ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 26, 2019

Mahabharata Tatparya Nirnaya Kannada 1326_1329


ವೃನ್ದಾವನಯಿಯಾಸುಃ ಸ  ನನ್ದಸೂನುರ್ಬೃಹದ್ವನೇ ।
ಸಸರ್ಜ್ಜ ರೋಮಕೂಪೇಭ್ಯೋ ವೃಕಾನ್ ವ್ಯಾಘ್ರಸಮಾನ್ ಬಲೇ ॥೧೩.೨೬॥  

ನಂದಗೋಪನ ಮಗನಾಗಿರುವ ಶ್ರೀಕೃಷ್ಣನು, ಪ್ರಸ್ತುತ ತಾವಿರುವ ಸ್ಥಳವನ್ನು ಬಿಟ್ಟು ವೃಂದಾವನಕ್ಕೆ ತೆರಳಬೇಕೆಂಬ ಇಚ್ಛೆಯುಳ್ಳವನಾಗಿ, ಆ ಬೃಹದ್ವನದಲ್ಲಿ ತನ್ನ ರೋಮಕೂಪದಿಂದ, ಬಲದಲ್ಲಿ ಹುಲಿಗೆ ಸಮಾನವಾದ ಅನೇಕ ತೋಳಗಳನ್ನು ಸೃಷ್ಟಿಮಾಡಿದನು.
[ಈಕುರಿತು ಹರಿವಂಶದಲ್ಲಿ ವಿವರಣೆ ಕಾಣಸಿಗುತ್ತದೆ: ಶ್ರೂಯತೇ ಹಿ ವನಂ ರಮ್ಯಂ ಪರ್ಯಾಪ್ತತೃಣಸಂಸ್ತರಮ್  ನಾಮ್ನಾ ವೃನ್ದಾವನಂ ನಾಮ  ಸ್ವಾದುವೃಕ್ಷಫಲೋದಕಮ್ (ವಿರಾಟಪರ್ವ ೮.೨೨) ವೃಂದಾವನ ಎನ್ನುವುದು ಒಂದು ಕಾಡು ಪ್ರದೇಶ. ಅಲ್ಲಿ ನೀರೂ ಸೇರಿದಂತೆ ಎಲ್ಲವೂ ಸಮಗ್ರವಾಗಿದೆ.  ತತ್ರ ಗೋವರ್ಧನಂ ಚೈವ ಭಾನ್ಡೀರಂ ಚ ವನಸ್ಪತಿಮ್ ಕಾಳಿನ್ದೀಂ ಚ ನದೀಂ ರಮ್ಯಾಂ ದ್ರಕ್ಷ್ಯಾವಶ್ಚರತಃ ಸುಖಂ (೨೮).... ಅಲ್ಲಿ ಗೋವರ್ಧನ ಎನ್ನುವ ಪರ್ವತ,  ಭಾನ್ಡೀರ ಎನ್ನುವ ದೊಡ್ಡ ವಟವೃಕ್ಷ, ಕಾಳಿಂದಿ ನದಿ, ಮಡು ಎಲ್ಲವೂ ಇದೆ. ಅದಕ್ಕಾಗಿ ಈಗ ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿ, ... ಸಂತ್ರಾಸಯಾವೋ ಭದ್ರಂ ತೇ ಕಿಞ್ಚಿದುತ್ಪಾದ್ಯ  ಕಾರಣಮ್ ಏವಂ ಕಥಯತಸ್ತಸ್ಯ ವಾಸುದೇವಸ್ಯ ಧೀಮತಃ ಪ್ರಾದುರ್ಬಭೂವುಃ ಶತಶೋ ರಕ್ತಮಾಂಸವಸಾಶನಾಃ ಘೋರಾಶ್ಚಿನ್ತಯತಸ್ತಸ್ಯ ಸ್ವತನೂರುಹಜಾಸ್ತದಾ ವಿನಿಷ್ಪೇತುರ್ಭಯಕರಾಃ  ಸರ್ವಶಃ ಶತಶೋ ವೃಕಾಃ [೨೯-೩೧]. ಪ್ರಸ್ತುತ ತಾವಿರುವ ಪ್ರದೇಶವನ್ನು ಬಿಡುವುದಕ್ಕಾಗಿ, ಯಾವುದೋ ಒಂದು ಕಾರಣದಿಂದ ಎಲ್ಲರನ್ನೂ ಹೆದರಿಸಬೇಕು ಎಂದು ತನ್ನ ಕೂದಲಿನಿಂದ ನೂರಾರು ತೋಳಗಳನ್ನು ಸೃಷ್ಟಿಸಿದನು]      

ಅನೇಕಕೋಟಿಸಙ್ಘೈಸ್ತೈಃ ಪೀಡ್ಯಮಾನಾ ವ್ರಜಾಲಯಾಃ ।
ಯಯುರ್ವೃನ್ದಾವನಂ ನಿತ್ಯಾನನ್ದಮಾದಾಯ ನನ್ದಜಮ್ ॥೧೩.೨೭॥

ಅನೇಕ ಕೋಟಿ ಸಂಘವಾಗಿರುವ ಆ ತೋಳಗಳಿಂದ ಪೀಡೆಗೊಳಗಾದ ಗೋಪರು, ನಿತ್ಯಾನಂದಮೂರ್ತಿಯಾದ, ನಂದಪುತ್ರ   ಶ್ರೀಕೃಷ್ಣನನ್ನು ಕರೆದುಕೊಂಡು ವೃಂದಾವನಕ್ಕೆ ತೆರಳಿದರು.

ಇನ್ದಿರಾಪತಿರಾನನ್ದಪೂರ್ಣ್ಣೋ ವೃನ್ದಾವನೇ ಪ್ರಭುಃ ।
ನನ್ದಯಾಮಾಸ ನನ್ದಾದೀನುದ್ದಾಮತರಚೇಷ್ಟಿತೈಃ ॥೧೩.೨೮॥

ಆನಂದಪೂರ್ಣನೂ,  ಸರ್ವಸಮರ್ಥನೂ ಆಗಿರುವ ಇಂದಿರಾಪತಿ ಶ್ರೀಕೃಷ್ಣನು,  ನಂದ ಮೊದಲಾದವರನ್ನು ತನ್ನ ಉತ್ಕೃಷ್ಟವಾದ ಕ್ರಿಯೆಗಳಿಂದ ಸಂತಸಗೊಳಿಸಿದನು.

ಸ ಚನ್ದ್ರತೋ ಹಸತ್ಕಾನ್ತವದನೇನೇನ್ದುವರ್ಚ್ಚಸಾ ।
ಸಂಯುತೋ ರೌಹಿಣೇಯೇನ ವತ್ಸಪಾಲೋ ಬಭೂವ ಹ ॥೧೩.೨೯॥

ಚಂದ್ರನಿಗಿಂತಲೂ ಮಿಗಿಲಾಗಿ ಮುಗುಳುನಗುವ ಮನೋಹರವಾಗಿರುವ ಮುಖವುಳ್ಳ ಶ್ರೀಕೃಷ್ಣನು, ಚಂದ್ರನ ಕಾಂತಿಯಂತೆ ಕಾಂತಿಯುಳ್ಳ ಬಲರಾಮನಿಂದ ಕೂಡಿಕೊಂಡು ಕರುಮೇಯಿಸತಕ್ಕವನಾದನು. 

No comments:

Post a Comment