ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 20, 2023

Mahabharata Tatparya Nirnaya Kannada 32-86-97

 ತೇಷು ಸ್ವಲೋಕಾನ್ ಪ್ರಾಪ್ತೇಷು ಧರ್ಮ್ಮಜಶ್ಚಾSತ್ಮನಾ ಸಹ ।

ಯಯೌ ಪುರೋ ದೇವರಥಸ್ತದಾSಸ್ಯಾವತತಾರ ಹ ॥ ೩೨.೮೬ ॥

 

ಹೀಗೆ ಅವರೆಲ್ಲರೂ ತಮ್ಮ ಲೋಕವನ್ನು ಹೊಂದಲು, ಯುಧಿಷ್ಠಿರ ತನ್ನಿಂದಲೇ ಕೂಡಿಕೊಂಡು(ನಾಯಿ ರೂಪದಲ್ಲಿ ಬಂದಿರುವ ಧರ್ಮಜನೊಂದಿಗೆ), ಮುಂದೆ ತೆರಳಿದ. ಆಗ ಅವನ ಮುಂದೆ ದೇವತೆಗಳ ರಥ ಕೆಳಗಿಳಿಯಿತು.

ರಥಾಮಾರುಹೇತಿ ಕಥಿತೋ ರಥಿನಾ ಪುರತಃ ಶುನಃ ।

ಆರೋಹಮಬ್ರವೀನ್ನೈ ತದ್ ಯುಕ್ತಮಿತ್ಯಾಹ ಸೋSಪಿ ತು ॥ ೩೨.೮೭ ॥

 

ಸಾರಥಿಯಿಂದ ‘ರಥವನ್ನೇರು’ ಎಂದು ಹೇಳಲ್ಪಟ್ಟವನಾಗಿ ಯುಧಿಷ್ಠಿರನು ನಾಯಿಯ ಇರುವಿಕೆಯನ್ನು ಕುರಿತು ಸಾರಥಿಗೆ ಹೇಳಿದ. ಅವನಾದರೋ, ನಾಯಿಯನ್ನು ರಥಕ್ಕೆ ಏರಿಸಿಕೊಳ್ಳುವುದು ತರವಲ್ಲ ಎಂದ. [‘ಸ್ವರ್ಗೇ ಲೋಕೇ ಶ್ವವತಾಂ ನಾಸ್ತಿ ಧೀಷ್ಣ್ಯಮ್(ಮಹಾಪ್ರಸ್ಥಾನಿಕಪರ್ವ ೩.೧೦) ನಾಯಿಯೊಂದಿಗೆ ಸ್ವರ್ಗ ಪ್ರವೇಶವಿಲ್ಲ ಎಂದ.]

 

ನಾSರುಹೇಯಂ ವಿನಾ ಶ್ವಾನಮಿತಿ ತೇನ ಸ್ಥಿರೋದಿತೇ ।

ಸ್ವರೂಪಂ ದರ್ಶಯಾಮಾಸ ಧರ್ಮ್ಮೋ ಹ್ಯಾಪ್ತಃ ಶ್ವರೂಪತಾಮ್ ॥ ೩೨.೮೮ ॥

 

‘ನಾಯಿ ಇಲ್ಲದೇ ನಾನು ರಥವನ್ನೇರಲಾರೆ’ ಎಂದು ಯುಧಿಷ್ಠಿರನಿಂದ ಗಟ್ಟಿಯಾಗಿ ಹೇಳಲ್ಪಡಲು, ನಾಯಿ ರೂಪದಲ್ಲಿದ್ದ ಧರ್ಮರಾಜನು ತನ್ನ ಸ್ವರೂಪವನ್ನು ತೋರಿದ. ಯಮಧರ್ಮನೇ ನಾಯಿಯ ರೂಪವನ್ನು ಹೊಂದಿದ್ದನಷ್ಟೇ.

 

ಆನೃಶಂಸ್ಯಪರತ್ವೇನ ಕೀರ್ತ್ತಿರ್ಮೇವಾSತ್ಮನೋ ವೃಷಃ ।

ಖ್ಯಾಪಯಾಮಾಸ ಕೌನ್ತೇಯರೂಪಿಣೋ ಧರ್ಮ್ಮಸೂಕ್ತಿಭಿಃ ॥ ೩೨.೮೯ ॥

 

ಕುಂತಿಯ ಮಗನ ರೂಪದಲ್ಲಿರುವ, ತಾನೇ ಆಗಿರುವ ಯಮಧರ್ಮನು ‘ತಾನು ಕೃಪೆಯುಳ್ಳವನು’ ಎನ್ನುವ ಕೀರ್ತಿಯನ್ನು ಧರ್ಮಭೂವಿಷ್ಠವಾದ ಮಾತುಗಳಿಂದ ಈರೀತಿಯಾಗಿ ಜನರೆದುರು ತೋರಿಸಿಕೊಂಡನು.

 

ತತಃ ಸ ರಥಮಾರುಹ್ಯ ಲೋಕಾನಾಮುತ್ತರೋತ್ತರಮ್ ।

ಅತಿಕ್ರಮ್ಯಾಖಿಲಾನ್ ರಾಜ್ಞೋ ಜಗಾಮ ಶ್ರೀಪತಿಪ್ರಿಯಃ ॥ ೩೨.೯೦ ॥

 

ಸರ್ವೇಷಾಮುತ್ತರಂ ಲೋಕಮೈನ್ದ್ರಂ ಪ್ರಾಪ್ಯೇದಮೇವ ತೇ ।

ಸ್ಥಾನಮಿತ್ಯುದಿತೋ ದೇವೈರ್ದ್ದುರ್ಯ್ಯೋಧನಮವೈಕ್ಷತ ॥ ೩೨.೯೧ ॥

 

ತದನಂತರ ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ಪ್ರಿಯನಾದ ಆ ಯುಧಿಷ್ಠಿರನು ರಥವನ್ನೇರಿ, ಮೇಲಿರುವ ಎಲ್ಲಾ ಲೋಕಗಳನ್ನು, ರಾಜರನ್ನೂ ಮೀರಿ ತೆರಳಿದನು. ಹೀಗೆ ಎಲ್ಲಾ ಲೋಕಗಳಿಗೆ ಆಚೆಯ ಲೋಕವಾಗಿರುವ ಇಂದ್ರಲೋಕವನ್ನು ಹೊಂದಿ, ‘ಇದೇ ನಿನ್ನ ಸ್ಥಾನವಾಗಿದೆ’ ಎಂದು ದೇವತೆಗಳಿಂದ ಹೇಳಲ್ಪಟ್ಟವನಾಗಿ, ಅಲ್ಲಿಯೇ ಕುಳಿತಿರುವ ದುರ್ಯೋಧನನನ್ನು ಕಂಡನು.

  

ಸಭ್ರಾತೃಕಂ ಜ್ವಲನ್ತಂ ಚ ಸರ್ವೇಷಾಮುಪರಿ ಸ್ಥಿತಮ್ ।

ತಂ ದೃಷ್ಟ್ವಾ ಪರಮಕ್ರುದ್ಧೋ ನಿಮೀಲ್ಯ ನಯನೇ ಶುಭೇ  ॥ ೩೨.೯೨ ॥

 

ಭ್ರಾತರೋ ಮೇ ಕ್ವ ಕೃಷ್ಣಾ ಚ ಸಕರ್ಣಾಃ ಕ್ವ ಚ ಬಾನ್ಧವಾಃ ।

ಧೃಷ್ಟಧ್ಯುಮ್ನಾದಯಃ ಪುತ್ರಾ ಹೈಡಿಮ್ಬಾದ್ಯಾಶ್ಚ ಸರ್ವಶಃ ॥ ೩೨.೯೩ ॥

 

ಯಾದವಾಶ್ಚೇತಿ ಪಪ್ರಚ್ಛ ದೇವಾಂಸ್ತೇ ಚ ತಮಬ್ರುವನ್ ।

ಕಿಂ ತೇ ತೈಃ ಸ್ವಕೃತಂ ಕರ್ಮ್ಮ ಭುಜ್ಯತೇSತ್ರ ನಚಾಪರೈಃ ॥ ೩೨.೯೪ ॥

 

ಅಲ್ಲಿ ತನ್ನ ಅಣ್ಣತಮ್ಮನ್ದಿರಿಂದ ಕೂಡಿಕೊಂಡು ಶೋಭಿಸುತ್ತಿರುವ, ಎಲ್ಲರಿಗಿಂತಲೂ ಮೇಲ್ಗಡೆ ಕುಳಿತಿರುವ ದುರ್ಯೋಧನನನ್ನು ಕಂಡು ಮುನಿದ ಧರ್ಮರಾಜನು, ಮಂಗಳವಾದ ತನ್ನ ಕಣ್ಣನ್ನು ಮುಚ್ಚಿ, ಕರ್ಣನಿಂದ ಸಹಿತರಾದ ನನ್ನ ಅಣ್ಣತಮ್ಮಂದಿರು, ದ್ರೌಪದಿ, ಧೃಷ್ಟದ್ಯುಮ್ನ ಮೊದಲಾದ ಬಾಂಧವರು, ಘಟೋತ್ಕಚ ಮೊದಲಾದ ಪುತ್ರರು, ಯಾದವರು, ಎಲ್ಲಿದ್ದಾರೆ ಎಂದು ಕೇಳಿದನು. ಆಗ ಆ ದೇವತೆಗಳು ಅವನನ್ನು ಕುರಿತು ‘ಅವರಿಂದ ನಿನಗೇನಾಗಬೇಕು? ಈ ಲೋಕದಲ್ಲಿ ತಾವು ಮಾಡಿದ ಕರ್ಮ ತಮ್ಮಿಂದಲೇ ಅನುಭವಿಸಲ್ಪಡುತ್ತದೆ. ಅದನ್ನು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ’ ಎಂದರು.

 

ಇತ್ಯುಕ್ತ ಆಹ ಪಾಪೋSಯಂ ಪೃಥಿವೀಕ್ಷಯಕಾರಕಃ ।

ಸರ್ವಾತಿಶಙ್ಕೀ ಮಿತ್ರಧ್ರುಙ್ ನಾರಾಯಣಪರಾಙ್ಮುಖಃ ॥ ೩೨.೯೫ ॥

 

ನಾಸ್ತಿಕೋSತಿಶಠಃ ಕ್ರೂರೋ ದ್ವೇಷ್ಟಾ ವಿಷ್ಣೋಶ್ಚ ತದ್ಭುವಾಮ್ ।

ಕಥಂ ಕಥಂ ಚ ಸರ್ವಧರ್ಮ್ಮಜ್ಞಾ ನಾರಾಯಣಪರಾಯಣಾಃ ॥ ೩೨.೯೬ ॥

 

ಸಂಸ್ಥಿತಾಃ ಪರಮೇ ಧರ್ಮ್ಮೇ ದೃಶ್ಯನ್ತೇSತ್ರ ನ ಮತ್ಪ್ರಿಯಾಃ 

ದುರ್ಯ್ಯೋಧನಃ ಸ್ಥಾನಂ ಸರ್ವೋತ್ತಮಮವಾಪ್ತವಾನ್ ॥ ೩೨.೯೭ ॥

 

ಈರೀತಿಯಾಗಿ ಹೇಳಲ್ಪಟ್ಟ ಆ ಯುಧಿಷ್ಠಿರನು ಸಿಟ್ಟಿನಿಂದ ಹೇಳುತ್ತಾನೆ: ‘ಭೂಮಿಯನ್ನು ನಾಶಮಾಡಿದ, ಎಲ್ಲರಲ್ಲಿಯೂ ಸಂಶಯಪಡುವ, ಮಿತ್ರದ್ರೋಹಿಯಾದ, ನಾರಾಯಣನಿಗೆ ವಿಮುಖನಾದ, ನಾಸ್ತಿಕನಾಗಿರುವ, ಅತ್ಯಂತ ದೂರ್ತನಾಗಿರುವ, ನಾರಾಯಣನ ಭಕ್ತರ ದ್ವೇಷಿಯಾಗಿರುವ ದುರ್ಯೋಧನನು ಉತ್ಕೃಷ್ಟವಾದ ಸ್ಥಾನವನ್ನು ಹೇಗೆ ಹೊಂದಿದ? ಎಲ್ಲಾ ಧರ್ಮವನ್ನೂ ತಿಳಿದಿರುವ, ನಾರಾಯಣನ ಭಕ್ತರಾಗಿರುವ, ಉತ್ಕೃಷ್ಟವಾದ ಧರ್ಮದಲ್ಲಿ ನೆಲೆಗೊಂಡ, ನನಗೆ ಪ್ರಿಯರಾಗಿರುವ, ನನ್ನ ಭ್ರಾತ್ರಾದಿಗಳು ಇಲ್ಲಿ ಏಕೆ ಕಾಣುತ್ತಿಲ್ಲ’ ಎಂದು ಕೇಳಿದನು.

No comments:

Post a Comment