ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, May 2, 2020

Mahabharata Tatparya Nirnaya Kannada 17132_17139


ಸ ತಸ್ಯ ದೃಷ್ಟಿಮಾತ್ರತೋ ಬಭೂವ ಭಸ್ಮಸಾತ್ ಕ್ಷಣಾತ್ ।
ಸ ಏವ ವಿಷ್ಣುರವ್ಯಯೋ ದದಾಹ ತಂ ಹಿ ವಹ್ನಿವತ್ ॥೧೭.೧೩೨॥

ಕಾಲಯವನನು ಮುಚುಕುನ್ದನ ದೃಷ್ಟಿಮಾತ್ರದಿಂದ ಕ್ಷಣದಲ್ಲಿ ಭಸ್ಮವಾಗಿ ಹೋದ.  [ಮುಚುಕುನ್ದ ಪಡೆದಿದ್ದು ದೇವತೆಗಳ ವರ. ಕಾಲಯವನ ಪಡೆದಿದ್ದು ರುದ್ರನ ವರ. ಹೀಗಿರುವಾಗ ಮುಚುಕುನ್ದನಿಂದ ಕಾಲಯವನ ಹೇಗೆ ಭಸ್ಮವಾದ? ದೇವತೆಗಳ ವರದ ಮುಂದೆ ರುದ್ರನ ವರ ಹೇಗೆ ಸೋತಿತು ಎಂದರೆ:] ‘ದೇವತೆಗಳಿಗೆ ವರವನ್ನು ನೀಡಿದ್ದ ನಾಶವಿಲ್ಲದ ಆ ವಿಷ್ಣುವೇ ಬೆಂಕಿಯಂತೆ ಕಾಲಯವನನನ್ನು ಸುಟ್ಟ’ ಎನ್ನುವ ನಿರ್ಣಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ. 

[ಈ ವಿಷಯವನ್ನು ಹರಿವಂಶದಲ್ಲೂ(ವಿಷ್ಣುಪರ್ವಣಿ ೫೭.೫೫) ಸ್ಪಷ್ಟವಾಗಿ ಹೇಳಿರುವುದನ್ನು ಕಾಣಬಹುದು: ‘ದದಾಹ ಪಾವಕಸ್ತಂ  ತು ಶುಷ್ಕಂ  ವೃಕ್ಷಮಿವಾಶನಿಃ’ ]

ವರಾಚ್ಛಿವಸ್ಯ ದೈವತೈರವಧ್ಯದಾನವಾನ್ ಪುರಾ ।
ಹರೇರ್ವರಾನ್ನಿಹತ್ಯ ಸ ಪ್ರಪೇದ ಆಶ್ವಿಮಂ ವರಮ್ ॥೧೭.೧೩೩॥

ಶಿವನ ವರದಿಂದ ದೇವತೆಗಳಿಂದ ಕೊಲ್ಲಲು ಸಾಧ್ಯವಾಗದ ದಾನವರನ್ನು, ಶ್ರೀಹರಿಯಿಂದ ತಾನು ಪಡೆದ ವರಬಲದಿಂದ ಮುಚುಕುನ್ದ ಕೊಂದನು. ಯುದ್ಧಾನಂತರ ಮುಚುಕುನ್ದನು ಕೂಡಲೇ ಮೇಲೆ ಹೇಳಿದ ವರವನ್ನು ದೇವತೆಗಳಿಂದ ಹೊಂದಿದನು.
[ಶಿವನ ವರದಿಂದ ದೈತ್ಯರು ಅವಧ್ಯರಾಗಿದ್ದರು. ಅವರನ್ನು ದೇವತೆಗಳಿಂದ ಕೊಲ್ಲಲಾಗುತ್ತಿರಲಿಲ್ಲ. ಮುಚುಕುನ್ದ ನಾರಾಯಣನ ವರಬಲದಿಂದ ಕೊಲ್ಲಬಲ್ಲವನಾಗಿದ್ದ. ಹಾಗಾಗಿ ದೇವತೆಗಳು ಅವನನ್ನು ಬಳಸಿಕೊಂಡರು. ಆದರೆ ಯುದ್ಧಾನಂತರ ಬಹಳ ಬಳಲಿದ್ದ ಮುಚುಕುನ್ದ ದೇವತೆಗಳಲ್ಲಿ ವರವನ್ನು ಬೇಡಿದ:] 

ಸುದೀರ್ಘಸುಪ್ತಿಮಾತ್ಮನಃ ಪ್ರಸುಪ್ತಿಭಙ್ಗಕೃತ್ ಕ್ಷಯಮ್ ।
ಸ್ವದೃಷ್ಟಿಮಾತ್ರತಸ್ತತೋ ಹತಃ ಸ ಯಾವನಸ್ತದಾ ॥೧೭.೧೩೪॥

ತನಗೆ ಧೀರ್ಘವಾದ ನಿದ್ದೆಯನ್ನೂ ಹಾಗೂ ನಿದ್ರಿಸುತ್ತಿರುವಾಗ, ದೃಷ್ಟಿಮಾತ್ರದಿಂದಲೇ ನಿದ್ರೆಯನ್ನು ಭಂಗ ಮಾಡಿದವನ  ಸಾವನ್ನೂ ಆತ ವರವಾಗಿ ಕೇಳಿ ಪಡೆದಿದ್ದ. ಆ ಕಾರಣದಿಂದ,  ಕಾಲಯವನನು ಮುಚುಕುನ್ದನ ದೃಷ್ಟಿಮಾತ್ರದಿಂದ ಕೊಲ್ಲಲ್ಪಟ್ಟನು.

ಅತಶ್ಚ ಪುಣ್ಯಮಾಪ್ತವಾನ್ ಸುರಪ್ರಸಾದತೋsಕ್ಷಯಮ್ ।
ಸ ಯೌವನಾಶ್ವಜೋ ನೃಪೋ ನ ದೇವತೋಷಣಂ ವೃಥಾ ॥೧೭.೧೩೫॥

ಹೀಗೆ ಕಾಲಯವನನನ್ನು ಕೊಂದದ್ದರಿಂದ, ಕೃಷ್ಣನ ಕಾರ್ಯದಲ್ಲಿ ತೊಡಗಿದ ಪುಣ್ಯ ಮುಚುಕುನ್ದನಿಗೆ ಬಂತು. ಇದೆಲ್ಲವೂ ದೇವತೆಗಳ ಅನುಗ್ರಹದಿಂದಲೇ ನಡೆಯಿತು. ಹೀಗೆ ಮುಚುಕುನ್ದ ಎಂದೂ ಬರಿದಾಗದ ಪುಣ್ಯವನ್ನು ಹೊಂದಿದ. 
[ಇದರ ತಾತ್ಪರ್ಯ: ದೇವತೆಗಳನ್ನು ಸಂತೋಷಪಡಿಸುವುದು ಯಾವತ್ತೂ ವ್ಯರ್ಥವಾಗುವುದಿಲ್ಲ. ವರ್ತಮಾನದಲ್ಲಿ ನಮ್ಮ  ಕರ್ಮದಿಂದ ಬೇರೆ ತೋರಿದರೂ, ಒಟ್ಟಿನಲ್ಲಿ ಒಳ್ಳೆಯದಂತೂ ಆಗೇ ಆಗುತ್ತದೆ]

ತತೋ ಹರಿಂ ನಿರೀಕ್ಷ್ಯ ಸ ಸ್ತುತಿಂ ವಿಧಾಯ ಚೋತ್ತಮಾಮ್ ।
ಹರೇರನುಜ್ಞಯಾ ತಪಶ್ಚಚಾರ ಮುಕ್ತಿಮಾಪ ಚ ॥೧೭.೧೩೬॥

ಕಾಲಯವನ ಭಸ್ಮವಾದ ನಂತರ ಮುಚುಕುನ್ದ ಪರಮಾತ್ಮನನ್ನು ಕಂಡು, ಉತ್ಕೃಷ್ಟವಾದ ಸ್ತೋತ್ರವನ್ನು ಮಾಡಿದ.  ಪರಮಾತ್ಮನ ಅನುಜ್ಞೆಯಿಂದ ತಪಸ್ಸನ್ನು ಮಾಡಿ, ಮುಕ್ತಿಯನ್ನು ಹೊಂದಿದ ಕೂಡಾ.

ತತೋ ಗುಹಾಮುಖಾದ್ಧರಿರ್ವಿನಿಸ್ಸೃತೋ ಜರಾಸುತಮ್ ।
ಸಮಸ್ತಭೂಪಸಂವೃತಂ ಜಿಗಾಯ ಬಾಹುನೇಶ್ವರಃ ॥೧೭.೧೩೭॥

ತದನಂತರ ಗುಹೆಯಿಂದ ಹೊರಬಂದ ಕೃಷ್ಣನು, ಎಲ್ಲಾ ರಾಜರಿಂದ ಕೂಡಿಕೊಂಡ ಜರಾಸಂಧನನ್ನು ಕೇವಲ ತನ್ನ ಕೈಗಳಿಂದ ಹೊಡೆದೋಡಿಸಿದನು.  ಅವನು ಸರ್ವಸಮರ್ಥನಲ್ಲವೇ? ಇದರಲ್ಲೇನು ಅಚ್ಚರಿ?


ತಳೇನ ಮುಷ್ಟಿಭಿಸ್ತಥಾ ಮಹೀರುಹೈಶ್ಚ ಚೂರ್ಣ್ಣಿತಾಃ ।
ನಿಪೇತುರಸ್ಯ ಸೈನಿಕಾಃ ಸ್ವಯಂ ಚ ಮೂರ್ಚ್ಛಿತೋsಪತತ್ ॥೧೭.೧೩೮॥

ಕೈತಳದಿಂದ, ಮುಷ್ಠಿಯಿಂದ, ಮರಗಳಿಂದಲೂ ಕೂಡಾ ಹೊಡೆಯಲ್ಪಟ್ಟ ಜರಾಸಂಧನ ಸೈನಿಕರು ಚೂರ್ಣೀಕೃತರಾಗಿ  ಬಿದ್ದರು. ಜರಾಸಂಧನೂ ಕೂಡಾ ಮೂರ್ಛಿತನಾಗಿ ಬಿದ್ದ.

ಸಸಾಲ್ವಪೌಣ್ಡ್ರಚೇದಿಪಾನ್ ನಿಪಾತ್ಯ ಸರ್ವಭೂಭುಜಃ ।
ಸ ಪುಪ್ಲುವೇ ಜನಾರ್ದ್ದನಃ ಕ್ಷಣೇನ ತಾಂ ಕುಶಸ್ಥಲೀಮ್ ॥೧೭.೧೩೯॥

ಸಾಲ್ವ, ಪೌಣ್ಡ್ರ, ಶಿಶುಪಾಲ, ಇವರೆಲ್ಲರನ್ನೊಳಗೊಂಡ ಸಮಸ್ತ ರಾಜರನ್ನೂ ಕೂಡಾ ಬೀಳಿಸಿದ ಶ್ರೀಕೃಷ್ಣ,  ಕ್ಷಣಮಾತ್ರದಲ್ಲಿ ತನ್ನ ನಗರವಾದ ದ್ವಾರಕೆಯನ್ನು ಕುರಿತು ಹಾರಿದ.

No comments:

Post a Comment