ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 15, 2019

Mahabharata Tatparya Nirnaya Kannada 12.64-12.68


ಪಿತೃಕ್ರಮಂ ಮೋಹನಾರ್ತ್ಥಂ ಸಮೇತಿ ನ ತಾವತಾ ಶುಕ್ಲತೋ ರಕ್ತತಶ್ಚ ।
ಜಾತೋsಸ್ಯ ದೇಹಸ್ತ್ವಿತಿ ದರ್ಶನಾಯ ಸಶಙ್ಖಚಕ್ರಾಬ್ಜಗದಃ ಸ ದೃಷ್ಟಃ ॥೧೨.೬೪॥

ಅನೇಕ ಸೂರ್ಯ್ಯಾಭಕಿರೀಟಯುಕ್ತೋ ವಿದ್ಯುತ್ಪ್ರಭೇ ಕುಣ್ಡಲೇ ಧಾರಯಂಶ್ಚ ।
ಪೀತಾಮ್ಬರೋ ವನಮಾಲೀ ಸ್ವನನ್ತಸೂರ್ಯ್ಯೋರುದೀಪ್ತಿರ್ದ್ದದೃಶೇ ಸುಖಾರ್ಣ್ಣವಃ ॥೧೨.೬೫॥

ತಂದೆ ಹಾಗು ತಾಯಿಯರಲ್ಲಿ ಪ್ರವೇಶ ಎಂಬ ಕ್ರಮವನ್ನು ದುರ್ಜನರ ಮೋಹಕ್ಕಾಗಿ ಭಗವಂತ ಹೊಂದುತ್ತಾನೆ. ಆದರೆ ರೇತಸ್ಸಿನಿಂದಾಗಲೀ ರಕ್ತದಿಂದಾಗಲೀ ತಾನು ಹುಟ್ಟಲಿಲ್ಲ ಎಂದು ತೋರಲೋಸುಗ ಶಂಖ-ಚಕ್ರ-ಪದ್ಮ-ಗದೆಯನ್ನು ಹಿಡಿದವನಾಗಿ ಆತ ಕಾಣಲ್ಪಟ್ಟನು.
ಅನೇಕ ಸೂರ್ಯರ ಕಾಂತಿಯನ್ನು ಬೀರುವ ಕಿರೀಟದಿಂದ ಕೂಡಿದವನಾಗಿ, ಮಿಂಚಿನ ಬಣ್ಣವುಳ್ಳ ಕುಂಡಲವನ್ನು ಹೊತ್ತವನಾಗಿ, ಹಳದಿ ಬಣ್ಣದ ಬಟ್ಟೆಯುಟ್ಟು, ವನಮಾಲೆಯನ್ನು ಧರಿಸಿ, ಅನಂತವಾಗಿರುವ ಸೂರ್ಯನಂತೆ ಕಾಂತಿಯುಳ್ಳವನಾಗಿ, ಸುಖಕ್ಕೆ ಕಡಲಾಗಿ ಭಗವಂತ ಕಾಣಲ್ಪಟ್ಟನು.

[ಭಾಗವತದಲ್ಲಿ(೧೦.೪.೧೦-೧೧) ಈ ಕುರಿತಾದ ಸುಂದರವಾದ ವಿವರಣೆಯನ್ನು ಕಾಣಬಹುದು: ‘ತಮದ್ಭುತಂ ಬಾಲಕಮಂಬುಜೇಕ್ಷಣಂ  ಚತುರ್ಭುಜಂ  ಶಙ್ಖಗದಾಧ್ಯುದಾಯುಧಮ್ ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಮ್ಬರಂ ಸಾಂದ್ರಪಯೋದಸೌಭಗಮ್ ಮಹಾರ್ಹವೈಡೂರ್ಯಕಿರೀಟಕುಂಡಲತ್ವಿಷಾ ಪರಿಷ್ವಕ್ತಸಹಸ್ರಕುಂತಳಮ್  ಉದ್ದಾಮಕಾಞ್ಚ್ಯಙ್ಗದಕಙ್ಗಣಾದಿಭಿರ್ವಿರೋಚಮಾನಂ ವಸುದೇವ ಐಕ್ಷತ’]

ಸ ಕಞ್ಜಯೋನಿಪ್ರಮುಖೈಃ ಸುರೈಃ ಸ್ತುತಃ ಪಿತ್ರಾ ಚ ಮಾತ್ರಾ ಚ ಜಗಾದ ಶೂರಜಮ್ ।
ನಯಸ್ವ ಮಾಂ ನನ್ದಗೃಹಾನಿತಿ ಸ್ಮ ತತೋ ಬಭೂವ ದ್ವಿಭುಜೋ ಜನಾರ್ದ್ದನಃ ॥೧೨.೬೬

ಹುಟ್ಟಿದಕೂಡಲೇ ಬ್ರಹ್ಮಾದಿ ದೇವತೆಗಳಿಂದಲೂ, ತಂದೆ-ತಾಯಿಯಿಂದಲೂ ಸ್ತೋತ್ರಮಾಡಲ್ಪಟ್ಟವನಾದ ಶ್ರೀಕೃಷ್ಣನು,  ವಸುದೇವನನ್ನು ಕುರಿತು: ‘ನನ್ನನ್ನು ನಂದಗೋಪನ ಮನೆಗೆ ಕೊಂಡೊಯ್ಯಿ’ ಎಂದು ಹೇಳಿದನು. ಹೀಗೆ ಹೇಳಿದ  ಜನಾರ್ದನನು ಎರಡು ಭುಜವುಳ್ಳವನಾದನು.
 
ತದೈವ ಜಾತಾ ಚ ಹರೇರನುಜ್ಞಯಾ ದುರ್ಗ್ಗಾಭಿಧಾ ಶ್ರೀರನು ನನ್ದಪತ್ನ್ಯಾಮ್ ।
ತತಸ್ತಮಾದಾಯ ಹರಿಂ ಯಯೌ ಸ ಶೂರಾತ್ಮಜೋ ನನ್ದಗೃಹಾನ್ ನಿಶೀಥೇ ॥೧೨.೬೭

ಇದೇ ಸಮಯದಲ್ಲಿ ಪರಮಾತ್ಮನ ಅನುಜ್ಞೆಯಿಂದ ದುರ್ಗೆ ಎಂಬ ಹೆಸರುಳ್ಳ ಲಕ್ಷ್ಮೀದೇವಿಯು ನಂದಗೋಪನ ಹೆಂಡತಿಯಾದ ಯಶೋದೆಯಲ್ಲಿ ಹುಟ್ಟಿದಳು. 
ಇತ್ತ ಮಗುವಿನ ರೂಪದಲ್ಲಿರುವ  ಶ್ರೀಹರಿಯನ್ನು ಹಿಡಿದುಕೊಂಡು ವಸುದೇವನು ನಂದಗೋಪನ ಮನೆಯನ್ನು ಕುರಿತು ಅರ್ಧರಾತ್ರಿಯಲ್ಲಿ ತೆರಳಿದನು.

ಸಂಸ್ಥಾಪ್ಯ ತಂ ತತ್ರ ತಥೈವ ಕನ್ಯಕಾಮಾದಾಯ ತಸ್ಮಾತ್ ಸ್ವಗೃಹಂ ಪುನರ್ಯ್ಯಯೌ
ಹತ್ವಾ ಸ್ವಸುರ್ಗ್ಗರ್ಭಷಟ್ಕಂ ಕ್ರಮೇಣ ಮತ್ವಾsಷ್ಟಮಂ ತತ್ರ ಜಗಾಮ ಕಂಸಃ ॥೧೨.೬೮

ಶ್ರೀಕೃಷ್ಣನನ್ನು ನಂದಗೋಪನ ಮನೆಯಲ್ಲಿ ಇಟ್ಟ ವಸುದೇವನು, ಅಲ್ಲಿ ಕನ್ನಿಕೆಯ ರೂಪದಲ್ಲಿದ್ದ ದುರ್ಗಾದೇವಿಯನ್ನು ಹಿಡಿದುಕೊಂಡು ಹಿಂತಿರುಗಿ ಬಂದನು.
ಇತ್ತ ತಂಗಿ ದೇವಕಿಯ  ಆರು ಮಕ್ಕಳನ್ನು ಕ್ರಮವಾಗಿ  ಕೊಂದಿದ್ದ ಕಂಸನು, ಎಂಟನೆಯದು ಹುಟ್ಟಿದೆ ಎಂದು ತಿಳಿದು, ದೇವಕಿ ಇರುವಲ್ಲಿಗೆ  ಧಾವಿಸಿ ಬಂದನು.

No comments:

Post a Comment