ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, February 26, 2020

Mahabharata Tatparya Nirnaya Kannada 1613_1619


ಏವಂ ತಯೋಃ ಕ್ರೀಡತೋಃ ಸ್ವೈರಮತ್ರ ರಾಜನ್ಯವೃನ್ದಾನುಗತೋ ಜರಾಸುತಃ ।
ಗಿರಿಂ ಗೋಮನ್ತಂ ಪರಿವಾರ್ಯ್ಯಾದಹತ್ ತಂ ದೃಷ್ಟ್ವಾ ದೇವೌ ಪುಪ್ಲುವತುರ್ಬಲಾಬ್ಧೌ ॥೧೬.೧೩॥

ಈರೀತಿಯಾಗಿ ಶ್ರೀಕೃಷ್ಣ ಹಾಗೂ ಬಲರಾಮರಿಬ್ಬರು ಗೋಮಂತಪರ್ವತದಲ್ಲಿ[1] ಸ್ವೇಚ್ಛಾನುಸಾರ ವಿಹರಿಸುತ್ತಿರಲು, ರಾಜರ ಸಮೂಹದಿಂದ ಅನುಸರಿಸಲ್ಪಟ್ಟ ಜರಾಸಂಧನು ಆ ದೊಡ್ಡ ಬೆಟ್ಟವನ್ನು ಸುತ್ತುವರಿದು ಅದಕ್ಕೆ ಬೆಂಕಿಯಿಟ್ಟನು. ಹೀಗೆ ಪರ್ವತವನ್ನು ಸುಟ್ಟ ಜರಾಸಂಧನನ್ನು ನೋಡಿದ ಅವರಿಬ್ಬರು ಪರ್ವತದಿಂದ ಕೆಳಗಿದ್ದ ಸೈನ್ಯ ಸಾಗರದಲ್ಲಿ ಧುಮುಕಿದರು. 

ಗಿರಿಸ್ತಾಭ್ಯಾಂ ಪೀಡಿತಃ ಸನ್ ನಿಮಗ್ನೋ ಭೂಮೌ ಪದ್ಭ್ಯಾಂ ಯೋಜನೈಕಾದಶಂ ಸಃ ।
ನಿಷ್ಪೀಡಿತಾಜ್ಜಲಧಾರೋದ್ಗತಾsಸ್ಮಾದ್ ವಹ್ನಿಂ ವ್ಯಾಪ್ತಂ ಶಮಯಾಮಾಸ ಸರ್ವಮ್ ॥೧೬.೧೪ ॥

ರಾಮ-ಕೃಷ್ಣರು ಪರ್ವತದಿಂದ ಕೆಳಗೆ ಹಾರುವಾಗ, ಅವರಿಬ್ಬರ ಪಾದದಿಂದ ಒತ್ತಲ್ಪಟ್ಟ ಬೆಟ್ಟವು ಭೂಮಿಯಲ್ಲಿ ಹನ್ನೊಂದು ಯೋಜನ ಕೆಳಗೆ ಮುಳುಗಿತು. ಈರೀತಿ ಭೂಮಿಯಲ್ಲಿ ಹುದುಗಿಹೋದ ಆ ಪರ್ವತದಿಂದಾಗಿ ಅಲ್ಲಿ  ನೀರಿನ ಸಮೂಹವೇ ಮೇಲೆದ್ದಿತು ಮತ್ತು ಅದು ಅಲ್ಲಿ ಎಲ್ಲೆಡೆ ಹರಡಿದ್ದ ಬೆಂಕಿಯನ್ನು ನಂದಿಸಿತು ಕೂಡಾ.

ಸೇನಾಂ ಪ್ರವಿಷ್ಟೌ ಸರ್ವರಾಜನ್ಯವೃನ್ದಂ ವ್ಯಮತ್ಥ್ನಾತಾಂ ದೇವವರೌ ಸ್ವಶಸ್ತ್ರೈಃ ।
ತತ್ರ ಹಂಸೋ ಡಿಭಕಶ್ಚೈಕಲವ್ಯಃ ಸ ಕೀಚಕಸ್ತೌ ಶಿಶುಪಾಲಪೌಣ್ಡ್ರಕೌ ॥೧೬.೧೫ ॥

ಭೌಮಾತ್ಮಜೌ ದನ್ತವಕ್ರಶ್ಚ ರುಗ್ಮೀ ಸೌಭಾಧಿಪೋ ಮೈನ್ದಮೈನ್ದಾನುಜೌ ಚ ।
ಅನ್ಯೇ ಚ ಯೇ ಪಾರ್ತ್ಥಿವಾಃ ಸರ್ವ ಏವ ಕ್ರೋಧಾತ್ ಕೃಷ್ಣಂ ಪರಿವಾರ್ಯ್ಯಾಭ್ಯವರ್ಷನ್ ॥೧೬.೧೬ ॥

ಸೇನೆಯನ್ನು ಪ್ರವೇಶಿಸಿದ ದೇವತಾಶ್ರೇಷ್ಠ ಬಲರಾಮ-ಕೃಷ್ಣರು ಸರ್ವರಾಜರ ಸಮೂಹವನ್ನು ಚೆನ್ನಾಗಿ ನಿಗ್ರಹಿಸಿದರು. ಆಗ ಹಂಸ, ಡಿಭಕ, ಏಕಲವ್ಯ, ಕೀಚಕ, ಶಿಶುಪಾಲ, ಪೌಣ್ಡ್ರಕ, ಭಗದತ್ತ, ದಂತವಕ್ರ, ರುಗ್ಮಿ, ಸಾಲ್ವ, ಮೈನ್ಧ, ವಿವಿದ, ಇತರ ಎಲ್ಲಾ ರಾಜರು ಸಿಟ್ಟಿನಿಂದ ಕೃಷ್ಣನನ್ನು ಸುತ್ತುವರಿದು ಅವನ ಮೇಲೆ ಬಾಣಗಳ ಮಳೆಗರೆದರು.     

ಶಸ್ತ್ರೈರಸ್ತ್ರೈರ್ದ್ದ್ರುಮಪೂಗೈಃ ಶಿಲಾಭಿರ್ಭಕ್ತಾಶ್ಚ ಯೇ ಶಲ್ಯಬಾಹ್ಲೀಕಮುಖ್ಯಾಃ ।
ಸಸೋಮದತ್ತಾಃ ಸೌಮದತ್ತಿರ್ವಿರಾಟಃ  ಪಾಞ್ಚಾಲರಾಜಶ್ಚ ಜರಾಸುತಸ್ಯ ।
ಭಯಾತ್ ಕೃಷ್ಣಂ ಶಸ್ತ್ರವರ್ಷೈರವರ್ಷನ್ ಕಾರಾಗೃಹೇ ವಾಸಿತಾ ಮಾಗಧೇನ ॥೧೬.೧೭ ॥

ಆ ರಾಜರುಗಳಲ್ಲಿ ಕೃಷ್ಣನ ಭಕ್ತರಾಗಿರುವ ಶಲ್ಯ, ಬಾಹ್ಲೀಕ, ಮೊದಲಾಗಿರುವ, ಸೋಮದತ್ತನಿಂದ ಕೂಡಿರುವ, ಸೋಮದತ್ತನ ಮಗನಾದ ಭೂರಿಶ್ರವಸ್ಸು, ವಿರಾಟ, ದ್ರುಪದ, ಇವರೆಲ್ಲರೂ ಕೂಡಾ (ಭಕ್ತರಾಗಿದ್ದರೂ ಕೂಡಾ) ಜರಾಸಂಧನಿಂದ ಹಿಂದೆ ಕಾರಾಗ್ರಹ ಪೀಡಿತರಾಗಿದ್ದುದರ ಭಯದಿಂದಾಗಿ, ಶಸ್ತ್ರಾಸ್ತ್ರದ ಮಳೆಗೆರೆಯುವಿಕೆಯಿಂದ ಕೃಷ್ಣನನ್ನು ಪೀಡಿಸಿದರು. 

ಸರ್ವಾನೇತಾಞ್ಛರವರ್ಷೇಣ ಕೃಷ್ಣೋ ವಿಸೂತವಾಜಿಧ್ವಜಶಸ್ತ್ರವರ್ಮ್ಮಣಃ ।
ಕೃತ್ವಾ ವಮಚ್ಛೋಣಿತಾನಾರ್ತ್ತರೂಪಾನ್ ವಿದ್ರಾವಯಾಮಾಸ ಹರಿರ್ಯ್ಯಥಾ ಮೃಗಾನ್ ॥೧೬.೧೮ ॥

ಆ ಎಲ್ಲಾ ರಾಜರುಗಳನ್ನು ಕೃಷ್ಣನು ಶರವರ್ಷದಿಂದ (ಬಾಣಗಳ ಮಳೆಗರೆದು), ಕುದುರೆ, ಧ್ವಜ, ಶಸ್ತ್ರ, ಕವಚ ಇವುಗಳಿಂದ ರಹಿತರನ್ನಾಗಿ ಮಾಡಿ, ರಕ್ತಕಾರಿಕೊಂಡ ಭಯಂಕರವಾದ ಶರೀರವುಳ್ಳವರನ್ನಾಗಿ ಮಾಡಿ ಓಡಿಸಿದನು. ಸಿಂಹವು ಹೇಗೆ ಜಿಂಕೆಗಳನ್ನು ಓಡಿಸುತ್ತದೋ ಹಾಗೇ.

ಹತ್ವಾ ಸೇನಾಂ ವಿಂಶದೋಕ್ಷೋಹಿಣೀಂ ತಾಂ ತ್ರಿಭಿರ್ಯ್ಯುಕ್ತಾಂ ರುಗ್ಮಿಣಂ ನೈವ ಕೃಷ್ಣಃ ।
ರುಗ್ಮಿಣ್ಯರ್ತ್ಥೇ ಪೀಡಯಾಮಾಸ ಶಸ್ತ್ರಾಣ್ಯಸ್ಯ ಚ್ಛಿತ್ವಾ ವಿರಥಂ ದ್ರಾವಯಾನಃ ॥೧೬.೧೯ ॥

ಹೀಗೆ ಶ್ರೀಕೃಷ್ಣನು ೨೩ ಅಕ್ಷೋಹಿಣಿಯಿಂದ ಕೂಡಿರುವ ಆ ಸೇನೆಯನ್ನು ಸಂಹಾರಮಾಡಿದನು.  ರುಗ್ಮಿಯನ್ನು ಮಾತ್ರ ಶ್ರೀಕೃಷ್ಣನು ರುಗ್ಮಿಣಿಗಾಗಿ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಆಯುಧಗಳನ್ನು ಕತ್ತರಿಸಿದ ಶ್ರೀಕೃಷ್ಣ , ಅವನನ್ನು ರಥಹೀನನನ್ನಾಗಿ ಮಾಡಿ ಅಲ್ಲಿಂದ ಓಡಿಸಿದನು.




[1]  ಇಂದಿನ ‘ಗೋವಾ’ ಎನ್ನುವ ಹೆಸರು ಈ ಪರ್ವತದ ಹೆಸರಿನಿಂದಲೇ ಬಂದಿರುವುದು.

No comments:

Post a Comment