ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 7, 2019

Mahabharata Tatparya Nirnaya Kannada 1351_1354


    ತತ್ರಾಥ ಕೃಷ್ಣಮವದನ್ ಸಬಲಂ ವಯಸ್ಯಾಃ ಪಕ್ವಾನಿ ತಾಲಸುಫಲಾನ್ಯನುಭೋಜಯೇತಿ ।
     ಇತ್ಯರ್ತ್ಥಿತಃ ಸಬಲ ಆಪ ಸ ತಾಲವೃನ್ದಂ ಗೋಪೈರ್ದ್ದುರಾಸದಮತೀವ ಹಿ ಧೇನುಕೇನ೧೩.೫೧

‘ಹಣ್ಣಾಗಿರುವ ತಾಳೆಮರದ ಒಳ್ಳೆಯ ಫಲಗಳನ್ನು ನಮಗೆ ಉಣ್ಣಿಸು’ ಎಂದು ಗೆಳೆಯರಿಂದ  ಬೇಡಲ್ಪಟ್ಟ ಶ್ರೀಕೃಷ್ಣನು, ಬಲರಾಮನಿಂದ ಕೂಡಿಕೊಂಡು, ಧೇನುಕನ ಕಾರಣದಿಂದಾಗಿ ಗೋಪಾಲಕರಿಂದ ಹೊಂದಲು ಅಸಾಧ್ಯವಾದ  ತಾಳೆಮರಗಳ ಸಮೂಹವನ್ನು ಹೊಂದಿದನು.

 ವಿಘ್ನೇಶತೋ ವರಮವಾಪ್ಯ ಸ ದೃಷ್ಟದೈತ್ಯೋ ದೀರ್ಘಾಯುರುತ್ತಮಬಲಃ ಕದನಪ್ರಿಯೋsಭೂತ್ ।
 ನಿತ್ಯೋದ್ಧತಃ ಸ ಉತ ರಾಮಮವೇಕ್ಷ್ಯ ತಾಲವೃನ್ತಾತ್ ಫಲಾನಿ ಗಳಯನ್ತಮಥಾಭ್ಯಧಾವತ್ ।
 ತಸ್ಯ ಪ್ರಹಾರಮಭಿಕಾಙ್ಕ್ಷತ ಆಶು ಪೃಷ್ಠಪಾದೌ ಪ್ರಗೃಹ್ಯ ತೃಣರಾಜಶಿರೋsಹರತ್ ಸಃ ॥೧೩.೫೨

ಆ ಧೇನುಕನೆಂಬ ದೈತ್ಯನು ಗಣಪತಿಯಿಂದ ವರವನ್ನು ಹೊಂದಿ, ಧೀರ್ಘವಾದ ಆಯುಷ್ಯವುಳ್ಳವನಾಗಿಯೂ, ಉತ್ಕೃಷ್ಟವಾದ ಬಲವುಳ್ಳವನಾಗಿಯೂ, ಯುದ್ಧಪ್ರಿಯನೂ ಆಗಿದ್ದನು. ಯಾವಾಗಲೂ ಉದ್ಧತನಾಗಿದ್ದ ಅವನು ತಾಳೆಮರದಿಂದ ಹಣ್ಣುಗಳನ್ನು ಕೆಳಗೆ ಬೀಳಿಸುತ್ತಿರುವ ಬಲರಾಮನನ್ನು ಕಂಡು  ಅಲ್ಲಿಗೆ ಓಡಿಬಂದನು.  ಬಲರಾಮನಿಗೆ ಒದೆಯಬೇಕು ಎಂದು ಇಚ್ಛಿಸುತ್ತಿರುವ  ಆ ಧೇನುಕನ ಹಿಂಗಾಲನ್ನು ಹಿಡಿದ ಶ್ರೀಕೃಷ್ಣನು, ಅವನನ್ನು ಎತ್ತಿ ಮೇಲಕ್ಕೆಸೆದನು. ಅದರಿಂದ ಧೇನುಕನ ಕತ್ತೆಯರೂಪದ ತಲೆ ಕತ್ತರಿಸಲ್ಪಟ್ಟಿತು.

   ತಸ್ಮಿನ್ ಹತೇ ಖರತರೇ ಖರರೂಪದೈತ್ಯೇ ಸರ್ವೇ ಖರಾಶ್ಚ ಖರತಾಲವನಾನ್ತರಸ್ಥಾಃ ।
   ಪ್ರಾಪುಃ ಖರಸ್ವರತರಾ ಖರರಾಕ್ಷಸಾರಿಂ ಕೃಷ್ಣಂ ಬಲೇನ ಸಹಿತಂ ನಿಹತಾಶ್ಚ ತೇನ ॥೧೩.೫೩॥

ಅತ್ಯಂತ ಭಯಂಕರವಾದ  ಕತ್ತೆಯ ರೂಪದಲ್ಲಿದ್ದ ದೈತ್ಯನು ಕೊಲ್ಲಲ್ಪಡುತ್ತಿರಲು, ಆ ತೋಪಿನಲ್ಲಿರುವ ಎಲ್ಲಾ ಕತ್ತೆಗಳೂ ಕೂಡಾ (ಕತ್ತೆಯ ರೂಪದ ದೈತ್ಯರು) ಕೆಟ್ಟದ್ದಾಗಿ ಕಿರುಚುತ್ತಾ, ರಾಕ್ಷಸರ ಶತ್ರುವಾಗಿರುವ ಬಲರಾಮನಿಂದ ಕೂಡಿಕೊಂಡ ಕೃಷ್ಣನನ್ನು ಹೊಂದಿದರು ಮತ್ತು ಶ್ರೀಕೃಷ್ಣನಿಂದ ಸಂಹರಿಸಲ್ಪಟ್ಟರೂ ಕೂಡಾ.

ಸರ್ವಾನ್ ನಿಹತ್ಯ ಖರರೂಪಧರಾನ್ ಸ ದೈತ್ಯಾನ್ ವಿಘ್ನೇಶ್ವರಸ್ಯ ವರತೋsನ್ಯಜನೈರವದ್ಧ್ಯಾನ್ ।
ಪಕ್ವಾನಿ ತಾಲಸುಫಲಾನಿ ನಿಜೇಷು ಚಾದಾದ್ ದುರ್ವಾರಪೌರುಷಗುಣೋದ್ಭರಿತೋ ರಮೇಶಃ॥೧೩.೫೪॥

ಕತ್ತೆಯ ರೂಪ ಧರಿಸಿರುವ, ಗಣಪತಿಯ ವರದಿಂದ ಉಳಿದವರಿಂದ ಕೊಲ್ಲಲಾಗದ ಎಲ್ಲಾ ದೈತ್ಯರನ್ನು ಕೊಂದು, ಯಾರೂ ತಡೆಯಲಾಗದ ಬಲವೆಂಬ ಗುಣದಿಂದ ಕೂಡಿರುವ ಕೃಷ್ಣನು, ಹಣ್ಣಾಗಿರುವ ತಾಳೆಮರದ ಫಲಗಳನ್ನು ತನ್ನವರೆಲ್ಲರಿಗೆ ಕೊಟ್ಟನು.

No comments:

Post a Comment