ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 14, 2023

Mahabharata Tatparya Nirnaya Kannada 27-181-186

 

ಆಗ್ನೇಯವಾರುಣೈನ್ದ್ರಾದೀನ್ಯೇತಾನ್ಯನ್ಯೋನ್ಯಮೃತ್ಯವೇ ।

ಬ್ರಹ್ಮಾಸ್ತ್ರಮಪ್ಯುಭೌ ತತ್ರ ಪ್ರಯುಜ್ಯಾSನದತಾಂ ರಣೇ ।

ಅನ್ಯೋನ್ಯಾಸ್ತ್ರಪ್ರತೀಘಾತಂ ಕೃತ್ವೋಭೌ ಚ ವಿರೇಜತುಃ           ॥೨೭.೧೮೧ ॥

 

ಒಬ್ಬರನ್ನೊಬ್ಬರು ಕೊಲ್ಲುವುದಕ್ಕಾಗಿ ಆಗ್ನೇಯಾಸ್ತ್ರ, ವಾರುಣಾಸ್ತ್ರ, ಐನ್ದ್ರಾಸ್ತ್ರ ಮೊದಲಾದ ಅಸ್ತ್ರಗಳ ಜೊತೆಗೆ ಬ್ರಹ್ಮಾಸ್ತ್ರವನ್ನೂ ಕೂಡಾ ಕರ್ಣ-ಅರ್ಜುನರು ಪರಸ್ಪರ ಪ್ರಯೋಗಿಸಿಕೊಂಡು ಗರ್ಜಿಸಿದರು ಮತ್ತು ಅಸ್ತ್ರಗಳ ಉಪಶಮನಮಾಡಿಕೊಂಡು ಎಲ್ಲರ ನಡುವೆ ಸಂಚರಿಸಿದರು ಕೂಡಾ.

 

ಕ್ರಮೇಣ ವೃದ್ಧೋರುಬಲೇನ ತತ್ರ ಸುರೇನ್ದ್ರಪುತ್ರೇಣ ವಿರೋಚನಾತ್ಮಜಃ ।

ನಿರಾಕೃತೋ ನಾಗಮಯಂ ಶರೋತ್ತಮಂ ಬ್ರಹ್ಮಾಸ್ತ್ರಯುಕ್ತಂ ವಿಸಸರ್ಜ್ಜ ವಾಸವೌ ॥೨೭.೧೮೨ ॥

 

ಆ ಯುದ್ಧದಲ್ಲಿ ಕ್ರಮೇಣವಾಗಿ ವೃದ್ಧಿಸಲ್ಪಟ್ಟ ಉತ್ಕೃಷ್ಟ ಬಲವುಳ್ಳ ಇಂದ್ರಪುತ್ರ ಅರ್ಜುನನನ್ನು ಎದುರಿಸುವುದು ಕಷ್ಟವಾದಾಗ ಕರ್ಣ ಬ್ರಹ್ಮಾಸ್ತ್ರದಿಂದ ಕೂಡಿದ ನಾಗಾತ್ಮಕವಾದ(ಖಾಂಡವವನ ದಹನದ ಸಮಯದಲ್ಲಿ ಅವಶಿಷ್ಟನಾದ ತಕ್ಷಕನ ಮಗ ಅಶ್ವಸೇನನಿಂದ ಕೂಡಿದ) ಶ್ರೇಷ್ಠ ಬಾಣವನ್ನು ಅರ್ಜುನನ ಮೇಲೆ ಪ್ರಯೋಗಿಸಿದನು.

 

ತಂ ವಾಸುದೇವೋ ರಥಮಾನಮಯ್ಯ ಮೋಘಂ ಚಕಾರಾರ್ಜ್ಜುನತಃ ಕಿರೀಟಮ್ ।

ಚೂರ್ಣ್ಣೀಕೃತಂ ತೇನ ಸುರೇನ್ದ್ರಸೂನೋರ್ದ್ದಿವ್ಯಂ ಯಯೌ ಬಾಣಗತಶ್ಚ ನಾಗಃ ॥೨೭.೧೮೩ ॥

 

ಆಗ ವಾಸುದೇವನು ರಥವನ್ನು ಬಗ್ಗಿಸಿ(ಭೂಮಿಯಲ್ಲಿ ಕುಸಿಯುವಂತೆ ಮಾಡಿ), ಅರ್ಜುನನ ವಿಷಯದಲ್ಲಿ ಆ ನಾಗಬಾಣವನ್ನು ವ್ಯರ್ಥವನ್ನಾಗಿ ಮಾಡಿದನು. ಆ ಬಾಣದಿಂದ ಅರ್ಜುನನ ಕಿರೀಟವು ಚೂರ್ಣೀಕೃತವಾಯಿತು ಮತ್ತು ಬಾಣದಲ್ಲಿದ್ದ ತಕ್ಷಕನ ಮಗ ಅಶ್ವಸೇನನು ಆಗಸದಲ್ಲಿ  (ಕರ್ಣನತ್ತ ಹಿಂತಿರುಗಲು) ಹೋದನು.

 

ನಮಿತೇ ವಾಸುದೇವೇನ ರಥೇ ಪಞ್ಚಾಙ್ಗುಲಂ ಭುವಿ ।

ಅಪಾಙ್ಗದೇಶಮುದ್ದಿಶ್ಯ ಮುಕ್ತೇ ನಾಗೇ ಕಿರೀಟಿನಃ ॥೨೭.೧೮೪ ॥

 

ಭಙ್ಕ್ತ್ವಾ ಕಿರೀಟಂ ವಿಯತಿ ಗಚ್ಛತಿ ಪ್ರಭುಣೋದಿತಃ ।

ಬಾಣೈಸ್ತಕ್ಷಕಪುತ್ರಂ ತಂ ವಾಸವಿಃ ಪೂರ್ವವೈರಿಣಮ್ ॥೨೭.೧೮೫ ॥

 

ಹತ್ವಾ ನಿಪಾತಯಾಮಾಸ ಭೂಮೌ ಕರ್ಣ್ಣಸ್ಯ ಪಶ್ಯತಃ ।

ಬ್ರಹ್ಮಾಸ್ತ್ರಸ್ಯಾತಿವೇಗಿತ್ವಂ ಪ್ರಾಪ್ತಂ ಕರ್ಣ್ಣೇನ ಭಾರ್ಗ್ಗವಾತ್ ॥೨೭.೧೮೬ ॥

 

ಅರ್ಜುನನ ಹಣೆಗೆ ಗುರಿಯಾಗಿ ಬಿಟ್ಟ ಆ ನಾಗಬಾಣವು, ಶ್ರೀಕೃಷ್ಣನಿಂದ ರಥವು ಭೂಮಿಯಲ್ಲಿ ಐದು ಅಂಗುಲ ಕುಸಿಯುವಂತೆ ಮಾಡಿದ್ದರಿಂದ ಅರ್ಜುನನ ಕಿರೀಟವನ್ನು ಛೇದಿಸಿ ಆಕಾಶದಲ್ಲಿ ಹೋಗುತ್ತಿರಲು, ಶ್ರೀಕೃಷ್ಣನಿಂದ ಹೇಳಲ್ಪಟ್ಟ ಅರ್ಜುನನು, ತಕ್ಷಕನ ಮಗನಾದ ಅಶ್ವಸೇನನನ್ನು, ಕರ್ಣ ನೋಡುತ್ತಿರುವಾಗಲೇ ಬಾಣದಿಂದ ಹೊಡೆದು ನೆಲಕ್ಕುರುಳಿಸಿದನು. ಪರಶುರಾಮನ ದೆಸೆಯಿಂದ ಕರ್ಣ ಪ್ರಯೋಗಿಸಿದ್ದ  ಆ ಬ್ರಹ್ಮಾಸ್ತ್ರಕ್ಕೆ ಅತಿವೇಗವಿತ್ತು.(ಹಾಗಾಗಿ ಕಿರೀಟವನ್ನು ಭಂಗ ಮಾಡುವ ಮೊದಲೇ ಅರ್ಜುನ ಅಸ್ತ್ರಪರಿಹಾರ ಮಾಡಲಾಗಲಿಲ್ಲ)

No comments:

Post a Comment