ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 29, 2020

Mahabharata Tatparya Nirnaya Kannada 19107_19112

 

ಷಣ್ಣಾಂ ಚ ಮದ್ಧ್ಯಗಮುದೀರ್ಣ್ಣಭುಜಂ ವಿಶಾಲವಕ್ಷಸ್ಥಲಂ ಬಹಳಪೌರುಷಲಕ್ಷಣಂ ಚ ।

ದೃಷ್ಟ್ವೈವ ಮಾರುತಿಮಸಾವುಪಲಪ್ಸ್ಯತೀಹ ಕೃಷ್ಣಾಮಿತಿ ಸ್ಮ ಚ ವಚಃ ಪ್ರವದನ್ತಿ ವಿಪ್ರಾಃ ॥೧೯.೧೦೭॥

 

ಆರು ಜನರ ಮಧ್ಯದಲ್ಲಿರುವ, ಉಬ್ಬಿನಿಂತಿರುವ ತೋಳ್ಗಳುಳ್ಳ, ಹರವಾದ ಎದೆಯುಳ್ಳ,  ಬಹಳ ಪೌರುಷ ಲಕ್ಷಣವುಳ್ಳ ಭೀಮಸೇನನನ್ನು ಕಂಡೇ, ‘ಇವನು ದ್ರೌಪದಿಯನ್ನು ಹೊಂದುತ್ತಾನೆ’ ಎಂದು ಬ್ರಾಹ್ಮಣರು ಮಾತನಾಡುತ್ತಿದ್ದರು.   

[ಮಹಾಭಾರತದ ಆದಿಪರ್ವದಲ್ಲಿ(೧೮೫.೨೦) ಈಕುರಿತ ವಿವರವನ್ನು ಕಾಣುತ್ತೇವೆ.  ‘ಅಯಮೇಕಶ್ಚ ವೋ ಭ್ರಾತಾ ದರ್ಶನೀಯೋ ಮಹಾಭುಜಃ । ನಿಯುಧ್ಯಮಾನೋ ವಿಜಯೇತ್ ಸಙ್ಗತ್ಯ ದ್ರವಿಣಂ ಮಹತ್ ‘] 

 

ರಾತ್ರೌ ದಿವಾ ಚ ಸತತಂ ಪಥಿ ಗಚ್ಛಮಾನಾಃ ಪ್ರಾಪುಃ ಕದಾಚಿದಥ ವಿಷ್ಣುಪದೀಂ ನಿಶಾಯಾಮ್ ।

ಸರ್ವಸ್ಯ ರಕ್ಷಿತುಮಗಾದಿಹ ಪೃಷ್ಠತಸ್ತು ಭೀಮೋsಗ್ರ ಏವ ಶತಮನ್ಯುಸುತೋsನ್ತರಾsನ್ಯೇ ॥೧೯.೧೦೮॥

 

ರಾತ್ರಿಯಲ್ಲಿಯೂ, ಹಗಲಿನಲ್ಲಿಯೂ ನಿರಂತರವಾಗಿ ಪ್ರಯಾಣಿಸತಕ್ಕವರಾದ ಪಾಂಡವರು, ಒಂದಾನೊಂದು ದಿನ ರಾತ್ರಿ ಗಂಗೆಯನ್ನು ಹೊಂದಿದರು. ಭೀಮಸೇನನು ಅವರೆಲ್ಲರ ಹಿಂಭಾಗದಲ್ಲಿ ಎಲ್ಲರ ರಕ್ಷಕನಾಗಿ ಸಾಗುತ್ತಿದ್ದನು. (ಕಾಡಿನಲ್ಲಿ ಹಿಂದಿನಿಂದ ಅಪಾಯಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಭೀಮಸೇನ ಹಿಂದಿನಿಂದ ರಕ್ಷಕನಾಗಿದ್ದ. ಮುಂಭಾಗದಲ್ಲಿ ಅರ್ಜುನನಿದ್ದರೆ, ಉಳಿದವರು ಮಧ್ಯದಲ್ಲಿದ್ದರು.

 

ಪ್ರಾಪ್ತೇ ತದೋಲ್ಮುಕಧರೇsರ್ಜ್ಜುನ ಏವ ಗಙ್ಗಾಂ ಗನ್ಧರ್ವರಾಜ ಇಹ ಚಿತ್ರರಥೋsರ್ದ್ಧರಾತ್ರೇ ।

ದೃಷ್ಟ್ವೈವ ವಿಪ್ರರಹಿತಾನುದಕಾನ್ತರಸ್ಥಃ ಕ್ಷತ್ರಾತ್ಮಜಾ ಇತಿ ಹ ಧರ್ಷಯಿತುಂ ಸ ಚಾsಗಾತ್ ॥೧೯.೧೦೯॥

 

ಆಗ ಪಂಜನ್ನು ಹಿಡಿದುಕೊಂಡಿರುವ ಅರ್ಜುನನು ಮುಂದೆ ಸಾಗುತ್ತಿರಲು, ಗಂಗೆಯಲ್ಲಿ ಗಂಧರ್ವರ ಒಡೆಯನಾದ ಚಿತ್ರರಥನು, ಅರ್ಧರಾತ್ರಿಯಲ್ಲಿ, ಬ್ರಾಹ್ಮಣರಿಂದ ರಹಿತರಾದ ಇವರನ್ನು ನೀರಿನ ಒಳಗಡೆಯಲ್ಲಿ  ಇದ್ದುಕೊಂಡೇ ಕಂಡು, ಇವರು ಕ್ಷತ್ರಿಯರು ಎಂದು ತಿಳಿದು, ಅವರ ಮೇಲೆ ದರ್ಪತೋರಿಸಲು ಉದ್ಯುಕ್ತನಾದನು.

[ಮಹಾಭಾರತದ ಆದಿಪರ್ವದಲ್ಲಿ ಈಕುರಿತಾದ ವಿವರ ಕಾಣಸಿಗುತ್ತದೆ.   ಉಲ್ಮುಕಂ ತು ಸಮುದ್ಯಮ್ಯ ತೇಷಾಮಗ್ರೇ ಧನಞ್ಜಯಃ । ಪ್ರಕಾಶಾರ್ಥಂ ಯಯೌ ತತ್ರ ರಕ್ಷಾರ್ಥಂ ಚ ಮಹಾರಥಃ’ (೧೮೬.೪)   ಚಿತ್ರರಥ ಗಂಗೆಯಲ್ಲಿ ಜಲಕ್ರೀಡೆ ಆಡುತ್ತಿದ್ದ ಎನ್ನುವುದನ್ನೂ ಅಲ್ಲಿ ಹೇಳಿದ್ದಾರೆ. ‘ತತ್ರ ಗಙ್ಗಾಜಲೇ ರಮ್ಯೇ ವಿವಿಕ್ತೇ ಕ್ರೀಡಯನ್ ಸ್ತ್ರಿಯಃ । ಈರ್ಷ್ಯುರ್ಗನ್ಧರ್ವರಾಜೋ ವೈ ಜಲಕ್ರೀಡಾಮುಪಾಗತಃ(೧೮೬.೫)]

 

ಹನ್ತಾsಸ್ಮಿ ವೋ ಹ್ಯುಪಗತಾನುದಕಾನ್ತಮಸ್ಯಾ ನದ್ಯಾಶ್ಚ ಮರ್ತ್ತ್ಯಚರಣಾಯ ನಿಷಿದ್ಧಕಾಲೇ ।

ಇತ್ಥಂ ವದನ್ತಮಮುಮಾಹ ಸುರೇನ್ದ್ರಸೂನುರ್ಗ್ಗನ್ಧರ್ವ ನಾಸ್ತ್ರವಿದುಷಾಂ ಭಯಮಸ್ತಿ ತೇsದ್ಯ ॥೧೯.೧೧೦॥

 

‘ಮನುಷ್ಯರು ಓಡಾಡಬಾರದ ವೇಳೆಯಲ್ಲಿ ಈ ನದಿಯ ನೀರಿನ ಸಮೀಪ ಬಂದಿರುವ ನಿಮ್ಮನ್ನು ಕೊಲ್ಲುತ್ತೇನೆ’ ಎಂದು ಹೇಳಿದ ಅವನನ್ನು ಕುರಿತು ಅರ್ಜುನನು ಹೇಳುತ್ತಾನೆ: ‘ಎಲೈ ಗಂಧರ್ವನೇ, ಅಸ್ತ್ರವೇತ್ತರಾದ ನಮಗೆ ನಿನ್ನಿಂದ ಭಯವಿಲ್ಲಾ’ ಎಂದು. 

 

ಸರ್ವಂ ಹಿ ಫೇನವದಿದಂ ಬಹುಲಂ ಬಲಂ ತೇ ನಾರ್ತ್ಥಪ್ರದಂ ಭವತಿ ಚಾಸ್ತ್ರವಿದಿ ಪ್ರಯುಕ್ತಮ್ ।

ಇತ್ಯುಕ್ತವನ್ತಮಮುಮುತ್ತಮಯಾನಸಂಸ್ಥೋ ಬಾಣಾನ್ ಕ್ಷಿಪನ್ನಭಿ ಸಸಾರ ಸುರೇಶಭೃತ್ಯಃ ॥೧೯.೧೧೧॥

 

ನೀನು ನಿನ್ನೆಲ್ಲಾ ಬಲವನ್ನು ಉಪಯೋಗಿಸಿದರೂ ಕೂಡಾ, ಅದು ನಮ್ಮ ಮುಂದೆ ನೀರಗುಳ್ಳೆಯಂತೆ ವ್ಯರ್ಥವಾಗಿ ಹೋಗುತ್ತದೆ’. ಈರೀತಿಯಾಗಿ ಹೇಳುತ್ತಿರುವ ಅರ್ಜುನನನ್ನು ಕುರಿತು, ಉತ್ಕೃಷ್ಟವಾದ ರಥದಲ್ಲಿ  ಕುಳಿತಿದ್ದ ದೇವತೆಗಳ ಭೃತ್ಯನಾದ ಆ ಗಂಧರ್ವನು, ಬಾಣಗಳನ್ನು ಎಸೆಯುತ್ತಾ ಬಂದ.

[ಮಹಾಭಾರತದಲ್ಲಿ ಈ ವಿವರವನ್ನು ನಾವು ಕಾಣಬಹುದು. ‘ಬಿಭೀಷಿಕಾ ವೈ ಗನ್ಧರ್ವ ನಾಸ್ತ್ರಜ್ಞೇಷು ಪ್ರಯುಜ್ಯತೇ । ಅಸ್ತ್ರಜ್ಞೇಷು ಪ್ರಯುಕ್ತೇಯಂ ಫೇನವತ್ ಪ್ರವಿಲೀಯತೇ(ಆದಿಪರ್ವ ೧೮೬.೨೭)]

 

ಆಗ್ನೇಯಮಸ್ತ್ರಮಭಿಮನ್ತ್ರ್ಯ ತದೋಲ್ಮುಕೇ ಸ ಚಿಕ್ಷೇಪ ಶಕ್ರತನಯೋsಸ್ಯ ರಥಶ್ಚ ದಗ್ಧಃ ।

ತಂ ಚಾಗ್ನಿನಾ ಪರಿಗೃಹೀತಮಭಿಪ್ರಗೃಹ್ಯ  ಕೇಶೇಷು ಸಞ್ಚಕರ್ಷಾSಶು ಸುರೇನ್ದ್ರಸೂನುಃ ॥೧೯.೧೧೨॥

 

ತಕ್ಷಣ ಪಂಜಿನಲ್ಲಿಯೇ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದ  ಅರ್ಜುನನು, ಅದನ್ನು ಅವನತ್ತ ಎಸೆದನು. ಆಗ ಗಂಧರ್ವನ ರಥವು ಸುಡಲ್ಪಟ್ಟಿತು. ಬೆಂಕಿಯಿಂದ ಮೈ ಸುಟ್ಟುಕೊಂಡ ಚಿತ್ರರಥನನ್ನು ಅರ್ಜುನನು ಕೂಡಲೇ ಅವನ ಕೇಶವನ್ನು ಹಿಡಿದು ಎಳೆದನು.

[ಮಹಾಭಾರತದಲ್ಲಿ  ಈಕುರಿತ ವಿವರ ಕಾಣಸಿಗುತ್ತದೆ: ಪ್ರದೀಪ್ತಮಸ್ತ್ರಮಾಗ್ನೇಯಮ್ ದದಾಹಾಸ್ಯ ರಥಂ ತು ತತ್ । ವಿರಥಂ ವಿಪ್ಲುತಂ ತಂ ತು ಸ ಗನ್ಧರ್ವಂ ಮಹಾಬಲಃ. । ಅಸ್ತ್ರತೇಜಃಪ್ರಮೂಢಂ ಚ ಪ್ರಪತನ್ತಮವಾಙ್ಮುಖಮ್ । ಶಿರೋರುಹೇಷು ಜಗ್ರಾಹ ಮಾಲ್ಯವತ್ಸು ಧನಞ್ಜಯಃ । ಭ್ರಾತೄನ್   ಪ್ರತಿ ಚಕರ್ಷಾಥ  ಸೋsಸ್ತ್ರಪಾತಾದಚೇತಸಮ್(೩೧-೩೩) ಅಸ್ತ್ರದಿಂದ ತನ್ನ ದೇಹದಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಅವನನ್ನು ಅರ್ಜುನ ಎಳೆದುಕೊಂಡು ಹೋದ.]

Sunday, September 27, 2020

Mahabharata Tatparya Nirnaya Kannada 19101_19106

 

[ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ಸಮಯದಲ್ಲಿ ದ್ವಾರಕಾಪಟ್ಟಣದಲ್ಲಿ ಪಿತೂರಿಯೊಂದು ನಡೆಯಿತು:]

 

ತಸ್ಯಾನ್ತರೇ ಹೃದಿಕಸೂನುರನನ್ತರಂ ಸ್ವಂ ಶ್ವಾಫಲ್ಕಿಬುದ್ಧಿಬಲಮಾಶ್ರಿತ ಇತ್ಯುವಾಚ ।

ಸತ್ರಾಜಿದೇಷ ಹಿ ಪುರಾ ಪ್ರತಿಜಜ್ಞ ಏನಾಮಸ್ಮತ್ಕೃತೇ ಸ್ವತನಯಾಂ ಮಣಿನಾ ಸಹೈವ ॥೧೯.೧೦೧॥

 

ಸರ್ವಾಂಶ್ಚ ನಃ ಪುನರಸಾವವಮತ್ಯ ಕೃಷ್ಣಾಯಾದಾತ್ ಸುತಾಂ ಜಹಿ ಚ ತಂ ನಿಶಿ ಪಾಪಬುದ್ಧಿಮ್ ।

ಆದಾಯ ರತ್ನಮುಪಯಾಹಿ ಚ ನೌ ವಿರೋಧೇ ಕೃಷ್ಣಸ್ಯ ದಾನಪತಿನಾ ಸಹ ಸಾಹ್ಯಮೇಮಿ ॥೧೯.೧೦೨॥

 

ಈನಡುವೆ ಹೃದಿಕಸೂನುವಾದ ಕೃತವರ್ಮನು ಶ್ವಾಫಲ್ಕನ ಮಗನಾದ  ಅಕ್ರೂರನ ಮಾತನ್ನು ಕೇಳಿಕೊಂಡು, ತನ್ನ ತಮ್ಮನನ್ನು(ಶತಧನ್ವನನ್ನು) ಕುರಿತು ಹೀಗೆ ಹೇಳಿದನು: ‘ಈ ಸತ್ರಾಜಿತನು ಮೊದಲು  ಸತ್ಯಭಾಮೆಯನ್ನು ಮಣಿಯ ಜೊತೆಗೆ ನಮಗಾಗಿ ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ.

ಆದರೆ ಆತ ನಮ್ಮೆಲ್ಲರನ್ನೂ ಅವಮಾನಮಾಡಿ(ಕಡೆಗಣಿಸಿ), ಕೃಷ್ಣನಿಗೆ ತನ್ನ ಮಗಳನ್ನು ಕೊಟ್ಟ. ಅದರಿಂದಾಗಿ ಆ ಪಾಪಿಷ್ಠಬುದ್ಧಿಯುಳ್ಳ ಅವನನ್ನು ನೀನು ರಾತ್ರಿಯಲ್ಲಿ ಕೊಂದು, ಮಣಿಯನ್ನು  ತೆಗೆದುಕೊಂಡು ನಮ್ಮ ಬಳಿ ಬಾ. ಒಂದುವೇಳೆ ಇದಕ್ಕೆ ಕೃಷ್ಣನ ವಿರೋಧವಾದರೆ, ದಾನಪತಿ ಅಕ್ರೂರನ ಜೊತೆಗಿದ್ದು, ನಾನು ನಿನ್ನ ಸಹಾಯಕ್ಕೆ ಇರುತ್ತೇನೆ’.

 

ಇತ್ಯುಕ್ತ ಆಶು ಕುಮತಿಃ ಸ ಹಿ ಪೂರ್ವದೇಹೇ ದೈತ್ಯೋ ಯತಸ್ತದಕರೋದಥ ಸತ್ಯಭಾಮಾ ।

ಆನನ್ದಸಂವಿದಪಿ ಲೋಕವಿಡಮ್ಬನಾಯ ತದ್ದೇಹಮಸ್ಯ ತಿಲಜೇ ಪತಿಮಭ್ಯುಪಾಗಾತ್ ॥೧೯.೧೦೩॥

 

ಈರೀತಿಯಾಗಿ ಹೇಳಲ್ಪಟ್ಟವನಾದ, ಪೂರ್ವದೇಹದಲ್ಲಿ ದೈತ್ಯನಾಗಿದ್ದ  ಆ ಕುಮತಿಯು(ಶತಧನ್ವನು), ಹಾಗೇ ಮಾಡಿದ ಕೂಡಾ(ಸತ್ರಾಜಿತನ ಕೊಲೆ ಮಾಡಿಬಿಟ್ಟ). ಸತ್ಯಭಾಮೆಯು ಜ್ಞಾನಾನಂದವುಳ್ಳವಳಾದರೂ, ಲೋಕವನ್ನು ಅನುಸರಿಸಲೋಸುಗ, ತನ್ನ ತಂದೆಯ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟು, ಗಂಡನನ್ನು ಕುರಿತು ತೆರಳಿದಳು.   

 

ಶ್ರುತ್ವಾ ತದೀಯವಚನಂ ಭಗವಾನ್ ಪುರೀಂ ಸ್ವಾಮಾಯಾತ ಏವ ತು ನಿಶಮ್ಯ ಮಹೋತ್ಸವಂ ತಮ್ ।

ಪಾಞ್ಚಾಲರಾಜಪುರುಷೋದಿತಮಾಶು ವೃಷ್ಣಿವರ್ಯ್ಯೈರಗಾನ್ಮುಸಲಿನಾ ಸಹ ತತ್ಪುರೀಂ ಚ ॥೧೯.೧೦೪॥

 

ಅವಳ ಮಾತನ್ನು ಕೇಳಿ, ಶ್ರೀಕೃಷ್ಣನು ತನ್ನ ಪಟ್ಟಣದತ್ತ ಬರುತ್ತಿರಲು,  ಆ ಹೊತ್ತಿಗೇ, ಪಾಂಚಾಲ ರಾಜ್ಯದ ದೂತರು ಬಂದು, ದ್ರೌಪದಿಯ ಮಹೋತ್ಸವದ(ಸ್ವಯಮ್ಬರದ) ಕುರಿತು ಹೇಳಿದರು. ಅದನ್ನು ಕೇಳಿ, ಯಾದವರಿಂದ ಹಾಗೂ  ಬಲರಾಮನಿಂದಲೂ ಕೂಡಿಕೊಂಡ ಶ್ರೀಕೃಷ್ಣ, ಪಾಂಚಾಲರಾಜನ ಪಟ್ಟಣವನ್ನು ಕುರಿತು ತೆರಳಿದನು.  

 

ಭೀಮೋsಪಿ ರುದ್ರವರರಕ್ಷಿತರಾಕ್ಷಸಂ ತಂ ಹತ್ವಾ ತೃಣೋಪಮತಯಾ ಹರಿಭಕ್ತವನ್ದ್ಯಃ ।

ಉಷ್ಯಾಥ ತತ್ರ ಕತಿಚಿದ್ದಿನಮಚ್ಯುತಸ್ಯ ವ್ಯಾಸಾತ್ಮನೋ ವಚನತಃ ಪ್ರಯಯೌ ನಿಜೈಶ್ಚ ॥೧೯.೧೦೫॥

 

ಇತ್ತ ರುದ್ರನ ವರದಿಂದ ರಕ್ಷಿತನಾಗಿದ್ದ ರಾಕ್ಷಸನನ್ನು ಹುಲ್ಲೋ ಎಂಬಂತೆ ಕೊಂದು, ಪರಮಾತ್ಮನ ಭಕ್ತರಿಂದ ವಂದ್ಯನಾಗಿ, ಕೆಲವು ದಿನಗಳ ಕಾಲ ಅಲ್ಲೇ  ವಾಸಮಾಡಿದ ಭೀಮಸೇನ, ತದನಂತರ ವೇದವ್ಯಾಸರೂಪಿ ನಾರಾಯಣನ ಮಾತಿನಂತೇ, ತನ್ನವರಿಂದ ಕೂಡಿಕೊಂಡು ಪಾಂಚಾಲ ಪಟ್ಟಣಕ್ಕೆ ತೆರಳಿದ.

 

ಮಙ್ಗಲ್ಯಮೇತದತುಲಂ ಪ್ರತಿ ಯಾತ ಶೀಘ್ರಂ ಪಾಞ್ಚಾಲಕಾನ್  ಪರಮಭೋಜನಮತ್ರ ಸಿದ್ಧ್ಯೇತ್ ।

ವಿಪ್ರೈರಿತಸ್ತತ ಇತೀರಿತವಾಕ್ಯಮೇತೇ ಶೃಣ್ವನ್ತ ಏವ ಪರಿ ಚಕ್ರಮುರುತ್ತರಾಶಾಮ್ ॥೧೯.೧೦೬॥

 

‘ಈ ಮಹೋತ್ಸವ ಅತ್ಯಂತ ಮಂಗಳಕರವಾದ ಮಹೋತ್ಸವ. ಅದರಿಂದಾಗಿ ಶೀಘ್ರವಾಗಿ ಪಾಂಚಾಲ ದೇಶವನ್ನು ಕುರಿತು ತೆರಳಿರಿ, ಅಲ್ಲಿ ಒಳ್ಳೆಯ ಊಟ ಸಿಗುವುದು’ ಎಂದು ಅಲ್ಲಲ್ಲಿ ಬ್ರಾಹ್ಮಣರಿಂದ ಹೇಳಲ್ಪಟ್ಟ ಮಾತನ್ನು ಕೇಳುವವರಾದ ಅವರು, ಉತ್ತರದಿಕ್ಕಿಗೆ ತೆರಳಿದರು.

Mahabharata Tatparya Nirnaya Kannada 1996_19100

 

ಉತ್ಪತ್ತಿಪೂರ್ವಕಕಥಾಂ ದ್ರುಪದಾತ್ಮಜಾಯಾ ವ್ಯಾಸೋ ಹ್ಯನೂಚ್ಯ ಜಗತಾಂ ಗುರುರೀಶ್ವರೇಶಃ ।

ಯಾತೇತ್ಯಚೋದಯದಥಾಪ್ಯಪರೇ ದ್ವಿಜಾಗ್ರ್ಯಾಸ್ತಾನ್ ಬ್ರಾಹ್ಮಣಾ ಇತಿ ಭುಜಿರ್ಭವತೀತಿ ಚೋಚುಃ ॥೧೯.೯೬॥

 

ಜಗತ್ತಿಗೇ ಜ್ಞಾನೋಪದೇಶಕರಾದ, ಒಡೆಯರಿಗೇ ಒಡೆಯರಾದ ವೇದವ್ಯಾಸರು, ಪಾಂಡವರಿಗೆ ದ್ರೌಪದಿಯ ಹುಟ್ಟು ಮೊದಲಾದ ಎಲ್ಲಾ ಕಥೆಗಳನ್ನೂ ಕೂಡಾ ವಿವರಿಸಿ ಹೇಳಿ, ಹೊರಡಿ(ದ್ರುಪದರಾಜನಲ್ಲಿಗೆ ಹೋಗಿ)  ಎಂದು ಪ್ರಚೋದಿಸಿದರು. ತದನಂತರ, ಬೇರೆ ಬ್ರಾಹ್ಮಣರು  ಇವರನ್ನು ಬ್ರಾಹ್ಮಣರೆಂದೇ ತಿಳಿದು, ‘ಅಲ್ಲಿ ಉತ್ತಮವಾದ ಭೋಜನವಾಗುತ್ತದೆ’ ಎಂದು ಹೇಳಿದರು.   

 

ಪೂರ್ವಂ ಹಿ ಪಾರ್ಷತ ಇಮಾನ್ ಜತುಗೇಹದಗ್ಧಾನ್ ಶ್ರುತ್ವಾsತಿದುಃಖಿತಮನಾಃ ಪುನರೇವ ಮನ್ತ್ರಃ ।

ಯಾಜೋಪಯಾಜಮುಖನಿಸ್ಸೃತ ಏವಮೇಷ ನಾಸತ್ಯತಾರ್ಹ ಇತಿ ಜೀವನಮೇಷು ಮೇನೇ ॥೧೯.೯೭॥

 

ಇತ್ತ ‘ಪಾಂಡವರು ಅರಗಿನ ಮನೆಯಲ್ಲಿ ಸುಟ್ಟುಹೋದರು’ ಎಂಬ ವಿಷಯವನ್ನು ಕೇಳಿದ ದ್ರುಪದನು ಮೊದಲು ಅತ್ಯಂತ ಖತಿಗೊಂಡ ಬಗೆಯುಳ್ಳವನಾದನು. ಆದರೆ ತದನಂತರ ಯಾಜೋಪಯಾಜರ ಮುಖದಿಂದ ಬಂದ ಮಂತ್ರವು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲಾ^ ಎಂದರಿತು, ಅವರಲ್ಲಿ ಜೀವನವನ್ನು ತಿಳಿದನು(ಪಾಂಡವರು ಜೀವಂತವಾಗಿದ್ದಾರೆ ಎಂದು ತಿಳಿದನು).

[^ಅರ್ಜುನನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುವ ಸಲುವಾಗಿಯೇ, ಯಾಜ ಮತ್ತು ಉಪಯಾಜರ ಮುಖೇನ ಯಜ್ಞವನ್ನು ಮಾಡಿಸಿ, ಮಗಳನ್ನು ಪಡೆದಿದ್ದ ದ್ರುಪದ, ಸ್ವಾಭಾವಿಕವಾಗಿ ಪಾಂಡವರು ಸತ್ತಿಲ್ಲಾ ಎನ್ನುವ ಸತ್ಯವನ್ನರಿತನು].

 

ಯತ್ರಕ್ವಚಿತ್ ಪ್ರತಿವಸನ್ತಿ ನಿಲೀನರೂಪಾಃ ಪಾರ್ತ್ಥಾ ಇತಿ ಸ್ಮ ಸ ತು ಫಲ್ಗುನಕಾರಣೇನ ।

ಚಕ್ರೇ ಸ್ವಯಮ್ಬರವಿಘೋಷಣಮಾಶು ರಾಜಸ್ವನ್ಯೈರಧಾರ್ಯ್ಯಧನುರೀಶವರಾಚ್ಚ ಚಕ್ರೇ ॥೧೯.೯೮॥

 

‘ಎಲ್ಲೋ ಒಂದೆಡೆ ತಮ್ಮ ರೂಪವನ್ನು ಮರೆಮಾಚಿಕೊಂಡು ಪಾಂಡವರು ವಾಸಮಾಡುತ್ತಿದ್ದಾರೆ’ ಎಂದು ತಿಳಿದ ದ್ರುಪದನು, ಅರ್ಜುನನನ್ನು ಮನಸ್ಸಿನಲ್ಲಿಟ್ಟುಕೊಂಡು ದ್ರೌಪದಿಯ ಸ್ವಯಮ್ಬರದ ಘೋಷಣೆಯನ್ನು ಮಾಡಿದನು. ಅರ್ಜುನನಲ್ಲದೇ ಬೇರೆ ಯಾರಿಗೂ ಧರಿಸಲಾಗದ ಧನುಸ್ಸನ್ನು ರುದ್ರದೇವರ ವರದಿಂದ ಸ್ವಯಮ್ಬರಕ್ಕಾಗಿ  ದ್ರುಪದ ಸಿದ್ಧಪಡಿಸಿದನು.  

[ಮಹಾಭಾರತದ ಆದಿಪರ್ವದಲ್ಲಿ ಈ ಧನುಸ್ಸಿನ ಕುರಿತಾದ ವಿವರಣೆ ಕಾಣಸಿಗುತ್ತದೆ: ಸೊsನ್ವೇಷಮಾಣಃ  ಕೌನ್ತೇಯಾನ್  ಪಾಞ್ಚಾಲೋ ಜನಮೇಜಯ । ದೃಢಂ ಧನುರಥಾನಮ್ಯಂ ಕಾರಯಾಮಾಸ ಭಾರತ’ (೨೦೦.೧೨). ‘ತದ್ಧನುಃ ಕಿಂಧುರಂ ನಾಮ ದೇವದತ್ತಮುಪಾನಯತ್ ।  ಜ್ಯಾಯಸಿ ತಸ್ಯ ಚ ಜ್ಯಾssಸೀತ್ ಪ್ರತಿಬದ್ಧಾ ಮಹಾಬಲಾ । ನತು ಜ್ಯಾಂ ಪ್ರಸಹೇದನ್ಯಸ್ತದ್ಧನುಃಪ್ರವರಂ ಮಹತ್      ಶಙ್ಕರೇಣ ವರಂ ದತ್ತಂ ಪ್ರೀತೇನ ಚ ಮಹಾತ್ಮನಾ । ತನ್ನಿಷ್ಫಲಂ ಸ್ಯಾನ್ನತು ಮೇ ಇತಿ  ಪ್ರಾಮಾಣ್ಯಮಾಗತಃ’ (೨೦೦.೧೩-೧೫)

ಕಿಂಧುರ ಎನ್ನುವ ಆ ಧನುಸ್ಸು ಅರ್ಜುನನನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಕೂಡಾ ಎತ್ತಲಾಗುವುದಿಲ್ಲ ಎಂದು ರುದ್ರದೇವರ ವರವಿತ್ತು. ಹೀಗಾಗಿ, ರುದ್ರದೇವರ ವರ ಸುಳ್ಳಾಗುವುದಿಲ್ಲ, ಯಾಜೋಪಯಾಜರ ಮಂತ್ರವೂ ಸುಳ್ಳಾಗುವುದಿಲ್ಲ ಎಂದು ದ್ರುಪದನಿಗೆ ದೃಢವಾದ ವಿಶ್ವಾಸವಿತ್ತು].

 

[ಅರಗಿನಮನೆ  ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಶ್ರೀಕೃಷ್ಣ ಏನು ಮಾಡುತ್ತಿದ್ದ ಎನ್ನುವುದನ್ನು ವಿವರಿಸುತ್ತಾರೆ:]

 

ತತ್ಕಾಲ ಏವ ವಸುದೇವಸುತೋsಪಿ ಕೃಷ್ಣಃ ಸಮ್ಪೂರ್ಣ್ಣನೈಜಪರಿಬೋಧತ ಏವ ಸರ್ವಮ್ ।

ಜಾನನ್ನಪಿ ಸ್ಮ ಹಲಿನಾ ಸಹಿತೋ ಜಗಾಮ ಪಾರ್ತ್ಥಾನ್ ನಿಶಮ್ಯ ಚ ಮೃತಾನಥ ಕುಲ್ಯಹೇತೋಃ ॥೧೯.೯೯॥

 

ಅದೇ ಕಾಲದಲ್ಲಿಯೇ ವಸುದೇವನ ಮಗನಾದ ಶ್ರೀಕೃಷ್ಣನು ತನ್ನ ಸ್ವರೂಪಭೂತವಾದ, ಉತ್ಕೃಷ್ಟವಾದ ತಿಳುವಳಿಕೆಯಿಂದ ಎಲ್ಲವನ್ನೂ ತಿಳಿದವನಾದರೂ ಕೂಡಾ, ಬಲರಾಮನಿಂದ ಕೂಡಿಕೊಂಡು ಪಾಂಡವರು ಸತ್ತುಹೋಗಿದ್ದಾರೆ ಎನ್ನುವ ಕಾರಣವನ್ನಿತ್ತು, ಧರ್ಮೋದಕವನ್ನು ಬಿಡಲು ತೆರಳಿದ.

[ಎಲ್ಲವನ್ನೂ ತಿಳಿದೂ ಶ್ರೀಕೃಷ್ಣ ಈರೀತಿ ಬಂದ ಎನ್ನುವುದನ್ನು ಭಾಗವತದಲ್ಲಿ(೧೦.೬೧.೧) ವಿವರಿಸಿದ್ದಾರೆ: ‘ವಿಜ್ಞಾತಾರ್ಥೋsಪಿ ಗೋವಿಂದೋ ದಗ್ಧಾನಾಕರ್ಣ್ಯ ಪಾಣ್ಡವಾನ್ । ಕುಂತೀಂ ಚ ಕುಲ್ಯಕರಣೇ ಸಹರಾಮೋ ಯಯೌ ಕುರೂನ್’ - ಪಾಂಡವರು ಬದುಕಿದ್ದಾರೆ ಎಂದು ಬಲ್ಲವನಾದರೂ ಕೂಡಾ ಶ್ರೀಕೃಷ್ಣ ಅಲ್ಲಿಗೆ ತೆರಳಿದ].  

ಸ ಪ್ರಾಪ್ಯ ಹಸ್ತಿನಪುರಂ ಧೃತರಾಷ್ಟ್ರಪುತ್ರಾನ್ ಸಂವಞ್ಚಯಂಸ್ತದನುಸಾರಿಕಥಾಶ್ಚ ಕೃತ್ವಾ ।

ಭೀಷ್ಮಾದಿಭಿಃ ಪರಿಗತಾಪ್ರಿಯವಜ್ಜಗಾಮ ದ್ವಾರಾವತೀಮುದಿತಪೂರ್ಣ್ಣಸುನಿತ್ಯಸೌಖ್ಯಃ ॥೧೯.೧೦೦॥

 

ನಿತ್ಯದಲ್ಲಿಯೂ ಪೂರ್ಣವಾದ ಸೌಕ್ಯವುಳ್ಳ ಶ್ರೀಕೃಷ್ಣನು ಹಸ್ತಿನಪುರಕ್ಕೆ ಬಂದು, ದುರ್ಯೋಧನ ಮೊದಲಾದವರನ್ನು ಮೋಸಗೊಳಿಸುವವನಾಗಿ, ಅದಕ್ಕೆ ಅನುಕೂಲವಾದ ಮಾತುಗಳನ್ನಾಡಿದನು. ಭೀಷ್ಮ ಮೊದಲಾದವರಿಂದ ಸುತ್ತುವರಿಯಲ್ಪಟ್ಟವನಾದ ಶ್ರೀಕೃಷ್ಣ ಬಹಳ ಖತಿಗೊಂಡವನಂತೆ ತೋರಿ  ದ್ವಾರಾವತೀ ಪಟ್ಟಣಕ್ಕೆ ಮರಳಿದನು. 

Saturday, September 26, 2020

Mahabharata Tatparya Nirnaya Kannada 1988_1995

 

ಗತ್ವಾ ತ್ವರನ್ ಬಕವನಸ್ಯ ಸಕಾಶ ಆಶು ಭೀಮಃ ಸ ಪಾಯಸಸುಭಕ್ಷ್ಯಪಯೋಘಟಾದ್ಯೈಃ ।

ಯುಕ್ತಂ ಚ ಶೈಲನಿಭಮುತ್ತಮಮಾದ್ಯರಾಶಿಂ ಸ್ಪರ್ಶಾತ್ ಪುರೈವ ನರಭಕ್ಷಿತುರತ್ತುಮೈಚ್ಛತ್ ॥೧೯.೮೮॥

 

ಬಕನಿರುವ ಕಾಡಿನ ಸಮೀಪಕ್ಕೆ ತೆರಳಿದ ಭೀಮಸೇನನು, ಶೀಘ್ರದಲ್ಲಿ ಪಾಯಸ, ಹಾಲು ಇತ್ಯಾದಿಗಳಿಂದ ಕೂಡಿದ ಮಡಿಕೆ, ದೊಡ್ಡ ಗುಡ್ಡೆಯಂತೆ ಇರುವ, ಉತ್ಕೃಷ್ಟವಾದ, ತಿನ್ನಲು ಯೋಗ್ಯವಾದ ಪದಾರ್ಥದ ರಾಶಿಯನ್ನು, ನರಭಕ್ಷಕನಾದ ಬಕ ಮುಟ್ಟುವುದಕ್ಕೂ ಮೊದಲೇ^ ತಿನ್ನಬಯಸಿದನು.  

[^ನರಭಕ್ಷಕರು ಮುಟ್ಟಿದ ಪದಾರ್ಥವನ್ನು ತಿನ್ನುವುದು ವರ್ಜ್ಯ. ಹೀಗಾಗಿ ಹಿಂದೆ ನರಭಕ್ಷಕರ ಸಂತತಿಯವರನ್ನೂ ಕೂಡಾ ಜನರು ಹತ್ತಿರ ಸೇರಿಸುತ್ತಿರಲಿಲ್ಲ, ಅವರನ್ನು ಮುಟ್ಟುತ್ತಿರಲಿಲ್ಲ].

 

ತೇನೈವ ಚಾನ್ನಸಮಿತೌ ಪರಿಭುಜ್ಯಮಾನ ಉತ್ಪಾಟ್ಯ ವೃಕ್ಷಮಮುಮಾದ್ರವದಾಶು ರಕ್ಷಃ ।

ವಾಮೇನ ಮಾರುತಿರಪೋಹ್ಯ ತದಾ ಪ್ರಹಾರಾನ್ ಹಸ್ತೇನ ಭೋಜ್ಯಮಖಿಲಂ ಸಹಭಕ್ಷ್ಯಮಾದತ್ ॥೧೯.೮೯॥

 

ಭೀಮಸೇನನಿಂದ ಸಮಸ್ತ ಆಹಾರವು ತಿನ್ನಲ್ಪಡುತ್ತಿರಲು, ಅದನ್ನು ಕಂಡ ರಾಕ್ಷಸ ಬಕನು, ಒಂದು ವೃಕ್ಷವನ್ನು ಕಿತ್ತುಕೊಂಡು ಭೀಮಸೇನನತ್ತ ಶೀಘ್ರದಲ್ಲಿ ಧಾವಿಸಿ ಬಂದನು. ಭೀಮಸೇನನಾದರೋ, ಅವನ ಏಟುಗಳನ್ನು ತನ್ನ ಎಡಗೈಯಿಂದ ದೂರಸರಿಸಿ, ಸಮಸ್ತ ಭೋಜ್ಯ, ಸಹಭಕ್ಷ್ಯ,  ಎಲ್ಲವನ್ನೂ ತಿಂದು ಮುಗಿಸಿದನು.  

 

ಪೀತ್ವಾ ಪಯೋ ತ್ವರಿತ ಏನಮವೀಕ್ಷಮಾಣ ಆಚಮ್ಯ ತೇನ ಯುಯುಧೇ ಗುರುವೃಕ್ಷಶೈಲೈಃ ।

ತೇನಾsಹತೋsಥ ಬಹುಭಿರ್ಗ್ಗಿರಿಭಿರ್ಬಲೇನ ಜಗ್ರಾಹ ಚೈನಮಥ ಭೂಮಿತಳೇ ಪಿಪೇಷ ॥೧೯.೯೦॥

 

ಆ ರಾಕ್ಷಸನತ್ತ ತಿರುಗಿ ನೋಡದೆಯೇ, ತ್ವರಿತವಾಗಿ ಪಯವನ್ನು(ಹಾಲು ಇತ್ಯಾದಿ ಕುಡಿಯುವಂತಹ ಆಹಾರವನ್ನು) ಸ್ವೀಕರಿಸಿ, ಆಚಮನ ಮಾಡಿದ ಭೀಮಸೇನನು, ತದನಂತರ ಬಕಾಸುರನ ಜೊತೆಗೆ ಯುದ್ಧಮಾಡಿದನು. ದೊಡ್ಡದೊಡ್ಡ ವೃಕ್ಷ ಹಾಗೂ ಬಂಡೆಗಳಿಂದ ಕೂಡಿಕೊಂಡು ಬಕಾಸುರನಿಂದ ಹೊಡೆಯಲ್ಪಟ್ಟವನಾದ ಭೀಮಸೇನನು, ಕೊನೆಗೊಮ್ಮೆ ಬಲವಾಗಿ ಅವನನ್ನು ಹಿಡಿದುಕೊಂಡು ಭೂಮಿಯಲ್ಲಿ ಕೆಡವಿ ಮರ್ದಿಸಿಬಿಟ್ಟನು.

  

ಆಕ್ರಮ್ಯ ಪಾದಮಪಿ ಪಾದತಳೇನ ತಸ್ಯ ದೋರ್ಭ್ಯಾಂ ಪ್ರಗೃಹ್ಯ ಚ ಪರಂ ವಿದದಾರ ಭೀಮಃ ।

ಮೃತ್ವಾ ಸ ಚೋರು ತಮ ಏವ ಜಗಾಮ ಪಾಪೋ ವಿಷ್ಣುದ್ವಿಡೇವ ಹಿ ಶನೈರನಿವೃತ್ತಿ ಚೋಗ್ರಮ್ ॥೧೯.೯೧ ॥

 

ಭೀಮಸೇನನು ಬಕನ ಒಂದು ಕಾಲನ್ನು ತನ್ನ ಪಾದತಲದಿಂದ ಒತ್ತಿ ಹಿಡಿದು, ಮತ್ತೊಂದು ಕಾಲನ್ನು ತನ್ನ ಎರಡೂ ಕೈಗಳಿಂದ ಹಿಡಿದು, ಅವನ ದೇಹವನ್ನು ಸೀಳಿಬಿಟ್ಟನು. ಈರೀತಿಯಾಗಿ ಸತ್ತ ಪಾಪಿಷ್ಠನೂ, ನಾರಾಯಣದ್ವೇಷಿಯೂ  ಆದ ಆ ಬಕನು, ಕ್ರಮವಾಗಿ ಎಂದೂ ಮರಳಿಬಾರದ, ದುಃಖಭೂಯಿಷ್ಠವಾದ  ಅನ್ಧನ್ತಮಸ್ಸನ್ನು ಹೊಂದಿದನು. 

 

ಹತ್ವಾ ತಮಕ್ಷತಬಲೋ ಜಗದನ್ತಕಂ ಸ  ಯೋ ರಾಕ್ಷಸೋ ನ ವಶ ಆಸ ಜರಾಸುತಸ್ಯ ।

ಭೌಮಸ್ಯ ಪೂರ್ವಮಪಿ ನೋ ಭರತಸ್ಯ ರಾಜ್ಞೋ ಭೀಮೋ ನ್ಯಧಾಪಯದಮುಷ್ಯ ಶರೀರಮಗ್ರೇ ॥೧೯.೯೨ ॥

 

ಹೀಗೆ ಎಂದೂ ನಾಶವಾಗದ ಬಲವುಳ್ಳ, ಜಗತ್ತಿಗೇ ವಿನಾಶಕನಾಗಿದ್ದ ಬಕಾಸುರನನ್ನು ಭೀಮ ಸಂಹಾರಮಾಡಿದನು. ಯಾವ ರಾಕ್ಷಸನು ಜರಾಸಂಧನಿಗೂ ವಶನಾಗಲಿಲ್ಲವೋ, ನರಕಾಸುರನಿಗೂ ಕೂಡಾ ಗೆಳೆಯನಾಗಲಿಲ್ಲವೋ, ಭರತನ ವಶವೂ ಆಗಲಿಲ್ಲವೋ, ಅಂತಹ ರಾಕ್ಷಸನ ಶರೀರವನ್ನು ಭೀಮ ಅಗಸೇ ಬಾಗಿಲಿನಲ್ಲಿ (ಊರು ಪ್ರಾರಂಭವಾಗುವಲ್ಲಿರುವ ಮಹಾದ್ವಾರ/ಪ್ರವೇಶದ್ವಾರದಲ್ಲಿ) ನೇತುಹಾಕಿದನು. 


ದ್ವಾರ್ಯೇವ ತತ್ ಪ್ರತಿನಿಧಾಯ ಪುನಃ ಸ ಭೀಮಃ ಸ್ನಾತ್ವಾ ಜಗಾಮ ನಿಜಸೋದರಪಾರ್ಶ್ವಮೇವ ।

ಶ್ರುತ್ವಾsಸ್ಯ ಕರ್ಮ್ಮ ಪರಮಂ ತುತುಷುಃ ಸಮೇತಾ ಮಾತ್ರಾ ಚ ತೇ ತದನು ವವ್ರುರತಃ ಪುರಸ್ಥಾಃ ॥೧೯.೯೩॥

 

ದೃಷ್ಟ್ವೈವ  ರಾಕ್ಷಸಶರೀರಮುರು ಪ್ರಭೀತಾ  ಜ್ಞಾತ್ವೈವ ಹೇತುಭಿರಥ ಕ್ರಮಶೋ ಮೃತಂ ಚ ।

ವಿಪ್ರಸ್ಯ ತಸ್ಯ ವಚನಾದಪಿ ಭೀಮಸೇನಭಗ್ನಂ ನಿಶಮ್ಯ ಪರಮಂ ತುತುಷುಶ್ಚ ತಸ್ಮೈ ॥೧೯.೯೪॥

 

ಹೀಗೆ ಊರ ಬಾಗಿಲಿನಲ್ಲಿಯೇ ಆ ಶವವನ್ನು ಇಟ್ಟ ಭೀಮಸೇನನು, ಸ್ನಾನಮಾಡಿಕೊಂಡು  ತನ್ನ ಸೋದರರ ಬಳಿಗೆ ತೆರಳಿದನು. ಇವನ ಉತ್ಕೃಷ್ಟವಾದ ಕರ್ಮವನ್ನು ಕೇಳಿ, ತಾಯಿಂದ ಕೂಡಿಕೊಂಡು ಎಲ್ಲರೂ ಸಂತೋಷಪಟ್ಟರು. ಇದೆಲ್ಲವೂ ನಡೆದಮೇಲೆ ಜನರೆಲ್ಲರೂ ಅಲ್ಲಿ ಸೇರಲಾರಮ್ಭಿಸಿದರು. ಅವರೆಲ್ಲರೂ ರಾಕ್ಷಸನ ಶರೀರವನ್ನು ಕಂಡೇ ಬಹಳ ಭಯಗೊಂಡವರಾದರು. ತದನಂತರ, ಕ್ರಮವಾಗಿ ಕೆಲವು ಕಾರಣಗಳಿಂದ ಅವನು ಸತ್ತಿದ್ದಾನೆ ಎನ್ನುವುದನ್ನು ಖಚಿತಪಡಿಸಿಕೊಂಡ ಅವರು, ಬ್ರಾಹ್ಮಣನಿಂದ ‘ಭೀಮಸೇನನಿಂದ ಕೊಲ್ಲಲ್ಪಟ್ಟಿದ್ದಾನೆ’ ಎನ್ನುವುದನ್ನೂ ತಿಳಿದು ಅವನ  ಬಗ್ಗೆ ಅತ್ಯಂತ ಸಂತೋಷವನ್ನು ಹೊಂದಿದರು.

 

ಅನ್ನಾತ್ಮಕಂ  ಕರಮಮುಷ್ಯ ಚ ಸಮ್ಪ್ರಚಕ್ರುಃ ಸೋsಪ್ಯೇತಮಾಶು ನರಸಿಂಹವಪುರ್ದ್ಧರಸ್ಯ।

ಚಕ್ರೇ ಹರೇಸ್ತದನು ಸತ್ಯವತೀಸುತಸ್ಯ ವಿಷ್ಣೋರ್ಹಿ ವಾಕ್ಪ್ರಚುದಿತಾಃ ಪ್ರಯಯುಸ್ತತಶ್ಚ ॥೧೯.೯೫॥

 

ಜನರೆಲ್ಲರೂ ಭೀಮಸೇನನಿಗೆ ಅನ್ನವೆನಿಸುವ ಕಂದಾಯವನ್ನು ನೀಡಿದರು. ಅವನೂ ಕೂಡಾ ಆ ಅನ್ನಾತ್ಮಕವಾದ ಕರವನ್ನು ನರಸಿಂಹರೂಪಿ  ನಾರಾಯಣನಿಗೆ ಅರ್ಪಿಸಿದನು. ತದನಂತರ ಸತ್ಯವತಿಯ ಮಗನಾದ ವ್ಯಾಸರೂಪಿ ನಾರಾಯಣನ ಮಾತಿನಿಂದ ಪ್ರೇರಿತರಾದ ಅವರೆಲ್ಲರೂ, ಏಕಚಕ್ರನಗರದಿಂದ ಹೊರಟು ಮುಂದೆಸಾಗಿದರು.