ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 26, 2023

Mahabharata Tatparya Nirnaya Kannada 27-33-43

ಕರ್ಣ್ಣೋSಥ ಶಲ್ಯನಿಯತೇನ ರಥೇನ ಪಾರ್ತ್ಥಸೇನಾಮವಾಪ್ಯ ವಿದುಧಾವ ಶರೈಃ ಸಮನ್ತಾತ್ ।

ಸಂರಕ್ಷಿತೋ ಯುಧಿ ಸುಯೋಧನಗೌತಮಾದ್ಯೈರಾಚಾರ್ಯ್ಯಜೇನ ಚ ಮಹಾಸ್ತ್ರವಿದಾಂ ವರೇಣ॥೨೭.೩೩॥

 

ತದನಂತರ ಶಲ್ಯನಿಂದ ನಿಯಂತ್ರಿಸಲ್ಪಟ್ಟ ರಥದಲ್ಲಿ ಕುಳಿತ ಕರ್ಣನು, ದುರ್ಯೋಧನ, ಕೃಪಾಚಾರ್ಯರೇ ಮೊದಲಾದವರಿಂದಲೂ, ಅಸ್ತ್ರವನ್ನು ಬಲ್ಲ ಅಶ್ವತ್ಥಾಮನಿಂದಲೂ ರಕ್ಷಿತನಾಗಿ, ಪಾಂಡವರ ಸೇನೆಯನ್ನು ಹೊಂದಿ, ಬಾಣಗಳಿಂದ ಎಲ್ಲರನ್ನೂ ನಡುಗಿಸಿದನು.

 

ತಂ ಭೀಮಪಾರ್ಷತಶಿನಿಪ್ರವರಾಭಿಗುಪ್ತಾ ಸಾ ಪಾಣ್ಡವೇಯಪೃತನಾSಭಿವವರ್ಷ ಬಾಣೈಃ ।

ತಾಂ ಸೂರ್ಯ್ಯಸೂನುರಥ ಬಾಣವರೈರ್ವಿಧಾರ್ಯ್ಯ ಸಮ್ಪ್ರಾರ್ದ್ದಯಚ್ಛಿತಶರೈರಪಿ ಧರ್ಮ್ಮಸೂನುಮ್ ॥೨೭.೩೪॥

 

ಭೀಮಸೇನ, ಧೃಷ್ಟದ್ಯುಮ್ನ, ಸಾತ್ಯಕಿ, ಇವರಿಂದ ರಕ್ಷಿಸಲ್ಪಟ್ಟ ಆ ಪಾಂಡವ ಸೇನೆಯು ಬಾಣಗಳಿಂದ ಕರ್ಣನನ್ನು ವರ್ಷಿಸಿತು. ಆ ಸೇನೆಯನ್ನು ಕರ್ಣನು ಬಾಣಗಳಿಂದ ಸೀಳಿ, ಧರ್ಮರಾಜನನ್ನು ಚೂಪಾದ ಬಾಣಗಳಿಂದ ಪೀಡಿಸಿದನು.

 

ಕೃತ್ವಾ ತಮಾಶು ವಿರಥಂ ಧನುರಸ್ಯ ಕಣ್ಠೇ ಸಜ್ಯಂ ನಿಧಾಯ ಪರುಷಾ ಗಿರ ಆಹ ಚೋಚ್ಚೈಃ ।

ದೃಷ್ಟ್ವೈವ ಮಾರುತಿರಮುಂ ಭೃಶಮಾತುತೋದ ದುರ್ಯ್ಯೋಧನಂ ವಿರಥಕಾರ್ಮ್ಮುಕಮತ್ರ ಕೃತ್ವಾ ॥೨೭.೩೫॥

ಕರ್ಣನು ಧರ್ಮರಾಜನನ್ನು ಕೂಡಲೇ ರಥಹೀನನನ್ನಾಗಿ ಮಾಡಿ, ಅವನ ಕೊರಳಿನಲ್ಲಿ ಬಿಲ್ಲನ್ನು ನೇತುಹಾಕಿ,  ಎಲ್ಲರೂ ಕೇಳುವಂತೆ, ಗಟ್ಟಿಯಾಗಿ ಕಠಿಣವಾದ ಮಾತುಗಳನ್ನಾಡಿದನು. ಈರೀತಿಯಾಗಿರುವ ಧರ್ಮರಾಜನನ್ನು ಕಂಡ ಭೀಮಸೇನನು,  ದುರ್ಯೋಧನನನ್ನು ರಥ ಹಾಗೂ ಬಿಲ್ಲುಗಳಿಂದ ಹೀನನನ್ನಾಗಿ ಮಾಡಿ, ಚೆನ್ನಾಗಿ ಪೀಡಿಸಿದನು. (ದುರ್ಯೋಧನನನ್ನು ಪೀಡಿಸುವುದರಿಂದ ಕರ್ಣ ಧರ್ಮರಾಜನನ್ನು ಬಿಡುತ್ತಾನೆ. ಇದೊಂದು ರೀತಿಯ ಯುದ್ಧತಂತ್ರ)

[ಕರ್ಣ ಧರ್ಮರಾಜನಿಗಾಡಿದ ಕಠಿಣವಾದ ಮಾತುಗಳನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ- ‘ನ ಭವಾನ್ ಕ್ಷತ್ರಧರ್ಮೇಷು ಕುಶಲೋSಸೀತಿ ಮೇ ಮತಿಃ । ಬ್ರಾಹ್ಮೇ ಬಲೇ ಭವಾನ್ ಯುಕ್ತಃ ಸ್ವಾಧ್ಯಾಯೇ ಯಜ್ಞಕರ್ಮಣಿ । ಮಾ ಸ್ಮ ಯುಧ್ಯಸ್ವ ಕೌಂತೇಯ ಮಾ ಸ್ಮ ವೀರಾನ್ ಸಮಾಸದಃ’ (ಕರ್ಣಪರ್ವ ೪೪.೭೪-೭೫) - ನೀನು ಕ್ಷತ್ರಿಯ ಎಂದು ಯಾರು ಹೇಳುತ್ತಾರೆ?  ನೀನು ಬ್ರಾಹ್ಮಣನಂತೆ  ಸ್ವಾಧ್ಯಾಯ ಮತ್ತು ಯಜ್ಞಕರ್ಮಯುಕ್ತವಾದ ಕರ್ಮ ಮಾಡಿಕೊಂಡು ಇರಬೇಕು. ಒಂದೋ ಯುದ್ಧ ಮಾಡಬೇಡ. ಇನ್ನೂ ಯುದ್ಧ ಮಾಡಲೇಬೇಕು ಎಂತಿದ್ದರೆ ದೊಡ್ಡ-ದೊಡ್ಡ ವೀರರೊಂದಿಗೆ ಯುದ್ಧಮಾಡಬೇಡ. ಇತ್ಯಾದಿಯಾಗಿ ಕರ್ಣ ಯುಧಿಷ್ಠಿರನನ್ನು ಚುಚ್ಚಿ ಮಾತನಾಡಿದ.]

 

ತಂ ಪ್ರಾಣಸಂಶಯಗತಂ ನೃಪತಿಂ ನಿರೀಕ್ಷ್ಯ ಕರ್ಣ್ಣಂ ಜಗಾದ ಯುಧಿ ಮದ್ರಪತಿಃ ಪ್ರದರ್ಶ್ಯ ।

ಯಸ್ಯಾರ್ತ್ಥ ಏವ ಸಮರಸ್ತ್ವಮಿಯಂ ಚ ಸೇನಾ ತಂ ತ್ವಂ ಯಮಸ್ಯ ಸದನಂ ಪ್ರಯಿಯಾಸುಮದ್ಯ ॥೨೭.೩೬॥

 

 

ಭೀಮೇನ ಪೀಡಿತಮಮುಂ ಪರಿಪಾಹಿ ಶೀಘ್ರಂ ಕಿಂ ತೇ ಯುಧಿಷ್ಠಿರಮಿಮಂ ಹಿ ಮುಧಾSಭಿಪೀಡ್ಯ।

ಶ್ರುತ್ವಾSಸ್ಯ ವಾಕ್ಯಮತಿಹಾಯ ಯುಧಿಷ್ಠಿರಂ ತಂ ಕರ್ಣ್ಣೋ ಯಯೌ ನೃಪತಿರಕ್ಷಣತತ್ಪರೋSಲಮ್ ॥೨೭.೩೭॥

 

ಭೀಮನಿಂದ ಪೀಡೆಗೊಳಪಟ್ಟು, ಬದುಕುತ್ತಾನೋ ಇಲ್ಲವೋ ಎಂಬ ಸಂಶಯದಿಂದ ದುರ್ಯೋಧನನನ್ನು  ದೂರದಲ್ಲಿರುವ ಶಲ್ಯನು ನೋಡಿ, ಕರ್ಣನಿಗೆ ದುರ್ಯೋಧನನನ್ನು ತೋರಿಸಿ - ಯಾರಿಗಾಗಿ ಈ ಯುದ್ಧ ನಡೆಯುತ್ತಿದೆಯೋ, ನೀನು ಯಾರಿಗಾಗಿ ಯುದ್ಧ ಮಾಡುತ್ತಿರುವೆಯೋ, ಈ ಸೇನೆ ಯಾರಿಗಾಗಿ ಯುದ್ಧ ಮಾಡುತ್ತಿದೆಯೋ, ಅಂತಹ ದುರ್ಯೋಧನನು ಯಮನ ಮನೆಗೆ ಹೋಗಲು ಕ್ಷಣಗಣನೆ ಮಾಡುತ್ತಿದ್ದಾನೆ. ಭೀಮನಿಂದ ಪೀಡಿತಾನಾಗಿರುವ ಅಂತಹ ದುರ್ಯೋಧನನನ್ನು ಮೊದಲು ರಕ್ಷಿಸು. ಈ ಯುಧಿಷ್ಠಿರನನ್ನು ವ್ಯರ್ಥವಾಗಿ ಪೀಡಿಸಿ ಏನು ಪ್ರಯೋಜನ ಎಂದು ಕೇಳಿದನು. ಶಲ್ಯನ ವಾಕ್ಯವನ್ನು ಕೇಳಿ ಕರ್ಣನು ಯುಧಿಷ್ಠಿರನನ್ನು ಬಿಟ್ಟು,  ದುರ್ಯೋಧನನನ್ನು    ರಕ್ಷಿಸುವ ಬಯಕೆಯಿಂದ ಅಲ್ಲಿಗೆ ತೆರಳಿದನು.

 

ದೃಷ್ಟ್ವೈವ ತಂ ಪವನಸೂನುರಭಿ ತ್ವಿಯಾಯ ಕ್ರೋಧಾದ್ ದಿಧಕ್ಷುರಿವ ಕರ್ಣ್ಣಮಮೇಯಧಾಮಾ ।

ರಾಜಾವನಾಯ ಶಿನಿಪುಙ್ಗವಪಾರ್ಷತೌ ಚ ಸನ್ದಿಶ್ಯ ಕರ್ಣ್ಣಮಭಿಗಚ್ಛತ ಆಸ ರೂಪಮ್ ॥೨೭.೩೮॥

 

ಅನ್ತೇ ಕೃತಾನ್ತನರಸಿಂಹತನೋರ್ಯ್ಯಥೈವ ವಿಷ್ಣೋರ್ಹರಂ ಗ್ರಸತ ಆತ್ತಸಮಸ್ತವಿಶ್ವಮ್ ।

ತದ್ವೇಗತಃ ಪ್ರತಿಚಚಾಲ ಧರಾ ಸಮಸ್ತಾ ವಿದ್ರಾವಿತಾ ಚ ಸಕಲಾ ಪ್ರತಿವೀರಸೇನಾ ॥೨೭.೩೯॥

 

ಈರೀತಿಯಾಗಿ ಓಡಿ ಬರುತ್ತಿರುವ ಕರ್ಣನನ್ನು ಕಂಡು, ಪವನಪುತ್ರ ಭೀಮಸೇನನು ಕ್ರೋಧದಿಂದ, ಸುಟ್ಟುಬಿಡುವನೋ ಎಂಬಂತೆ, ಆ ಕರ್ಣನನ್ನು ಎದುರಾಗಿ ಹೋದನು. ಯುಧಿಷ್ಠಿರನನ್ನು ರಕ್ಷಿಸಿ’ ಎಂದು ಸಾತ್ಯಕಿ ಹಾಗೂ ಧೃಷ್ಟದ್ಯುಮ್ನರಿಗೆ ಹೇಳಿ, ಕರ್ಣನನ್ನು ಕುರಿತು ಹೋಗುವ ಆ ಭೀಮಸೇನನ ರೂಪವು ಮಹಾಪ್ರಳಯಕಾಲದಲ್ಲಿ ಇಡೀ ಪ್ರಪಂಚವನ್ನು ನಡುಗಿಸುವ ರುದ್ರನನ್ನು ನುಂಗುವ ಪ್ರಳಯಕಾಲದ ನರಸಿಂಹನ ರೂಪ ಹೇಗೆ ಭಯಂಕರವಾಗಿತ್ತೋ ಆ ರೀತಿ ಇತ್ತು. ಅವನು ನಡೆಯುವ ವೇಗದಿಂದ ಸಮಸ್ತ ಭೂಮಿಯೂ ಒಂದು ಕ್ಷಣ ಕಂಪಿಸಿತು. ಸಮಸ್ತ ಶತ್ರು ಸೇನೆಯೂ ಓಡಿಸಲ್ಪಟ್ಟಿತು.

 

ವೈಕರ್ತ್ತನೇನ ಶರಸಞ್ಚಯತಾಡಿತಃ ಸ ಬಾಣಂ ಚ ವಜ್ರಸದೃಶಂ ಪ್ರಮುಮೋಚ ತಸ್ಮಿನ್ ।

ತೇನಾSಹತೋ ಮೃತಕವತ್ ಸ ಪಪಾತ ಕರ್ಣ್ಣೋ ಭೀಮಃ ಕ್ಷುರಂ ಚ ಜಗೃಹೇSಭಿಯಯೌ ಚ ಪದ್ಭ್ಯಾಮ್ ॥೨೭.೪೦॥

 

ಕರ್ಣನಿಂದ ಬಾಣಗಳ ಸಮೂಹದಿಂದ ಹೊಡೆಯಲ್ಪಟ್ಟವನಾದ ಆ ಭೀಮಸೇನನು  ವಜ್ರಾಯುಧಕ್ಕೆ ಸದೃಶವಾದ ಬಾಣವನ್ನು ಕರ್ಣನನ್ನು ಕುರಿತು ಬಿಟ್ಟನು. ಅದರಿಂದ ಚೆನ್ನಾಗಿ ಹೊಡೆಯಲ್ಪಟ್ಟ ಕರ್ಣನು ಶವದಂತೆ ಬಿದ್ದನು. ಆಗ ಭೀಮಸೇನನು ಒಂದು ಚೂರಿಯನ್ನು ಹಿಡಿದು, ರಥದಿಂದ ಕೆಳಗಿಳಿದು, ಕಾಲು ನಡೆಯಿಂದ  ಕರ್ಣನ ಹತ್ತಿರ ಹೋದನು.

 

ನಿನ್ದಾಂ ಹರೇಸ್ತು ವಿದಧಾತಿ ಪರೋಕ್ಷಗೋSಪಿ ಯಸ್ತಂ ಪ್ರಗೃಹ್ಯ ಕರವಾಣಿ ವಿಜಿಹ್ವ̐ಮೇವ ।

ಏವಂ ಹಿ ವಾಯುತನಯಸ್ಯ ಮಹಾಪ್ರತಿಜ್ಞಾ ಛೇತ್ತುಂ ಸ ತೇನ ರವಿಜಸ್ಯ ಸಸಾರ ಜಿಹ್ವಾ̐ಮ್ ॥೨೭.೪೧॥

 

ಪರಮಾತ್ಮನ ನಿಂದನೆಯನ್ನು ಹಿಂದಿನಿಂದ ಯಾರು ಮಾಡುತ್ತಾನೋ, ಅವನ ನಾಲಿಗೆಯನ್ನು ಕತ್ತರಿಸುತ್ತೇನೆ ಎಂಬುದಾಗಿ ಭೀಮಸೇನನ ಮಹಾಪ್ರತಿಜ್ಞೆಯಿದೆ. ಅದರಿಂದ ಕರ್ಣನ ನಾಲಿಗೆಯನ್ನು ಕತ್ತರಿಸಲು ಭೀಮಸೇನ ಅವನ ಬಳಿ ನಡೆದ.

[‘ನಿನ್ದಾಂ ಹರೇಸ್ತು ಎನ್ನುವ ಮಾತಿನಿಂದ ಆಚಾರ್ಯರು ಮಹಾಭಾರತದ ಮೂಲಪಾಠದಲ್ಲಿ ಅಸ್ಪಷ್ಟವಾಗಿರುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕರ್ಣ ಶ್ರೀಕೃಷ್ಣನನ್ನು ನಿಂದಿಸಿರುವುದರಿಂದ ಭೀಮ ಅವನ ನಾಲಿಗೆಯನ್ನು ಕತ್ತರಿಸಲೆಂದು ಮುನ್ನುಗ್ಗಿ ಹೋದ.]

 

ಆಯಾನ್ತಮನ್ತಿಕಮಮುಂ ಪ್ರಸಮೀಕ್ಷ್ಯ ಶಲ್ಯೋ ನೇತ್ಯಾಹ ಹೇತುಭಿರಹೋ ನ ಮೃಷಾ ಪ್ರತಿಜ್ಞಾ ।

ಕಾರ್ಯ್ಯಾ ತ್ವಯೈವ ಪುರುಹೂತಸುತಸ್ಯ ಜಿ̐ಹ್ವಾಂ ಮಾ ತೇನ ಪಾತಯ ಮರುತ್ಸುತ ಸೂತಸೂನೋಃ ॥೨೭.೪೨॥

 

ಇತ್ಯುಕ್ತ್ವಾ ಪ್ರಮುಖಾತ್ ತಸ್ಯ ರಥೇನೈವ ತು ಮದ್ರರಾಟ್ ।

ವೈಕರ್ತ್ತನಮಪೋವಾಹ ಸರ್ವಲೋಕಸ್ಯ ಪಶ್ಯತಃ ॥೨೭.೪೩॥

 

ಆಗ ಶಲ್ಯನು ಹತ್ತಿರದಲ್ಲಿ ಬರುತ್ತಿರುವ ಭೀಮಸೇನನನ್ನು ನೋಡಿ, ಅನೇಕ ಕಾರಣವನ್ನು ಕೊಟ್ಟು, ಹೀಗೆ ಮಾಡಬೇಡ ಎಂದು ಕೇಳಿಕೊಂಡ.  ಎಲ್ಲಕ್ಕಿಂತ ಮಿಗಿಲಾಗಿ ನಿನ್ನಿಂದಲೇ ಅರ್ಜುನನ ಪ್ರತಿಜ್ಞೆಯು ಮುರಿಯಲ್ಪಡಬಾರದಲ್ಲವೇ? ಓ ಭೀಮಸೇನನೇ, ಕರ್ಣನ ನಾಲಿಗೆಯನ್ನು ಬೀಳಿಸಬೇಡ- ಎಂದು ಹೇಳಿ, ಅವನು ನೋಡುತ್ತಿರುವಾಗಲೇ, ಎಲ್ಲರೂ ನೋಡುತ್ತಿರುವಾಗಲೇ ಶಲ್ಯನು ಕರ್ಣನನ್ನು ಯುದ್ಧಭೂಮಿಯಿಂದ ಹೊರಗೆ ಕರೆದುಕೊಂಡು ಹೋದ.


Mahabharata Tatparya Nirnaya Kannada 27-23-32

 

ಪರಾಜಿತಃ ಸಂಯತಿ ಸೂರ್ಯ್ಯಸೂನುಃ ಸುತೇನ ಶಕ್ರಸ್ಯ ಸ ಧಾರ್ತ್ತರಾಷ್ಟ್ರಮ್ ।

ಜಗಾದ ಬಾಹುಂ ಪ್ರತಿಗೃಹ್ಯ ಪಾರ್ತ್ಥೋ ಜಿಗಾಯ ಮಾಮನ್ಯಮನಸ್ಕಮಾಜೌ ॥೨೭.೨೩॥

 

ಯುದ್ಧದಲ್ಲಿ ಅರ್ಜುನನಿಂದ ಸೋತ ಸೂರ್ಯನ ಮಗನಾದ ಕರ್ಣನು, ದುರ್ಯೋಧನನ  ಕೈಯನ್ನು ಹಿಡಿದುಕೊಂಡು ಹೇಳಿದ- ನನ್ನ ಮನಸ್ಸನ್ನು ಬೇರೆಲ್ಲೋ ನೆಟ್ಟಿರುವಾಗ ಅರ್ಜುನನು ನನ್ನನ್ನು ಯುದ್ಧದಲ್ಲಿ ಗೆದ್ದ.

 

ಕಾಮಂ ರಥೋ ಮೇ ಧನುರಪ್ಯಭೇದ್ಯಂ ದತ್ತಂ ಭೃಗೂಣಾಮಧಿಪೇನ ದಿವ್ಯಮ್ ।

ಯನ್ತಾ ನ ತಾದೃಙ್ ಮಮ ಯಾದೃಶೋ ಹರಿಃ ಶಲ್ಯೋ ಯದಿ ಸ್ಯಾತ್ ತ್ವದರಿಂ ನಿಹನ್ಯಾಮ್ ॥೨೭.೨೪॥

 

ಭಾರ್ಗವ ವಂಶದಲ್ಲಿ  ಬಂದವರಲ್ಲಿಯೇ ಶ್ರೇಷ್ಠನಾಗಿರುವ ಪರಶುರಾಮನಿಂದ ನನಗಾಗಿ ಅಲೌಕಿಕವಾದ ಧನುಸ್ಸು, ಒಳ್ಳೆಯ ರಥವೂ ಕೊಡಲ್ಪಟ್ಟಿದೆ. ಆದರೆ, ಯಾವರೀತಿ ಕೃಷ್ಣ  ಅರ್ಜುನನಿಗೆ ಸಾರಥಿಯಾಗಿದ್ದು, ಎಲ್ಲವನ್ನೂ ನೋಡಿಕೊಳ್ಳುತ್ತಾನೋ ಹಾಗೇ ನನಗೆ ಒಳ್ಳೆಯ ಸಾರಥಿ ಇಲ್ಲ. ಒಂದು ವೇಳೆ ಶಲ್ಯನು ನನಗೆ ಸಾರಥಿ ಆದರೆ ನಿನ್ನ ಶತ್ರುವಾಗಿರುವ ಅರ್ಜುನನನ್ನು ನಿಶ್ಚಯವಾಗಿ ಕೊಲ್ಲುತ್ತೇನೆ.

[ ‘ಸಾರಥಿಸ್ತಸ್ಯ ಗೋವಿಂದೋ ಮಮ ತಾದೃಙ್ ನ ವಿದ್ಯತೇ’ (೨೨.೫೬),  ಅಯಂ ತು ಸದೃಶಃ ಶೌರೇಃ ಶಲ್ಯಃ ಸಮಿತಿಶೋಭನಃ  ಸಾರಥ್ಯಂ ಯದಿ ಮೇ ಕುರ್ಯಾದ್ ಧ್ರುವಸ್ತೇ ವಿಜಯೋ ಭವೇತ್ ’ (೬೨) ಶ್ರೀಕೃಷ್ಣನು ಅರ್ಜುನನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದಿದ್ದಾನೆ. ಈ ಶಲ್ಯನು ಕೃಷ್ಣನಿಗೆ ಸದೃಶನಾಗಿದ್ದಾನೆ. ಒಂದುವೇಳೆ ಅವನು ನನ್ನ ಸಾರಥ್ಯವನ್ನು ಮಾಡಿದರೆ  ವಿಜಯ ನಿಶ್ಚಯ]

 

ಇತೀರಿತೇ ಸೌತ್ಯಕೃತೇ ಸ ಶಲ್ಯಂ ಪ್ರೋವಾಚ ಸ ಕ್ರುದ್ಧ ಇವಾಭವತ್ ತದಾ ।

ದುರ್ಯ್ಯೋಧನೋ ರಥಿನಃ ಸಾರಥೇಸ್ತು ವ್ಯಾವರ್ಣ್ಣಯನ್ನುತ್ತಮತಾಮಶಾಮಯತ್ ॥೨೭.೨೫॥

 

ಈರೀತಿಯಾಗಿ ಕರ್ಣ ಹೇಳಲು, ದುರ್ಯೋಧನನು ಕರ್ಣನ ಸಾರಥಿಯಾಗುವಂತೆ ಶಲ್ಯನನ್ನು ಕುರಿತು ಹೇಳಿದನು. ಆಗ ಶಲ್ಯನು  ಮುನಿಸಿಕೊಂಡವನಂತೆ ಆದನು. ದುರ್ಯೋಧನನು ರಥಿಕನಿಗಿಂತಲೂ ಸಾರಥಿಯ ಉತ್ತಮತ್ವವನ್ನು ಹೇಳುತ್ತಾ, ಶಲ್ಯನನ್ನು ಸಮಾಧಾನ ಮಾಡಿದನು.

 

ಬುದ್ಧ್ಯಾ ಬಲೇನ ಜ್ಞಾನೇನ ಧೈರ್ಯ್ಯಾದ್ಯೈರಪಿ ಯೋSಧಿಕಃ ।

ರಥಿನಃ ಸಾರಥಿಃ ಸ ಸ್ಯಾದರ್ಜ್ಜುನಸ್ಯ ಯಥಾ ಹರಿಃ ॥೨೭.೨೬॥

 

ಯಥಾ ಶಿವಸ್ಯ ಬ್ರಹ್ಮಾSಭೂದ್ ದಹತಸ್ತ್ರಿಪುರಂ ಪುರಾ ।

ಇತ್ಯಾದಿವಾಕ್ಯೈಃ ಸಂಶಾನ್ತ ಇವ ಶಲ್ಯೋSಸ್ಯ ಸಾರಥಿಃ ॥೨೭.೨೭॥

 

ಸಹಜ ಬುದ್ಧಿಯಿಂದಲೂ, ಬಲದಿಂದಲೂ, ಜ್ಞಾನದಿಂದಲೂ, ಧೈರ್ಯ ಮೊದಲಾದವುಗಳಿಂದಲೂ, ರಥಿಕನಿಗಿಂತ ಯಾರು ಶ್ರೇಷ್ಠನೋ, ಅವನು ಸಾರಥಿಯಾಗುತ್ತಾನೆ.   ಹೇಗೆ ಅರ್ಜುನನಿಗಿಂತ ಅಧಿಕನಾದ ಕೃಷ್ಣ  ಸಾರಥಿ ಆಗಿರುವನೋ, ಹೇಗೆ ಹಿಂದೆ ತ್ರಿಪುರಾಸುರರನ್ನು ಸುಡಲಿರುವ ಶಿವನಿಗೆ ಬ್ರಹ್ಮ ಸಾರಥಿಯಾದನೋ, ಅದೇ ರೀತಿ ಕರ್ಣನಿಗಿಂತ ಸಾರಥಿಯಾಗಿ ನೀನು ಉತ್ತಮನು ಎಂಬಿತ್ಯಾದಿಯಾಗಿ ದುರ್ಯೋಧನನಿಂದ ಹೇಳಲ್ಪಟ್ಟ ಶಲ್ಯ, ಸಮಾಧಾನಗೊಂಡನೋ ಎಂಬಂತೆ ಕರ್ಣನ ಸಾರಥಿಯಾದನು.

 

ಬಭೂವ ತೇನ ಸಹಿತಃ ಸೇನಾಂ ವ್ಯೂಹ್ಯ ರವೇಃ ಸುತಃ ।

ಗಚ್ಛನ್ ಯುದ್ಧಾಯ ದರ್ಪ್ಪೇಣ ಪ್ರಾಹ  ಯೋ ಮೇರ್ಜ್ಜುನಂ ಪುಮಾನ್ ॥೨೭.೨೮॥

 

ದರ್ಶಯೇತ್ ತಸ್ಯ ದಾಸ್ಯಾಮಿ ಪ್ರೀತೋ ವಿತ್ತಮನರ್ಗ್ಗಳಮ್ ।

ಇತಿ ಬ್ರುವನ್ತಂ ಬಹುಶಃ ಪ್ರಾಹ ಶಲ್ಯಃ ಪ್ರಹಸ್ಯ ಚ  ॥೨೭.೨೯॥

 

(ಯುದ್ಧದ ಹದಿನೇಳನೇ ದಿನ)ಶಲ್ಯನಿಂದ ಕೂಡಿಕೊಂಡ ಸೂರ್ಯಪುತ್ರ ಕರ್ಣನು ಸೇನೆಯನ್ನು ಆಯಕಟ್ಟಿನಲ್ಲಿ ನಿಲ್ಲಿಸಿ ಯುದ್ಧಕ್ಕಾಗಿ ಹೋಗುತ್ತಾ, ಅತ್ಯಂತ ಜಂಬದಿಂದ  ‘ಯಾವ ಪುರುಷನು ಅರ್ಜುನನನ್ನು ನನಗೆ ತೋರಿಸಿಕೊಡುವನೋ, ಅವನಿಗೆ ಪ್ರೀತನಾಗಿ ಅಮಿತ ಹಣವನ್ನು ಕೊಡುತ್ತೇನೆ’ ಎಂದು ಘೋಷಿಸಿದನು. ಈರೀತಿಯಾಗಿ   ಬಹಳ ಸಲ ಕರ್ಣ ಹೇಳಿದಾಗ  ಶಲ್ಯ ನಕ್ಕು ಅವನನ್ನು ಕುರಿತು ಹೇಳುತ್ತಾನೆ-

 

ನಿವಾತಕವಚಾ ಯೇನ ಹತಾ ದಗ್ಧಂ ಚ ಖಾಣ್ಡವಮ್ ।

ಕೋ ನಾಮ ತಂ ಜಯೇನ್ಮರ್ತ್ತ್ಯೋ ದೃಷ್ಟೋ ವೋSಪಿ ಸ ಗೋಗ್ರಹೇ ॥೨೭.೩೦॥

 

ಯಾರಿಂದ ನಿವಾತಕವಚರು ಕೊಲ್ಲಲ್ಪಟ್ಟರೋ, ಖಾಂಡವವನವು ಸುಡಲ್ಪಟ್ಟಿತೋ, ಅಂತಹ ಅರ್ಜುನನನ್ನು ಯಾವ ಮನುಷ್ಯ ಗೆದ್ದಾನು? ನಿಮಗೆ ಗೋಗ್ರಹಣದ ಕಾಲದಲ್ಲಿ ಅರ್ಜುನನ ಪರಾಕ್ರಮವು ಕಾಣಲ್ಪಟ್ಟಿದೆ ತಾನೇ?

 

ಕಾಕಗೋಮಾಯುಧರ್ಮ್ಮಾ ತ್ವಂ ಹಂಸಸಿಂಹೋಪಮಂ ರಣೇ ।

ಮಾ ಯಾಹಿ ಪಾರ್ತ್ಥಂ ಮಾ ಯಾಹಿ ಹತೋSನೇನ ಯಮಕ್ಷಯಮ್ ॥೨೭.೩೧॥

 

ನೀನೋ, ಕಾಗೆಯಂತೆ ಇರುವವನು. ನರಿಯಂತೆ ಇರುವವನು. ಇಂತಹ ನೀನು ಹಂಸದಂತೆ, ಸಿಂಹದಂತೆ  ಇರುವ ಅರ್ಜುನನನ್ನು ಕುರಿತು ಹೋಗಬೇಡ. ಅವನಿಂದ ಕೊಲ್ಲಲ್ಪಟ್ಟು ಯಮನ ಮನೆಗೆ ಹೋಗಬೇಡ.

[ಕರ್ಣಪರ್ವದಲ್ಲಿ ಈ ಕುರಿತು ಕಥೆಯೊಂದನ್ನು ಹೇಳಿದ್ದಾರೆ. ಒಂದು ಕಾಗೆ ಇತ್ತು. ಆ ಕಾಗೆ ಎಂಜಲು ಅನ್ನವನ್ನು ತಿಂದುಕೊಂಡು ನಾನು ಬಹಳ ಬಲಿಷ್ಠನಾಗಿದ್ದೇನೆ ಎಂದು ಬ್ರಮಿಸಿತ್ತು. ಅದು ಒಂದು ಹಂಸವನ್ನು ಕಂಡು ಅದಕ್ಕೆ ಸವಾಲೊಡ್ಡಿತು. ಅದು ತನಗೆ ಎಲ್ಲಾ ರೀತಿಯ ಹಾರುವಿಕೆ ಗೊತ್ತು ಎಂದು ಹೇಳಿ, ನಾನು ಸಮುದ್ರವನ್ನೇ ದಾಟಬಲ್ಲೆ ಎಂದು ಹಾರಿ ಮಧ್ಯದಲ್ಲಿ ಆಯಾಸಗೊಂಡು ಹಾರಲಾಗದೇ ನೀರಿಗೆ ಬಿತ್ತು. ಆಗ ಹಂಸ ಆ ಕಾಗೆಯನ್ನು ತನ್ನ ಬೆನ್ನಿನ ಮೇಲೆ ಹೊತ್ತುತಂದು, ತೀರಕ್ಕೆ ಬಿಟ್ಟು, ‘ನಿನ್ನ ಮಿತಿಯನ್ನು ತಿಳಿಯದೇ ಎಂದೂ ಮಾತನಾಡಬೇಡ’ ಎಂದು ಬುದ್ಧಿ ಹೇಳಿತು. ಆ ರೀತಿಯ ಕಾಗೆಯಂತಿರುವವನು ನೀನು. ಹಂಸದಿಂತಿರುವವನು ಅರ್ಜುನ. ಅದರಿಂದಾಗಿ ನಿಮ್ಮಿಬ್ಬರ ನಡುವಿನ ಅಂತರ ನಿನಗೆ ಗೊತ್ತಿರಬೇಕು ಎಂದು ಶಲ್ಯ ಹೇಳುತ್ತಾನೆ.   ಕರ್ಣಪರ್ವದಲ್ಲಿ(ಅಧ್ಯಾಯ ೩೫) ಈ ಕಥೆಯನ್ನು ವಿಸ್ತಾರವಾಗಿ ಹೇಳಿದ್ದಾರೆ]

 

ಇತ್ಯುಕ್ತೇ ರವಿಜೋ ಮದ್ರಾನ್ ನಿತರಾಂ ಪರ್ಯ್ಯಕುತ್ಸಯತ್ ।

ಶಲ್ಯೋSಪಿ ಸರ್ವದೇಶೇಷು ನೀಚಮದ್ಧ್ಯೋತ್ತಮಾ ನರಾಃ ।

ಸನ್ತೀತ್ಯುಕ್ತ್ವಾSಸ್ಯ ಸಾರಥ್ಯಂ ಚಕ್ರೇ ಪಾರ್ತ್ಥಹಿತೇಪ್ಸಯಾ ॥೨೭.೩೨॥

 

ಈರೀತಿಯಾಗಿ ಶಲ್ಯನು ಹೇಳಲು, ಕರ್ಣನು ಮದ್ರದೇಶದವರನ್ನು ಚೆನ್ನಾಗಿ ಬೈದ.  ಆಗ ಶಲ್ಯನು, ಎಲ್ಲಾ ದೇಶದಲ್ಲೂ ಕೂಡಾ ನೀಚ-ಅಧಮ-ಉತ್ತಮ ಜನರು ಇರುತ್ತಾರೆ ಎಂದು ಹೇಳಿ, ಪಾಂಡವರಿಗೆ  ಹಿತವಾಗಬೇಕು ಎನ್ನುವ ಇಚ್ಛೆಯಿಂದ ಕರ್ಣನ  ಸಾರಥ್ಯವನ್ನು ಮಾಡಿದನು.

Saturday, March 25, 2023

Mahabharata Tatparya Nirnaya Kannada 27-17-22

 

ವಿನ್ದಾನುವಿನ್ದಾವಥ ಕೈಕಯೌ ರಣೇ  ಸಮಾಸದತ್ ಸಾತ್ಯಕಿರುಗ್ರವಿಕ್ರಮಃ ।

ತಯೋರಮುಷ್ಯಾಭವದುಗ್ರವೈಶಸಂ ಪ್ರವರ್ಷತೋರುತ್ತಮಸಾಯಕಾನ್ ಬಹೂನ್ ॥೨೭.೧೭॥

 

ಇನ್ನೊಂದು ಕಡೆ ಪರಾಕ್ರಮಿಯಾಗಿರುವ ಸಾತ್ಯಕಿಯು ವಿನ್ದಾನುವಿನ್ದ ಎನ್ನುವ ಕೇಕಯ ದೇಶದವರನ್ನು ಯುದ್ಧದಲ್ಲಿ ಎದುರುಗೊಂಡು ಅವರ ಮೇಲೆ ಅತ್ಯುತ್ತಮ ಬಾಣಗಳ ಮಳೆಗರೆದನು. ಅವರ ನಡುವೆ ಉಗ್ರವಾಗಿರುವ ಯುದ್ಧವಾಯಿತು.

 

ತಾಭ್ಯಾಂ ನಿರುದ್ಧಃ ಸಹಸಾ ಜಹಾರ ತತ್ರಾನುವಿನ್ದಸ್ಯ ಶಿರೋSಥ ವಿನ್ದಃ ।

ಯುಯೋಧ ಶೈನೇಯಮಥಾರಥಾವುಭೌ ಪರಸ್ಪರಂ ಚಕ್ರತುರುತ್ತಮಾಹವೇ ॥೨೭.೧೮॥

 

ಅವರಿಬ್ಬರಿಂದ ತಡೆಯಲ್ಪಟ್ಟ ಸಾತ್ಯಕಿಯು ತತ್ಕ್ಷಣದಲ್ಲಿ ಅನುವಿನ್ದನ ತಲೆಯನ್ನು ಕತ್ತರಿಸಿದನು. ಆನಂತರ ವಿನ್ದನು ಸಾತ್ಯಕಿಯನ್ನು ಕುರಿತು ಯುದ್ಧಮಾಡಿದನು. ಇಬ್ಬರೂ ಕೂಡಾ ಪರಸ್ಪರ ರಥಹೀನರನ್ನಾಗಿ ಮಾಡಿಕೊಂಡರು.

 

ತತಶ್ಚ ಚರ್ಮ್ಮಾಸಿಧರೌ ಪ್ರಚೇರತುಃ ಶ್ಯೇನೌ ಯಥಾSಕಾಶತಳೇ ಕೃತಶ್ರಮೌ ।

ನಿಕೃತ್ಯ ಚಾನ್ಯೋನ್ಯಮುಭೌ ಚ ಚರ್ಮ್ಮಣೀ ವರಾಸಿಪಾಣೀ ಯುಗಪತ್ ಸಮೀಯತುಃ ॥೨೭.೧೯॥

 

ತದನಂತರ ಅವರಿಬ್ಬರೂ ಕೂಡಾ ಕತ್ತಿ-ಗುರಾಣಿಗಳನ್ನು ಧರಿಸಿ, ಹೇಗೆ ಆಕಾಶದಲ್ಲಿ ಮಾಂಸಕ್ಕಾಗಿ ಎರಡು ಗಿಡುಗಗಳು ಕಚ್ಚಾಡುತ್ತವೋ ಹಾಗೆ ತಿರುಗಿದರು. ಪರಸ್ಪರವಾಗಿ ಗುರಾಣಿಗಳನ್ನೂ ಕತ್ತರಿಸಿಕೊಂಡ ಅವರು, ಕೇವಲ ಕತ್ತಿಯುಳ್ಳವರಾಗಿ ಒಟ್ಟಿಗೇ ಮುಂದೆ ಬಂದರು.

 

ತತ್ರಾಪಹಸ್ತೇನ ಶಿರಃ ಸಕುಣ್ಡಲಂ ಜಹಾರ ವಿನ್ದಸ್ಯ ಮೃಧೇ ಸ ಸಾತ್ಯಕಿಃ ।

ನಿಹತ್ಯ ತಂ ಬನ್ಧುಜನೈಃ ಸುಪೂಜಿತೋ ಜಗಾಮ ಶತ್ರೂನಪರಾನ್ ಪ್ರಕಮ್ಪಯನ್ ॥೨೭.೨೦॥

 

ಸಾತ್ಯಕಿ ತನ್ನ ಕೈಯಿಂದ ವಿನ್ದನ ತಲೆಯನ್ನು ಹಿಡಿದು, ಕುಂಡಲದಿಂದ ಸಹಿತವಾಗಿರುವ ಅವನ ಕತ್ತನ್ನು ಕತ್ತರಿಸಿದನು. ಈರೀತಿಯಾಗಿ ವಿನ್ದಾವಿನ್ದರನ್ನು ಕೊಂದು, ಅಲ್ಲಿರುವ ಬಂಧುಗಳಿಂದ ಸತ್ಕೃತನಾದ ಸಾತ್ಯಕಿಯು, ಉಳಿದ ಶತ್ರುಗಳನ್ನು ನಡುಗಿಸುತ್ತ, ಅವರತ್ತ ನಡೆದನು.

 

ಕೃಪಮಾಯಾನ್ತಮೀಕ್ಷ್ಯೈವ ತಪಸಾ ಮಾಂ ಪ್ರಪೀಡಯೇತ್ ।

ಇತಿ ಮತ್ವಾ ಪಾರ್ಷತಸ್ತು ಭೀಮಂ ಶರಣಮೇಯಿವಾನ್ ॥೨೭.೨೧॥

 

ಇತ್ತ ಧೃಷ್ಟದ್ಯುಮ್ನನು ಬರುತ್ತಿರುವ ಕೃಪಾಚಾರ್ಯರನ್ನು ನೋಡಿ, ‘ಅವರು ತಮ್ಮ ತಪೋಬಲದಿಂದ ನನ್ನನ್ನು ಪೀಡಿಸಬಹುದು’ ಎಂದು ತಿಳಿದು, ಭೀಮಸೇನನನ್ನು ರಕ್ಷಕನಾಗಿ ಹೊಂದಿದನು.   

 

ಕರ್ಣ್ಣಂ ಸಮನ್ತಾತ್ ಪ್ರತಿಕಾಲಯನ್ತಂ ವರೂಥಿನೀಮಿನ್ದ್ರಸುತಃ ಸಮಭ್ಯಯಾತ್ ।

ಕ್ಷಣಾತ್ ತಮಾಜೌ ವಿರಥಂ ಚ ಚಕ್ರೇ ತತೋSಪಹಾರಂ ಸ ಚಕಾರ ಚಮ್ವಾಃ ॥೨೭.೨೨॥

 

ಇನ್ನೊಂದೆಡೆ ಎಲ್ಲಾ ಕಡೆಯಿಂದ ಸೇನೆಯನ್ನು ನಾಶಮಾಡುತ್ತಿರುವ ಕರ್ಣನನ್ನು ಅರ್ಜುನನು ಎದುರುಗೊಂಡು, ಕೆಲವೇ ಕ್ಷಣದಲ್ಲಿ ಅವನನ್ನು ರಥಹೀನನನ್ನಾಗಿ ಮಾಡಿದನು. ತದನಂತರ ಕರ್ಣ ಸೇನೆಯನ್ನು ಅಪಹಾರಮಾಡಿದನು. (ಹದಿನಾರನೇ ದಿನದ ಯುದ್ಧವನ್ನು ಕೊನೆಗೊಳಿಸಿದನು)

Mahabharata Tatparya Nirnaya Kannada 27-09-16

 

ಶರಾಸನೇ ಮಾರುತಿನಾ ನಿರಾಕೃತೋ ದ್ರೌಣಿರ್ಮ್ಮಹಾಸ್ತ್ರಾಣಿ ಮುಮೋಚ ತಸ್ಮಿನ್ ।

ತಾನ್ಯಸ್ತ್ರವರ್ಯೈರ್ಬಲವಾನವಿಸ್ಮಯಃ ಸಂಶಾಮಯಾಮಾಸ ಸುತೋSನಿಲಸ್ಯ ॥೨೭.೦೯॥

 

ಭೀಮನೊಂದಿಗೆ ಬಿಲ್ಲುಯುದ್ಧದಲ್ಲಿ ಸೋತ ಅಶ್ವತ್ಥಾಮನು ಮಹಾಮಹ ಅಸ್ತ್ರಗಳನ್ನು ಭೀಮಸೇನನಲ್ಲಿ ಬಿಟ್ಟ. ಅವುಗಳನ್ನು ಶ್ರೇಷ್ಠವಾದ ಅಸ್ತ್ರಗಳಿಂದ, ಬಲಿಷ್ಠನಾದ, ಯಾವುದೇ ಅಚ್ಚರಿಯನ್ನು ಹೊಂದದ ಭೀಮಸೇನನು ಶಾಂತಗೊಳಿಸಿದ.

 

ಪುನಃ ಶರೈರೇವ ಪರಸ್ಪರಂ ತಾವಯುದ್ಧ್ಯತಾಂ ಚಿತ್ರಮಲಂ ಚ ಸುಷ್ಠು ।

ತದಾ ತು ಭೀಮಸ್ಯ ಶರೈರ್ಭೃಶಾರ್ತ್ತೋ ದ್ರೌಣಿಃ ಪಪಾತಾSಶು ದೃಢಂ ವಿಚೇತನಃ ॥೨೭.೧೦॥

 

ಮತ್ತೆ ಬಾಣಗಳಿಂದಲೇ ಭೀಮ-ಅಶ್ವತ್ಥಾಮರು ಪರಸ್ಪರವಾಗಿ, ಚೆನ್ನಾಗಿ,  ಗಾಢವಾಗಿ, ಕಲಾತ್ಮಕತೆಯಿಂದ ಯುದ್ಧಮಾಡಿದರು. ಒಂದು ಹಂತದಲ್ಲಿ ಭೀಮಸೇನನ ಬಾಣಗಳಿಂದ ಬಹಳ ಪೀಡಿಸಲ್ಪಟ್ಟ ಅಶ್ವತ್ಥಾಮನು ಪ್ರಜ್ಞೆಕಳೆದುಕೊಂಡು ಬಿದ್ದನು.  

 

ಭೀಮಶ್ಚ ವಿಹ್ವಲತನುಃ ಸ ತು ಕಿಞ್ಚಿದೇವ ಪೂರ್ವಂ ಗತೇ ಗುರುಸುತೇ ಪ್ರಯಯೌ ಕ್ಷಣೇನ ।

ನಿರ್ದ್ಧೂತಯುದ್ಧಶ್ರಮ ಆತ್ತಧನ್ವಾ ಯೋದ್ಧುಂ ಗಜೌಘಂ ಪ್ರತಿನಾದಿತಾಶಃ ॥೨೭.೧೧॥

 

ಅಶ್ವತ್ಥಾಮ ಮೂರ್ಛೆಹೊಂದುತ್ತಿರಲು, ಆಯಾಸಗೊಂಡ ಶರೀರವುಳ್ಳವನಾದ ಭೀಮಸೇನನು ಒಂದು ಕ್ಷಣ ಯುದ್ಧಭೂಮಿಯಿಂದ ಹೊರಹೋಗಿ, ಮತ್ತೆ ಚೇತರಿಸಿಕೊಂಡು, ಬಿಲ್ಲನ್ನು ಹಿಡಿದು, ಆನೆಗಳ ಹಿಂಡನ್ನು ಕುರಿತು, ದಿಕ್ಕುಗಳನ್ನೆಲ್ಲಾ ಸದ್ದು ಮಾಡುತ್ತಾ ತೆರಳಿದನು.

[ತತಸ್ತು ಸಾರಥಿರ್ಜ್ಞಾತ್ವಾ ದ್ರೋಣಪುತ್ರಮಚೇತನಮ್ । ಅಪೋವಾಹ ರಣಾದ್ ರಾಜನ್ ಸರ್ವಸೈನ್ಯಸ್ಯ ಪಶ್ಯತಃ (ಕರ್ಣಪರ್ವ ೧೨.೪೩) – ಅಶ್ವತ್ಥಾಮ ಮೂರ್ಛೆಹೋಗಿರುವುದನ್ನು ತಿಳಿದ ಅಶ್ವತ್ಥಾಮನ ಸಾರಥಿಯು ಅವನನ್ನು ಸರ್ವಕ್ಷತ್ರಿಯರೂ ನೋಡುತ್ತಿದ್ದಂತೆ ಯುದ್ಧಭೂಮಿಯಿಂದ ಹೊರಗೆ ಕೊಂಡೊಯ್ದನು (೪೩). ತಥೈವ ಪಾಣ್ಡವಂ ರಾಜನ್ ವಿಹ್ವಲನ್ತಂ ಮುಹುರ್ಮುಹುಃ । ಅಪೋವಾಹ ರಥೇನಾಜೌ ವಿಶೋಕಃ ಶತ್ರುತಾಪನಮ್(೪೪)- ಹಾಗೆಯೇ, ವಿಹ್ವಲಿಸುತ್ತಿದ್ದ ಶತ್ರುತಾಪನ ಭೀಮಸೇನನನ್ನೂ ಕೂಡಾ ಅವನ ಸಾರಥಿಯಾದ ವಿಶೋಕನು ರಥದೊಂದಿಗೆ ಆಚೆ ಕೊಂಡೊಯ್ದನು].

 

ತಸ್ಮಿನ್ ಗಜಾನ್ ಮರ್ದ್ದಯತಿ ಧಾರ್ತ್ತರಾಷ್ಟ್ರೋ ಯುಧಿಷ್ಠಿರಮ್ ।

ಅಗಾದ್ ಯುದ್ಧಾಯ ತೌ ಯುದ್ಧಂ ರಾಜಾನೌ ಚಕ್ರತುಶ್ಚಿರಮ್ ॥೨೭.೧೨॥

 

ಭೀಮಸೇನನು ಆನೆಗಳನ್ನು ಕೊಲ್ಲುತ್ತಿರಲು, ದುರ್ಯೋಧನನು ಯುಧಿಷ್ಠಿರನನ್ನು ಕುರಿತು ಯುದ್ಧಕ್ಕೆಂದು  ತೆರಳಿದನು. ಅಲ್ಲಿ ಅವರಿಬ್ಬರೂ ಕೂಡಾ ಬಹಳ ಸಮಯ ಯುದ್ಧಮಾಡಿದರು.  

 

ತತ್ರ ತಂ ವಿರಥಂ ಚಕ್ರೇ ಸಹಸೈವ ಯುಧಿಷ್ಠಿರಃ ।

 ಸ ಗದಾಮಾದದೇ ಗುರ್ವೀಂ ತಂ ಭೀಮೋSಭ್ಯಪತದ್ ಗದೀ ॥೨೭.೧೩॥

 

ಆ ಯುದ್ಧದಲ್ಲಿ ಯುಧಿಷ್ಠಿರನು ಸ್ವಲ್ಪ ಹೊತ್ತಿಗೇ ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದನು. ಆಗ ಮುನಿದ ದುರ್ಯೋಧನನು ಭಾರವಾದ ಗದೆಯನ್ನು ತೆಗೆದುಕೊಂಡನು. ಇದನ್ನು ಕಂಡ ಭೀಮಸೇನನು ಗದೆಯನ್ನು ಹಿಡಿದು ದುರ್ಯೋಧನತ್ತ ತೆರಳಿದನು.

 

ದೃಷ್ಟ್ವಾ ಕೃಪಸ್ತಂ ಸ್ವರಥಮಾರೋಪ್ಯಾಪಯಯೌ ತತಃ ।

ತದೈವ ಕರ್ಣ್ಣನಕುಲೌ ಭೃಶಂ ಬಾಣೈರಯುದ್ಧ್ಯತಾಮ್ ॥೨೭.೧೪॥

 

ನಕುಲಂ ವಿರಥಂ ಕೃತ್ವಾ ಕರ್ಣ್ಣೋSಥ ಪ್ರಪಲಾಯಿತಮ್ ।

ಅನುದ್ರುತ್ಯ ಚ ವೇಗೇನ ಕಣ್ಠೇ ಧನುರವಾಸೃಜತ್ ॥೨೭.೧೫॥

 

ಈರೀತಿಯಾಗಿ ಭೀಮಸೇನ ಬರುವುದನ್ನು ಕಂಡ ಕೃಪಾಚಾರ್ಯರು ದುರ್ಯೋಧನನನ್ನು ತನ್ನ ರಥಕ್ಕೇರಿಸಿಕೊಂಡು ಅಲ್ಲಿಂದ ಪಲಾಯನ ಮಾಡಿದರು. ಆಗಲೇ ಕರ್ಣ ಹಾಗೂ ನಕುಲರಿಬ್ಬರು ಬಾಣದಿಂದ ಯುದ್ಧ ಮಾಡಿಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಕರ್ಣನು ನಕುಲನನ್ನು ರಥಹೀನನನ್ನಾಗಿ ಮಾಡಿ, ಪಲಾಯನ ಮಾಡಲು ತೊಡಗಿದ ನಕುಲನನ್ನು ಅನುಸರಿಸಿ, ಅವನ ಕೊರಳಿಗೆ ತನ್ನ ಬಿಲ್ಲಿನಿಂದ ತಿವಿದನು.

 

ಉಕ್ತ್ವಾ ಚ ಪರುಷಾ ವಾಚಃ ಕುನ್ತ್ಯಾ ವಚನಗೌರವಾತ್ ।

ನ ಜಘಾನೈವ ನಕುಲಂ ವಿಸೃಜ್ಯ ಚ ಯಯೌ ಪರಾನ್ ॥೨೭.೧೬॥

 

ಕರ್ಣನು ನಕುಲನಿಗೆ ಕೆಟ್ಟ ಮಾತುಗಳನ್ನು ಹೇಳಿದ ಆದರೆ ಕುಂತಿಗೆ ತಾನು ಕೊಟ್ಟ ಮಾತನ್ನು ಗೌರವಿಸಿ  ಅವನನ್ನು ಕೊಲ್ಲಲಿಲ್ಲ. ಅವನನ್ನು ತಿರಸ್ಕಾರದಿಂದ ಅಲ್ಲೇ ಬಿಟ್ಟು, ಅವನು ಉಳಿದವರನ್ನು ಕುರಿತು ತೆರಳಿದನು.

[‘ಮಾ ಯೋತ್ಸೀಃ ಕುರುಭಿಃ ಸಾರ್ಧಂ ಬಲವದ್ಭಿಶ್ಚ ಪಾಣ್ಡವ’(ಕರ್ಣಪರ್ವ, ೧೫.೫೦) ‘ಗೃಹಂ ವಾ ಗಚ್ಛ ಮಾದ್ರೇಯ ಯತ್ರ ವಾ ಕೃಷ್ಣಫಲ್ಗುನೌ’(೫೧), ನಿನಗಿಂತಲೂ ಬಲವಂತರಲ್ಲಿ ಯುದ್ಧ ಮಾಡಬೇಡ. ನಿನ್ನಂತೆಯೇ ಇರುವವರೊಡನೆ ಯುದ್ಧಮಾಡು ಅಥವಾ ಕೃಷ್ಣ-ಪಲ್ಗುನರಿರುವಲ್ಲಿಗಾದರೂ ಹೋಗು. ಸ್ಮೃತ್ವಾ ಕುಂತ್ಯಾ ವಚೋ ರಾಜಂಸ್ತತ ಏನಂ ವ್ಯಸರ್ಜಯತ್ (೫೨)- ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿಕೊಂಡ ಕರ್ಣ ಅವನನ್ನು ಹಾಗೆಯೇ ಬಿಟ್ಟನು.]