ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 29, 2021

Mahabharata Tatparya Nirnaya Kannada 21: 81-89

 

ಸ ಪಾಣ್ಡವೈಃ ಸಮರ್ಚ್ಚಿತೋ ಮಖಾಯ ಧರ್ಮ್ಮಜೇನ ಚ

ಪ್ರ ಪೃಷ್ಟ ಆಹ ಮಾಧವೋ ವಚೋ ಜಗತ್ಸುಖಾವಹಮ್             ೨೧.೮೧

 

ಪಾಂಡವರಿಂದ ಅರ್ಚಿತನಾದ ಶ್ರೀಕೃಷ್ಣನು, ಧರ್ಮರಾಜನಿಂದ ರಾಜಸೂಯಯಾಗದ ಕುರಿತು ಪ್ರಶ್ನಿಸಲ್ಪಟ್ಟವನಾಗಿ, ಜಗತ್ತಿಗೇ ಸುಖವನ್ನುಂಟುಮಾಡುವ ಮಾತನ್ನು ಹೇಳಿದನು.  

 

ಕ್ರತುರ್ಯ್ಯಥಾ ವಿಧಾನತಃ ಕೃತೋ ಹಿ ಪಾರಮೇಷ್ಠ್ಯಕಮ್ ।

ಪದಂ ನಯೇತ ತತ್ಪದೇ ಸುಯೋಗ್ಯಮೇಷ ನಾನ್ಯಥಾ              ೨೧.೮೨

 

ಶಾಸ್ತ್ರಪೂರ್ವಕವಾಗಿ ಮಾಡಿದ ರಾಜಸೂಯ ಯಾಗವು ಬ್ರಹ್ಮಪದವಿಯನ್ನೇ ಕೊಡುತ್ತದೆ- ಆ ಪದವಿಯ ಯೋಗ್ಯತೆ ಇದ್ದರೆ ಹೊರತು ಬೇರೆ ರೀತಿಯಾಗಿ ಅಲ್ಲ.

[ಈ ಕುರಿತ ವಿವರ ಭಾಗವತದಲ್ಲಿ ಕಾಣಸಿಗುತ್ತದೆ:  ಯಕ್ಷ್ಯತಿ ತ್ವಾಂ ಮಖೇನ್ದ್ರೇಣ ರಾಜಸೂಯೇನ ಪಾಣ್ಡವಃ । ನೃಪತಿಃ ಪಾರಮೇಷ್ಠ್ಯೇನ ತದ್ ಭವಾನನುಮೋದತಾಮ್’ (೧೦.೭೮.೪೧). ‘ಯುಧಿಷ್ಠಿರನು ಯಜ್ಞದಲ್ಲಿ ಶ್ರೇಷ್ಠವಾಗಿರುವ, ಬ್ರಹ್ಮಪದವಿಯನ್ನು ಕೊಡಬಲ್ಲ  ರಾಜಸೂಯಯಾಗದಿಂದ ನಿನ್ನನ್ನು ಪೂಜಿಸಲು ಬಯಸಿದ್ದಾನೆ. ಅದಕ್ಕೆ ನೀನು ಅನುಮತಿ ಕೊಡಬೇಕು’ ಎಂದು ಧರ್ಮರಾಜನು ಕಳುಹಿಸಿದ ದೂತ ಕೃಷ್ಣನನ್ನು ಕುರಿತು ಹೇಳುವ ಮಾತು ಇದಾಗಿದೆ. ಇದಲ್ಲದೇ, ಶತಪಥ ಬ್ರಾಹ್ಮಣದಲ್ಲೂ ಕೂಡಾ ಈ ಕುರಿತ ಮಾತನ್ನು ಕಾಣಬಹುದು].

 

ಬ್ರಹ್ಮಪದವಿಗೆ ಅಯೋಗ್ಯರಾದವರು(ಉದಾಹರಣೆಗೆ- ಸೋಮ, ವರುಣ, ಇಂದ್ರ.. )  ಈ ಯಾಗವನ್ನು ಮಾಡಿದರೆ ಅವರಿಗೆ ಏನು ಫಲ ಎನ್ನುವುದನ್ನು ವಿವರಿಸುತ್ತಾರೆ-

 

        ಅಯೋಗ್ಯಕಾನ್ಮಹಾಪದೇ ವಿಧಾತುರೇಷ ಹಿ ಕ್ರತುಃ ।

        ಸಮಾನಯೋಗ್ಯತಾಗಣಾತ್ ಕರೋತಿ ಮುಕ್ತಿಗಂ ವರಮ್ ೨೧.೮೩

 

        ಪುರಾ ತು ಮುಕ್ತಿತೋsಧಿಕಂ ಸ್ವಜಾತಿತಃ ಕರೋತಿ ಚ ।

        ಅತಸ್ತ್ರಿಶಙ್ಕುಪುತ್ರಕೋ ನೃಪಾನತೀತ್ಯ ವರ್ತ್ತತೇ ೨೧.೮೪

 

ಬ್ರಹ್ಮಪದವಿಗೆ ಅಯೋಗ್ಯರಾದವರನ್ನು ಈ ಯಾಗವು ಮುಕ್ತಿಯಲ್ಲಿರತಕ್ಕವನಾಗಿಯೂ, ತನ್ನ ಸಮಾನ ಯೋಗ್ಯತಾ ಗಣಕ್ಕಿಂತ ಶ್ರೇಷ್ಠರನ್ನಾಗಿಯೂ ಮಾಡುತ್ತದೆ.

ಮುಕ್ತಿಯನ್ನು ಹೊಂದುವುದಕ್ಕೂ ಮೊದಲು, ತನಗೆ ಸರಿಸಮಾನ ಯೋಗ್ಯತೆಯುಳ್ಳ    ಗಣಗಳಿಗಿಂತ ಉತ್ತಮಲೋಕವನ್ನು ಹೊಂದುವಂತೆ ಮಾಡುತ್ತದೆ. ಆ ಕಾರಣದಿಂದಲೇ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನು ತನಗೆ ಸರಿಸಮಾನರಾದ ಕ್ಷತ್ರಿಯರನ್ನು  ಮೀರಿ ನಿಂತಿದ್ದಾನೆ.

 

        ಸುರಾಂಶಕೋsಪಿ ತೇ ಪಿತಾ ವಿನಾ ಹಿ ರಾಜಸೂಯತಃ 

        ನ ಶಕ್ಷ್ಯತಿ ತ್ರಿಶಙ್ಕುಜಾದ್ ವರತ್ವಮಾಪ್ತುಮದ್ಯ ತು ೨೧.೮೫

 

ನಿನ್ನ ತಂದೆಯಾದ ಪಾಂಡುವು ದೇವತೆಗಳ ಅಂಶದಿಂದ ಕೂಡಿದ್ದರೂ ಕೂಡಾ ರಾಜಸೂಯ ಯಾಗ ಮಾಡದೇ ಇದ್ದುದರಿಂದ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನಿಗಿಂತ ಶ್ರೇಷ್ಠತ್ವವನ್ನು ಹೊಂದಲು ಶಕ್ತನಾಗಿಲ್ಲ.

 

[ಏಕೆ ಮರುದ್ಗಣೋತ್ತಮನಾದ ಪಾಂಡುವಿಗೆ ಈ ಸಮಸ್ಯೆ ಎದುರಾಯಿತು ಎನ್ನುವುದರ ಹಿನ್ನೆಲೆಯನ್ನು ಹೇಳುತ್ತಾರೆ-]

 

        ತಪಶ್ಚರನ್ ಸಮಾಗತೇ ಶಚೀಪತೌ ಪಿತಾ ತವ ।

        ಮರುದ್ಗಣೋತ್ತಮಃ ಪುರಾ ನತೂತ್ಥಿತಃ ಶಶಾಪ ಸಃ ೨೧.೮೬

 

ಮರುದ್ಗಣೋತ್ತಮನಾದ ನಿನ್ನ ತಂದೆ ತಪಸ್ಸು ಮಾಡುತ್ತಿರುವಾಗ, ಇಂದ್ರ ಬರುತ್ತಿರಲು ಎದ್ದು ನಿಲ್ಲಲಿಲ್ಲ. ಅದಕ್ಕಾಗಿ ಅವನನ್ನು ಇಂದ್ರ ಶಪಿಸಿದ.

 

        ವ್ರಜಸ್ವ ಮಾನುಷೀಂ ತನುಂ ತತೋ ಮೃತಃ ಪುನರ್ದ್ಧಿವಮ್ ।

        ಗತೋsಪಿ ನ ಸ್ವಕಾಂ ತನುಂ ಪ್ರವೇಷ್ಟುಮತ್ರ ನೇಶಸೇ ೨೧.೮೭

 

        ತದಾsಧಿಕಸ್ತ್ರಿಶಙ್ಕುಜೋ ಭವಿಷ್ಯತು ತ್ವದಿತ್ಯಥ ।

        ಕ್ಷಮಾಪಿತಶ್ಚ ವಾಸವೋ ಜಗಾದ ರಾಜಸೂಯತಃ ।

        ತ್ರಿಶಙ್ಕುಜಾಧಿಕೋ ಭವಾನವಾಪ್ಸ್ಯತಿ ಸ್ವಕಾಂ ತನುಮ್ ೨೧.೮೮

 

‘ಮನುಷ್ಯದೇಹವನ್ನು ಹೊಂದು, ನಂತರ ಮಾನವ ದೇಹ ತೊರೆದಮೇಲೆ ಮತ್ತೆ ಉನ್ನತಲೋಕಕ್ಕೆ ಹೋದರು ಕೂಡಾ, ನಿನ್ನ ಸ್ವರೂಪಭೂತ ದೇಹವನ್ನು ಪ್ರವೇಶಿಸಲು ನೀನು  ಶಕ್ತನಾಗುವುದಿಲ್ಲ. ಆಗ   ತ್ರಿಶಂಕು ಪುತ್ರನಾದ ಹರಿಶ್ಚನ್ದ್ರನು ನಿನಗಿಂತಲೂ ಮಿಗಿಲಾಗಿರುವನು’ -ಎನ್ನುವ ಶಾಪ.

ಆಗ ಮರುದ್ಗಣೋತ್ತಮ ಕ್ಷಮೆ ಬೇಡಿದ. ಬೇಡಿಕೊಂಡಾದ ಮೇಲೆ ಇಂದ್ರನು - ರಾಜಸೂಯ ಯಾಗದಿಂದ ನೀನು ಹರಿಶ್ಚಂದ್ರನಿಗಿಂತ ಮಿಗಿಲಾಗಿ, ನಿನ್ನ ಮೂಲರೂಪವನ್ನು ಪ್ರವೇಶಮಾಡುತ್ತೀಯ’ ಎಂದ.

 

        ಅತಃ ಸುಕಾರ್ಯ್ಯ ಏವ ತೇ ಯುಧಿಷ್ಠಿರ ಕ್ರತೂತ್ತಮಃ ।

        ಭವದ್ಭಿರಪ್ಯವಾಪ್ಯತೇ ಸ್ವಯೋಗ್ಯತಾsಮುನಾsಖಿಲಾ ೨೧.೮೯

 

ಓ ಯುಧಿಷ್ಠಿರನೇ, ಈ ಎಲ್ಲಾ ಕಾರಣದಿಂದ ನಿನ್ನಿಂದ ಯಾಗಗಳಲ್ಲಿ ಶ್ರೇಷ್ಠವಾದ ರಾಜಸೂಯ ಯಾಗವು ಮಾಡಲ್ಪಡಬೇಕಾದದ್ದೇ ಆಗಿದೆ. (ಕೇವಲ ನಿನ್ನ ಅಪ್ಪನಿಗಷ್ಟೇ ಇದರಿಂದ ಪ್ರಯೋಜನವಲ್ಲ), ನಿಮಗೂ ಕೂಡಾ ನಿಮ್ಮ ಯೋಗ್ಯತೆಗೆ ಅನುಗುಣವಾದ ಫಲವು ಇದರಿಂದ ಹೊಂದಲ್ಪಡುತ್ತದೆ.

Sunday, November 28, 2021

Mahabharata Tatparya Nirnaya Kannada 21: 72-80

 

ಇತ್ಯುಕ್ತೋ ನಾರದಃ ಪ್ರಾಹ ರಾಜಸೂಯಕೃತೋನ್ನತಿಮ್ ।

ಹರಿಶ್ಚನ್ದ್ರಸ್ಯ ತಾಂ ದೃಷ್ಟ್ವಾ ಪಿತಾ ಯಮಸಭಾತಳೇ ।

ಸ್ಥಿತಸ್ತ್ವಾಮವದತ್ ಪಾಣ್ಡೂ ರಾಮದ್ವಯಸುದೈವತೇ    ೨೧.೭೨

 

ಈ ರೀತಿ ಹೇಳಲ್ಪಟ್ಟ ಧರ್ಮರಾಯನಿಗೆ ನಾರದರು ರಾಜಸೂಯದಿಂದ(ಹರಿಶ್ಚಂದ್ರನಿಗೆ) ಯಾವ ರೀತಿಯ ಉನ್ನತಿಯಾಯಿತು ಎನ್ನುವುದನ್ನು ವಿವರಿಸಿದರು. (ಹರಿಶ್ಚಂದ್ರ ರಾಜಸೂಯ ಯಾಗ ಮಾಡಿರುವುದರಿಂದ ಇಂದ್ರಲೋಕಕ್ಕೆ ಹೋಗಿದ್ದಾನೆ. ಪಾಂಡು ಮಾಡಿಲ್ಲ, ಹಾಗಾಗಿ ಎತ್ತರದ ಲೋಕಕ್ಕೆ ಹೋಗಿಲ್ಲ ಎನ್ನುವುದನ್ನು ನಾರದರು ವಿವರಿಸಿದರು). ‘ಈ ಪ್ರಶ್ನೆ ನಿನಗೆ ಮಾತ್ರ ಕಾಡಿರುವುದಲ್ಲ. ನಿನ್ನ ಅಪ್ಪನನ್ನೂ ಕಾಡಿತ್ತು. ದಾಶರಥೀರಾಮ ಮತ್ತು ಪರಶುರಾಮ ಎಲ್ಲಿ ಆರಾಧ್ಯರಾಗಿದ್ದಾರೋ, ಅಂಥಹ ಯಮನ ಸಭೆಯಲ್ಲಿ ನನ್ನನ್ನು ಕುರಿತು ಪಾಂಡು  ನಿನಗೆ ಸಂದೇಶವನ್ನು ಕಳುಹಿಸಿದ್ದಾನೆ.

 

ಕರೋತು ರಾಜಸೂಯಂ ಮೇ ಪುತ್ರೋsಜೇಯಾನುಜಾರ್ಚ್ಚಿತಃ ।

ಪಾಲಿತೋ ವಾಸುದೇವೇನ ಕಿಂ ತಸ್ಯಾಸಾದ್ಧ್ಯಮತ್ರ ಹಿ              ೨೧.೭೩

 

‘ನನ್ನ ಮಗನಾದ ಧರ್ಮರಾಜನಿಗೆ ಅಜೇಯರಾಗಿರುವ ತಮ್ಮಂದಿರಿದ್ದಾರೆ. ಅವರಿಂದ ಕೂಡಿಕೊಂಡು ನನಗಾಗಿ ಅವನು ರಾಜಸೂಯ ಯಾಗವನ್ನು ಮಾಡಲಿ. ಕೃಷ್ಣನಿಂದ  ರಕ್ಷಿತನಾಗಿರುವ ಅವನಿಗೆ ಈ ವಿಚಾರದಲ್ಲಿ ಅಸಾಧ್ಯವಾದದ್ದು ಏನಿದೆ?’

 

ಏತಚ್ಛ್ರುತ್ವಾ ಧರ್ಮ್ಮಸುತೋ ಭ್ರಾತೃಭಿಃ ಸಹಿತೋ ವಶೀ ।

ಅವಾಪ್ತಿಂ ರಾಜಸೂಯಸ್ಯ ಮನ್ತ್ರಯಾಮಾಸ ಧರ್ಮ್ಮವಿತ್        ೨೧.೭೪

 

ನಾರದರ ಮಾತನ್ನು ಕೇಳಿದ ಧರ್ಮರಾಜನು, ತನ್ನ ತಮ್ಮಂದಿರೊಂದಿಗೆ ರಾಜಸೂಯಯಾಗವನ್ನು  ಮಾಡುವುದರ ಕುರಿತು ಮಂತ್ರಾಲೋಚನೆ ಮಾಡಿದನು.

 

ಸುಕಾರ್ಯ್ಯಮೇತದಿತ್ಯಲಂ ನಿಶಮ್ಯ ಸೋದರೋದಿತಮ್ ।

ಅಯಾತಯತ್ ಸ್ವಸಾರಥಿಂ ಸ ಕೇಶವಾಯ ಭೂಪತಿಃ               ೨೧.೭೫

 

ಇದು ಮಾಡಲೇಬೇಕಾದ ಸುಕಾರ್ಯ ಎಂದು ಚೆನ್ನಾಗಿ ತಮ್ಮಂದಿರು ಹೇಳಿದ ಸಂಗತಿಯನ್ನು ಕೇಳಿದ ಧರ್ಮರಾಜ  ಕೃಷ್ಣನಲ್ಲಿಗೆ ತನ್ನ ಸಾರಥಿಯನ್ನು ಕಳುಹಿಸಿದ.

[ಮಹಾಭಾರತ (ಸಭಾಪರ್ವ-೧೩.೪೬): ‘ಗುರುವದ್ ಭೂತಗುರವೇ ಪ್ರಾಹಿಣೋದ್ ದೂತಮಞ್ಞಸಾ’  ಜಗದ್ಗುರು ಶ್ರೀಕೃಷ್ಣನಲ್ಲಿಗೆ ಧರ್ಮರಾಜ ದೂತನನ್ನು ಕಳುಹಿಸಿದ. ‘ಇಂದ್ರಸೇನೇನ ಸಹಿತ ಇಂದ್ರಪ್ರಸ್ಥಮಗಾತ್ ತದಾ’(೧೩.೫೧)].

 

ತದೈವ ಕೇಶವಸ್ಯ ಯಾಃ ಸ್ತ್ರಿಯಸ್ತದೀಯತಾತಕೈಃ ।

ಸಹೋದರೈಶ್ಚ ಯಾಪಿತಃ ಸುದೂತ ಆಪ ಮಾಧವಮ್             ೨೧.೭೬

 

ಅದೇ ಕಾಲದಲ್ಲಿ ಕೃಷ್ಣನ ಹದಿನಾರುಸಾವಿರದ ನೂರುಮಂದಿ ಪತ್ನಿಯರ ಅಪ್ಪಂದಿರಿಂದಲೂ, ಅವರ ಅಣ್ಣತಮ್ಮಂದಿರಿಂದಲೂ  ಕಳುಹಿಸಲ್ಪಟ್ಟ ಇನ್ನೊಬ್ಬ ದೂತ ಕೃಷ್ಣನ ಬಳಿ ಬಂದ.

[ಅದೇ ಸಂದರ್ಭದಲ್ಲಿ ಶ್ರೀಕೃಷ್ಣನ ವಿವಾಹಬಾಂಧವರೆಲ್ಲರೂ ಕೂಡಿ ದೂತನನ್ನು ಕಳುಹಿಸಿದ ಘಟನೆಯನ್ನು ಭಾಗವತದಲ್ಲಿ ವಿವರಿಸಿದ್ದಾರೆ: ‘ತತ್ರೈಕಃ ಪುರುಷೋ ರಾಜನ್ನಾಗತೋsಪೂರ್ವ ದರ್ಶನಃ ವಿಜ್ಞಾಪಿತೋ ಭಗವತೇ ಪ್ರತೀಹಾರೈಃ ಪ್ರವೇಶಿತಃ     ಸ ನಮಸ್ಕೃತ್ಯ ಕೃಷ್ಣಾಯ ಪರೇಶಾಯ ಕೃತಾಞ್ಜಲಿಃ ರಾಜ್ಞಾಮಾವೇದಯದ್  ದುಃಖಂ ಜರಾಸನ್ಧೋಪರೋಧಜಮ್ (೧೦.೭೮.೨೨-೨೩) ಒಬ್ಬ ದೂತ ಬಂದ. ಒಳಗೆ ಪ್ರವೇಶ ಮಾಡಿದ ಆತ ಜರಾಸಂಧನ ಬಂಧನದಿಂದ ರಾಜರಿಗೆ ಏನು ದುಃಖವಾಗಿದೆ ಎನ್ನುವುದನ್ನು ವಿವರಿಸುತ್ತಾನೆ:]

 

ಪ್ರಣಮ್ಯ ಕೇಶವಂ ವಚಃ ಸ ಆಹ ಮಾಗಧೇನ ತೇ ।

ವಿವಾಹಬಾನ್ಧವಾ ರಣೇ ವಿಜಿತ್ಯ ರೋಧಿತಾ ಗಿರೌ          ೨೧.೭೭

 

ಆ ದೂತನು ಕೇಶವನಿಗೆ ನಮಸ್ಕರಿಸಿ ಮಾತನ್ನು ಹೇಳಿದನು: ಕೃಷ್ಣನೇ, ನಿನ್ನ ವಿವಾಹಬಾಂಧವರೆಲ್ಲರೂ ಜರಾಸಂಧನಿಂದ ಯುದ್ಧದಲ್ಲಿ ಸೋತು ಪರ್ವತದ ತಪ್ಪಲಿನಲ್ಲಿ ಬಂಧಿತರಾಗಿದ್ದಾರೆ.

 

ನೃಪಾಯುತದ್ವಯೇನ ಸೋsಷ್ಟವಿಂಶಕೈಃ ಶತೈರಪಿ ।

ಯಿಯಕ್ಷುರುಗ್ರರೂಪಿಣಂ ತ್ರಿಲೋಚನಂ ತ್ವಯಿ ಸ್ಥಿತೇ                 ೨೧.೭೮

 

ಓ ಕೃಷ್ಣನೇ, ನೀನಿರುವಾಗಲೇ, ಇಪ್ಪತ್ತೆರಡು ಸಾವಿರದ ಎಂಟುನೂರು ಜನ ಅರಸರನ್ನು  ಬಲಿ ಕೊಟ್ಟು, ಉಗ್ರರೂಪಿಯಾದ ರುದ್ರನನ್ನು ಕುರಿತು ಯಾಗ ಮಾಡಲು ಸಂಕಲ್ಪಿಸಿದ್ದಾನೆ.  

[ಭಾಗವತ: ಯೇ ತು ದಿಗ್ವಿಜಯೇ ತಸ್ಯ ಸನ್ನತಿಂ  ನಾSಯಯುರ್ನೃಪಾಃ ಪ್ರಸಹ್ಯ ರುದ್ಧಾಸ್ತೇನಾsಸನ್ನಯುತೇ ದ್ವೇ ಗಿರಿವ್ರಜೇ’  (೧೦.೭೮.೨೪)   ಇಪ್ಪತ್ತು ಸಾವಿರ ಮಂದಿಯನ್ನು ಪರ್ವತದ ತಪ್ಪಲಿನಲ್ಲಿ ಬಂಧಿಸಿದ್ದಾನೆ ಎಂದು ಪೂರ್ಣಾಂಕವಾಗಿ ಇಲ್ಲಿ  ಹೇಳಿದರೆ,  ಅಲ್ಲೇ ಮುಂದೆ - ‘ಅಯುತೇ ದ್ವೇ ಶತಾನ್ಯಷ್ಟೌ ಲೀಲಯಾ ಯುಧಿ ನಿರ್ಜಿತಾಃ । ವಿನಿರ್ಗತಾ ಗಿರಿದ್ರೋಣ್ಯಾ ಮಲಿನಾ ಮಲವಾಸಸಃ’ (೧೦.೮೧.೧) ಎಂದು ೨೨,೮೦೦ ಜನ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇನ್ನು  ಮಹಾಭಾರತದ ಸಭಾಪರ್ವದಲ್ಲಿ:  ಶಡಶೀತಿಃ ಸಮಾನೀತಾಃ ಶೇಷಾ ರಾಜಂಶ್ಚತುರ್ದಶ ಜರಾಸನ್ಧೇನ ರಾಜಾನಸ್ತತಃ ಕ್ರೂರಂ ಪ್ರವತ್ಸರ್ಯತೇ(೧೫.೨೬)  ಎಂದು ೮೬ ಜನರನ್ನು ಜರಾಸಂಧ ಬಂಧಿಸಿದ್ದಾನೆ, ಇನ್ನು ಹದಿನಾಕು ಜನ ಮಾತ್ರ ಬಾಕಿ ಇದ್ದಾರೆ ಎಂದು ಹೇಳಲಾಗಿದೆ. ಭಾಗವತದಲ್ಲಿ ಹೇಳಿರುವುದು ಒಟ್ಟು ಸಂಖ್ಯೆಯಾದರೆ,  ಮಹಾಭಾರತದಲ್ಲಿ ಹೇಳಿರುವುದು  ಶೇಕಡಾವಾರು. ಅಂದರೆ ಭಾಗವತದಲ್ಲಿ ಹೇಳಿದ ೨೨,೮೦೦ ಜನ  ೮೬%  ಇನ್ನು ೧೪%  ರಾಜರು ಬಂಧನಕ್ಕೆ ಬಾಕಿ ಉಳಿದಿದ್ದರು. ಒಟ್ಟು ಭರತಖಂಡದಲ್ಲಿ ಆಗ ಸುಮಾರು ೨೬,೫೦೦ ರಾಜರುಗಳಿದ್ದಿರಬಹುದು ಎಂದು ನಾವಿಲ್ಲಿ ಊಹಿಸಬಹುದು].

 

ವಿಮೋಚಯಸ್ವ ತಾನ್ ಪ್ರಭೋ ನಿಹತ್ಯ ಮಾಗಧೇಶ್ವರಮ್ ।

ಅವೈದಿಕಂ ಮಖಂ ಚ ತಂ ವಿಲುಮ್ಪ ಧರ್ಮ್ಮಗುಪ್ತಯೇ   ೨೧.೭೯

 

ಓ ಪ್ರಭುವೇ, ಜರಾಸಂಧನನ್ನು ಕೊಂದು ರಾಜರುಗಳನ್ನು ಬಿಡಿಸು. ಅವನು ಮಾಡುತ್ತಿರುವುದು ಅವೈದಿಕ ಯಜ್ಞ. ಧರ್ಮದ ರಕ್ಷಣೆಗಾಗಿ – ಆ ಯಾಗ ನಡೆಯದಂತೆ ನೋಡಿಕೋ.

[ಇಲ್ಲಿ ನಮಗೆ ತಿಳಿಯುವುದೇನೆಂದರೆ - ಇದು ಕೇವಲ ಪ್ರಭುತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷವಲ್ಲ, ಇದು  ಸಿದ್ಧಾಂತದ(ವೈದಿಕ v/s ಅವೈದಿಕ) ಸಂಘರ್ಷ.  ವೇದದಲ್ಲೂ ಈ ಕಥೆ ಸಂಕ್ಷಿಪ್ತವಾಗಿ ಒಗಟಿನ ರೂಪದಲ್ಲಿ ಕಾಣಸಿಗುತ್ತದೆ. ಶತಪಥ ಬ್ರಾಹ್ಮಣ ಹಾಗೂ ಐತರೇಯ ಬ್ರಾಹ್ಮಣದಲ್ಲಿ ಈ ಕುರಿತ ವಿವರವನ್ನು ಕಾಣಬಹುದು.   ‘ಯಜ್ಞ ಹಾರಿತು, ಮನುಷ್ಯನನ್ನು ಆಶ್ರಯಿಸಿಕೊಂಡಿತು, ದೇವತೆಗಳು ಒಪ್ಪಲಿಲ್ಲ, ಅಲ್ಲಿಂದ ಹಾರಿ ಹೋಯಿತು, ಗೋವಿನಲ್ಲಿ ಕುಳಿತಿತು, ಅದನ್ನೂ ದೇವತೆಗಳು ಒಪ್ಪಲಿಲ್ಲ. ಅಲ್ಲಿಂದಲೂ ಹಾರಿ ಹೋಯಿತು, ಕುದುರೆಯಲ್ಲಿ ಕುಳಿತಿತು, ಆಗ ಆಗಬಹುದು ಎಂದು ದೇವತೆಗಳು ಹೇಳಿದರು.... ಈ ರೀತಿಯ ಒಗಟಿನ ರೂಪದ ಪ್ರಸ್ತುತಿ ವೇದದಲ್ಲಿ ಕಾಣಬಹುದು. ವೇದದಲ್ಲಿ ನಿರೂಪಿತವಾದ ಕಥೆಯೇ ಮಹಾಭಾರತದಲ್ಲಿ ವಿಸ್ತಾರವಾಗಿ ಕಾಣಸಿಗುತ್ತದೆ].

 

ಇತೀರಿತೋsಥ ಸಾರಥಿಂ ನಿಶಾಮ್ಯ ಧರ್ಮ್ಮಜಸ್ಯ ಚ ।

ನಿಶಮ್ಯ ತದ್ವಚಸ್ತದಾ ಜಗಾಮ ಪಾಣ್ಡವಾಲಯಮ್        ೨೧.೮೦

 

ಈ ರೀತಿಯಾಗಿ ರಾಜರ ಸಾರಥಿ ಹೇಳಲ್ಪಟ್ಟ ನಂತರ ಶ್ರೀಕೃಷ್ಣ  ಧರ್ಮರಾಜನ ಸಾರಥಿಯ ಮಾತನ್ನೂ ಕೇಳಿ ಇಂದ್ರಪ್ರಸ್ಥಕ್ಕೆ ತೆರಳಿದ. (ಜರಾಸಂಧನೂ ಒಂದು ಯಾಗಕ್ಕೆ ತಯಾರಿ ನಡೆಸಿದ್ದಾನೆ, ಅದೇ ಸಮಯದಲ್ಲಿ ಇತ್ತ ಪಾಂಡವರೂ ಕೂಡಾ ಒಂದು ಯಾಗದ ಸಂಕಲ್ಪ ಮಾಡುತ್ತಿದ್ದಾರೆ. ದೂತರಿಂದ ಎರಡನ್ನೂ ಕೇಳಿಸಿಕೊಂಡ ಶ್ರೀಕೃಷ್ಣ ಪಾಂಡವರ ಕಡೆ ಹೊರಟ].

Friday, November 26, 2021

Mahabharata Tatparya Nirnaya Kannada 21: 65-71

 

ಸೇವಕಾ ಬ್ರಹ್ಮಣಶ್ಚೈವ ದೇವಾ ವೇದಾಶ್ಚ ಸರ್ವಶಃ ।

ಶಕ್ರಸ್ಯ ಮುನಯಃ ಸರ್ವೇ ಹರಿಶ್ಚನ್ದ್ರಶ್ಚ ಭೂಮಿಪಃ          ೨೧.೬೫

 

ಬ್ರಹ್ಮಲೋಕದಲ್ಲಿ ದೇವತೆಗಳು, ವೇದಾಭಿಮಾನಿಗಳು ಎಲ್ಲರೂ ಚತುರ್ಮುಖನ ಸೇವಕರಾಗಿದ್ದಾರೆ ಹಾಗೆಯೇ  ಇಂದ್ರನ ಲೋಕದಲ್ಲಿ ಎಲ್ಲಾ ಮುನಿಗಳೂ, ರಾಜನಾದ ಹರಿಶ್ಚಂದ್ರನೂ ಇದ್ದಾನೆ.

 

ಅಖಿಲಾ ಅಪಿ ರಾಜಾನಃ ಪಾಣ್ಡುಶ್ಚಾಸ್ಮತ್ಪಿತಾ ಮುನೇ ।

ಯಮಸ್ಯೈವಾನುಗಾಃ ಪ್ರೋಕ್ತಾ ರಾಜಭಿಸ್ತೈರ್ಯ್ಯಮೇನ ಚ          ೨೧.೬೬

 

ಉಪಾಸ್ಯಮಾನೋ ಭಗವಾನ್ ರಾಮೋ ಯಮಸಭಾತಳೇ ।

ಉಕ್ತ ಇನ್ದ್ರೇಣ ಚೋಪಾಸ್ಯೇ ವಾಮನಾತ್ಮಾ ಜನಾರ್ದ್ದನಃ          ೨೧.೬೭

 

ಭೂಮಂಡಲವನ್ನು ಆಳಿದ ಎಲ್ಲಾ ರಾಜರೂ, ನನ್ನ ತಂದೆಯಾದ ಪಾಣ್ಡುವೂ ಕೂಡಾ ಯಮನ ಲೋಕದಲ್ಲಿ ಇದ್ದಾರೆ ಎಂದು ಹೇಳಿದಿರಿ. (ಯಮನ ಲೋಕದಲ್ಲಿ ನರಕ ಇರುವ ಹಾಗೇ, ಭೋಗಸ್ಥಾನವೂ ಇದೆ. ಆ ಭೋಗಸ್ಥಾನದಲ್ಲಿ ಎಲ್ಲಾ ರಾಜರಿದ್ದಾರೆ, ಅಲ್ಲೇ ಪಾಣ್ಡು ಕೂಡಾ ಇದ್ದಾನೆ).

ಆ ರಾಜರಿಂದಲೂ, ಯಮನಿಂದಲೂ, ಭಗವಾನ್ ರಾಮನು ಯಮಲೋಕದಲ್ಲಿ ಉಪಾಸ್ಯನಾಗುತ್ತಿದ್ದಾನೆ. ಇಂದ್ರಲೋಕದಲ್ಲಿ ವಾಮನರೂಪಿಯಾದ ಜನಾರ್ದನನನ್ನು ಎಲ್ಲರೂ ಆರಾಧನೆ  ಮಾಡುತ್ತಿದ್ದಾರೆ ಅಂತಲೂ ಹೇಳಿದಿರಿ. (ಮಹಾಭಾರತದ ಸಭಾಪರ್ವದಲ್ಲಿ ನೋಡಿದಾಗ ಪರಶುರಾಮನೂ ಯಮಲೋಕದಲ್ಲಿದ್ದಾನೆ, ದಾಶರಥೀರಾಮನೂ ಅಲ್ಲೇ ಇದ್ದಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಅವರು ಅಲ್ಲಿ ಉಪಾಸ್ಯರಾಗಿದ್ದಾರೆ ಎಂದು ತಿಳಿಯಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಉಪಾಸಕರಾಗಿ ಯಮ ಹಾಗೂ ಇತರ ರಾಜರಿದ್ದಾರೆ).

 

ಪ್ರಾದುರ್ಭಾವಾಶ್ಚ ನಿಖಿಲಾ ಬ್ರಹ್ಮಣೋಪಾಸಿತಾಃ ಸದಾ ।

ವರುಣಸ್ಯಾನುಗಾ ನಾಗಾಸ್ತತ್ರ ಮತ್ಸ್ಯಾಕೃತಿರ್ಹರಿಃ                      ೨೧.೬೮

 

ಬ್ರಹ್ಮಲೋಕದಲ್ಲಿ ಭಗವಂತನ ಎಲ್ಲಾ ಅವತಾರಗಳೂ ಸದಾ ಉಪಾಸಿಸಲ್ಪಡುತ್ತವೆ. ವರುಣನ ಸಭೆಯಲ್ಲಿ (ವರುಣಲೋಕದಲ್ಲಿ) ಮತ್ಸ್ಯಾರೂಪಿಯಾದ ನಾರಾಯಣ ಉಪಾಸ್ಯನಾಗುತ್ತಿದ್ದಾನೆ.

 

ಗನ್ಧರ್ವಾ ಧನದಸ್ಯಾಪಿ ತತ್ರ ಕಲ್ಕೀ ಹರಿಃ ಪ್ರಭುಃ ।

ರುದ್ರಸ್ಯೋಗ್ರಾಣಿ ಭೂತಾನಿ ನೃಸಿಂಹಾತ್ಮಾ ಶಿವೇನ ಚ             ೨೧.೬೯

 

ಗಂಧರ್ವರು ಕುಬೇರನ ಭೃತ್ಯರಾಗಿದ್ದಾರೆ. ಅಲ್ಲಿ ನಾರಾಯಣನು ಕಲ್ಕೀ ರೂಪದಿಂದ ಉಪಾಸ್ಯನಾಗಿದ್ದಾನೆ. ಭಯಂಕರವಾಗಿರುವ ಭೂತಗಳು ರುದ್ರನ ಭೃತ್ಯರು. ಶಿವನಿಂದ ನರಸಿಂಹ ದೇವರು ಉಪಾಸ್ಯರಾಗಿದ್ದಾರೆ.

 

ಉಪಾಸ್ಯತೇ ಸದಾ ವಿಷ್ಣುರಿತ್ಯಾದ್ಯುಕ್ತಂ ತ್ವಯಾsನಘ ।

ಸರ್ವರತ್ನಸ್ಥಲಾನ್ ದಿವ್ಯಾನ್ ದೇವಲೋಕಾನ್ ಪ್ರಭಾಷತಾ      ೨೧.೭೦

 

ತತ್ರ ಮೇ ಸಂಶಯೋ ಭೂಯಾನ್ ಹರಿಶ್ಚನ್ದ್ರಃ ಕಥಂ ನೃಪಃ ।

ಐನ್ದ್ರಂ ಸಭಾತಳಂ ಪ್ರಾಪ್ತಃ ಪಾಣ್ಡುರ್ನ್ನಾಸ್ಮತ್ಪಿತಾ ಮುನೇ         ೨೧.೭೧

 

ಓ ಪಾಪ ರಹಿತರಾದ ನಾರದರೇ, ನೀವು ಎಲ್ಲಾ ಸಭೆಗಳನ್ನು ವರ್ಣಿಸುತ್ತಾ ಅಲ್ಲಿ ಯಾವಾಗಲೂ ವಿಷ್ಣುವು ಆರಾಧ್ಯನಾಗಿದ್ದಾನೆ ಎನ್ನುವುದನ್ನು ತಿಳಿಸಿದಿರಿ.  ದೇವತೆಗಳ ಲೋಕವನ್ನೂ, ಅಲ್ಲಿರುವ ಅಲೌಕಿಕವಾದ ರತ್ನಮಯ ಸ್ಥಳಗಳನ್ನೂ ವರ್ಣಿಸಿದಿರಿ. ಎಲ್ಲವೂ ಸರಿ, ಆದರೆ ಈ ವಿಚಾರದಲ್ಲಿ ಒಂದು ದೊಡ್ಡ ಸಂಶಯ ನನ್ನನ್ನು ಕಾಡುತ್ತಿದೆ. ರಾಜನಾಗಿರುವ ಹರಿಶ್ಚನ್ದ್ರನು  ಇಂದ್ರಲೋಕದಲ್ಲಿದ್ದಾನೆ. ಆದರೆ ನಮ್ಮ ಅಪ್ಪನಾದ ಪಾಂಡುವು ಏಕೆ ಅಲ್ಲಿಲ್ಲ(ಹರಿಶ್ಚಂದ್ರ ಪಾಂಡುವಿಗಿಂತ ಯಾವ ಲೆಕ್ಕದಲ್ಲೂ ಮಿಗಿಲಾದವನಲ್ಲ. ಅವನು ಚಕ್ರವರ್ತಿಯಾಗಿದ್ದ  ಅಷ್ಟೇ.  ಆದರೆ ಈಗ ಮೇಲಿನ ಲೋಕದಲ್ಲಿ ಅವನು ಪಾಂಡುವಿಗಿಂತ ಎತ್ತರದ ಲೋಕದಲ್ಲಿದ್ದಾನೆ. ಏಕೆ ಹೀಗೆ ಎಂದು ನಾರದರನ್ನು ಕುರಿತು ಯುಧಿಷ್ಠಿರ ಪ್ರಶ್ನೆ ಮಾಡಿದ).  

[ಎಲ್ಲಾ ಸಭೆಗಳು, ಅಲ್ಲಿನ ಪರಮಾತ್ಮನ ರೂಪ ಹಾಗೂ ಅಲ್ಲಿರುವ ಉಪಾಸಕರು, ಅಲ್ಲಿರುವ ಅಲೌಕಿಕವಾದ ರತ್ನಗಳು,  ಹೀಗೆ ಶ್ರೇಷ್ಠವಾದ ಸಭೆಗಳನ್ನು ವರ್ಣಿಸುವ ಪರ್ವ ಮಹಾಭಾರತದ ಸಭಾಪರ್ವ. ಇದು ನಿಜವಾದ ಸಭಾಪರ್ವದ ನಿರ್ಣಯ].