ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 18, 2022

Mahabharata Tatparya Nirnaya Kannada 22: 47-53

 

ಶ್ರುತ್ವಾ ವಚಃ ಸ ಪವನಸ್ಯ ಶರಂ ತ್ವಮೋಘಂ ಸಞ್ಜಹ್ರ ಆಶು ಸ ಚ ಸಾಲ್ವಪತಿಃ ಸ್ವಸೌಭಮ್ ।

ಆರುಹ್ಯ ಬಾಲಕಲಹೇನ ಕಿಮತ್ರ ಕಾರ್ಯ್ಯಂ ಕೃಷ್ಣೇನ ಸಙ್ಗರ ಇತಿ ಪ್ರಯಯೌ ಸ್ವದೇಶಮ್ ॥೨೨.೪೭॥

 

ಪ್ರದ್ಯುಮ್ನನು ಮುಖ್ಯಪ್ರಾಣನ ಮಾತನ್ನು ಕೇಳಿ ವ್ಯರ್ಥವಾಗದ ಆ ಬಾಣವನ್ನು ಪ್ರಯೋಗಿಸದೇ ಹಿಂದೆ ಸೆಳೆದು ಬತ್ತಳಿಕೆಯಲ್ಲಿಟ್ಟುಕೊಂಡನು. ಆ ಸಾಲ್ವಪತಿಯಾದರೋ, ಸೌಬವೆಂಬ ವಿಮಾನವನ್ನೇರಿ ‘ಬಾಲಕನ ಜೊತೆಗೆ ಯುದ್ಧಮಾಡುವುದರಿಂದ ಏನು ಪ್ರಯೋಜನ, ಯುದ್ಧ ಮಾಡುವುದಾದರೆ ಕೃಷ್ಣನೊಂದಿಗೇ ಯುದ್ಧ ಮಾಡುತ್ತೇನೆ’ ಎಂದುಕೊಂಡು ತನ್ನ ದೇಶಕ್ಕೆ ತೆರಳಿದನು.

 

  ಪ್ರದ್ಯುಮ್ನಸಾಮ್ಬಗದಸಾರಣಚಾರುದೇಷ್ಣಾಃ ಸೇನಾಂ ನಿಹತ್ಯ ಸಹ ಮನ್ತ್ರಿಗಣೈಸ್ತದೀಯಾಮ್ ।

  ಆಹ್ಲಾದಿನಃ ಸ್ವಪುರಮಾಯಯುರಪ್ಯಹಂ ಚ ತತ್ರಾಗಮಂ ಸಪದಿ ತೈಃ ಶ್ರುತವಾನಶೇಷಮ್ ॥೨೨.೪೮॥

 

ಪ್ರದ್ಯುಮ್ನ, ಸಾಮ್ಬ, ಗದ, ಸಾರಣ, ಚಾರುದೇಷ್ಣ, ಇವರೆಲ್ಲರೂ ಮಂತ್ರಿ ಮೊದಲಾದವರ ಸಮೂಹದಿಂದ ಕೂಡಿದ ಸಾಲ್ವನ ಸೇನೆಯನ್ನು ನಾಶಮಾಡಿ, ಸಂತೋಷಪಡುತ್ತಾ ಪಟ್ಟಣಕ್ಕೆ ಮರಳಿದರು. ನಾನೂ ಕೂಡಾ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದೆ. ಕೂಡಲೇ ಅವರಿಂದ ನಡೆದ ಎಲ್ಲಾ ಘಟನೆಗಳನ್ನೂ ಕೇಳಿದೆ.

 

 ಯಸ್ಮಿಞ್ಛರೇ ಕರಗತೇ ವಿಜಯೋ ದ್ಧ್ರುವಃ ಸ್ಯಾನ್ಮತ್ತೇಜಸಾ ತದನುಸಙ್ಗ್ರಹಣಾತ್ ಸುತಾನ್ಮೇ ।

 ಯಾತಂ ನಿಶಮ್ಯ ರಿಪುಮಾತ್ಮಪುರೀಂ ಚ ಭಗ್ನಾಂ ದೃಷ್ಟ್ವೈವ ತೇನ ತದನುಬ್ರಜನಂ ಕೃತಂ ಮೇ ॥೨೨.೪೯॥

 

ಯಾವ ಬಾಣವು ಕೈಯಲ್ಲಿ ಇರಲು ಗೆಲುವು ಖಚಿತವೋ ಅಂತಹ ಬಾಣವನ್ನು ನನ್ನ ತೇಜಸ್ಸಿನಿಂದ  ತನ್ನಲ್ಲಿ ಇಟ್ಟುಕೊಂಡ ನನ್ನ ಮಗನಿಂದ ಸಾಲ್ವ ಹೊರಟುಹೋದ ಎಂದು ಕೇಳಿ, ಹಾಳಾಗಿರುವ  ದ್ವಾರಕಾ ಪಟ್ಟಣವನ್ನು ಸರಿಪಡಿಸುವಂತೆ ಆಜ್ಞೆಮಾಡಿ, ನಾನು ಸಾಲ್ವನನ್ನು ಹಿಂಬಾಲಿಸಿ ಹೋದೆ.

 

ತಂ ಸಾಗರೋಪರಿಗಸೌಭಗತಂ ನಿಶಾಮ್ಯ ಮುಕ್ತೇ ಚ ತೇನ ಮಯಿ ಶಸ್ತ್ರಮಹಾಸ್ತ್ರವರ್ಷೇ ।

ತಂ ಸನ್ನಿವಾರ್ಯ್ಯ ತು ಮಯಾ ಶರಪೂಗವಿದ್ಧೋ ಮಾಯಾ ಯುಯೋಜ ಮಯಿ ಪಾಪತಮಃ ಸ ಸಾಲ್ವಃ ॥೨೨.೫೦॥

 

ಸಾಗರದ ಮೇಲ್ಗಡೆ ನೆಲೆಗೊಂಡ ಸೌಭವೆಂಬ ವಿಮಾನದಲ್ಲಿ ಇರುವ ಸಾಲ್ವನನ್ನು ಕಂಡು, ಅವನಿಂದ ನನ್ನಲ್ಲಿ ಶಸ್ತ್ರಗಳೂ, ಮಹತ್ತಾದ ಅಸ್ತ್ರಗಳ ಮಳೆಗರೆಯಲು, ಅದನ್ನು ತಡೆದು ನನ್ನಿಂದ  ಬಾಣಗಳ ಸಮೂಹದಿಂದ ಹೊಡೆಯಲ್ಪಟ್ಟ ಪಾಪಿಷ್ಟನಾದ ಆ ಸಾಲ್ವನು, ವಿಧವಿಧವಾದ ಕುಟಿಲ ಪ್ರಯೋಗಗಳನ್ನು(ಐನ್ದ್ರಜಾಲಿಕ ಮಾಯೆಗಳನ್ನು) ಮಾಡಲು ಆರಂಭಿಸಿದ.

 

ತಾಃ ಕ್ರೀಡಯಾ ಕ್ಷಣಮಹಂ ಸಮರೇ ನಿಶಾಮ್ಯ ಜ್ಞಾನಾಸ್ತ್ರತಃ ಪ್ರತಿವಿಧೂಯ ಬಹೂಂಶ್ಚ ದೈತ್ಯಾನ್ ।

ಹತ್ವಾSSಶು ತಂ ಚ ಗಿರಿವರ್ಷಿಣಮಾಶು ಸೌಭಂ ವಾರ್ದ್ಧೌ ನ್ಯಪಾತಯಮರೀನ್ದ್ರವಿಭಿನ್ನಬನ್ಧಮ್ ॥೨೨.೫೧॥

 

ಆ ಎಲ್ಲಾ ಮಾಯೆಗಳನ್ನು ಅನಾಯಾಸವಾಗಿ ಕ್ಷಣಮಾತ್ರದಲ್ಲಿ, ಕ್ರೀಡಾಮಾತ್ರವಾಗಿ, ಜ್ಞಾನಾಸ್ತ್ರದಿಂದ ನಾಶಮಾಡಿ, ಬಹಳ ಜನ ದೈತ್ಯರನ್ನು ಕೊಂದು, ನನ್ನ ಮೇಲೆ ಗಿರಿಶ್ರೇಷ್ಠಗಳನ್ನು ವರ್ಷಿಸತಕ್ಕ ಆ ಸಾಲ್ವನನ್ನು ಸಮುದ್ರದಲ್ಲಿ ಬೀಳಿಸಿದೆನು. ಚಕ್ರದಲ್ಲೇ ಶ್ರೇಷ್ಠವಾಗಿರುವ ಸುದರ್ಶನದ ಪ್ರಯೋಗದಿಂದ ಒಡಕುಂಟಾಡ ವಿಮಾನ ಕೆಳಗೆ ಬಿದ್ದಿತು.  

 

ತಂ ಸ್ಯನ್ದನಸ್ಥಿತಮಥೋ ವಿಭುಜಂ ವಿಧಾಯ ಬಾಣೇನ ತದ್ರಥವರಂ ಗದಯಾ ವಿಭಿದ್ಯ ।

ಚಕ್ರೇಣ ತಸ್ಯ ಚ ಶಿರೋ ವಿನಿಕೃತ್ಯ ಧಾತೃಶರ್ವಾದಿಭಿಃ ಪ್ರತಿನುತಃ ಸ್ವಪುರೀಮಗಾಂ ಚ ॥೨೨.೫೨॥

 

ವಿಮಾನ ನಾಶವಾದ ನಂತರ ರಥದಲ್ಲಿ ಕುಳಿತ ಸಾಲ್ವನ ತೊಳ್ಗಳನ್ನು ಬಾಣದಿಂದ ಕತ್ತರಿಸಿ, ಅವನ ಶ್ರೇಷ್ಠವಾದ ರಥವನ್ನು ಗದೆಯಿಂದ  ಪುಡಿಪುಡಿಮಾಡಿ, ಚಕ್ರದಿಂದ ಸಾಲ್ವನ ತಲೆಯನ್ನು ಕತ್ತರಿಸಿ, ಬ್ರಹ್ಮ ರುದ್ರ ಮೊದಲಾದವರಿಂದ ಸ್ತುತಿಸಲ್ಪಟ್ಟವನಾಗಿ ನನ್ನ ಪಟ್ಟಣವಾದ ದ್ವಾರಕೆಗೆ ತೆರಳಿದೆ.

 

   ತಸ್ಮಾದಿದಂ ವ್ಯಸನಮಾಸ ಹಿ ವಿಪ್ರಕರ್ಷಾನ್ಮೇ ಕಾರ್ಯ್ಯತಸ್ತ್ವಿತಿ ನಿಗದ್ಯ ಪುನಶ್ಚ ಪಾರ್ತ್ಥಾನ್ ।

   ಕೃಷ್ಣಾಂ ಚ ಸಾನ್ತ್ವಯಿತುಮತ್ರ ದಿನಾನ್ಯುವಾಸ ಸತ್ಯಾ ಚ ಸೋಮಕಸುತಾಮನುಸಾನ್ತ್ವಯನ್ತೀ ॥೨೨.೫೩॥

 

ಹೀಗೆ ಸಾಲ್ವಕಾರ್ಯಕ್ಕಾಗಿ ನಾನು ನಿಮ್ಮಿಂದ ದೂರವಿದ್ದುದರಿಂದ ನಿಮಗೆ ಕಷ್ಟವಾಯಿತು’. ಈರೀತಿಯಾಗಿ  ಹೇಳಿದ ಶ್ರೀಕೃಷ್ಣ ದ್ರೌಪದಿಯನ್ನು ಸಮಾಧಾನ ಮಾಡಲು ಕೆಲವು ದಿನಗಳ ಪರ್ಯಂತ ಅಲ್ಲೇ ವಾಸಮಾಡಿದ. ಸತ್ಯಭಾಮೆಯೂ ಕೂಡಾ ದ್ರೌಪದಿಯನ್ನು ಸಾಂತ್ವನಗೊಳಿಸಲು ಅಲ್ಲೇ ಆವಾಸಮಾಡಿದಳು.

No comments:

Post a Comment