ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 17, 2019

Mahabharata Tatparya Nirnaya Kannada 1411_1415


ಕ್ಷುಬ್ಧೋsತಿಕೋಪವಶತಃ ಸ್ವಗದಾಮಮೋಘಾಂ ದತ್ತಾಂ ಶಿವೇನ ಜಗೃಹೇ ಶಿವಭಕ್ತವನ್ದ್ಯಃ
ಶೈವಾಗಮಾಖಿಲವಿದತ್ರ ಚ ಸುಸ್ಥಿರೋsಸೌ ಚಿಕ್ಷೇಪ ಯೋಜನಶತಂ ಸ ತು ತಾಂ ಪರಸ್ಮೈ ೧೪.೧೧

ಅತ್ಯಂತ ಸಿಟ್ಟಿನಿಂದ ಕೂಡಿದ, ಸಮಸ್ತ ಶಿವಭಕ್ತರಿಂದ ವನ್ದ್ಯನಾದ, ಎಲ್ಲಾ ಶೈವಾಗಮವನ್ನು ಬಲ್ಲ ಜರಾಸಂಧನು, ಶಿವನಿಂದ ತನಗೆ ಕೊಡಲ್ಪಟ್ಟ ಎಂದೂ ವ್ಯರ್ಥವಾಗದ ಗದೆಯನ್ನು ಹಿಡಿದುಕೊಂಡ. ಅವನು ತಾನಿರುವ ಮಗಧದಲ್ಲಿಯೇ ಗಟ್ಟಿಯಾಗಿ ನಿಂತು, ನೂರು ಯೋಜನ ದೂರ ಎಂದು ತಿಳಿದು, ಕೃಷ್ಣನಿಗಾಗಿ ಆ ಗದೆಯನ್ನು ಎಸೆದ.

ಅರ್ವಾಕ್ ಪಪಾತ ಚ ಗದಾ ಮಧುರಾಪ್ರದೇಶಾತ್ ಸಾ ಯೋಜನೇನ ಯದಿಮಂ ಪ್ರಜಗಾದ ಪೃಷ್ಟಃ
ಏಕೋತ್ತರಾಮಪಿ ಶತಾಚ್ಛತಯೋಜನೇತಿ ದೇವರ್ಷಿರತ್ರ ಮಧುರಾಂ ಭಗವತ್ಪ್ರಿಯಾರ್ತ್ಥೇ ೧೪.೧೨

ಜರಾಸಂಧನಿಂದ ಕೃಷ್ಣನಿಗಾಗಿ ಎಸೆದ ಆ ಗದೆಯು ಮಧುರೆಗಿಂತ ಒಂದು ಯೋಜನ ಹಿಂದೆ ಬಿದ್ದಿತು. [ಇದಕ್ಕೆ ಕಾರಣವೇನೆಂದರೆ:] ಜರಾಸಂಧನಿಂದ ಕೇಳಲ್ಪಟ್ಟ ದೇವಋಷಿ ನಾರದರು, ಪರಮಾತ್ಮನ ಪ್ರೀತಿಗಾಗಿ, ಮಧುರೆ ನೂರಕ್ಕಿಂತ ಒಂದು ಯೋಜನ ಹೆಚ್ಚಿಗೆ(೧೦೧ ಯೋಜನ) ದೂರದಲ್ಲಿದ್ದರೂ ಕೂಡಾ, ನೂರು ಯೋಜನಾ ಎಂದು ಜರಾಸಂಧನಿಗೆ ಹೇಳಿದ್ದರು.
[ಈಕುರಿತಾದ ವಿವರ ಮಹಾಭಾರತದ ಸಭಾಪರ್ವದಲ್ಲಿ(೧೯.೨೩-೨೪) ಕಾಣಸಿಗುತ್ತದೆ.  ‘ಭ್ರಾಮಯಿತ್ವಾ ಶತಗುಣಮೇಕೋನಂ ಏನ ಭಾರತ ಗದಾ ಕ್ಷಿಪ್ತಾ ಬಲವತಾ  ಮಾಗಧೇನ ಗಿರಿವ್ರಜಾತ್ ... ಏಕೋನಯೋಜನಶತೇ ಸ ಪಪಾತ ಗದಾ ಶುಭಾ’ ಗದೆಯನ್ನು ಗರಗರನೆ ತಿರುಗಿಸಿ ಎಸೆದ. ಅದು ಮಧುರೆಗಿಂತ ಒಂದು ಯೋಜನ ಹಿಂದೆಯೇ ಬಿತ್ತು.]

[ಹಾಗಿದ್ದರೆ ಕೃಷ್ಣನಿಗೆ ಆ ಗದೆಯನ್ನು ತಡೆಯುವ ಶಕ್ತಿ ಇಲ್ಲದೇ ಇದ್ದುದಕ್ಕಾಗಿ ನಾರದರು ಹಾಗೆ ಹೇಳಿದರೇ ಎಂದರೆ... ] 

ಶಕ್ತಸ್ಯ ಚಾಪಿ ಹಿ ಗದಾಪ್ರವಿಘಾತನೇ ತು ಶುಶ್ರೂಷಣಂ ಮದುಚಿತಂ ತ್ವಿತಿ ಚಿನ್ತಯಾನಃ
ವಿಷ್ಣೋರ್ಮ್ಮುನಿಃ ಸ ನಿಜಗಾದ ಹ ಯೋಜನೋನಂ ಮಾರ್ಗ್ಗಂ ಪುರೋ ಭಗವತೋ ಮಗಧೇಶಪೃಷ್ಟಃ ೧೪.೧೩

ಜರಾಸಂಧ ಎಸೆದ ಗದೆಯನ್ನು ಎದುರಿಸುವುದರಲ್ಲಿ ಶ್ರೀಕೃಷ್ಣ ಶಕ್ತ ಎಂದು ತಿಳಿದಿದ್ದರೂ ಕೂಡಾ, ಕೃಷ್ಣನಲ್ಲಿ  ನನಗೆ ಇದೊಂದು ಯೋಗ್ಯವಾದ ಸೇವೆ ಎಂದು ಚಿಂತಿಸಿದ ನಾರದರು, ಜರಾಸಂಧನಿಂದ ಕೇಳಲ್ಪಟ್ಟಾಗ, ಮಧುರಾ ಪಟ್ಟಣಕ್ಕೆ ಒಂದು ಯೋಜನ ಕಡಿಮೆಯಿರುವ ಮಾರ್ಗವನ್ನು ಹೇಳಿರುವರು.

ಕ್ಷಿಪ್ತಾ ತು ಸಾ ಭಗವತೋsಥ ಗದಾ ಜರಾಖ್ಯಾಂ ತತ್ಸನ್ಧಿನೀಮಸುಭಿರಾಶು ವಿಯೋಜ್ಯ ಪಾಪಾಮ್
ಮರ್ತ್ತ್ಯಾಶಿನೀಂ ಭಗವತಃ ಪುನರಾಜ್ಞಯೈವ ಯಾತಾ ಗಿರೀಶಸದನಂ ಮಗಧಂ ವಿಸೃಜ್ಯ ೧೪.೧೪

ಕೃಷ್ಣನಿಗಾಗಿ ಎಸೆಯಲ್ಪಟ್ಟ ಆ ಗದೆಯು ಜರಾಸಂಧನ ಶರೀರವನ್ನು  ಜೋಡಿಸಿದ್ದ, ಮನುಷ್ಯರನ್ನು ತಿನ್ನುವ ‘ಜರೆ’ ಎನ್ನುವ ಜರಾಸಂಧನ ತಾಯಿಯ ಶರೀರವನ್ನು ಪ್ರಾಣದಿಂದ ಬೇರ್ಪಡಿಸಿ, ಪರಮಾತ್ಮನ ಆಜ್ಞೆಯಿಂದಲೇ ಜರಾಸಂಧನನ್ನು ಬಿಟ್ಟು, ಕೈಲಾಸವನ್ನು ಕುರಿತು ತೆರಳಿತು.
[ಈ ವಿವರವನ್ನು ಮಹಾಭಾರತದ ದ್ರೋಣಪರ್ವದಲ್ಲಿ(೧೮೨.೮) ಕಾಣುತ್ತೇವೆ: ಅಸ್ಮದ್ವದಾರ್ಥಂ ಚಿಕ್ಷೇಪ ಗದಾಂ ವೈ ಸರ್ವಘಾತಿನೀಮ್’ ಎಂದು ಶ್ರೀಕೃಷ್ಣ ಈ ಘಟನೆಯನ್ನು ಅಲ್ಲಿ ನೆನಪಿಸಿಕೊಳ್ಳುವುದನ್ನು ಕಾಣುತ್ತೇವೆ.  ‘ಸಾ ತು ಭೂಮಿಂ ಗತಾ ಪಾರ್ಥ ಹತಾ ಸಸುತಬಾನ್ಧವಾ’ (೧೪) ಆ ಗದೆ ಭೂಮಿಯಮೇಲೆ ಬೀಳಬೇಕಾದರೆ ಜರೆಯ ಮೇಲೆ ಬಿದ್ದು ಜರೆ ಸತ್ತಳು ಎನ್ನುವ ಮಾತನ್ನು ಅಲ್ಲಿ ಕೃಷ್ಣ ನೆನಪಿಸಿಕೊಂಡಿದ್ದಾನೆ. ಆ ಮಾತನ್ನು  ಈ ಹಂತದಲ್ಲಿ ನಾವು ಅನುಸಂಧಾನ ಮಾಡಿಕೊಳ್ಳಬೇಕು ಎನ್ನುವುದನ್ನು ಆಚಾರ್ಯರು ತಮ್ಮ ನಿರ್ಣಯದಲ್ಲಿ ತೋರಿಸಿಕೊಟ್ಟಿದ್ದಾರೆ] 

ರಾಜಾ ಸ್ವಮಾತೃತ ಉತೋ ಗದಯಾ ಚ ಹೀನಃ ಕ್ರೋದಾತ್ ಸಮಸ್ತನೃಪತೀನಭಿಸನ್ನಿಪಾತ್ಯ
ಅಕ್ಷೋಹಿಣೀತ್ರ್ಯಧಿಕವಿಂಶಯುತೋsತಿವೇಲದರ್ಪ್ಪೋದ್ಧತಃ ಸಪದಿ ಕೃಷ್ಣಪುರೀಂ ಜಗಾಮ ೧೪.೧೫

ಜರಾಸಂಧನು ಗದೆಯಿಂದಲೂ, ಅಷ್ಟೇ ಅಲ್ಲದೇ ತನ್ನ ತಾಯಿಯಿಂದಲೂ ಹೀನನಾಗಿ, ಸಿಟ್ಟಿನಿಂದ ಎಲ್ಲಾ ರಾಜರನ್ನು ಕಲೆಹಾಕಿಕೊಂಡು ಇಪ್ಪತ್ಮೂರು ಅಕ್ಷೋಹಿಣಿಯಿಂದ ಕೂಡಿಕೊಂಡು, ಮಿತಿಮೀರಿದ ದರ್ಪದಿಂದ ಕೂಡಲೇ ಕೃಷ್ಣನ ಪಟ್ಟಣವಾದ ಮಧುರೆಯನ್ನು ಕುರಿತು ತೆರಳಿದನು.

Sunday, September 15, 2019

Mahabharata Tatparya Nirnaya Kannada 1406_1410


ಸರ್ವೇsಪಿ ತೇ ಪತಿಮವಾಪ್ಯ ಹರಿಂ ಪುರಾsಭಿತಪ್ತಾ ಹಿ ಭೋಜಪತಿನಾ ಮುಮುದುರ್ನ್ನಿತಾನ್ತಮ್
ಕಿಂ ವಾಚ್ಯಮತ್ರ ಸುತಮಾಪ್ಯ ಹರಿಂ ಸ್ವಪಿತ್ರೋರ್ಯ್ಯತ್ರಾಖಿಲಸ್ಯ ಸುಜನಸ್ಯ ಬಭೂವ ಮೋದಃ ೧೪.೦೬

ಹಿಂದೆ ಕಂಸನಿಂದ ಸಂಕಟಕ್ಕೆ ಒಳಗಾದವರಾಗಿದ್ದ ಆ ಎಲ್ಲಾ ಯಾದವರೂ ಕೂಡಾ, ಈಗ  ನಾರಾಯಣನನ್ನು ಹೊಂದಿ ಆತ್ಯಂತಿಕವಾಗಿ ಸಂತೋಷಪಟ್ಟರು. ಹೀಗಿರಲು ಪರಮಾತ್ಮನನ್ನು ಮಗನಾಗಿ ಪಡೆದ ತಂದೆತಾಯಿಗಳು ಸಂತೋಷವನ್ನು ಹೊಂದಿದರು  ಎಂಬ ವಿಷಯದಲ್ಲಿ ಏನು ಹೇಳಬೇಕು? (ಉಳಿದ ಯಾದವರೇ ಆತ್ಯಂತಿಕವಾಗಿ ಸಂತೋಷಪಟ್ಟರು ಎಂದಮೇಲೆ ಇನ್ನು ತಂದೆ-ತಾಯಿಗಳು ಸಂತೋಷವನ್ನು ಹೊಂದಿದರು ಎಂದು ಬೇರೆ ಹೇಳಬೇಕೇ) ಹೀಗೆ  ಎಲ್ಲಾ ಸಜ್ಜನರಿಗೂ ಆನಂದವುಂಟಾಯಿತು.
[ಕಂಸ ರಾಜನಾಗಿದ್ದಾಗ ಯಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಅದರಲ್ಲೂ ತಾನು ಯಾದವ ಅಲ್ಲಾ ಎನ್ನುವ ರಹಸ್ಯ ತಿಳಿದನಂತರ ಆತ ಎಲ್ಲರಿಗೂ ವಿಪರೀತ ಕಾಟ ಕೊದಲಾರಮ್ಭಿಸಿದ್ದ. ಯಾದವರೆಲ್ಲರೂ  ತನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ಅನುಮಾನ ಅವನದಾಗಿತ್ತು. ಕಂಸನ ಸಂಹಾರದ ನಂತರ ಹಿಂದೆ ಮಧುರಾಪಟ್ಟಣ ಬಿಟ್ಟುಹೋಗಿದ್ದ ಯಾದವರೆಲ್ಲರೂ ಮರಳಿ ಬಂದರು.]

ಕೃಷ್ಣಾಶ್ರಯೋ ವಸತಿ ಯತ್ರ ಜನೋsಪಿ ತತ್ರ ವೃದ್ಧಿರ್ಭವೇತ್ ಕಿಮು ರಮಾಧಿಪತೇರ್ನ್ನಿವಾಸೇ
ವೃನ್ದಾವನಂ ಯದಧಿವಾಸತ ಆಸ ಸಧ್ರ್ಯಙ್ ಮಾಹೇನ್ದ್ರಸದ್ಮಸದೃಶಂ ಕಿಮು ತತ್ರ ಪುರ್ಯ್ಯಾಃ ೧೪.೦೭

ಎಲ್ಲಿ ಕೃಷ್ಣನ ಆಶ್ರಯವನ್ನು ಪಡೆದ ಭಕ್ತನು ವಾಸಮಾಡುತ್ತಾನೋ ಅಲ್ಲೇ ಸರ್ವಸಂಪತ್ತುಗಳ ವೃದ್ಧಿಯಾಗುತ್ತದೆ. ಇನ್ನು ಸ್ವಯಂ ಪರಮಾತ್ಮನೇ ವಾಸ ಮಾಡಿದಲ್ಲಿ ವೃದ್ಧಿಯಾಗುತ್ತದೆ ಎಂದು ಏನು ಹೇಳತಕ್ಕದ್ದು. ಶ್ರೀಕೃಷ್ಣನ ನೆಲೆಸುವಿಕೆಯಿಂದ ವೃಂದಾವನವೇ ಅಮರಾವತಿಯಂತಾಗಿರುವಾಗ ಇನ್ನು ಮಧುರಾ ಪಟ್ಟಣದಲ್ಲಿ ಸರ್ವಸಂಪತ್ತು ವೃದ್ಧಿಯಾಯಿತು ಎಂದು  ಏನು ಹೇಳಬೇಕು. (ತೀರಾ ಕಾಡಿನ ಒಳಗಿರುವ ಗೋವಳರ ಹಟ್ಟಿಯೇ ಹಾಗೆ ಮೆರೆಯಿತು ಎಂದಮೇಲೆ ಇನ್ನು ಮಧುರಾ ಪಟ್ಟಣದ ಕುರಿತೇನು ಹೇಳಬೇಕು)

ಯೇನಾಧಿವಾಸಮೃಷಭೋ ಜಗತಾಂ ವಿಧತ್ತೇ ವಿಷ್ಣುಸ್ತತೋ ಹಿ ವರತಾ ಸದನೇsಪಿ ಧಾತುಃ
ತಸ್ಮಾತ್ ಪ್ರಭೋರ್ನ್ನಿವಸನಾನ್ಮಧುರಾ ಪುರೀ ಸಾ ಶಶ್ವತ್ ಸಮೃದ್ಧಜನಸಙ್ಕುಲಿತಾ ಬಭೂವ ೧೪.೦೮

ಯಾವ ಕಾರಣದಿಂದ ಜಗತ್ತಿಗೇ ಒಡೆಯನಾಗಿರುವ ನಾರಾಯಣನು ಬ್ರಹ್ಮನ ಲೋಕವಾದ ಸತ್ಯಲೋಕದಲ್ಲಿ ಮುಖ್ಯವಾಗಿ ನೆಲೆಸುವಿಕೆಯನ್ನು ಮಾಡುತ್ತಾನೋ, ಆ ಕಾರಣದಿಂದಲೇ ಸತ್ಯಲೋಕ ಎಲ್ಲಾ ಲೋಕಗಳಿಗಿಂತ ಶ್ರೇಷ್ಠವೆನಿಸಿದೆ. ಅಂತಹ ನಾರಾಯಣನ ಆವಾಸದಿಂದ ಮಧುರಾಪುರಿಯು ಒಳ್ಳೆಯ ಸಾತ್ವಿಕರಾದ(ಅತ್ಯಂತ ಸಂಪನ್ನರಾದ) ಜನರಿಂದ ಕೂಡಿದುದಾಯಿತು.

ರಕ್ಷತ್ಯಜೇ ತ್ರಿಜಗತಾಂ ಪರಿರಕ್ಷಕೇsಸ್ಮಿನ್ ಸರ್ವಾನ್ ಯದೂನ್ ಮಗಧರಾಜಸುತೇ ಸ್ವಭರ್ತ್ತುಃ
ಕೃಷ್ಣಾನ್ಮೃತಿಂ ಪಿತುರವಾಪ್ಯ ಸಮೀಪಮಸ್ತಿಪ್ರಾಸ್ತೀ ಶಶಂಸತುರತೀವ ಚ ದುಃಖಿತೇsಸ್ಮೈ ೧೪.೦೯

ಹೀಗೆ, ಎಂದೂ ಹುಟ್ಟದಂತಹ ಮೂರು ಲೋಕಗಳ ರಕ್ಷಕನಾಗಿರುವ ನಾರಾಯಣನು ಎಲ್ಲಾ ಯದುಗಳನ್ನು ರಕ್ಷಿಸುತ್ತಿರಲು, ಮಗಧರಾಜನಾದ ಜರಾಸಂಧನ ಮಕ್ಕಳಾಗಿರುವ(ಕಂಸನ ಪತ್ನಿಯರಾಗಿದ್ದ) ಆಸ್ತಿ ಮತ್ತು ಪ್ರಾಸ್ತೀ ಎಂಬ ಹೆಣ್ಣುಮಕ್ಕಳು, ಕೃಷ್ಣನಿಂದ  ತನ್ನ ಗಂಡನಿಗಾದ ಸಾವನ್ನು ಜರಾಸಂಧನಲ್ಲಿಗೆ ತೆರಳಿ ಅತ್ಯಂತ ದುಃಖಿತರಾಗಿ  ಅವನಿಗೆ ತಿಳಿಸಿದರು.    

ಶ್ರುತ್ವೈವ ತನ್ಮಗಧರಾಜ ಉರುಪ್ರರೂಢಬಾಹ್ವೋರ್ಬಲೇನ ತಜಿತೋ ಯುಧಿ ಸರ್ವಲೋಕೈಃ
ಬ್ರಹ್ಮೇಶಚಣ್ಡಮುನಿದತ್ತವರೈರಜೇಯೋ ಮೃತ್ಯೂಜ್ಝಿತಶ್ಚ ವಿಜಯೀ ಜಗತಶ್ಚುಕೋಪ ೧೪.೧೦

ತನ್ನ ಮಕ್ಕಳ ದೂರನ್ನು ಕೇಳಿಯೇ, ಉತ್ಕೃಷ್ಟ ಹಾಗು ಪ್ರಸಿದ್ಧವಾಗಿರುವ ಮೈಗಳ ಕಸುವಿನಿಂದ ಕೂಡಿರುವ, ಎಲ್ಲರೂ ಕೂಡಿ ಬಂದರೂ ಯುದ್ಧದಲ್ಲಿ ಸೋಲದವನಾಗಿರುವ,  ಬ್ರಹ್ಮ-ರುದ್ರ-ಚಣ್ಡಕೌಶಿಕಮುನಿ[1]  ಈ ಮೂವರ ವರಬಲದಿಂದ ಸೋಲಿಸಲ್ಪಡದ ಶಕ್ತಿಯುಳ್ಳವನಾಗಿರುವ, ಸಾವನ್ನು ಮೆಟ್ಟಿನಿಂತವನಾಗಿರುವ, ಎಲ್ಲಾ ಜಗತ್ತನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಜರಾಸಂಧನು ಕೋಪಗೊಂಡ.




[1] ಚಣ್ಡಕೌಶಿಕಮುನಿಯ ವರ ಹಾಗು ಇತರ ವಿವರವನ್ನು ಮಹಾಭಾರತದ ಸಭಾಪರ್ವದಲ್ಲಿ(ಅಧ್ಯಾಯ ೧೭-೧೯) ಕಾಣಬಹುದು

Mahabharata Tatparya Nirnaya Kannada 1401_1405


೧೪. ಉದ್ಧವಪ್ರತಿಯಾನಮ್


ಓಂ ॥
ಕೃಷ್ಣೋ ವಿಮೋಚ್ಯ ಪಿತರಾವಭಿವನ್ದ್ಯ ಸರ್ವವನ್ದ್ಯೋsಪಿ ರಾಮಸಹಿತಃ ಪ್ರತಿಪಾಲನಾಯ
ಧರ್ಮ್ಮಸ್ಯ ರಾಜ್ಯಪದವೀಂ ಪ್ರಣಿಧಾಯ ಚೋಗ್ರಸೇನೇ ದ್ವಿಜತ್ವಮುಪಗಮ್ಯ ಮುಮೋಚ ನನ್ದಮ್ ೧೪.೦೧

ತಂದೆತಾಯಿಗಳನ್ನು ಕಂಸನ ಬಂಧನದಿಂದ ಬಿಡಿಸಿದ ಕೃಷ್ಣಪರಮಾತ್ಮನು, ತಾನು  ಎಲ್ಲರಿಂದ ವನ್ದ್ಯನಾದರೂ ಕೂಡಾ,  ರಾಮನಿಂದ ಕೂಡಿಕೊಂಡು ತಂದೆತಾಯಿಗೆ ನಮಸ್ಕರಿಸಿದ. ಧರ್ಮದ ಪಾಲನೆಗಾಗಿ ರಾಜ್ಯದ ಪದವಿಯನ್ನು ಉಗ್ರಸೇನನಲ್ಲಿ ಇಟ್ಟ ಶ್ರೀಕೃಷ್ಣ, ಉಪನಯನ ಮಾಡಿಕೊಂಡು ನಂದನನ್ನು ಬೀಳ್ಕೊಟ್ಟ.
[ಇಲ್ಲಿ ‘ಧರ್ಮಸ್ಯ ಪ್ರತಿಪಾಲನಾಯ’ ಎಂದು ಹೇಳಿರುವುದನ್ನು ಗಮನಿಸಬೇಕು. ಒಂದುವೇಳೆ  ‘ಸತ್ತವನ ರಾಜ್ಯ ಸಾಯಿಸಿದವನ ಹಕ್ಕು’ ಎಂದು ಕೃಷ್ಣ ಪರಿಗಣಿಸಿದ್ದರೆ ಆತನಿಗೆ ಆ ರಾಜ್ಯವನ್ನು ಬಿಟ್ಟು ಇತರೆಡೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಓಡಾಡದೇ, ಎಲ್ಲೆಡೆ ಧರ್ಮಸಂಸ್ಥಾಪನಾ ಕಾರ್ಯ  ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೃಷ್ಣ ರಾಜ್ಯಾಧಿಕಾರವನ್ನು ಉಗ್ರಸೇನನಿಗೊಪ್ಪಿಸಿದ.
ಭಾಗವತದಲ್ಲಿ(೧೦.೪೩.೨೯)  ಗರ್ಗಾದ್ ಯದುಕುಲಾಚಾರ್ಯಾದ್ ಗಾಯತ್ರಂ ವ್ರತಮಾಸ್ಥಿತೌ’ ಎಂದು ಹೇಳಿರುವುದನ್ನೇ ಆಚಾರ್ಯರು ಇಲ್ಲಿ ‘ದ್ವಿಜತ್ವಮುಪಗಮ್ಯ’ ಎಂದು ಹೇಳಿದ್ದಾರೆ.  ಶ್ರೀಕೃಷ್ಣ ಕುಲಪುರೋಹಿತರ ಮುಖೇನ ಉಪನಯನ ಮಾಡಿಕೊಂಡ] 

ನನ್ದೋsಪಿ ಸಾನ್ತ್ವವಚನೈರನುನೀಯ ಮುಕ್ತಃ ಕೃಷ್ಣೇನ ತಚ್ಚರಣಪಙ್ಕಜಮಾತ್ಮಸಂಸ್ಥಮ್
ಕೃತ್ವಾ ಜಗಾಮ ಸಹ ಗೋಪಗಣೇನ ಕೃಚ್ಛ್ರಾದ್ ದ್ಧ್ಯಾಯನ್ ಜನಾರ್ದ್ದನಮುವಾಸ ವನೇ ಸಭಾರ್ಯ್ಯಃ ೧೪.೦೨

ಶ್ರೀಕೃಷ್ಣನಿಂದ ನಂದನೂ ಕೂಡಾ  ಬಹಳ ಸಮಾಧಾನದ ಮಾತುಗಳಿಂದ ಸಮಾಧಾನಪಡಿಸಿ ಕಳುಹಿಸಲ್ಪಟ್ಟನು. ಪರಮಾತ್ಮನ ಚರಣಕಮಲವನ್ನು ತನ್ನ ಹೃದಯದೊಳಗೆ ಇಟ್ಟುಕೊಂಡ ನಂದನು, ಬಹಳ ಕಷ್ಟದಿಂದ, ಗೋಪಾಲಕರ ಗಣದಿಂದ ಕೂಡಿಕೊಂಡು, ನಾರಾಯಣನನ್ನೇ ಧ್ಯಾನಮಾಡುತ್ತಾ, ಕಾಡಿನಲ್ಲಿ(ವೃಂದಾವನದಲ್ಲಿ) ಹೆಂಡತಿ ಯಶೋದೆಯೊಂದೊಡಗೂಡಿ ವಾಸ ಮಾಡಿದನು.

ಕೃಷ್ಣೋsಪ್ಯವನ್ತಿಪುರವಾಸಿನಮೇತ್ಯ ವಿಪ್ರಂ ಸಾನ್ದೀಪನಿಂ ಸಹ ಬಲೇನ ತತೋsದ್ಧ್ಯಗೀಷ್ಟ
ವೇದಾನ್ ಸಕೃನ್ನಿಗಾದಿತಾನ್ ನಿಖಿಲಾಶ್ಚ ವಿದ್ಯಾಃ ಸಮ್ಪೂರ್ಣ್ಣಸಂವಿದಪಿ ದೈವತಶಿಕ್ಷಣಾಯ ೧೪.೦೩

ಕೃಷ್ಣನಾದರೋ, ಬಲರಾಮನಿಂದ ಕೂಡಿಕೊಂಡು, ಅವಂತಿಪಟ್ಟಣದಲ್ಲಿ[1] ವಾಸಮಾಡಿಕೊಂಡಿದ್ದ ಸಾನ್ದೀಪನಿ ಎನ್ನುವ ಬ್ರಾಹ್ಮಣನನ್ನು  ಹೊಂದಿ ತನ್ನ ಅಧ್ಯಯನವನ್ನು ಮಾಡಿದ. ಒಮ್ಮೆನೆ(ಒಂದಾವರ್ತಿ)  ಹೇಳಿದ ವೇದಗಳನ್ನೂ, ಎಲ್ಲಾ ವಿದ್ಯೆಗಳನ್ನೂ, ಪೂರ್ಣಪ್ರಜ್ಞನಾದರೂ ಕೂಡಾ , ದೇವತೆಗಳ ಶಿಕ್ಷಣಕ್ಕಾಗಿ ಶ್ರೀಕೃಷ್ಣ ಅಧ್ಯಯನ ಮಾಡಿದ.

ಧರ್ಮ್ಮೋ ಹಿ ಸರ್ವವಿದುಷಾಮಪಿ ದೈವತಾನಾಂ ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ
ಜ್ಞಾನಾದಿಗೂಹನಮುತಾದ್ಧ್ಯಯನಾದಿರತ್ರ ತಜ್ಜ್ಞಾಪನಾರ್ತ್ಥಮವಸದ್ ಭಗವಾನ್ ಗುರೌ ಚ ೧೪.೦೪

ಎಲ್ಲವನ್ನು ಬಲ್ಲವರಾದ ದೇವತೆಗಳಿಗೆ ಮನುಷ್ಯರಲ್ಲಿ ಹುಟ್ಟು ಇರಲು(ಅವತಾರ ಪ್ರಾಪ್ತಿಯಾದಾಗ) ಮನುಷ್ಯರಂತೇ ಪ್ರವೃತ್ತಿ,  ಜ್ಞಾನದ ಮುಚ್ಚಿಕೊಳ್ಳುವಿಕೆ, ಅಷ್ಟೇ ಅಲ್ಲದೆ ಅಧ್ಯಯನ ಮೊದಲಾದವುಗಳು ಧರ್ಮವಾಗುತ್ತದೆ. ಅದನ್ನು ದೇವತೆಗಳಿಗೆ  ನೆನಪಿಸಲೋಸುಗ  ಶ್ರೀಕೃಷ್ಣನು ಗುರುಗಳಲ್ಲಿಯೂ ವಾಸಮಾಡಿದ.

ಗುರ್ವರ್ತ್ಥಮೇಷ ಮೃತಪುತ್ರಮದಾತ್ ಪುನಶ್ಚ ರಾಮೇಣಾ ಸಾರ್ದ್ಧಮಗಮನ್ಮಧುರಾಂ ರಮೇಶಃ
ಪೌರೈಃ ಸಜಾನಪದಬನ್ಧುಜನೈರಜಸ್ರಮಭ್ಯರ್ಚ್ಚಿತೋ ನ್ಯವಸದಿಷ್ಟಕೃದಾತ್ಮಪಿತ್ರೋಃ ೧೪.೦೫

ಶ್ರೀಕೃಷ್ಣನು ಗುರುಗಳಿಗಾಗಿ ಹಿಂದೆ ಸತ್ತಿದ್ದ  ಅವರ ಮಗನನ್ನು (ಗುರುದಕ್ಷಿಣೆಯಾಗಿ) ಕೊಟ್ಟನು. ರಾಮನಿಂದ ಕೂಡಿಕೊಂಡು ರಮಾಪತಿ  ಶ್ರೀಕೃಷ್ಣನು ಮಧುರೆಗೆ ತೆರಳಿ,  ಹಳ್ಳಿಗರು, ಬಂಧುಜನರು, ಇವರಿಂದ ಕೂಡಿದ ನಾಗರಿಕರಿಂದ ನಿರಂತರವಾಗಿ ಪೂಜಿಸಲ್ಪಟ್ಟವನಾಗಿ, ತನ್ನ ತಂದೆ-ತಾಯಿಗಳ ಅಭೀಷ್ಟವನ್ನು ಪೂರೈಸುತ್ತಾ ಆವಾಸಮಾಡಿದನು.




[1] ಇಂದಿನ ಹರಿದ್ವಾರ