ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 11, 2022

Mahabharata Tatparya Nirnaya Kannada 22: 167-172

 

ರಾತ್ರೌ ಕೃಷ್ಣೇ ಮುನಿಮದ್ಧ್ಯೇ ನಿವಿಷ್ಟೇ ಘಣ್ಟಾಕರ್ಣ್ಣಃ  ಕರ್ಣ್ಣನಾಮಾ ಪಿಶಾಚೌ ।

ಸಮಾಯಾತಾಂ ಗಿರಿಶೇನ ಪ್ರದಿಷ್ಟೌ ಕೃಷ್ಣಂ ದ್ರಷ್ಟುಂ ದ್ವಾರಕಾಂ ಗನ್ತುಕಾಮೌ ॥೨೨.೧೬೭॥

 

ಆ ರಾತ್ರಿಯಲ್ಲಿ ಕೃಷ್ಣನು ಮುನಿಗಳ ನಡುವಿನಲ್ಲಿ ಇರಲು, ಘಣ್ಟಾಕರ್ಣ ಮತ್ತು ಕರ್ಣ ಎಂಬ ಹೆಸರಿನ ಎರಡು ಪಿಶಾಚಿಗಳು, ಸದಾಶಿವನ ಆದೇಶಕ್ಕೆ ಒಳಗಾಗಿ, ಕೃಷ್ಣನನ್ನು ಕಾಣಲು ದ್ವಾರಕೆಗೆ ತೆರಳಲು ಇಚ್ಛೆಯುಳ್ಳವರಾಗಿ ಬದರಿಕಾಶ್ರಮಕ್ಕೆ ಬಂದವು.

 

ತೌ ದೃಷ್ಟ್ವಾ ಮುನಿಮದ್ಧ್ಯಸ್ಥಂ ಕೇಶವಂ ತದಬೋಧತಃ ।

ಕೃತ್ವಾ ಸ್ವಜಾತಿಚೇಷ್ಟಾಶ್ಚ ದ್ಧ್ಯಾನೇನೈನಮಪಶ್ಯತಾಮ್             ॥೨೨.೧೬೮॥

 

ಆ ಎರಡು ಪಿಶಾಚಿಗಳು ಮುನಿಗಳ ನಡುವೆ ಇರುವ ಕೃಷ್ಣನನ್ನು ನೋಡಿ, ಅಜ್ಞಾನದಿಂದ ಸ್ವಜಾತಿ ಚೇಷ್ಟೆಗಳನ್ನು  ಮಾಡಿದವು. ನಂತರ ಧ್ಯಾನದಲ್ಲಿ ಕೃಷ್ಣ ಯಾರು ಎನ್ನುವುದನ್ನು ತಿಳಿದವು.

 

ದೃಷ್ಟ್ವಾ ಹೃದಿ ಸ್ಥಿತಂ ತಂ ತು ಕೌತೂಹಲಸಮನ್ವಿತೌ ।

ಸ್ತುತ್ವಾ ಭಕ್ತ್ಯಾ ಪ್ರಣಾಮಂ ಚ ಬಹುಶಶ್ಚಕ್ರತುಃ ಶುಭೌ                  ॥೨೨.೧೬೯॥

 

ತಮ್ಮ ಹೃದಯದಲ್ಲಿ ಇರುವ ಕೃಷ್ಣನನ್ನು ಅತ್ಯಂತ ಕುತೂಹಲದಿಂದ ಕಂಡ ಆ ಪಿಶಾಚಿಗಳು, ಸ್ತೋತ್ರಮಾಡಿ, ಭಕ್ತಿಯಿಂದ ಬಹಳ ಸಲ ನಮಸ್ಕಾರ ಮಾಡಿದವು.

 

ತಯೋಃ ಪ್ರಸನ್ನೋ ಭಗವಾನ್ ಸ್ಪೃಷ್ಟ್ವಾ ಗನ್ಧರ್ವಸತ್ತಮೌ ।

ಚಕಾರ ಕ್ಷಣಮಾತ್ರೇಣ ದಿವ್ಯರೂಪಸ್ವರಾನ್ವಿತೌ                         ॥೨೨.೧೭೦॥

 

ಅವರಿಬ್ಬರಿಗೆ ಪ್ರಸನ್ನನಾದ ಭಗವಂತನು, ಆ ಪಿಶಾಚಿಗಳನ್ನು ಮುಟ್ಟಿ, ಕ್ಷಣಮಾತ್ರದಲ್ಲಿ ಅಲೌಕಿಕವಾದ ರೂಪ ಹಾಗೂ ಸ್ವರದಿಂದ ಕೂಡಿರುವ ಗಂಧರ್ವರನ್ನಾಗಿ ಮಾಡಿದನು.

 

ತಾಭ್ಯಾಂ ಪುನರ್ನ್ನೃತ್ತಗೀತಸಂಸ್ತವೈಃ ಪೂಜಿತಃ ಪ್ರಭುಃ ।

ಯಯೌ ಕೈಲಾಸಮದ್ರೀಶಂ ಚಕಾರೇವ ತಪೋSತ್ರ ಚ             ॥೨೨.೧೭೧॥

 

ಅವರಿಬ್ಬರ ಕುಣಿತ, ಹಾಡು, ಸ್ತೋತ್ರಗಳಿಂದ ಪೂಜಿತನಾದ ಸರ್ವಸಮರ್ಥನಾದ ಕೃಷ್ಣನು, ಬೆಟ್ಟಗಳಲ್ಲಿಯೇ ಶ್ರೇಷ್ಠವಾದ ಕೈಲಾಸ ಪರ್ವತವನ್ನು ಕುರಿತು ತೆರಳಿದ ಮತ್ತು ಅಲ್ಲಿ ತಪಸ್ಸನ್ನು ಮಾಡಿದಂತೆ ತೋರಿಸಿದ.

 

ಸ್ವೀಯಾನೇವ ಗುಣಾನ್ ವಿಷ್ಣುರ್ಭುಞ್ಜನ್ ನಿತ್ಯೇನ ಶೋಚಿಷಾ ।

ಶಾರ್ವಂ ತಪಃ ಕರೋತೀವ ಮೋಹಯಾಮಾಸ ದುರ್ಜ್ಜನಾನ್             ॥೨೨.೧೭೨॥

 

ವಿಷ್ಣುವು ತನ್ನ ಒಳಗಿನ ಗುಣವನ್ನೇ ನಿತ್ಯವಾಗಿರುವ ಜ್ಞಾನದಿಂದ ಅನುಭವಿಸುತ್ತಾ  (ತನ್ನ ಗುಣಗಳಿಂದಲೇ ಆನಂದಿಸುತ್ತಾ) ರುದ್ರದೇವರನ್ನು ಕುರಿತಾದ ತಪಸ್ಸನ್ನು ಮಾಡುತ್ತಿರುವನೋ ಎಂಬಂತೆ ದುರ್ಜನರನ್ನು ಮೋಹಗೊಳಿಸಿದ.

Mahabharata Tatparya Nirnaya Kannada 22: 157-166

[ಅರ್ಜುನ ಇಂದ್ರಲೋಕದಲ್ಲಿ ಅಭ್ಯಾಸ ಮಾಡುತ್ತಿರುವ ಆ ಕಾಲದಲ್ಲಿ ಇತ್ತ ದ್ವಾರಕೆಯಲ್ಲಿ ಏನು ಘಟನೆ ನಡೆಯಿತು ಎನ್ನುವುದನ್ನು ವಿವರಿಸುತ್ತಾರೆ:]

 

ಸುಭದ್ರಯಾSಭಿಮನ್ಯುನಾ ಸಹ ಸ್ವಕಾಂ ಪುರಂ ಗತಃ ।

ಜನಾರ್ದ್ದನೋSತ್ರ ಸಂವಸನ್ ಕದಾಚಿದಿತ್ಥಮೈಕ್ಷತ      ॥೨೨.೧೫೭॥

 

ಮಯಾ ವರೋ ಹಿ ಶಮ್ಭವೇ ಪ್ರದತ್ತ ಆಸ ಪೂರ್ವತಃ ।

ವರಂ ಗ್ರಹೀಷ್ಯ ಏವ ತೇ ಸಕಾಶತೋ ವಿಮೋಹಯನ್  ॥೨೨.೧೫೮॥

 

ಸುಭದ್ರೆ, ಅಭಿಮನ್ಯುವಿನೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದ ಜನಾರ್ದನನು, ದ್ವಾರಕೆಯಲ್ಲಿ ವಾಸಮಾಡುತ್ತಾ, ಒಮ್ಮೆ ಈರೀತಿಯಾಗಿ ಚಿಂತಿಸಿದ: 

‘ನಾನು ಮೊಹಿಸುವವನಾಗಿ ನಿನ್ನ ಸಕಾಶದಿಂದ ವರವನ್ನು ತೆಗೆದುಕೊಳ್ಳುವೆ’ - ಈ ಪ್ರಕಾರವಾಗಿ ನನ್ನಿಂದ ಪೂರ್ವದಲ್ಲಿ ರುದ್ರನಿಗೆ ವರವು ಕೊಡಲ್ಪಟ್ಟಿದೆಯಷ್ಟೇ.

 

[ಈ ಮಾತಿಗೆ ಪೂರಕವಾಗಿರುವ ಇತರ ಪುರಾಣದ ವಚನವನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸುತ್ತಾರೆ:]

 

‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹಿಷ್ಯಾಮಿ ವರಂ ಸದಾ ।

‘ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು’ ॥೨೨.೧೫೯॥

 

ರುದ್ರನೇ, ದ್ವಾಪರಯುಗದಲ್ಲಿ ಮನುಷ್ಯರಂತೆ ಇರುವ ದೇಹದಿಂದ ಹುಟ್ಟಿ,  ನಿನ್ನನ್ನು ಆರಾಧಿಸಿ, ವರವನ್ನು ಬೇಡುತ್ತೇನೆ. [ಪದ್ಮಪುರಾಣದಲ್ಲಿ ಈ ವಾಕ್ಯವನ್ನು ಕಾಣಬಹುದು. ‘ನಿನ್ನನ್ನು ಕುರಿತು ತಪಸ್ಸು ಮಾಡುತ್ತೇನೆ, ದುರ್ಜನರಿಗೆ ಮೋಹವನ್ನು ಕೊಡುತ್ತೇನೆ’ ಎಂದು ಭಗವಂತ ತನಗೆ ಹೇಳಿದ ಮಾತನ್ನು ಶಿವ ಪಾರ್ವತಿಗೆ ಹೇಳುವುದನ್ನು ಅಲ್ಲಿ ಕಾಣಬಹುದು. ಈ ಕುರಿತು ಈಗಾಗಲೇ ಪ್ರಥಮ ಅಧ್ಯಾಯದಲ್ಲಿ(೧.೫೭) ವಿಶ್ಲೇಸಿದ್ದೇವೆ]

 

ಇತಿ ವಾಕ್ಯಮೃತಂ ಕರ್ತ್ತುಮಭಿಪ್ರಾಯಂ ವಿಜಜ್ಞುಷೀ ।

ಪ್ರೀತ್ಯರ್ತ್ಥಂ ವಾಸುದೇವಸ್ಯ ರುಗ್ಮಿಣೀ ವಾಕ್ಯಮಬ್ರವೀತ್ ॥೨೨.೧೬೦॥

 

ಪೂರ್ವೋಕ್ತವಾದ ಕೃಷ್ಣನ ಮಾತನ್ನು ಸತ್ಯವನ್ನಾಗಿ ಮಾಡಲು, ಭಗವಂತನ ಅಭಿಪ್ರಾಯವನ್ನು ವಿಶೇಷವಾಗಿ  ತಿಳಿದ ರುಗ್ಮಿಣಿಯು ಶ್ರೀಕೃಷ್ಣನ ಪ್ರೀತಿಗಾಗಿ ವಾಕ್ಯವನ್ನು ಹೇಳಿದಳು:

 

ಜಾತೇSಪಿ ಪುತ್ರೇ ಪುತ್ರಾರ್ತ್ಥಂ ಸಾ ಹಿ ವೇದ ಮನೋಗತಮ್ ।

ಪುತ್ರೋ ಮೇ ಬಲವಾನ್ ದೇವ ಸ್ಯಾತ್ ಸರ್ವಾಸ್ತ್ರವಿದುತ್ತಮಃ ॥೨೨.೧೬೧॥

 

ಭಗವಂತನ ಅಭಿಪ್ರಾಯವನ್ನು ತಿಳಿದವಳಾಗಿರುವ ರುಗ್ಮಿಣಿಯು, ಮಗನು ಹುಟ್ಟಿದ್ದರೂ ಕೂಡಾ, ‘ಮಗ ಬೇಕು’ ಎನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾ ಹೇಳುತ್ತಾಳೆ:  ‘ದೇವಾ, ನನಗೆ ಎಲ್ಲಾ ಅಸ್ತ್ರಗಳನ್ನು ಬಲ್ಲವರಲ್ಲಿ ಅಗ್ರಗಣ್ಯನಾಗಿರುವ ಮಗನೊಬ್ಬ ಆಗಬೇಕು’ ಎಂದು.

 

ಇತ್ಯುಕ್ತೋ ಭಗವಾನ್ ದೇವ್ಯಾ ಸಮ್ಮೋಹಾಯ ಸುರದ್ವಿಷಾಮ್ ।

ಯಯೌ ಸುಪರ್ಣ್ಣಮಾರು̐ಹ್ಯ ಸ್ವೀಯಂ ಬದರಿಕಾಶ್ರಮಮ್ ॥೨೨.೧೬೨॥

 

ಈರೀತಿಯಾಗಿ ಹೇಳಲ್ಪಟ್ಟ ಶ್ರೀಕೃಷ್ಣನು ದೈತ್ಯರನ್ನು ಮೋಹಗೊಳಿಸುವುದಕ್ಕಾಗಿ, ರುಗ್ಮಿಣೀದೇವಿಯಿಂದ ಕೂಡಿಕೊಂಡು, ಗರುಡನನ್ನು ಏರಿ, ತನ್ನದೇ ಆಗಿರುವ ಬದರಿಕಾಶ್ರಮವನ್ನು ಕುರಿತು ತೆರಳಿದನು,

 

[ಈ ಮೇಲಿನ ವಿಷಯಕ್ಕೆ ಸಂಬಂಧಿಸಿದ ಪುರಾಣ ಶ್ಲೋಕವನ್ನು ಇಲ್ಲಿ ಆಚಾರ್ಯರು ಉಲ್ಲೇಖಿಸುತ್ತಾರೆ:]

 

‘ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।

‘ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿ ಕಾರಯ             ॥೨೨.೧೬೩॥

 

‘ಅತತ್ಥ್ಯಾನಿ ವಿತತ್ಥ್ಯಾನಿ ದರ್ಶಯಸ್ವ ಮಹಾಭುಜ ।

‘ಪ್ರಕಾಶಂ ಕುರು ಚಾSತ್ಮಾನಮಪ್ರಕಾಶಂ ಚ ಮಾಂ ಕುರು             ॥೨೨.೧೬೪॥

 

‘ಅಹಂ ತ್ವಾಂ ಪೂಜಯಿಷ್ಯಾಮಿ ಲೋಕಸಮ್ಮೋಹನೋತ್ಸುಕಃ ।

‘ತಮೋSಸುರಾ ನಾನ್ಯಥಾ ಹಿ ಯಾನ್ತೀತ್ಯೇತನ್ಮತಂ ಮಮ’             ॥೨೨.೧೬೫॥

 

ಇತ್ಯುಕ್ತವಚನಂ ಪೂರ್ವಂ ಕೇಶವೇನ ಶಿವಾಯ ಯತ್ ।

ತತ್ ಸತ್ಯಂ ಕರ್ತುಮಾಯಾತಂ ಕೃಷ್ಣಂ ಬದರಿಕಾಶ್ರಮಮ್ ।

ಸರ್ವಜ್ಞಾ ಮುನಯಃ ಸರ್ವೇ ಪೂಜಯಾಞ್ಚಕ್ರಿರೇ ಪ್ರಭುಮ್             ॥೨೨.೧೬೬॥

 

‘ಸರ್ವೋತ್ತಮನಾಗಿರುವ ನಾನು ದುರ್ಜನರಿಗೆ ಮೋಹವನ್ನು ಕೊಡುತ್ತೇನೆ. ಓ ರುದ್ರನೇ, ದೊಡ್ಡ ತೊಳ್ಗಳುಳ್ಳವನೇ, ನೀನೂ ಕೂಡಾ ಪಾಶುಪತ ಮೊದಲಾದ ಆಗಮಗಳನ್ನು ರಚನೆ ಮಾಡು.

ಪರಾಕ್ರಮಿಯೇ, ಯಾವುದು ಸತ್ಯವಲ್ಲವೋ, ಯಾವುದು ಸತ್ಯಕ್ಕೆ ವಿರುದ್ದವೋ, ಅದನ್ನು ನೀನು ತೋರಿಸು. ನಿನ್ನನ್ನು ವಿಪರೀತವಾಗಿ ಪ್ರಕಾಶಿಸು. ನನ್ನನ್ನು ಮುಚ್ಚಿಬಿಡು. 

ನಾನು ಲೋಕವನ್ನು ದಾರಿ ತಪ್ಪಿಸಲು ನಿನ್ನನ್ನು ಪೂಜಿಸುತ್ತೇನೆ. ದೈತ್ಯರು ಇದನ್ನೇ ನಂಬಿ ಅನ್ಧಂತಮಸ್ಸಿಗೆ ತೆರಳುತ್ತಾರೆ. ಹೀಗೆ ಮಾಡಿಲ್ಲವೆಂದರೆ ಅವರು ಅನ್ಧಂತಮಸ್ಸಿಗೆ ಹೋಗುವುದಿಲ್ಲ.

ಈರೀತಿಯಾಗಿ ಹಿಂದೆ ತಾನೇ ಹೇಳಿದ ಮಾತನ್ನು ಸತ್ಯವನ್ನಾಗಿ ಮಾಡಲು ಬದರಿಕಾಶ್ರಮಕ್ಕೆ ಬಂದಿರುವ ಶ್ರೀಕೃಷ್ಣನನ್ನು ಸರ್ವಜ್ಞರಾದ ಎಲ್ಲಾ ಮುನಿಗಳೂ ಕೂಡಾ ಪೂಜಿಸಿದರು.

[‘ಏಷ ಮೋಹಂ..’ ಇತ್ಯಾದಿಯಾದ ಪುರಾಣದ ವಚನಗಳನ್ನು ನಾವು ಪ್ರಥಮ ಅಧ್ಯಾಯದಲ್ಲಿ(೧.೪೮-೧.೫೫)  ವಿಶ್ಲೇಷಿಸಿದ್ದೇವೆ. ಹರಿವಂಶದಲ್ಲಿಯೂ ಕೂಡಾ ಸ್ವಲ್ಪಮಟ್ಟಿಗೆ ಈ ಕುರಿತು ಸೂಚಿಸಲಾಗಿದೆ: ‘ ಅಹಂ ತು ಯಾಸ್ಯೇ ಕೈಲಾಸಂ ಕುತಶ್ಚಿತ್ ಕಾರಣಾನ್ನೃಪಾಃ । ಶಙ್ಕರಂ ದ್ರಷ್ಟುಕಾಮೋSಸ್ಮಿ ಭೂತಭಾವನಭಾವನಮ್’ (ಭ.ಪ. ೭೪.೨೦).  ವಾಮನ ಪುರಾಣದಲ್ಲಿ(೭೩.೪೫) ಈ ಕುರಿತು ಹೇಳಿರುವುದನ್ನು ಕಾಣಬಹುದು: ‘ ದೇವಕಾರ್ಯಾವತಾರೇಷು ಮಾನುಷತ್ವಮುಪಾಗತಃ ।  ತ್ವಾಮೇವಾSರಾಧಯಿಷ್ಯಾಮಿ ತ್ವಂ ಚ ಮೇ ವರದೋ ಭವ’ ]

Monday, June 6, 2022

Mahabharata Tatparya Nirnaya Kannada 22: 148-156

 

ನಮಶ್ಚಕ್ರೇ ತತಃ ಪ್ರಾದಾದಸ್ತ್ರಂ ಪಾಶುಪತಂ ಶಿವಃ ।

ಅಸ್ತ್ರಂ ತದ್ ವಿಷ್ಣುದೈವತ್ಯಂ ಸಾಧಿತಂ ಶಙ್ಕರೇಣ ಯತ್ ॥೨೨.೧೪೮॥

 

ತಸ್ಮಾತ್ ಪಾಶುಪತಂ ನಾಮ ಸ್ವಾನ್ಯಸ್ತ್ರಾಣ್ಯಪರೇ ಸುರಾಃ ।

ದದುಸ್ತದೈವ ಪಾರ್ತ್ಥಾಯ ಸರ್ವೇ ಪ್ರತ್ಯಕ್ಷಗೋಚರಾಃ ॥೨೨.೧೪೯॥

 

ತದನಂತರ ಸದಾಶಿವನು ಪಾಶುಪತವಾಗಿರುವ ಅಸ್ತ್ರವನ್ನು ಕೊಟ್ಟನು. ಆ ಅಸ್ತ್ರವು ನಾರಾಯಣನನ್ನೇ ದೇವತೆಯನ್ನಾಗಿ ಹೊಂದಿದೆ. ಸದಾಶಿವ ಅದನ್ನು ಸಾಕ್ಷಾತ್ಕರಿಸಿಕೊಂಡಿರುವ ಕಾರಣದಿಂದ(ಸದಾಶಿವನೇ ಋಷಿಯಾಗಿ ಉಳ್ಳದ್ದರಿಂದ) ಅದಕ್ಕೆ ‘ಪಾಶುಪತ’ ಎನ್ನುವ ಹೆಸರಿತ್ತು. ತದನಂತರ ಉಳಿದ ಎಲ್ಲಾ ದೇವತೆಗಳೂ ಆಗಲೇ ತಮ್ಮ ಅಸ್ತ್ರಗಳನ್ನು ಪ್ರತ್ಯಕ್ಷ ಗೋಚರವಾಗಿ ಅರ್ಜುನನಿಗೆ ಕೊಟ್ಟರು.

[ಮಹಾಭಾರತದಲ್ಲಿ(ವನಪರ್ವ ೪೦.೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಕಾಮಯೇ ದಿವ್ಯಮಸ್ತ್ರಂ ತದ್ ಘೋರಂ ಪಾಶುಪತಂ ಪ್ರಭೋ । ಯತ್ತದ್ ಬ್ರಹ್ಮಶಿರೋ ನಾಮ ರೌದ್ರಂ ಭೀಮಪರಾಕ್ರಮಮ್’ – ಸದಾಶಿವನಿಗೆ ಅರ್ಜುನ ಹೇಳುವ ಮಾತು ಇದಾಗಿದೆ: ‘ಯಾವುದನ್ನು ಬ್ರಹ್ಮಶಿರಾ ಎಂದು ಕರೆಯುತ್ತಾರೋ, ಆ ಅಸ್ತ್ರವನ್ನು ನಾನು ಬಯಸುತ್ತೇನೆ. ಅದನ್ನು ನನಗೆ ಕೊಡು’ ಎಂದು. ಮುಂದೆ ಅಲ್ಲಿ ಹೀಗೆ ಹೇಳಿದ್ದಾರೆ:  ಯತ್ತತ್ ಬ್ರಹ್ಮಶಿರೋ ನಾಮ ತಪಸಾ ರುದ್ರಮಾಗಮತ್’ (೮೯.೧೧) ಬ್ರಹ್ಮಶಿರ ಎನ್ನುವ ಅಸ್ತ್ರವೇನಿದೆ, ಅದು ತಪಸ್ಸಿನಿಂದ ರುದ್ರನಿಗೆ ಒಲಿದದ್ದು ಎಂದು.  ಹೀಗಾಗಿ ಈ ಅಸ್ತ್ರದ ದೇವತೆ ರುದ್ರ ಅಲ್ಲ. ಇಲ್ಲಿ ದೇವತೆ ‘ಬ್ರಹ್ಮ’ ಎಂದು ಹೇಳಿರುವುದು ತಿಳಿಯುತ್ತದೆ. ಹಾಗಾಗಿ ಯಾರು  ಅಥಾತೋ ಬ್ರಹ್ಮಜಿಜ್ಞಾಸಾ’ ಎನ್ನುವಲ್ಲಿ ಬ್ರಹ್ಮಾ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿದ್ದಾನೋ ಅವನೇ ಪಾಶುಪತ ಅಸ್ತ್ರದ ದೇವತೆ. ಅವನೇ ಶ್ರೀಮನ್ನಾರಾಯಣ].

 

ಇನ್ದ್ರೋSರ್ಜ್ಜುನಂ ಸಮಾಗಮ್ಯ ಪ್ರಾಹ ಪ್ರೀತೋSಸ್ಮಿ ತೇSನಘ

ರುದ್ರದೇಹಸ್ಥಿತಂ ಬ್ರಹ್ಮ ವಿಷ್ಣ್ವಾಖ್ಯಂ ತೋಷಿತಂ ತ್ವಯಾ ॥೨೨.೧೫೦॥

 

ತೇನ ಲೋಕಂ ಮಮಾSಗಚ್ಛ ಪ್ರೇಷಯಾಮಿ ರಥಂ ತವ ।

ಇತ್ಯುಕ್ತ್ವಾ ಪ್ರಯಯಾವಿನ್ದ್ರಸ್ತದ್ರಥೇನ ಚ ಮಾತಲಿಃ ॥೨೨.೧೫೧॥

 

ಇಂದ್ರನು ಅರ್ಜುನನ ಬಳಿ ಬಂದು ಹೀಗೆ ಹೇಳಿದ:  ‘ಪಾಪವಿಲ್ಲದ ಹೇ ಅರ್ಜುನನೇ, ನಿನ್ನಿಂದ ರುದ್ರನ ದೇಹದೊಳಗಿರುವ ವಿಷ್ಣು ಎನ್ನುವ ಹೆಸರಿನ ಬ್ರಹ್ಮನು ಸಂತುಷ್ಟಗೊಳಿಸಲ್ಪಟ್ಟಿದ್ದಾನೆ. (ನೀನು ಶಿವನ ಅಂತರ್ಯಾಮಿ ಪರಮಾತ್ಮನನ್ನು ಸಂತೋಷಗೊಳಿಸಿದ್ದೀಯ). ಅದರಿಂದ ನನಗೆ ಪ್ರೀತಿಯಾಗಿದೆ. ಆ ವಿಷ್ಣುವಿನ ಪ್ರೇರಣೆಯಂತೇ ನೀನು ನನ್ನ ಲೋಕವನ್ನು ಕುರಿತು ಬಾ. ನಿನಗಾಗಿ ರಥವನ್ನು ಕಳುಹಿಸುತ್ತೇನೆ’ ಎಂದು. ಹೀಗೆ ಹೇಳಿದ ಇಂದ್ರನು  ಅಲ್ಲಿಂದ ತೆರಳಿದ ನಂತರ ಇಂದ್ರನ ರಥದೊಂದಿಗೆ ಮಾತಲಿಯು ಅರ್ಜುನನ ಬಳಿಗೆ ಬಂದ.

 

ಆಯಾತ್ ಪಾರ್ತ್ಥಸ್ತಮಾರು̐ಹ್ಯ ಯಯೌ ತಾತನಿವೇಶನಮ್ ।

ಪೂಜಿತೋ ದೈವತೈಃ ಸರ್ವೈರಿದ್ರೇಣೈವ ನಿವೇಶಿತಃ ।

ತೇನ ಸಾರ್ದ್ಧಮುಪಾಸೀದತ್ ತಸ್ಮಿನ್ನೈನ್ದ್ರೇ ವರಾಸನೇ             ॥೨೨.೧೫೨॥

 

ಆ ರಥವನ್ನು ಏರಿದ ಅರ್ಜುನ ಇಂದ್ರನ ಮನೆಗೆ ತೆರಳಿದ. ಅಲ್ಲಿ ಎಲ್ಲಾ ದೇವತೆಗಳಿಂದ ಸತ್ಕರಿಸಲ್ಪಟ್ಟವನಾಗಿ, ಇಂದ್ರನಿಂದಲೇ, ಇಂದ್ರನಿಗೆ ಸಂಬಂಧಪಟ್ಟ ಸಿಂಹಾಸನದಲ್ಲಿ ಇಂದ್ರನ ಜೊತೆಗೆ ಕುಳ್ಳಿರಿಸಲ್ಪಟ್ಟವನಾದ.  

 

ಪ್ರೀತ್ಯಾ ಸಮಾಶ್ಲಿಷ್ಯ ಕುರುಪ್ರವೀರಂ ಶಕ್ರೋ ದ್ವಿತೀಯಾಂ ತನುಮಾತ್ಮನಃ ಸಃ ।

ಈಕ್ಷನ್ ಮುಖಂ ತಸ್ಯ ಮುಮೋದ ಸೋSಪಿ ಹ್ಯುವಾಸ ತಸ್ಮಿನ್ ವತ್ಸರಾನ್ ಪಞ್ಚ ಲೋಕೇ ॥೨೨.೧೫೩॥ ॥

 

ಇಂದ್ರನು ತನ್ನ ಎರಡನೇ ದೇಹವಾದ ಅರ್ಜುನನನ್ನು ಪ್ರೀತಿಯಿಂದ ಆಲಿಂಗಿಸಿ, ಅರ್ಜುನನ ಮೊರೆಯನ್ನು ನೋಡುತ್ತಾ ಸಂತೋಷಪಟ್ಟ. ಅರ್ಜುನನು ಆ ಲೋಕದಲ್ಲಿ ಐದು ವರ್ಷಗಳ ಕಾಲ ವಾಸಮಾಡಿದ.

 

ಅಸ್ತ್ರಾಣಿ ತಸ್ಮಾ ಅದಿಶತ್ ಸ ವಾಸವೋ ಮಹಾನ್ತಿ ದಿವ್ಯಾನಿ ತದೋರ್ವಶೀ ತಮ್ ।

ಸಮ್ಪ್ರಾಪ್ಯ ಭಾವೇನ ತು ಮಾನುಷೇಣ ಮಾತಾ ಕುಲಸ್ಯೇತಿ ನಿರಾಕೃತಾSಭೂತ್ ॥೨೨.೧೫೪॥

 

ಆ ಇಂದ್ರನು ದೊಡ್ಡ ದೊಡ್ಡ ಅಲೌಕಿಕವಾಗಿರುವ ಅಸ್ತ್ರಗಳನ್ನು ಅರ್ಜುನನಿಗಾಗಿ ನೀಡಿದ. ಆಗ ಅರ್ಜುನನನ್ನು ಊರ್ವಶಿಯು ಹೊಂದಿ(ಬಯಸಿ), ಮಾನುಷ್ಯ ಸಂಸ್ಕಾರದಿಂದಾಗಿ ನಮ್ಮ ಕುಲದ ಮುತ್ತಜ್ಜಿ ಎಂದು, ಅರ್ಜುನನಿಂದ ನಿರಾಕರಿಸಲ್ಪಟ್ಟಳು.  

[ಅರ್ಜುನ ಇಂದ್ರನಿಂದ ಅಸ್ತ್ರಗಳನ್ನು ಪಡೆದ. ನಂತರ ಊರ್ವಶಿ ಅರ್ಜುನನನ್ನು ಬಯಸಿದಳು. ಆದರೆ ಅವನು ಅವಳಿಗೆ ನಮಸ್ಕರಿಸಿ,  ನೀನು ನಮ್ಮ ಕುಲದ ಮುತ್ತಜ್ಜಿ (ಯಯಾತಿಯ ಅಪ್ಪ ನಹುಷ. ನಹುಷನ ಅಪ್ಪ ಆಯು, ಆಯುವಿನ ಅಪ್ಪ ಪುರೂರವಸ್, ಪುರೂರವಸ್  ಹೆಂಡತಿ ಊರ್ವಶಿ).  ಎನ್ನುವ ಕಾರಣದಿಂದ ತಾಯಿಯಂತೆ ಅವಳನ್ನು ಕಂಡು ನಮಸ್ಕರಿಸಿದ. ಮನುಷ್ಯ ಸಂಸ್ಕಾರದಿಂದ  ಅರ್ಜುನ ಈ ರೀತಿ ಮಾಡಿದ]   

 

ಷಣ್ಢೋ ಭವೇತ್ಯೇವ ತಯಾSಭಿಶಪ್ತೇ ಪಾರ್ತ್ಥೇ ಶಕ್ರೋSನುಗ್ರಹಂ ತಸ್ಯ ಚಾದಾತ್ ।

ಸಂವತ್ಸರಂ ಷಣ್ಢರೂಪೀ ಚರಸ್ವ ನ ಷಣ್ಢತಾ ತೇ ಭವತೀತಿ ಧೃಷ್ಣುಃ ॥೨೨.೧೫೫॥

 

ಅವಳಿಂದ ‘ನಪುಂಸಕನಾಗು’ ಎಂದು ಅರ್ಜುನನು ಶಪಿಸಲ್ಪಡಲು, ಶತ್ರುಗಳನ್ನು ಎದುರಿಸುವ ಇಂದ್ರನು ಅವನಿಗೆ ಆ ಶಾಪವನ್ನು ಅನುಗ್ರಹನ್ನಾಗಿ ಮಾಡಿಕೊಟ್ಟ. ಅಜ್ಞಾತವಾಸದಲ್ಲಿ ಒಂದು ವರ್ಷದ ಕಾಲ  ಷಣ್ಢನಾಗಿ ತಿರುಗಾಡು, ಮುಂದೆ ನಿನಗೆ ಷಣ್ಢತ್ವವು ಬರುವುದಿಲ್ಲ’ ಎಂದು ಆ ಶಾಪವನ್ನು ಇಂದ್ರ ವರವನ್ನಾಗಿ ಪರಿವರ್ತಿಸಿದ.

 

ತತೋSವಸತ್ ಪಾಣ್ಡವೇಯೋ ಗಾನ್ಧರ್ವಂ ವೇದಮಭ್ಯಸನ್ ।

ಗನ್ಧರ್ವಾಚ್ಚಿತ್ರಸೇನಾತ್ತು ತಥಾSಸ್ತ್ರಾಣಿ ಸುರೇಶ್ವರಾತ್ ॥೨೨.೧೫೬॥

 

ತದನಂತರ ಅರ್ಜುನನನ್ನು ಸಂಗೀತ, ನಾಟ್ಯ, ಮೊದಲಾದುದಕ್ಕೆ ಸಂಬಂಧಿಸಿದ ವೇದವನ್ನು ಚಿತ್ರಸೇನನೆಂಬ ಗಂಧರ್ವನಿಂದ ಅಭ್ಯಾಸಮಾಡುತ್ತಾ, ಇಂದ್ರನಿಂದ ಅಸ್ತ್ರಗಳನ್ನೂ ಅಭ್ಯಾಸಮಾಡುತ್ತಾ, ಆವಾಸಮಾಡಿದ.

Friday, June 3, 2022

Mahabharata Tatparya Nirnaya Kannada 22: 142-147

 

[ಹಾಗಿದ್ದರೆ – ನಾನು ಭೂಮಿಯಮೇಲೆ ಇರುವಾಗ ಅರ್ಜುನನನ್ನು ಯಾರೊಬ್ಬರೂ ಗೆಲ್ಲುವುದಿಲ್ಲ ಎಂದು ಶ್ರೀಕೃಷ್ಣನ ವರವಿದ್ದರೂ ಕೂಡ, ಇಲ್ಲಿ ಏಕೆ ಅರ್ಜುನ ಪರಾಜಯವನ್ನು ಹೊಂದಿದ ಎಂದರೆ ಹೇಳುತ್ತಾರೆ- ]

 

ಪೂರ್ವಂ ಸಮ್ಪ್ರಾರ್ತ್ಥಯಾಮಾಸ ಶಙ್ಕರೋ ಗರುಡಧ್ವಜಮ್ ।

ಅವರಾಣಾಂ ವರಂ ಮತ್ತೋ ಯೇಷಾಂ ತ್ವಂ ಸಮ್ಪ್ರಯಚ್ಛಸಿ ॥೨೨.೧೪೨॥

 

ಅಜೇಯತ್ವಂ ಪ್ರಸಾದಾತ್ ತೇ ವಿಜೇಯಾಃ ಸ್ಯುರ್ಮ್ಮಯಾSಪಿ ತೇ ।

ಇತ್ಯುಕ್ತಃ ಪ್ರದದೌ ವಿಷ್ಣುರುಮಾಧೀಶಾಯ ತಂ ವರಮ್ ॥೨೨.೧೪೩॥

 

ಹಿಂದೆ ಶಂಕರನು ‘ನನಗಿಂತ ಕೆಳಗಿನ ಯಾರಿಗೆ ನೀನು ಅಜೆಯತ್ವದ ವರವನ್ನು ಕೊಡುತ್ತೀಯೋ, ಅವರೆಲ್ಲರೂ ನಿನ್ನ ಅನುಗ್ರಹದಿಂದ ನನ್ನಿಂದ ಗೆಲ್ಲಲ್ಪಡಲು ಅರ್ಹರಾಗಿರಬೇಕು’ ಎಂದು ಗರುಡಧ್ವಜ ವಿಷ್ಣುವಿನಲ್ಲಿ ಪ್ರಾರ್ಥಿಸಿ, ಭಗವಂತನಿಂದ ಆರೀತಿಯ ವರವನ್ನು ಪಡೆದಿದ್ದ.

[ಉದಾಹರಣೆಗೆ:  ಹಿಂದೆ ಬಸ್ಮಾಸುರನಿಗೆ ವರವನ್ನು ನೀಡಿದ್ದ ಶಿವ ಅವನಿಂದಲೇ ಸಮಸ್ಯಗೆ ಒಳಪಟ್ಟಿರುವ ಪ್ರಸಂಗದಂತೆ  ಆಗಬಾರದು ಎಂದು ಸದಾಶಿವ ಭಗವಂತನಲ್ಲಿ ವರವನ್ನು ಪಡೆದಿದ್ದ].   

 

ತೇನಾಜಯಚ್ಛ್ವೇತವಾಹಂ ಗಿರಿಶೋ ರಣಮದ್ಧ್ಯಗಮ್ ।

ಕೇವಲಾನ್ ವೈಷ್ಣವಾನ್ ಮನ್ತ್ರಾನ್ ವ್ಯಾಸಃ ಪಾರ್ತ್ಥಾಯ ನೋ ದದೌ ॥೨೨.೧೪೪॥

 

ಏತಾವತಾSಲಂ ಭೀಷ್ಮಾದೇರ್ಜ್ಜಯಾರ್ತ್ಥಮಿತಿ ಚಿದ್ಧನಃ ।

ಕೇವಲೈರ್ವೈಷ್ಣವೈರ್ಮ್ಮನ್ತ್ರೈಃ ಸ್ವದತ್ತೈರ್ವಿಜಯಾವಹೈಃ ॥೨೨.೧೪೫॥

 

ಅತಿವೃದ್ಧಸ್ಯ ಪಾರ್ತ್ಥಸ್ಯ ದರ್ಪ್ಪಃ ಸ್ಯಾದಿತ್ಯಚಿನ್ತಯತ್ ।

ಪಾರ್ತ್ಥಃ ಸಙ್ಜ್ಞಾಮವಾಪ್ಯಾಥ ಜಯಾರ್ತ್ಥ್ಯಾರಾಧಯಚ್ಛಿವಮ್              ॥೨೨.೧೪೬॥

 

ವ್ಯಾಸೋದಿತೇನ ಮನ್ತ್ರೇಣ ತಾನಿ ಪುಷ್ಪಾಣಿ ತಚ್ಛಿರಃ ।

ಆರುಹನ್ ಸ ತು ತಂ ಜ್ಞಾತ್ವಾ ರುದ್ರ ಇತ್ಯೇವ ಫಲ್ಗುನಃ ॥೨೨.೧೪೭॥

 

ಹೀಗಾಗಿ ಅರ್ಜುನನನ್ನು ಯುದ್ಧದಲ್ಲಿ ಸದಾಶಿವ ಗೆದ್ದ. ವೇದವ್ಯಾಸರು ಅರ್ಜುನನಿಗೆ ಕೇವಲ ವೈಷ್ಣವ (ವಿಷ್ಣುವೇ ಋಷಿಯಾಗಿರುವ, ವಿಷ್ಣುವೇ ದೇವತೆಯಾಗಿರುವ) ಮಂತ್ರವನ್ನು ಕೊಡಲಿಲ್ಲ. ‘ಇದು ಭೀಷ್ಮ ಹಾಗೂ ದ್ರೋಣಾದಿಗಳನ್ನು ಗೆಲ್ಲಲು ಸಾಕು’ ಎಂದು ಬೇರೆ ದೇವತೆಗಳ ಮಂತ್ರವನ್ನು ಉಪದೇಶ ಮಾಡಿದ್ದರು. (ಏಕೆ ಹೀಗೆ ಎಂದರೆ: ) ಕೇವಲ ತಾನು ಉಪದೇಶ ಮಾಡಿದ ವೈಷ್ಣವ ಮಂತ್ರಗಳಿಂದ ವಿಪರೀತವಾದ ಗೆಲುವನ್ನು ಅರ್ಜುನ ಹೊಂದಿದರೆ, ಅದರಿಂದ ಅವನಿಗೆ ಅಹಂಕಾರ ಬರಬಹುದು ಎಂದು ಚಿಂತಿಸಿ, ಇತರ ದೇವತಾಕವಾದ ಮಂತ್ರಗಳನ್ನು ಕೊಟ್ಟಿದ್ದರು.

ಇತ್ತ ಮೂರ್ಛೆಯಿಂದೆದ್ದ ಅರ್ಜುನ ಗೆಲುವಿಗಾಗಿ ವೇದವ್ಯಾಸರು ಹೇಳಿದ ಮಂತ್ರಗಳಿಂದ ಶಿವನನ್ನು ಆರಾಧಿಸಿದ. ಆದರೆ ಅವನು ಶಿವನಿಗೆ ಅರ್ಪಿಸಿದ ಹೂವುಗಳು ಬೇಡನ ವೇಷದಲ್ಲಿರುವ ಸದಾಶಿವನ ತಲೆಯನ್ನು ಏರಿದವು. ಆಗ ಅರ್ಜುನ ಬೇಡನ ವೇಷದಲ್ಲಿರುವವನು ಸದಾಶಿವ ಎಂದು ತಿಳಿದು. ಅವನಿಗೆ ನಮಸ್ಕರಿಸಿದನು.

Wednesday, June 1, 2022

Mahabharata Tatparya Nirnaya Kannada 22: 134-141

 

ಷಣ್ಮಾಸೇsತಿಗತೇSಪಶ್ಯನ್ಮೂಕಂ ನಾಮಾಸುರಂ ಗಿರೌ ।

ವರಾಹರೂಪಮಾಯಾತಂ ವಧಾರ್ತ್ಥಂ ಫಲ್ಗುನಸ್ಯ ಚ ॥೨೨.೧೩೪॥

 

ಆರು ತಿಂಗಳಾದಮೇಲೆ ಆ ಬೆಟ್ಟದಲ್ಲಿ ತನ್ನನ್ನು ವಧಿಸಲೆಂದು ಬಂದಿರುವ ಹಂದಿಯ ರೂಪವನ್ನು ಧರಿಸಿರುವ ಮೂಕನೆಂಬ ಅಸುರನನ್ನು ಇಂದ್ರಕೀಲಕ ಪರ್ವತದಲ್ಲಿ ಅರ್ಜುನ ಕಂಡ.

 

ತಂ ಜ್ಞಾತ್ವಾ ಫಲ್ಗುನೋ ವೀರಃ ಸಜ್ಯಂ ಕೃತ್ವಾ ತು ಗಾಣ್ಡಿವಮ್ ।

ಚಿಕ್ಷೇಪ ವಜ್ರಸಮಿತಾಂಸ್ತತ್ಕಾಯೇ ಸಾಯಕಾನ್ ಬಹೂನ್ ॥೨೨.೧೩೫॥

 

ಶೂರನಾದ ಅರ್ಜುನನ್ನು ಮೂಕನೆಂಬ ಅಸುರ ಬಂದದ್ದನ್ನು ತಿಳಿದು, ಗಾಣ್ಡಿವವನ್ನು ಸಜ್ಜುಗೊಳಿಸಿ, ವಜ್ರಾಯುಧಕ್ಕೆ ಸಮನಾಗಿರುವ ಬಹಳ ಬಾಣಗಳನ್ನು ಅವನ ಶರೀರದ ಮೇಲೆ ಪ್ರಯೋಗಿಸಿದ.

 

ಕಿರಾತರೂಪಸ್ತಮನು ಸಭಾರ್ಯ್ಯಶ್ಚ ತ್ರಿಯಮ್ಬಕಃ ।

ಸ ಮಮಾರ ಹತಸ್ತಾಭ್ಯಾಮ್ ದಾನವಃ ಪಾಪಚೇತನಃ ॥೨೨.೧೩೬॥

 

ಅದೇಸಮಯದಲ್ಲಿ ಸಪತ್ನೀಕನಾದ, ಬೇಡರ ವೇಷವನ್ನು ಧರಿಸಿರುವ ಶಿವನು ಬಹಳ ಬಾಣಗಳನ್ನು ಆ ಅಸುರನ ದೇಹದೊಳಗೆ ಎಸೆದ. (ಅಂದರೆ ಈಕಡೆಯಿಂದ  ಅರ್ಜುನನು ಬಾಣಗಳನ್ನು ಬಿಟ್ಟರೆ, ಆ ಕಡೆಯಿಂದ ಸದಾಶಿವನೂ ಅಸುರನ ಮೇಲೆ ಬಾಣಗಳನ್ನು ಪ್ರಯೋಗಿಸಿದ). ಅವರಿಬ್ಬರಿಂದ ಹೊಡೆಯಲ್ಪಟ್ಟ ದುಷ್ಟ ಜೀವನಾಗಿರುವ ಮೂಕನೆಂಬ ಅಸುರನು ಮರಣ ಹೊಂದಿದ.  

 

ತೇನೋಕ್ತೋSಸೌ ಮಯೈವಾಯಂ  ವರಾಹೋSನುಗತೋSದ್ಯ ಹಿ ।

ತಮವಿದ್ಧ್ಯೋ ಯತಸ್ತ್ವಂ ಹಿ ತದ್ ಯುದ್ಧ್ಯಸ್ವ ಮಯಾ ಸಹ ॥೨೨.೧೩೭॥

 

‘ನನ್ನಿಂದಲೇ ಆ ವರಾಹವು ಬೇಟೆಗಾಗಿ ಹಿಂಬಾಲಿಸಲ್ಪಟ್ಟಿತ್ತು. ನೀನು ಏಕೆ ಹೊಡೆದೆ? ಆ ಕಾರಣದಿಂದ ನನ್ನ ಜೊತೆಗೆ ಯುದ್ಧಮಾಡು’ ಎಂದು ಬೇಡರ ವೇಷದಲ್ಲಿರುವ ಸದಾಶಿವನೆಂದ.

 

ಇತ್ಯುಕ್ತಃ ಫಲ್ಗುನಃ ಪ್ರಾಹ ತಿಷ್ಠತಿಷ್ಠ ನ ಮೋಕ್ಷ್ಯಸೇ ।

ಇತ್ಯುಕ್ತ್ವಾ ತಾವುಭೌ ಯುದ್ಧಂ ಚಕ್ರತುಃ ಪುರುಷರ್ಷಭೌ ॥೨೨.೧೩೮॥

 

ಈರೀತಿಯಾಗಿ ಹೇಳಪಟ್ಟ ಅರ್ಜುನ ‘ನಿಲ್ಲು-ನಿಲ್ಲು, ನಿನ್ನನ್ನು ಬಿಡುವುದಿಲ್ಲ’ ಎಂದು ಹೇಳಿದ. ಆಗ ಪುರುಷಶ್ರೇಷ್ಠರಾದ ರುದ್ರ-ಅರ್ಜುನರು ಕಾಳಗವನ್ನು ಮಾಡಿದರು.

 

ತತ್ರಾಖಿಲಾನಿ ಚಾಸ್ತ್ರಾಣಿ ಫಲ್ಗುನಸ್ಯಾಗ್ರಸಚ್ಛಿವಃ ।

ತತೋSರ್ಜ್ಜುನಸ್ತು ಗಾಣ್ಡೀವಂ ಸಮಾದಾಯಾಭ್ಯತಾಡಯತ್ ॥೨೨.೧೩೯॥

 

ಆ ಯುದ್ಧದಲ್ಲಿ ಸದಾಶಿವನು ಅರ್ಜುನನ ಎಲ್ಲಾ ಅಸ್ತ್ರಗಳನ್ನೂ ನುಂಗಿಬಿಟ್ಟನು. ಆಗ ಅರ್ಜುನನು ಗಾಣ್ಡಿವವನ್ನು ಹಿಡಿದು ಅದರಿಂದ ಹೊಡೆದನು.

 

ತದಪ್ಯಗ್ರಸದೇವಾಸೌ ಪ್ರಹಸನ್ ಗಿರಿಶಸ್ತದಾ ।

ಬಾಹುಯುದ್ಧಂ ತತಸ್ತ್ವಾಸೀತ್ ತಯೋಃ ಪುರುಷಸಿಂಹಯೋಃ ॥೨೨.೧೪೦॥

 

ಗಿರೀಶನು ನಗುತ್ತಾ, ಗಾಣ್ಡಿವವೆಂಬ ಬಿಲ್ಲನ್ನೂ ನುಂಗಿದ. ತದನಂತರ ಪುರುಷಶ್ರೇಷ್ಠರಾಗಿರುವ ಅವರಿಬ್ಬರಿಗೂ ಬಾಹುಯುದ್ಧವಾಯಿತು.

 

ಪಿಣ್ಡೀಕೃತ್ಯ ತತೋ ರುದ್ರಶ್ಚಿಕ್ಷೇಪಾಥ ಧನಞ್ಜಯಮ್ ।

ಮೂರ್ಚ್ಛಾಮವಾಪ ಮಹತೀಂ ಫಲ್ಗುನೋ ರುದ್ರಪೀಡಿತಃ ॥೨೨.೧೪೧॥

 

ಮಲ್ಲಯುದ್ಧದಲ್ಲಿ ಸದಾಶಿವನು ಅರ್ಜುನನನ್ನು ಮುದ್ದೆಮಾಡಿ ಎಸೆದ. ರುದ್ರನಿಂದ ನೋವಿಗೆ ಒಳಗಾದ ಫಲ್ಗುನನು ಬಹಳಕಾಲ ಮೂರ್ಛೆತಪ್ಪಿ ಬಿದ್ದಿದ್ದ.