ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 23, 2021

Mahabharata Tatparya Nirnaya Kannada 21: 55-59

 

ತತಃ ಕದಾಚಿತ್ ಪ್ರವರೇ ಸಭಾತಳೇ ಧರ್ಮ್ಮಾತ್ಮಜೋ ರಾಜಭಿರ್ಭ್ರಾತೃಭಿಶ್ಚ ।

ವೃತೋ ನಿಶಮ್ಯೈವ ಸಭಾಃ ಸುರಾಣಾಂ ಯಥಾ ಸ್ಥಿತಾ ನಾರದಮನ್ವಪೃಚ್ಛತ್ ೨೧.೫೫

 

ತದನಂತರ ಒಮ್ಮೆ ಮಯ ನಿರ್ಮಿತವಾದ ಶ್ರೇಷ್ಠವಾದ ಸಭಾತಳದಲ್ಲಿ, ರಾಜರಿಂದಲೂ ಅಣ್ಣತಮ್ಮಂದಿರರಿಂದಲೂ ಕೂಡಿದ ಧರ್ಮರಾಜನು ದೇವತೆಗಳ ಸಭೆಯ ಬಗ್ಗೆ ಕೇಳಿ, ನಾರದರನ್ನು ಕುರಿತು ಪ್ರಶ್ನೆ ಮಾಡಿದನು.

[ಈ ಕಥಾ ಭಾಗವನ್ನು ನಾವು ಮಹಾಭಾರತದಲ್ಲಿ ಕಾಣಬಹುದು. ಮಯ ನಿರ್ಮಿಸಿದ ಈ ಸಭೆಯೇ ಅದ್ಭುತವೋ ಅಥವಾ ಜಗತ್ತಿನಲ್ಲಿ ಇಂತಹ ಸಭೆ ಇನ್ನೂ ಇದೆಯೋ ಎಂದು ಧರ್ಮರಾಜ ನಾರದರನ್ನು ಕೇಳುತ್ತಾನೆ. ಆಗ ನಾರದರು ಎಲ್ಲಾ ದೇವತೆಗಳ ಸಭೆಯನ್ನು ಕುರಿತು ವಿವರಿಸುತ್ತಾರೆ. ದೇವತೆಗಳ ಸಭೆಯ ಕುರಿತು ನಾರದರಿಂದ ತಿಳಿದ ಧರ್ಮರಾಜ ಮತ್ತೆ ಪ್ರಶ್ನೆ ಮಾಡುತ್ತಾನೆ. ಮೂಲ ಭಾರತದಲ್ಲಿ ಧರ್ಮರಾಜನ ಪ್ರಶ್ನೆ ಸಂಕ್ಷಿಪ್ತವಾಗಿದ್ದರೆ ಇಲ್ಲಿ ಅದನ್ನು ಆಚಾರ್ಯರು ವಿಸ್ತಾರವಾಗಿ ಹೇಳಿದ್ದಾರೆ. ಬೇರೆ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಧರ್ಮರಾಜನ ಗ್ರಹಿಕೆಯನ್ನೂ ವ್ಯಾಖ್ಯಾನ ಮಾಡಿ, ಅದನ್ನು ಧರ್ಮರಾಜನ ಮಾತಿನಲ್ಲಿ ಆಚಾರ್ಯರು ಇಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು]

 

ಅನ್ತರಿಕ್ಷಂ ತ್ವಯಾ ಪ್ರೋಕ್ತಂ ಲಕ್ಷಯೋಜನಮುಚ್ಛ್ರಿತಮ್ ।

ಅರ್ದ್ಧಕೋಟ್ಯುಚ್ಛ್ರಿತಃ ಸ್ವರ್ಗ್ಗೋ ವಿಮಾನಾವಲಿಸಙ್ಕುಲಃ ೨೧.೫೬

 

ನಾರದರೇ, ನಿಮ್ಮಿಂದ ಅಂತರಿಕ್ಷವು ಭೂಮಿಯಿಂದ ಲಕ್ಷ ಯೋಜನ ಎತ್ತರದಲ್ಲಿದೆ ಎಂದು ಹೇಳಲ್ಪಟ್ಟಿತು. ನಂತರ ಸ್ವರ್ಗವು ಐವತ್ತು ಲಕ್ಷ ಯೋಜನ ವಿಸ್ತಾರ  ಎಂದು ನಿಮ್ಮಿಂದ ನಾನು ತಿಳಿದಿದ್ದೇನೆ. ಅಲ್ಲಿ ವಿಮಾನಗಳ ಸಾಲು ಸಾಲೇ ಇದೆಯೆಂದು ನಾವು ಕೇಳಿದ್ದೇವೆ.

[ಅಂದರೆ ಭೂಮೇರು ಊರ್ಧ್ವ- ಲಕ್ಷ ಯೋಜನ ಪರ್ಯಂತ  ಅಂತರಿಕ್ಷಲೋಕ. ಅನಂತರ ಅರ್ಧ ಕೋಟಿ ಯೋಜನ ಸ್ವರ್ಗಲೋಕ. ಒಟ್ಟು ೫೧,೦೦೦೦೦ ಯೋಜನ ವಿಸ್ತಾರ]

  

ಭುವಃ ಸ್ವರ್ಗ್ಗಶ್ಚ ಕೋಟ್ಯೈವ ಯೋಜನಾನಾಂ ಪ್ರವಿಸ್ತೃತೌ ।

ಮಹರ್ಜ್ಜನಸ್ತಪಶ್ಚೈವ ಕ್ರಮಾದದ್ಧ್ಯರ್ದ್ಧಯೋಜನಾಃ ೨೧.೫೭

 

ಭುವಃಲೋಕ ಮತ್ತು ಸ್ವರ್ಗಲೋಕ ಒಂದು ಕೋಟಿ ಯೋಜನ ವಿಸ್ತಾರವಾಗಿದೆ ಎಂದು ಹೇಳಲಾಗಿದೆ.  ಮಹರ್ಲೋಕ, ಜನಲೋಕ, ತಪೋಲೋಕ ಇವುಗಳೂ ಕೂಡಾ ಕ್ರಮವಾಗಿ ಅರ್ಧಕ್ಕಿಂತ ಮಿಗಿಲು (ಒಂದೂವರೆಪಟ್ಟು) ಹೆಚ್ಚುಹೆಚ್ಚು ಪರಿಮಾಣವನ್ನು ಹೊಂದಿವೆ.

 

ಪಞ್ಚಾಶತ್ಕೋಟಿವಿಸ್ತಾರಾ ಯೋಜನಾನಾಂ ಸಮಸ್ತಶಃ

ಯಾವನ್ತ ಏತೇ ಮಿಳಿತಾಸ್ತತ್ಪ್ರಮಾಣ ಉದೀರಿತಃ ೨೧.೫೮

 

ಸತ್ಯಾಖ್ಯೋ ಬ್ರಹ್ಮಲೋಕಸ್ತು ಯತ್ರ ಬ್ರಹ್ಮಾ ವಿ ರಾಜತೇ

ತತಶ್ಚ ದ್ವಿಗುಣಃ ಪ್ರೋಕ್ತೋ ವಿಷ್ಣುಲೋಕಃ ಸನಾತನಃ ೨೧.೫೯

 

ಎಲ್ಲವೂ ಸೇರಿದರೆ (ಊರ್ಧ್ವಲೋಕ ಸಮೂಹ ಒಟ್ಟಿಗೆ) ಐವತ್ತು ಕೋಟಿ ಯೋಜನ ಎಂದು ಹೇಳಲಾಗುತ್ತದೆ. ಮಹರ್ಲೋಕ, ಜನಲೋಕ ಮತ್ತು ತಪೋಲೋಕದ ನಂತರ ಚತುರ್ಮುಖನ ಸತ್ಯಲೋಕವಿದೆ ಮತ್ತು ಇದರ ವಿಸ್ತಾರ ಭೂಮಧ್ಯಬಿಂದುವಿನಿಂದ ತಪೋಲೋಕದ ತನಕದ ವಿಸ್ತಾರಕ್ಕೆ ಸಮನಾಗಿದೆ. ಸತ್ಯಲೋಕಕ್ಕಿಂತ  ಎರಡುಪಟ್ಟು ಮಿಗಿಲಾಗಿದೆ ವಿಷ್ಣುಲೋಕ,

 

[ಮಹರ್ಲೋಕ :- ೫೧,೦೦೦೦೦ + ೨೫೫೦೦೦೦ = ೭೬೫೦೦೦೦ ಯೋಜನ. ಜನರ್ಲೋಕ:- ೭೬೫೦೦೦೦ + ೩೮೨೫೦೦೦ = ೧೧೪೭೫೦೦೦ ಯೋಜನ. ತಪೋಲೋಕ:- ೧೧೪೭೫೦೦೦ + ೫೭೩೭೫೦೦ = ೧೭೨೧೨೫೦೦ ಯೋಜನ.  ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ – ೫೦೦೦೦ + ೫೧೦೦೦೦೦ + ೭೬೫೦೦೦೦ + ೧೧೪೭೫೦೦೦ + ೧೭೨೧೨೫೦೦ = ೪೧೪೮೭೫೦೦ ಯೋಜನ. ಸತ್ಯಲೋಕ -  ೪೧೪೮೭೫೦೦ X ೨ = ೮೨೯೭೫೦೦೦ ಯೋಜನ. ಸತ್ಯಲೋಕದ ದ್ವಿಗುಣ ವಿಷ್ಣುಲೋಕ- ೮೨೯೭೫೦೦೦ X ೨ = ೧೬೫೯೫೦೦೦೦ ಯೋಜನ. ಒಟ್ಟು ೮೨೯೭೫೦೦೦ + ೧೬೫೯೫೦೦೦೦= ೨೪೮೯೨೫೦೦೦. ಹೀಗೆ ಭೂಮಿಯ ಮಧ್ಯದಿಂದ^ ಗಣನೆಗೆ ತೆಗೆದುಕೊಂಡಾಗ ಒಟ್ಟು  ೨೫೦೦೦೦೦೦೦ ಯೋಜನ. ( ^೧೦೭೫೦೦೦+ ೨೪೮೯೨೫೦೦೦).

 ಮೇರು ಪರ್ವತವನ್ನೂ ಲೆಕ್ಕ ಹಾಕಿದರೆ ಐವತ್ತು ಕೋಟಿ ಯೋಜನ ವಿಸ್ತಾರ. ಮೇರು ಪರ್ವತದಿಂದ ಲೆಕ್ಕ ಹಾಕಿದರೆ ಇಪ್ಪತ್ತೈದು ಕೋಟಿ ವಿಸ್ತಾರ. ಅದರಿಂದಾಗಿ ಪುರಾಣದ ಮಾತಿಗೂ ಮಹಾಭಾರತದ ಮಾತುಗಳಿಗೂ ವಿರೋಧವಿಲ್ಲ. ಎಲ್ಲಿಂದ ಲೆಕ್ಕ ಹಾಕಿರುವುದು ಎನ್ನುವುದು ಮುಖ್ಯ. ಹೀಗಾಗಿ ಪುರಾಣ ಬೇರೆಬೇರೆ ಗಣಿತವನ್ನು ಹೇಳಿದಾಗ ಅದರ ವಿವಕ್ಷೆ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು].

No comments:

Post a Comment