ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 24, 2019

Mahabharata Tatparya Nirnaya Kannada 13133_13138

ನಿತ್ಯಾತಿದುಃಖಮನಿವೃತ್ತಿ ಸುಖವ್ಯಪೇತಮನ್ಧಂ ತಮೋ ನಿಯತಮೇತಿ ಹರಾವಭಕ್ತಃ
ಭಕ್ತೋsಪಿ ಕಞ್ಜಜಗಿರೀಶಮುಖೇಷು ಸರ್ವಧರ್ಮ್ಮಾರ್ಣ್ಣವೋsಪಿ ನಿಖಿಲಾಗಮನಿರ್ಣ್ಣಯೇನ ॥೧೩.೧೩೩

ಪರಮಾತ್ಮನಲ್ಲಿ ಭಕ್ತನಾಗದೇ, ಪರಮಾತ್ಮನನ್ನು ದ್ವೇಷಮಾಡಿ,  ಬ್ರಹ್ಮಾ, ರುದ್ರ, ಮೊದಲಾದವರಲ್ಲಿ ಭಕ್ತನಾದರೂ,  ಪುಣ್ಯಕೆಲಸಗಳನ್ನು ಮಾಡುತ್ತಿದ್ದರೂ ಕೂಡಾ,  ಸಮಸ್ತ ವೇದಗಳ ನಿರ್ಣಯದಂತೆ, ನಿಶ್ಚಯವಾಗಿ ಮರಳಿ ಬರಲಾಗದ, ಆತ್ಯಂತಿಕವಾಗಿರುವ ದುಃಖವುಳ್ಳ   ಅನ್ಧಂತಮಸ್ಸನ್ನು ಖಂಡಿತವಾಗಿ ಹೊಂದುತ್ತಾನೆ.
[ಪರಮಾತ್ಮನಲ್ಲಿ ಅಭಕ್ತನಾಗಿ, ಪರಮಾತ್ಮನನ್ನು ದ್ವೇಷಮಾಡಿ,  ಉಳಿದ ಯಾರಲ್ಲಿ ಭಕ್ತನಾದರೂ ಕೂಡಾ, ಅದು ಪ್ರಯೋಜನಕ್ಕೆ ಬರುವುದಿಲ್ಲ, ಅಂತವರು ಕೊನೆಗೆ ಅನ್ಧಂತಮಸ್ಸನ್ನೇ ಹೊಂದುತ್ತಾರೆ].   

ಯೋ ವೇತ್ತಿ ನಿಶ್ಚಿತಮತಿರ್ಹರಿಮಬ್ಜಜೇಶಪೂರ್ವಾಖಿಲಸ್ಯ ಜಗತಃ ಸಕಲೇsಪಿ ಕಾಲೇ ।
ಸೃಷ್ಟಿಸ್ಥತಿಪ್ರಳಯಮೋಕ್ಷದಮಾತ್ಮತನ್ತ್ರಂ ಲಕ್ಷ್ಮ್ಯಾ ಅಪೀಶಮತಿಭಕ್ತಿಯುತಃ ಸ ಮುಚ್ಯೇತ್ ॥೧೩.೧೩೪

ಯಾರು ಪರಮಾತ್ಮನನ್ನು  ಬ್ರಹ್ಮ-ರುದ್ರರೇ ಮೊದಲಾಗಿರುವ ಈ ಪ್ರಪಂಚಕ್ಕೆ,  ಎಲ್ಲಾ ಕಾಲದಲ್ಲೂ, ಸೃಷ್ಟಿ-ಸ್ಥಿತಿ-ಪ್ರಳಯ-ಮೋಕ್ಷ ಇವುಗಳನ್ನು ಕೊಡುವಂತಹ ‘ಸ್ವತಂತ್ರ’ ಎಂದೂ,  ಲಕ್ಷ್ಮಿಗೂ ಕೂಡಾ ‘ಈಶಾ’ ಎಂದೂ, ನಿಶ್ಚಯವಾದ ಬುದ್ಧಿಯುಳ್ಳವನಾಗಿ ತಿಳಿಯುತ್ತಾನೋ, ಅಂತಹ, ಪರಮಾತ್ಮನಲ್ಲಿ ಭಕ್ತಿಯುಳ್ಳವನು ಮುಕ್ತನಾಗುತ್ತಾನೆ.

ತಸ್ಮಾದನನ್ತಗುಣಪೂರ್ಣ್ಣಮಮುಂ ರಮೇಶಂ ನಿಶ್ಚಿತ್ಯ ದೋಷರಹಿತಂ ಪರಯೈವ ಭಕ್ತ್ಯಾ ।
ವಿಜ್ಞಾಯ ದೈವತಗಣಾಶ್ಚ ಯಥಾ ಕ್ರಮೇಣ ಭಕ್ತಾ ಹರೇರಿತಿ ಸದೈವ ಭಜೇತ ಧೀರಃ೧೩.೧೩೫

ಆ ಕಾರಣದಿಂದ, ಬುದ್ಧಿವಂತನು,  ರಮಾಪತಿಯಾದ ಈ ಶ್ರೀಕೃಷ್ಣನನ್ನು, ಅನಂತ ಗುಣಗಳಿಗೆ ಪೂರ್ಣನಾಗಿರುವ ಲಕ್ಷ್ಮಿಗೂ ಒಡೆಯ ಎಂದೂ, ದೋಷಗಳಿಂದ ರಹಿತ ಎಂದೂ ನಿಶ್ಚಯಿಸಿ, ಸರ್ವೋತ್ಕೃಷ್ಟವಾದ ಭಕ್ತಿಯಿಂದ, ಎಲ್ಲಾ ದೇವತೆಗಳನ್ನೂ ಕ್ರಮವಾಗಿ(ತಾರತಮ್ಯಕ್ರಮದಲ್ಲಿ) ತಿಳಿದು, ಅವರೂ ಯಾವಾಗಲೂ ಪರಮಾತ್ಮನ ಭಕ್ತರೇ ಎಂದು ತಿಳಿದು ಹೊಂದಬೇಕು.
( ಈ ಕಥೆಯಿಂದ ನಮಗೆ ತಿಳಿದುಬರುವುದೇನೆಂದರೆ : ದೇವರು ಎಲ್ಲರ ಒಡೆಯ. ಉಳಿದ ಸಮಸ್ತ ದೇವತೆಗಳೂ ಕೂಡಾ ಭಗವಂತನ ಭಕ್ತರು ಎನ್ನುವ ಸತ್ಯ).

ನಿಹತ್ಯ ಕಂಸಮೋಜಸಾ ವಿಧಾತೃಶಮ್ಭುಪೂರ್ವಕೈಃ ।
ಸ್ತುತಃ ಪ್ರಸೂನವರ್ಷಿಭಿರ್ಮ್ಮುಮೋದ ಕೇಶವೋsಧಿಕಮ್ ॥೧೩.೧೩೬॥

ಹೀಗೆ ಕಂಸನನ್ನು ತನ್ನ ಶಕ್ತಿಯಿಂದ ಸಂಹಾರ ಮಾಡಿ, ಹೂವಿನ ಮಳೆಗರೆಯುವ ಬ್ರಹ್ಮ-ರುದ್ರ ಮೊದಲಾಗಿರುವ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟ  ಕೇಶವನು ಅತ್ಯಂತ ಸಂತಸಪಟ್ಟ.

ಸದೈವ ಮೋದರೂಪಿಣೋ ಮುದೋಕ್ತಿರಸ್ಯ ಲೌಕಿಕೀ
ಯಥೋದಯೋ ರವೇರ್ಭವೇತ್ ಸದೋದಿತಸ್ಯ ಲೋಕತಃ ॥೧೩.೧೩೭

ಆನಂದವೇ ಮೈವೆತ್ತು ಬಂದಿರುವ  ಪರಮಾತ್ಮ  ‘ಸಂತೋಷಗೊಂಡ’ ಎಂದು ಹೇಳುವ ಮಾತು ಕೇವಲ  ಲೌಕಿಕ. ಹೇಗೆ ಯಾವಾಗಲೂ ಉದಿಸಿಕೊಂಡೇ ಇರುವ ಸೂರ್ಯನಿಗೆ ಲೋಕದ ದೃಷ್ಟಿಯಲ್ಲಷ್ಟೇ ಉದಯವೋ ಹಾಗೆ.
[ಇಲ್ಲಿ ಆಚಾರ್ಯರು ‘ಸೂರ್ಯ ಎಂದೂ ಮುಳುಗುವುದಿಲ್ಲ, ಆದರೆ ಭೂಮಿಯಲ್ಲಿರುವ ನಮಗೆ ಮಾತ್ರ ಸೂರ್ಯ ಉದಯಿಸಿದಂತೆ ಹಾಗು ಮುಳುಗಿದಂತೆ ಕಾಣುತ್ತಾನೆ’ ಎಂಬ ಮಾತನ್ನು ೮೦೦ ವರ್ಷಗಳ ಹಿಂದೆಯೇ ಹೇಳಿರುವುದನ್ನು ಓದುಗರು ಗಮನಿಸಬೇಕು.
ಭಗವಂತ ಸದಾ ಆನಂದ ಸ್ವರೂಪ. ಅವನ ಆನಂದ  ಯಾವುದೋ ಒಂದು ಕ್ರಿಯೆಯ ಮಿತಿಯಲ್ಲಿರುವುದಿಲ್ಲ. ಆದರೆ ಮಾನವರಾಗಿರುವ ನಮಗೆ ಹಾಗೆ ಕಾಣುತ್ತದೆ ಅಷ್ಟೇ].

ಅನನ್ತಚಿತ್ಸುಖಾರ್ಣ್ಣವಃ ಸದೋದಿತೈಕರೂಪಕಃ ।
ಸಮಸ್ತದೋಷವರ್ಜ್ಜಿತೋ ಹರಿರ್ಗ್ಗುಣಾತ್ಮಕಃ ಸದಾ ॥೧೩.೧೩೮॥

ಭಗವಂತನು ಎಣೆಯಿರದ ಜ್ಞಾನ-ಆನಂದಗಳಿಗೆ ಕಡಲಿನಂತಿರುವವನು. ಯಾವಾಗಲೂ ಒಂದೇ ತರನಾಗಿರುವ, ಸಮಸ್ತ ದೋಷ ರಹಿತನಾಗಿರುವ ಶ್ರೀಹರಿಯು, ಯಾವಾಗಲೂ ಗುಣವೇ ಮೈವೆತ್ತುಬಂದವನಾಗಿದ್ದಾನೆ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಕಂಸವಧೋ ನಾಮ ತ್ರಯೋದಶೋsಧ್ಯಾಯಃ ॥


ಶ್ರೀಕೃಷ್ಣಾರ್ಪಣಮಸ್ತು



Mahabharata Tatparya Nirnaya Kannada 13127_13132


ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ ಕೃಷ್ಣಮ್ ।
ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ ವೀರಮ್೧೩.೧೨೭

ತನ್ನ ಸೈನ್ಯವು ಸಂಪೂರ್ಣವಾಗಿ ನಾಶವಾಗಲು ಕಂಸನು, ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ಕೃಷ್ಣನನ್ನು ಎದುರುಗೊಳ್ಳಲು ಇಚ್ಛಿಸಿದನು. ಆದರೆ ಆಗಲೇ ಶ್ರೀಕೃಷ್ಣನು ತನ್ನ ಮಂಚದ(ಆಸನದ) ಮೇಲ್ಗಡೆ ತನ್ನನ್ನು ಎದುರುಗೊಂಡು ಬರುತ್ತಿರುವುದನ್ನು ಆತ ಬೆದರುತ್ತಾ ಕಂಡನು. (ಯಾವಾಗ ಕಂಸ ಕತ್ತಿ-ಗುರಾಣಿಗಳನ್ನು ಹಿಡಿದು ಕೃಷ್ಣನ ಎದುರುಗಡೆ ಹೋಗಿ ಅವನನ್ನು ಕೊಲ್ಲಬೇಕು ಎಂದು ಯೋಚನೆ ಮಾಡುತ್ತಿದ್ದನೋ, ಆಗಲೇ ಕೃಷ್ಣ ಅವನ ಬಳಿ ಬಂದುಬಿಟ್ಟಿದ್ದ)

ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ ಭಗವಾನ್ ಪ್ರಸಹ್ಯ   ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ೧೩.೧೨೮

ಗಿಡುಗದ ವೇಗದಂತೆ ವೇಗವುಳ್ಳ, ಅವಿಚ್ಛಿನ್ನನಾಗಿ ತನ್ನೆದುರು ಹಾರಿಬರುತ್ತಿರುವ ಕಂಸನ ಎಲ್ಲಾ ವೇಗವನ್ನು ನಾಶಮಾಡಿದ ಪರಮಾತ್ಮನು, ಅವನ ತಲೆಯನ್ನು ಎಡಗೈಯಿಂದ ಹಿಡಿದು, ಕೇಶವನ್ನು ಸೆಳೆದು,  ಬಲಗೈಯಿಂದ ಕತ್ತಿನಲ್ಲಿ ಹೊಡೆದನು.

ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ ನರಸಿಂಹಕರಾಗ್ರಸಂಸ್ಥಃ ॥೧೩.೧೨೯

ಪುರುಷಶ್ರೇಷ್ಠನಾದ ಕೃಷ್ಣನ ಕೈಯ ಅಳತೆಯೊಳಗಡೆ ಇದ್ದ ಕಂಸನು, ಕುಂಡಲವನ್ನು ಕಳೆದುಕೊಂಡ ಕಿವಿಯುಳ್ಳವನಾಗಿ, ಎದೆಯಲ್ಲಿ ಧರಿಸಿದ ಆಭರಣವನ್ನೂ ಬಿಟ್ಟು, ಜಾರಿಹೋದ ಬಟ್ಟೆಯುಳ್ಳ ಕಟಿ-ಊರುಗಳ ಮಧ್ಯ ಪ್ರದೇಶದಿಂದಲೂ ಅತ್ಯಂತ ಶೋಚನೀಯ ರೂಪವುಳ್ಳವನಾದನು.

ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್ ।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ ಪ್ರಹಾರಮ್ ॥೧೩.೧೩೦॥

ದೇವತೆಗಳಿಗೂ ಒಡೆಯನಾದ, ಅನಂತ ಶಕ್ತಿಯುಳ್ಳ ಕೃಷ್ಣನು, ಬೇರೊಬ್ಬರಿಂದ ಗೆಲ್ಲಲಾಗದ, ಅತಿವೀರ್ಯ-ಬಲದಿಂದ ಕೂಡಿದವನಾಗಿರುವ, ಬ್ರಹ್ಮ-ರುದ್ರರ ವರದಿಂದ ಅವಧ್ಯನಾದ ಕಂಸನನ್ನು, ಉತ್ಕೃಷ್ಟವಾದ ಆ ಆಸನದಿಂದ ಸೆಳೆದು,  ಭೂಮಿಯಲ್ಲಿ ಬೀಳಿಸಿ ಕಾಲಿನಿಂದ ಒದ್ದನು.

ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು ಸುರೇಷ್ವನನ್ತಃ ॥೧೩.೧೩೧॥

ಆಗ ಕಂಸನ ಶರೀರದಲ್ಲಿ ಪರಮಾತ್ಮನ ಬಂಧುವಾಗಿರುವ ಯಾವ ಮುಖ್ಯಪ್ರಾಣನಿದ್ದನೋ, ಅಂತಹ ಮುಖ್ಯಪ್ರಾಣನು(ವಾಯುವು), ಭಗವಂತನ  ಶರೀರವನ್ನು ಆಶ್ರಯಿಸಿದ. ಬ್ರಹ್ಮಾದಿಗಳೆಲ್ಲರೂ ನೋಡುತ್ತಿರಲು, ಆ ದೇಹದಲ್ಲಿರತಕ್ಕಂತಹ ಪಾಪಿಷ್ಠನಾದ ದೈತ್ಯನನ್ನು ಪರಮಾತ್ಮನು ಸೆಳೆದನು.
[ಇದೆಲ್ಲವೂ ದೇವತೆಗಳಿಗೆ ಮಾತ್ರ ಗೋಚರವಾಯಿತು. ಉಳಿದವರಿಗಾಗಲಿಲ್ಲ. ಉಳಿದ ಸಾಮಾನ್ಯರು ಕಂಸ ಸಾಯುತ್ತಿರುವುದನ್ನಷ್ಟೇ ನೋಡಿದರು].

ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ ಸಹಿತಃ ಸಮಸ್ತೈಃ
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ ಚೈವಮುಪಯಾನ್ತಿ ಹರಾವಭಕ್ತಾಃ ೧೩.೧೩೨    

ಕೆಟ್ಟಬುದ್ಧಿಯುಳ್ಳ ಆ ಕಂಸನು, ಸರ್ವಜಗದೇಕಗುರುವಾಗಿರುವ ಪರಮಾತ್ಮನ ಮೇಲಿನ ದ್ವೇಷದಿಂದಾಗಿ, ಈಮೊದಲೇ ಪರಮಾತ್ಮನಿಂದ ಕೊಲ್ಲಲ್ಪಟ್ಟ (ಪೂತನಿ ಮೊದಲಾದ ಎಲ್ಲಾ)ಸ್ವಕೀಯರಿಂದ  ಕೂಡಿಕೊಂಡು, ಅನ್ಧಂತಮಸ್ಸನ್ನು ಕುರಿತು ತೆರಳಿದ. 
ಉಳಿದ, ಪರಮಾತ್ಮನಲ್ಲಿ ದ್ವೇಷ ಉಳ್ಳವರೂ ಕೂಡಾ, ಹೀಗೆಯೇ ಅನ್ಧಂತಮಸ್ಸಿಗೆ ಹೋಗುತ್ತಾರೆ.

Mahabharata Tatparya Nirnaya Kannada 13123_13126


ತಾಭ್ಯಾಂ ಹತಾನಭಿಸಮೀಕ್ಷ್ಯ ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩

ಕೃಷ್ಣ-ಬಲರಾಮರಿಂದ ತನ್ನವರೆಲ್ಲರೂ ಕೊಲ್ಲಲ್ಪಟ್ಟದ್ದನ್ನು ಕಂಡ  ಪಾಪಿಷ್ಠನಾದ  ಕಂಸನು, ರುದ್ರನ ವರದಿಂದ ರಕ್ಷಣೆಯನ್ನು ಹೊಂದಿದ, ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲದ, ಉತ್ಕೃಷ್ಟವಾದ ವೀರ್ಯವುಳ್ಳ ತನ್ನ ಸೈನ್ಯಕ್ಕೆ, ರಾಮ-ಕೃಷ್ಣರನ್ನು ಹೊರಹಾಕಿ ಕಠಿಣವಾದ ಶಿಕ್ಷೆಯನ್ನು ಕೊಡುವಂತೆ ಆಜ್ಞೆಮಾಡಿದ.

ಶ್ರುತ್ವೈವ ರಾಜವಚನಂ ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪

ಕಂಸನ ಆಜ್ಞೆಯನ್ನು ಕೇಳಿದಕೂಡಲೇ, ನಾಶವಾಗದ ಆ ಅಕ್ಷೋಹಿಣಿಯ ಹತ್ತರ ಜೋಡಿಯ (ಇಪ್ಪತ್ತು ಅಕ್ಷೋಹಿಣಿ ಸಂಖ್ಯೆಯಿಂದ ಪರಿಮಿತವಾದ) ಮಹಾಪರಾಕ್ರಮಿಯಾದ, ವಿಧವಿಧವಾದ ಅಸ್ತ್ರವನ್ನು ಧರಿಸಿದ  ಆ ಸೈನ್ಯವು,  ಕೃಷ್ಣ-ಬಲರಾಮರನ್ನು ಸುತ್ತುವರಿಯಿತು. ನರಿಗಳ ಸಮೂಹ  ಸಿಂಹವನ್ನು ಸುತ್ತುವರಿದರೆ ಹೇಗಿರುತ್ತದೋ ಹಾಗೆ.

ಜಾನನ್ನಪೀಶ್ವರಮನನ್ತಬಲಂ ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್೧೩.೧೨೫

ಇಂದ್ರನು ಸರ್ವಸಮರ್ಥನಾದ ಕೃಷ್ಣನನ್ನು ಅನಂತ ಬಲವುಳ್ಳವನೆಂದು ತಿಳಿದಿದ್ದರೂ ಕೂಡಾ,  ದೇವರ ಸೇವೆಗಾಗಿ,  ಆಯುಧದಿಂದ ಕೂಡಿದ, ಕೃಷ್ಣಸಂಬಂಧಿಯಾದ(ಭಗವಂತನಿಂದ ಇಂದ್ರನಿಗೆ ನೀಡಲ್ಪಟ್ಟ)  ರಥವನ್ನು ಕಳುಹಿಸಿಕೊಟ್ಟ. ಇಂದ್ರನ ಈ ಸೇವೆ ಹೇಗಿತ್ತೆಂದರೆ: ಪೂರ್ಣವಾದ ಜಲವುಳ್ಳ ಸಮುದ್ರವನ್ನು ಅರ್ಘ್ಯದಿಂದ ಹೇಗೆ  ಪೂಜಿಸುತ್ತಾರೋ ಹಾಗಿತ್ತು(ಅಂದರೆ:  ಹೇಗೆ ಸಮುದ್ರದ ಜಲವನ್ನೇ ತಮ್ಮ  ಕರ ಸಂಪುಟದಿಂದ ತೆಗೆದು  ಅರ್ಘ್ಯ ನೀಡಿ ಹೇಗೆ ಪೂರ್ಣವನ್ನಾಗಿ ಮಾಡುತ್ತಾರೋ ಹಾಗೆ)

ಸ್ವಸ್ಯನ್ದನಂ ತು ಭಗವಾನ್ ಸ ಮಹೇನ್ದ್ರದತ್ತಮಾರುಹ್ಯ ಸೂತವರಮಾತಲಿಸಙ್ಗೃಹೀತಮ್
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬

ಪರಮಾತ್ಮನು,  ಸಾರಥಿಗಳಲ್ಲೇ ಅಗ್ರಗಣ್ಯನಾದ ಮಾತಲಿಯಿಂದ[1] ತರಲ್ಪಟ್ಟ,  ಇಂದ್ರನಿಂದ ನೀಡಲ್ಪಟ್ಟ,  ತನ್ನದೇ ಆದ ರಥವನ್ನು ಏರಿ, ನಾನಾ ಆಯುಧಗಳೆಂಬ ಉಗ್ರವಾದ ಕಿರಣವುಳ್ಳವನಾಗಿ,  ಹೇಗೆ ಸೂರ್ಯ  ಕತ್ತಲನ್ನು ನಾಶಪಡಿಸುತ್ತಾನೋ ಹಾಗೆ ಕಂಸನ  ಆ ಎಲ್ಲಾ ಸೈನ್ಯವನ್ನು  ಕೂಡಲೇ ನಾಶಮಾಡಿದನು.


[ಮಹಾಭಾರತ ಸಭಾಪರ್ವದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಏಷ ಶಕ್ರರಥೇ ತಿಷ್ಠಂಸ್ತಾನ್ಯನೀಕಾನಿ ಭಾರತ   ವ್ಯಧಮದ್ ಭೋಜಪುತ್ರಸ್ಯ  ಮಹಾಭ್ರಾಣೀವ ಮಾರುತಃ’(೫೪.೩೦)    ‘ಕಶ್ಚ ನಾರಾಯಣಾದನ್ಯಃ  ಸರ್ವರತ್ನವಿಭೂಷಿತಮ್ ರಥಮಾದಿತ್ಯಸಙ್ಕಾಶಾಮಾತಿಷ್ಠೇತ  ಶಚೀಪತೇಃ  ಕಸ್ಯ ಚಾಪ್ರತಿಮೋ ಯಂತಾ ವಜ್ರಪಾಣೇಃ ಪ್ರಿಯಃ ಸಖಾ ಮಾತಲಿಃ  ಸಙ್ಗ್ರಹೀತಾ  ಸ್ಯಾದನ್ಯತ್ರ  ಪುರುಷೋತ್ತಮಾತ್'(೫೪.೧೫-೧೬)
(ನಾರಾಯಣನಲ್ಲದೇ ಯಾರು ತಾನೆ ಇಂದ್ರನ ರಥವನ್ನು ಏರಿಯಾರು?  ಮಾತಲಿಯೂ ಕೂಡಾ ಸೇವೆ ಮಾಡಬೇಕು ಎಂಬ ಮನೋಭಾವದಿಂದ ರಥವನ್ನು ನಡೆಸಿದ. ಅಂತಹ ರಥವನ್ನು ಭಗವಂತನಲ್ಲದೆ ಬೇರೆ ಯಾರು ಏರಲು ಸಾಧ್ಯ]. 





[1] ಇಂದ್ರನ ಸಾರಥಿ

Sunday, August 18, 2019

Mahabharata Tatparya Nirnaya Kannada 13117_13122


ರಙ್ಗಪ್ರವಿಷ್ಟಮಭಿವೀಕ್ಷ್ಯ ಜಗಾದ ಮಲ್ಲಃ ಕಂಸಪ್ರಿಯಾರ್ತ್ಥಮಭಿಭಾಷ್ಯ ಜಗನ್ನಿವಾಸಮ್ ।
ಚಾಣೂರ ಇತ್ಯಭಿಹಿತೋ ಜಗತಾಮವದ್ಧ್ಯಃ ಶಮ್ಬುಪ್ರಸಾದತ ಇದಂ ಶೃಣು ಮಾಧವೇತಿ ೧೩.೧೧೭

ರಂಗದ ಒಳಹೊಕ್ಕ ಶ್ರೀಕೃಷ್ಣನನ್ನು ಎದುರುಗೊಂಡ ಚಾಣೂರ ಎಂದು ಪ್ರಖ್ಯಾತನಾದ, ಶಿವನ ವರದಿಂದಾಗಿ ಅವಧ್ಯನಾದ   ಮಲ್ಲನು, ಕಂಸನ ಪ್ರೀತಿಗಾಗಿ,     ‘ಮಾಧವಾ’ ಎಂದು ಶ್ರೀಕೃಷ್ಣನನ್ನು ಸಂಬೋಧಿಸಿ,  “ಇದನ್ನು ಕೇಳು’’  ಎಂದು ಮಾತನಾಡುತ್ತಾನೆ. (ಮಧುವಿನ ವಂಶದಲ್ಲಿ ಬಂದವರನ್ನು ಮಾಧವರು ಎಂದು ಕರೆಯುತ್ತಾರೆ. ಇಲ್ಲಿ ‘ಮಾಧವಾ’ ಎಂದು  ಸಂಬೋಧಿಸುವುದರ ಹಿಂದಿನ ಕಾರಣ  ‘ನಾವು ನಿನ್ನನ್ನು ಈಗಾಗಲೇ ಗುರುತಿಸಿದ್ದೇವೆ’ ಎಂದು ತೋರಿಸುವುದೇ ಆಗಿದೆ). 

ರಾಜೈವ ದೈವತಮಿತಿ ಪ್ರವದನ್ತಿ ವಿಪ್ರಾ ರಾಜ್ಞಃ ಪ್ರಿಯಂ ಕೃತವತಃ ಪರಮಾ ಹಿ ಸಿದ್ಧಿಃ ।
ಯೋತ್ಸ್ಯಾವ ತೇನ ನೃಪತಿಪ್ರಿಯಕಾಮ್ಯಯಾssವಾಂ ರಾಮೋsಭಿಯುದ್ಧ್ಯತು ಬಲೀ ಸಹ ಮುಷ್ಟಿಕೇನ ೧೩.೧೧೮

“ಬ್ರಾಹ್ಮಣರು ‘ರಾಜನೇ ದೇವತೆ’ ಎಂದು ಹೇಳುತ್ತಾರೆ.  ರಾಜನಿಗೆ ಪ್ರಿಯವಾದುದ್ದನ್ನು ಮಾಡುವವನಿಗೆ ಉತ್ಕೃಷ್ಟವಾದ ಸಿದ್ಧಿಯಷ್ಟೇ? ಆ ಕಾರಣದಿಂದ ನಾವಿಬ್ಬರು ಕಂಸನಿಗೆ ಪ್ರೀತಿಯನ್ನು ಉಂಟುಮಾಡುವ ಸಲುವಾಗಿ ಯುದ್ಧಮಾಡೋಣ. ಬಲಿಷ್ಠನಾದ ಬಲರಾಮನು  ಮುಷ್ಟಿಕನೊಂದಿಗೆ ಯುದ್ಧಮಾಡಲಿ” ಎನ್ನುತ್ತಾನೆ ಚಾಣೂರ.

[ಈ ಚಾಣೂರ ಮತ್ತು  ಮುಷ್ಟಿಕರ ಪರಾಕ್ರಮದ ಕುರಿತು ಹರಿವಂಶಪರ್ವದಲ್ಲಿ(೫೪.೭೬) ಹೀಗೆ ಹೇಳಿದ್ದಾರೆ:  ವಾರಾಹಶ್ಚ ಕಿಶೋರಶ್ಚ ದಾನವೌ ಯೌ ಮಹಾಬಲೌ ಮಲ್ಲೌ ರಙ್ಗಗತೌ ತೌ ತು ಜಾತೌ  ಚಾಣೂರಮುಷ್ಟಿಕೌ’. ಇದಲ್ಲದೆ ದೇವೀ ಭಾಗವತದಲ್ಲಿ (೪.೨೨.೪೫) ‘ವಾರಾಹಶ್ಚ ಕಿಶೋರಶ್ಚ ದೈತೌ ಪರಮದಾರುಣೌ ಮಲ್ಲೌ ತಾವೇವ ಸಞ್ಜಾತೌ  ಖ್ಯಾತೌ ಚಾಣೂರಮುಷ್ಟಿಕೌ’ ಎಂದು ಹೇಳಿರುವುದನ್ನು ಕಾಣುತ್ತೇವೆ. ಹಿಂದೆ ವಾರಾಹ ಹಾಗೂ ಕಿಶೋರ ಎಂದೇ ಖ್ಯಾತರಾಗಿದ್ದ ಇಬ್ಬರು ಮಹಾಬಲಶಾಲಿ ದಾನವರು, ಈಗ ಚಾಣೂರ ಹಾಗೂ ಮುಷ್ಟಿಕ ಎಂಬ ಹೆಸರಿನಿಂದ ಹುಟ್ಟಿ ಬಂದರು].

ಇತ್ಯುಕ್ತ ಆಹ ಭಗವಾನ್ ಪರಿಹಾಸಪೂರ್ವಮೇವಂ ಭವತ್ವಿತಿ ಸ ತೇನ ತದಾsಭಿಯಾತಃ
ಸನ್ದರ್ಶ್ಯ ದೈವತಪತಿರ್ಯ್ಯುಧಿ ಮಲ್ಲಲೀಲಾಂ ಮೌಹೂರ್ತ್ತಿಕೀಮಥ ಪದೋರ್ಜ್ಜಗೃಹೇ ಸ್ವಶತ್ರುಮ್ ೧೩.೧೧೯

ಚಾಣೂರನ ಮಾತನ್ನು ಕೇಳಿದ ಶ್ರೀಕೃಷ್ಣನು ಮುಗುಳುನಗುತ್ತಾ, ‘ಹಾಗೇ ಆಗಲಿ’ ಎಂದು ಹೇಳಿ, ಅವನನ್ನು ಎದುರುಗೊಂಡ.  ದೇವತಾಪತಿಯಾದ ಶ್ರೀಕೃಷ್ಣನು ಯುದ್ಧದಲ್ಲಿ ಒಂದು ಮುಹೂರ್ತಕಾಲ ಮಲ್ಲ ಲೀಲೆಯನ್ನು ತೋರಿಸಿ,   ನಂತರ ತನ್ನ ಶತ್ರುವನ್ನು(ಚಾಣೂರನನ್ನು) ಕಾಲುಗಳಲ್ಲಿ ಹಿಡಿದನು. 

ಉತ್ಕ್ಷಿಪ್ಯ ತಂ ಗಗನಗಂ ಗಿರಿಸನ್ನಿಕಾಶಮುದ್ಭ್ರಾಮ್ಯ ಚಾಥ ಶತಶಃ ಕುಲಿಶಾಕ್ಷತಾಙ್ಗಮ್
ಆವಿದ್ಧ್ಯ ದುರ್ದ್ಧರಬಲೋ ಭುವಿ ನಿಷ್ಪಿಪೇಷ ಚೂರ್ಣ್ಣೀಕೃತಃ ಸ ನಿಪಪಾತ ಯಥಾ ಗಿರೀನ್ದ್ರಃ ॥೧೩.೧೨೦॥

ಬೆಟ್ಟದಂತಿರುವ ಅವನನ್ನು ಮೇಲೆತ್ತಿದ, ಯಾರಿಗೂ ಮೀರಲು ಸಾಧ್ಯವಿಲ್ಲದ ಬಲವುಳ್ಳವನಾದ ಶ್ರೀಕೃಷ್ಣನು, ಅವನನ್ನು ನೂರುಬಾರಿ(ಅನೇಕ ಬಾರಿ) ಆಕಾಶದಲ್ಲಿ ಗಿರಗಿರನೆ ತಿರುಗಿಸಿ, ವಜ್ರಾಯುಧದಿಂದಲೂ ಭೇದಿಸಲಾಗದ ಅಂಗವುಳ್ಳ ಅವನನ್ನು ಭೂಮಿಗೆ ಅಪ್ಪಳಿಸಿ  ಪುಡಿಪುಡಿಮಾಡಿದನು. ಅವನಾದರೋ, ಒಂದು ದೊಡ್ಡ ಬೆಟ್ಟವೋ ಎಂಬಂತೆ ಪುಡಿಪುಡಿಯಾಗಿ ಭೂಮಿಯಲ್ಲಿ ಬಿದ್ದನು.

ಕೃಷ್ಣಂ ಚ ತುಷ್ಟುವುರಥೋ ದಿವಿ ದೇವಸಙ್ಘಾ ಮರ್ತ್ತ್ಯಾ ಭುವಿ ಪ್ರವರಮುತ್ತಮಪೂರುಷಾಣಾಮ್ ।
ತದ್ವದ್ ಬಲಸ್ಯ ದೃಡಮುಷ್ಟಿನಿಪಿಷ್ಟಮೂರ್ದ್ಧಾ ಭ್ರಷ್ಟಸ್ತದೈವ ನಿಪಪಾತ ಸ ಮುಷ್ಟಿಕೋsಪಿ ॥೧೩.೧೨೧॥

ಚಾಣೂರನ ನಿಗ್ರಹವಾಗುತ್ತಿದ್ದಂತೇ, ಆಕಾಶದಲ್ಲಿರುವ ದೇವತೆಗಳು ಕೃಷ್ಣನನ್ನು ಹಾಡಿಹೊಗಳಿದರು. ಸಾತ್ವಿಕರಾದ ಮನುಷ್ಯರೂ ಕೂಡಾ ಉತ್ತಮಪುರುಷರಲ್ಲಿ ಶ್ರೇಷ್ಠನಾದ ನಾರಾಯಣನನ್ನು ಭೂಮಿಯಲ್ಲಿದ್ದುಕೊಂಡು ಸ್ತೋತ್ರ ಮಾಡಿದರು.
ಹಾಗೆಯೇ ಬಲರಾಮನ ದೃಢವಾದ ಮುಷ್ಟಿಯಿಂದ ಪುಡಿಮಾಡಲ್ಪಟ್ಟ ತಲೆಯುಳ್ಳವನಾದ ಮುಷ್ಟಿಕನೂ ಕೂಡಾ ಪ್ರಾಣದಿಂದ ಭ್ರಷ್ಟನಾಗಿ(ಸತ್ತು) ಬಿದ್ದನು.

ಕೂಟಶ್ಚ ಕೋಸಲ ಉತ ಚ್ಛಲನಾಮಧೇಯೋ ದ್ವೌ ತತ್ರ ಕೃಷ್ಣನಿಹತಾವಪರೋ ಬಲೇನ ।
ಕಂಸಸ್ಯ ಯೇ ತ್ವವರಜಾಶ್ಚ ಸುನೀಥಮುಖ್ಯಾಃ ಸರ್ವೇ ಬಲೇನ ನಿಹತಾಃ ಪರಿಘೇಣ ವೀರಾಃ ೧೩.೧೨೨

ಒಬ್ಬ ಕೂಟ(ಯುದ್ಧದಲ್ಲಿ ಕುಟಿಲನೀತಿಯಿಂದ ಮಲ್ಲರನ್ನು ಗೆಲ್ಲುತ್ತಿದ್ದರಿಂದ ಕೂಟ ಎಂದು ಹೆಸರಾದವ) ಹಾಗು ಇನ್ನೊಬ್ಬ ಕೋಸಲ(ಕುಸ್ಯಂತಿ, ಕುಸ್ ಶ್ಲೇಷಣೆ, ಶ್ಲಿಷ್ಯನ್ತೀತಿ ಕೋಸಲ ನಾಮ). ಈ ಇಬ್ಬರನ್ನು  ಕೃಷ್ಣ ಸಂಹಾರ ಮಾಡಿದರೆ, ಇನ್ನೊಬ್ಬ ಛಲ ನಾಮಕನನ್ನು ಬಲರಾಮ ಸಂಹಾರಮಾಡಿದ. ಕಂಸನ ತಮ್ಮಂದಿರರಾದ  ಸುನೀತನೇ ಮೊದಲಾದ ಎಲ್ಲರೂ ಕೂಡಾ ಬಲರಾಮನ  ಪರಿಘದಿಂದ(ಮುಸಲಾಯುಧದಿಂದ) ಕೊಲ್ಲಲ್ಪಟ್ಟರು.

Saturday, August 17, 2019

Mahabharata Tatparya Nirnaya Kannada 13112_13116


ಆಯನ್ ಜಗದ್ಗುರತಮೋ ಬಲಿನಂ ಗಜೇನ್ದ್ರಂ ರುದ್ರಪ್ರಸಾದಪರಿರಕ್ಷಿತಮಾಶ್ವಪಶ್ಯತ್
ದೂಷ್ಟೋರುರಙ್ಗಮುಖಸಂಸ್ಥಿತಮೀಕ್ಷ್ಯ ಚೈಭ್ಯಂ ಪಾಪಾಪಯಾಹಿ ನಚಿರಾದಿತಿ ವಾಚಮೂದೇ ೧೩.೧೧೨

ರಂಗದತ್ತ ಬರುತ್ತಿರುವ, ಜ್ಞಾನೋಪದೇಶಕರಲ್ಲಿಯೇ ಶ್ರೇಷ್ಠನಾದ, ಜಗದ್ಗುರು ಕೃಷ್ಣನು, ರಂಗದ ಬಾಗಿಲಿನಲ್ಲಿರುವ, ರುದ್ರದೇವರ ಅನುಗ್ರಹದಿಂದ ರಕ್ಷಿಸಲ್ಪಟ್ಟಿರುವ  ಆನೆಯನ್ನು ಮತ್ತು ಆ ಆನೆಯನ್ನು ನಿಯಂತ್ರಿಸುವ ಮಾವುತನನ್ನೂ ಕಂಡು, ‘ಪಾಪಿಷ್ಠನೇ, ಬೇಗದಲ್ಲಿಯೇ(ಸಾವಕಾಶ ಮಾಡದೇ, ತಕ್ಷಣ) ಆಚೆ ಸರಿ’ ಎಂಬ ಮಾತನ್ನು ಹೇಳಿದನು.

ಕ್ಷಿಪ್ತಃ ಸ ಈಶ್ವರತಮೇನ ಗಿರೀಶಲಬ್ಧಾದ್ ದೃಪ್ತೋ ವರಾಜ್ಜಗತಿ ಸರ್ವಜನೈರವದ್ಧ್ಯಃ ।
ನಾಗಂ ತ್ವವದ್ಧ್ಯಮಭಿಯಾಪಯತೇ ತತೋsಗ್ರೇ ಪಾಪೋ ದುರನ್ತಮಹಿಮಂ ಪ್ರತಿ ವಾಸುದೇವಮ್ ೧೩.೧೧೩

ಸರ್ವಸಮರ್ಥನಾದ ಕೃಷ್ಣನಿಂದ ತಿರಸ್ಕರಿಸಲ್ಪಟ್ಟ,  ಜಗತ್ತಿನಲ್ಲಿ ಯಾರಿಂದಲೂ ಕೂಡಾ ಸೋಲಿಸಲಾಗದಂತಹ ವರವನ್ನು ರುದ್ರದೇವರಿಂದ ಪಡೆದಿದ್ದ ಆ ಮಾವುತನು,  ದರ್ಪದಿಂದ ಕೂಡಿದವನಾಗಿ, ಯಾರಿಂದಲೂ ಸಾಯಿಸಲಾಗದ ಆನೆಯನ್ನು,  ಎಣೆಯಿರದ ಮಹಿಮೆಯುಳ್ಳ ವಾಸುದೇವನನ್ನು ಕೊಲ್ಲಬೇಕು ಎಂದು ಪ್ರಚೋದಿಸುತ್ತಿದ್ದ.

ವಿಕ್ರೀಡ್ಯ ತೇನ ಕರಿಣಾ ಭಗವಾನ್ ಸ ಕಿಞ್ಚಿದ್ಧಸ್ತೇ ಪ್ರಗೃಹ್ಯ ವಿನಿಕೃಷ್ಯ ನಿಪಾತ್ಯ ಭೂಮೌ ।
ಕುಮ್ಭೇ ಪದಂ ಪ್ರತಿನಿಧಾಯ ವಿಷಾಣಯುಗ್ಮಮುತ್ಕೃಷ್ಯ ಹಸ್ತಿಪಮಹನ್ ನಿಪಪಾತ ಸೋsಪಿ ೧೩.೧೧೪

ಷಡ್ಗುಣೈಶ್ವರ್ಯ ಸಂಪನ್ನನಾದ ಶ್ರೀಕೃಷ್ಣನು, ಆ ಆನೆಯೊಂದಿಗೆ ಸ್ವಲ್ಪಕಾಲ ಆಟವಾಡಿ, ನಂತರ ಅದರ ಸೊಂಡಿಲನ್ನು ಹಿಡಿದೆಳೆದು, ಭೂಮಿಯಲ್ಲಿ ಕೆಡವಿ, ಅದರ ತಲೆಯಮೇಲೆ ಕಾಲನ್ನಿಟ್ಟು, ಅದರ ಎರಡೂ ದಂತಗಳನ್ನು ಸೆಳೆದು, ಆ ದಂತದಿಂದಲೇ ಮಾವುತನನ್ನು  ಹೊಡೆದಾಗ ಆ ಮಾವುತ ಕೆಳಗೆ ಬಿದ್ದನು(ಸತ್ತನು).

ನಾಗಂ ಸಸಾದಿನಮವದ್ಧ್ಯಮಸೌ ನಿಹತ್ಯ ಸ್ಕನ್ಧೇ ವಿಷಾಣಮವಸಜ್ಜ್ಯ ಸಹಾಗ್ರಜೇನ ।
ನಾಗೇನ್ದ್ರಸಾನ್ದ್ರಮದಬಿನ್ದುಭಿರಞ್ಚಿತಾಙ್ಗಃ ಪೂರ್ಣ್ಣಾತ್ಮಶಕ್ತಿರಮಲಃ ಪ್ರವಿವೇಶ ರಙ್ಗಮ್ ॥೧೩.೧೧೫

ಯಾರಿಂದಲೂ  ಕೊಲ್ಲಲು ಅಸಾಧ್ಯವಾಗಿದ್ದ ಮಾವುತ ಹಾಗು ಆನೆಯನ್ನು ಕೊಂದು, ಆನೆಯ ಕೋರೆ ದಾಡೆಯನ್ನು ತನ್ನ ಹೆಗಲ ಮೇಲಿರಿಸಿಕೊಂಡು, ಅಣ್ಣನೊಂದಿಗೆ ಕೂಡಿಕೊಂಡು, ಗಜಶ್ರೇಷ್ಠದ ದಪ್ಪವಾದ ಮದದ ನೀರಿನಿಂದ ಸಿಂಪಡಿಸಲ್ಪಟ್ಟ ಅವಯವವುಳ್ಳವನಾಗಿ,  ಶಕ್ತಿಪೂರ್ಣನೂ, ನಿರ್ದೋಷನೂ  ಆಗಿರುವ ಶ್ರೀಕೃಷ್ಣನು ರಂಗಸ್ಥಳವನ್ನು ಪ್ರವೇಶಿಸಿದನು.

ವಿಷ್ಟೇ ಜಗದ್ಗುರುತಮೇ ಬಲವೀರ್ಯ್ಯಮೂರ್ತ್ತೌ ರಙ್ಗಂ ಮುಮೋದ ಚ ಶುಶೋಷ ಜನೋsಖಿಲೋsತ್ರ
ಕಞ್ಜಂ ತಥಾsಪಿ ಕುಮುದಂ ಚ ಯಥೈವ ಸೂರ್ಯ್ಯ ಉದ್ಯತ್ಯಜೇsನುಭವಿನೋ ವಿಪರೀತಕಾಶ್ಚ ॥೧೩.೧೧೬॥

ಜಗತ್ತನ್ನು ಪಾಲನೆ ಮಾಡುವವರಲ್ಲೇ ಶ್ರೇಷ್ಠನಾದ, ಬಲ ಹಾಗು ವೀರ್ಯವೇ ಮೈದಾಳಿ ಬಂದ ಪರಮಾತ್ಮನು ರಂಗವನ್ನು ಪ್ರವೇಶಿಸುತ್ತಿರಲು, ಆ ರಂಗದಲ್ಲಿರುವ ಕೆಲವರು ಸಂತೋಷಪಟ್ಟರೆ, ಇನ್ನು ಕೆಲವರು ಒಣಗಿದರೂ ಕೂಡಾ. ಹೇಗೆ ಸೂರ್ಯನು ಉದಯಿಸುತ್ತಿರಲು ಕಮಲವು ಅರಳಿ ನೈದಿಲೆಯು ಒಣಗುತ್ತದೋ ಹಾಗೇ. (ಪರಮಾತ್ಮನು ರಂಗಪ್ರವೇಶಿಸುತ್ತಿದ್ದಂತೆ ಭಕ್ತರು ಸಂತಸಗೊಂಡರು. ದುಷ್ಟರೆಲ್ಲರೂ ಕೂಡಾ ಬಾಡಿದರು).

Thursday, August 15, 2019

Mahabharata Tatparya Nirnaya Kannada 13103_13111


ಪೂರ್ಣ್ಣೇನ್ದುವೃನ್ದನಿವಹಾಧಿಕಕಾನ್ತಶಾನ್ತಸೂರ್ಯ್ಯಾಮಿತೋರುಪರಮದ್ಯುತಿಸೌಖ್ಯದೇಹಃ ।
ಪೀತಾಮ್ಬರಃ ಕನಕಭಾಸುರಗನ್ಧಮಾಲ್ಯಃ ಶೃಙ್ಗಾರವಾರಿಧಿರಗಣ್ಯಗುಣಾರ್ಣ್ಣವೋsಗಾತ್ ॥೧೩.೧೦೩

ಪೂರ್ಣವಾಗಿರುವ ಚಂದ್ರರ ಸಮೂಹಗಳಿಗಿಂತಲೂ ಕೂಡಾ ಮಿಗಿಲಾದ, ಮನೋಹರವಾದ, ಸುಖಪೂರ್ಣವಾದ, ಸೂರ್ಯನಿಗಿಂತಲೂ ಕೂಡಾ ಅಮಿತವಾದ ಕಾಂತಿಯುಳ್ಳ(ತಂಪಾದ ಬೆಳಕುಳ್ಳ), ಸುಖವೇ ಮೈವೆತ್ತು ಬಂದಿರುವ, ಹಳದಿ ಬಟ್ಟೆಯನ್ನುಟ್ಟ, ಬಂಗಾರದಂತಿರುವ ಗಂಧವನ್ನೂ, ಹೂವಿನ ಮಾಲೆಯನ್ನೂ ಧರಿಸಿಕೊಂಡ, ಸೌಂದರ್ಯಸಾಗರನಾದ, ಎಣಿಸಲಾಗದ ಗುಣಗಳಿಗೆ ಕಡಲಿನಂತೆ ಇರುವ ನಾರಾಯಣನು ಅಲ್ಲಿಂದ ಮುನ್ನಡೆದನು.

ಪ್ರಾಪ್ಯಾಥ ಚಾsಯುಧಗೃಹಂ ಧನುರೀಶದತ್ತಂ ಕೃಷ್ಣಃ ಪ್ರಸಹ್ಯ ಜಗೃಹೇ ಸಕಲೈರಭೇದ್ಯಮ್
ಕಾಂಸಂ ಸ ನಿತ್ಯಪರಿಪೂರ್ಣ್ಣಸಮಸ್ತಶಕ್ತಿರಾರೋಪ್ಯ ಚೈನಮನುಕೃಷ್ಯ ಬಭಞ್ಜ ಮದ್ಧ್ಯೇ ॥೧೩.೧೦೪ ॥

ತದನಂತರ, ಆಯುಧದ ಮನೆಯನ್ನು ಹೊಂದಿ, (ಅಲ್ಲಿರುವವರನ್ನೆಲ್ಲಾ ಓಡಿಸಿ),  ರುದ್ರದೇವರು ಕಂಸನಿಗೆ ಕೊಟ್ಟ, ಎಲ್ಲರಿಂದಲೂ ಅಭೇದ್ಯವಾದ ಧನುಸ್ಸನ್ನು ಕೃಷ್ಣ ಎತ್ತಿದ , ಕಂಸನಿಗೆ ಸಂಬಂಧಪಟ್ಟ ಆ ಧನುಸ್ಸನ್ನು, ನಿತ್ಯಪರಿಪೂರ್ಣನೂ, ಸಮಸ್ತಶಕ್ತಿ ಉಳ್ಳವನೂ ಆದ  ಆ ನಾರಾಯಣನು ಹೆದೆಯೇರಿಸಲೆಂದು ಎಳೆದು, ಮುರಿದುಹಾಕಿದ.

ತಸ್ಮಿನ್ ಸುರಾಸುರಗಣೈರಖಿಲೈರಭೇದ್ಯೇ ಭಗ್ನೇ ಬಭೂವ ಜಗದಣ್ಡವಿಭೇದಭೀಮಃ ।
ಶಬ್ದಃ ಸ ಯೇನ ನಿಪಪಾತ ಭುವಿ ಪ್ರಭಗ್ನಸಾರೋsಸುರೋ ಧೃತಿಯುತೋsಪಿ ತದೈವ ಕಂಸಃ॥೧೩.೧೦೫॥

ದೇವತೆಗಳಿಂದಾಗಲೀ, ದೈತ್ಯಗಣದಿಂದಾಗಲೀ, ಯಾರಿಂದಲೂ ಮುರಿಯಲಾಗದ ಆ ಧನುಸ್ಸು ಮುರಿಯುತ್ತಿದ್ದಂತೇ,  ಜಗತ್ತೇ ಮುರಿದರೆ  ಯಾವರೀತಿ ಶಬ್ದ ಆಗಬಹುದೋ ಆ ರೀತಿಯ ಶಬ್ದವಾಯಿತು. ಈ ಶಬ್ದ ಕೇಳುತ್ತಿದ್ದಂತೆಯೇ ಕಂಸನು,  ಎಷ್ಟೇ ಧೈರ್ಯಉಳ್ಳವನಾಗಿದ್ದರೂ ಕೂಡಾ,  ದೇಹದ ಸಾರವೆಲ್ಲಾ ಕುಸಿದುಹೋದಂತಾಗಿ ಭೂಮಿಯಲ್ಲಿ ಬಿದ್ದನು.

ಆದಿಷ್ಟಮಪ್ಯುರು ಬಲಂ ಭಗವಾನ್ ಸ ತೇನ ಸರ್ವಂ ನಿಹತ್ಯ ಸಬಲಃ ಪ್ರಯಯೌ ಪುನಶ್ಚ
ನನ್ದಾದಿಗೋಪಸಮಿತಿಂ ಹರಿರತ್ರ ರಾತ್ರೌ ಭುಕ್ತ್ವಾ ಪಯೋsನ್ವಿತಶುಭಾನ್ನಮುವಾಸ ಕಾಮಮ್ ೧೩.೧೦೬

ಕಂಸನಿಂದ ಆದೇಶಿಸಲ್ಪಟ್ಟು ಮೊದಲೇ ತಯಾರಿಯಲ್ಲಿದ್ದ  ಆತನ ಎಲ್ಲಾ ಉತ್ಕೃಷ್ಟವಾದ ಬಲವನ್ನು(ಸೈನ್ಯವನ್ನು),  ಮುರಿದ ಬಿಲ್ಲಿನಿಂದಲೇ,  ಬಲರಾಮನಿಂದ ಕೂಡಿಕೊಂಡು ಸಂಹರಿಸಿದ ಕೃಷ್ಣ,  ತದನಂತರ ನಂದಾದಿಗಳು ಇರುವ ಜಾಗಕ್ಕೆ ತೆರಳಿದ. ಶ್ರೀಕೃಷ್ಣನು ಆ ರಾತ್ರಿ ಹಾಲಿನಿಂದ ಕೂಡಿದ ಮನೋಹರವಾದ  ಅನ್ನವನ್ನು ಸೇವಿಸಿ, ಅಲ್ಲೇ ತನ್ನ ಇಚ್ಛಾನುಸಾರ ಆವಾಸಮಾಡಿದ.

ಕಂಸೋsಪ್ಯತೀವ ಭಯಕಮ್ಪಿತಹೃತ್ಸರೋಜಃ ಪ್ರಾತರ್ನ್ನರೇನ್ದ್ರಗಣಮದ್ಧ್ಯಗತೋsಧಿಕೋಚ್ಚಮ್ ।
ಮಞ್ಚಂ ವಿವೇಶ ಸಹ ಜಾನಪದೈಶ್ಚ ಪೌರೈರ್ನ್ನಾನಾsನುಮಞ್ಚಕಗತೈರ್ಯ್ಯುವತೀಸಮೇತೈಃ ॥೧೩.೧೦೭॥

ಕಂಸನೂ ಕೂಡಾ ಆತ್ಯಂತಿಕವಾದ ಭಯದಿಂದ ನಡುಗಿದ ಎದೆಯುಳ್ಳವನಾಗಿ, ಬೆಳಗ್ಗೆ, ಯುವತಿಯರಿಂದಲೂ, ಹಳ್ಳಿಗರಿಂದಲೂ, ಪಟ್ಟಣಿಗರಿಂದಲೂ ಕೂಡಿಕೊಂಡು, ಅವರವರಿಗೆ ಯೋಗ್ಯವಾದ ಆಸನದಲ್ಲಿ ಇರುವವರಾದ ಎಲ್ಲಾ ಸಾಮಂತರಾಜರ ಮಧ್ಯದಲ್ಲಿ ತನ್ನ ಪರಿವಾರದೊಂದಿಗೆ, ಎಲ್ಲಕ್ಕಿಂತ ಎತ್ತರವಾದ ಆಸನವನ್ನು ಅಲಂಕರಿಸಿದ.(ಪ್ರವೇಶ ಮಾಡಿದ)

ಸಂಸ್ಥಾಪ್ಯ ನಾಗಮುರುರಙ್ಗಮುಖೇ ಕುವಲ್ಯಾಪೀಡಂ ಗಿರೀನ್ದ್ರಸದೃಶಂ ಕರಿಸಾದಿಯುಕ್ತಮ್
ಚಾಣೂರಮುಷ್ಟಿಕಮುಖಾನಪಿ ಮಲ್ಲವೀರಾನ್ ರಙ್ಗೇ ನಿಧಾಯ ಹರಿಸಂಯಮನಂ ಕಿಲೈಚ್ಛತ್ ೧೩.೧೦೮

ಪ್ರವೇಶಮಾಡುವ ರಂಗದ (stadium, ಕ್ರೀಡಾಂಗಣ ) ದ್ವಾರದಲ್ಲಿ,  ದೊಡ್ಡ ಬೆಟ್ಟದಂತೆ ಇರುವ, ಮಾವುತನಿಂದ ಕೂಡಿರುವ, ಕುವಲ್ಯಾಪೀಡವೆನ್ನುವ ಆನೆಯನ್ನು ಇರಿಸಿದ ಕಂಸ, ರಂಗದ ಒಳಗೆ ಚಾಣೂರ, ಮುಷ್ಟಿಕ,ಇವರೇ ಪ್ರಧಾನವಾಗಿರುವ ಎಲ್ಲಾ ಮಲ್ಲವೀರರನ್ನು ಇಟ್ಟು, ಪರಮಾತ್ಮನ ಸಂಯಮನವನ್ನು ಇಚ್ಛಿಸಿದನು.

ಅಕ್ಷೋಹಿಣೀಗಣಿತಮಸ್ಯ ಬಲಂ ಚ ವಿಂಶದಾಸೀದಸಹ್ಯಮುರುವೀರ್ಯ್ಯಮನನ್ಯವದ್ಧ್ಯಮ್
ಶಮ್ಭೋರ್ವರಾದಪಿ ಚ ತಸ್ಯ ಸುನೀಥನಾಮಾ ಯಃ ಪೂರ್ವಮಾಸ ವೃಕ ಇತ್ಯಸುರೋsನುಜೋsಭೂತ್ ೧೩.೧೦೯

ಉತ್ಕೃಷ್ಟವಾದ ವೀರ್ಯವುಳ್ಳ , ರುದ್ರನ ವರದಿಂದ ಕೃಷ್ಣನಲ್ಲದೆ ಇನ್ಯಾರಿಗೂ ಕೊಲ್ಲಲು ಅಸಾಧ್ಯವಾದ, ಇಪ್ಪತ್ತು ಅಕ್ಷೋಹಿಣಿ ಸೈನ್ಯ ಕಂಸನಲ್ಲಿತ್ತು. ಆ ಬಲಕ್ಕೆ ಸುನೀಥ ನಾಮಕ  ಕಂಸನ ತಮ್ಮನೇ ಸೇನಾಧಿಪತಿಯಾಗಿದ್ದ. (ಯಾರಾತ?) ಯಾರು ವ್ರಕನೆಂಬ(ವ್ರಕಾಸುರ/ಭಸ್ಮಾಸುರ) ಅಸುರನಿದ್ದನೋ, ಆ ಅಸುರನೇ ಕಂಸನ ತಮ್ಮನಾಗಿ ಹುಟ್ಟಿದ್ದ.

ಸಪ್ತಾನುಜಾ ಅಪಿ ಹಿ ತಸ್ಯ ಪುರಾತನಾ ಯೇ ಸರ್ವೇsಪಿ ಕಂಸಪೃತನಾಸಹಿತಾಃ ಸ್ಮ ರಙ್ಗೇ ।
ತಸ್ಥುಃ ಸರಾಮಮಭಿಯಾನ್ತಮುದೀಕ್ಷ್ಯ ಕೃಷ್ಣಮಾತ್ತಾಯುಧಾ ಯುಧಿ ವಿಜೇತುಮಜಂ ಸುಪಾಪಾಃ ॥೧೩.೧೧೦

ಸುನೀಥನಿಗೆ ಪೂರ್ವಜನ್ಮದಲ್ಲಿಯೂ   ಸಹೋದರರಾಗಿದ್ದ ಏಳು ಮಂದಿ, ಈ ಜನ್ಮದಲ್ಲಿಯೂ ಕೂಡಾ ಸಹೋದರರಾಗಿ  ಕಂಸನ ಸೇನೆಯೊಂದಿಗಿದ್ದರು. ಅತ್ಯಂತ ಪಾಪಿಷ್ಠರಾಗಿದ್ದ ಅವರು, ರಾಮನನ್ನು  ಕೂಡಿಕೊಂಡು ಬರುತ್ತಿರುವ,  ಎಂದೂ ಹುಟ್ಟದೇ ಇರುವ ಶ್ರೀಕೃಷ್ಣನನ್ನು ಯುದ್ಧದಲ್ಲಿ ಗೆಲ್ಲಲು, ಆಯುಧವನ್ನು ಹಿಡಿದು ನಿಂತಿದ್ದರು. (ಹುಟ್ಟದೇ ಇರುವವನನ್ನು ಸಾಯಿಸಲೆಂದು ನಿಂತಿದ್ದರು!)

ಕೃಷ್ಣೋsಪಿ ಸೂರ ಉದಿತೇ ಸಬಲೋ ವಯಸ್ಯೈಃ ಸಾರ್ದ್ಧಂ ಜಗಾಮ ವರರಙ್ಗಮುಖಂ ಸುರೇಶೈಃ ।
ಸಂಸ್ತೂಯಮಾನ ಉರುವಿಕ್ರಮ ಆಸುರಾಣಾಂ ನಿರ್ಮ್ಮೂಲನಾಯ ಸಕಳಾಚಲಿತೋರುಶಕ್ತಿಃ ॥೧೩.೧೧೧॥

ಸೂರ್ಯೋದಯವಾಗುತ್ತಿದ್ದಂತೆಯೇ,  ಉತ್ಕೃಷ್ಟವಾದ ಶಕ್ತಿಯುಳ್ಳ ಶ್ರೀಕೃಷ್ಣನೂ ಕೂಡಾ, ಬಲರಾಮನಿಂದ ಹಾಗೂ ತನ್ನ ಗೆಳೆಯರೊಂದಿಗೆ ಕೂಡಿಕೊಂಡು,  ಅಸುರರ ವಿನಾಶಕ್ಕಾಗಿ, ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವವನಾಗಿ, ಕಂಸನ ರಂಗಕ್ಕೆ ಅಭಿಮುಖವಾಗಿ ಹೊರಟನು.

Wednesday, August 14, 2019

Mahabharata Tatparya Nirnaya Kannada 1396_13102


ಅಗ್ರೇsಥ ದಾನಪತಿಮಕ್ಷಯಪೌರುಷೋsಸಾವೀಶೋ ವಿಸೃಜ್ಯ ಸಬಲಃ ಸಹಿತೋ ವಯಸ್ಯೈಃ
ದ್ರಷ್ಟುಂ ಪುರೀಮಭಿಜಗಾಮ ನರೇನ್ದ್ರಮಾರ್ಗ್ಗೇ ಪೌರೈಃ ಕುತೂಹಲಯುತೈರಭಿಪೂಜ್ಯಮಾನಃ॥೧೩.೯೬

ಮಧುರೆಯನ್ನು ತಲುಪಿದಮೇಲೆ, ದಾನಪತಿ ಎನ್ನುವ ಹೆಸರುಳ್ಳ ಅಕ್ರೂರನನ್ನು  ಮುಂದೆ ಕಳುಹಿಸಿಕೊಟ್ಟ ಎಂದೂ ನಾಶವಾಗದ ಕಸುವುಳ್ಳ ಶ್ರೀಕೃಷ್ಣನು, ಬಲರಾಮ ಹಾಗೂ ಸಮಸ್ತ ಗೆಳೆಯರಿಂದ ಕೂಡಿಕೊಂಡು ಪಟ್ಟಣವನ್ನು ನೋಡಲೆಂದು ತೆರಳಿದನು. ಹೀಗೆ ಹೋಗುತ್ತಿರುವಾಗ,  ರಾಜಮಾರ್ಗದಲ್ಲಿ ಕುತೂಹಲದಿಂದ ನೋಡುತ್ತಿರುವ  ಪಟ್ಟಣಿಗರಿಂದ, ತನ್ನ ಗುಣ-ಮೊದಲಾದವುಗಳಿಂದ ಹೊಗಳಿಸಲ್ಪಟ್ಟವನಾಗಿ ಕೃಷ್ಣ ತಿರುಗಾಡಿದ.

ಆಸಾದ್ಯ ಕುಞ್ಜರಗತಂ ರಜತಂ ಯಯಾಚೇ ವಸ್ತ್ರಾಣಿ ಕಂಸದಯಿತಂ ಗಿರಿಶಾವರೇಣ ।
ಮೃತ್ಯೂಜ್ಝಿತಂ ಸಪದಿ ತೇನ ದುರುಕ್ತಿವಿದ್ಧಃ ಪಾಪಂ ಕರಾಗ್ರಮೃದಿತಂ ವ್ಯನಯದ್ ಯಮಾಯ॥೧೩.೯೭

ಮಧುರೆಯಲ್ಲಿ ತಿರುಗಾಡುತ್ತಿರುವಾಗ ಶ್ರೀಕೃಷ್ಣ ಕಂಸನಿಗೆ ಪ್ರಿಯನಾಗಿರುವ,   ಆನೆಯಮೇಲೆ ಕುಳಿತಿರತಕ್ಕ, ಪಾರ್ವತಿಯ ವರದಿಂದ ಅವಧ್ಯನಾಗಿರುವ ಅಗಸನೊಬ್ಬನಲ್ಲಿ  ಬಟ್ಟೆಗಳನ್ನು ಕೇಳಿದ. ಆಗ ಆ ಅಗಸನಿಂದ ಕೆಟ್ಟ ವಚನಗಳಿಂದ ನಿಂದಿಸಲ್ಪಟ್ಟು ಸಿಟ್ಟುಗೊಂಡವನಾದ ಕೃಷ್ಣ, ಆ ಪಾಪಿಷ್ಠನಾದ ಅಗಸನನ್ನು ತನ್ನ ಹಸ್ತತಲದಿಂದ   ಹೊಡೆದು, ಯಮಲೋಕಕ್ಕಟ್ಟಿದ.

ಹತ್ವಾ ತಮಕ್ಷತಬಲೋ ಭಗವಾನ್ ಪ್ರಗೃಹ್ಯ ವಸ್ತ್ರಾಣಿ ಚಾsತ್ಮಸಮಿತಾನಿ ಬಲಸ್ಯ ಚಾsದಾತ್
ದತ್ವಾsಪರಾಣಿ ಸಖಿಗೋಪಜನಸ್ಯ ಶಿಷ್ಟಾನ್ಯಾಸ್ತೀರ್ಯ್ಯ ತತ್ರ ಚ ಪದಂ ಪ್ರಣಿಧಾಯ ಚಾsಗಾತ್॥೧೩.೯೮॥

ಎಂದೂ ನಾಶವಾಗದ ಬಲವುಳ್ಳ ನಾರಾಯಣನು ಆ ರಜಕನನ್ನು ಕೊಂದು, ತನಗೆ ಯೋಗ್ಯವಾದ ವಸ್ತ್ರಗಳನ್ನು ಹಿಡಿದುಕೊಂಡು,  ಬಲರಾಮನಿಗೂ ಮತ್ತು ಗೋಪಾಲಕರಿಗೂ ಕೂಡಾ ಯೋಗ್ಯವಾದ ಬಟ್ಟೆಗಳನ್ನು ಕೊಟ್ಟು, ಉಳಿದ ಬಟ್ಟೆಗಳನ್ನು ಮಾರ್ಗದಮೇಲೆ ಹಾಸಿ, ಆ ಬಟ್ಟೆಯಮೇಲೆ ಕಾಲುಗಳನ್ನು ಇಡುತ್ತಾ ಮುನ್ನೆಡೆದ.

ಗ್ರಾಹ್ಯಾಪಹೇಯರಿಹಿತೈಕಚಿದಾತ್ಮಸಾನ್ದ್ರಸ್ವಾನನ್ದಪೂರ್ಣ್ಣವಪುರಪ್ಯಯಶೋಷಹೀನಃ ।
ಲೋಕಾನ್ ವಿಡಮ್ಬ್ಯ ನರವತ್ಸಮಲಕ್ತಕಾದ್ಯೈರ್ವಪ್ತ್ರಾವಿಭೂಷಿತ ಇವಾಭವದಪ್ರಮೇಯಃ ॥೧೩.೯೯॥

ಸ್ವೀಕಾರ್ಯ, ಅಪಹೇಹ್ಯ, ತ್ಯಾಜ್ಯ ಮೊದಲಾದವುಗಳಿಂದ ರಹಿತನಾಗಿರುವ, ಕೇವಲ ಘನೀಭರಿಸಿದ ಆನಂದವೇ ಮೈದಾಳಿಬಂದಿರುವ ನಾರಾಯಣನು, ಸಮಸ್ತ ದೋಷಗಳಿಂದ ವಿಹಿತನಾದರೂ ಕೂಡಾ,  ಮನುಷ್ಯನಂತೆ ಲೋಕವನ್ನು ಮೋಹಗೊಳಿಸಿ, ಗಂಧ ಮೊದಲಾದವುಗಳಿಂದ,  ಕ್ಷೌರಿಕನಿಂದಲೂ ಕೂಡಾ ಭೂಷಿತನಾದನೋ ಎಂಬಂತೆ ತೋರಿಸುತ್ತಾನೆ.

ಮಾಲಾ ಅವಾಪ್ಯ ಚ ಸುದಾಮತ ಆತ್ಮತನ್ತ್ರಸ್ತಾವಕ್ಷಯೋsನುಜಗೃಹೇ ನಿಜಪಾರ್ಷದೌ ಹಿ ।
ಪೂರ್ವಂ ವಿಕುಣ್ಠಸದನಾದ್ಧರಿಸೇವನಾಯ ಪ್ರಾಪ್ತೌ ಭುವಂ ಮೃಜನಪುಷ್ಪಕರೌ ಪುರಾsಪಿ ॥೧೩.೧೦೦

ನಾಶವಿಲ್ಲದ ನಾರಾಯಣನು ಸರ್ವಸ್ವತಂತ್ರನಾದರೂ,  ಸುದಾಮನೆಂಬ ಮಾಲಾಕಾರನಿಂದ ಮಾಲೆಯನ್ನು ಹೊಂದಿ ಅವನನ್ನು ಅನುಗ್ರಹಿಸಿದ.
ಭಗವಂತನ ಸೇವೆ ಮಾಡುವುದಕ್ಕಾಗಿಯೇ ಭೂಮಿಯಲ್ಲಿ ಹುಟ್ಟಿದ ಆ ಕ್ಷೌರಿಕ-ಮಾಲಾಕಾರರು,  ಪೂರ್ವದಲ್ಲಿ   ವೈಕುಂಠದಲ್ಲೂ ಅದೇ ಸೇವೆಯನ್ನು  ಮಾಡುವವರಾಗಿರುವವರು.

ಸರ್ವೇಷ್ಟಪುಷ್ಟಿಮಿಹ ತತ್ರ ಸರೂಪತಾಂ ಚ ಕೃಷ್ಣಸ್ತಯೋರ್ವರಮದಾದಥ ರಾಜಮಾರ್ಗ್ಗೇ ।
ಗಚ್ಛನ್ ದದರ್ಶ ವನಿತಾಂ ನರದೇವಯೋಗ್ಯಮಾದಾಯ ಗನ್ಧಮಧಿಕಂ ಕುಟಿಲಾಂ ವ್ರಜನ್ತೀಮ್ ೧೩.೧೦೧

ಶ್ರೀಕೃಷ್ಣನು ಅಲ್ಲಿಯೇ, ಅವರಿಬ್ಬರಿಗೂ ಎಲ್ಲಾ ಇಷ್ಟಪುಷ್ಟಿಯನ್ನೂ, ಮೋಕ್ಷದಲ್ಲಿ ಸ್ವಾರೂಪ್ಯವನ್ನೂ ವರವಾಗಿ ಕೊಟ್ಟ.
ತದನಂತರ ರಾಜಮಾರ್ಗದಲ್ಲಿ ಮುಂದೆ ಸಾಗುತ್ತಾ ಶ್ರೀಕೃಷ್ಣ, ಕಂಸನಿಗೆ ಯೋಗ್ಯವಾಗಿರುವ ಗಂಧವನ್ನು ತೆಗೆದುಕೊಂಡು ಹೋಗುತ್ತಿರುವ, ಕುಟಿಲವಾದ ಅಂಗವುಳ್ಳ(ವಕ್ರ ದೇಹವುಳ್ಳ) ಸ್ತ್ರೀಯನ್ನು ಕಂಡ.

ತೇನಾರ್ತ್ಥಿತಾ ಸಪದಿ ಗನ್ಧಮದಾತ್ ತ್ರಿವಕ್ರಾ ತೇನಾಗ್ರಜೇನ ಸಹಿತೋ ಭಗವಾನ್ ಲಿಲಿಮ್ಪೇ ।
ತಾಂ ಚಾsಶ್ವೃಜುತ್ವಮನಯತ್ ಸ ತಯಾsರ್ತ್ಥಿತೋsಲಮಾಯಾಮಿ ಕಾಲತ ಇತಿ ಪ್ರಹಸನ್ನಮುಞ್ಚತ್॥೧೩.೧೦೨॥

ಶ್ರೀಕೃಷ್ಣನಿಂದ ಪ್ರಾರ್ಥಿತಳಾದ ಆ ತ್ರಿವಕ್ರೆ, ತಕ್ಷಣ ತನ್ನಲ್ಲಿದ್ದ ಗಂಧವನ್ನು ಕೃಷ್ಣನಿಗೆ ಅರ್ಪಿಸಿದಳು. ಅವನಾದರೋ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಮೈಗೆ ಗಂಧವನ್ನು ಹಚ್ಚಿಕೊಂಡನು. ಅಷ್ಟೇ ಅಲ್ಲ, ಅವಳನ್ನು ಕೂಡಲೇ ನೆಟ್ಟಗೆ ಮಾಡಿದ ಕೂಡಾ (ಅವಳ ಕುಟಿಲಾಂಗವನ್ನು ನಿವಾರಿಸಿದ). ತದನಂತರ ಅವಳಿಂದ (ನಿನ್ನ ಸಂಗವಾಗಬೇಕು ಎಂದು)ಬೇಡಲ್ಪಟ್ಟವನಾಗಿ, ಸ್ವಲ್ಪ ಕಾಲ ಕಳೆದ ನಂತರ ಬರುತ್ತೇನೆ ಎಂದು ನಗುತ್ತಾ ಆಕೆಯನ್ನು ಕೃಷ್ಣ ಬೀಳ್ಕೊಟ್ಟ.