ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, February 28, 2020

Mahabharata Tatparya Nirnaya Kannada 1620_1627


ಜರಾಸುತೋ ರೌಹಿಣೇಯೇನ ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥

ಜರಾಸಂಧನು ಬಲರಾಮನೊಂದಿಗೆ ಧೀರ್ಘಕಾಲ ಯುದ್ಧಮಾಡಿ, ಅವನ ಒನಕೆಯ ಪೆಟ್ಟು ತಿನ್ದವನಾಗಿ, ಪ್ರಜ್ಞೆ ಕಳೆದುಕೊಂಡು, ಬಹಳ ಹೊತ್ತಿನ ನಂತರ ಸಂಜ್ಞೆಯನ್ನು ಹೊಂದಿ, ಕ್ರುದ್ಧನಾಗಿ ತನ್ನ ಗದೆಯನ್ನು ಬಲರಾಮನ ಎದೆಯಮೇಲೆ ಎಸೆದನು.

ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥

ಅವನಿಂದ ಚೆನ್ನಾಗಿ ಹೊಡೆಯಲ್ಪಟ್ಟ ಬಲರಾಮನು ಒಂದು ಕ್ಷಣ ಮೂರ್ಛೆಹೋದನು. ಜರಾಸಂಧನಿಗೆ  ಬ್ರಹ್ಮನಿಂದ ಅಜೇಯತ್ವವು ಕೊಡಲ್ಪಟ್ಟಿತ್ತಷ್ಟೇ.
(ಆದರೆ ಹಿಂದಿನ ಶ್ಲೋಕದಲ್ಲಿ ಜರಾಸಂಧ ಬಲರಾಮನ ಹೊಡೆತದಿಂದ ಮೂರ್ಛೆಹೋಗಿದ್ದ ಎಂದು ಹೇಳಲಾಗಿದೆಯಲ್ಲಾ ಎಂದರೆ:) ಹಿಂದೆ ಬಲರಾಮನಲ್ಲಿರುವ ಸಂಕರ್ಷಣರೂಪಿ ಪರಮಾತ್ಮನಿಂದಾಗಿ ಜರಾಸಂಧ ಹಿಡಿಯಲ್ಪಟ್ಟಿದ್ದ.  

ತಥಾಕೃತೇ ಬಲಭದ್ರೇ ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥

ಜರಾಸಂಧನಿಂದ ಬಲರಾಮ ಹೊಡೆಯಲ್ಪಟ್ಟಾಗ ಶ್ರೀಕೃಷ್ಣನು ತನ್ನ ಕೌಮೋದಕಿ ಗದೆಯನ್ನು ಹಿಡಿದು  ಜರಾಸಂಧನನ್ನು ಕುರಿತು ತೆರಳಿದನು. ಆ ಗದೆಯಿಂದ ಜರಾಸಂಧನ ಜತ್ರುವಿನಲ್ಲಿ(ಎದೆಗಿಂತ ಮೇಲೆ, ಕಂಠಕ್ಕಿಂತ ಕೆಳಗೆ) ಹೊಡೆದನು ಕೂಡಾ. ಇದರಿಂದ ಜರಾಸಂಧ ಒದ್ದಾಡುತ್ತಾ, ಮೂರ್ಛೆಹೊಂದಿ ಭೂಮಿಯಲ್ಲಿ ಬಿದ್ದನು.

ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥

ತದನಂತರ ಬಲರಾಮನು ಮೇಲೆದ್ದ. ಬಲರಾಮ ಏಳುತ್ತಿರುವಾಗಲೇ ಶ್ರೇಷ್ಠವಾದ ಪರಾಕ್ರಮವುಳ್ಳ ಜರಾಸಂಧನೂ ಕೂಡಾ ಎದ್ದುನಿಂತ. ಆಗ ಸಿಟ್ಟಿನವನಾಗಿ ರಾಮನು ಜರಾಸಂಧನ ತೆಲೆಗೂದಲನ್ನು ಹಿಡಿದನು, ಒಳ್ಳೆಯ ಬಲವುಳ್ಳ ಬಲರಾಮನು ಜರಾಸಂಧನನ್ನು ಸಾಯಿಸಲೆಂದು ತನ್ನ ಒನಕೆಯನ್ನು ಎತ್ತಿ ಹಿಡಿದನು.

ಅಥಾಬ್ರವೀದ್ ವಾಯುರೇನಂ ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪ ॥

ತದನಂತರ ಮುಖ್ಯಪ್ರಾಣನು(ಅಶರೀರವಾಣಿ) ಬಲರಾಮನನ್ನು ಕುರಿತು ಹೀಗೆ ಹೇಳಿದನು: ‘ಬಲರಾಮನೇ, ನಿನ್ನಿಂದ ಈ ಜರಾಸಂಧನನ್ನು ಕೊಲ್ಲಲು ಸಾಧ್ಯವಿಲ್ಲ. ಹಾಗಾಗಿ ನಿನ್ನ ಬಾಹುಬಲವನ್ನು ವ್ಯರ್ಥವಾಗಿ ಪ್ರಯೋಗಮಾಡಬೇಡ. ನನ್ನ ಅಸ್ತ್ರದಂತೆ ನಿನ್ನ ಬಲವೂ ಕೂಡಾ ಅಮೋಘವಾಗಿದೆ. ಅದನ್ನು ವ್ಯರ್ಥಮಾಡಿಕೊಳ್ಳಬೇಡ’.

ಅನ್ಯೋ ಹನ್ತಾ ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥

‘ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ’ ಎನ್ನುವ ಮಾತನ್ನು ಕೇಳಿದ ಬಲರಾಮನು ಜರಾಸಂಧನನ್ನು ಅಲ್ಲೇ ಬಿಟ್ಟು ತೆರಳಿದನು. ಆದರೆ ಮತ್ತೆ ಅವನತ್ತ ಧಾವಿಸುತ್ತಿರುವ ಜರಾಸಂಧನನ್ನು ಶ್ರೀಕೃಷ್ಣ ತನ್ನ ಕೌಮೋದಕಿ ಗದೆಯಿಂದ ಹೊಡೆದನು.

[ಹರಿವಂಶದಲ್ಲಿ ಮುಖ್ಯಪ್ರಾಣ ಬಲರಾಮನನ್ನು ಕುರಿತು ಹೇಳಿದ ಮಾತಿನ ವಿವರವನ್ನು ಕಾಣಬಹುದು: ‘ತತೋsನ್ತರಿಕ್ಷೇ ವಾಗಾಸೀತ್ ಸುಸ್ವರಾ ಲೋಕಸಾಕ್ಷಿಣೀ । ನ ತ್ವಯಾ ರಾಮ ವಧ್ಯೋsಯಮಲಂ ಖೇದೇನ ಮಾನದ । ವಿಹಿತೋsಸ್ಯ ಮಯಾ ಮೃತ್ಯುಸ್ತಸ್ಮಾತ್ ಸಾಧು ವ್ಯುಪಾರಮ । ಅಚಿರೇಣೈವ ಕಾಲೇನ ಪ್ರಾಣಾಂಸ್ತ್ಯಕ್ಷತಿ ಮಾಗಧಃ’ (ವಿಷ್ಣುಪರ್ವಣೀ ೪೩.೭೨-೭೩) [ಈ ಜರಾಸಂಧನನ್ನು ನಾನೇ ಕೊಲ್ಲುವವನಿದ್ದೇನೆ. ಇಂದು ನೀನು ಹೊಡೆದರೂ ಅವನು ಸಾಯುವುದಿಲ್ಲ. ಏಕೆ ಸುಮ್ಮನೆ ನಿನ್ನ ಬಾಹುಬಲವನ್ನು ವ್ಯರ್ಥ ಮಾಡಿಕೊಳ್ಳುವೆ’ 
ಪ್ರಹರ್ತವ್ಯೋ ನ ರಾಜಾsಯಮವಧ್ಯೋsಯಂ ತ್ವಯಾsನಘ । ಕಲ್ಪಿತೋsಸ್ಯ ವಧೋsನ್ಯಸ್ಮಾದ್  ವಿರಮಸ್ವ ಹಲಾಯುಧ । ಶ್ರುತ್ವಾsಹಂ ತೇನ ವಾಕ್ಯೇನ ಚಿನ್ತಾವಿಷ್ಟೋ ನಿವರ್ತಿತಃ । ಸರ್ವಪ್ರಾಣಹರಂ ಘೋರಂ ಬ್ರಹ್ಮಣಾ ಸ್ವಯಮೀರಿತಮ್’ (೭೩.೪೯-೫೦) [‘ಸ್ವಯಂ ಬ್ರಹ್ಮನ(ಪ್ರಾಣ-ಬ್ರಹ್ಮ ಅಭೇದ) ಈ ಮಾತಿನಿಂದಾಗಿ ಚಿಂತಾವರ್ತಿತನಾಗಿ ನಾನು ಆ ಕೆಲಸದಿಂದ ಹಿಂದೆ ಸರಿದೆ’ ಎಂದು ಇಲ್ಲಿ ಬಲರಾಮ ಹೇಳಿರುವುದನ್ನು ಕಾಣುತ್ತೇವೆ].

ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬ ॥

ಕೃಷ್ಣನಿಂದ ಹೊಡೆಯಲ್ಪಟ್ಟ, ತನ್ನೆಲ್ಲಾ ದೇಹದ ನಿಯಂತ್ರಣವನ್ನು ಕಳೆದುಕೊಂಡು ಮೂರ್ಛೆಯನ್ನು ಹೊಂದಿದ ಆ ರಾಜನು ಬಹಳ ಹೊತ್ತಿನ ನಂತರ ಮೂರ್ಛೆಯಿಂದೆದ್ದು, ಭಯಗೊಂಡು, ತನ್ನನ್ನು ಅಡಗಿಸಿಕೊಂಡು, ಲಜ್ಜೆಯಿಂದ ಕೂಡಿ, ಓಡಿಹೋದನು. 

ಯಯೌ ಶಿಷ್ಟೈ ರಾಜಭಿಃ ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥

ಉಳಿದ ರಾಜರಿಂದ ಕೂಡಿಕೊಂಡ ಅವನು ‘ಬದುಕಿಕೋ ಹೋಗು’ ಎಂಬಿತ್ತ್ಯಾದಿಯಾಗಿ ಹೇಳಿ ಶ್ರೀಕೃಷ್ಣನಿಂದ ಬಿಡಲ್ಪಟ್ಟವನಾಗಿ ಪಟ್ಟಣಕ್ಕೆ ತೆರಳಿದನು. ಇದೇ ರೀತಿ ಮತ್ತೆ ಶ್ರೀಕೃಷ್ಣನ ಜೊತೆಗೆ ಅನೇಕ ಬಾರಿ ಯುದ್ಧಮಾಡಿ, ತನ್ನ ರಾಜಗಣಸಮೇತನಾಗಿಯೇ ಜರಾಸಂಧ ಸೋತುಹೋದ.

No comments:

Post a Comment