ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 13, 2023

Mahabharata Tatparya Nirnaya Kannada 27-171-180

ವವರ್ಷತುಸ್ತೌ ಚ ಮಹಾಸ್ತ್ರಶಸ್ತ್ರೈರ್ಭೀಮೋ ರಥಸ್ಥೋSವರಜಂ ಜುಗೋಪ ।

ಶೈನೇಯಪಾಞ್ಚಾಲಮುಖಾಶ್ಚ ಪಾರ್ತ್ಥಮಾವಾರ್ಯ್ಯ ತಸ್ಥುಃ ಪ್ರಸಭಂ ನದನ್ತಃ ॥೨೭.೧೭೧ ॥

 

ಕರ್ಣಾರ್ಜುನರಿಬ್ಬರೂ ಮಹಾ ಶಸ್ತ್ರಾಸ್ತ್ರಗಳಿಂದ ಪರಸ್ಪರ ವರ್ಷಿಸಿಕೊಂಡರು. ಭೀಮಸೇನ ಅರ್ಜುನನನ್ನು ರಕ್ಷಿಸುವನಾಗಿ ರಥದಲ್ಲಿ ಕುಳಿತ.  ಸಾತ್ಯಕಿ, ದ್ರುಪದ, ಮೊದಲಾದವರು ಅರ್ಜುನನ ರಕ್ಷಣೆಗಾಗಿ ಸುತ್ತುವರಿದು ಗಟ್ಟಿಯಾಗಿ ಗರ್ಜಿಸುತ್ತಾ ನಿಂತರು.

 

ದುರ್ಯ್ಯೋಧನೋ ದ್ರೌಣಿಮುಖಾಶ್ಚ ಕರ್ಣ್ಣಂ ರರಕ್ಷುರಾವಾರ್ಯ್ಯ ತದಾSSಸ ಯುದ್ಧಮ್ ।

ತತ್ರಾರ್ಜ್ಜುನಂ ಬಾಣವರೈಃ ಸ ಕರ್ಣ್ಣಃ ಸಮರ್ದ್ದಯಾಮಾಸ ವಿಶೇಷಯನ್ ರಣೇ ॥೨೭.೧೭೨ ॥

 

ದುರ್ಯೋಧನ, ಅಶ್ವತ್ಥಾಮ, ಮೊದಲಾದ ಎಲ್ಲರೂ ಕರ್ಣನನ್ನು ಸುತ್ತುವರಿದು ಅವನ ರಕ್ಷಕರಾಗಿ ನಿಂತರು. ಆಗ ಪ್ರಾರಂಭವಾದ ಯುದ್ಧದಲ್ಲಿ ಕರ್ಣನು ಬಾಣಗಳ ಸಮೂಹದಿಂದ ಅರ್ಜುನನನ್ನು ಪೀಡಿಸಿದನು.

 

ತದಾ ನದನ್ ಭೀಮಸೇನೋ ಜಗಾದ ಗದಾಂ ಸಮಾದಾಯ ಸಮಾತ್ತರೋಷಃ ।

ಅಹಂ ವೈನಂ ಗದಯಾ ಪೋಥಯಾಮಿ  ತ್ವಂ ವಾ ಜಹೀಮಂ ಸಮುಪಾತ್ತವೀರ್ಯ್ಯಃ ॥೨೭.೧೭೩ ॥

 

ಆಗ ಕೋಪದಿಂದ ತನ್ನ ಗದೆಯನ್ನು ಹಿಡಿದ ಭೀಮಸೇನ ಸಿಂಹನಾದ ಮಾಡುತ್ತಾ, ಅರ್ಜುನನನ್ನು ಕುರಿತು- ‘ನಾನು ಈ ಗದೆಯಿಂದಲೇ ಕರ್ಣನನ್ನು ಕೊಲ್ಲುತ್ತೇನೆ ಅಥವಾ ನೀನು ಹೊಂದಲ್ಪಟ್ಟ ವೀರ್ಯವುಳ್ಳವನಾಗಿ ಅವನನ್ನು ಸಂಹರಿಸು ಎಂದನು.

 

 

 

ಕೃಷ್ಣೋSಪಿ ತಂ ಬೋಧಯಾಮಾಸ ಸಮ್ಯಙ್ ನರಾವೇಶಂ ವ್ಯಞ್ಜಯನ್ ಭೂಯ ಏವ ।

ಸಮೃದ್ಧವೀರ್ಯ್ಯಃ  ಸ ತದಾ ಧನಞ್ಜಯಃ  ಸುಯೋಧನದ್ರೌಣಿಕೃಪಾನ್  ಸಭೋಜಾನ್ ।

ಸಾಕಂ ಚ ಬಾಣೈರ್ವಿರಥಾಂಶ್ಚಕಾರ ವಿವ್ಯಾಧ ತಾನಪ್ಯರಿಹಾ ಸುಪುಙ್ಖೈಃ ॥೨೭.೧೭೪ ॥

 

ಶ್ರೀಕೃಷ್ಣನೂ ಕೂಡಾ ಮತ್ತೆ ಮತ್ತೆ ಅರ್ಜುನನನಿಗೆ ನರಾವೇಶವನ್ನು ನೆನಪಿಸುವವನಾಗಿ ಮಾತನ್ನಾಡಿದನು. ಆಗ ಅರ್ಜುನ ಸಮೃದ್ಧಗೊಂಡ ವೀರ್ಯವುಳ್ಳವನಾಗಿ, ಭೋಜರಾಜನಿಂದ ಕೂಡಿದ ದುರ್ಯೋಧನ, ಅಶ್ವತ್ಥಾಮ, ಕೃಪಾಚಾರ್ಯ ಇವರೆಲ್ಲರನ್ನು ಏಕಕಾಲದಲ್ಲಿ ತನ್ನ ಬಾಣಗಳಿಂದ ರಥಹೀನರನ್ನಾಗಿ ಮಾಡಿದನು. ಶತ್ರು ಸಂಹಾರಕನಾದ ಅರ್ಜುನ ಶೋಭನವಾದ ತೀಕ್ಷ್ಣ  ಬಾಣಗಳಿಂದ ದುರ್ಯೋಧನಾದಿಗಳನ್ನು ಹೊಡೆದನು.

 

ತೇ ಕಿಞ್ಚಿದ್ ದೂರತಸ್ತಸ್ಥುಃ ಪಶ್ಯನ್ತೋ ಯುದ್ಧಮುತ್ತಮಮ್ ।

ಅಮಾನುಷಂ ತತ್ ಪಾರ್ತ್ಥಸ್ಯ ದೃಷ್ಟ್ವಾ ಕರ್ಮ್ಮ ಗುರೋಃ ಸುತಃ ।

ಗೃಹೀತ್ವಾ ಪಾಣಿನಾ ಪಾಣಿಂ ದುರ್ಯ್ಯೋಧನಮಭಾಷತ ॥೨೭.೧೭೫ ॥

 

ಆಗ ದುರ್ಯೋಧನಾದಿಗಳು ಅತ್ಯದ್ಭುತವಾದ ಆ ಯುದ್ಧವನ್ನು ನೋಡುವವರಾಗಿ ಸ್ವಲ್ಪ ದೂರದಲ್ಲಿ ನಿಂತರು. ದ್ರೋಣಪುತ್ರ ಅಶ್ವತ್ಥಾಮ ಅರ್ಜುನನ ಅಲೌಕಿಕವಾದ ಕರ್ಮವನ್ನು ಕಂಡು, ದುರ್ಯೋಧನನ ಕೈಯನ್ನು ಹಿಡಿದು ಮಾತನಾಡಿದನು-  

 

ದೃಷ್ಟಂ ಹಿ ಭೀಮಸ್ಯ ಬಲಂ ತ್ವಯಾSದ್ಯ ತಥೈವ ಪಾರ್ತ್ಥಸ್ಯ ಯಥಾ ಜಿತಾ ವಯಮ್ ।

ಅಲಂ ವಿರೋಧೇನ ಸಮೇತ್ಯ ಪಾಣ್ಡವೈಃ ಪ್ರಶಾಧಿ ರಾಜ್ಯಂ ಚ ಮಯಾ ಸಮೇತಃ ॥೨೭.೧೭೬ ॥

 

ಭೀಮಸೇನ ಮತ್ತು ಅರ್ಜುನರ ಬಲದಿಂದ ನಾವು ಪರಾಜಿತರಾಗಿರುವುದು ನಿನ್ನಿಂದ ಕಾಣಲ್ಪಟ್ಟಿತಷ್ಟೇ. ವಿರೋಧ ಸಾಕು. ಪಾಂಡವರಿಂದ ಕೂಡಿಕೊಂಡು ರಾಜ್ಯಪಾಲನೆ ಮಾಡು. ನಾನು ನಿನ್ನೊಂದಿಗಿದ್ದೇನೆ.

 

'ಧನಞ್ಜಯಸ್ತಿಷ್ಠತಿ ವಾರಿತೋ ಮಯಾ ಜನಾರ್ದ್ದನೋ ನೈವ ವಿರೋಧಮಿಚ್ಛತಿ ।

ವೃಕೋದರಸ್ತದ್ವಚನೇ ಸ್ಥಿತಃ ಸದಾ ಯುಧಿಷ್ಠಿರಃ ಶಾನ್ತಮನಾಸ್ತಥಾ ಯಮೌ' ॥೨೭.೧೭೭ ॥

 

ಹಿತಾರ್ತ್ಥಮೇತತ್ ತವ ವಾಕ್ಯಮೀರಿತಂ ಗೃಹಾಣ ಮೇ ನೈವ ಭಯಾದುದೀರಿತಮ್ ।

ಅಹಂ ಹ್ಯವದ್ಧ್ಯೋ ಮಮ ಚೈವ ಮಾತುಲೋ ನ ಶಙ್ಕಿತುಂ ಮೇ ವಚನಂ ತ್ವಮರ್ಹಸಿ ॥೨೭.೧೭೮ ॥

 

ಅರ್ಜುನ ನನ್ನಿಂದ ತಡೆಯಲ್ಪಟ್ಟವನಾಗಿ ಯುದ್ಧವನ್ನು ನಿಲ್ಲಿಸುತ್ತಾನೆ. ಶ್ರೀಕೃಷ್ಣ ವಿರೋಧವನ್ನು ಇಚ್ಛಿಸುವುದೇ ಇಲ್ಲ. ಭೀಮಸೇನ ಕೃಷ್ಣನ ಮಾತಿನಂತೆ ನಡೆಯುತ್ತಾನೆ. ಧರ್ಮರಾಜ ಶಾಂತವಾದ ಮನಸುಳ್ಳವನಾಗಿರುತ್ತಾನೆ. ನಕುಲ-ಸಹದೇವರೂ ಕೂಡಾ ಶಾಂತರಾಗುತ್ತಾರೆ. ನಿನ್ನ ಹಿತಕ್ಕಾಗಿ ನನ್ನ ಈ ಮಾತನ್ನು ಸ್ವೀಕರಿಸು. ನಾನು ಈ ಮಾತನ್ನು ಭಯದಿಂದ ಹೇಳುತ್ತಿಲ್ಲ. ನಾನು ಮತ್ತು ಕೃಪಾಚಾರ್ಯರು ಅವಧ್ಯರು. ಹೀಗಾಗಿ ನನ್ನ ಮಾತನ್ನು ಶಂಕಿಸಬೇಡ.

 

ಇತೀರಿತಃ ಪ್ರಾಹ ಸುಯೋಧನಸ್ತಂ ದುಃಶಾಸನಸ್ಯಾದ್ಯ ಪಪೌ ಹಿ ಶೋಣಿತಮ್ ।

ಶಾರ್ದ್ದೂಲಚೇಷ್ಟಾಮಕರೋಚ್ಚ ಭೀಮೋ ನ ಮೇ ಕಥಞ್ಚಿತ್ ತದನೇನ ಸನ್ಧಿಃ ॥೨೭.೧೭೯॥

 

ಈರೀತಿ ಅಶ್ವತ್ಥಾಮನಿಂದ ಹೇಳಲ್ಪಟ್ಟ ಸುಯೋಧನ ಹೇಳುತ್ತಾನೆ- ‘ಭೀಮಸೇನ ಈಗಷ್ಟೇ ದುಃಶ್ಯಾಸನನ ರಕ್ತವನ್ನು ಪಾನ ಮಾಡಿದ್ದಾನೆ. ಹುಲಿ ಚೇಷ್ಟೆಯನ್ನೂ ಕೂಡಾ ಮಾಡಿರುವನು. ಹೀಗಾಗಿ ಯಾವ ಕಾರಣಕ್ಕೂ ಭೀಮಸೇನನೊಂದಿಗೆ ಸಂಧಾನ ಸಾಧ್ಯವಿಲ್ಲ’.

 

ಇತ್ಯುಕ್ತೋ ದ್ರೌಣಿರಾಸೀತ್ ಸ ತೂಷ್ಣೀಂ ಕರ್ಣ್ಣಧನಞ್ಜಯೌ ।

ಮಹಾಸ್ತ್ರಶಸ್ತ್ರವರ್ಷೇಣ ಚಕ್ರತುಃ ಖಮನನ್ತರಮ್ ॥೨೭.೧೮೦ ॥

 

ದುರ್ಯೋಧನನಿಂದ ಈ ರೀತಿ ಹೇಳಲ್ಪಟ್ಟ ಅಶ್ವತ್ಥಾಮಾಚಾರ್ಯರು ಸುಮ್ಮನಾದರು. ಕರ್ಣ-ಅರ್ಜುನರಿಬ್ಬರೂ ಮಹತ್ತಾದ ಅಸ್ತ್ರ-ಶಸ್ತ್ರಗಳ ವೃಷ್ಟಿಯಿಂದ ಆಕಾಶವನ್ನು ತುಂಬಿದರು.

No comments:

Post a Comment