ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 27, 2019

Mahabharata Tatparya Nirnaya Kannada 1546_1550


ತದಾ ಕರ್ಣ್ಣೋsಥೈಕಲವ್ಯಶ್ಚ ದಿವ್ಯಾನ್ಯಸ್ತ್ರಾಣ್ಯಾಪ್ತುಂ ದ್ರೋಣಸಮೀಪಮೀಯತುಃ
ಸೂತೋ ನಿಷಾದ ಇತಿ ನೈತಯೋರದಾದಸ್ತ್ರಾಣಿ ವಿಪ್ರಃ ಸ ತು ರಾಮಶಿಷ್ಯಃ ೧೫.೪೬

ಆಗಲೇ ಕರ್ಣ ಹಾಗು ಏಕಲವ್ಯನೂ ಕೂಡಾ ದಿವ್ಯಾಸ್ತ್ರಗಳನ್ನು ಹೊಂದಲು ದ್ರೋಣಾಚಾರ್ಯರ ಸಮೀಪಕ್ಕೆ ಬಂದರು. ಆ ದ್ರೋಣಾಚಾರ್ಯರು ಯಾವ ಕಾರಣದಿಂದ ವಿಶೇಷವಾಗಿ ಪರಶುರಾಮನ ಶಿಷ್ಯರೇ ಆಗಿರುತ್ತಾರೋ, ಆದಕಾರಣ ಕರ್ಣ ಹಾಗು ಏಕಲವ್ಯನಿಗೆ ಸೂತಪುತ್ರ ಹಾಗೂ ನಿಷಾದ(ಬೇಡ) ಎನ್ನುವ ಕಾರಣಕ್ಕಾಗಿ ಅಸ್ತ್ರಗಳನ್ನು ಕೊಡಲಿಲ್ಲ.

ಕರ್ಣ್ಣೋsನವಾಪ್ಯ ನಿಜಮೀಪ್ಸಿತಮುಚ್ಚಮಾನೋ ಯಸ್ಮಾದವಾಪ ಪುರುಷೋತ್ತಮತೋsಸ್ತ್ರವೃನ್ದಮ್
ವಿಪ್ರೋsಪ್ಯಯಂ ತಮಜಮೇಮಿ ಭೃಗೋಃ ಕುಲೋತ್ಥಮಿತ್ಥಂ ವಿಚಿನ್ತ್ಯ ಸ ಯಯೌ ಭೃಗುಪಾಶ್ರಮಾಯಾ ೧೫.೪೭

ಕರ್ಣನು ತನ್ನ ಬಯಕೆಯನ್ನು ಹೊಂದದೇ, ಬಹಳ ಸ್ವಾಭಿಮಾನ ಉಳ್ಳವನಾಗಿ, ಯಾವ ಭೃಗುವಿನ ಕುಲದಲ್ಲಿ  ಹುಟ್ಟಿದ, ಪುರುಷೋತ್ತಮನಾದ ಪರಶುರಾಮದೇವರಿಂದ ದ್ರೋಣ  ಅಸ್ತ್ರಗಳನ್ನು ಪಡೆದನೋ, ಅಂತಹ ಪರಶುರಾಮನನ್ನು ಹೊಂದುತ್ತೇನೆ ಎಂದು ಚಿಂತಿಸಿ, ಪರಶುರಾಮದೇವರ ಆಶ್ರಮಕ್ಕೆ ತೆರಳಿದನು.

ಸ ಸರ್ವವೇತ್ತುಶ್ಚ ವಿಭೋರ್ಭಯೇನ ವಿಪ್ರೋsಹಮಿತ್ಯವದದಸ್ತ್ರವರಾತಿಲೋಭಾತ್
ಜಾನನ್ನಪಿ ಪ್ರದದಾವಸ್ಯ ರಾಮೋ ದಿವ್ಯಾನ್ಯಸ್ತ್ರಾಣ್ಯಖಿಲಾನ್ಯವ್ಯಯಾತ್ಮಾ ೧೫.೪೮

ಆ ಕರ್ಣನು ಎಲ್ಲವನ್ನೂ ಬಲ್ಲ ಪರಶುರಾಮದೇವರ ಭಯದಿಂದ, ಅಸ್ತ್ರಶ್ರೇಷ್ಠಗಳ ಅತಿಲೋಭದಿಂದಲೂ ಕೂಡಾ, ಪರಶುರಾಮನಲ್ಲಿ  ‘ನಾನು ಬ್ರಾಹ್ಮಣ’ ಎಂದು ಹೇಳಿದನು. ಎಲ್ಲವನ್ನೂ ತಿಳಿದರೂ ಕೂಡಾ, ಪರಶುರಾಮದೇವರು ಸಮಸ್ತ ಅಸ್ತ್ರವಿದ್ಯೆಗಳನ್ನು ಕರ್ಣನಿಗೆ ಉಪದೇಶ ನೀಡಿದರು.

ಕರ್ಣ ಸೂತಪುತ್ರ ಎಂದು ತಿಳಿದಿದ್ದರೂ ಕೂಡಾ ಪರಶುರಾಮದೇವರು ಅವನಿಗೆ ಏಕೆ ಉಪದೇಶ ನೀಡಿದರು ಎಂದರೆ-

ಅಸ್ತ್ರಜ್ಞಚೂಳಾಮಣಿಮಿನ್ದ್ರಸೂನುಂ ವಿಶ್ವಸ್ಯ ಹನ್ತುಂ ಧೃತರಾಷ್ಟ್ರಪುತ್ರಃ
ಏನಂ ಸಮಾಶ್ರಿತ್ಯ ದೃಢೋ ಭವೇತೇತ್ಯದಾಜ್ಜ್ಞಾತ್ವೈವಾಸ್ತ್ರಮಸ್ಮೈ ರಮೇಶಃ             ೧೫.೪೯

ಧೃತರಾಷ್ಟ್ರಪುತ್ರನು ಈ ಕರ್ಣನನ್ನು ಆಶ್ರಯಿಸಿ, ಅಸ್ತ್ರಗಳನ್ನು ಬಲ್ಲವರಲ್ಲೇ ಶ್ರೇಷ್ಠನಾದ ಅರ್ಜುನನನ್ನು  ಕೊಲ್ಲವುದಕ್ಕಾಗಿ, ವಿಶ್ವಾಸವಿಟ್ಟು ದೃಢನಾಗಲಿ ಎಂದೇ ಪರಶುರಾಮದೇವರು ಸಮಸ್ತ ಅಸ್ತ್ರಗಳನ್ನು ಕರ್ಣನಿಗೆ ನೀಡಿದರು.

ಜ್ಞಾನಂ ಚ ಭಾಗವತಮಪ್ಯಪರಾಶ್ಚ ವಿದ್ಯಾ ರಾಮಾದವಾಪ್ಯ ವಿಜಯಂ ಧನುರಗ್ರ್ಯಯಾನಮ್
ಅಬ್ದೈಶ್ಚತುರ್ಭಿರಥ ಚ ನ್ಯವಸತ್ ತದನ್ತೇ ಹಾತುಂ ನ ಶಕ್ತ ಉರುಗಾಯಮಿಮಂ ಸ ಕರ್ಣ್ಣಃ ೧೫.೫೦

ಆ ಕರ್ಣನು ನಾಲ್ಕು ವರ್ಷಗಳಲ್ಲಿ ಪರಮಾತ್ಮನ ಜ್ಞಾನವನ್ನು, ಉಳಿದ ವಿದ್ಯೆಗಳನ್ನು ರಾಮನಿಂದ ಪಡೆದು, ವಿಜಯವೆಂಬ ಬಿಲ್ಲನ್ನೂ, ಶ್ರೇಷ್ಠವಾದ ರಥವನ್ನೂ ಪಡೆದು, (ಎಲ್ಲವನ್ನೂ ಪಡೆದ ಮೇಲೂ ಕೂಡಾ) ಪರಮಾತ್ಮನನ್ನು ಬಿಡಲು ಶಕ್ತನಾಗದೇ ಅವರ ಸಮೀಪದಲ್ಲಿಯೇ ವಾಸಮಾಡಿದನು.

Mahabharata Tatparya Nirnaya Kannada 1541_1545


ಭೀಮಃ ಸಮಸ್ತಂ ಪ್ರತಿಭಾಬಲೇನ ಜಾನನ್ ಸ್ನೇಹಂ ತ್ವದ್ವಿತೀಯಂ ಕನಿಷ್ಠೇ
ದ್ರೋಣಸ್ಯ ಕೃತ್ವಾ ಸಕಲಾಸ್ತ್ರವೇದಿನಂ ಕರ್ತುಂ ಪಾರ್ತ್ಥಂ ನಾರ್ಜ್ಜುನವಚ್ಚಕಾರ ೧೫.೪೧

ತನ್ನಲ್ಲಿ ಸಮಸ್ತ ಪ್ರತಿಭಾಬಲ ಇದ್ದರೂ ಕೂಡಾ, ಅದನ್ನು ತೋರಿಸಿಕೊಳ್ಳದೇ, ಕನಿಷ್ಠನಾದ ಅರ್ಜುನನಿಗೆ ದ್ರೋಣರ ವಿಶೇಷ ಅನುಗ್ರಹವಾಗುವಂತೆ ಮಾಡಲು ಹಾಗೂ ಅವನನ್ನು ಎಲ್ಲಾ ಅಸ್ತ್ರಗಳನ್ನು ಬಲ್ಲವನನ್ನಾಗಿ ಮಾಡಬೇಕೆಂದು ಭೀಮಸೇನ   ಅರ್ಜುನನಂತೆ ತಾನು ಗುರುಗಳ ಸೇವೆಯನ್ನು ಮಾಡುತ್ತಿರಲಿಲ್ಲಾ.

ನೈವಾತಿಯತ್ನೇನ  ದದರ್ಶ ಲಕ್ಷಂ^ ಶುಶ್ರೂಷಾಯಾಂ ಪಾರ್ತ್ಥಮಗ್ರೇ ಕರೋತಿ
ಸ್ವಬಾಹುವೀರ್ಯ್ಯಾದ್ ಭಗವತ್ಪ್ರಸಾದಾನ್ನಿಹನ್ಮಿ ಶತ್ರೂನ್ ಕಿಮನೇನ ಚೇತಿ ೧೫.೪೨

ಭೀಮ ಅಷ್ಟೊಂದು ಯತ್ನದಿಂದ ಶರಪ್ರಯೋಗ ಮಾಡುತ್ತಿರಲಿಲ್ಲ, ಏಕೆಂದರೆ ಪಾರ್ಥನನ್ನು ದ್ರೋಣರ ಕಣ್ಣಲ್ಲಿ ದೊಡ್ಡವನನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಅವನದ್ದಾಗಿತ್ತು. ಹಾಗಾಗಿ ಭೀಮ  ಸೇವೆಯಲ್ಲಿ ಅರ್ಜುನನನ್ನು ಮುಂದೆ ಮಾಡಿದ.
ತನ್ನ ಸಹಜವಾದ ಬಲದಿಂದ, ಪರಮಾತ್ಮನ ಅನುಗ್ರಹದಿಂದ ಶತ್ರುಗಳನ್ನು ಕೊಲ್ಲುತ್ತೇನೆ, ಇದರಿನ್ದೇನು(ಈ ಅಸ್ತ್ರಗಳಿಂದ ನನಗೇನಾಗಬೇಕು) ಎಂದು ಆತ ಅಸ್ತ್ರವಿದ್ಯೆಯಲ್ಲಿ ನಿಪುಣತೆಯನ್ನು ತೋರಲಿಲ್ಲ.(ಇದು ಭೀಮನ ಆಂತರ್ಯ)
[^ಇಲ್ಲಿ ‘ಲಕ್ಷ’ ಎನ್ನುವ ಪದ ಪ್ರಯೋಗವಾಗಿದೆ. ಅಭಿಧಾನ ಕೋಶದಲ್ಲಿ ಹೇಳಿರುವಂತೆ: ‘ಲಕ್ಷಂ ವ್ಯಾಜಶರವ್ಯಯೋಃ ಸಙ್ಖ್ಯಾಯಾಮಪಿ’.  ಲಕ್ಷ ಎನ್ನುವುದಕ್ಕೆ ವ್ಯಾಜ(ಗುರಿ), ಶರ(ಬಾಣ), ವ್ಯಯ, ಸಂಖ್ಯಾ, ಇತ್ಯಾದಿ ಅನೇಕ ಅರ್ಥಗಳಿವೆ. ಇಲ್ಲಿ ‘ಲಕ್ಷ’ ಎನ್ನುವುದನ್ನು ‘ಶರ’  ಎನ್ನುವ ಅರ್ಥದಲ್ಲಿ ಪ್ರಯೋಗ ಮಾಡಿದ್ದಾರೆ.]

ತದಾ ಸಮೀಯುಃ ಸಕಲಾಃ ಕ್ಷಿತೀಶಪುತ್ರಾ ದ್ರೋಣಾತ್ ಸಕಲಾಸ್ತ್ರಾಣ್ಯವಾಪ್ತುಮ್
ದದೌ ಸ ತೇಷಾಂ ಪರಮಾಸ್ತ್ರಾಣಿ ವಿಪ್ರೋ ರಾಮಾದವಾಪ್ತಾನ್ಯಗತಾನಿ ಚಾನ್ಯೈಃ             ೧೫.೪೩

ಆಗ ದ್ರೋಣಾಚಾರ್ಯರಿಂದ ಅಸ್ತ್ರಗಳನ್ನು ಪಡೆಯಲು ಎಲ್ಲಾ ರಾಜಕುಮಾರರೂ ಕೂಡಾ ಅಲ್ಲಿಗೆ ಬಂದರು. ಅವರೆಲ್ಲರಿಗೆ ದ್ರೋಣಾಚಾರ್ಯರು ಪರಶುರಾಮನಿಂದ ವಿಶೇಷವಾಗಿ ತಾನು ಪಡೆದ, ಇನ್ನೊಬ್ಬರಲ್ಲಿ ಈಗಾಗಲೇ ಇರದ ಅಸ್ತ್ರಗಳನ್ನು ಕೊಟ್ಟರು.

ಅಸ್ತ್ರಾಣಿ ಚಿತ್ರಾಣಿ ಮಹಾನ್ತಿ ದಿವ್ಯಾನ್ಯನ್ಯೈರ್ನೃಪೈರ್ಮ್ಮನಸಾsಪ್ಯಸ್ಮೃತಾನಿ 
ಅವಾಪ್ಯ ಸರ್ವೇ ತನಯಾ ನೃಪಾಣಾಂ ಶಕ್ತಾ ಬಭೂವುರ್ನ್ನ ಯಥೈವ ಪೂರ್ವೇ             ೧೫.೪೪

ಆಶ್ಚರ್ಯಕರವಾದ(ಮಹತ್ತರವಾಗಿರುವ), ಅಲೌಕಿಕವಾಗಿರುವ, ಬೇರೆ ರಾಜರಿಂದ ಮನಸ್ಸಿನಿಂದ ಚಿಂತಿಸಲೂ ಅಸಾಧ್ಯವಾದ ಅಸ್ತ್ರಗಳನ್ನು ಪಡೆದ ಆ ಎಲ್ಲಾ ರಾಜಕುಮಾರರೂ ಕೂಡಾ ಶಕ್ತರಾದರು. ಹಿಂದಿನವರಂತೆ  ಅಲ್ಲಾ(ಹಿಂದಿನವರಿಗಿಂತ ಅಧಿಕ. ಹಿಂದೆ ಯಾರೋ ಒಬ್ಬ ಬಲಿಷ್ಠನಿರುತ್ತಿದ್ದ, ಆದರೆ ಮಹಾಭಾರತ ಕಾಲದಲ್ಲಿ ಎಲ್ಲರೂ ಬಲಿಷ್ಠರಾಗಿರುವುದು ವಿಶೇಷ).

ನೈತಾದೃಶಾಃ ಪೂರ್ವಮಾಸನ್ ನರೇನ್ದ್ರಾ ಅಸ್ತ್ರೇ ಬಲೇ ಸರ್ವವಿದ್ಯಾಸು ಚೈವ
ದೌಷ್ಷನ್ತಿಮಾನ್ಧಾತೃಮರುತ್ತಪೂರ್ವಾಶ್ಚೈತತ್ಸಮಾನಾಃ ಸುರುದಾರವೀರ್ಯ್ಯಾಃ             ೧೫.೪೫

ಈರೀತಿಯಾಗಿ ಅಸ್ತ್ರದಲ್ಲಿ, ಬಲದಲ್ಲಿ, ಎಲ್ಲಾ ವಿದ್ಯೆಗಳಲ್ಲಿಯೂ ಕೂಡಾ, ದ್ರೋಣ ಶಿಷ್ಯರಿಗೆ ಸದೃಶರಾದ ರಾಜರು ಪೂರ್ವದಲ್ಲಿ ಇರಲಿಲ್ಲಾ. ಹೀಗೆ ಅವರು ಭರತ, ಮಾನ್ಧಾತೃ, ಮರುತ್ತರಾಜ ಮೊದಲಾದ ರಾಜರಿಗೆ   ಸಮನಾದರು.
[ಹಿಂದೆ ಅಸ್ತ್ರವಿದ್ಯೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಯಾರೋ ಒಬ್ಬರು ಅಸ್ತ್ರ ತಿಳಿದವರಾಗಿ ಬಲಿಷ್ಠರಾಗಿರುತ್ತಿದ್ದರು. ಆದರೆ ಮಹಾಭಾರತ ಕಾಲದಲ್ಲಿ ಪರಶುರಾಮದೇವರಿಂದ, ದ್ರೋಣರ ಮುಖೇನ ಹರಿದುಬಂದ ಅಸ್ತ್ರವಿದ್ಯೆಯಿಂದ ಎಲ್ಲರೂ ಬಲಿಷ್ಠರೆನಿಸಿದರು]

Thursday, December 26, 2019

Mahabharata Tatparya Nirnaya Kannada 1536_1540


ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ೧೫.೩೬

ಅರ್ಜುನನು ಉನ್ಮಾದನಾದಿ ಅಸ್ತ್ರಗಳನ್ನು ಕೃಷ್ಣನಿಂದ ಈಗಾಗಲೇ ತಿಳಿದಿದ್ದನಾದರೂ ಕೂಡಾ, ‘ಆಪತ್ತು ಇಲ್ಲದಿರಬೇಕಾದರೆ ಆ ಅಸ್ತ್ರಗಳನ್ನು ಪ್ರಯೋಗಿಸಬಾರದು ಎನ್ನುವ ಶ್ರೀಕೃಷ್ಣನ ಆಜ್ಞೆಯಿಂದಾಗಿ  ಬೇರೆ ಪ್ರಯೋಗ ಯೋಗ್ಯವಾದ ಅಸ್ತ್ರಗಳನ್ನು ಯಾವಾಗಲೂ ಬಯಸುತ್ತಿದ್ದ.

ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ ಧರ್ಮ್ಮಲಾಭಃ             ೧೫.೩೭

ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ             ೧೫.೩೮

‘ಭೀಷ್ಮ ಮೊದಲಾದವರೊಂದಿಗೆ ಮುಂದೆ ಯುದ್ಧವಾಗಲಿದ್ದು ಆಗ ಗುರು-ಹಿರಿಯರಾದ ಅವರೊಂದಿಗೆ ನಾನೆಂದಿಗೂ ಯುದ್ಧಮಾಡುವುದಿಲ್ಲ. ಹಾಗಾಗಿ, ಅಸ್ತ್ರಗಳನ್ನು ತಿಳಿದಿರುವ ಅರ್ಜುನ ಭೀಷ್ಮಾದಿಗಳನ್ನು ನಿವಾರಣಮಾಡತಕ್ಕವನಾದರೆ  ಅದರಿಂದ ನನಗೆ ಧರ್ಮಲಾಭವಾಗುತ್ತದೆ’.  ಇದಲ್ಲದೇ, ‘ಇನ್ದಿರಾಪತಿ ನಾರಾಯಣನಿಗಿಂತ ಹೊರತಾಗಿ  ಬೇರೆಯವರಿಂದ ಬುದ್ಧಿಪೂರ್ವಕವಾಗಿ ನಾನು ವರವನ್ನು ಪಡೆಯಬಾರದು’ ಎಂಬ ಈ ಎರಡು ಕಾರಣಗಳಿಂದ ‘ಅರ್ಜುನನೇ ಗುರುಗಳಿಗಾಗಿ ಪ್ರತಿಜ್ಞೆಯನ್ನು ಮಾಡಲಿ’ ಎಂದು ಚಿಂತಿಸಿದ ಭೀಮನು, ಆಗ ಯಾವುದೇ ಪ್ರತಿಜ್ಞೆಯನ್ನು ಮಾಡಲಿಲ್ಲ.

ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ             ೧೫.೩೯

ಭೀಮಸೇನನಿಂದ ಪ್ರೇರಿತನಾದ ಅರ್ಜುನನಿಂದ ಯಾವಾಗ ಪ್ರತಿಜ್ಞೆ ಮಾಡಲ್ಪಪಟ್ಟಿತೋ, ಅದಾದ ನಂತರ ದ್ರೋಣಾಚಾರ್ಯರು ಇಂದ್ರನ ಮಗನಾದ ಅರ್ಜುನನಲ್ಲಿ ಆತ್ಯಂತಿಕವಾದ  ಪ್ರೀತಿಯಿಟ್ಟು, ಅವನಿಗೆ   ಮಹಾಸ್ತ್ರಗಳನ್ನು ನೀಡಿದರು.

ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ೧೫.೪೦

ದ್ರೋಣಾಚಾರ್ಯರು ಅರ್ಜುನನಲ್ಲಿ ಅತ್ಯಂತ ಪಕ್ಷಪಾತವನ್ನು ಮಾಡಿಕೊಂಡು, ಅವನನ್ನು ಆತ್ಯಂತಿಕವಾಗಿ  ಹೊಗಳಿಕೆ ಮಾಡುತ್ತಿದ್ದರು. ಅವನಿಗೆ ಅನೇಕ ರಹಸ್ಯ ವಿದ್ಯೆಗಳನ್ನೂ ಕೂಡಾ ಉಪದೇಶಿಸಿದ ಅವರು, ಅರ್ಜುನನಂತೆ ಉಳಿದವರಿಗೆ ಏನನ್ನೂ ಕೊಡುತ್ತಿರಲಿಲ್ಲ.

Mahabharata Tatparya Nirnaya Kannada 1531_1535


ಯಥೇಷ್ಟವಿತ್ತಾಶನಪಾನಮಸ್ಯ ಧರ್ಮ್ಮಾತ್ಮಜಃ ಪ್ರತಿಜಜ್ಞೇ ಸುಶೀಘ್ರಮ್
ತಥೈವ ತೇನೋದ್ಧೃತಮಙ್ಗುಲೀಯಂ ತ್ರಿವರ್ಗ್ಗಮುಖ್ಯಾತ್ಮಜವಾಕ್ಯತೋsನು             ೧೫.೩೧

ಧರ್ಮರಾಜನು ದ್ರೋಣಾಚಾರ್ಯರಿಗೆ ಅವರು ಇಷ್ಟಪಟ್ಟಷ್ಟು ಹಣ, ಊಟ, ಕುಡಿಯುವಿಕೆಗೆ ಪ್ರತಿಜ್ಞೆ ಮಾಡಿದನು. ಹಾಗೆಯೇ, ತ್ರಿವರ್ಗ(ಧರ್ಮ-ಅರ್ಥ-ಕಾಮ)ಗಳಲ್ಲಿ ಮುಖ್ಯವಾದ ಧರ್ಮನ ಮಗನಾದ ಯುಧಿಷ್ಠಿರನ ಮಾತನ್ನು ಅನುಸರಿಸಿ, ದ್ರೋಣಾಚಾರ್ಯರಿಂದ, ಚಂಡಿನಂತೆಯೇ ಉಂಗುರವೂ ಬಾವಿಯಿಂದ ಎತ್ತಲ್ಪಟ್ಟಿತು.

ಪಪ್ರಚ್ಛುರೇನಂ ಸಹಿತಾಃ ಕುಮಾರಾಃ ಕೋsಸೀತಿ ಸೋsಪ್ಯಾಹ ಪಿತಾಮಹೋ ವಃ
ವಕ್ತೇತಿ ತೇ ದುದ್ರುವುರಾಶು ಭೀಷ್ಮಂ ದ್ರೋಣೋsಯಮಿತ್ಯೇವ ಸ ತಾಂಸ್ತದೋಚೇ             ೧೫.೩೨

ಈರೀತಿಯಾಗಿ ಬಾವಿಯಿಂದ ಚೆಂಡು ಮತ್ತು ಮುದ್ರೆಯುಂಗುರವನ್ನು ತನ್ನ ಅಸ್ತ್ರಬಲದಿಂದ ಮೇಲೆತ್ತಿದ ಆ ಬ್ರಾಹ್ಮಣನನ್ನು ಎಲ್ಲಾ ಕುಮಾರರು ಸೇರಿಕೊಂಡು ‘ಯಾರು ನೀವು’ ಎಂದು ವಿಚಾರಿಸಿದರು. ಅವರಾದರೋ, ‘ನಾನು ಯಾರು ಎನ್ನುವುದನ್ನು ನಿಮ್ಮ ತಾತನು ಹೇಳಬಲ್ಲ’ ಎಂದರು. ಆಗ ಆ ಬಾಲಕರೆಲ್ಲರೂ ಕೂಡಲೇ ಭೀಷ್ಮಾಚಾರ್ಯರಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು. ಆಗ ಭೀಷ್ಮಾಚಾರ್ಯರು ‘ಅವನು ದ್ರೋಣ’ ಎಂದು ನಿಶ್ಚಯವಾಗಿ  ಹೇಳಿದರು.
[ಇಲ್ಲಿ ಸಾಮಾನ್ಯವಾಗಿ ಬರುವ ಪ್ರಶ್ನೆ ಎಂದರೆ: ಅಶ್ವತ್ಥಾಮನೊಂದಿಗೆ ಸೇರಿಕೊಂಡು ಆಟವಾಡುತ್ತಿದ್ದ ಆ ಕುಮಾರರಿಗೆ ದ್ರೋಣಾಚಾರ್ಯರ ಪರಿಚಯ ಏಕಾಗಲಿಲ್ಲಾ ಎನ್ನುವುದು.  ಏಕೆಂದರೆ: ಯಾವಾಗ ದ್ರೋಣಾಚಾರ್ಯರು ಪರಶುರಾಮನಿದ್ದಲ್ಲಿಗೆ ಹೋಗಿದ್ದರೋ, ಆ ಸಮಯದಲ್ಲಿ ಪಾಂಡವರು ಕಾಡಿನಲ್ಲಿದ್ದರು. ಆಗ ದುರ್ಯೋಧನಾದಿಗಳಿಗೆ ಸುಮಾರು ಐದು ವರ್ಷ ವಯಸ್ಸು. ಹನ್ನೆರಡು ವರ್ಷಗಳ ಕಾಲ ಪರಶುರಾಮನೊಂದಿಗಿದ್ದ ದ್ರೋಣರು ಇದೀಗ ಮರಳಿ ಬಂದಿರುವುದು. ಇಂದು ಅಶ್ವತ್ಥಾಮ ಪ್ರಬುದ್ಧನಾಗಿದ್ದಾನೆ(ಅಶ್ವತ್ಥಾಮ ಬ್ರಹ್ಮವಿದ್ಯೆಯನ್ನು ಅಧ್ಯಯನ ಮಾಡುವ ವಯಸ್ಸಿನವನಾಗಿದ್ದಾನೆ. ಆದರೆ ಆತನಿಗೆ ದುರ್ಯೋಧನಾದಿಗಳ ಸಂಪರ್ಕ ಬಹಳವಾಗಿದ್ದುದರಿಂದ, ಅವರೆಲ್ಲರೊಂದಿಗೆ ಕ್ಷತ್ರಿಯನಂತೇ ಆತನಿದ್ದ). ಹೀಗೆ ಅಶ್ವತ್ಥಾಮನೂ ಸೇರಿ ಎಲ್ಲಾ ಕುಮಾರರು ದ್ರೋಣಾಚಾರ್ಯರನ್ನು ಗುರುತಿಸದೇ, ‘ನೀವು ಯಾರು’  ಎಂದು ಕೇಳುತ್ತಾರೆ. ‘ಸ ನಾಗಪುರಮಾಗಮ್ಯ ಗೌತಮಸ್ಯ ನಿವೇಶನೇ ಭಾರದ್ವಾಜೋsವಸತ್ ತತ್ರ ಪ್ರಚ್ಛನ್ನೋ ದ್ವಿಜಸತ್ತಮಃ’ - ದ್ರೋಣಾಚಾರ್ಯರು ನಾಗಪುರವೆಂಬಲ್ಲಿ ಗೌತಮಋಷಿಯ ಮನೆಯಲ್ಲಿ   ತಾವು ದ್ರೋಣ ಎನ್ನುವುದನ್ನು ಮರೆಮಾಚಿಕೊಂಡು ಸ್ವಲ್ಪ ದಿನ ಇರುತ್ತಾರೆ ಎಂದು ಮಹಾಭಾರತದ ಆದಿಪರ್ವದಲ್ಲಿ(೧೪೧.೧೫) ಹೇಳಿರುವುದನ್ನು ನಾವಿಲ್ಲಿ ಗಮನಿಸಬೇಕು.]

ದ್ರೋಣಾಚಾರ್ಯರು ಹಿಂದೆ ಅರಮನೆಗೆ ಬರುತ್ತಿರಲಿಲ್ಲವೇ? ಅರಮನೆಯಲ್ಲಿ ಬಾಲಕರು ಹಿಂದೆ ದ್ರೋಣಾಚಾರ್ಯರನ್ನು ನೋಡಿರಲಿಲ್ಲವೇ? ಎಂದರೆ-

ನ ರಾಜಗೇಹಂ ಸ ಕದಾಚಿದೇತಿ ತೇನಾದೃಷ್ಟಃ ಸ ಕುಮಾರೈಃ ಪುರಾsತಃ
ಭೀಷ್ಮೋ ವಿದ್ಯಾಸ್ತೇನ ಸಹೈವ ಚಿನ್ತಯನ್ನಸ್ತ್ರಪ್ರಾಪ್ತಿಂ ತಸ್ಯ ಶುಶ್ರಾವ ರಾಮಾತ್ ೧೫.೩೩

ದ್ರೋಣಾಚಾರ್ಯರು ರಾಜರ ಮನೆಗೆ ಯಾವತ್ತೂ ಹೋಗುತ್ತಿರಲಿಲ್ಲ. ಅದರಿಂದಾಗಿ ಕುಮಾರರಿಂದ ಅವರು ಕಾಣಲ್ಪಟ್ಟಿರಲಿಲ್ಲ. ಭೀಷ್ಮಾಚಾರ್ಯರು ಮಾತ್ರ ದ್ರೋಣಾಚಾರ್ಯರ ಜೊತೆಗೇ (ಅವರಿದ್ದಲ್ಲಿಗೆ ಹೋಗಿ ಅವರ ಜೊತೆಗೇ) ಚಿಂತನೆ ಮಾಡುತ್ತಿದ್ದರು. ಪರಶುರಾಮದೇವರಿಂದ ದ್ರೋಣಾಚಾರ್ಯರ ಅಸ್ತ್ರದ ಹೊಂದುವಿಕೆಯನ್ನೂ ಭೀಷ್ಮರು ಕೇಳಿ ತಿಳಿದಿದ್ದರು ಕೂಡಾ.

ಶ್ರುತ್ವಾ ವೃದ್ಧಂ ಕೃಷ್ಣವರ್ಣ್ಣಂ ದ್ವಿಜಂ ತಂ ಮಹಾಸ್ತ್ರವಿದ್ಯಾಮಪಿ ತಾಂ ಮಹಾಮತಿಃ
ದ್ರೋಣಂ ಜ್ಞಾತ್ವಾ ತಸ್ಯ ಶಿಷ್ಯತ್ವ ಏತಾನ್ ದದೌ ಕುಮಾರಾಂಸ್ತತ್ರ ಗತ್ವಾ ಸ್ವಯಂ ಚ ೧೫.೩೪

ಕಪ್ಪುಬಣ್ಣದ, ವೃದ್ಧನಾಗಿರುವ ಬ್ರಾಹ್ಮಣ ಹಾಗೂ ಅವನ ಅಸ್ತ್ರ ವಿದ್ಯೆಯ ಕುರಿತು ರಾಜಕುಮಾರರಿಂದ ಕೇಳಿದ ಭೀಷ್ಮಾಚಾರ್ಯರು, ನಿಶ್ಚಯವಾಗಿ  ‘ಇವನು ದ್ರೋಣನೇ’ ಎಂದು ತಿಳಿದು, ಅವರಿದ್ದಲ್ಲಿಗೆ ತಾವೇ ತೆರಳಿ, ಅವರ ಶಿಷ್ಯತ್ವಕ್ಕೆ ಆ ಕುಮಾರರನ್ನು ನೀಡಿದರು.

ದ್ರೋಣೋsಥ ತಾನವದದ್ ಯೋ ಮದಿಷ್ಟಂ ಕರ್ತ್ತುಂ ಪ್ರತಿಜ್ಞಾಂ ಪ್ರಥಮಂ ಕರೋತಿ
ತಂ ಧನ್ವಿನಾಂ ಪ್ರವರಂ ಸಾಧಯಿಷ್ಯ ಇತ್ಯರ್ಜ್ಜುನಸ್ತಾಮಕರೋತ್ ಪ್ರತಿಜ್ಞಾಮ್ ೧೫.೩೫

ತದನಂತರ ದ್ರೋಣಾಚಾರ್ಯರು ನೆರೆದಿರುವ ವಿದ್ಯಾರ್ಥಿಗಳನ್ನು ಕುರಿತು ಹೇಳಿದರು: 'ಯಾರು ನನಗೆ ಇಷ್ಟವಾದುದ್ದನ್ನು ಮಾಡಲು ಪ್ರತಿಜ್ಞೆಯನ್ನು ಮೊದಲು ಮಾಡುತ್ತಾನೋ, ಅವನನ್ನು ಧನುರ್ಧಾರಿಗಳಲ್ಲೇ ಶ್ರೇಷ್ಠರನ್ನಾಗಿ ಮಾಡುತ್ತೇನೆ’ ಎಂದು. ಆಗ ಅರ್ಜುನನು ಆ ರೀತಿಯ ಪ್ರತಿಜ್ಞೆಯನ್ನು ಮಾಡಿದನು.

Tuesday, December 24, 2019

Mahabharata Tatparya Nirnaya Kannada 1526_1530


ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ೧೫.೨೬

ಆಟವಾಡುತ್ತಿದ್ದ ಧರ್ಮರಾಜನ ಮುದ್ರೆಯುಂಗುರದಿಂದ ಕೂಡಿಕೊಂಡು ಚೆಂಡು ಬಾವಿಯಲ್ಲಿ ಬಿದ್ದಿತು. ಎಲ್ಲಾ ಕುಮಾರರು ಸೇರಿದರೂ ಕೂಡಾ ಅದನ್ನು ಎತ್ತಲು ಸಮರ್ಥರಾಗಲಿಲ್ಲ. ಆಗ ಭೀಮಸೇನನು ಮಾತನ್ನಾಡುತ್ತಾನೆ-

ನಿಷ್ಪತ್ಯ ಚೋದ್ಧೃತ್ಯ ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ ವೀರ್ಯ್ಯಸಂಶ್ರಯಾತ್ ೧೫.೨೭

‘ಅತ್ಯಂತ ಆಳವಾಗಿರುವ ಈ ಕೂಪಕ್ಕಿಳಿದು,  ಚೆಂಡಿನಿಂದ ಸಹಿತವಾದ ಉಂಗುರವನ್ನು ಎತ್ತಿ, ಹಾರಿ ಬರುತ್ತೇನೆ, ಎಲ್ಲರೂ ನೋಡಿರಿ’ ಎಂದು ತನ್ನ ಬಲದಿಂದ ಕೂಡಿಕೊಂಡು ಭೀಮಸೇನ ನುಡಿದನು.

ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ ಪ್ರವೃತ್ತಿಮ್
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ ಸುರಾರ್ಚ್ಚಿತಾನಿ ೧೫.೨೮

ಇದನ್ನು ನೋಡಿದ ದ್ರೋಣಾಚಾರ್ಯರು, ಆ ಎಲ್ಲಾ ಕುಮಾರರನ್ನು ಕುರಿತು ಹೀಗೆ ಹೇಳಿದರು: ‘ಅಸ್ತ್ರದಿಂದ ವಿರಹಿತವಾದ ನಿಮ್ಮ ಜೀವನಕ್ಕೇ ದಿಕ್ಕಾರ. ಉತ್ಕೃಷ್ಟವಾದ ಭರತವಂಶದಲ್ಲಿ ಹುಟ್ಟಿದ್ದೀರ. ಆದರೆ ದೇವತೆಗಳಿಂದ ಅರ್ಚಿಸಲ್ಪಟ್ಟ ದಿವ್ಯಾಸ್ತ್ರಗಳನ್ನು ನೀವು ತಿಳಿದಿಲ್ಲ’.

ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ ಪ್ರಧಾನಮುದ್ರಾಯುತಕನ್ದುಕಸ್ಯ ೧೫.೨೯

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟ ಕುಮಾರರು, ಬ್ರಹಸ್ಪತಿಯ ಮೊಮ್ಮಗನಾದ ಆ ವಿಪ್ರನನ್ನು ಅಸ್ತ್ರವೇತ್ತಾ ಎಂದು ತಿಳಿದು, ರಾಜಮುದ್ರೆಯಿಂದ ಕೂಡಿದ ಚೆಂಡಿನ ಎತ್ತುವಿಕೆಯನ್ನು ಅವನಲ್ಲಿ  ಬೇಡಿದರು.

ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ ಕಲ್ಪ್ಯತಾಮಿತಿ ೧೫.೩೦

ಅವರಾದರೋ, ಕೂಡಲೇ ದರ್ಭೆಗಳನ್ನು ಉತ್ತರೋತ್ತರವಾಗಿ ಎಸೆದು, ದಿವ್ಯಾಸ್ತ್ರಬಲದಿಂದ ಚೆಂಡನ್ನು ಎತ್ತಿ, ಉಂಗುರವನ್ನೂ ಎತ್ತಲು ಬಯಸಿದ ಧರ್ಮರಾಜನನ್ನು ಕುರಿತು ‘ಕಡೆಯವರೆಗೂ ನನಗೆ ನೀನು ಊಟದ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

Mahabharata Tatparya Nirnaya Kannada 1521_1525


ದಾನೇsರ್ದ್ಧರಾಜ್ಯಸ್ಯ ಹಿ ತತ್ಪ್ರತಿಜ್ಞಾಂ ಸಂಸ್ಮೃತ್ಯ ಪೂರ್ವಾಮುಪಯಾತಂ ಸಖಾಯಮ್
ಸಖಾ ತವಾಸ್ಮೀತಿ ತದೋದಿತೋsಪಿ ಜಗಾದ ವಾಕ್ಯಂ ದ್ರುಪದೋsತಿದರ್ಪ್ಪಾತ್ ೧೫.೨೧

ಹಿಂದೆ ಅರ್ಧರಾಜ್ಯದ ಕೊಡುವಿಕೆಯಲ್ಲಿ ಗೆಳೆಯ ದ್ರುಪದ ಮಾಡಿದ ಪ್ರತಿಜ್ಞೆಯನ್ನು ನೆನಪಿಸಿ, ದ್ರುಪದನನ್ನು ಕುರಿತು ‘ನಾನು ನಿನ್ನ ಗೆಳೆಯನಾಗಿದ್ದೇನೆ’ ಎಂದು ಹೇಳಿದರೂ ಕೂಡಾ, ಎಲ್ಲವೂ ನೆನಪಿದ್ದರೂ ಸಹ, ದ್ರುಪದನು ಅತ್ಯಂತ ದರ್ಪದಿಂದ ಮಾತನ್ನಾಡಿದನು.


ನ ನಿರ್ದ್ಧನೋ ರಾಜಸಖೋ ಭವೇತ ಯಥೇಷ್ಟತೋ ಗಚ್ಛ ವಿಪ್ರೇತಿ ದೈವಾತ್
ಇತೀರಿತಸ್ಯಾsಶು ಬಭೂವ ಕೋಪೋ ಜಿತೇನ್ದ್ರಿಯಸ್ಯಾಪಿ ಮುನೇರ್ಹರೀಚ್ಛಯಾ ೧೫.೨೨

‘ಎಲೈ ವಿಪ್ರನೇ, ಹಣವಿಲ್ಲದವನು ರಾಜನ ಗೆಳೆಯನಾಗಲಾರ. ನಿನಗೆ ಇಷ್ಟವಿದ್ದರೆ ಇರು. ಇಲ್ಲದಿದ್ದರೆ ಹೊರಟುಹೋಗು’  ಎಂದು ದ್ರುಪದ ದೈವಪ್ರರಣೆಯಿಂದ ನುಡಿದ. ಈ ಮಾತನ್ನು ಕೇಳಿದ  ಇಂದ್ರಿಯಗಳನ್ನು ಗೆದ್ದಿದ್ದ(ಜಿತೇನ್ದ್ರಿಯರಾದ) ದ್ರೋಣಾಚಾರ್ಯರಿಗೂ ಕೂಡಾ  ಪರಮಾತ್ಮನ ಇಚ್ಛೆಯಿಂದಾಗಿ ಕೋಪವುಂಟಾಯಿತು.

ಪ್ರತಿಗ್ರಹಾತ್ ಸನ್ನಿವೃತ್ತೇನ ಸೋsಯಂ ಮಯಾ ಪ್ರಾಪ್ತೋ ಮತ್ಪಿತುಃ ಶಿಷ್ಯಕತ್ವಾತ್
ಪಿತುಃ ಶಿಷ್ಯೋ ಹ್ಯಾತ್ಮಶಿಷ್ಯೋ ಭವೇತ ಶಿಷ್ಯಸ್ಯಾರ್ತ್ಥಃ ಸ್ವೀಯ ಏವೇತಿ ಮತ್ವಾ೧೫.೨೩

‘ಈತ ನನ್ನ ತಂದೆಯ ಶಿಷ್ಯನಾಗಿರುವುದರಿಂದ ನನಗೂ ಶಿಷ್ಯನಾಗುತ್ತಾನೆ. ಶಿಷ್ಯನ ದ್ರವ್ಯವು ನನ್ನದ್ದೇ. ಹಾಗಾಗಿ  ದಾನದಿಂದ ನಿವೃತ್ತನಾಗಿರುವ ನನ್ನಿಂದ ಇವನು ಹೊಂದಲ್ಪಟ್ಟಿದ್ದಾನೆ.

ಸೋsಯಂ ಪಾಪೋ ಮಾಮವಜ್ಞಾಯ ಮೂಢೋ ದುಷ್ಟಂ ವಚೋsಶ್ರಾವಯದಸ್ಯ ದರ್ಪ್ಪಮ್
ಹನಿಷ್ಯ ಇತ್ಯೇವ ಮತಿಂ ನಿಧಾಯ ಯಯೌ ಕುರೂಞ್ಛಷ್ಯತಾಂ ನೇತುಮೇತಾನ್ ೧೫.೨೪

ಪಾಪಿಷ್ಠನಾದ ಈ ದ್ರುಪದನು ಮೂಢನಾಗಿ, ದುಷ್ಟತನದಿಂದ ನನ್ನನ್ನು ತಿರಸ್ಕರಿಸಿ, ದರ್ಪದಿಂದ ಕೂಡಿರುವ ಮಾತನ್ನು ನನಗೆ ಕೇಳಿಸಿದ. ಇಂತಹ ಇವನ ದರ್ಪವನ್ನು ನಾನು ಕೊಲ್ಲುತ್ತೇನೆ’ ಎಂದು ಬುದ್ಧಿಯನ್ನು ಮಾಡಿದ ದ್ರೋಣಾಚಾರ್ಯರು, ಕುರುರಾಜಕುಮಾರರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳಲು ಕುರುದೇಶದತ್ತ ತೆರಳಿದರು.  

ಪ್ರತಿಗ್ರಹಾದ್ ವಿನಿವೃತ್ತಸ್ಯ ಚಾರ್ತ್ಥಃ ಸ್ಯಾಚ್ಛಿಷ್ಯೇಭ್ಯಃ ಕೌರವೇಭ್ಯೋ ಮಮಾತ್ರ
ಏವಂ ಮನ್ವಾನಃ ಕ್ರೀಡತಃ ಪಾಣ್ಡವೇಯಾನ್ ಸಧಾರ್ತ್ತರಾಷ್ಟ್ರಾನ್ ಪುರಬಾಹ್ಯತೋsಖ್ಯತ್ ೧೫.೨೫

‘ದಾನದಿಂದ ನಿವೃತ್ತನಾದ ನನಗೆ ಶಿಷ್ಯರಾಗಿರುವ ಕೌರವರಿಂದ ನಾನು ಬಯಸಿದ ಕಾರ್ಯವು ಆದೀತು’ ಎಂದು ತಿಳಿಯುತ್ತಾ ಬಂದ ದ್ರೋಣಾಚಾರ್ಯರು, ಪಟ್ಟಣದ ಹೊರಗಡೆ ಆಟವಾಡುತ್ತಿರುವ ದುರ್ಯೋಧನಾದಿಗಳನ್ನು ಮತ್ತು ಪಾಂಡವರನ್ನು ಕಂಡರು.

Monday, December 23, 2019

Mahabharata Tatparya Nirnaya Kannada 1516_1520


ಏವಂ ವಿಚಿನ್ತ್ಯಾಪ್ರತಿಮಃ ಸ ಭಾರ್ಗ್ಗವೋ ಬಭಾಷ ಈಷತ್ಸ್ಮಿತಶೋಚಿಷಾ ಗಿರಾ
ಅನನ್ತಶಕ್ತಿಃ ಸಕಲೇಶ್ವರೋsಪಿ ತ್ಯಕ್ತಂ ಸರ್ವಂ ನಾದ್ಯ ವಿತ್ತಂ ಮಮಾಸ್ತಿ ೧೫.೧೬

ಹೀಗೆ ಯೋಚನೆಮಾಡಿದ ಎಣೆಯಿಲ್ಲದ(ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಅಸಾಧ್ಯವಾದ) ಪರಶುರಾಮದೇವರು, ಸ್ವಲ್ಪ ಮುಗುಳುನಗುವಿನ ಕಾಂತಿಯೊಂದಿಗೆ ಈರೀತಿ  ನುಡಿದರು: ‘ಅನಂತಶಕ್ತಿಯಾದರೂ, ಎಲ್ಲರಿಗೂ ಒಡೆಯನಾದರೂ ಕೂಡಾ ಈಗ ಎಲ್ಲವನ್ನೂ ಬಿಟ್ಟಿದ್ದೇನೆ. ಈಗ ನನ್ನಲ್ಲಿ ಯಾವ ಹಣವೂ ಇಲ್ಲ ಎಂದು. 

ಆತ್ಮಾ ವಿದ್ಯಾ ಶಸ್ತ್ರಮೇತಾವದಸ್ತಿ ತೇಷಾಂ ಮದ್ಧ್ಯೇ ರುಚಿತಂ ತ್ವಂ ಗೃಹಾಣ 
ಉಕ್ತಃ ಸ ಇತ್ಥಂ ಪ್ರವಿಚಿನ್ತ್ಯ ವಿಪ್ರೋ ಜಗಾದ ಕಸ್ತ್ವದ್ಗ್ರಹಣೇ ಸಮರ್ತ್ಥಃ ೧೫.೧೭

‘ತಾನು(ಆತ್ಮಾ, ಶರೀರ), ವಿದ್ಯೆ ಹಾಗೂ ಶಸ್ತ್ರ ಇಷ್ಟುಮಾತ್ರ ಇದೆ. ಈ ಮೂರರಲ್ಲಿ ಇಷ್ಟವಾದುದ್ದನ್ನು ನೀನು ಆರಿಸಿಕೋ’. ಈರೀತಿಯಾಗಿ ಪರಶುರಾಮದೇವರಿಂದ ಹೇಳಲ್ಪಟ್ಟಾಗ, ದ್ರೋಣಾಚಾರ್ಯರು ಚೆನ್ನಾಗಿ ಯೋಚನೆ ಮಾಡಿ, ಹೀಗೆ ಹೇಳುತ್ತಾರೆ:
[ಮಹಾಭಾರತದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ ಶಸ್ತ್ರಾಣಿ ವಾ ಪುನಃ ವೃಣೀಶ್ವ ಕಿಂ ಪ್ರಯಚ್ಛಾಮಿ ತುಭ್ಯಂ ದ್ರೋಣ ವದಾsಶು ತತ್’(ಆದಿಪರ್ವ ೧೪೦.೬೬) ‘ಶರೀರಮಾತ್ರಮೇವಾದ್ಯ ಮಯಾ ಸಮವಶೇಷಿತಮ್ ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ನೇಕತಮಂ ವೃಣು’(೧೮೦.೧೦). ಅಸ್ತ್ರಗಳೋ, ಶರೀರವೋ, ಶಸ್ತ್ರಗಳೋ ? ಇರುವ ಈ ಮೂರರಲ್ಲಿ ಏನನ್ನು ಕೊಡಲಿ? ಎಂದು ಪರಶುರಾಮ ಕೇಳುತ್ತಾನೆ]

ಸರ್ವೇಶಿತಾ ಸರ್ವಪರಃ ಸ್ವತನ್ತ್ರಸ್ತ್ವಮೇವ ಕೋsನ್ಯಃ ಸದೃಶಸ್ತವೇಶ
ಸ್ವಾಮ್ಯಂ ತವೇಚ್ಛನ್ ಪ್ರತಿಯಾತ್ಯಧೋ ಹಿ ಯಸ್ಮಾನ್ನಚೋತ್ಥಾತುಮಲಂ ಕದಾಚಿತ್ ೧೫.೧೮

ಎಲ್ಲರ ಒಡೆಯನು, ಎಲ್ಲರಿಗೂ ಮಿಗಿಲು, ಎಲ್ಲರನ್ನೂ ವಶದಲ್ಲಿಟ್ಟುಕೊಂಡವನು ನೀನು. ನಿನಗೆ ಸಮಾನರಾದವರು ಯಾರು? ನಿನ್ನ ಸ್ವಾಮಿತ್ವವನ್ನು ಇಚ್ಛೆಪಡುವವನು ಕೆಳಗಡೆ ಹೋಗುತ್ತಾನೆ(ಅಂಧಸ್ತಮಸ್ಸನ್ನು  ಹೊಂದುತ್ತಾನೆ) ಮತ್ತು ಎಂದೂ ಅಲ್ಲಿಂದ ಅವನಿಗೆ ಮೇಲೇರಲು ಸಾದ್ಯವಿಲ್ಲ.

ಸರ್ವೋತ್ತಮಸ್ಯೇಶ ತವೋಚ್ಚಶಸ್ತ್ರೈಃ ಕಾರ್ಯ್ಯಂ ಕಿಮಸ್ಮಾಕಮನುದ್ಬಲಾನಾಮ್
ವಿದ್ಯೈವ ದೇಯಾ ಭವತಾ ತತೋsಜ ಸರ್ವಪ್ರಕಾಶಿನ್ಯಚಲಾ ಸುಸೂಕ್ಷ್ಮಾ ೧೫.೧೯

ಸರ್ವೋತ್ತಮನಾಗಿರುವ ನಿನ್ನ ಉತ್ಕೃಷ್ಟವಾದ ಶಸ್ತ್ರಗಳಿಂದ, ಬಲವಿಲ್ಲದ ನಮಗೆ ಏನು ಪ್ರಯೋಜನ? ಆ ಕಾರಣದಿಂದ ನಿನ್ನಿಂದ ನನಗೆ ‘ಎಲ್ಲವನ್ನೂ ತೋರಿಸುವ, ನಿರಂತರವಾಗಿರುವ, ಸುಸೂಕ್ಷ್ಮವಾಗಿರುವ’  ತತ್ತ್ವ ವಿದ್ಯೆಯೇ ಕೊಡಲರ್ಹವು.

ಇತೀರಿತಸ್ತತ್ತ್ವವಿದ್ಯಾದಿಕಾಃ ಸ ವಿದ್ಯಾಃ ಸರ್ವಾಃ ಪ್ರದದೌ ಸಾಸ್ತ್ರಶಸ್ತ್ರಾಃ
ಅಬ್ದದ್ವಿಷಟ್ಕೇನ ಸಮಾಪ್ಯ ತಾಃ ಸ ಯಯೌ ಸಖಾಯಂ ದ್ರುಪದಂ ಮಹಾತ್ಮಾ ೧೫.೨೦

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟವರಾದ ಪರಶುರಾಮ ದೇವರು, ತತ್ತ್ವವಿದ್ಯೆಯಿಂದ ಕೂಡಿರುವ, ಅಸ್ತ್ರಶಸ್ತ್ರಗಳಿಂದೊಡಗೂಡಿದ ವಿದ್ಯೆಗಳನ್ನು, ಹಾಗೂ ಇತರ ಎಲ್ಲಾ ತರದ ವಿದ್ಯೆಗಳನ್ನು ದ್ರೋಣಾಚಾರ್ಯರಿಗೆ ಕೊಟ್ಟರು. ಸುಮಾರು ಹನ್ನೆರಡು ವರ್ಷಗಳ ಕಾಲ ಆ ಎಲ್ಲಾ ವಿದ್ಯೆಗಳನ್ನು ಹೊಂದಿದ ದ್ರೋಣಾಚಾರ್ಯರು, ಆ ನಂತರ, ಗೆಳೆಯನಾದ ದ್ರುಪದನಿದ್ದಲ್ಲಿಗೆ ತೆರಳಿದರು.

Tuesday, December 17, 2019

Mahabharata Tatparya Nirnaya Kannada 1511_1515


ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ
ದೋಷಾಯ ಯಸ್ಮಾತ್ ಸ ಪಿತಾsಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ ೧೫.೧೧

ದಾನ ತೆಗೆದುಕೊಳ್ಳುವಿಕೆಯಿಂದ ನಿವೃತ್ತರಾದ ದ್ರೋಣಾಚಾರ್ಯರು ಪರಶುರಾಮನನ್ನು ಕುರಿತು ತೆರಳಿದರು.
ನಾರಾಯಣನಿಂದ ಪಡೆಯುವ ದಾನವು ದೋಷವಲ್ಲ. ಪರಶುರಾಮನು ಸಮಸ್ತ ಪ್ರಪಂಚದ ಸ್ವಾಮಿಯಾಗಿದ್ದಾನೆ, ತಂದೆಯಾಗಿದ್ದಾನೆ, ಗುರುವಾಗಿದ್ದಾನೆ, ಪರಮ ದೇವನೂ ಆಗಿದ್ದಾನೆ. ಹೀಗಾಗಿ ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಬದುಕುತ್ತಿದ್ದ ದ್ರೋಣಾಚಾರ್ಯರು ಭಗವಂತನ ಅವತಾರವಾದ ಪರಶುರಾಮನಿದ್ದಲ್ಲಿಗೆ ತೆರಳಿದರು.

ದೃಷ್ಟ್ವೈವೈನಂ ಜಾಮದಗ್ನ್ಯೋsಪ್ಯಚಿನ್ತಯದ್ ದ್ರೋಣಂ ಕರ್ತ್ತುಂ ಕ್ಷಿತಿಭಾರಾಪನೋದೇ
ಹೇತುಂ ಸುರಾಣಾಂ ನರಯೋನಿಜಾನಾಂ ಹನ್ತಾ ಚಾಯಂ ಸ್ಯಾತ್ ಸಹ ಪುತ್ರೇಣ ಚೇತಿ ೧೫.೧೨

ದ್ರೋಣಾಚಾರ್ಯರನ್ನು ಕಂಡ ಪರಶುರಾಮದೇವರೂ ಕೂಡಾ, ಭೂಭಾರವನ್ನು ಇಳಿಸುವುದರಲ್ಲಿ ದ್ರೋಣಾಚಾರ್ಯರನ್ನು ಹೇತುವನ್ನಾಗಿ ಮಾಡಲು ಚಿಂತಿಸಿದರು. ಮನುಷ್ಯಕುಲದಲ್ಲಿ ಹುಟ್ಟುವ ದೇವತೆಗಳ ಸಂಹಾರದಲ್ಲಿ ದ್ರೋಣಾಚಾರ್ಯರು ಅಶ್ವತ್ಥಾಮನೊಂದಿಗೆ ಕೂಡಿಕೊಂಡು ಭಾಗಿಯಾಗಬೇಕು ಎಂದು ಪರಶುರಾಮದೇವರು ಚಿಂತಿಸಿದರು.   

ಏಕೆ ಅವತರಿಸಿದ ದೇವತೆಗಳ ಸಂಹಾರದ ಕುರಿತು ಪರಶುರಾಮದೇವರು  ಚಿಂತಿಸಿದರು ಎಂದರೆ-

ತೇಷಾಂ ವೃದ್ಧಿಃ ಸ್ಯಾತ್ ಪಾಣ್ಡವಾರ್ತ್ಥೇ ಹತಾನಾಂ ಮೋಕ್ಷೇsಪಿ ಸೌಖ್ಯಸ್ಯ ನ ಸನ್ತತಿಶ್ಚ
ಯೋಗ್ಯಾ ಸುರಾಣಾಂ ಕಲಿಜಾ ಸುಪಾಪಾಃ ಪ್ರಾಯೋ ಯಸ್ಮಾತ್ ಕಲಿಜಾಃ ಸಮ್ಭವನ್ತಿ ೧೫.೧೩

ಪಾಂಡವರಿಗಾಗಿ ಯುದ್ಧದಲ್ಲಿ ಸತ್ತ, ಮನುಷ್ಯಯೋನಿಯಲ್ಲಿ ಹುಟ್ಟಿದ ದೇವತೆಗಳ ಅಭಿವೃದ್ಧಿಯಾಗಬೇಕು, ಅವರಿಗೆ ಸ್ವರ್ಗದಲ್ಲಿಯೂ, ಮೋಕ್ಷದಲ್ಲಿಯೂ ಸುಖದ ವೃದ್ಧಿಯಾಗಬೇಕು. ಮನುಷ್ಯಕುಲದಲ್ಲಿ ಹುಟ್ಟಿದ ದೇವತೆಗಳ ಸಂತತಿಯು ಕಲಿಯುಗದಲ್ಲಿ ಇರಬಾರದು. (ಏಕೆ?) ಯಾವಕಾರಣದಿಂದ ಪ್ರಾಯಃ(ಹೆಚ್ಚಾಗಿ) ಅತ್ಯಂತ ಪಾಪಿಷ್ಠರೇ ಕಲಿಯುಗದಲ್ಲಿ ಹುಟ್ಟುತ್ತಾರೋ, ಆ ಕಾರಣದಿಂದ ದೇವತೆಗಳ ಸಂತತಿ ಕಲಿಯುಗದಲ್ಲಿ ಮುಂದುವರಿಯಬಾರದು.

ಏಕೆ?

ನ ದೇವಾನಾಮಾಶತಂ ಪೂರುಷಾ ಹಿ ಸನ್ತಾನಜಾಃ ಪ್ರಾಯಶಃ ಪಾಪಯೋಗ್ಯಾಃ
ನಾಕಾರಣಾತ್ ಸನ್ತತೇರಪ್ಯಭಾವೋ ಯೋಗ್ಯಃ ಸುರಾಣಾಂ ಸದಮೋಘರೇತಸಾಮ್ ೧೫.೧೪

ದೇವತೆಗಳಲ್ಲಿ ನೂರು ತಲೆಮಾರಿನ ತನಕ  ಹುಟ್ಟುವ ಪುರುಷರು ಪ್ರಾಯಃ(ಸಾಮಾನ್ಯವಾಗಿ) ಪಾಪಯೋಗ್ಯರಾಗಿರುವುದಿಲ್ಲ. ಇನ್ನು ಯಾವುದೇ ಕಾರಣ ಇಲ್ಲದೇ ಸಂತಾನ ಇಲ್ಲದಿರುವಿಕೆಯೂ ಅವರಿಗೆ ಯೋಗ್ಯವಲ್ಲ. ಏಕೆಂದರೆ ವ್ಯರ್ಥವಾದ(ಅ-ಮೋಘವಾದ) ರೇತಸ್ಸು(ವೀರ್ಯ) ಅವರದ್ದಲ್ಲ.

ಅವ್ಯುಚ್ಛಿನ್ನೇ ಸಕಲಾನಾಂ ಸುರಾಣಾಂ ತನ್ತೌ ಕಲಿರ್ನ್ನೋ ಭವಿತಾ ಕಥಞ್ಚಿತ್
ತಸ್ಮಾದುತ್ಸಾದ್ಯಾಃ ಸರ್ವ ಏತೇ ಸುರಾಂಶಾ ಏತೇನ ಸಾಕಂ ತನಯೇನ ವೀರಾಃ ೧೫.೧೫

ಎಲ್ಲಾ ದೇವತೆಗಳ ಸಂತತಿಯು ನಾಶವಾಗದಿದ್ದರೆ ಕಲಿಯುಗದ ವ್ಯಾಪಾರವು ಸಾಗುವುದಿಲ್ಲ. ಆ ಕಾರಣದಿಂದ ಈ ಎಲ್ಲಾ ದೇವತೆಗಳ ಅವತಾರರು ಅಶ್ವತ್ಥಾಮನಿಂದ ಸಾಯಿಸಲ್ಪಡಬೇಕು. (ದ್ರೋಣಾಚಾರ್ಯ ಹಾಗು ಅಶ್ವತ್ಥಾಮರಿಂದಲೇ ಈ ಕೆಲಸವಾಗಬೇಕು).

Friday, December 13, 2019

Mahabharata Tatparya Nirnaya Kannada 1506_1510

ವ್ಯಾಸಾದವಾಪ ಪರಮಾತ್ಮಸತತ್ವವಿದ್ಯಾಂ ಧರ್ಮ್ಮಾತ್ಮಜೋsಪಿ ಸತತಂ ಭಗವತ್ಪ್ರಪನ್ನಾಃ
ತೇ ಪಞ್ಚ ಪಾಣ್ಡುತನಯಾ ಮುಮುದುರ್ನ್ನಿತಾನ್ತಂ ಸದ್ಧರ್ಮ್ಮಚಾರಿಣ ಉರುಕ್ರಮಶಿಕ್ಷಿತಾರ್ತ್ಥಾಃ  ೧೫.೦೬

ಧರ್ಮರಾಜನೂ ಕೂಡಾ ವೇದವ್ಯಾಸರಿಂದ ಪರಮಾತ್ಮನ ಪರತತ್ತ್ವ ವಿದ್ಯೆಯನ್ನು ಪಡೆದ. ಹೀಗೆ  ಆ ಐದು ಜನ ಪಾಂಡವರೂ ಕೂಡಾ, ಯಾವಾಗಲೂ ಪರಮಾತ್ಮನಲ್ಲಿಯೇ ಆಸಕ್ತರಾಗಿ, ಉತ್ತಮವಾದ  ಧರ್ಮದಲ್ಲಿ ನಡೆಯುತ್ತಾ, ಪರಮಾತ್ಮನು ತೋರಿದ ಮಾರ್ಗದಲ್ಲಿ  ಸಾಗುವವರಾಗಿ ಬಹಳ ಸಂತಸಪಟ್ಟರು.

ಯದಾ ಭರದ್ವಾಜಸುತಸ್ತ್ವಸಞ್ಚಯೀ ಪ್ರತಿಗ್ರಹೋಜ್ಝೋ ನಿಜಧರ್ಮ್ಮವರ್ತ್ತೀ
ದ್ರೌಣಿಸ್ತದಾ ಧಾರ್ತ್ತರಾಷ್ಟ್ರೈಃ ಸಮೇತ್ಯ ಕ್ರೀಡನ್ ಪಯಃ ಪಾತುಮುಪೈತಿ ಸದ್ಮ ೧೪.೦೭

ಯಾವುದನ್ನೂ ಸಂಗ್ರಹಿಸಿ ಇಟ್ಟುಕೊಳ್ಳದ, ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಭರದ್ವಾಜರ ಮಗನಾದ ದ್ರೋಣಾಚಾರ್ಯರು ಜೀವಿಸುತ್ತಿರುವಾಗ, ಅವರ ಪುತ್ರನಾದ  ಅಶ್ವತ್ಥಾಮನು ದುರ್ಯೋಧನಾದಿಗಳಿಂದ ಕೂಡಿಕೊಂಡು ಆಟ ಆಡತಕ್ಕವನಾಗಿ, ಹಾಲು ಕುಡಿಯಲೆಂದು ಮನೆಯನ್ನು ತಲುಪಿದನು.

ತಸ್ಮೈ ಮಾತಾ ಪಿಷ್ಟಮಾಲೋಡ್ಯ ಪಾತುಂ ದದಾತಿ ಪೀತ್ವೈತಿ ತದೈಷ ನಿತ್ಯಮ್
ಪೀತಕ್ಷೀರಾನ್ ಧಾರ್ತ್ತರಾಷ್ಟ್ರಾನ್ ಸ ಚೈತ್ಯ ಮಯಾ ಪೀತಂ ಕ್ಷೀರಮಿತ್ಯಾಹ ನಿತ್ಯಮ್ ೧೫.೦೮

ಈ ರೀತಿ ಬರುತ್ತಿದ್ದ ಅಶ್ವತ್ಥಾಮನಿಗೆ ತಾಯಿ ಕೃಪಿಯು ಹಿಟ್ಟನ್ನು ಕಲಿಸಿ ಕುಡಿಯಲು ಕೊಡುತ್ತಿದ್ದಳು. ಅದನ್ನು ಕುಡಿವ ಅಶ್ವತ್ಥಾಮನು, ನಿತ್ಯವೂ ಹಾಲನ್ನು ಕುಡಿಯುತ್ತಿರುವ ದುರ್ಯೋಧನಾದಿಗಳನ್ನು ಹೊಂದಿ, ‘ನನ್ನಿಂದ ಹಾಲು ಕುಡಿಯಲ್ಪಟ್ಟಿತು’ ಎಂದು ಯಾವಾಗಲೂ ಹೇಳುತ್ತಿದ್ದ.

ನೃತ್ಯನ್ತಮೇನಂ ಪಾಯಯಾಮಾಸುರೇತೇ ಪಯಃ ಕದಾಚಿತ್  ರಸಮಸ್ಯ ಸೋsವೇತ್
ಪುನಃ ಕದಾಚಿತ್ ಸ ತು ಮಾತೃದತ್ತೇ ಪಿಷ್ಟೇ ನೇದಂ ಕ್ಷೀರಮಿತ್ಯಾರುರಾವ ೧೫.೦೯

ಹೀಗೆ ‘ಹಾಲುಕುಡಿದೆ’ ಎಂದು ಕುಣಿಯುತ್ತಿರುವ ದ್ರೋಣಿಗೆ(ಅಶ್ವತ್ಥಾಮನನ್ನು) ಒಮ್ಮೆ ದುರ್ಯೋಧನಾದಿಗಳು   ನಿಜವಾದ ಹಾಲನ್ನು ಕುಡಿಸಿದರು. ಈ ರೀತಿ ಒಮ್ಮೆ ಹಾಲಿನ ನಿಜರುಚಿಯನ್ನು ಚೆನ್ನಾಗಿ ತಿಳಿದ ಅಶ್ವತ್ಥಾಮನು,  ಮತ್ತೆ ಯಾವಾಗಲೋ ಒಮ್ಮೆ ತಾಯಿಯು ಹಿಟ್ಟನ್ನು ಕಲಿಸಿ ಕೊಡಲು, ಇದು ಹಾಲಲ್ಲಾಎಂದು ಅತ್ತನು.

ದೃಷ್ಟ್ವಾ ರುವನ್ತಂ ಸುತಮಾತ್ಮಜಸ್ಯ ಸ್ನೇಹಾನ್ನಿಯತ್ಯೈವ ಜನಾರ್ದ್ದನಸ್ಯ
ಸಮ್ಪ್ರೇರಿತಃ ಕೃಪಯಾ ಚಾsರ್ತ್ತರೂಪೋ ದ್ರೋಣೋ ಯಯಾವಾರ್ಜ್ಜಯಿತುಂ ತದಾ ಗಾಮ್ ೧೫.೧೦

ಹೀಗೆ, ಮಗನು ಅಳುತ್ತಿದ್ದಾನೆಂದು ಕಂಡು, ಮಗನಮೇಲಿನ ಪ್ರೀತಿಯಿಂದ, ಕೃಷ್ಣನ ನಿಯತಿಯಿಂದಲೇ(ಪ್ರೇರಣೆಯಿಂದಲೇ), ಕೃಪಿಯಿಂದಲೂ ಕೂಡಾ ಚೆನ್ನಾಗಿ ಪ್ರೇರೇಪಿಸಲ್ಪಟ್ಟವರಾಗಿ, ದುಃಖಿತರಾದ ದ್ರೋಣಾಚಾರ್ಯರು  ಹಸುವನ್ನು ಸಂಪಾದಿಸಲೆಂದು ಹೊರಟರು.