ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 28, 2019

Mahabharata Tatparya Nirnaya Kannada 12.42-12.47


ಅವದ್ಧ್ಯ ಏವ ಸರ್ವತಃ ಸುಯೋಧನೇ ಸಮುತ್ಥಿತೇ ।
ಘೃತಾಭಿಪೂರ್ಣ್ಣಕುಮ್ಭತಃ ಸ ಇನ್ದ್ರಜಿತ್ ಸಮುತ್ಥಿತಃ ॥೧೨.೪೨॥

ಎಲ್ಲರಿಂದಲೂ ಅವಧ್ಯನಾಗಿರುವ ದುರ್ಯೋಧನನು ತುಪ್ಪದಿಂದ ಕೂಡಿದ ಮಡಿಕೆಯಿಂದ ಮೇಲೆದ್ದು ಬಂದ. ನಂತರ (ಹಿಂದೆ ರಾವಣಪುತ್ರನಾಗಿದ್ದ) ಇಂದ್ರಜಿತು ಘೃತದಿಂದ ತುಂಬಿದ ಘಟದಿಂದ  ಮೇಲೆದ್ದ.

[ಮಹಾಭಾರತ ಆದಿಪರ್ವದಲ್ಲಿ(೬೮.೮೯) ದುರ್ಯೋಧನನ ತಮ್ಮಂದಿರ ಕುರಿತಾದ ಮಾತು ಬರುತ್ತದೆ: ‘ಪೌಲಸ್ತ್ಯಾ ಭ್ರಾತರಶ್ಚಾಸ್ಯ ಜಗ್ನಿರೇ ಮನುಜೇಷ್ವಿಹ’. ದುರ್ಯೋಧನನ ತಮ್ಮಂದಿರು ಪುಲಸ್ಯ ವಂಶದಲ್ಲಿ ಬಂದ ದೈತ್ಯರೇ ಆಗಿದ್ದು, ಮನುಷ್ಯ ರೂಪದಿಂದ ಅಭಿವ್ಯಕ್ತರಾಗಿದ್ದಾರೆ. ‘ದುರ್ಯೋಧನಸಹಾಯಾಸ್ತೇ ಪೌಲಸ್ತ್ಯಾ ಭರತರ್ಷಭ’(೯೧) ಈ ಪೌಲಸ್ತ್ಯರು (ರಾಕ್ಷಸ ವಂಶದವರು) ದುರ್ಯೋಧನನ ಸಹಾಯಕರಾಗಿ  ಹುಟ್ಟಿದ್ದಾರೆ].

ಸ ದುಃಖಶಾಸನೋsಭವತ್ ತತೋsತಿಕಾಯಸಮ್ಭವಃ ।
ಸ ವೈ ವಿಕರ್ಣ್ಣ ಉಚ್ಯತೇ ತತಃ ಕರೋsಭವದ್ ಬಲೀ ॥೧೨.೪೩॥

ಸ ಚಿತ್ರಸೇನನಾಮಕಃ ತಥಾsಪರೇ ಚ ರಾಕ್ಷಸಾಃ ।
ಬಭೂವುರುಗ್ರಪೌರುಷಾ ವಿಚಿತ್ರವೀರ್ಯ್ಯಜಾತ್ಮಜಾಃ ॥೧೨.೪೪

ಈರೀತಿ ಹುಟ್ಟಿದ ಇಂದ್ರಜಿತ್ ದುಃಖಶಾಸನನಾಗಿದ್ದ. (ಅವನ ಶಾಸನ ಅಥವಾ ಆಳ್ವಿಕೆ ಅತ್ಯಂತ ದುಃಖದಾಯಕವಾದ ಕಾರಣ  ಆತ ದುಃಶಾಸನ ಎನ್ನುವ ಹೆಸರನ್ನು ಪಡೆದ) . ತದನಂತರ ಅತಿಕಾಯ ಎನ್ನುವ ರಾಕ್ಷಸ  ಹುಟ್ಟಿದ. ಅವನೇ ವಿಕರ್ಣ ಎಂದು  ಹೆಸರಾದ. ಆನಂತರ ಬಲಿಷ್ಠನಾದ  ಖರಾಸುರ ಹುಟ್ಟಿದ.
ಈ ಖರನೇ ಚಿತ್ರಸೇನ ಎನ್ನುವ ಹೆಸರಿನವನಾದ. ಇದೇ ರೀತಿ ಉಳಿದ ಎಲ್ಲಾ ಗಾಂಧಾರಿಯ ಮಕ್ಕಳೂ ಕೂಡಾ ರಾಕ್ಷಸರೇ ಆಗಿದ್ದರು. ವಿಚಿತ್ರವೀರ್ಯನ ಪೌತ್ರನಾದ  ದೃತರಾಷ್ಟ್ರನ ಆತ್ಮಜರಾದ ಅವರು  ಉಗ್ರಪೌರುಷವುಳ್ಳವರಾದರು.
[ಮಹಾಭಾರತದ ಆದಿಪರ್ವದಲ್ಲಿ (೬೩.೫೮) ದುರ್ಯೋಧನನ  ನಾಲ್ಕು ಮಂದಿ ತಮ್ಮಂದಿರರ ಕುರಿತಾದ ವಿವರವನ್ನು ಕಾಣುತ್ತೇವೆ: ಧೃತರಾಷ್ಟ್ರಾತ್ ಪುತ್ರಶತಂ ಬಭೂವ ಗಾಂಧರ್ಯಾಂ ವರದಾನಾದ್  ದ್ವೈಪಾಯನಸ್ಯ ತೇಷಾಂ ಚ ಧಾರ್ತರಾಷ್ಟ್ರಾಣಾಂ ಚತ್ವಾರಃ  ಪ್ರಧಾನಾ ದುರ್ಯೋಧನೋ ದುಃಶಾಸನೋ ವಿಕರ್ಣಶ್ಚಿತ್ರಸೇನಶ್ಚೇತಿ].

ಸಮಸ್ತದೋಷರೂಪಿಣಃ ಶರೀರಿಣೋ ಹಿ ತೇsಭವನ್ ।
ಮೃಷೇತಿ ನಾಮತೋ ಹಿ ಯಾ ಬಭೂವ ದುಃಶಳಾssಸುರೀ ॥೧೨.೪೫

ಅವರೆಲ್ಲರೂ ಕೂಡಾ ಬೇರೆಬೇರೆ ದೋಷ ಮೈದಾಳಿ ಬಂದವರಾಗಿದ್ದರು.  ಈ ರೀತಿ ಗಾಂಧಾರಿಯಲ್ಲಿ ಹುಟ್ಟಿದ ಅವರು ಮನುಷ್ಯ ಶರೀರವುಳ್ಳವರಾದರು. ಸುಳ್ಳಿಗೆ ಅಭಿಮಾನಿನಿಯಾದ ‘ಮೃಷ’  ಎನ್ನುವ ಅಸುರ ಸ್ತ್ರೀ,  ದುಶ್ಶಳಾ ಎನ್ನುವ ಹೆಸರಿನಿಂದ ಹುಟ್ಟಿದಳು.

ಕುಹೂಪ್ರವೇಶಸಂಯುತಾ ಯಯಾssರ್ಜ್ಜುನೇರ್ವಧಾಯ ಹಿ ।
ತಪಃ ಕೃತಂ ತ್ರಿಶೂಲಿನೇ ತತೋ ಹಿ ಸಾsತ್ರ ಜಜ್ಞುಷೀ ॥೧೨.೪೬॥

ದುಶ್ಶಳಾಳಾಗಿ ಹುಟ್ಟಿದ ಮೃಷ ಅಮಾವಾಸ್ಯೆಯ ಅಭಿಮಾನಿಯಾದ    ‘ಕುಹೂ’ ಎನ್ನುವ ದೇವತೆಯ ಪ್ರವೇಶದಿಂದ ಕೂಡಿದವಳಾಗಿದ್ದಳು. ಈ  ಮೃಷ ಎನ್ನುವ ಅಸುರಸ್ತ್ರೀ ಅರ್ಜುನ ಪುತ್ರನ  (ಅಭಿಮನ್ಯುವಿನ) ಕೊಲೆಗಾಗಿ ರುದ್ರನನ್ನು ಕುರಿತು ತಪಸ್ಸು ಮಾಡಲ್ಪಟ್ಟು,  ಆ ಕಾರಣಕ್ಕಾಗಿ ಇಲ್ಲಿ ಹುಟ್ಟಿದ್ದಳು.

ತಯೋದಿತೋ ಹಿ ಸೈನ್ಧವೋ ಬಭೂವ ಕಾರಣಂ ವಧೇ ।
ಸ ಕಾಲಕೇಯದಾನವಸ್ತದರ್ತ್ಥಮಾಸ ಭೂತಳೇ ॥೧೨.೪೭॥

ಮುಂದೆ ದುಶ್ಶಳಾಳಿಂದಲೇ  ಪ್ರಚೋದಿಸಲ್ಪಟ್ಟ ಜಯದ್ರಥನು ಅಭಿಮನ್ಯುವಿನ ವಧೆಗೆ ಕಾರಣನಾಗುತ್ತಾನೆ. ಜಯದ್ರಥ ‘ಕಾಲಕೇಯ’ ಎನ್ನುವ ದೈತ್ಯ. ಅವನೂ ಅಭಿಮನ್ಯುವಿನ ಕೊಲೆಗಾಗಿಯೇ ಭೂಮಿಯಲ್ಲಿ ಹುಟ್ಟಿದ್ದ.

No comments:

Post a Comment