ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 29, 2020

Mahabharata Tatparya Nirnaya Kannada 1628_1633


ಕೃಷ್ಣೋ ಜಿತ್ವಾ ಮಾಗಧಂ ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ ಪತಿನಾ ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥

ಕೃಷ್ಣನು ಬಲರಾಮನಿಂದ ಕೂಡಿಕೊಂಡು ಮಾಗಧನನ್ನು ಗೆದ್ದು, ತನ್ನ ಅತ್ತೆಯ ಗಂಡನಾದ ದಮಘೋಷನಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು. ಈಗಷ್ಟೇ ಯುದ್ಧದಲ್ಲಿ ಸೋತ ದಮಘೋಷನೊಂದಿಗೆ  ಬಾಂಧವ್ಯ ಇರುವುದರಿಂದಾಗಿ ಅವರಿಬ್ಬರು ಜೊತೆಯಾಗಿ ಅಲ್ಲಿಂದ ತೆರಳಿದರು.
[ವಸುದೇವನ ಸಹೋದರಿ ಶ್ರುತದೇವೇ. ಅವಳ ಪತಿ ದಮಘೋಷ. ಇವರ ದಾಂಪತ್ಯದಲ್ಲಿ ಹುಟ್ಟಿಬಂದವನೇ ಶಿಶುಪಾಲ. ಆದ್ದರಿಂದ ದಮಘೋಷ ಶ್ರೀಕೃಷ್ಣನ ಸೋದರತ್ತೆಯ ಗಂಡ (ಪಿತೃಷ್ವಸಾಯಾಃ ಪತಿ)]

ಯಾಮಃ ಪುರಂ ಕರಿವೀರಾಖ್ಯಮೇವ ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ ತಸ್ಯ ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥

‘ಕರವೀರಪುರ (ಕೋಲ್ಹಾಪುರ)ಎಂಬ ಹೆಸರಿನ ಮಹಾಲಕ್ಷ್ಮಿಯ ಕ್ಷೇತ್ರವನ್ನು ನೋಡಲು ಹೊರಡೋಣ’ ಎನ್ನುವ  ಭಯದಿಂದ ಕೂಡಿದ, ತನ್ನಿಂದ ಸೋತಿರುವ ದಮಘೋಷನ ಮಾತಿನಂತೆ ಶ್ರೀಕೃಷ್ಣ  ಕರವೀರ ಕ್ಷೇತ್ರಕ್ಕೆ ತೆರಳಿದನು.  

ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್ ಸ ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥

ಈ ದಮಘೋಷನು ಮೂಲತಃ  ‘ದನು’ ಎಂಬ ಹೆಸರುಳ್ಳ ಗಂಧರ್ವನು. ಈಗ ಮನುಷ್ಯಲೋಕದಲ್ಲಿ ಅವತರಿಸಿ ಬಂದಿರುವವನು. ಆಕಾರಣದಿಂದ ಕೃಷ್ಣನಲ್ಲಿ ಭಕ್ತಿಯುಳ್ಳವನಾದನು.
ಇತ್ತ ಕರವೀರಪುರಕ್ಕೆ ಬಂದಿರುವ ಅವರನ್ನು ತಿಳಿದ ಪಾಪಿಷ್ಠನಾಗಿರುವ ಸೃಗಾಲವಾಸುದೇವನು ಸಿಟ್ಟಿನಿಂದ ಅವರತ್ತ ಬಂದನು.

ಸೂರ್ಯ್ಯಪ್ರದತ್ತಂ ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥

ಸೃಗಾಲವಾಸುದೇವನು ಸೂರ್ಯಕೊಟ್ಟ ರಥವನ್ನು ಏರಿ, ಸೂರ್ಯನ ವರದಿಂದ ಅವಧ್ಯನಾದವನಾಗಿ, ಕೃಷ್ಣನನ್ನು ಕುರಿತು ಯುದ್ಧಮಾಡಲೆಂದು ಬಂದ. ಅನೇಕ ಅಸ್ತ್ರಗಳನ್ನು ಬಿಟ್ಟ ಆ ಸೃಗಾಲವಾಸುದೇವನ ಕತ್ತನ್ನು ಶ್ರೀಕೃಷ್ಣ  ತಕ್ಷಣ ಕತ್ತರಿಸಿದ.   

ದ್ವಿಧಾ ಕೃತ್ವಾ ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥

ಸೃಗಾಲ ವಾಸುದೇವನ ದೇಹವನ್ನು ಚಕ್ರದಿಂದ ಎರಡನ್ನಾಗಿ ಮಾಡಿ, ತನ್ನ ಭಕ್ತನಾದ ಸೃಗಾಲ ವಾಸುದೇವನ ಮಗನಾದ ಶಕ್ರದೇವ ಎನ್ನುವ ಹೆಸರಿನ ತನ್ನ ಭಕ್ತನನ್ನು ರಾಜ್ಯದಲ್ಲಿ ಅಭಿಷೇಕ ಮಾಡಿದ ಶ್ರೀಕೃಷ್ಣ, ತನ್ನ ಪಟ್ಟಣಕ್ಕೆ ತೆರಳಿದನು.
ಈ ಶಕ್ರದೇವ ಯಾರೆಂದರೆ: ಅವನು ಮಣಿಭದ್ರನ  (ಕುಬೇರನ) ಸೇವಕ. ಅವನಿಗೆ ರಾಜ್ಯಾಭಿಷೇಕ ಮಾಡಿ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಶ್ರೀಕೃಷ್ಣ ಮಧುರೆಗೆ ತೆರಳಿದನು.

[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸಾವಿತ್ರೇ ನಿಯಮೇ ಪೂರ್ಣೆ ಯಂ ದದೌ ಸವಿತಾ ಸ್ವಯಮ್ ।.... ತೇನ  ಸ್ಯಂದನಮುಖ್ಯೇನ ದ್ವಿಷತ್ಸ್ಯನ್ದನಘಾತಿನಾ । ಸ ಸೃಗಾಲೋsಭ್ಯಯಾತ್ ಕೃಷ್ಣಂ ಶಲಭಃ ಪಾವಕಂ ಯಥಾ’ (ವಿಷ್ಣುಪರ್ವಣಿ ೪೪.೬-೭) ‘ಚಕ್ರೇಣೋರಸಿ ನಿರ್ಭಿಣ್ಣಃ ಸಗತಾಸುರ್ಗತೋತ್ಸವಃ’ (ವಿಷ್ಣುಪರ್ವಣಿ ೪೪.೨೯) (ಇದಲ್ಲದೇ ಭಾಗವತದಲ್ಲೂ ಈ ಮಾತು ಬರುತ್ತದೆ): ‘ಶಿರೋ ಜಹಾರ ಗೋವಿನ್ದಃ ಕ್ಷಣೇನ ಮಕುಟೋಜ್ಜ್ವಲಂ’(ಭಾಗವತ: ೧೦.೫೨,೩೯).  ಇನ್ನು ಹರಿವಂಶದಲ್ಲಿ ಹೇಳುತ್ತಾರೆ: ಚಕ್ರನಿರ್ದಾರಿತೋರಸ್ಕಂ  ಭಿನ್ನಶೃಙ್ಗಮಿವಾಚಲಮ್’(೩೭) ‘ತಸ್ಯ ಪದ್ಮಾವತೀ ನಾಮ ಮಹಿಷೀ ಪ್ರಮದೊತ್ತಮ । ರುದತಿ ಪುತ್ರಮಾದಾಯವಾಸುದೇವಮುಪಸ್ಥಿತಾ ।... (ಸೃಗಾಲವಾಸುದೇವನ ಹೆಂಡತಿ ಪದ್ಮಾವತಿ ತನ್ನ ಮಗನನ್ನು ಕರೆದುಕೊಂಡು ಬಂದು ಪರಮಾತ್ಮನಿಗೆ ನಮಸ್ಕಾರ ಮಾಡುತ್ತಾಳೆ). ಅಯಮಸ್ಯ  ವಿಪನ್ನಸ್ಯ  ಬಾಂಧವಸ್ಯ ತವಾನಘ । ಸಂತತಿ ರಕ್ಷ್ಯತಾಂ ವೀರ ಪುತ್ರಃ  ಪುತ್ರ ಇವಾsತ್ಮಜಃ । (ನಿನ್ನ ಅಣ್ಣನ ಮಗನಾಗಿರುವುದರಿಂದ ಇವನು ನಿನ್ನ ಮಗನೇ ಎಂದು ಶ್ರಿಕೃಷ್ಣನಲ್ಲಿ ಆಕೆ ಹೇಳುತ್ತಾಳೆ).  ತಸ್ಯಾಸ್ತದ್  ವಚನಂ ಶ್ರುತ್ವಾ ಮಹಿಷ್ಯಾ ಯದುನಂದನಃ । ಮೃದುಪೂರ್ವಮಿದಂ ವಾಕ್ಯಮುವಾಚ ವದತಾಂ ವರಃ । (ಆಕೆಯೊಂದಿಗೆ ಶ್ರೀಕೃಷ್ಣ  ಮೃದುವಾಗಿ ಮಾತನಾಡುತ್ತಾನೆ). ಯೋsಯಂ ಪುತ್ರಃ ಸೃಗಾಲಸ್ಯ ಮಮಾಪ್ಯೇಷ ನ ಸಂಶಯಃ । ಅಭಯಂ ಚಾಭಿಷೇಕಂ ಚ ದದಾಮ್ಯಸ್ಯ  ಸುಖಾಯ ವೈ’ (ವಿಷ್ಣುಪರ್ವಣಿ. ೪೪.೪೮-೫೬) (ಶ್ರೀಕೃಷ್ಣ ಅವರಿಗೆ ತನ್ನ  ಅಭಯ ದಾನ ಮಾಡುತ್ತಾನೆ).   
ಹರಿವಂಶದಲ್ಲಿ  ಸೃಗಾಲವಾಸುದೇವನ ಮಗನಿಗೆ ಅಭಿಷೇಕ ಮಾಡಿ ಅದೇ ದಿನ ಕೃಷ್ಣ-ಬಲರಾಮರು ಹೊರಟರು ಎಂದಿದೆ.ಅಭಿಷಿಚ್ಯ ಸೃಗಾಲಸ್ಯ  ಕರವೀರಪುರೇ ಸುತಂ । ಕೃಷ್ಣಸ್ತದಹರೇವಾsಶು ಪ್ರಯಾಣಮಭಿರೋಚಯತ್’ (ವಿಷ್ಣುಪರ್ವಣಿ ೪೪.೫೯) ಇನ್ನು ಭಾಗವತದಲ್ಲಿ  ನಾಕು ತಿಂಗಳು ವಾಸಮಾಡಿದರು ಎಂದಿದೆ. ಅವರುಹ್ಯ ಗಿರೇಃ ಶೃಙ್ಗಾತ್ ಕರವೀರಪುರಂ ಗತೌ ।  ತತ್ರ ತೌ ಚತುರೋ ಮಾಸಾನುಶಿತ್ವಾ ಭರತರ್ಷಭ । ಮಹತ್ಯಾ ಸೇನಯಾ ಸಾರ್ಧಂ ಜಗ್ಮತುರ್ಮಧುರಾಂ ಪುರಿಮ್’ (ಭಾಗವತ ೧೦.೫೩.೨೦-೨೧) ಈ ಗೊಂದಲವನ್ನು ಆಚಾರ್ಯರು ಪರಿಹರಿಸುತ್ತಾ,  ಗೋಮಂತ ಪರ್ವತದಲ್ಲಿ ಶ್ರೀಕೃಷ್ಣ-ಬಲರಾಮರು  ನಾಲ್ಕು ತಿಂಗಳು ವಾಸಮಾಡಿದರು ಎನ್ನುವ ನಿರ್ಣಯವನ್ನು ನೀಡಿದ್ದಾರೆ].   



ನೀತಿಂ ಬಲಿಷ್ಠಸ್ಯ ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ ಸರ್ವಪೂರ್ಣ್ಣಾತ್ಮಶಕ್ತಿಃ ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥

ಬಲಿಷ್ಠನೊಬ್ಬನು ಸೇನೆಯನ್ನು ಬಿಟ್ಟು ಬಹಳ ದೂರದಿಂದಲೇ ತನ್ನ ದೇಶದ ರಕ್ಷಣೆಗಾಗಿ ಯುದ್ಧವನ್ನು ಯಾವ ರೀತಿ ಮಾಡಬೇಕು ಎಂದು ತೋರಿಸಿ, ತನ್ನ ಸೇನೆಯನ್ನು ಯಾವರೀತಿ ರಕ್ಷಿಸಿಕೊಳ್ಳಬೇಕು ಎನ್ನುವ ನೀತಿಯನ್ನು ತೋರಿಸಿ, ಪೂರ್ಣಶಕ್ತಿಯಾದ ಪರಮಾತ್ಮನು ಮತ್ತೆ ಮಧುರೆಗೆ ತೆರಳಿ ಪೂಜಿತನಾಗಿ ಅಲ್ಲಿ ಆವಾಸಮಾಡಿದ.


ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ ಷೋಡಶೋsದ್ಧ್ಯಾಯಃ

*********


Friday, February 28, 2020

Mahabharata Tatparya Nirnaya Kannada 1620_1627


ಜರಾಸುತೋ ರೌಹಿಣೇಯೇನ ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥

ಜರಾಸಂಧನು ಬಲರಾಮನೊಂದಿಗೆ ಧೀರ್ಘಕಾಲ ಯುದ್ಧಮಾಡಿ, ಅವನ ಒನಕೆಯ ಪೆಟ್ಟು ತಿನ್ದವನಾಗಿ, ಪ್ರಜ್ಞೆ ಕಳೆದುಕೊಂಡು, ಬಹಳ ಹೊತ್ತಿನ ನಂತರ ಸಂಜ್ಞೆಯನ್ನು ಹೊಂದಿ, ಕ್ರುದ್ಧನಾಗಿ ತನ್ನ ಗದೆಯನ್ನು ಬಲರಾಮನ ಎದೆಯಮೇಲೆ ಎಸೆದನು.

ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥

ಅವನಿಂದ ಚೆನ್ನಾಗಿ ಹೊಡೆಯಲ್ಪಟ್ಟ ಬಲರಾಮನು ಒಂದು ಕ್ಷಣ ಮೂರ್ಛೆಹೋದನು. ಜರಾಸಂಧನಿಗೆ  ಬ್ರಹ್ಮನಿಂದ ಅಜೇಯತ್ವವು ಕೊಡಲ್ಪಟ್ಟಿತ್ತಷ್ಟೇ.
(ಆದರೆ ಹಿಂದಿನ ಶ್ಲೋಕದಲ್ಲಿ ಜರಾಸಂಧ ಬಲರಾಮನ ಹೊಡೆತದಿಂದ ಮೂರ್ಛೆಹೋಗಿದ್ದ ಎಂದು ಹೇಳಲಾಗಿದೆಯಲ್ಲಾ ಎಂದರೆ:) ಹಿಂದೆ ಬಲರಾಮನಲ್ಲಿರುವ ಸಂಕರ್ಷಣರೂಪಿ ಪರಮಾತ್ಮನಿಂದಾಗಿ ಜರಾಸಂಧ ಹಿಡಿಯಲ್ಪಟ್ಟಿದ್ದ.  

ತಥಾಕೃತೇ ಬಲಭದ್ರೇ ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥

ಜರಾಸಂಧನಿಂದ ಬಲರಾಮ ಹೊಡೆಯಲ್ಪಟ್ಟಾಗ ಶ್ರೀಕೃಷ್ಣನು ತನ್ನ ಕೌಮೋದಕಿ ಗದೆಯನ್ನು ಹಿಡಿದು  ಜರಾಸಂಧನನ್ನು ಕುರಿತು ತೆರಳಿದನು. ಆ ಗದೆಯಿಂದ ಜರಾಸಂಧನ ಜತ್ರುವಿನಲ್ಲಿ(ಎದೆಗಿಂತ ಮೇಲೆ, ಕಂಠಕ್ಕಿಂತ ಕೆಳಗೆ) ಹೊಡೆದನು ಕೂಡಾ. ಇದರಿಂದ ಜರಾಸಂಧ ಒದ್ದಾಡುತ್ತಾ, ಮೂರ್ಛೆಹೊಂದಿ ಭೂಮಿಯಲ್ಲಿ ಬಿದ್ದನು.

ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥

ತದನಂತರ ಬಲರಾಮನು ಮೇಲೆದ್ದ. ಬಲರಾಮ ಏಳುತ್ತಿರುವಾಗಲೇ ಶ್ರೇಷ್ಠವಾದ ಪರಾಕ್ರಮವುಳ್ಳ ಜರಾಸಂಧನೂ ಕೂಡಾ ಎದ್ದುನಿಂತ. ಆಗ ಸಿಟ್ಟಿನವನಾಗಿ ರಾಮನು ಜರಾಸಂಧನ ತೆಲೆಗೂದಲನ್ನು ಹಿಡಿದನು, ಒಳ್ಳೆಯ ಬಲವುಳ್ಳ ಬಲರಾಮನು ಜರಾಸಂಧನನ್ನು ಸಾಯಿಸಲೆಂದು ತನ್ನ ಒನಕೆಯನ್ನು ಎತ್ತಿ ಹಿಡಿದನು.

ಅಥಾಬ್ರವೀದ್ ವಾಯುರೇನಂ ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪ ॥

ತದನಂತರ ಮುಖ್ಯಪ್ರಾಣನು(ಅಶರೀರವಾಣಿ) ಬಲರಾಮನನ್ನು ಕುರಿತು ಹೀಗೆ ಹೇಳಿದನು: ‘ಬಲರಾಮನೇ, ನಿನ್ನಿಂದ ಈ ಜರಾಸಂಧನನ್ನು ಕೊಲ್ಲಲು ಸಾಧ್ಯವಿಲ್ಲ. ಹಾಗಾಗಿ ನಿನ್ನ ಬಾಹುಬಲವನ್ನು ವ್ಯರ್ಥವಾಗಿ ಪ್ರಯೋಗಮಾಡಬೇಡ. ನನ್ನ ಅಸ್ತ್ರದಂತೆ ನಿನ್ನ ಬಲವೂ ಕೂಡಾ ಅಮೋಘವಾಗಿದೆ. ಅದನ್ನು ವ್ಯರ್ಥಮಾಡಿಕೊಳ್ಳಬೇಡ’.

ಅನ್ಯೋ ಹನ್ತಾ ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥

‘ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ’ ಎನ್ನುವ ಮಾತನ್ನು ಕೇಳಿದ ಬಲರಾಮನು ಜರಾಸಂಧನನ್ನು ಅಲ್ಲೇ ಬಿಟ್ಟು ತೆರಳಿದನು. ಆದರೆ ಮತ್ತೆ ಅವನತ್ತ ಧಾವಿಸುತ್ತಿರುವ ಜರಾಸಂಧನನ್ನು ಶ್ರೀಕೃಷ್ಣ ತನ್ನ ಕೌಮೋದಕಿ ಗದೆಯಿಂದ ಹೊಡೆದನು.

[ಹರಿವಂಶದಲ್ಲಿ ಮುಖ್ಯಪ್ರಾಣ ಬಲರಾಮನನ್ನು ಕುರಿತು ಹೇಳಿದ ಮಾತಿನ ವಿವರವನ್ನು ಕಾಣಬಹುದು: ‘ತತೋsನ್ತರಿಕ್ಷೇ ವಾಗಾಸೀತ್ ಸುಸ್ವರಾ ಲೋಕಸಾಕ್ಷಿಣೀ । ನ ತ್ವಯಾ ರಾಮ ವಧ್ಯೋsಯಮಲಂ ಖೇದೇನ ಮಾನದ । ವಿಹಿತೋsಸ್ಯ ಮಯಾ ಮೃತ್ಯುಸ್ತಸ್ಮಾತ್ ಸಾಧು ವ್ಯುಪಾರಮ । ಅಚಿರೇಣೈವ ಕಾಲೇನ ಪ್ರಾಣಾಂಸ್ತ್ಯಕ್ಷತಿ ಮಾಗಧಃ’ (ವಿಷ್ಣುಪರ್ವಣೀ ೪೩.೭೨-೭೩) [ಈ ಜರಾಸಂಧನನ್ನು ನಾನೇ ಕೊಲ್ಲುವವನಿದ್ದೇನೆ. ಇಂದು ನೀನು ಹೊಡೆದರೂ ಅವನು ಸಾಯುವುದಿಲ್ಲ. ಏಕೆ ಸುಮ್ಮನೆ ನಿನ್ನ ಬಾಹುಬಲವನ್ನು ವ್ಯರ್ಥ ಮಾಡಿಕೊಳ್ಳುವೆ’ 
ಪ್ರಹರ್ತವ್ಯೋ ನ ರಾಜಾsಯಮವಧ್ಯೋsಯಂ ತ್ವಯಾsನಘ । ಕಲ್ಪಿತೋsಸ್ಯ ವಧೋsನ್ಯಸ್ಮಾದ್  ವಿರಮಸ್ವ ಹಲಾಯುಧ । ಶ್ರುತ್ವಾsಹಂ ತೇನ ವಾಕ್ಯೇನ ಚಿನ್ತಾವಿಷ್ಟೋ ನಿವರ್ತಿತಃ । ಸರ್ವಪ್ರಾಣಹರಂ ಘೋರಂ ಬ್ರಹ್ಮಣಾ ಸ್ವಯಮೀರಿತಮ್’ (೭೩.೪೯-೫೦) [‘ಸ್ವಯಂ ಬ್ರಹ್ಮನ(ಪ್ರಾಣ-ಬ್ರಹ್ಮ ಅಭೇದ) ಈ ಮಾತಿನಿಂದಾಗಿ ಚಿಂತಾವರ್ತಿತನಾಗಿ ನಾನು ಆ ಕೆಲಸದಿಂದ ಹಿಂದೆ ಸರಿದೆ’ ಎಂದು ಇಲ್ಲಿ ಬಲರಾಮ ಹೇಳಿರುವುದನ್ನು ಕಾಣುತ್ತೇವೆ].

ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬ ॥

ಕೃಷ್ಣನಿಂದ ಹೊಡೆಯಲ್ಪಟ್ಟ, ತನ್ನೆಲ್ಲಾ ದೇಹದ ನಿಯಂತ್ರಣವನ್ನು ಕಳೆದುಕೊಂಡು ಮೂರ್ಛೆಯನ್ನು ಹೊಂದಿದ ಆ ರಾಜನು ಬಹಳ ಹೊತ್ತಿನ ನಂತರ ಮೂರ್ಛೆಯಿಂದೆದ್ದು, ಭಯಗೊಂಡು, ತನ್ನನ್ನು ಅಡಗಿಸಿಕೊಂಡು, ಲಜ್ಜೆಯಿಂದ ಕೂಡಿ, ಓಡಿಹೋದನು. 

ಯಯೌ ಶಿಷ್ಟೈ ರಾಜಭಿಃ ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥

ಉಳಿದ ರಾಜರಿಂದ ಕೂಡಿಕೊಂಡ ಅವನು ‘ಬದುಕಿಕೋ ಹೋಗು’ ಎಂಬಿತ್ತ್ಯಾದಿಯಾಗಿ ಹೇಳಿ ಶ್ರೀಕೃಷ್ಣನಿಂದ ಬಿಡಲ್ಪಟ್ಟವನಾಗಿ ಪಟ್ಟಣಕ್ಕೆ ತೆರಳಿದನು. ಇದೇ ರೀತಿ ಮತ್ತೆ ಶ್ರೀಕೃಷ್ಣನ ಜೊತೆಗೆ ಅನೇಕ ಬಾರಿ ಯುದ್ಧಮಾಡಿ, ತನ್ನ ರಾಜಗಣಸಮೇತನಾಗಿಯೇ ಜರಾಸಂಧ ಸೋತುಹೋದ.

Wednesday, February 26, 2020

Mahabharata Tatparya Nirnaya Kannada 1613_1619


ಏವಂ ತಯೋಃ ಕ್ರೀಡತೋಃ ಸ್ವೈರಮತ್ರ ರಾಜನ್ಯವೃನ್ದಾನುಗತೋ ಜರಾಸುತಃ ।
ಗಿರಿಂ ಗೋಮನ್ತಂ ಪರಿವಾರ್ಯ್ಯಾದಹತ್ ತಂ ದೃಷ್ಟ್ವಾ ದೇವೌ ಪುಪ್ಲುವತುರ್ಬಲಾಬ್ಧೌ ॥೧೬.೧೩॥

ಈರೀತಿಯಾಗಿ ಶ್ರೀಕೃಷ್ಣ ಹಾಗೂ ಬಲರಾಮರಿಬ್ಬರು ಗೋಮಂತಪರ್ವತದಲ್ಲಿ[1] ಸ್ವೇಚ್ಛಾನುಸಾರ ವಿಹರಿಸುತ್ತಿರಲು, ರಾಜರ ಸಮೂಹದಿಂದ ಅನುಸರಿಸಲ್ಪಟ್ಟ ಜರಾಸಂಧನು ಆ ದೊಡ್ಡ ಬೆಟ್ಟವನ್ನು ಸುತ್ತುವರಿದು ಅದಕ್ಕೆ ಬೆಂಕಿಯಿಟ್ಟನು. ಹೀಗೆ ಪರ್ವತವನ್ನು ಸುಟ್ಟ ಜರಾಸಂಧನನ್ನು ನೋಡಿದ ಅವರಿಬ್ಬರು ಪರ್ವತದಿಂದ ಕೆಳಗಿದ್ದ ಸೈನ್ಯ ಸಾಗರದಲ್ಲಿ ಧುಮುಕಿದರು. 

ಗಿರಿಸ್ತಾಭ್ಯಾಂ ಪೀಡಿತಃ ಸನ್ ನಿಮಗ್ನೋ ಭೂಮೌ ಪದ್ಭ್ಯಾಂ ಯೋಜನೈಕಾದಶಂ ಸಃ ।
ನಿಷ್ಪೀಡಿತಾಜ್ಜಲಧಾರೋದ್ಗತಾsಸ್ಮಾದ್ ವಹ್ನಿಂ ವ್ಯಾಪ್ತಂ ಶಮಯಾಮಾಸ ಸರ್ವಮ್ ॥೧೬.೧೪ ॥

ರಾಮ-ಕೃಷ್ಣರು ಪರ್ವತದಿಂದ ಕೆಳಗೆ ಹಾರುವಾಗ, ಅವರಿಬ್ಬರ ಪಾದದಿಂದ ಒತ್ತಲ್ಪಟ್ಟ ಬೆಟ್ಟವು ಭೂಮಿಯಲ್ಲಿ ಹನ್ನೊಂದು ಯೋಜನ ಕೆಳಗೆ ಮುಳುಗಿತು. ಈರೀತಿ ಭೂಮಿಯಲ್ಲಿ ಹುದುಗಿಹೋದ ಆ ಪರ್ವತದಿಂದಾಗಿ ಅಲ್ಲಿ  ನೀರಿನ ಸಮೂಹವೇ ಮೇಲೆದ್ದಿತು ಮತ್ತು ಅದು ಅಲ್ಲಿ ಎಲ್ಲೆಡೆ ಹರಡಿದ್ದ ಬೆಂಕಿಯನ್ನು ನಂದಿಸಿತು ಕೂಡಾ.

ಸೇನಾಂ ಪ್ರವಿಷ್ಟೌ ಸರ್ವರಾಜನ್ಯವೃನ್ದಂ ವ್ಯಮತ್ಥ್ನಾತಾಂ ದೇವವರೌ ಸ್ವಶಸ್ತ್ರೈಃ ।
ತತ್ರ ಹಂಸೋ ಡಿಭಕಶ್ಚೈಕಲವ್ಯಃ ಸ ಕೀಚಕಸ್ತೌ ಶಿಶುಪಾಲಪೌಣ್ಡ್ರಕೌ ॥೧೬.೧೫ ॥

ಭೌಮಾತ್ಮಜೌ ದನ್ತವಕ್ರಶ್ಚ ರುಗ್ಮೀ ಸೌಭಾಧಿಪೋ ಮೈನ್ದಮೈನ್ದಾನುಜೌ ಚ ।
ಅನ್ಯೇ ಚ ಯೇ ಪಾರ್ತ್ಥಿವಾಃ ಸರ್ವ ಏವ ಕ್ರೋಧಾತ್ ಕೃಷ್ಣಂ ಪರಿವಾರ್ಯ್ಯಾಭ್ಯವರ್ಷನ್ ॥೧೬.೧೬ ॥

ಸೇನೆಯನ್ನು ಪ್ರವೇಶಿಸಿದ ದೇವತಾಶ್ರೇಷ್ಠ ಬಲರಾಮ-ಕೃಷ್ಣರು ಸರ್ವರಾಜರ ಸಮೂಹವನ್ನು ಚೆನ್ನಾಗಿ ನಿಗ್ರಹಿಸಿದರು. ಆಗ ಹಂಸ, ಡಿಭಕ, ಏಕಲವ್ಯ, ಕೀಚಕ, ಶಿಶುಪಾಲ, ಪೌಣ್ಡ್ರಕ, ಭಗದತ್ತ, ದಂತವಕ್ರ, ರುಗ್ಮಿ, ಸಾಲ್ವ, ಮೈನ್ಧ, ವಿವಿದ, ಇತರ ಎಲ್ಲಾ ರಾಜರು ಸಿಟ್ಟಿನಿಂದ ಕೃಷ್ಣನನ್ನು ಸುತ್ತುವರಿದು ಅವನ ಮೇಲೆ ಬಾಣಗಳ ಮಳೆಗರೆದರು.     

ಶಸ್ತ್ರೈರಸ್ತ್ರೈರ್ದ್ದ್ರುಮಪೂಗೈಃ ಶಿಲಾಭಿರ್ಭಕ್ತಾಶ್ಚ ಯೇ ಶಲ್ಯಬಾಹ್ಲೀಕಮುಖ್ಯಾಃ ।
ಸಸೋಮದತ್ತಾಃ ಸೌಮದತ್ತಿರ್ವಿರಾಟಃ  ಪಾಞ್ಚಾಲರಾಜಶ್ಚ ಜರಾಸುತಸ್ಯ ।
ಭಯಾತ್ ಕೃಷ್ಣಂ ಶಸ್ತ್ರವರ್ಷೈರವರ್ಷನ್ ಕಾರಾಗೃಹೇ ವಾಸಿತಾ ಮಾಗಧೇನ ॥೧೬.೧೭ ॥

ಆ ರಾಜರುಗಳಲ್ಲಿ ಕೃಷ್ಣನ ಭಕ್ತರಾಗಿರುವ ಶಲ್ಯ, ಬಾಹ್ಲೀಕ, ಮೊದಲಾಗಿರುವ, ಸೋಮದತ್ತನಿಂದ ಕೂಡಿರುವ, ಸೋಮದತ್ತನ ಮಗನಾದ ಭೂರಿಶ್ರವಸ್ಸು, ವಿರಾಟ, ದ್ರುಪದ, ಇವರೆಲ್ಲರೂ ಕೂಡಾ (ಭಕ್ತರಾಗಿದ್ದರೂ ಕೂಡಾ) ಜರಾಸಂಧನಿಂದ ಹಿಂದೆ ಕಾರಾಗ್ರಹ ಪೀಡಿತರಾಗಿದ್ದುದರ ಭಯದಿಂದಾಗಿ, ಶಸ್ತ್ರಾಸ್ತ್ರದ ಮಳೆಗೆರೆಯುವಿಕೆಯಿಂದ ಕೃಷ್ಣನನ್ನು ಪೀಡಿಸಿದರು. 

ಸರ್ವಾನೇತಾಞ್ಛರವರ್ಷೇಣ ಕೃಷ್ಣೋ ವಿಸೂತವಾಜಿಧ್ವಜಶಸ್ತ್ರವರ್ಮ್ಮಣಃ ।
ಕೃತ್ವಾ ವಮಚ್ಛೋಣಿತಾನಾರ್ತ್ತರೂಪಾನ್ ವಿದ್ರಾವಯಾಮಾಸ ಹರಿರ್ಯ್ಯಥಾ ಮೃಗಾನ್ ॥೧೬.೧೮ ॥

ಆ ಎಲ್ಲಾ ರಾಜರುಗಳನ್ನು ಕೃಷ್ಣನು ಶರವರ್ಷದಿಂದ (ಬಾಣಗಳ ಮಳೆಗರೆದು), ಕುದುರೆ, ಧ್ವಜ, ಶಸ್ತ್ರ, ಕವಚ ಇವುಗಳಿಂದ ರಹಿತರನ್ನಾಗಿ ಮಾಡಿ, ರಕ್ತಕಾರಿಕೊಂಡ ಭಯಂಕರವಾದ ಶರೀರವುಳ್ಳವರನ್ನಾಗಿ ಮಾಡಿ ಓಡಿಸಿದನು. ಸಿಂಹವು ಹೇಗೆ ಜಿಂಕೆಗಳನ್ನು ಓಡಿಸುತ್ತದೋ ಹಾಗೇ.

ಹತ್ವಾ ಸೇನಾಂ ವಿಂಶದೋಕ್ಷೋಹಿಣೀಂ ತಾಂ ತ್ರಿಭಿರ್ಯ್ಯುಕ್ತಾಂ ರುಗ್ಮಿಣಂ ನೈವ ಕೃಷ್ಣಃ ।
ರುಗ್ಮಿಣ್ಯರ್ತ್ಥೇ ಪೀಡಯಾಮಾಸ ಶಸ್ತ್ರಾಣ್ಯಸ್ಯ ಚ್ಛಿತ್ವಾ ವಿರಥಂ ದ್ರಾವಯಾನಃ ॥೧೬.೧೯ ॥

ಹೀಗೆ ಶ್ರೀಕೃಷ್ಣನು ೨೩ ಅಕ್ಷೋಹಿಣಿಯಿಂದ ಕೂಡಿರುವ ಆ ಸೇನೆಯನ್ನು ಸಂಹಾರಮಾಡಿದನು.  ರುಗ್ಮಿಯನ್ನು ಮಾತ್ರ ಶ್ರೀಕೃಷ್ಣನು ರುಗ್ಮಿಣಿಗಾಗಿ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಆಯುಧಗಳನ್ನು ಕತ್ತರಿಸಿದ ಶ್ರೀಕೃಷ್ಣ , ಅವನನ್ನು ರಥಹೀನನನ್ನಾಗಿ ಮಾಡಿ ಅಲ್ಲಿಂದ ಓಡಿಸಿದನು.




[1]  ಇಂದಿನ ‘ಗೋವಾ’ ಎನ್ನುವ ಹೆಸರು ಈ ಪರ್ವತದ ಹೆಸರಿನಿಂದಲೇ ಬಂದಿರುವುದು.

Saturday, February 22, 2020

Mahabharata Tatparya Nirnaya Kannada 1607_1612


ನಾರಾಯಣೇ ಸರ್ವದೇವೈಃ ಸಮೇತೇ ಬ್ರಹ್ಮಾದಿಭಿರ್ಹಾಸಮಾನೇ ಸುಪರ್ಣ್ಣಃ
ಗತ್ವಾ ಪಾತಾಳಂ ಯುಧಿ ಜಿತ್ವಾ ಬಲಿಂ ಚ ಕಿರೀಟಮಾದಾಯಾಭ್ಯಯಾದ್ ಯತ್ರ ಕೃಷ್ಣಃ ॥೧೬.೦೭॥

ಬ್ರಹ್ಮಾದಿ ಸಮಸ್ತ ದೇವತೆಗಳೊಂದಿಗೆ ನಾರಾಯಣನೂ ಕೂಡಾ ನಗುತ್ತಿರಲು, ಗರುಡನು ಪಾತಾಳಕ್ಕೆ ತೆರಳಿ, ಯುದ್ಧದಲ್ಲಿ ಬಲಿಯನ್ನು ಗೆದ್ದು, ಕಿರೀಟವನ್ನು ತೆಗೆದುಕೊಂಡು ಶ್ರೀಕೃಷ್ಣನಿದ್ದಲ್ಲಿಗೆ ಬಂದನು.

ತತ್ ತಸ್ಯ ಶೀರ್ಷ್ಣಿ ಪ್ರತಿಮುಚ್ಯ ನತ್ವಾ ಖಗಃ ಸ್ತುತ್ವಾ ದೇವದೇವಂ ರಮೇಶಮ್ ।
ಸ್ಮೃತ ಆಗಚ್ಛೇತ್ಯೇವ ವಿಸರ್ಜ್ಜಿತೋsಮುನಾ ಯಯೌ ದುಗ್ಧಾಬ್ಧಿಂ ಯತ್ರ ನಾರಾಯಣೋsಸೌ ॥೧೬.೦೮ ॥

ಗರುಡನು ಆ ಕಿರೀಟವನ್ನು ಶ್ರೀಕೃಷ್ಣನ ತಲೆಯಮೇಲೆ ಇಟ್ಟು, ದೇವದೇವನಾದ ರಮೇಶನನ್ನು ಸ್ತೋತ್ರಮಾಡಿ, ‘ಸ್ಮರಿಸಿದೊಡನೆ ಬಾ’ ಎಂದು ಶ್ರೀಕೃಷ್ಣನಿಂದ ಬೀಳ್ಕೊಟ್ಟವನಾಗಿ, ಭಗವಂತನ ನಾರಾಯಣ ರೂಪವಿರುವ  ದುಗ್ಧಾಬ್ಧಿಯನ್ನು(ಕ್ಷೀರಸಾಗರವನ್ನು) ಕುರಿತು ತೆರಳಿದನು.   

ಕಿರೀಟಂ ತತ್ ಕೃಷ್ಣಮೂರ್ಧ್ನಿ ಪ್ರವಿಷ್ಟಂ ತತ್ತುಲ್ಯಮಾಸೀತ್ ತಸ್ಯ ರೂಪೇಷ್ವಭೇದಾತ್ ।
ತದಿಚ್ಛಯಾ ಚೈವ ನಾರಾಯಣಸ್ಯ ಶೀರ್ಷ್ಣ್ಯಪ್ಯಾಸೀದ್ ಯುಗಪದ್ ದುಗ್ಧವಾರ್ದ್ಧೌ ॥೧೬.೦೯ ॥

ಪರಮಾತ್ಮನ ರೂಪಗಳಲ್ಲಿ ಅಭೇದವಿರುವುದರಿಂದ, ನಾರಾಯಣನ ಇಚ್ಛೆಯಿಂದಲೇ,  ಇಲ್ಲಿ ಶ್ರೀಕೃಷ್ಣನ ತಲೆಯಲ್ಲಿ ಇರಿಸಿದ್ದ ಕಿರೀಟವೇ ಕ್ಷೀರಸಾಗರದಲ್ಲಿರುವ ನಾರಾಯಣನ ರೂಪದಲ್ಲಿಯೂ ಇತ್ತು ( ಇದು ಭಗವಂತ ತನ್ನ ರೂಪದಲ್ಲಿ ಅಭೇದವನ್ನು ತೋರಿಸಿಕೊಟ್ಟ ಘಟನೆ. ಒಂದೇ ಸಂದರ್ಭದಲ್ಲಿ, ಇಲ್ಲಿ ಶ್ರೀಕೃಷ್ಣ  ಕಿರೀಟ ಧರಿಸುತ್ತಿರುವಾಗಲೇ, ಅಲ್ಲೂ ಕೂಡಾ ನಾರಾಯಣನಿಂದ ಕಿರೀಟ ಧರಿಸಲ್ಪಟ್ಟಿತು).

ಪೂರ್ವಂ ಪ್ರಾಪ್ತಾನ್ಯೇವ ದಿವ್ಯಾಯುಧಾನಿ ಪುನರ್ವೈಕುಣ್ಠಂ ಲೋಕಮಿತಾನಿ ಭೂಯಃ ।
ತದಾSವತೇರೂ ರೌಹಿಣೇಯಸ್ಯ ಚೈವಂ ಭಾರ್ಯ್ಯಾsಪ್ಯಾಯಾದ್ ವಾರುಣೀ ನಾಮ ಪೂರ್ವಾ ॥೧೬.೧೦ ॥

ಹಿಂದೆ ಜರಾಸಂಧನೊಂದಿಗೆ ಯುದ್ಧಮಾಡುವಾಗ ಹೊಂದಿದ್ದ ದಿವ್ಯಾಯುಧಗಳು ಯುದ್ಧ ಮುಗಿದಾಗ  ಮತ್ತೆ ವೈಕುಂಠಲೋಕವನ್ನು ಹೊಂದಿದ್ದವು. ಈಗ ಆ ಎಲ್ಲಾ ಆಯುಧಗಳು ಮತ್ತೆ ಇಳಿದು ಬಂದವು. ಅಷ್ಟೇ ಅಲ್ಲದೆ, ಬಲರಾಮನ ಹಿಂದಿನ ಹೆಂಡತಿಯಾದ, ‘ವಾರುಣೀ’ ಎಂದು ಯಾರು ಪ್ರಸಿದ್ಧಳೋ ಆಕೆಯೂ ಕೂಡಾ ಇಳಿದು ಬಂದಳು.

ಸೈವಾಪರಂ ರೂಪಮಾಸ್ಥಾಯ ಚಾsಗಾಚ್ಛ್ರೀರಿತ್ಯಾಖ್ಯಂ ಸೇನ್ದಿರಾವೇಶಮಗ್ರ್ಯಮ್ ।
ಕಾನ್ತಿಶ್ಚಾsಗಾತ್ ತಸ್ಯ ಸೋಮಸ್ಯ ಚಾನ್ಯಾ ಭಾರ್ಯ್ಯಾ ದ್ವಯೋಃ ಪೂರ್ವತನಾ ಸುರೂಪಾ ॥೧೬.೧೧ ॥

ಆ ವಾರುಣಿಯೇ ಶ್ರೀಃ ಎನ್ನುವ ಹೆಸರುಳ್ಳವಳಾಗಿ ಲಕ್ಷ್ಮಿಯ ಆವೇಶದಿಂದ(ಇಂದಿರಾವೇಶದಿಂದ) ಕೂಡಿದ ಇನ್ನೊಂದು ರೂಪವನ್ನು ಧರಿಸಿ ಬಂದಳು. ಬಲರಾಮನ ‘ಕಾಂತಿ ಎನ್ನುವ ಹೆಸರಿನ ಹೆಂಡತಿಯೂ ಕೂಡಾ ಇಳಿದು ಬಂದಳು. ಸೋಮನ ಹೆಂಡತಿಯ ಹೆಸರೂ ಕೂಡಾ ‘ಕಾಂತಿ. ಈ  ಇಬ್ಬರು ‘ಕಾಂತಿ’ಯರಲ್ಲಿ ಬಲರಾಮನ ಹೆಂಡತಿ ‘ಕಾಂತಿ’ ಜ್ಯೇಷ್ಠಳೂ ಹಾಗೂ ಸೌಂದರ್ಯವತಿಯೂ ಕೂಡಾ.

[ ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣಬಹುದು: ಮದಿರಾ ರೂಪಿಣೀ ಭೂತ್ವಾ ಕಾನ್ತಿಶ್ಚ ಶಶಿನಃ ಪ್ರಿಯ । ಶ್ರೀಶ್ಚ ದೇವೀ  ವರಿಷ್ಠಾ ಸ್ತ್ರೀ ಸ್ವಯಮೇವಾಮ್ಬುಜಧ್ವಜಾ । ಸಾಞ್ಜಲಿಪ್ರಗ್ರಹ ದೇವಿ  ಬಲಭದ್ರಮುಪಸ್ಥಿತಾ’ (೪೧.೧೫)]

ತಾಭಿ ರಾಮೋ ಮುಮುದೇ ತತ್ರ ತಿಷ್ಠಞ್ಛಶಾಙ್ಕಪೂಗೋದ್ರಿಕ್ತಕಾನ್ತಿಃ ಸುಧಾಮಾ
ತಸ್ಯಾ ವಾರುಣ್ಯಾಃ ಪ್ರತಿಮಾ ಪೇಯರೂಪಾ ಕಾದಮ್ಬರೀ ವಾರುಣೀ ತಾಂ ಪಪೌ ಸಃ ॥೧೬.೧೨ ॥

ಅವರೆಲ್ಲರ(ವಾರುಣಿ, ಶ್ರೀಃ ಮತ್ತು ಕಾಂತಿ ಇವರ) ಆಗಮನದಿಂದ, ಹುಣ್ಣಿಮೆಯ ಚಂದ್ರನ ಬೆಳದಿಂಗಳಿಗಿಂತ ಉತ್ಕೃಷ್ಟವಾದ ಕಾಂತಿಯುಳ್ಳ, ಒಳ್ಳೆಯ ಮೈಬಣ್ಣವುಳ್ಳ(ಸುಧಾಮ) ರಾಮನು ಸಂತಸಪಟ್ಟನು. ವಾರುಣಿಯ ಅಭಿಮನ್ಯವಾದ ದೇಹಕ್ಕೆ ಸಮನಾದ, ಕದಂಬ ಕುಸುಮದಿಂದ ಹುಟ್ಟಿರುವುದರಿಂದ ಕಾದಂಬರಿ ಎನಿಸಿರುವ  ಮದ್ಯವನ್ನು ಬಲರಾಮ ಕುಡಿದ. (ಅಂದರೆ ಮದ್ಯದರೂಪದಲ್ಲಿರುವ ತನ್ನ ಹೆಂಡತಿ ವಾರುಣಿಯನ್ನು ಬಲಭದ್ರ  ಸೇವಿಸಿದ).   

Friday, February 21, 2020

Mahabharata Tatparya Nirnaya Kannada 1601_1606


ಶ್ರೀಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯಃ(ಭಾಗ-೦೨)

. ಸೃಗಾಲವಧಃ

ಓಂ
ಕಾಲೇ ತ್ವೇತಸ್ಮಿನ್ ಭೂಯ ಏವಾಖಿಲೈಶ್ಚ ನೃಪೈರ್ಯ್ಯುಕ್ತೋ ಮಾಗಧೋ ಯೋದ್ಧುಕಾಮಃ
ಪ್ರಾಯಾದ್ ಯದೂಂಸ್ತತ್ರ ನಿತ್ಯಾವ್ಯಯಾತಿಬಲೈಶ್ವರ್ಯ್ಯೋsಪೀಚ್ಛಯಾsಗಾತ್ ಕೃಷ್ಣಃ ೧೬.೦೧

ಇದೇ ಕಾಲದಲ್ಲಿ (ಪಾಂಡವರು ವಿದ್ಯಾಭ್ಯಾಸ ಮಾಡುತ್ತಿರುವ ಕಾಲದಲ್ಲಿ) ಜರಾಸಂಧನು ಎಲ್ಲಾ ರಾಜರೊಂದಿಗೆ ಕೂಡಿಕೊಂಡು ಯುದ್ಧಮಾಡಲು ಬಯಸಿ ಯಾದವರನ್ನು ಕುರಿತು ತೆರಳಿದನು. ಆದರೆ ಮದುರಾಪಟ್ಟಣದಲ್ಲಿ ಯಾವಾಗಲೂ ಇರುವ, ಎಂದೂ ನಾಶವಾಗದ ಶ್ರೀಕೃಷ್ಣನು, ಉತ್ಕೃಷ್ಟವಾದ ಬಲ ಎಂಬ ಐಶ್ವರ್ಯ ಇದ್ದರೂ ಕೂಡಾ, ತನ್ನ ಇಚ್ಛೆಯಿಂದಲೇ ಮದುರೆಯನ್ನು ಬಿಟ್ಟು  ತೆರಳಿದನು/ಓಡಿದನು.

ಏಕೆ ಶ್ರೀಕೃಷ್ಣ ಹೀಗೆ ಮಾಡಿದ ಎಂದರೆ:

ಸನ್ದರ್ಶಯನ್ ಬಲಿನಾಮಲ್ಪಸೇನಾದ್ಯುಪಸ್ಕರಾಣಾಂ ಬಹಳೋಪಸ್ಕರೈಶ್ಚ ।
ಪ್ರಾಪ್ತೇ ವಿರೋಧೇ ಬಲಿಭಿರ್ನ್ನೀತಿಮಗ್ರ್ಯಾಂ ಯಯೌ ಸರಾಮೋ ದಕ್ಷಿಣಾಶಾಂ ರಮೇಶಃ ॥೧೬. ೦೨ ॥

ಬಲಿಷ್ಠರಾಗಿರುವ, ಆದರೆ ಅತ್ಯಂತ ಸ್ವಲ್ಪ ಸೇನೆಯನ್ನು ಹೊಂದಿರುವ ರಾಜರಿಗೆ, ಬಹಳ ಸೈನಿಕರ ಸಂಖ್ಯೆಯನ್ನು ಹೊಂದಿರುವ ರಾಜರೊಂದಿಗೆ ವಿರೋಧವು ಒದಗಿದಾಗ, ಉತ್ಕೃಷ್ಟವಾದ ನೀತಿಯನ್ನು ತೋರಿಸುತ್ತಾ, ಬಲರಾಮನಿಂದ ಕೂಡಿದ ಶ್ರೀಕೃಷ್ಣನು ದಕ್ಷಿಣದಿಕ್ಕಿಗೆ ಓಡಿದ/ತೆರಳಿದ.
[ಒಬ್ಬ ರಾಜನಲ್ಲಿ ಬಹಳ ಸೇನೆ ಮತ್ತು ಯುದ್ಧೋಪಕರಣಗಳು(ರಥ, ಆಯುಧ, ಇತ್ಯಾದಿ) ಇದ್ದು, ಆತ ಕಡಿಮೆ ಸೈನ್ಯವಿರುವ ಇನ್ನೊಬ್ಬ ರಾಜನ ಮೇಲೆ ದಂಡೆತ್ತಿ ಹೋದಾಗ, ಕಡಿಮೆ ಸೈನ್ಯ ಹೊಂದಿರುವ ರಾಜ ಬಲಿಷ್ಠನಾಗಿದ್ದರೂ ಕೂಡಾ, ಅವನಲ್ಲಿ ಸಾಕಷ್ಟು ಸೈನ್ಯ, ಯುದ್ಧೋಪಕರಣ ಇಲ್ಲದಿದ್ದಾಗ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ತೋರಿಸಿದ್ದಾನೆ. ಇದನ್ನೇ ಇಂದು ಗೆರಿಲ್ಲಾ ಯುದ್ಧ ಎಂದು ಕರೆಯುತ್ತಾರೆ]    

ಸೋsನನ್ತವೀರ್ಯ್ಯಃ  ಪರಮೋsಭಯೋsಪಿ ನೀತ್ಯೈ ಗಚ್ಛನ್ ಜಾಮದಗ್ನ್ಯಂ ದದರ್ಶ ।
ಕ್ರೀಡಾರ್ತ್ಥಮೇಕೋsಪಿ ತತೋsತಿದುರ್ಗ್ಗಂ ಶ್ರುತ್ವಾ ಗೋಮನ್ತಂ ತತ್ರ ಯಯೌ ಸಹಾಗ್ರಜಃ॥೧೬.೦೩ ॥

ಎಣೆಯಿರದ ವೀರ್ಯವುಳ್ಳ, ಎಲ್ಲರಿಗಿಂತ ಉತ್ಕೃಷ್ಟನಾದ, ನಿರ್ಭಯನಾದರೂ ಕೂಡಾ, ಲೋಕಕ್ಕೆ ನೀತಿಯನ್ನು ತೋರುವುದಕ್ಕಾಗಿ ಮದುರೆಯಿಂದ ಪಲಾಯನ ಮಾಡುವವನಂತೆ ತೆರಳಿದ ಶ್ರೀಕೃಷ್ಣ, ಪರಶುರಾಮನನ್ನು ಕಂಡನು. ವಿಲಾಸಕ್ಕಾಗಿ, ಒಬ್ಬನೇ ಆದರೂ(ಶ್ರೀಕೃಷ್ಣ-ಪರಶುರಾಮ ಅವರಿಬ್ಬರೂ ಒಬ್ಬನೇ ಆದರೂ), ಪರಶುರಾಮನಿಂದ ಅತ್ಯಂತ ಗೋಪ್ಯವಾದ ಪ್ರದೇಶ ಯಾವುದೆಂದು ಕೇಳಿ, ಅದರಂತೆ ಅಣ್ಣನಿಂದ ಕೂಡಿಕೊಂಡು ಗೋಮನ್ತ ಪರ್ವತಕ್ಕೆ ತೆರಳಿದನು.

ತದಾ ದುಗ್ಧಾಬ್ಧೌ ಸಂಸೃತಿಸ್ಥೈಃ ಸುರಾದ್ಯೈಃ ಪೂಜಾಂ ಪ್ರಾಪ್ತುಂ ಸ್ಥಾನಮೇಷಾಂ ಯೋಗ್ಯಮ್ ।
ಮುಕ್ತಸ್ಥಾನಾದಾಪ ನಾರಾಯಣೋsಜೋ ಬಲಿಶ್ಚಾsಗಾತ್ ತತ್ರ ಸನ್ದೃಷ್ಟುಮೀಶಮ್ ॥ ೦೪ ॥

ಆಗಲೇ, ಕ್ಷೀರಸಾಗರದಲ್ಲಿ ಸಂಸಾರದಲ್ಲಿರುವ ದೇವತೆಗಳಿಂದ ಪೂಜೆಯನ್ನು ಹೊಂದಲು, ಆ ಸಂಸಾರದಲ್ಲಿರುವ ಸುರರಿಗೆ ಯೋಗ್ಯವಾಗಿರುವ ಅಮುಕ್ತಸ್ಥಾನವನ್ನು, ಮುಕ್ತಸ್ಥಾನದೊಳಗಡೆಯಿಂದ ನಾರಾಯಣನು ಹೊಂದಿದನು. ಆಗ ಅಲ್ಲಿಗೆ  ಬಲಿಯೂ ಕೂಡಾ ನಾರಾಯಣನನ್ನು ಕಾಣಲೆಂದು ಬಂದನು.
[ವೈಕುಂಠದಲ್ಲಿ  ಮುಕ್ತ ಹಾಗು ಅಮುಕ್ತಸ್ಥಾನ ಎನ್ನುವ ಎರಡು ವಿಭಾಗವಿದೆ. ಅಮುಕ್ತಸ್ಥಾನದಲ್ಲಿ ಸಂಸಾರದಲ್ಲಿರುವ ದೇವತೆಗಳೆಲ್ಲಾ ಪೂಜೆ ಮಾಡುತ್ತಿದ್ದರು. ಆಗ ಪರಮಾತ್ಮ ಅಲ್ಲಿ ಪ್ರಕಟನಾದ. ಅದೇ ಸಮಯದಲ್ಲಿ  ಪರಮಾತ್ಮನನ್ನು ನೋಡಲು ಬಲಿಚಕ್ರವರ್ತಿಯೂ ಅಲ್ಲಿಗೆ ಬಂದ].

ತತ್ರಾಸುರಾವೇಶಮಮುಷ್ಯ ವಿಷ್ಣುಃ ಸನ್ದರ್ಶಯನ್ ಸುಪ್ತಿಹೀನೋsಪಿ ನಿತ್ಯಮ್ ।
ಸಂಸುಪ್ತವಚ್ಛಿಶ್ಯ ಉದಾರಕರ್ಮ್ಮಾ ಸಙ್ಯಾಯೈ ದೇವಾನಾಂ ಮುಖಮೀಕ್ಷ್ಯಾಪ್ರಮೇಯಃ ॥ ೦೫ ॥

ಉತ್ಕೃಷ್ಟಕರ್ಮವುಳ್ಳ, ಯಾರಿಂದಲೂ ಸಂಪೂರ್ಣ ತಿಳಿಯಲು ಅಸಾಧ್ಯನಾದ ಭಗವಂತನು, ಅಲ್ಲಿಗೆ ಬಂದ ಬಲಿಯ ಅಸುರಾವೇಶವನ್ನು ಪ್ರಪಂಚಕ್ಕೆ ತೋರುವುದಕ್ಕಾಗಿ(ತೋರಿಸುತ್ತಾ),  ಸುಪ್ತಿಹೀನನಾದರೂ ಕೂಡಾ, ದೇವತೆಗಳ ಮುಖವನ್ನು ಕಂಡು ಅವರಿಗೂ  ನಿದ್ರಿಸುವಂತೆ ಸಂಜ್ಞೆಮಾಡಿ, ತಾನು ನಿದ್ರೆಮಾಡಿದವನಂತೆ ಮಲಗಿದನು.

ದೇವಾಶ್ಚ ತದ್ಭಾವವಿದೋsಖಿಲಾಶ್ಚ ನಿಮೀಲಿತಾಕ್ಷಾಃ ಶಯನೇಷು ಶಿಶ್ಯಿರೇ ।
ತದಾ ಬಲಿಸ್ತಸ್ಯ ವಿಷ್ಣೋಃ ಕೀರೀಟಮಾದಾಯಗಾಜ್ಜಹಸುಃ ಸರ್ವದೇವಾಃ ॥ ೧೬.೦೬ ॥

ಎಲ್ಲಾ ದೇವತೆಗಳು ಪರಮಾತ್ಮನ ಅಭಿಪ್ರಾಯವನ್ನು ತಿಳಿದು, ತಮ್ಮ ಕಣ್ಗಳನ್ನು ಮುಚ್ಚಿ ಹಾಸಿಗೆಗಳಲ್ಲಿ ನಿದ್ರಿಸಿದವರಂತೆ ಮಲಗಿಕೊಂಡರು. ಆಗ ಬಲಿಯು  ವಿಷ್ಣುವಿನ ಕಿರೀಟವನ್ನು ತೆಗೆದುಕೊಂಡು(ತನ್ನ ಲೋಕವಾದ ಪಾತಾಳಕ್ಕೆ) ಓಡಿಹೋದನು. ಇದನ್ನು ಕಂಡು ಎಲ್ಲಾ ದೇವತೆಗಳು ನಕ್ಕರು ಕೂಡಾ.
[ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣುತ್ತೇವೆ: ಗೋಮಂತಮಿತಿ ವಿಖ್ಯಾತಂ ನೈಕಶೃಙ್ಗವಿಭೂಷಿತಂ । ಸ್ವರ್ಗತೈಕಮಹಾಶೃಙ್ಗಂ ದುರಾರೋಹಂ ಖಗೈರಪಿ(ವಿಷ್ಣುಪರ್ವಣಿ -  ೩೯.೬೪),  ‘ಉದಯಾಸ್ತಮಯೇ ಸೂರ್ಯಂ  ಸೋಮಂ ಚ ಜ್ಯೋತಿಷಾಂ ಪತಿಮ್ । ಊರ್ಮಿಮನ್ತಂ ಸಮುದ್ರಂ ಚ ಅಪಾರದ್ವೀಪಭೂಷಣಮ್ ।  ಪ್ರೇಕ್ಷಮಾಣೌ ಸುಖಂ  ತತ್ರ ನಗಾಗ್ರೇ ವಿಚರಿಷ್ಯಥಃ ।  ಶೃಙ್ಗಸ್ಥೌ ತಸ್ಯ ಶೈಲಸ್ಯ  ಗೋಮಂತಸ್ಯ ವನೇಚರೌ । ದುರ್ಗಯುದ್ಧೇನ ಧಾವಂತೌ ಜರಾಸಂಧಂ ವಿಜೇಷ್ಯಥಃ’ (೬೭-೬೯) [‘ನೀವು ಗೋಮಂತಕ ಪರ್ವತವನ್ನೇರಿ ಅಲ್ಲಿ  ಜರಾಸಂಧನನ್ನು ಗೆಲ್ಲಿ’ ಎನ್ನುವ ಪರಶುರಾಮನ ಮಾತು ಇದಾಗಿದೆ].
‘ಸುಪ್ತಸ್ಯ ಶಯನೇ ದಿವ್ಯೇ ಕ್ಷೀರೋದೇ ವರುಣಾಲಯೇ । ವಿಷ್ಣೋಃ ಕಿರೀಟಂ ದೈತ್ಯೇನ  ಹೃತಂ ವೈರೋಚನೇನ ವೈ’ (ವಿಷ್ಣುಪರ್ವಣಿ - ೪೧.೩೯) [ಮಲಗಿರುವ ಅವನ ಕಿರೀಟವು ಬಲಿಯಿಂದ ಅಪಹರಿಸಲ್ಪಟ್ಟಿತು].
‘ವೈರೋಚನೇನ ಸುಪ್ತಸ್ಯ  ಮಮ ಮೌಲಿರ್ಮಹೋದಧೌ । ಶಕ್ರಸ್ಯ ಸದೃಶಂ ರೂಪಂ ದಿವ್ಯಮಾಸ್ಥಾಯ  ಸಾಗರಾತ್ । ಗ್ರಾಹರೂಪೇಣ ಯೋ ನೀತ ಆನೀತೋsಸೌ ಗರುತ್ಮತಾ’(೪೮) (‘ವೈಕುಂಠಲೋಕದಲ್ಲಿ ಮಲಗಿದ್ದ ನನ್ನ ಕಿರೀಟವನ್ನು ಬಲಿ ಎತ್ತಿಕೊಂಡು ಹೋದ’ ಎಂದು ಹೇಳುವ ಶ್ರೀಕೃಷ್ಣನ ಮಾತು ಇದಾಗಿದೆ)].

Sunday, February 2, 2020

Mahabharata Tatparya Nirnaya Kannada 1561_1566


ಶ್ರುತ್ವಾ ರಾವಂ ಸಾರಮೇಯಸ್ಯ ದೂರಾಚ್ಛರೈರ್ಮ್ಮುಖಂ ಶಬ್ದವೇಧೀ ಪುಪೂರೇ
ಸ ಏಕಲವ್ಯೋ ವ್ರಣಮಸ್ಯ ನಾಕರೋಚ್ಛ್ವಾಪೂರಿತಾಸ್ಯಃ ಪಾಣ್ಡವಾನಭ್ಯಯಾತ್ ಸಃ ೧೫.೬೧

ಆ ಸಾರಮೇಯದ(ನಾಯಿಯ) ಬೊಗಳುವಿಕೆಯನ್ನು ದೂರದಿಂದಲೇ ಕೇಳಿ, ಬಾಣಗಳಿಂದ ಶಬ್ದವನ್ನು  ಭೇದಿಸಿ ಹೊಡೆಯುವುದರಲ್ಲಿ ಸಮರ್ಥನಾದ ಏಕಲವ್ಯನು, ತನ್ನ ಬಾಣಗಳಿಂದ ಆ ನಾಯಿಯ ಮುಖವನ್ನು ಮುಚ್ಚಿದನು. ಆದರೆ ಅದಕ್ಕೆ ಯಾವುದೇ ಗಾಯವನ್ನುಂಟುಮಾಡಲಿಲ್ಲ. ಆಗ ಆ ನಾಯಿಯು ಬಾಣಗಳಿಂದ ತುಂಬಿದ ಮುಖವುಳ್ಳದ್ದಾಗಿ ಪಾಂಡವರ ಬಳಿ ಬಂದಿತು.

ದೃಷ್ಟ್ವಾ ಚಿತ್ರಂ ಕುರವಃ ಪಾಣ್ಡವಾಶ್ಚ ದ್ರಷ್ಟುಂ ಕರ್ತ್ತಾರಂ ಮಾರ್ಗ್ಗಯಾಮಾಸುರತ್ರ
ದ್ರೋಣಾಕೃತಿಂ ಮಾರ್ತ್ತಿಕೀಂ ಪೂಜಯನ್ತಂ ದದೃಶುಶ್ಚೈನಂ ಧನುರೇವಾಭ್ಯಸನ್ತಮ್ ೧೫.೬೨

ಈ ಅಚ್ಚರಿಯನ್ನು ಕಂಡ ಕುರುಗಳು ಮತ್ತು ಪಾಂಡವರು, ಆ ಕಾರ್ಯವನ್ನು ಮಾಡಿರುವವನನ್ನು ನೋಡಬೇಕೆಂದು ಹುಡುಕಿದರು. ಸ್ವಲ್ಪಹೊತ್ತು ಹುಡುಕಿದ ಮೇಲೆ, ಮಣ್ಣಿನ ದ್ರೋಣರ ಆಕೃತಿಯನ್ನು ಪೂಜೆಮಾಡುವ, ಬಿಲ್ಲನ್ನು ಅಭ್ಯಾಸಮಾಡುವ ಏಕಲವ್ಯನನ್ನು ಅವರು ಕಂಡರು.  

ಪೈಶಾಚಮೇವೈಷ ಪಿಶಾಚಕೇಭ್ಯಃ ಪೂರ್ವಂ ವಿವೇದಾಸ್ತ್ರವೃನ್ದಂ ನಿಷಾದಃ
ದಿವ್ಯಾನ್ಯಸ್ತ್ರಾಣ್ಯಾಪ್ತುಮೇತಾಂ ಚ ಶಿಕ್ಷಾಂ ದ್ರೋಣಂ ಸದಾ ಪೂಜಯತಿ ಸ್ಮ ಭಕ್ತ್ಯಾ ೧೫.೬೩

ಏಕಲವ್ಯನು ಪಿಶಾಚಿಗಳಿಂದ ಪಿಶಾಚಿ ಸಂಬಂಧಿಯಾಗಿರುವ ಅಸ್ತ್ರವೃಂದವನ್ನು ಮೊದಲೇ ತಿಳಿದಿದ್ದ. ಈಗ ದಿವ್ಯಾಸ್ತ್ರವನ್ನು ಹೊಂದಬೇಕೆಂದು ನಿರಂತರವಾದ ಅಭ್ಯಾಸವನ್ನು ಮಾಡುತ್ತಿದ್ದ. ಅದಕ್ಕಾಗಿ ದ್ರೋಣರನ್ನು ಭಕ್ತಿಯಿಂದ ಪೂಜಿಸುತ್ತಿದ್ದ.
[ಒಂದಲ್ಲಾ ಒಂದು ದಿನ ನನ್ನ ಭಕ್ತಿಯನ್ನು ಕಂಡು ದ್ರೋಣರು ನನಗೆ ವಿದ್ಯೆಯನ್ನು ಉಪದೇಶ ಮಾಡುತ್ತಾರೆ ಎಂಬ ಭರವಸೆ ಅಷ್ಟೇ ಹೊರತು ಇನ್ನೇನೂ ಅಲ್ಲಾ. ಏಕೆಂದರೆ ಅಸ್ತ್ರವನ್ನು ಗುರುವಿನ ಉಪದೇಶದಿಂದಷ್ಟೇ ಪಡೆಯಲು ಸಾಧ್ಯ ಹೊರತು ಕೇವಲ ಅಭ್ಯಾಸದಿಂದಲ್ಲ].

ದೃಷ್ಟ್ವಾ ವಿಶೇಷಂ ತಮಮುಷ್ಯ ಪಾರ್ತ್ಥೋ ದ್ರೋಣಾಯೋಚೇ ತ್ವದ್ವರೋ ಮೇ ಮೃಷಾssಸೀತ್
ಇತ್ಯುಕ್ತ ಏನಂ ತ್ವಭಿಗಮ್ಯ ದಕ್ಷಿಣಾಂ ವಿಪ್ರೋ ಯಯಾಚೇ ದಕ್ಷಿಣಾಙ್ಗುಷ್ಠಮೇವ ೧೫.೬೪

ಅರ್ಜುನನು ಈರೀತಿಯಾದ ವಿಶೇಷವನ್ನು ಕಂಡು, ‘ನಿನ್ನ ವರವು ನನ್ನ ಪಾಲಿಗೆ ಸುಳ್ಳಾಯಿತು’ (ಧನುರ್ಧಾರಿಗಳಲ್ಲೇ ಶ್ರೇಷ್ಠನನ್ನಾಗಿ ಮಾಡುವೆ ಎನ್ನುವ ದ್ರೋಣರ ಮಾತು ನನ್ನ ಪಾಲಿಗೆ ಸುಳ್ಳಾಯಿತು) ಎಂದು ದ್ರೋಣನಿಗೆ ಹೇಳಿದನು. ಈರೀತಿಯಾದ ಮಾತನ್ನು ಕೇಳಿದ ಆ ಬ್ರಾಹ್ಮಣನು (ದ್ರೋಣನು), ಏಕಲವ್ಯನನ್ನು ಹೊಂದಿ, ಆತನ ಬಲ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿದನು.

ತಸ್ಯ ಪ್ರಸಾದೋಪಚಿತೋರುಶಿಕ್ಷೋ ನಿಷಾದೋsದಾದ್ ದಕ್ಷಿಣಾಙ್ಗುಷ್ಠಮಸ್ಮೈ
ತತಃ ಪರಂ ನಾಸ್ಯ ಬಭೂವ ಶಿಕ್ಷಾ ಸನ್ಮುಷ್ಟಿಹೀನಸ್ಯ ಸಮಾsರ್ಜ್ಜುನೇನ ೧೫.೬೫

ದ್ರೋಣಾಚಾರ್ಯರ ಅನುಗ್ರಹದಿಂದ ಸಮೃದ್ಧವಾದ, ಉತ್ಕೃಷ್ಟವಾದ ಶಿಕ್ಷೆಯುಳ್ಳ ಏಕಲವ್ಯನು, ದ್ರೋಣಾಚಾರ್ಯರಿಗೆ ತನ್ನ ಬಲ ಹೆಬ್ಬೆರಳನ್ನು ತುಂಡರಿಸಿ ಕೊಟ್ಟನು. ಅದಾದಮೇಲೆ, ಮುಷ್ಟಿಹೀನನಾದ ಏಕಲವ್ಯನ  ಬಲ ಮತ್ತು ಶಿಕ್ಷಣವು ಅರ್ಜುನನಿಗೆ ಸಮವಾಗಲಿಲ್ಲ.   

ಪುನಃ ಕೃಪಾಲೂ ರೈವತಪರ್ವತೇ ತಂ ದ್ರೋಣಃ ಪ್ರಾಪ್ಯಾsದಾದಸ್ತ್ರವರಾಣಿ ತಸ್ಮೈ
ಏಕಾನ್ತ ಏವಾಸ್ಯ ಭಕ್ತ್ಯಾ ಸುತುಷ್ಟೋ ಧನ್ವಿಶ್ರೇಷ್ಠಂ ಕೃತವಾನರ್ಜ್ಜುನಂ ಚ ೧೫.೬೬

ಆ ಕಾರಣದಿಂದ ಪುನಃ ಕೃಪಾಳುವಾಗಿರುವ ದ್ರೋಣಾಚಾರ್ಯರು ರೈವತ ಪರ್ವತದಲ್ಲಿ ಏಕಲವ್ಯನನ್ನು ಹೊಂದಿ, ಅವನಿಗಾಗಿ ಏಕಾಂತದಲ್ಲಿ ಶ್ರೇಷ್ಠ ಅಸ್ತ್ರಗಳನ್ನು ಕೊಟ್ಟರು. ಏಕಲವ್ಯನ ಭಕ್ತಿಯಿಂದ ಸಂತಸಗೊಂಡು, ಏಕಾಂತದಲ್ಲಿ (ಅರ್ಜುನನಿಗೂ ತಿಳಿಯದಂತೆ) ಅಸ್ತ್ರ ವಿದ್ಯೆಗಳನ್ನು ಅವನಿಗೆ ನೀಡಿದರು. ಹಾಗೆಯೇ, ಅರ್ಜುನನನ್ನೂ ಕೂಡಾ ಶ್ರೇಷ್ಠ ಧನುರ್ಧಾರಿಯನ್ನಾಗಿ  ಮಾಡಿದರು.
ಈ ಮೇಲಿನ ವಿವರವನ್ನು ಹರಿವಂಶದಲ್ಲಿ(ವಿ.ಪ ೫೬.೨೭-೮).  ಹೇಳಿರುವುದನ್ನು ನಾವು  ಕಾಣುತ್ತೇವೆ,ತತ್ರ ರೈವತಕೋನಾಮ  ಪರ್ವತೋ ನಾತಿದೂರತಃ ಮಂದರೋದಾರಶಿಖರಃ  ಸರ್ವತೋsಭಿವಿರಾಜತೇ ತತ್ರೈಕಲವ್ಯ ಸಂವಾಸೋ  ದ್ರೋಣೇನಾಧ್ಯುಷಿತಶ್ಚಿರಮ್’
[ಶ್ರೀಕೃಷ್ಣ ಇನ್ನೂ ದ್ವಾರಕೆಗೆ ಬಂದಿರಲಿಲ್ಲಾ. ಅವರು ಮಧುರೆಯಲ್ಲಿದ್ದರು. ಅಂತಹ ಸಂದರ್ಭದಲ್ಲಿ ರೈವತಕ ಪರ್ವತದಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಅಸ್ತ್ರದ  ಶಿಕ್ಷಣವನ್ನು ನೀಡಿದರು]  
  

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವಶಸ್ತ್ರಾಭ್ಯಾಸೋ ನಾಮ ಪಞ್ಚದಶೋsಧ್ಯಾಯಃ