ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, April 25, 2023

Mahabharata Tatparya Nirnaya Kannada 27-60-66

 

ಅಪೋಹುರ್ದ್ದೂರಮೇತಸ್ಮಾತ್ ಸೋSಪಿ ಸಂಸ್ಥಾಪ್ಯ ತಾನ್ ಪುನಃ ।

ಚಿನ್ತಯಾಮಾಸ ನೈತಸ್ಮಾದಧಿಕಂ ಶಕ್ಯತೇSರ್ಜ್ಜುನೇ ॥೨೭.೬೦ ॥

 

ದೂರ ಓಡಿದ ಕುದುರೆಗಳನ್ನು ಪುನಃ ಸ್ಥಾಪಿಸಿದ ಅಶ್ವತ್ಥಾಮ, ‘ಅರ್ಜುನನ ವಿಷಯದಲ್ಲಿ ಇದಕ್ಕಿಂತ ಮಿಗಿಲಾಗಿ ಏನನ್ನೂ ಮಾಡಲು ಶಕ್ಯವಾಗುವುದಿಲ್ಲ’ ಎಂದು ಚಿಂತಿಸಿದ.

 

ಸಾರಥಿತ್ವಾತ್ ಕೇಶವಸ್ಯ ಧ್ವಜಸ್ಥತ್ವಾದ್ಧನೂಮತಃ ।

ಗಾಣ್ಡಿವತ್ವಾತ್ ಕಾರ್ಮ್ಮುಕಸ್ಯ ಚೇಷುದ್ಧ್ಯೋರಕ್ಷಯತ್ವತಃ ॥೨೭.೬೧ ॥

 

ಅವದ್ಧ್ಯತ್ವಾತ್ ತಥಾSಶ್ವಾನಾಮಭೇದ್ಯತ್ವಾದ್ ರಥಸ್ಯ ಚ ।

ಅತೋ ಯೋದ್ಧುಂ ಸಮರ್ತ್ಥೋSಪಿ ನಾದ್ಯ ಯಾಮಿ ಧನಞ್ಜಯಮ್ ॥೨೭.೬೨ ॥

 

ಏವಂ ಸ ಮತ್ವಾ ಪ್ರವಿವೇಶ ಸೇನಾಂ ಪಾಣ್ಡೋಃ ಸುತಾನಾಮಥ ತಂ ಸಮಭ್ಯಯಾತ್ ।

ಪಾಣ್ಡ್ಯಸ್ತಯೋರಾಸ ಸುಯುದ್ಧಮದ್ಭುತಂ ಪ್ರವರ್ಷತೋಃ  ಸಾಯಕಪೂಗಮುಗ್ರಮ್ ॥೨೭.೬೩ ॥

 

ಶ್ರೀಕೃಷ್ಣನೇ ಸಾರಥಿ, ಧ್ವಜದಲ್ಲಿ ಹನುಮಂತ. ಗಾಣ್ಡಿವ ಧನುಸ್ಸು, ಎಂದೂ ಮುಗಿಯದ ಬಾಣಗಳಿರುವ ಬತ್ತಳಿಕೆ, ಅವಧ್ಯತ್ವ ಹೊಂದಿರುವ ಕುದುರೆಗಳು, ನಾಶವಾಗದ ರಥ.  ಈ ಕಾರಣದಿಂದ ನನಗೆ ಯುದ್ಧಮಾಡುವ ತಾಕತ್ತಿದ್ದರೂ ಕೂಡಾ ನಾನು ಅರ್ಜುನನನ್ನು ಕುರಿತು ಈಗ ಹೋಗಲಾರೆ ಎಂದು ಚಿಂತಿಸಿದ ಅಶ್ವತ್ಥಾಮ, ಪಾಂಡವರ ಸೇನೆಯನ್ನು ಬೇರೆಡೆಯಿಂದ ಪ್ರವೇಶ ಮಾಡಿದನು. ಆಗ ಅವನನ್ನು  ಪಾಂಡ್ಯದೇಶದ ರಾಜನು ಎದುರುಗೊಂಡ. ತೀಕ್ಷ್ಣವಾದ ಬಾಣಗಳನ್ನು ವರ್ಷಿಸತಕ್ಕ ಆ ಪಾಂಡ್ಯರಾಜ ಮತ್ತು ಅಶ್ವತ್ಥಾಮರ ನಡುವೆ ಅದ್ಭುತವಾದ ಉಗ್ರ ಹೋರಾಟ ನಡೆಯಿತು.

 

ಅಷ್ಟಾವಷ್ಟಶತಾನ್ಯೂಹುಃ ಶಕಟಾನಿ ಯದಾಯುಧಮ್ ।

ಅಹ್ನಸ್ತದಷ್ಟಭಾಗೇನ ದ್ರೌಣಿಶ್ಚಿಕ್ಷೇಪ ತತ್ರ ಹ ॥೨೭.೬೪ ॥

 

ಆದಿನದ ಯುದ್ಧದಲ್ಲಿ ಅಶ್ವತ್ಥಾಮ ಎಂಟು ಎತ್ತುಗಳು ಹೊರಬಹುದಾದ ಒಂದು ಗಾಡಿ, ಆ ಗಾಡಿಯಲ್ಲಿ ತುಂಬಿರುವ ಅಸ್ತ್ರಗಳು,  ಅಂತಹ  ಎಂಟು ಗಾಡಿಗಳಲ್ಲಿ ಎಷ್ಟು ತುಂಬಬಹುದೋ ಅಷ್ಟು ಆಯುಧವನ್ನು ದಿವಸದ ಎಂಟನೇ ಒಂದು ಭಾಗದಲ್ಲೇ ಖಾಲಿ ಮಾಡಿದ.

 

ಅಥ ತಂ ವಿರಥಂ ಕೃತ್ವಾ ಛಿತ್ವಾ ಕಾರ್ಮ್ಮುಕಮಾಹವೇ ।

ಸಕುಣ್ಡಲಂ ಶಿರೋ ದ್ರೌಣಿರ್ಜ್ಜಹಾರ ಮುಕುಟೋಜ್ಜ್ವಲಮ್ ॥೨೭.೬೫ ॥

 

ಪಾಂಡ್ಯರಾಜನನ್ನು ವಿರಥನನ್ನಾಗಿ ಮಾಡಿದ ಅಶ್ವತ್ಥಾಮ, ಬಿಲ್ಲನ್ನು ಕತ್ತರಿಸಿ, ಕುಂಡಲದಿಂದ ಸಹಿತವಾಗಿರುವ, ಕಿರೀಟದಿಂದ ಪ್ರಕಾಶಮಾನವಾದ  ಅವನ ತಲೆಯನ್ನು ಕತ್ತರಿಸಿದನು.

 

ಅಥ ವಿದ್ರಾವಯಾಮಾಸ ಪೃತನಾಂ ಪಾಣ್ಡವೀಂ ಶರೈಃ ।

ತದಾ ಜಘಾನ ಪಾರ್ತ್ಥೋSಪಿ ದಣ್ಡಧಾರಾಖ್ಯಮಾಗಧಮ್  ॥೨೭.೬೬ ॥

 

ಈರೀತಿಯಾಗಿ ಯುದ್ಧ ಮಾಡುತ್ತಾ ಅಶ್ವತ್ಥಾಮ ಪಾಂಡವರ ಸೇನೆಯನ್ನು ಬಾಣಗಳಿಂದ ಓಡಿಸಿದ. ಆಗಲೇ ಇನ್ನೊಂದು ಬದಿಯಿಂದ ಅರ್ಜುನನೂ ಕೂಡಾ ದಣ್ಡಧಾರಾ ಎನ್ನುವ ಮಗಧ ದೇಶದ ಒಬ್ಬ ದೈತ್ಯನನ್ನು ಕೊಂದು ಹಾಕಿದ.

Sunday, April 23, 2023

Mahabharata Tatparya Nirnaya Kannada 27-51-59

 

ಉಭೌ ಚ ತಾವಸ್ತ್ರವಿದಾಂ ಪ್ರಧಾನೌ ಮಹಾಬಲೌ ಸಂಯತಿ ಜಾತದರ್ಪ್ಪೌ ।

ಶರೈಃ ಸಮಸ್ತಾಃ ಪ್ರದಿಶೋ ದಿಶಶ್ಚ ದ್ರೋಣೇನ್ದ್ರಸೂನೂ ತಿಮಿರಾಃ ಪ್ರಚಕ್ರತುಃ ॥೨೭.೫೧॥

 

ಅಸ್ತ್ರವೇತ್ತರಲ್ಲಿಯೇ ಪ್ರಧಾನರಾಗಿರುವ, ಮಹಾಬಲರಾಗಿರುವ ಅಶ್ವತ್ಥಾಮ-ಅರ್ಜುನರು, ಯುದ್ಧದಲ್ಲಿ ಆಸಕ್ತಿಯುಳ್ಳವರಾಗಿ, ಹೆಮ್ಮೆಯಿಂದ, ಬಾಣಗಳಿಂದ ದಿಕ್ಕು-ವಿದಿಕ್ಕುಗಳನ್ನೂ ಕತ್ತಲೆಯನ್ನಾಗಿ ಮಾಡಿದರು.  

 

ದ್ರೌಣಿಸ್ತದಾ ಸ್ಯನ್ದನವಾಜಿರೋಮಸ್ವರೋಮಕೂಪಧ್ವಜಕಾರ್ಮ್ಮುಕೇಭ್ಯಃ ।

ಶರಾನಮೋಘಾನ್ ಸತತಂ ಸೃಜಾನೋ ಬಬನ್ಧ ಪಾರ್ತ್ಥಂ ಶರಪಞ್ಜರೇಣ ॥೨೭.೫೨॥

 

ಆಗ ಅಶ್ವತ್ಥಾಮನು ರಥದಿಂದ, ಕುದುರೆಗಳ ರೋಮದಿಂದ, ತನ್ನ ರೋಮಕೂಪದಿಂದ, ಧ್ವಜದಿಂದ, ಬಿಲ್ಲಿನಿಂದಲೂ ಕೂಡಾ ಅಮೋಘವಾದ ಬಾಣಗಳನ್ನು ನಿರಂತರವಾಗಿ ಬಿಡುವವನಾಗಿ, ಶರ ಪಂಜರದಲ್ಲಿ ಅರ್ಜುನನನ್ನು ಕಟ್ಟಿಹಾಕಿದನು.  

 

ತಸ್ಮಿನ್ ನಿಬದ್ಧೇ ಹರಿರಪ್ರಮೇಯೋ ವಿಬೋಧಯಾಮಾಸ ಸುರೇನ್ದ್ರಸೂನುಮ್ ।

ಆಲಿಙ್ಗನೇನಾಸ್ಯ ದದೌ ಬಲಂ ಚ ಸ ಉತ್ಥಿತೋSಸ್ತ್ರಾಣ್ಯಮುಚನ್ಮಹಾನ್ತಿ ॥೨೭.೫೩॥

 

ಅರ್ಜುನನು ಹೀಗೆ ಕಟ್ಟಲ್ಪಡಲು, ಅಪ್ರಮೇಯನಾದ ಶ್ರೀಕೃಷ್ಣನು ಅವನನ್ನು ಎಚ್ಚರಿಸಿ, ಅಪ್ಪಿಕೊಳ್ಳುವ ಮೂಲಕ ಅವನಿಗೆ ಬಲವನ್ನು ಕೊಟ್ಟನು. ಅದರಿಂದ ಮತ್ತೆ ಎದ್ದು ನಿಂತ ಅರ್ಜುನನು  ಮಹಾಸ್ತ್ರಗಳನ್ನು ಅಶ್ವತ್ಥಾಮನ ಮೇಲೆ ಪ್ರಯೋಗಿಸಿದನು.

 

ನಿವಾರ್ಯ್ಯ ತಾನ್ಯಸ್ತ್ರವರೈರ್ಗ್ಗುರೋಃ ಸುತಶ್ಚಿಚ್ಛೇದ ಚ ಜ್ಯಾಂ ಯುಧಿ ಗಾಣ್ಡಿವಸ್ಯ ।

ವವರ್ಷ ಪಾರ್ತ್ಥಂ ಚ ಶರೈರಥಾSನ್ಯಾ ಜ್ಯಾSSಸೀತ್ ತಯಾ ಗಾಣ್ಡಿವಂ ಸೋSಪ್ಯಯುಙ್ಕ್ತ ॥೨೭.೫೪॥

 

ಅರ್ಜುನನ ಅಸ್ತ್ರಗಳನ್ನು ಅದಕ್ಕಿಂತ ಪ್ರಭಲವಾದ ಅಸ್ತ್ರಗಳಿಂದ ತಡೆದ ಅಶ್ವತ್ಥಾಮನು, ಅರ್ಜುನನ  ಗಾಣ್ಡಿವದ ನೇಣನ್ನು ಕತ್ತರಿಸಿದನು ಮತ್ತು ಅರ್ಜುನನನ್ನು ಬಾಣಗಳಿಂದ ಪೀಡಿಸಿದನು. ಅಷ್ಟರಲ್ಲಿ ಗಾಣ್ಡಿವದಲ್ಲಿ ಇನ್ನೊಂದು ನೇಣು ಬೆಳೆದು ಬಂತು. ಅದರಿಂದ ಅರ್ಜುನನು ಪುನಃ ನೇಣನ್ನೇರಿಸಿದನು.

 

ತತಃ ಶರೇಣ ಕುಪಿತಃ ಶಿತೇನ ದ್ರೌಣಿಸಾರಥೇಃ ।

ಶಿರೋ ಜಹಾರ ಕೌನ್ತೇಯಃ ಸಾರಥ್ಯಂ ಸೋSಕರೋತ್ ಸ್ವಯಮ್ ॥೨೭.೫೫॥

 

ತದನಂತರ ಕೋಪಗೊಂಡ ಅರ್ಜುನನು ತೀಕ್ಷ್ಣವಾದ ಬಾಣದಿಂದ ಅಶ್ವತ್ಥಾಮನ ಸಾರಥಿಯ ಕತ್ತನ್ನು ಕತ್ತರಿಸಿದನು. ಆಗ ಆ ಅಶ್ವತ್ಥಾಮನು ತಾನೇ ಸಾರಥ್ಯವನ್ನು ಮಾಡಿದನು.

 

ಶರಾನ್ ವಿಸೃಜತಾ ತೇನ ಸಾರಥ್ಯಮಪಿ ಕುರ್ವತಾ ।

ಶರಕೂಟೇನ ಪಾರ್ತ್ಥಃ ಸ ಪುನರ್ಬುದ್ಧೋ ದ್ವಿಜನ್ಮನಾ ॥೨೭.೫೬॥

 

ಬಾಣಗಳನ್ನು ಬಿಡುತ್ತಾ, ಸಾರಥ್ಯವನ್ನೂ ಮಾಡುತ್ತಿರುವ ಬ್ರಾಹ್ಮಣನಾದ ಅಶ್ವತ್ಥಾಮನಿಂದ ಅರ್ಜುನನು   ಬಾಣಗಳ ಸಮೂಹದಿಂದ ಮತ್ತೆ ಕಟ್ಟಲ್ಪಟ್ಟನು.

 

ಪುನರಾಲಿಙ್ಗ್ಯ ಕೃಷ್ಣಸ್ತಮಧಾಚ್ಛತ್ರುವಿಘಾತಕಮ್ ।

ಬಲಮಸ್ಮಿಂಸ್ತತಃ ಪಾರ್ತ್ಥ ಉತ್ತಸ್ಥೌ ಶರಚಾಪಭೃತ್ ॥೨೭.೫೭॥

 

ಆಗ ಪುನಃ ಆಲಿಂಗನವನ್ನು ಮಾಡಿದ ಶ್ರೀಕೃಷ್ಣನು, ಶತ್ರುಸಂಹಾರ ಬಲವನ್ನು ಅರ್ಜುನನಲ್ಲಿಟ್ಟನು. ಆಮೇಲೆ ಅರ್ಜುನನು ಬಿಲ್ಲು ಬಾಣಗಳನ್ನು ಹಿಡಿದು ಮತ್ತೆ ಸನ್ನದ್ಧನಾದನು.

 

ವವರ್ಷ ಚ ಶರಾನ್ ಭೂಯೋ ದ್ರೋಣಪುತ್ರೇSರಿಮರ್ದ್ದನಃ ।

ಪುನಸ್ತಸ್ಯ ನುನೋದ ಜ್ಯಾಂ ದ್ರೌಣಿಃ ಸನ್ಧಾಯ ತಾಂ ಪುನಃ ॥೨೭.೫೮ ॥

 

ಶತ್ರುಗಳನ್ನು ಗೆಲ್ಲಬಲ್ಲ ಆ ಅರ್ಜುನನು ಅಶ್ವತ್ಥಾಮನಲ್ಲಿ ಬಾಣಗಳನ್ನು ಬಿಟ್ಟನು. ಆಗ ಅಶ್ವತ್ಥಾಮನು ಅವನ ಬಿಲ್ಲಿನ ನೇಣನ್ನು ಮತ್ತೆ ಕತ್ತರಿಸಿದನು. ಅರ್ಜುನನು ನೇಣನ್ನು ಮತ್ತೆ ಕಟ್ಟಿ, ಅಶ್ವತ್ಥಾಮನ ಕುದುರೆಗಳ ಲಗಾಮನ್ನು ಕತ್ತರಿಸಿದನು.

 

ಪಾರ್ತ್ಥೋ ದ್ರೋಣಸುತಸ್ಯಾಶ್ವರಶ್ಮೀಂಶ್ಚಿಚ್ಛೇದ ಸಾಯಕೈಃ ।

ವಿರಶ್ಮಯೋ ಹಯಾ ದ್ರೌಣೇಃ ಪುನಃ ಪಾರ್ತ್ಥಶರಾಹತಾಃ ॥ ೨೭.೫೯॥

 

ಅಶ್ವತ್ಥಾಮನ ಕುದುರೆಗಳು ಲಗಾಮನ್ನು ಕಳೆದುಕೊಂಡು, ಅರ್ಜುನನ ಬಾಣಗಳಿಂದ ಘಾಸಿಗೊಂಡು, ದೂರ ಓಡಿ ಹೋದವು.

Friday, April 21, 2023

Mahabharata Tatparya Nirnaya Kannada 27-44-50

 

ಜಿತ್ವಾ ಸೂರ್ಯ್ಯಸುತಂ ಭೀಮಃ ಕೌರವಾಣಾಮನೀಕಿನೀಮ್ ।

ಸರ್ವಾಂ ವಿದ್ರಾವಯಾಮಾಸ ದ್ರೌಣಿದುರ್ಯ್ಯೋಧನಾವೃತಾಮ್ ॥೨೭.೪೪॥

 

ಭೀಮಸೇನನು ಸೂರ್ಯನ ಮಗನಾಗಿರುವ ಕರ್ಣನನ್ನು ಗೆದ್ದು, ಅಶ್ವತ್ಥಾಮ, ದುರ್ಯೋಧನರಿಂದ ಕೂಡಿರುವ ಕೌರವರ ಸೇನೆಯನ್ನು ಓಡಿಸಿದ.

 

ಅಕ್ಷೋಹಿಣೀತ್ರಯಂ ತೇನ ತದಾ ವಿಲುಳಿತಂ ಕ್ಷಣಾತ್ ।

ತದೈವ ಗುರುಪುತ್ರೋSಯಾತ್ ಪಾಣ್ಡವಾನಾಮನೀಕಿನೀಮ್ ॥೨೭.೪೫॥

 

ವಿಮೃದ್ಯ ಸಕಲಾಂ ಸೇನಾಂ ಕೃತ್ವಾ ಚ ವಿರಥಂ ನೃಪಮ್ ।

ಧೃಷ್ಟದ್ಯುಮ್ನಂ ಯಮೌ ಚೈವ ಸಾತ್ಯಕಿಂ ದ್ರೌಪದೀಸುತಾನ್ ।

ಕ್ಷಣೇನ ವಿರಥೀಕೃತ್ಯ ಸರ್ವಾಂಶ್ಚಕ್ರೇ ನಿರಾಯುಧಾನ್ ॥೨೭.೪೬॥

 

ಸ್ವಲ್ಪ ಹೊತ್ತಿನಲ್ಲೇ ಭೀಮಸೇನನಿಂದ ಮೂರು ಅಕ್ಷೋಹಿಣಿ ನಾಶ ಮಾಡಲ್ಪಟ್ಟಿತು. ಇನ್ನೊಂದು ಕಡೆಯಿಂದ ಅಶ್ವತ್ಥಾಮನು ಪಾಂಡವರ ಸೇನೆಯನ್ನು ಕುರಿತು ಬಂದನು.

ಆ ಅಶ್ವತ್ಥಾಮನು ಎಲ್ಲಾ ಸೇನೆಯನ್ನು ಕಂಗೆಡಿಸಿ, ಧರ್ಮರಾಜನನ್ನು ರಥಹೀನನನ್ನಾಗಿ ಮಾಡಿ, ಧೃಷ್ಟದ್ಯುಮ್ನ, ನಕುಲ-ಸಹದೇವರು, ಸಾತ್ಯಕಿ, ದ್ರೌಪದಿಯ ಮಕ್ಕಳು, ಎಲ್ಲರನ್ನೂ ನಿರಾಯುಧರನ್ನಾಗಿ ಮಾಡಿ, ಅವರ ರಥವನ್ನು ನಾಶಮಾಡಿದನು.

 

ತಾನ್ ಭಗ್ನದರ್ಪ್ಪಾನ್ ರಣತೋSಪಯಾತಾನನ್ವೇವ ಬಾಣಾವೃತಮನ್ತರಿಕ್ಷಮ್ ।

ಕುರ್ವನ್ ಯಯೌ ಧರ್ಮ್ಮರಾಜಸ್ತಮಾಹ ಕಿಂ ನಃ ಸ್ವಧರ್ಮ್ಮೇ ನಿರತಾನ್ ವಿಹಂಸಿ ॥೨೭.೪೭॥

 

ಕ್ಷತ್ರಿಯಾನ್ ಪರಧರ್ಮ್ಮಸ್ಥೋ ಮಾ ಹಿಂಸೀರಿತಿ ಚೋದಿತಃ ।

ಪ್ರಹಸ್ಯ ತಾನ್ ವಿಹಾಯೈವ ಯಯೌ ಯತ್ರಾಚ್ಯುತಾರ್ಜ್ಜುನೌ ॥೨೭.೪೮॥

 

ಹೀಗೆ ಅವರೆಲ್ಲರ ದರ್ಪವನ್ನಿಳಿಸಿ, ಯುದ್ಧದಿಂದ ಓಡಿಹೋಗುವವರನ್ನಾಗಿ ಮಾಡಿದ ಅಶ್ವತ್ಥಾಮ, ಉಳಿದ ಸೇನೆಯನ್ನು ಬಾಣಗಳಿಂದ ತುಂಬಿ ಮುನ್ನುಗ್ಗಿದ. ಆಗ ಧರ್ಮರಾಜನು ನಿಸ್ಸಹಾಯಕತೆಯಿಂದ ಅವನನ್ನು ನಿಂದಿಸಿ ಮಾತನಾಡಿದ- ‘ಯುದ್ಧ ಮಾಡುವುದು ಕ್ಷತ್ರಿಯರಾದ ನಮ್ಮ ಧರ್ಮ. ಬ್ರಾಹ್ಮಣಧರ್ಮದಲ್ಲಿರುವ ನೀನು ಸ್ವಧರ್ಮ ಮಾಡುತ್ತಿರುವ ನಮ್ಮನ್ನು ಕುರಿತು ಏಕೆ ಹಿಂಸೆ ಮಾಡುತ್ತಿರುವೆ’. ಈರೀತಿ ಪ್ರಶ್ನೆ ಮಾಡಲ್ಪಟ್ಟವನಾದ ಅಶ್ವತ್ಥಾಮನು ನಕ್ಕು, ಅವರೆಲ್ಲರನ್ನೂ ಬಿಟ್ಟು, ಕೃಷ್ಣಾರ್ಜುನ ಎಲ್ಲಿದ್ದರೋ ಅಲ್ಲಿಗೆ ಹೊರಟುಹೋದ.

 

ಸಂಶಪ್ತಕೈಸ್ತತ್ರ ಸಂಯುದ್ಧ್ಯಮಾನಂ ಸಮಾಹ್ವಯಾಮಾಸ ಸುರೇಶಸೂನುಮ್ ।

ಸ ಬಾಣಯುಕ್ತಂ ಭುಜಗೇನ್ದ್ರಕಲ್ಪಮುನ್ನಮ್ಯ ಬಾಹುಂ ಯುಧಯೇ ಸುಶೂರಮ್ ॥೨೭.೪೯॥

 

ಅಲ್ಲಿ ಅತ್ಯಂತ ಶೂರನಾದ, ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿರುವ,  ಸುರೇಶಸೂನು ಅರ್ಜುನನನ್ನು, ಅಶ್ವತ್ಥಾಮನು, ಬಾಣಗಳಿಂದ ಯುಕ್ತವಾದ, ಶೇಷ ಸದೃಶವಾದ ತನ್ನ ಗಟ್ಟಿಯಾದ ತೋಳನ್ನೆತ್ತಿ ಯುದ್ಧಕ್ಕಾಗಿ ಕರೆದನು.

 

ಪಾರ್ತ್ಥಃ ಸಂಶಕ್ತಕಗಣೈಃ ಸಂಸೃಷ್ಟಃ ಸಮರಾರ್ತ್ಥಿಭಿಃ ।

ಆಹೂತೋ ದ್ರೌಣಿನಾ ಚೈವ ಕಾರ್ಯ್ಯಂ ಕೃಷ್ಣಮಪೃಚ್ಛತ ।

ಚೋದಯಾಮಾಸ ಚ ಹಯಾನ್ ಕೃಷ್ಣೋ ದ್ರೌಣಿರಥಂ ಪ್ರತಿ ॥೨೭.೫೦॥

 

ಸಂಶಪ್ತಕ ಗಣದಿಂದ ತಡೆಯಲ್ಪಟ್ಟ, ಅಶ್ವತ್ಥಾಮನಿಂದಲೂ ಕರೆಯಲ್ಪಟ್ಟ ಪಾರ್ಥನು ಏನು ಮಾಡಬೇಕೆಂದು ತಿಳಿಯದೇ ಶ್ರೀಕೃಷ್ಣನನ್ನು ಕೇಳಿದ. ಆಗ ಕೃಷ್ಣನು ಅಶ್ವತ್ಥಾಮನ ರಥವನ್ನು ಕುರಿತು ಕುದುರೆಗಳನ್ನು ಪ್ರೇರಿಸಿದ.