ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 22, 2023

Mahabharata Tatparya Nirnaya Kannada 32-98-106

 

ಯತ್ರ ಸನ್ತಸ್ತು ತೇ ಸನ್ತಿ ತತ್ರ ಸ್ಥಾತವ್ಯಮೇವ ಮೇ ।

ನಿರಯೇSಪಿ ನಚಾತ್ರಾಪಿ ನಾನೇನ ಸಹ ಪಾಪಿನಾ ॥ ೩೨.೯೮ ॥

 

‘ಎಲ್ಲಿ ಸಜ್ಜನರಿದ್ದಾರೋ ಅಲ್ಲಿಯೇ ನಾನಿರಬೇಕು. ಅದು ನರಕವಾದರೂ ಸರಿ. ಇಲ್ಲಿ ಈ ಪಾಪಿಯಾದ ದುರ್ಯೋಧನನ ಜೊತೆಗೆ ನಾನಿರಲಾರೆ’  ಎನ್ನುತ್ತಾನೆ ಯುಧಿಷ್ಠಿರ.

 

ಅಸ್ಯ ವೀರತಮಸ್ಯೇದಂ ಧಾರ್ತ್ತರಾಷ್ಟ್ರಸ್ಯ ಯುಜ್ಯತೇ ।

ಇತ್ಯುಕ್ತಾ ದೇವತಾ ದೂತಂ ಸ್ವಾನಾಂ ಸನ್ದರ್ಶನಾರ್ತ್ಥಿನಃ ॥ ೩೨.೯೯ ॥

 

ರಾಜ್ಞಃ ಸಮ್ಪ್ರೇಷಯಾಮಾಸುಸ್ತತ್ಸನ್ದರ್ಶಿತವರ್ತ್ಮನಾ ।

ದುರ್ಗ್ಗನ್ಧೇನ ಸುಕೃಚ್ಛ್ರೇಣ ತಮಸಾ ಪ್ರಾವೃತೇನ ಚ । ॥ ೩೨.೧೦೦ ॥

 

ಗತ್ವೈವ ಕಿಯತೀಂ ಭೂಮಿಂ ತದ್ದುರ್ಗ್ಗನ್ಧಾಸಹೋ ನೃಪಃ ।

ಇಚ್ಛನ್ ನಿವರ್ತ್ತನಂ ತತ್ರ ಸ್ವಾನಾಂ ವಾಚ ಇವಾಶೃಣೋತ್ ॥ ೩೨.೧೦೧ ॥

 

 ಅತ್ಯಂತ ವೀರನಾಗಿರುವ ದುರ್ಯೋಧನನಿಗೆ ಈರೀತಿಯ ಸ್ವರ್ಗಪ್ರಾಪ್ತಿಯಾಗಿದೆ’ ಎಂದು ದೇವತೆಗಳು ಹೇಳಿದಮೇಲೆ, ತನ್ನವರನ್ನು ನೋಡಬೇಕೆಂದು ಬಯಸಿದ ಯುಧಿಷ್ಠಿರನಿಗಾಗಿ ದಾರಿ ತೋರಲು, ದೇವತೆಗಳು ಧೂತನೊಬ್ಬನನ್ನು ಕಳುಹಿಸಿದರು. ಧೂತನಿಂದ ತೋರಲ್ಪಟ್ಟ ಹಾದಿಯಿಂದ, ಅತ್ಯಂತ ದುರ್ವಾಸನೆಯಿಂದ ಕೂಡಿರುವ, ಬಹಳ ಕಷ್ಟವಾದ, ಕತ್ತಲಿನಿಂದ ಒಡಗೂಡಿರುವ ದಾರಿಯಿಂದ ತೆರಳಿ, ಎಷ್ಟೋ ದಾರಿಯನ್ನು ಸವೆಸಿ, ಆ ಕೆಟ್ಟ ವಾಸನೆಯನ್ನು ಸಹಿಸಲಾರದ ಯುಧಿಷ್ಠಿರ, ತಿರುಗಿ ಬರಬೇಕು ಎಂದು ಬಯಸಿದಾಗ, ಅಲ್ಲಿ ತನ್ನವರ ಮಾತು ಎಂಬಂತೆ ಧ್ವನಿಯನ್ನುಕೇಳಿದನು.  

 

ಕ್ಷಣಂ ತಿಷ್ಠ ಮಹಾರಾಜ ಸನ್ನಿಧಾನಬಲಾತ್ ತವ ।

ವೇದನಾ ನೋ ನ ಮಹತೀತ್ಯೇಚ್ಛ್ರುತ್ವಾ ಯುಧಿಷ್ಠಿರಃ ॥ ೩೨.೧೦೨ ॥

 

ಕೇ ಯೂಯಮಿತಿ ಪಪ್ರಚ್ಛ ದೀನಧ್ವನಿವಿಶಙ್ಕಿತಃ ।

ಭೀಮೋSಹಮರ್ಜ್ಜುನಃ ಕರ್ಣ್ಣ ಇತ್ಯಾದ್ಯುಕ್ತಮಿವಾಶೃಣೋತ್ ॥ ೩೨.೧೦೩ ॥

 

‘ಓ ಮಹಾರಾಜನೇ, ಒಂದು ಕ್ಷಣಕಾಲ ಇಲ್ಲಿಯೇ ನಿಲ್ಲು. ನಿನ್ನ ಸನ್ನಿಧಿಯ ಬಲದಿಂದ ನಮಗೆ ಅಪಾರವಾದ ನೋವಿರುವುದಿಲ್ಲ.  ಈ ಮಾತನ್ನು ಕೇಳಿ, ಧ್ವನಿಯಮೇಲೆ ಅನುಮಾನಗೊಂಡು, ಧೀನವಾಗಿರುವ ಧ್ವನಿಯಲ್ಲಿ ಯುಧಿಷ್ಠಿರ  ‘ನೀವು ಯಾರು’ ಎಂದು ಕೇಳಿದ. ಆಗ ‘ನಾನು ಭೀಮ’, ‘ನಾನು ಅರ್ಜುನ’ , ‘ನಾನು ಕರ್ಣ’ ಇತ್ಯಾದಿಯಾಗಿ ಹೇಳಿದಂತೆ ಕೇಳಿಸಿಕೊಂಡ.

 

ಶ್ರುತ್ವಾ ತತ್ ಕೃಪಯಾSSವಿಷ್ಟಃ ಶೋಕಾಮರ್ಷಸಮನ್ವಿತಃ ।

ಆಹ ದೂತ ಯಥೇಷ್ಟಂ ತ್ವಂ ಗಚ್ಛ ನಾಹಮಿತೋ ವ್ರಜೇ ॥ ೩೨.೧೦೪ ॥

 

ನಚ ಸ್ವರ್ಗ್ಗೇಣ ಮೇ ಕಾರ್ಯ್ಯಂ ತ್ಯಕ್ತ್ವಾ ಸ್ವಜನಮೀದೃಶಮ್ ।

ಇತ್ಯುಕ್ತಃ ಪ್ರಯಯೌ ದೂತಸ್ತಸ್ಥಾವೇವ ಯುಧಿಷ್ಠಿರಃ ॥ ೩೨.೧೦೫ ॥

 

ಅದನ್ನು ಕೇಳಿ, ದಯೆಯಿಂದ, ಶೋಕದಿಂದ, ಮುನಿಸಿನಿಂದಲೂ ಕೂಡಿದ ಯುಧಿಷ್ಠಿರನು,  ಧೂತನನ್ನು ಕುರಿತು, ‘ಓ ಧೂತನೇ, ನೀನು ನಿನ್ನ ಇಚ್ಛಾನುಸಾರ ಹೊರಡಬಹುದು. ನಾನು ಇಲ್ಲಿಂದ ಹೋಗಲಾರೆನು. ಈರೀತಿಯಾಗಿರುವ ನನ್ನ ಬಂಧುಗಳನ್ನು ಬಿಟ್ಟು, ನನಗೆ  ಸ್ವರ್ಗದಿಂದ ಯಾವ ಪ್ರಯೋಜನವೂ ಇಲ್ಲ’ ಎಂದನು.  ಈ ರೀತಿಯಾಗಿ ಹೇಳಲ್ಪಟ್ಟ ಧೂತನು ಅಲ್ಲಿಂದ ತೆರಳಿದನು. ಯುಧಿಷ್ಠಿರ ಮಾತ್ರ ಅಲ್ಲಿಯೇ ನಿಂತನು.

 

ತತೋSತ್ರ ದೇವಾಃ ಪುರೂಹೂತಪೂರ್ವಕಾಃ ಸಮಾಯಯುಃ ಸ್ನೇಹವಶಾದ್ ಯುಧಿಷ್ಠಿರೇ ।

ತೇಷ್ವಾಗತೇಷ್ವೇವ ನ ತತ್ರ ವಾಚೋ ದೀನಾ ನ ದುರ್ಗ್ಗನ್ಧತಮೋSಪ್ಯಪಶ್ಯತ್ ॥ ೩೨.೧೦೬ ॥

 

ತದನಂತರ ಇಂದ್ರನೇ ಮೊದಲಾಗಿರುವ ದೇವತೆಗಳು ಯುಧಿಷ್ಠಿರನಲ್ಲಿ ಪ್ರೀತಿಯಿಂದ ಬಂದರು. ಅವರು ಬರಲು ಅಲ್ಲಿ ಕೆಟ್ಟ ಮಾತು, ಕೆಟ್ಟ ವಾಸನೆ , ತಮಸ್ಸು ಮೊದಲಾದವುಗಳನ್ನು ಅವನು ಕಾಣಲಿಲ್ಲ.

Monday, November 20, 2023

Mahabharata Tatparya Nirnaya Kannada 32-86-97

 ತೇಷು ಸ್ವಲೋಕಾನ್ ಪ್ರಾಪ್ತೇಷು ಧರ್ಮ್ಮಜಶ್ಚಾSತ್ಮನಾ ಸಹ ।

ಯಯೌ ಪುರೋ ದೇವರಥಸ್ತದಾSಸ್ಯಾವತತಾರ ಹ ॥ ೩೨.೮೬ ॥

 

ಹೀಗೆ ಅವರೆಲ್ಲರೂ ತಮ್ಮ ಲೋಕವನ್ನು ಹೊಂದಲು, ಯುಧಿಷ್ಠಿರ ತನ್ನಿಂದಲೇ ಕೂಡಿಕೊಂಡು(ನಾಯಿ ರೂಪದಲ್ಲಿ ಬಂದಿರುವ ಧರ್ಮಜನೊಂದಿಗೆ), ಮುಂದೆ ತೆರಳಿದ. ಆಗ ಅವನ ಮುಂದೆ ದೇವತೆಗಳ ರಥ ಕೆಳಗಿಳಿಯಿತು.

ರಥಾಮಾರುಹೇತಿ ಕಥಿತೋ ರಥಿನಾ ಪುರತಃ ಶುನಃ ।

ಆರೋಹಮಬ್ರವೀನ್ನೈ ತದ್ ಯುಕ್ತಮಿತ್ಯಾಹ ಸೋSಪಿ ತು ॥ ೩೨.೮೭ ॥

 

ಸಾರಥಿಯಿಂದ ‘ರಥವನ್ನೇರು’ ಎಂದು ಹೇಳಲ್ಪಟ್ಟವನಾಗಿ ಯುಧಿಷ್ಠಿರನು ನಾಯಿಯ ಇರುವಿಕೆಯನ್ನು ಕುರಿತು ಸಾರಥಿಗೆ ಹೇಳಿದ. ಅವನಾದರೋ, ನಾಯಿಯನ್ನು ರಥಕ್ಕೆ ಏರಿಸಿಕೊಳ್ಳುವುದು ತರವಲ್ಲ ಎಂದ. [‘ಸ್ವರ್ಗೇ ಲೋಕೇ ಶ್ವವತಾಂ ನಾಸ್ತಿ ಧೀಷ್ಣ್ಯಮ್(ಮಹಾಪ್ರಸ್ಥಾನಿಕಪರ್ವ ೩.೧೦) ನಾಯಿಯೊಂದಿಗೆ ಸ್ವರ್ಗ ಪ್ರವೇಶವಿಲ್ಲ ಎಂದ.]

 

ನಾSರುಹೇಯಂ ವಿನಾ ಶ್ವಾನಮಿತಿ ತೇನ ಸ್ಥಿರೋದಿತೇ ।

ಸ್ವರೂಪಂ ದರ್ಶಯಾಮಾಸ ಧರ್ಮ್ಮೋ ಹ್ಯಾಪ್ತಃ ಶ್ವರೂಪತಾಮ್ ॥ ೩೨.೮೮ ॥

 

‘ನಾಯಿ ಇಲ್ಲದೇ ನಾನು ರಥವನ್ನೇರಲಾರೆ’ ಎಂದು ಯುಧಿಷ್ಠಿರನಿಂದ ಗಟ್ಟಿಯಾಗಿ ಹೇಳಲ್ಪಡಲು, ನಾಯಿ ರೂಪದಲ್ಲಿದ್ದ ಧರ್ಮರಾಜನು ತನ್ನ ಸ್ವರೂಪವನ್ನು ತೋರಿದ. ಯಮಧರ್ಮನೇ ನಾಯಿಯ ರೂಪವನ್ನು ಹೊಂದಿದ್ದನಷ್ಟೇ.

 

ಆನೃಶಂಸ್ಯಪರತ್ವೇನ ಕೀರ್ತ್ತಿರ್ಮೇವಾSತ್ಮನೋ ವೃಷಃ ।

ಖ್ಯಾಪಯಾಮಾಸ ಕೌನ್ತೇಯರೂಪಿಣೋ ಧರ್ಮ್ಮಸೂಕ್ತಿಭಿಃ ॥ ೩೨.೮೯ ॥

 

ಕುಂತಿಯ ಮಗನ ರೂಪದಲ್ಲಿರುವ, ತಾನೇ ಆಗಿರುವ ಯಮಧರ್ಮನು ‘ತಾನು ಕೃಪೆಯುಳ್ಳವನು’ ಎನ್ನುವ ಕೀರ್ತಿಯನ್ನು ಧರ್ಮಭೂವಿಷ್ಠವಾದ ಮಾತುಗಳಿಂದ ಈರೀತಿಯಾಗಿ ಜನರೆದುರು ತೋರಿಸಿಕೊಂಡನು.

 

ತತಃ ಸ ರಥಮಾರುಹ್ಯ ಲೋಕಾನಾಮುತ್ತರೋತ್ತರಮ್ ।

ಅತಿಕ್ರಮ್ಯಾಖಿಲಾನ್ ರಾಜ್ಞೋ ಜಗಾಮ ಶ್ರೀಪತಿಪ್ರಿಯಃ ॥ ೩೨.೯೦ ॥

 

ಸರ್ವೇಷಾಮುತ್ತರಂ ಲೋಕಮೈನ್ದ್ರಂ ಪ್ರಾಪ್ಯೇದಮೇವ ತೇ ।

ಸ್ಥಾನಮಿತ್ಯುದಿತೋ ದೇವೈರ್ದ್ದುರ್ಯ್ಯೋಧನಮವೈಕ್ಷತ ॥ ೩೨.೯೧ ॥

 

ತದನಂತರ ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ಪ್ರಿಯನಾದ ಆ ಯುಧಿಷ್ಠಿರನು ರಥವನ್ನೇರಿ, ಮೇಲಿರುವ ಎಲ್ಲಾ ಲೋಕಗಳನ್ನು, ರಾಜರನ್ನೂ ಮೀರಿ ತೆರಳಿದನು. ಹೀಗೆ ಎಲ್ಲಾ ಲೋಕಗಳಿಗೆ ಆಚೆಯ ಲೋಕವಾಗಿರುವ ಇಂದ್ರಲೋಕವನ್ನು ಹೊಂದಿ, ‘ಇದೇ ನಿನ್ನ ಸ್ಥಾನವಾಗಿದೆ’ ಎಂದು ದೇವತೆಗಳಿಂದ ಹೇಳಲ್ಪಟ್ಟವನಾಗಿ, ಅಲ್ಲಿಯೇ ಕುಳಿತಿರುವ ದುರ್ಯೋಧನನನ್ನು ಕಂಡನು.

  

ಸಭ್ರಾತೃಕಂ ಜ್ವಲನ್ತಂ ಚ ಸರ್ವೇಷಾಮುಪರಿ ಸ್ಥಿತಮ್ ।

ತಂ ದೃಷ್ಟ್ವಾ ಪರಮಕ್ರುದ್ಧೋ ನಿಮೀಲ್ಯ ನಯನೇ ಶುಭೇ  ॥ ೩೨.೯೨ ॥

 

ಭ್ರಾತರೋ ಮೇ ಕ್ವ ಕೃಷ್ಣಾ ಚ ಸಕರ್ಣಾಃ ಕ್ವ ಚ ಬಾನ್ಧವಾಃ ।

ಧೃಷ್ಟಧ್ಯುಮ್ನಾದಯಃ ಪುತ್ರಾ ಹೈಡಿಮ್ಬಾದ್ಯಾಶ್ಚ ಸರ್ವಶಃ ॥ ೩೨.೯೩ ॥

 

ಯಾದವಾಶ್ಚೇತಿ ಪಪ್ರಚ್ಛ ದೇವಾಂಸ್ತೇ ಚ ತಮಬ್ರುವನ್ ।

ಕಿಂ ತೇ ತೈಃ ಸ್ವಕೃತಂ ಕರ್ಮ್ಮ ಭುಜ್ಯತೇSತ್ರ ನಚಾಪರೈಃ ॥ ೩೨.೯೪ ॥

 

ಅಲ್ಲಿ ತನ್ನ ಅಣ್ಣತಮ್ಮನ್ದಿರಿಂದ ಕೂಡಿಕೊಂಡು ಶೋಭಿಸುತ್ತಿರುವ, ಎಲ್ಲರಿಗಿಂತಲೂ ಮೇಲ್ಗಡೆ ಕುಳಿತಿರುವ ದುರ್ಯೋಧನನನ್ನು ಕಂಡು ಮುನಿದ ಧರ್ಮರಾಜನು, ಮಂಗಳವಾದ ತನ್ನ ಕಣ್ಣನ್ನು ಮುಚ್ಚಿ, ಕರ್ಣನಿಂದ ಸಹಿತರಾದ ನನ್ನ ಅಣ್ಣತಮ್ಮಂದಿರು, ದ್ರೌಪದಿ, ಧೃಷ್ಟದ್ಯುಮ್ನ ಮೊದಲಾದ ಬಾಂಧವರು, ಘಟೋತ್ಕಚ ಮೊದಲಾದ ಪುತ್ರರು, ಯಾದವರು, ಎಲ್ಲಿದ್ದಾರೆ ಎಂದು ಕೇಳಿದನು. ಆಗ ಆ ದೇವತೆಗಳು ಅವನನ್ನು ಕುರಿತು ‘ಅವರಿಂದ ನಿನಗೇನಾಗಬೇಕು? ಈ ಲೋಕದಲ್ಲಿ ತಾವು ಮಾಡಿದ ಕರ್ಮ ತಮ್ಮಿಂದಲೇ ಅನುಭವಿಸಲ್ಪಡುತ್ತದೆ. ಅದನ್ನು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ’ ಎಂದರು.

 

ಇತ್ಯುಕ್ತ ಆಹ ಪಾಪೋSಯಂ ಪೃಥಿವೀಕ್ಷಯಕಾರಕಃ ।

ಸರ್ವಾತಿಶಙ್ಕೀ ಮಿತ್ರಧ್ರುಙ್ ನಾರಾಯಣಪರಾಙ್ಮುಖಃ ॥ ೩೨.೯೫ ॥

 

ನಾಸ್ತಿಕೋSತಿಶಠಃ ಕ್ರೂರೋ ದ್ವೇಷ್ಟಾ ವಿಷ್ಣೋಶ್ಚ ತದ್ಭುವಾಮ್ ।

ಕಥಂ ಕಥಂ ಚ ಸರ್ವಧರ್ಮ್ಮಜ್ಞಾ ನಾರಾಯಣಪರಾಯಣಾಃ ॥ ೩೨.೯೬ ॥

 

ಸಂಸ್ಥಿತಾಃ ಪರಮೇ ಧರ್ಮ್ಮೇ ದೃಶ್ಯನ್ತೇSತ್ರ ನ ಮತ್ಪ್ರಿಯಾಃ 

ದುರ್ಯ್ಯೋಧನಃ ಸ್ಥಾನಂ ಸರ್ವೋತ್ತಮಮವಾಪ್ತವಾನ್ ॥ ೩೨.೯೭ ॥

 

ಈರೀತಿಯಾಗಿ ಹೇಳಲ್ಪಟ್ಟ ಆ ಯುಧಿಷ್ಠಿರನು ಸಿಟ್ಟಿನಿಂದ ಹೇಳುತ್ತಾನೆ: ‘ಭೂಮಿಯನ್ನು ನಾಶಮಾಡಿದ, ಎಲ್ಲರಲ್ಲಿಯೂ ಸಂಶಯಪಡುವ, ಮಿತ್ರದ್ರೋಹಿಯಾದ, ನಾರಾಯಣನಿಗೆ ವಿಮುಖನಾದ, ನಾಸ್ತಿಕನಾಗಿರುವ, ಅತ್ಯಂತ ದೂರ್ತನಾಗಿರುವ, ನಾರಾಯಣನ ಭಕ್ತರ ದ್ವೇಷಿಯಾಗಿರುವ ದುರ್ಯೋಧನನು ಉತ್ಕೃಷ್ಟವಾದ ಸ್ಥಾನವನ್ನು ಹೇಗೆ ಹೊಂದಿದ? ಎಲ್ಲಾ ಧರ್ಮವನ್ನೂ ತಿಳಿದಿರುವ, ನಾರಾಯಣನ ಭಕ್ತರಾಗಿರುವ, ಉತ್ಕೃಷ್ಟವಾದ ಧರ್ಮದಲ್ಲಿ ನೆಲೆಗೊಂಡ, ನನಗೆ ಪ್ರಿಯರಾಗಿರುವ, ನನ್ನ ಭ್ರಾತ್ರಾದಿಗಳು ಇಲ್ಲಿ ಏಕೆ ಕಾಣುತ್ತಿಲ್ಲ’ ಎಂದು ಕೇಳಿದನು.

Sunday, November 19, 2023

Mahabharata Tatparya Nirnaya Kannada 32-74-85

 

[ಏಕೆ ಧರ್ಮರಾಜ ತಾನು ಊಹಿಸಿ ಹೇಳಿದ ದೋಷಗಳು ನಿಜವಾಗಿ ಅವರ ದೋಷಗಳೇ ಆಗಿರಲಿಲ್ಲ  ಎನ್ನುವುದನ್ನು ವಿವರಿಸುತ್ತಾರೆ-]

 

ಭೀಮಾದೃತೇ ಹಿ ಚತುರ್ಷು ಪಕ್ಷಪಾತಸ್ತು ವಾಸವೌ ।

ಯೋಗ್ಯ ಏವೇತಿ ಕೃಷ್ಣಾಯಾ ನ ದೋಷಃ ಸ್ಯಾತ್ ಕಥಞ್ಚನ ॥ ೩೨.೭೪ ॥

 

ನೀತಿರೂಪೇ ವೀರ್ಯ್ಯಬಲೇ ಮಹಾನ್ತ್ಯೇಷಾಂ ಯತಃ ಕ್ರಮಾತ್ ।

ಪ್ರಾಣತ್ವಾದ್ ಭೋಗಶಕ್ತಿಶ್ಚ ನಹಿ ದೋಷಾಯ ಮಾರುತೇಃ ॥ ೩೨.೭೫ ॥

 

‘ಯಥಾಸ್ವರೂಪವಿಜ್ಞಾನಮಾತ್ಮನ್ಯಪಿ ನ ದೋಷಕೃತ್ ’ ।

ಇತಿ ವ್ಯಾಸಸ್ಮೃತೇರೇಷಾಮುಕ್ತದೋಷೋದ್ಭವಃ ಕಥಮ್ ॥ ೩೨.೭೬ ॥

 

ಭೀಮನನ್ನು ಬಿಟ್ಟು ಉಳಿದ ನಾಲ್ಕುಜನ ಪಾಂಡವರಲ್ಲಿ ಗುಣದಲ್ಲಿ ಶ್ರೇಷ್ಠನಾದವನು ಅರ್ಜುನ. ಹೀಗಾಗಿ ಗುಣಾನುರೂಪವಾದಪ್ರೀತಿ ದೋಷವಲ್ಲ. ನೀತಿ, ಸೌಂದರ್ಯ, ವೀರ್ಯ ಮತ್ತು ಬಲ - ಈ ಗುಣಗಳು ಹೆಚ್ಚುವಿಕೆಯ ಕ್ರಮದಲ್ಲಿ ಪಾಂಡವರಲ್ಲಿ(ಕ್ರಮವಾಗಿ ಸಹದೇವ, ನಕುಲ, ಯುಧಿಷ್ಠಿರ, ಅರ್ಜುನ ಮತ್ತು ಭೀಮರಲ್ಲಿ) ಇದ್ದವು. ಹಾಗಾಗಿ ಇದೂ ದೋಷಕ್ಕೆ ಕಾರಣವಲ್ಲ. ಅತ್ಯಂತ ಕ್ರಿಯೆ ಇರುವುದರಿಂದ ಭೀಮನಲ್ಲಿ ಭೋಗಶಕ್ತಿ ಇತ್ತು. ಅವನ ಆ ಶಕ್ತಿ ದೋಷದಾಯಕವಲ್ಲ. ‘ತನ್ನಲ್ಲಿ ಎಷ್ಟು ಗುಣ ಇದೆಯೋ, ಅಷ್ಟನ್ನು ತಿಳಿದುಕೊಳ್ಳುವುದೂ ದೋಷವಲ್ಲ’ - ಇದು ವ್ಯಾಸಸ್ಮೃತಿಯ ಮಾತು. ಹಾಗಾಗಿ ಧರ್ಮರಾಜ ಹೇಳಿದ ದೋಷ ಎಲ್ಲಿಂದ ಬಂದೀತು?

 

ಕದಾಚಿದತಿಮಾನೋSಪಿ ತ್ರಯಾಣಾಮೇಷು ಜಾಯತೇ ।

ತಥಾSಪಿ ತತ್ಫಲಂ ನೈತತ್ ತಾರತಮ್ಯಂ ಹಿ ಮುಕ್ತಿಗಮ್ ॥ ೩೨.೭೭ ॥

 

ಗುಣದೋಷಾಧಿಕಾಲ್ಪತ್ವಾದತ್ರಸ್ಥಮಪಿ ಹಿ ಶ್ರುತಮ್ ।

ಆರಬ್ಧಕರ್ಮ್ಮನಾಶೇ ಹಿ ಪತೇದ್ ದೇಹೋSಪ್ಯಪಾಪಿನಃ ॥ ೩೨.೭೮ ॥

 

ಕೆಲವು ಸಂದರ್ಭಗಳಲ್ಲಿ, ಅರ್ಜುನ ಸೇರಿದಂತೆ ಮೂವರು ತಮ್ಮ ಗುಣಗಳ ಬಗ್ಗೆ ಅತಿಯಾದ ಅಹಂಕಾರವನ್ನು ಅನುಭವಿಸುತ್ತಿದ್ದರೂ ಕೂಡಾ, ಅವರು ತಮ್ಮ ದೇಹವನ್ನು ತ್ಯಜಿಸಿರುವುದು ಅದರ ಫಲದಿಂದಲ್ಲ. ಏಕೆಂದರೆ ಅದರ ಫಲ ಮುಕ್ತಿಯಲ್ಲಿ ತಾರತಮ್ಯವಾಗಿದೆ.

ಗುಣ ಹಾಗೂ ದೋಷ ಇತ್ಯಾದಿಗಳು ಇಲ್ಲಿ ದೇಹ ಬೀಳಲು ಕಾರಣವಲ್ಲ. ಪ್ರಾರಬ್ಧಕರ್ಮ ನಾಶವಾದಾಗ ಪಾಪಿ ಅಲ್ಲದವನ ದೇಹವೂ ಕೂಡಾ ಬಿದ್ದೇ ಬೀಳುತ್ತದೆ.

 

ಯುಧಿಷ್ಠಿರೋSಪಿ ಹಿ ಸ್ವರ್ಗ್ಗಂ ಬುಭುಜೇ ನೈವ ತತ್ತನುಃ ।

ಅತಿಮಾನಾದಯೋ ದೋಷಾಃ ಕುತ ಏವ ಹಿ ಮಾರುತೇಃ ॥ ೩೨.೭೯ ॥

 

ಯುಧಿಷ್ಠಿರನೂ ಕೂಡಾ ಮಾನವ ಶರೀರದಿಂದ ಸ್ವರ್ಗವನ್ನು ಭೋಗಿಸಲಿಲ್ಲ. ಹೀಗಿರುವಾಗ ಯುಧಿಷ್ಠಿರ ಹೇಳಿರುವ ಅತಿಮಾನ ಇತರ ದೋಷಗಳು ಯಾವರೀತಿ ಭೀಮಸೇನನಿಗೆ ಅನ್ವಯಿಸುತ್ತದೆ? (ಅನ್ವಯಿಸುವುದಿಲ್ಲ).

 

ಅನಾದಿಕಾಲತಃ ಸರ್ವದೋಷಹೀನಾ ಗುಣಾಧಿಕಾಃ ।

ಸರ್ವಜೀವಗಣೇಭ್ಯೋ ಯೇ ತೇ ಹಿ ವಾಯುತ್ವಮಾಪ್ನುಯುಃ  ॥ ೩೨.೮೦ ॥

 

ಋಜವೋ ನಾಮ ಯೇ ದೇವಾ ದೇವಾನಾಮಪಿ ದೇವತಾಃ ।

ಅಭಾವಂ ಹ್ಯತಿಮಾನಾದೇರ್ಭೀಮಸ್ಯಾSಹ ಚ ಕೇಶವಃ  ॥ ೩೨.೮೧ ॥

 

ಅನಾದಿಕಾಲದಿಂದ ದೋಷರಹಿತರು ಹಾಗೂ ಎಲ್ಲಾ ಜೀವಗಣಗಳಿಗಿಂತಲೂ ಗುಣದಿಂದ ಮಿಗಿಲಾದ ಋಜುಗಳೇ ವಾಯುಪದವಿಯನ್ನು ಹೊಂದುವುದು. ಅಂತಹ ಋಜುಗಳು ದೇವತೆಗಳಿಗೂ ದೇವತೆಗಳು. ಕೃಷ್ಣನೂ ಕೂಡಾ ಭೀಮಸೇನನಲ್ಲಿ ಅಹಂಕಾರ ಮೊದಲಾದವುಗಳ ಇಲ್ಲದಿರುವಿಕೆಯನ್ನು ಹೇಳಿದ್ದನಷ್ಟೇ.

 

[ಕೃಷ್ಣನ ಮಾತನ್ನು ಉಲ್ಲೇಖಿಸುತ್ತಾರೆ-]

 

‘ಯತ್ಕಿಞ್ಚಾSತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।

‘ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್’ ॥ ೩೨.೮೨ ॥

 

‘ಓ ಪಾಂಡವನೇ, ನೀನು ನಿನ್ನಲ್ಲಿ ಏನೊಂದು ಮಂಗಳವನ್ನು ತಿಳಿದುಕೊಳ್ಳುತ್ತೀಯೋ, ಅದು ನಿನ್ನಲ್ಲಿ ಸಾವಿರಪಟ್ಟಿದೆ ಎಂದು ನಾನು ತಿಳಿದಿದ್ದೇನೆ’. [ಉದ್ಯೋಗಪರ್ವದಲ್ಲಿ(೭೬.೩-೪; ೧೮) ಈ ವಿವರ ಕಾಣಸಿಗುತ್ತದೆ. ಹೀಗಾಗಿ ಭೀಮಸೇನನಲ್ಲಿ ಅತಿಮಾನ ಇಲ್ಲವೇ ಇಲ್ಲ].

 

ಇತಿ ತಸ್ಮಾದ್ ಯಥಾ ಯುದ್ಧೇ ಧರ್ಮ್ಮಹಾನಿಮಮನ್ಯತ ।

ಏವಮತ್ರಾಪ್ಯಧರ್ಮ್ಮೇಣ ದೇಹಪಾತಂ ನೃಪೋSಬ್ರವೀತ್ ॥ ೩೨.೮೩ ॥

 

ಈ ಎಲ್ಲಾ ಕಾರಣಗಳಿಂದಾಗಿ ಧರ್ಮರಾಜನು, ಹೇಗೆ ಯುದ್ಧದಲ್ಲಿ ಧರ್ಮಹಾನಿಯನ್ನು ತಿಳಿದನೋ, ಹಾಗೆಯೇ ಇಲ್ಲಿಯೂ ಕೂಡಾ ‘ಅಧರ್ಮದ ಕಾರಣದಿಂದ ದೇಹದ ಬೀಳುವಿಕೆ ಆಯಿತು’ ಎಂದು ಹೇಳಿದನು.

 

ಪೂಜ್ಯೇಭ್ಯಃ ಪೂರ್ವಮೇವೈಷಾಂ ದೇಹಪಾತಮಭೀಪ್ಸತಾಮ್ 

ತತ್ಕಾಮಾದ್ ದೇಹಪಾತೋSಭೂನ್ನ ಪಾಪಾನ್ಮುಚ್ಯತಾಂ ಯಥಾ ॥ ೩೨.೮೪ ॥

 

ನಹಿ ಪಾಪಫಲಾನ್ಮುಕ್ತೌ ದೇಹಪಾತಃ ಕಥಞ್ಚನ ।

ಕಿನ್ತು ಕರ್ಮ್ಮಕ್ಷಯಾದೇವ ತಥಾ ಸರ್ವತ್ರ ನಿಶ್ಚಿತಃ ॥ ೩೨.೮೫ ॥

 

ಹಿರಿಯರಿಗಿಂತ ಮೊದಲೇ ತಮ್ಮ ದೇಹ ಬೀಳಬೇಕು ಎಂದು ಬಯಸಿರಿರುವುದರಿಂದ ದೇಹ ಬಿದ್ದಿತೇ ಹೊರತು ಪಾಪದೋಷದಿಂದ ಬಿದ್ದಿರುವುದಲ್ಲ. ಕರ್ಮಕ್ಷಯದಿಂದಲೇ ದೇಹಪಾತ ಎನ್ನುವುದು ಎಲ್ಲೆಡೆ ನಿಶ್ಚಿತವಾದ ಪ್ರಮೇಯ. ಮುಕ್ತಿಯಾಗುವಾಗಲೂ ದೇಹಪಾತವಾಗುತ್ತದೆ, ಅದು ಪಾಪದೋಷದ ಕಲ್ಪನೆಯಲ್ಲ.

Tuesday, November 14, 2023

Mahabharata Tatparya Nirnaya Kannada 32-66-73

 

ದ್ರೌಪದೀಸಹದೇವಾದಿಪಞ್ಚಾನಾಂ ತತ್ರ ಮಾರುತಿಃ ।

ಸದೇಹನಾಕಾನಿಚ್ಛುತ್ವಾದ್ ದೇಹಪ್ರಪತನಂ ಹಿ ತತ್ ॥ ೩೨.೬೬ ॥

 

ತೇಷಾಮಿಹೇತಿ ಯಾಥಾರ್ತ್ಥಂ ಜಾನನ್ ಪಪ್ರಚ್ಛ ಧರ್ಮ್ಮಜಮ್ ।

ಕೇನಕೇನಾಪತದ್ ದೇಹೋ ದೋಷೇಣ  ನ ಇತಿ ಕ್ರಮಾತ್ ॥ ೩೨.೬೭ ॥

 

ದ್ರೌಪದಿ ಮೊದಲಾಗಿರುವ ಐದು ಜನರು ಸಶರೀರ ಸ್ವರ್ಗವನ್ನು ಬಯಸದೇ ಇರುವುದರಿಂದ ಅವರ ದೇಹದ ಬೀಳುವಿಕೆಯು ಆಗಿದೆ ಎನ್ನುವ ಯಥಾರ್ಥ ಸಂಗತಿಯನ್ನು ತಿಳಿದಿದ್ದರೂ ಕೂಡಾ, ಭೀಮಸೇನನು ಧರ್ಮರಾಜನನ್ನು ಕುರಿತು ‘ಯಾವಯಾವ ದೋಷದಿಂದ ನಮ್ಮ ದೇಹ ಬಿತ್ತು’ ಎಂದು ಕೇಳಿದ.

 

ಮೃತಿಕಾಲೇ ಹಿ ಯೋ ಯಸ್ಯ ದೋಷಂ ವಕ್ತ್ಯೃಣಮೋಚನಮ್ ।

ತಸ್ಮಾತ್ ಸ್ಯಾದುಕ್ತದೋಷಸ್ಯೇತ್ಯಾಹ ಯಚ್ಛ್ರುತಿರೇವ ತತ್ ॥ ೩೨.೬೮ ॥

 

ಸಾಯುವ ಕಾಲದಲ್ಲಿ ಯಾರು ಯಾರ ದೋಷವನ್ನು ಹೇಳುತ್ತಾನೋ, ಆ ದೋಷವನ್ನು ಹೇಳುವವನಿಂದ ಹೇಳಲ್ಪಟ್ಟವನಿಗೆ ಋಣಮುಕ್ತಿಯಾಗುತ್ತದೆ ಎಂದು ವೇದವೇ ಹೇಳಿದೆ.

 

ಋಣಮೋಕ್ಷಾಯ ಸರ್ವೇಷಾಂ ಭೀಮೋ ದೋಷಾನವಾದಯತ್ ।

ಸೋSಪೀಚ್ಛಾಪತಿತಾನ್ ದೇಹಾನಜಾನಞ್ಛುದ್ಧಕರ್ಮ್ಮಣಾಮ್  ॥ ೩೨.೬೯ ॥

 

ಅಪಶ್ಯನ್ ಕಾರಣಂ ಪ್ರಾಹ ದೋಷಾನ್ ಸ್ಯಾದೇವಮಿತ್ಯಪಿ ।

ರಾಜಾ ಸಮ್ಭಾವನಾಮಾತ್ರಂ ನಹಿ ಕಾರ್ಯ್ಯಮಕಾರಣಮ್ ॥ ೩೨.೭೦ ॥

 

ಎಲ್ಲರ ಋಣದ ಬಿಡುಗಡೆಗಾಗಿ ಭೀಮಸೇನನು ಎಲ್ಲರ ದೋಷಗಳನ್ನೂ ಯುಧಿಷ್ಠಿರನಿಂದ ಹೇಳಿಸಿದ. ಯುಧಿಷ್ಠಿರ ಶುದ್ಧಕರ್ಮರಾದ ತನ್ನ ತಮ್ಮಂದಿರು ಮತ್ತು ಹೆಂಡತಿಯ ದೇಹ ಅವರ ಇಚ್ಛೆಯಿಂದಲೇ ಬಿದ್ದಿರುವುದು ಎಂದು ತಿಳಿಯದೇ, ಕಾರಣವೂ ತೋರದೇ, ‘ಹೀಗೆ ಇರಬಹುದು’ ಎಂದು ಊಹಿಸಿ, (ಸಮ್ಭಾವನಾಮಾತ್ರಮ್) ಎಲ್ಲರ ದೋಷಗಳನ್ನು ಹೇಳಿದ.

 

‘ಸ್ವಚ್ಛನ್ದಮೃತ್ಯವೋ ಯೋಗಾದ್ ದೇಹಾನುತ್ಸೃಜ್ಯ ಪಾಣ್ಡವಾಃ ।

ಕೃಷ್ಣಾ ಚಾSಪುಃ ಪರಂ ಸ್ಥಾನಂ ಯನ್ನ ಯಾನ್ತ್ಯಪಿ ದೇವತಾಃ’ ॥ ೩೨.೭೧ ॥

 

ಪಾಂಡವರು ತಾವು ಬಯಸಿದಂತಹ ಸಾವನ್ನು ಪಡೆಯಬಲ್ಲವರು. ಅವರು ಧ್ಯಾನಯೋಗದಿಂದ ದೇಹವನ್ನು ಬಿಟ್ಟು ಉತ್ಕೃಷ್ಟವಾದ ಸ್ಥಾನವನ್ನು ಹೊಂದಿದರು. ದೇವತೆಗಳೂ ಕೂಡಾ ಯಾವುದನ್ನು ಹೊಂದುವುದಿಲ್ಲವೋ ಅಂತಹ ಸ್ಥಾನವನ್ನು ಅವರು ಹೊಂದಿದರು.

 

ಇತಿ ಶ್ರುತೇರ್ನ್ನ ತೇ ಪಾಪಾದ್ ದೇಹಾಂಸ್ತತ್ಯಜುರೂರ್ಜ್ಜಿತಾಃ ।

‘ಋಣಾನ್ಯುನ್ಮುಚ್ಯ ದೋಷೋಕ್ತ್ಯಾ ಸ್ವಾನಾಂ ಭೀಮಃ ಸ್ವಕಾಂ ತನುಮ್  ॥ ೩೨.೭೨ ॥

 

‘ತತ್ಯಾಜ ಪರಮಂ ದ್ಧ್ಯಾಯನ್ನಾಪ ಚ ಸ್ಥಾನಮುತ್ತಮಮ್ ’।

ಇತಿ ಸ್ಕಾನ್ದಪುರಾಣೋಕ್ತಂ ವ್ಯಾಸವಾಕ್ಯಮೃಷೀನ್ ಪ್ರತಿ ॥ ೩೨.೭೩ ॥

 

ಈರೀತಿಯಾಗಿ ವೇದವಾಣಿ ಇರುವುದರಿಂದ, ಆ ಶ್ರೇಷ್ಠರಾದ ಪಾಂಡವರು ಪಾಪದಿಂದ ದೇಹಗಳನ್ನು ಬಿಡಲಿಲ್ಲ ಎನ್ನುವುದು ಸ್ಪಷ್ಟ. ‘ಭೀಮನು ತಮ್ಮವರ ದೋಷವನ್ನು ಹೇಳಿಸುವುದರ ಮೂಲಕ ಅವರ ಋಣವನ್ನು ಬಿಡಿಸಿ, ತನ್ನ ಶರೀರವನ್ನೂ ಬಿಟ್ಟ. ಭೀಮಸೇನನು ನಾರಾಯಣನನ್ನು ಧ್ಯಾನಮಾಡುತ್ತಾ. ಉತ್ಕೃಷ್ಟವಾದ ಸ್ಥಾನವನ್ನು ಹೊಂದಿದ’. ಇದು ಸ್ಕಾನ್ದಪುರಾಣದಲ್ಲಿ ಋಷಿಗಳನ್ನು ಕುರಿತು ಹೇಳಿದ ವೇದವ್ಯಾಸರ ಮಾತಾಗಿದೆ.