ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, March 25, 2019

Mahabharata Tatparya Nirnaya Kannada 12.37-12.41


ಸ ದೇವಕಾರ್ಯ್ಯಸಿದ್ಧಯೇ ರರಕ್ಷ ಗರ್ಭಮೀಶ್ವರಃ
ಪರಾಶರಾತ್ಮಜಃ ಪ್ರಭುರ್ವಿಚಿತ್ರವೀರ್ಯ್ಯಜೋದ್ಭವಮ್ ॥೧೨.೩೭॥

ಸರ್ವನಿಯಾಮಕನಾದ ವೇದವ್ಯಾಸರೂಪಿ ಭಗವಂತ ದೇವತಾ ಕಾರ್ಯಸಿದ್ಧಿಗಾಗಿ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನಿಂದ ಉಂಟಾದ ಗರ್ಭವನ್ನು ರಕ್ಷಿಸಿದ.

ಕಲಿಃ ಸುಯೋಧನೋsಜನಿ ಪ್ರಭೂತಬಾಹುವೀರ್ಯ್ಯಯುಕ್
ಪ್ರಧಾನವಾಯುಸನ್ನಿಧೇರ್ಬಲಾಧಿಕತ್ವಮಸ್ಯ ತತ್ ॥೧೨.೩೮॥

ಬಹಳ ಬಾಹುವೀರ್ಯದಿಂದ ಕೂಡಿಕೊಂಡು ಕಲಿಯೇ ಸುಯೋಧನನಾಗಿ ಹುಟ್ಟಿದ. ಮುಖ್ಯಪ್ರಾಣನ ಸಾನಿಧ್ಯದೊಂದಿಗೆ ಹುಟ್ಟಿದ ಕಾರಣದಿಂದ  ಅವನಲ್ಲಿ ಬಲಾಧಿಕತ್ಯವಿತ್ತು.

[ಕಲಿಯೇ ಸುಯೋಧನನಾಗಿ ಹುಟ್ಟಿರುವ ಕುರಿತು ಸ್ಪಷ್ಟವಾದ  ವಿವರ ಮಹಾಭಾರತದಲ್ಲೇ ಕಾಣಸಿಗುತ್ತದೆ:  ಆದಿಪರ್ವದಲ್ಲಿ(೬೮.೮೭) ‘ಕಲೇರಂಶಸ್ತು ಸಞ್ಜಜ್ಞೇ ಭುವಿ ದುರ್ಯೋಧನೋ ನೃಪಃ’ ಎಂದರೆ, ಸ್ತ್ರೀಪರ್ವದಲ್ಲಿ(೮.೩೦) ‘ಕಲೇರಂಶಃ ಸಮುತ್ಪನ್ನೋ ಗಾಂಧಾರ್ಯಾ ಜಠರೇ ನೃಪ’  ಎಂದಿದ್ದಾರೆ.  ಆಶ್ರಮವಾಸಿಕ ಪರ್ವದಲ್ಲಿ(೩೩.೧೦) ಹೇಳುವಂತೆ: ‘ಕಲಿಂ ದುರ್ಯೋಧನಂ ವಿದ್ಧಿ ಶಕುನಿಂ ದ್ವಾಪರಂ ನೃಪಂ ದುಃಶಾಸನಾದೀನ್ ವಿದ್ಧಿ ತ್ವಂ ರಾಕ್ಷಸಾನ್  ಶುಭದರ್ಶನೇ’. ಹರಿವಂಶಪರ್ವದಲ್ಲಿ(೫೩.೬೩) ಹೇಳುವಂತೆ: ‘ವಿಗ್ರಹಸ್ಯ ಕಲಿರ್ಮೂಲಂ ಗಾಂಧಾರ್ಯಾಂ ವಿನಿಯುಜ್ಯತಾಂ’. ಹೀಗೆ ಅನೇಕ ಕಡೆ ಕಲಿಯೇ ಸುಯೋಧನನಾಗಿ ಹುಟ್ಟಿದ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ].

ಪುರಾ ಹಿ ಮೇರುಮೂರ್ದ್ಧನಿ ತ್ರಿವಿಷ್ಟಪೌಕಸಾಂ ವಚಃ ।
ವಸುನ್ಧರಾತಳೋದ್ಭವೋನ್ಮುಖಂ ಶ್ರುತಂ ದಿತೇಃಸುತೈಃ ॥೧೨.೩೯

(ರಾಕ್ಷಸರು ಈ ರೀತಿ ಹುಟ್ಟಲು ಕಾರಣವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ:) ಈಹಿಂದೆ ಮೇರು ಪರ್ವತದಲ್ಲಿ ಸೇರಿದ  ದೇವತೆಗಳು  ‘ತಾವೆಲ್ಲರೂ ಭೂಮಿಯಲ್ಲಿ ಅವತಾರ ಮಾಡಬೇಕು’ ಎಂದು ಕೈಗೊಂಡ ತೀರ್ಮಾನದ ಮಾತು ದೈತ್ಯರಿಂದ ಕೇಳಿಸಿಕೊಳ್ಳಲ್ಪಟ್ಟಿತು.

ತತಸ್ತು ತೇ ತ್ರಿಲೋಚನಂ ತಪೋಬಲಾದತೋಷಯನ್ ।
ವೃತಶ್ಚ ದೇವಕಣ್ಟಕೋ ಹ್ಯವಧ್ಯ ಏವ ಸರ್ವತಃ ॥೧೨.೪೦॥


ಈ ಸುದ್ಧಿ ತಿಳಿದ ದೈತ್ಯರು ರುದ್ರನನ್ನು ತಪೋಬಲದಿಂದ ಸಂತೋಷಗೊಳಿಸಿ, ದೇವತೆಗಳಿಗೆ ಕಷ್ಟಕೊಡುವುದಕ್ಕೆ ತಕ್ಕನಾದ ವರವನ್ನು ಕೊಡು ಎಂದು ಕೇಳಿಕೊಂಡರಂತೆ.

ವರಾದುಮಾಪತೇಸ್ತತಃ ಕಲಿಃ ಸ ದೇವಕಣ್ಟಕಃ ।
ಬಭೂವ ವಜ್ರಕಾಯಯುಕ್ ಸುಯೋಧನೋ ಮಹಾಬಲಃ ॥೧೨.೪೧॥

ಹೀಗೆ  ದೇವತೆಗಳಿಗೆ  ಪೀಡೆಯನ್ನು ಕೊಡತಕ್ಕ  ವರವನ್ನು ಉಮಾಪತಿಯಿಂದ ಪಡೆದ  ದೇವಕಂಟಕ ಕಲಿ ಸುಯೋಧನನಾಗಿ ಭೂಮಿಯಲ್ಲಿ ಹುಟ್ಟಿದ. ಅವನು ಮಹಾಬಲಿಷ್ಠ ಹಾಗು ಅಭೇಧ್ಯವಾದ ಶರೀರದಿಂದ ಕೂಡಿದವನಾಗಿದ್ದ.

No comments:

Post a Comment