ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 11, 2020

Mahabharata Tatparya Nirnaya Kannada 17140_17145


ಸಸಙ್ಜ್ಞಕಾಃ ಸಮುತ್ಥಿತಾಸ್ತತೋ ನೃಪಾಃ ಪುನರ್ಯ್ಯಯುಃ ।
ಜಿಗೀಷವೋsಥ ರುಗ್ಮಿಣೀಂ ವಿಧಾಯ ಚೇದಿಪೇ ಹರಿಮ್ ॥೧೭.೧೪೦॥

ಶ್ರೀಕೃಷ್ಣ ದ್ವಾರಕೆಗೆ ತೆರಳಿದಮೇಲೆ,  ಪ್ರಜ್ಞೆ ಬಂದು ಮೇಲೆದ್ದ ರಾಜರೆಲ್ಲರೂ ತಮ್ಮ ರಾಜ್ಯಕ್ಕೆ ಹಿಂತಿರುಗಿದರು. ಕೆಲವು ಸಮಯ ನಂತರ, ಅವರು ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು, ಪರಮಾತ್ಮನನ್ನು ಗೆಲ್ಲಬೇಕೆಂದು ಬಯಸಿ ಮತ್ತೆ ಕುಣ್ಡಿನಪಟ್ಟಣಕ್ಕೆ ಬಂದರು. [ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು, ಅದರಿಂದ  ಶ್ರೀಕೃಷ್ಣನಿಗೆ ಉಂಟಾಗುವ ಮಾನಭಂಗದಿಂದ ಅವನನ್ನು ಗೆಲ್ಲುವ ಸಂಕಲ್ಪಮಾಡಿ ಬಂದರು]
 
ಸಮಸ್ತರಾಜಮಣ್ಡಲೇ ವಿನಿಶ್ಚಯಾದುಪಾಗತೇ ।
ಸಭೀಷ್ಮಕೇ ಚ ರುಗ್ಮಿಣೀ ಪ್ರದಾತುಮುದ್ಯತೇ ಮುದಾ ॥೧೭.೧೪೧॥

ಸಮಸ್ತಲೋಕಯೋಷಿತಾಂ ವರಾ ವಿದರ್ಭನನ್ದನಾ ।
ದ್ವಿಜೋತ್ತಮಂ ಹರೇಃ ಪದೋಃ ಸಕಾಶಮಾಶ್ವಯಾತಯತ್ ॥೧೭.೧೪೨॥

ಎಲ್ಲಾ ರಾಜರ ಸಮೂಹವು ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಡಿಸುತ್ತೇವೆಂದು ನಿಶ್ಚಯದಿಂದ ಕುಣ್ಡಿನಪಟ್ಟಣಕ್ಕೆ ಬಂದು, ಭೀಷ್ಮಕನಿಂದ ಕೂಡಿ, ತನ್ನನ್ನು ಶಿಶುಪಾಲನಿಗೆ ಕೊಡಲು ಬಯಸುತ್ತಿರಲು, ಸಮಸ್ತಲೋಕದಲ್ಲಿರುವ ಎಲ್ಲಾ ಹೆಣ್ಣುಮಕ್ಕಳಿಗಿಂತ ಶ್ರೇಷ್ಠಳಾದ, ವಿದರ್ಭರಾಜನ ಮಗಳಾದ್ದರಿಂದ ವೈದರ್ಭೀ ಎನಿಸಿಕೊಂಡಿರುವ ರುಗ್ಮಿಣಿಯು, ಒಬ್ಬ ಶ್ರೇಷ್ಠ ಬ್ರಾಹ್ಮಣನನ್ನು ಪರಮಾತ್ಮನ ಪಾದಗಳ ಬಳಿಗೆ ತಕ್ಷಣ ಕಳುಹಿಸಿದಳು.
[ಭಾಗವತದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:ಬಂಧೂನಾಮಿಚ್ಛತಾಂ ದಾತುಂ ಕೃಷ್ಣಾಯ ಭಗಿನೀಂ ನೃಪ । ರುಗ್ಮೀ ನಿವಾರ್ಯ ಕೃಷ್ಣದ್ವಿಟ್ ಚೈದ್ಯಾಯ ಸಮಕಲ್ಪಯತ್ । ತದವೇತ್ಯಾಸಿತಾಪಾಙ್ಗೀ ವೈದರ್ಭೀ ದುರ್ಮನಾ ಭೃಶಮ್ । ವಿಚಿಂತ್ಯಾsಪ್ತಂ ದ್ವಿಜಂ ಕಞ್ಚಿತ್ ಕೃಷ್ಣಾಯ ಪ್ರಾಹಿಣೋದ್ ದ್ರುತಮ್’ [೧೦.೫೭.೨೩-೨೪]  ಬಂಧುಗಳೆಲ್ಲರೂ ರುಗ್ಮಿಣಿಯನ್ನು ಶ್ರೀಕೃಷ್ಣನಿಗೆ ಕೊಡಬೇಕು ಎಂದು ಇಚ್ಛೆಪಡುತ್ತಿದ್ದಾರೆ, ಆದರೆ ರುಗ್ಮಿ ಒಬ್ಬ ಮಾತ್ರ ತಡೆದಿದ್ದಾನೆ. ಏಕೆಂದರೆ, ಅವನಿಗೆ ರುಗ್ಮಿಣಿಯನ್ನು   ಚೇದಿರಾಜನಾದ ಶಿಶುಪಾಲನಿಗೇ ಕೊಡಬೇಕು ಎನ್ನುವ ಚಿಂತನೆ. ಅದನ್ನು ತಿಳಿದ ಕಪ್ಪುಕಣ್ಣಿನ ನೋಟದವಳಾದ ರುಗ್ಮಿಣಿಯು ಬಹಳ ಸಂಕಟಪಟ್ಟು, ಒಬ್ಬ ಆಪ್ತ ದ್ವಿಜನನ್ನು ಶ್ರೀಕೃಷ್ಣನಿದ್ದಲ್ಲಿಗೆ ಕಳುಹಿಸಿಕೊಡುತ್ತಾಳೆ]

ನಿಶಮ್ಯ ತದ್ವಚೋ ಹರಿಃ ಕ್ಷಣಾದ್ ವಿದರ್ಭಕಾನಗಾತ್ ।
ತಮನ್ವಯಾದ್ಧಲಾಯುಧಃ ಸಮಸ್ತಯಾದವೈಃ ಸಹ ॥೧೭.೧೪೩॥

ಪರಮಾತ್ಮನು ಬ್ರಾಹ್ಮಣನ ಮೂಲಕವಾಗಿ ಬಂದ ಅವಳ ಮಾತನ್ನು ಕೇಳಿ, ಒಂದು ಕ್ಷಣದಲ್ಲಿಯೇ ವಿದರ್ಭದೇಶಕ್ಕೆ (ಇಂದಿನ ನಾಗಪುರಕ್ಕೆ) ಬಂದನು. ಬಲರಾಮನು ಎಲ್ಲಾ ಯಾದವರಿಂದ ಕೂಡಿಕೊಂಡು ಶ್ರೀಕೃಷ್ಣನನ್ನು ಅನುಸರಿಸಿದನು.
[ಇಲ್ಲಿ ಕ್ಷಣಾತ್  ಎಂದು ಆಚಾರ್ಯರು ಹೇಳಿದ್ದಾರೆ. ಭಾಗವತದಲ್ಲಿ ಈ ಕುರಿತ ವಿವರಣೆ ಕಾಣಸಿಗುತ್ತದೆ:   ‘ಆನರ್ತಾದೇಕರಾತ್ರೇಣ ವಿದರ್ಭಾನಗಮದ್ಧಯೈಃ’ [೧೦.೫೮.೬], ‘ಶ್ರುತ್ವೈತದ್ ಭಗವಾನ್ ರಾಮೋ ವಿಪಕ್ಷೀಯನೃಪೋದ್ಯಮಾನ್ । ಕೃಷ್ಣಂ ಚೈಕಂ ಗತಂ ಹರ್ತುಂ  ಕನ್ಯಾಂ ಕಲಹಶಙ್ಕಿತಃ । ಬಲೇನ ಮಹತಾ ಸಾರ್ಧಂ ಭಾರ್ತೃಸ್ನೇಹಪರಿಪ್ಲುತಃ । ತ್ವರಿತಃ ಕುಣ್ಡಿನಂ ಪ್ರಾಯಾದ್  ಗಜಾಶ್ವರಥಪತ್ತಿಭಿಃ’(೫೮.೨೦-೨೧)]

ಸಮಸ್ತರಾಜಮಣ್ಡಲಂ ಪ್ರಯಾನ್ತಮೀಕ್ಷ್ಯ ಕೇಶವಮ್ ।
ಸುಯತ್ತಮಾತ್ತಕಾರ್ಮುಕಂ ಬಭೂವ ಕನ್ಯಕಾವನೇ ॥೧೭.೧೪೪॥

ಕೇಶವನು ಬರುತ್ತಿದ್ದಾನೆಂದು ತಿಳಿದು, ಎಲ್ಲಾ ರಾಜರ ಸಮೂಹವು ಪ್ರಯತ್ನಪಟ್ಟು, ಬಿಲ್ಲುಬಾಣಗಳನ್ನು ಹಿಡಿದು, ಗೌರೀ ದೇವಸ್ಥಾನದ ಹತ್ತಿರ ನಿಂತರು.
[ಆ ಕಾಲದಲ್ಲಿ ಮದುವೆಗೆ ಸಿದ್ಧವಾಗಿರುವ ವಧು, ಮದುವೆ ಪೂರ್ವದಲ್ಲಿ ಪಾರ್ವತಿಯನ್ನು ಪೂಜಿಸುವುದು ಒಂದು ಸಂಪ್ರದಾಯವಾಗಿತ್ತು. ಇಲ್ಲಿ ದೇವಸ್ಥಾನ ನಗರದ ಹೊರಭಾಗದಲ್ಲಿದ್ದುದರಿಂದ ವಧು ಅಲ್ಲಿಗೆ ಹೋಗಿ ಬರಬೇಕಾಗಿತ್ತು]

ಪುರಾ ಪ್ರದಾನತಃ ಸುರೇಕ್ಷಣಚ್ಛಲಾದ್ ಬಹಿರ್ಗ್ಗತಾಮ್ ।
ರಥೇ ನ್ಯವೇಶಯದ್ಧರಿಃ ಪ್ರಪಶ್ಯತಾಂ ಚ ಭೂಭೃತಾಮ್ ॥೧೭.೧೪೫॥

ಮದುವೆಗಿಂತ ಮೊದಲು, ದೇವತೆಯನ್ನು ಕಾಣುವ ನೆಪದಿಂದ ಹೊರಗಡೆ ಬಂದ ರುಗ್ಮಿಣಿಯನ್ನು ಎಲ್ಲಾ ರಾಜರು ನೋಡುತ್ತಿರುವಾಗಲೇ ಪರಮಾತ್ಮನು ತನ್ನ ರಥದಲ್ಲಿ ಕೂರಿಸಿಕೊಂಡ.
[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಶ್ವೋಭಾವಿನಿ ವಿವಾಹೇ ಚ ರುಗ್ಮಿಣೀ  ನಿರ್ಯಯೌ ಬಹಿಃ  । ಚತುರ್ಯುಜಾ ರಥೇನೈಂದ್ರೇ ದೇವತಾಯತನೇ ಶುಭೇ । ಇಂದ್ರಾಣಿಮರ್ಚಯಿಷ್ಯಂತೀ ಕೃತಕೌತುಕಮಙ್ಗಲಾ ।  ದೀಪ್ಯಮಾನೇನ ವಪುಷಾ ಬಲೇನ  ಮಹಾತಾssವೃತಾ’ (ವಿಷ್ಣುಪರ್ವಣಿ ೫೯.೩೩-೩೪), ಮದುವೆಯ ಮುಂಚಿನ ದಿನ  ರುಗ್ಮಿಣಿಯು ನಾಲ್ಕು ಕುದುರೆಗಳು ಕೂಡಿದ ರಥದಲ್ಲಿ  ಕುಳಿತು ಶಚಿಯನ್ನು ಅರ್ಚಿಸುವವಳಾಗಿ ಬಂದಳು.
ಭಾಗವತದಲ್ಲಿ ಹೇಳುವಂತೆ:   ‘ಕನ್ಯಾ ಚಾನ್ತಃಪುರಾತ್ ಪ್ರಾಗಾತ್  ಭಟೈರ್ಗುಪ್ತಾsಮ್ಬಿಕಾಲಯಮ್ । ಪದ್ಭ್ಯಾಮ್ ವಿನಿರ್ಯಯೌ ದ್ರಷ್ಟುಂ ಭವಾನ್ಯಾಃ ಪಾದಪಙ್ಕಜಮ್’(೧೦.೫೮.೪೦) ಭಟರಿಂದ ರಕ್ಷಿತಳಾಗಿ ಅಂಬಿಕಾವನಕ್ಕೆ ಆಕೆ ನಡೆದುಕೊಂಡು ಹೋದಳು.
ಒಟ್ಟಿನಲ್ಲಿ ಇಲ್ಲಿ ಹೇಳಿರುವ ವಿಷಯ ಇಷ್ಟು: ಹರಿವಂಶದಲ್ಲಿ ಹೇಳಿರುವುದು ಊರಿನಿಂದ ದೂರವಿರುವ  ದೇವಸ್ಥಾನಕ್ಕೆ ಆಕೆ ರಥದಲ್ಲಿ ಬಂದಿರುವ ವಿಷಯವನ್ನು. ಸಮೀಪದಲ್ಲೇ ಇರುವ ಪಾರ್ವತೀ ಹಾಗೂ   ಶಚೀ ದೇವಸ್ಥಾನದ ನಡುವೆ ಆಕೆ ನಡೆದುಕೊಂಡು ಹೋದಳು ಎನ್ನುವುದನ್ನು ಭಾಗವತ ಹೇಳಿದೆ. ಈ ಮಾತನ್ನು ಭಾಗವತವೇ ಸ್ಪಷ್ಟವಾಗಿ ಹೇಳಿರುವುದನ್ನೂ ನಾವು ಕಾಣಬಹುದು. ‘ಮುನಿವ್ರತಮಥ ತ್ಯಕ್ತ್ವಾ ನಿಶ್ಚಕ್ರಾಮಾಮ್ಬಿಕಾಗೃಹಾತ್ । ಉಪಕಣ್ಠೇ ಸುರೇಶಸ್ಯ ಪೌಲೋಮ್ಯಾಶ್ಚ  ನಿಕೇತನಮ್[೫೮.೫೯] ಮೌನ ವ್ರತವನ್ನು ಬಿಟ್ಟು, ಪಾರ್ವತೀ ದೇವಸ್ಥಾನದಿಂದ ಹೊರ ಬಂದಳು. ಅಲ್ಲೇ ಇರುವ ಶಚೀ ದೇವಸ್ಥಾನಕ್ಕೆ ಅವರು ಹೊರಟಿದ್ದರು].

No comments:

Post a Comment