ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 15, 2019

Mahabharata Tatparya Nirnaya Kannada 1358_1361


ಕೃಷ್ಣಂ ಕದಾಚಿದತಿದೂರಗತಂ ವಯಸ್ಯಾ ಊಚುಃ ಕ್ಷುಧಾsರ್ದ್ದಿತತರಾ ವಯಮಿತ್ಯುದಾರಮ್ ।
ಸೋsಪ್ಯಾಹ ಸತ್ರಮಿಹ ವಿಪ್ರಗಣಾಶ್ಚರನ್ತಿ ತಾನ್ ಯಾಚತೇತಿ ಪರಿಪೂರ್ಣ್ಣಸಮಸ್ತಕಾಮಃ ೧೩.೫೮॥

ಒಮ್ಮೆ ಬಹಳ ದೂರ ಪ್ರಯಾಣಮಾಡಿದ ಗೋಪಾಲಕರು  ಕೃಷ್ಣನನ್ನು ಕುರಿತು ‘ನಾವು ಹಸಿವಿನಿಂದ ಬಹಳ ಸಂಕಟಪಟ್ಟಿದ್ದೇವೆ’ ಎಂದು ಹೇಳುತ್ತಾರೆ. ಆಗ ‘ಇದೇ ಪರಿಸರದಲ್ಲಿ ಬ್ರಾಹ್ಮಣ ಸಮೂಹವು ಯಾಗವನ್ನು ಮಾಡುತ್ತಿದ್ದಾರೆ. ಅವರನ್ನು ಕುರಿತು ಬೇಡಿರಿ’ ಎಂದು ಪರಿಪೂರ್ಣಸಮಸ್ತಕಾಮನಾದ  ಶ್ರೀಕೃಷ್ಣನು ಉತ್ತರಿಸುತ್ತಾನೆ.

ತಾನ್ ಪ್ರಾಪ್ಯ ಕಾಮಮನವಾಪ್ಯ ಪುನಶ್ಚ ಗೋಪಾಃ ಕೃಷ್ಣಂ ಸಮಾಪುರಥ ತಾನವದತ್ ಸ ದೇವಃ ।
ಪತ್ನೀಃ ಸಮರ್ತ್ಥಯತ ಮದ್ವಚನಾದಿತಿ ಸ್ಮ ಚಕ್ರುಶ್ಚ ತೇ ತದಪಿ ತಾ ಭಗವನ್ತಮಾಪುಃ ೧೩.೫೯

ಶ್ರೀಕೃಷ್ಣನು ಹೇಳಿದ ಬ್ರಾಹ್ಮಣ ಸಮೂಹವನ್ನು ಹೊಂದಿ, ತಮ್ಮ  ಬಯಕೆಯನ್ನು ಈಡೇರಿಸಿಕೊಳ್ಳಲಾಗದೇ, ಮತ್ತೆ ಗೋಪಾಲಕರು ಕೃಷ್ಣನಿದ್ದಲ್ಲಿಗೆ ಬರುತ್ತಾರೆ. ಆಗ ಕ್ರೀಡಾದಿಗುಣವಿಶಿಷ್ಟನಾದ ಶ್ರೀಕೃಷ್ಣನು ಅವರನ್ನು ಕುರಿತು ‘ನನ್ನ ಮಾತಿನ ಮೂಲಕ ಅವರ ಹೆಂಡಿರನ್ನು ಬೇಡಿರಿ’ ಎಂದು ಹೇಳುತ್ತಾನೆ. ಆ ಗೋಪಾಲಕರು ಹಾಗೆಯೇ ಮಾಡುತ್ತಾರೆ.  ಆಗ ಆ  ಬ್ರಾಹ್ಮಣ ಸ್ತ್ರೀಯರೆಲ್ಲರೂ ಪರಮಾತ್ಮನ ಬಳಿ ಬರುತ್ತಾರೆ.

ತಾಃ ಷಡ್ವಿಧಾನ್ನಪರಿಪೂರ್ಣ್ಣಕರಾಃ ಸಮೇತಾಃ ಪ್ರಾಪ್ತಾ ವಿಸೃಜ್ಯ ಪತಿಪುತ್ರಸಮಸ್ತಬನ್ಧೂನ್ ।
ಆತ್ಮಾರ್ಚ್ಚನೈಕಪರಮಾ ವಿಸಸರ್ಜ್ಜ ಕೃಷ್ಣ ಏಕಾ ಪತಿಪ್ರವಿಧುತಾ ಪದಮಾಪ ವಿಷ್ಣೋಃ ॥೧೩.೬೦

ಆ ಸ್ತ್ರೀಯರೆಲ್ಲರೂ ಕೂಡಾ, ಆರು ತರಹದ ರಸವುಳ್ಳ ಅನ್ನದಿಂದ ಪರಿಪೂರ್ಣವಾದ  ಕೈಗಳುಳ್ಳವರಾಗಿ, ಎಲ್ಲಾ ಬಂಧುಗಳನ್ನೂ ಬಿಟ್ಟು, ಕೇವಲ ಶ್ರೀಕೃಷ್ಣನ ಅರ್ಚನೆ ಮಾಡುವುದನ್ನೇ ಶ್ರೇಷ್ಠ ಎಂದು ಭಾವಿಸಿದವರಾಗಿದ್ದರು. ಬಂದಿರುವ ಅವರನ್ನು ಶ್ರೀಕೃಷ್ಣ ಬೀಳ್ಕೊಡುತ್ತಾನೆ. ಅವರಲ್ಲಿ ಒಬ್ಬಾಕೆ ಗಂಡನಿಂದ ತಡೆಯಲ್ಪಟ್ಟವಳಾಗಿ ನಾರಾಯಣಪದವನ್ನು ಹೊಂದಿದಳು. (ಆಕೆ ದೇವರನ್ನೇ ಉತ್ಕಟವಾಗಿ ನೆನೆಯುತ್ತಾ ಪ್ರಾಣ ಬಿಟ್ಟು ಭಗವಂತನನ್ನು ಸೇರಿದಳು)
[ ಈ ಕುರಿತಾದ ವಿವರ ಭಾಗವತದಲ್ಲಿ ಕಾಣಸಿಗುತ್ತದೆ(೧೦.೨೧.೩೪): ತತ್ರೈಕಾ ವಿಧುತಾ ಭರ್ತ್ರಾ ಭಗವಂತಂ ಯಥಾಶ್ರುತಮ್  ಹೃದೋಪಗುಹ್ಯ ವಿಜಹೌ ದೇಹಂ ಕರ್ಮಾನುಬಂಧನಮ್’  ಆ ಸ್ತ್ರೀಯರಲ್ಲಿ ಒಬ್ಬಾಕೆಯನ್ನು ಆಕೆಯ ಪತಿ ಬಲವಂತವಾಗಿ ತಡೆದನು. ಆಗ ಆಕೆ ಮನಸ್ಸಿನಿಂದಲೇ ಭಗವಂತನನ್ನು ಆಲಂಗಿಸಿ ತನ್ನ ದೇಹವನ್ನು ತ್ಯಾಗಮಾಡಿದಳು].

ಭುಕ್ತ್ವಾsಥ ಗೋಪಸಹಿತೋ ಭಗವಾಂಸ್ತದನ್ನಂ ರೇಮೇ ಚ ಗೋಕುಲಮವಾಪ್ಯ ಸಮಸ್ತನಾಥಃ
ಆಜ್ಞಾತಿಲಙ್ಘನಕೃತೇಃ ಸ್ವಕೃತಾಪರಾಧಾತ್ ಪಶ್ಚಾತ್ ಸುತಪ್ತಮನಸೋsಪ್ಯಭವನ್ ಸ್ಮ ವಿಪ್ರಾಃ ॥೧೩.೬೧॥

ತದನಂತರ, ಗೋಪರಿಂದ ಕೂಡಿಕೊಂಡ ಶ್ರೀಕೃಷ್ಣನು, ಅವರು ತಂದಿರುವ ಭಕ್ಷ್ಯವೆಲ್ಲವನ್ನೂ ಸ್ವೀಕರಿಸಿದನು.  ಸಮಸ್ತಲೋಕಗಳ ಒಡೆಯನಾದ  ಶ್ರೀಕೃಷ್ಣನು ಗೋಕುಲವನ್ನು ಹೊಂದಿ ಕ್ರೀಡಿಸುತ್ತಿದ್ದನು.
ಇತ್ತ ಗೋಪಾಲಕರಿಗೆ ಆಹಾರ ನಿರಾಕರಿಸಿದ್ದ  ಬ್ರಾಹ್ಮಣರು  ‘ ಭಗವಂತನ  ಆಜ್ಞೆಯನ್ನು ನಾವು ಮೀರಿದೆವು, ಇದು ನಾವು ಮಾಡಿದ ಅಪರಾದ’ ಎಂದು ಪಶ್ಚಾತ್ತಾಪದಿಂದ ಬೆಂದ ಮನಸ್ಸುಳ್ಳವರಾದರು.

No comments:

Post a Comment