ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 18, 2019

Mahabharata Tatparya Nirnaya Kannada 1362_1366


ಕೃಷ್ಣೋsಥ ವೀಕ್ಷ್ಯ ಪುರುಹೂತಮಹಪ್ರಯತ್ನಂ ಗೋಪಾನ್ ನ್ಯವಾರಯದವಿಸ್ಮರಣಾಯ ತಸ್ಯ ।
ಮಾ ಮಾನುಷೋsಯಮಿತಿ ಮಾಮವಗಚ್ಛತಾಂ ಸ ಇತ್ಯವ್ಯಯೋsಸ್ಯ ವಿದಧೇ ಮಹಭಙ್ಗಮೀಶಃ ೧೩.೬೨

ತದನಂತರ ಕೃಷ್ಣನು ಇಂದ್ರನ ಪೂಜೆಗಾಗಿ ಗೊಲ್ಲರ ಸಿದ್ಧತೆಯನ್ನು (ಜಾತ್ರೆಯ ಪ್ರಯತ್ನವನ್ನು) ಕಂಡು, ‘ಆ ಇಂದ್ರನಿಗೆ ನನ್ನ ಮರೆವು ಇರಬಾರದು’ ಎನ್ನುವುದಕ್ಕಾಗಿ ಅವರನ್ನು ತಡೆದನು. ಹೀಗೆ ಇಂದ್ರನ ಪೂಜೆಯನ್ನು ತಡೆಯಲು ಕಾರಣವೇನು ಎಂದು ವಿವರಿಸುತ್ತಾ ಹೇಳುತ್ತಾರೆ: ‘ಆ ಇಂದ್ರನು ನನ್ನನ್ನು ಮನುಷ್ಯ ಎಂದು ತಿಳಿಯದಿರಲಿ ಎಂದು ಅವ್ಯಯನೂ, ಸರ್ವಸಮರ್ಥನೂ ಆದ ಶ್ರೀಕೃಷ್ಣನು ಜಾತ್ರೆಯ ಭಂಗವನ್ನು ಮಾಡಿದನು’ ಎಂದು. 

ಗೋಪಾಂಶ್ಚ ತಾನ್ ಗಿರಿಮಹೋsಸ್ಮದುರುಸ್ವಧರ್ಮ್ಮ ಇತ್ಯುಕ್ತಿಸಚ್ಛಲತ ಆತ್ಮಮಹೇsವತಾರ್ಯ್ಯ ।
ಭೂತ್ವಾsತಿವಿಸ್ತೃತತನುರ್ಬುಭುಜೇ ಬಲಿಂ ಸ ನಾನಾವಿಧಾನ್ನರಸಪಾನಗುಣೈಃ ಸಹೈವ ॥೧೩.೬೩॥

ಆ ಗೋಪಾಲಕರನ್ನು ‘ಪರ್ವತವನ್ನು ಕುರಿತು ಮಾಡಬೇಕಾದ ಪೂಜೆಯೇ ನಮ್ಮ ಧರ್ಮವಾಗಿದೆ’ ಎಂದು ತನ್ನ ಮಾತಿನ ಮೋಡಿಯಿಂದ ಒಪ್ಪಿಸಿ, ಅವರನ್ನು ಆ ಕುರಿತಾದ ಜಾತ್ರೆಯಲ್ಲಿ ಇರಿಸಿ, ತಾನೇ ಗೋವರ್ಧನ ಪರ್ವತದಲ್ಲಿ  ವಿಸ್ತಾರವಾದ ದೇಹವುಳ್ಳವನಾಗಿ, ತರತರನಾಗಿರುವ ಅನ್ನ, ರಸ, ಪಾನೀಯ, ಮೊದಲಾದವುಗಳಿಂದ ಕೂಡಿಕೊಂಡ ಆಹಾರವನ್ನು ಶ್ರೀಕೃಷ್ಣ  ಸ್ವೀಕರಿಸಿದನು.
[ಶೈಲೋsಸ್ಮೀತಿ ಬ್ರುವನ್ ಭೂರಿಬಲಿಮಾದದ್ ಬೃಹದ್ವಪುಃ’ (ಭಾಗವತ: ೧೦.೨೨.೩೫)  ‘ನಾನೇ ಶೈಲನಾಗಿದ್ದೇನೆ’ ಎಂದು ಹೇಳುತ್ತಾ, ಪೂಜೆಯನ್ನು ಮತ್ತು ಅರ್ಪಿಸಿದ ಭಕ್ಷ್ಯ-ಭೋಜ್ಯಗಳನ್ನು ಸಾಕ್ಷಾತ್ ಸ್ವೀಕರಿಸಿದನು. ‘ಗಿರಿಮೂರ್ಧನಿ ಕೃಷ್ಣೋsಪಿ ಶೈಲೋsಹಮಿತಿ ಮೂರ್ತಿಮಾನ್ ಬುಭುಜೇsನ್ನಂ ಬಹುತರಂ  ಗೋಪವರ್ಯಾಹೃತಂ ದ್ವಿಜ’ (ವಿಷ್ಣುಪುರಾಣ-೫.೧೦.೪೭).  ಗೊಪವರ್ಯರಿಂದ ಆಹೃತವಾದ(ತರಲ್ಪಟ್ಟ) ಅನ್ನವನ್ನು ತಿಂದನು.  ಭುಕ್ತ್ವಾ ಚಾವಭೃಥೇ ಕೃಷ್ಣಃ ಪಯಃ ಪೀತ್ವಾ ಚ ಕಾಮತಃ ಸಂತೃಪ್ತೋsಸ್ಮೀತಿ ದಿವ್ಯೇನ ರೂಪೇಣ ಪ್ರಜಹಾಸ ವೈ ತಂ ಗೋಪಾಃ ಪರ್ವತಾಕಾರಂ ದಿವ್ಯಸ್ರಗನುಲೇಪನಮ್ ಗಿರಿಮೂರ್ಧ್ನಿ  ಸ್ಥಿತಂ ದೃಷ್ಟ್ವಾ ಕೃಷ್ಣಂ ಜಗ್ಮುಃ ಪ್ರಧಾನತಃ ಭಗವಾನಪಿ  ತೇನೈವ ರೂಪೇಣಾsಚ್ಛಾದಿತಃ ಪ್ರಭುಃ ಸಹಿತಃ ಪ್ರಣತೋ ಗೋಪೈರ್ನನಂದಾsತ್ಮಾನಮಾತ್ಮನಾ’ (ವಿಷ್ಣುಪರ್ವ ಹರಿವಂಶ ೧೭.೨೩-೨೪).  ಎಲ್ಲವನ್ನೂ ತಿಂದ ಕೃಷ್ಣನು, ಸಾಕಷ್ಟು ಹಾಲನ್ನು ಕುಡಿದು, ಸಂತೃಪ್ತನಾಗಿದ್ದೇನೆ ಎಂದು, ತನ್ನ ದಿವ್ಯವಾದ ರೂಪವನ್ನು ತಳೆದು ನಕ್ಕನು. ಪರ್ವತದ ಆಕಾರದಲ್ಲಿರುವ, ಅಲೌಕಿಕವಾದ ಹಾರ, ಗಂಧ ಮೊದಲಾದವುಗಳನ್ನು ಧರಿಸಿರುವ, ಬೆಟ್ಟದ ಮೇಲೆ ನಿಂತವನನ್ನು ಗೋಪಕರು ಕೃಷ್ಣಾ ಎಂದು ತಿಳಿದರು. ಪರಮಾತ್ಮನೂ ಕೂಡಾ ಆ ಬೆಟ್ಟದ ರೂಪದಲ್ಲಿಯೇ ಇದ್ದು, ತನ್ನನ್ನು ಮುಚ್ಚಿಕೊಂಡು ಎಲ್ಲಾ ಗೋಪರಿಂದ ನಮಸ್ಕೃತನಾದನು.

ಇನ್ದ್ರೋsಥ ವಿಸ್ಮೃತರಥಾಙ್ಗಧರಾವತಾರೋ ಮೇಘಾನ್ ಸಮಾದಿಶದುರೂದಕಪೂಗವೃಷ್ಟ್ಯೈ।
ತೇ ಪ್ರೇರಿತಾಃ ಸಕಲಗೋಕುಲನಾಶನಾಯ ಧಾರಾ ವಿತೇರುರುರುನಾಗಕರಪ್ರಕಾರಾಃ              ॥೧೩.೬೪

ತದನಂತರ, ಚಕ್ರಧರನಾದ ಕೃಷ್ಣ, ವಿಷ್ಣುವಿನ ಅವತಾರ ಎಂಬುವುದನ್ನು ಮರೆತ ಇಂದ್ರನು, ಧಾರಾಕಾರವಾದ ಮಳೆ ಬರಿಸುವಂತೆ ಮೋಡಗಳಿಗೆ ಆಜ್ಞಾಪಿಸಿದನು. ಸಮಸ್ತ ಗೋಕುಲ ಗ್ರಾಮದ ನಾಶಕ್ಕಾಗಿ ಪ್ರೇರೇಪಿಸಲ್ಪಟ್ಟ ಆ ಮೇಘಗಳು ದೊಡ್ಡ ಆನೆಯ ಸೊಂಡಿಲಿನಂತೆ ದಪ್ಪವಾಗಿರುವ ಹನಿಗಳುಳ್ಳ ಮಳೆ ಬೀಳಿಸಿದವು.

ತಾಭಿರ್ನ್ನಿಪೀಡಿತಮುದೀಕ್ಷ್ಯ ಸ ಕಞ್ಜನಾಭಃ ಸರ್ವಂ ವ್ರಜಂ ಗಿರಿವರಂ ಪ್ರಸಭಂ ದಧಾರ ।
ವಾಮೇನ ಕಞ್ಜದಲಕೋಮಳಪಾಣಿನೈವ ತತ್ರಾಖಿಲಾಃ ಪ್ರವಿವಿಶುಃ ಪಶುಪಾಃ ಸ್ವಗೋಭಿಃ       ॥೧೩.೬೫

ಆ ಉದಕಧಾರೆಗಳಿಂದ ಪೀಡಿತರಾದ ಎಲ್ಲಾ ಗೋಕುಲವಾಸಿಗಳನ್ನು ನೋಡಿದ ಪದ್ಮನಾಭನು, ತಾವರೆಯ ಎಲೆಯಂತೆ ಮೃದುವಾಗಿರುವ ತನ್ನ ಎಡಗೈಯಿಂದ, ಶ್ರೇಷ್ಠವಾದ ಆ ಗೋವರ್ಧನವನ್ನು ರಭಸದಿಂದ ಎತ್ತಿ ಹಿಡಿದನು. ಹೀಗೆ ಎತ್ತಿ ಹಿಡಿದ ಗೋವರ್ಧನ ಪರ್ವತದ ಕೆಳಗೆ ಎಲ್ಲಾ ಗೋಪಾಲಕರು ತಮ್ಮ ಗೋವುಗಳಿಂದ ಕೂಡಿಕೊಂಡು ಪ್ರವೇಶಿಸಿದರು.

ವೃಷ್ಟ್ವೋರುವಾರ್ಯ್ಯಥ ನಿರನ್ತರಸಪ್ತರಾತ್ರಂ ತ್ರಾತಂ ಸಮೀಕ್ಷ್ಯ ಹರಿಣಾ ವ್ರಜಮಶ್ರಮೇಣ ।
ಶಕ್ರೋsನುಸಂಸ್ಮೃತಸುರಪ್ರವರಾವತಾರಃ ಪಾದಾಮ್ಬುಜಂ ಯದುಪತೇಃ ಶರಣಂ ಜಗಾಮ ॥೧೩.೬೬॥

ಹೀಗೆ ನಿರಂತರ ಏಳುದಿನಗಳ ಕಾಲ ಎಡಬಿಡದೇ, ಉತ್ಕೃಷ್ಟವಾದ ಮಳೆಯನ್ನು ಸುರಿಸಿಯೂ, ಯಾವುದೇ ಶ್ರಮವಿಲ್ಲದೇ, ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟ ನಂದಗೋಕುಲವನ್ನು ಕಂಡು, ಇದು ನಾರಾಯಣನೇ ಎಂದು ತಿಳಿದ ಇಂದ್ರನು ಕೃಷ್ಣನ ಪಾದಕಮಲದಲ್ಲಿ ಶರಣುಹೊಂದಿದನು.

No comments:

Post a Comment