ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 25, 2022

Mahabharata Tatparya Nirnaya Kannada 22-211-218

 

ರಾಮೋ ವಿಜಿತ್ಯಾತಿಬಲಂ ರಣೇ ರಿಪುಂ ಮುದೈವ ದಾಮೋದರಮಾಸಸಾದ ।

ಪೌಣ್ಡ್ರಸ್ತ್ವವಜ್ಞಾಯ ಶಿನಿಪ್ರವೀರಂ ನಿವಾರ್ಯ್ಯಮಾಣೋSಪಿ ಯಯೌ ಜನಾರ್ದ್ದನಮ್ ॥೨೨.೨೧೧॥

 

ಬಲರಾಮನು ಅತ್ಯಂತ ಬಲಿಷ್ಠ ಶತ್ರುವಾಗಿರುವ ಏಕಲವ್ಯನನ್ನು ಯುದ್ಧದಲ್ಲಿ ಗೆದ್ದು, ಸಂತೋಷದಿಂದ ಕೃಷ್ಣನ ಬಳಿ ಬಂದ. ಇತ್ತ ಪೌಣ್ಡ್ರಕ ವಾಸುದೇವ ಸಾತ್ಯಕಿಯಿಂದ ತಡೆಯಲ್ಪಟ್ಟವನಾದರೂ ಕೂಡಾ, ಅವನನ್ನು ಧಿಕ್ಕರಿಸಿ, ಕೃಷ್ಣನ ಬಳಿ ತೆರಳಿದ.

 

ತಂ ಕೇಶವೋ ವಿರಥಂ ವ್ಯಾಯುಧಂ ಚ ಕ್ಷಣೇನ ಚಕ್ರೇ ಸ ಯಯೌ ನಿಜಾಂ ಪುರೀಮ್ ।

ಪ್ರಸ್ಥಾಪಯಾಮಾಸ ಪುನಶ್ಚ ದೂತಂ ಕೃಷ್ಣಾಯೈಕೋ ವಾಸುದೇವೋSಹಮಸ್ಮಿ ॥೨೨.೨೧೨॥

 

ಮದೀಯಲಿಙ್ಗಾನಿ ವಿಸೃಜ್ಯ ಚಾsಶು ಸಮಾಗಚ್ಛೇಥಾಃ ಶರಣಂ ಮಾಮನನ್ತಮ್ ।

ತದ್ದೂತೋಕ್ತಂ ವಾಕ್ಯಮೇತನ್ನಿಶಮ್ಯ ಯದುಪ್ರವೀರಾ ಉಚ್ಚಕೈಃ ಪ್ರಾಹಸನ್ ಸ್ಮ ॥೨೨.೨೧೩॥

 

ಶ್ರೀಕೃಷ್ಣನು ಪೌಣ್ಡ್ರಕ ವಾಸುದೇವನನ್ನು ಕ್ಷಣದಲ್ಲಿ ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದನು. ಹೀಗೆ ಕೃಷ್ಣನಿಂದ ರಥ ಮತ್ತು ಆಯುಧವನ್ನು ಕಳೆದುಕೊಂಡ ಪೌಣ್ಡ್ರಕ ತನ್ನ ದೇಶಕ್ಕೆ ಹಿಂತಿರುಗಿದ ಮತ್ತು ನಂತರ ‘ನಾನೊಬ್ಬನೇ ವಾಸುದೇವನಾಗಿರುತ್ತೇನೆ’ ಎಂದು ಕೃಷ್ಣನಲ್ಲಿಗೆ ಒಬ್ಬ ಧೂತನ ಮುಖೇನ ಸಂದೇಶವನ್ನು ಕಳುಹಿಸಿದನು.

‘ನನ್ನದೇ ಆದ ಚಕ್ರ, ಶಂಖ, ಗದೆ, ಗರುಡವಾಹನ, ಶ್ರೀವತ್ಸ, ಈ ಎಲ್ಲಾ ಚಿಹ್ನೆಗಳನ್ನು  ನೀನು ಉಪಯೋಗಿಸುತ್ತಿರುವೆ. ಅದರಿಂದಾಗಿ ಅವುಗಳೆಲ್ಲವನ್ನು ನನಗೆ ಬಿಟ್ಟುಕೊಟ್ಟು, ಎಣೆಯಿರದ ಪರಾಕ್ರಮವುಳ್ಳ ನನ್ನಲ್ಲಿ ಶರಣು ಹೊಂದು’. ಎನ್ನುವ ಪೌಣ್ಡ್ರಕ ವಾಸುದೇವನ ಸಂದೇಶವನ್ನು ಕೇಳಿ ಯಾದವರೆಲ್ಲರೂ ಗಟ್ಟಿಯಾಗಿ ನಕ್ಕರು.

 

ಕೃಷ್ಣಃ ಪ್ರಹಸ್ಯಾSಹ ತವಾSಯುಧಾನಿ ದಾಸ್ಯಾಮ್ಯಹಂ ಲಿಙ್ಗಭೂತಾನಿ ಚಾSಜೌ ।

ಇತ್ಯುಕ್ತೋSಸೌ ದೂತ ಏತ್ಯಾSಹ ತಸ್ಮೈ ಸ ಚಾಭ್ಯಾಗಾದ್ ಯೋದ್ಧುಕಾಮೋ ಹರಿಶ್ಚ ॥೨೨.೨೧೪॥

 

ಕೃಷ್ಣನು ನಕ್ಕು ಹೇಳುತ್ತಾನೆ: ‘ನಿನಗೆ ಆಯುಧಗಳನ್ನು ಕೊಡುತ್ತೇನೆ, ಆದರೆ ಯುದ್ಧದಲ್ಲಿ’ ಎಂದು. ಈರೀತಿಯಾಗಿ ಹೇಳಲ್ಪಟ್ಟ ಧೂತನು ಹಿಂತಿರುಗಿ ಪೌಣ್ಡ್ರಕ ವಾಸುದೇವನಲ್ಲಿ ಎಲ್ಲವನ್ನೂ ಹೇಳುತ್ತಾನೆ. ಅವನಾದರೋ, ಕೃಷ್ಣನೊಂದಿಗೆ ಯುದ್ಧವನ್ನು ಬಯಸಿ ಬಂದ. ಶ್ರೀಕೃಷ್ಣನೂ ಕೂಡಾ ಯುದ್ಧಕ್ಕೆ ಸಿದ್ಧನಾದ.

 

ತಂ ಶಾತಕೌಮ್ಭೇ ಗರುಡೇ ರಥಸ್ಥೇ ಸ್ಥಿತಂ ಚಕ್ರಾದೀನ್ ಕೃತ್ರಿಮಾನ್ ಸನ್ದಧಾನಮ್ ।

ಶ್ರೀವತ್ಸಾರ್ತ್ಥೇ ದಗ್ಧವಕ್ಷಸ್ಥಲಂ ಚ ದೃಷ್ಟ್ವಾ ಕೃಷ್ಣಃ ಪ್ರಾಹಸತ್ ಪಾಪಬುದ್ಧಿಮ್ ॥೨೨.೨೧೫॥

 

ರಥದ ಮೇಲೆ ಸ್ಥಾಪಿತವಾಗಿರುವ ಬಂಗಾರಮಯವಾದ  ಗರುಡನ ಮೇಲೆ ಕುಳಿತಿರುವ ಪೌಣ್ಡ್ರಕ ವಾಸುದೇವ,  ಚಕ್ರ, ಶಂಖ, ತೋಳುಗಳು, ಇತ್ಯಾದಿಯನ್ನು ಕೃತಕವಾಗಿ ಜೋಡಿಸಿಕೊಂಡಿದ್ದ. ಶ್ರೀವತ್ಸ ಚಿಹ್ನೆಗಾಗಿ ಅನೇಕ ಬಾರಿ ಸುಟ್ಟ ಎದೆಯುಳ್ಳವನಾಗಿ ಬಂದಿದ್ದ ಪಾಪಿಷ್ಠ ಬುದ್ಧಿಯುಳ್ಳ ಅವನನ್ನು ಕಂಡು  ಶ್ರೀಕೃಷ್ಣ ನಕ್ಕನು.

[ ‘ದೃಷ್ಟ್ವಾ ತಮಾತ್ಮನಾ ತುಲ್ಯಂ ಕೃತ್ರಿಮಂ ವೇಷಮಾಸ್ಥಿತಮ್ । ಯಥಾ ನಟಂ ರಙ್ಗಗತಂ ವಿಜಹಾಸ ಭೃಶಂ ಹರಿಃ- ಪೌಣ್ಡ್ರಕ ವಾಸುದೇವ ಒಬ್ಬ ನಟನಂತೆ ಬಂದಿದ್ದ ಎನ್ನುತ್ತದೆ ಭಾಗವತ(೧೦.೬೯.೨೮)]

 

ತತೋsಸ್ತ್ರಶಸ್ತ್ರಾಣ್ಯಭಿವರ್ಷಮಾಣಂ ವಿಜಿತ್ಯ ತಂ ವಾಸುದೇವೋSರಿಣೈವ ।

ಚಕರ್ತ್ತ ತತ್ಕನ್ಧರಂ ತಸ್ಯ ಚಾನು ಮಾತಾಮಹಸ್ಯಾಚ್ಛಿನತ್ ಸಾಯಕೇನ ॥೨೨.೨೧೬॥

 

ತದನಂತರ ಅಸ್ತ್ರ-ಶಸ್ತ್ರಗಳನ್ನು ವರ್ಷಿಸುತ್ತಿರುವ ಪೌಣ್ಡ್ರಕ ವಾಸುದೇವನ ಗೆದ್ದು, ಚಕ್ರದಿಂದ ಅವನ ಕತ್ತನ್ನು ಶ್ರೀಕೃಷ್ಣ  ಕತ್ತರಿಸಿದ. ಅವನಾದಮೇಲೆ ಪೌಣ್ಡ್ರಕ ವಾಸುದೇವನ ತಾತನ ಕತ್ತನ್ನು ಬಾಣದಿಂದ ಕತ್ತರಿಸಿದ.

 

ಅಪಾತಯಚ್ಚಾSಶು ಶಿರಃ ಸ ತೇನ ಕಾಶೀಶ್ವರಸ್ಯೇಶ್ವರೋ ವಾರಣಸ್ಯಾಮ್ ।

ಸ ಚ ಬ್ರಹ್ಮಾಹಂ ವಾಸುದೇವೋSಸ್ಮಿ ನಿತ್ಯಮಿತಿ ಜ್ಞಾನಾದಗಮತ್ ತತ್ ತಮೋSನ್ಧಮ್ ॥೨೨.೨೧೭॥

 

ಶ್ರೀಕೃಷ್ಣನು ಕಾಶೀರಾಜನ ತಲೆಯನ್ನು ಬಾಣದಿಂದ ಹೊಡೆದು, ಅದು ವಾರಾಣಾಸಿಯಲ್ಲಿ ಬೀಳುವಂತೆ ಮಾಡಿದನು. ತಾನೇ ಬ್ರಹ್ಮ, ತಾನೇ ವಾಸುದೇವ ಎಂದು ನಿತ್ಯವೂ ಅನುಸಂಧಾನ ಮಾಡುತ್ತಿದ್ದ ದುಷ್ಟ ಪೌಣ್ಡ್ರಕ ವಾಸುದೇವ ಅನ್ಧಂತಮಸ್ಸನ್ನು ಹೊಂದಿದನು.

 

ಸಹಾಯ್ಯಕೃಚ್ಚಾಸ್ಯ ಚ ಕಾಶಿರಾಜೋ ಯಥೈವ ಕಿರ್ಮ್ಮೀರಹಿಡಿಮ್ಬಸಾಲ್ವಾಃ ।

ಅನ್ಯೇ ಚ ದೈತ್ಯಾ ಅಪತಂಸ್ತಮೋSನ್ಧೇ ತಥೈವ ಸೋSಪ್ಯಪತತ್ ಪಾಪಬುದ್ಧಿಃ ॥೨೨.೨೧೮॥

 

ಹೇಗೆ ಕಿರ್ಮೀರ, ಹಿಡಿಂಬ, ಸಾಲ್ವಾ, ಇತ್ಯಾದಿ ಇತರ ದೈತ್ಯರೆಲ್ಲರೂ ಕೂಡ ಅನ್ಧಂತಮಸ್ಸಿನಲ್ಲಿ ಬಿದ್ದರೋ, ಅದೇ ರೀತಿ, ಪೌಣ್ಡ್ರಕ ವಾಸುದೇವನಿಗೆ ಸಹಾಯ ಮಾಡಿರುವ ಪಾಪಬುದ್ಧಿಯವನಾಗಿರುವ ಕಾಶಿರಾಜನು ಅನ್ಧಂತಮಸ್ಸನ್ನು ಹೊಂದಿದನು.

No comments:

Post a Comment