ವ್ಯಥಾಂ ವಿನಾ ।

ಇತ್ಯಾದಿ ಮೋಹಾಯ ಸ ದರ್ಶಯತ್ಯಜೋ ನಿತ್ಯಸ್ವತನ್ತ್ರಸ್ಯ ಕುತೋ ವ್ಯತಾದಯಃ ॥೨೨.೨೬೦॥

 

ಶ್ರೀಕೃಷ್ಣ ಪರಮಾತ್ಮನು ಯಾವುದೇ ಬಳಲಿಕೆ ಇಲ್ಲದೇ ಗೆದ್ದರೂ, ಮೋಹಕ್ಕಾಗಿ ಅತ್ಯಂತ ಅಲ್ಪರಾಗಿರುವ ಜನರಲ್ಲೂ ಕೂಡಾ ಪ್ರಯತ್ನಪಟ್ಟಂತೆ ತೋರಿಸುತ್ತಾನೆ.(ಉದಾಹರಣೆಗೆ ಇನ್ನೊಬ್ಬ ಜ್ವರನನ್ನು ಸೃಷ್ಟಿಸಿ ಶೈವಜ್ವರನನ್ನು ಸೋಲಿಸಿರುವುದು, ಇತ್ಯಾದಿ)  ಸರ್ವಸ್ವತಂತ್ರನಾಗಿರುವ ಭಗವಂತನಿಗೆ ವ್ಯಥೆ ಇತ್ಯಾದಿ ಇಲ್ಲವೇ ಇಲ್ಲ. ಕೇವಲ ದುರ್ಜನರ ಮೋಹಕ್ಕಾಗಿ ಅವನು ಬಳಲಿದವನಂತೆ ತೋರುತ್ತಾನೆ ಅಷ್ಟೇ.