ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 30, 2022

Mahabharata Tatparya Nirnaya Kannada 22: 124-133

 

ಕೃತಕೃತ್ಯೇ ತಥಾ ಭೀಮೇ ಸ್ಥಿತೇ ಧರ್ಮ್ಮಾತ್ಮಜೋ ಹಿ ಸಃ ।

ಭೀಷ್ಮದ್ರೋಣಾದಿವಿಜಯಃ ಕಥಂ ಸ್ಯಾದಿತ್ಯಚಿನ್ತಯತ್ ॥೨೨.೧೨೪॥

 

ತದನಂತರ ಕೃತಕೃತ್ಯನಾದ ಭೀಮಸೇನನು ಸುಮ್ಮನೆ ಇರುತ್ತಿರಲು, ಧರ್ಮರಾಜನು- ಭೀಷ್ಮ-ದ್ರೋಣಾದಿಗಳನ್ನು ಹೇಗೆ ಗೆಲ್ಲಬಹುದು ಎನ್ನುವುದನ್ನು ಚಿಂತಿಸಿದ.

 

ನಿವಾರಣಂ ಗುರೂಣಾಂ ಹಿ ಭೀಮ ಇಚ್ಛತಿ ನ ಕ್ವಚಿತ್ ।

ತಸ್ಮಾತ್ ತೇ ಹ್ಯರ್ಜ್ಜುನೇನೈವ ನಿವಾರ್ಯ್ಯಾ ಇತ್ಯಚಿನ್ತಯತ್ ॥೨೨.೧೨೫॥

 

ಭೀಮಸೇನನು ಗುರು-ಹಿರಿಯರ ತಡೆಯುವಿಕೆಯನ್ನು ಬಯಸುವುದಿಲ್ಲ. ಆಕಾರಣದಿಂದ ಭೀಷ್ಮಾಚಾರ್ಯರಾಗಲೀ, ದ್ರೋಣಾಚಾರ್ಯರಾಗಲೀ, ಅವರು ಅರ್ಜುನನಿಂದಲೇ ಯುದ್ಧಮಾಡಲು ಯೋಗ್ಯರಾದವರು(ಅರ್ಜುನನೇ ಅವರನ್ನು ಎದುರಿಸಬೇಕು) ಎಂದು ಧರ್ಮರಾಜ ಚಿಂತಿಸಿದ.

 

ಆಪದ್ಯೇವ ಹಿ ಭೀಮಸ್ತಾನ್ ನಿವಾರಯತಿ ನಾನ್ಯಥಾ ।

ಏವಂ ಚಿನ್ತಾಸಮಾವಿಷ್ಟಂ ವಿಜ್ಞಾಯೈವ ಯುಧಿಷ್ಠಿರಮ್ ॥೨೨.೧೨೬॥

 

ಸರ್ವಜ್ಞಃ ಸರ್ವಶಕ್ತಿಶ್ಚ ಕೃಷ್ಣದ್ವೈಪಾಯನೋSಗಮತ್ ।

ನೃಪತಿಂ ಬೋಧಯಾಮಾಸ ಚಿನ್ತಾವ್ಯಾಕುಲಮಾನಸಮ್ ॥೨೨.೧೨೭॥

 

ಭೀಮಸೇನನು ಆಪತ್ಕಾಲದಲ್ಲಿಯೇ ಭೀಷ್ಮಾದಿಗಳನ್ನು ತಡೆಯುತ್ತಾನೆ ಮತ್ತು ಅವರೊಂದಿಗೆ ಕಾದಾಡುತ್ತಾನೆ. ಆದರೆ ಆಪತ್ತು ಇಲ್ಲದಿದ್ದರೆ ಕಾದಾಡುವುದಿಲ್ಲ. ಈ ವಿಷಯವಾಗಿ ಚಿಂತೆಯಿಂದ ಕುಗ್ಗಿರುವ ಯುಧಿಷ್ಠಿರನನ್ನು ತಿಳಿದು, ಎಲ್ಲವನ್ನೂ ಬಲ್ಲ, ಸರ್ವಶಕ್ತನಾಗಿರುವ ವೇದವ್ಯಾಸರು ಅಲ್ಲಿಗೆ ಆಗಮಿಸಿದರು. ಅವರು ಚಿಂತೆಯಿಂದ ಕಂಗೆಟ್ಟ ಧರ್ಮರಾಜನಿಗೆ ಉಪದೇಶಿಸಿದರು ಕೂಡಾ.

 

ಇಮಂ ಮನ್ತ್ರಂ ವದಿಷ್ಯಾಮಿ ಯೇನ ಜೇಷ್ಯತಿ ಫಲ್ಗುನಃ ।

ಭೀಷ್ಮದ್ರೋಣಾದಿಕಾನ್ ಸರ್ವಾನ್ ತಂ ತ್ವಂ ವದ ಧನಞ್ಜಯೇ ॥೨೨.೧೨೮॥

 

ಇತ್ಯುಕ್ತ್ವೈವಾವದನ್ಮನ್ತ್ರಂ ಸರ್ವದೈವತದೃಷ್ಟಿದಮ್ ।

ನ ಸ್ವಯಂ ಹ್ಯವದತ್ ಪಾರ್ತ್ಥೇ ಫಲಾಧಿಕ್ಯಂ ಯತೋ ಭವೇತ್ ॥೨೨.೧೨೯॥

 

‘ಯಾವ ಮಂತ್ರದಿಂದ ಅರ್ಜುನನು ಭೀಷ್ಮ-ದ್ರೋಣಾದಿಗಳನ್ನು ಗೆಲ್ಲಬಲ್ಲನೋ, ಅಂತಹ ಮಂತ್ರವನ್ನು  ನಿನಗೆ ಹೇಳುತ್ತೇನೆ. ನೀನು ಅದನ್ನು ಅರ್ಜುನನಿಗೆ ಉಪದೇಶ ಮಾಡು’ ಎಂದು ಹೇಳಿದ ವೇದವ್ಯಾಸರು, ಎಲ್ಲಾ ದೇವತೆಗಳ ಪ್ರತ್ಯಕ್ಷವನ್ನು ನೀಡಬಲ್ಲ ಮಂತ್ರವನ್ನು ಯುಧಿಷ್ಠಿರನಿಗೆ ಉಪದೇಶಿಸಿದರು. ಫಲಾಧಿಕ್ಯವಾಗಬಾರದು ಎನ್ನುವ ಕಾರಣಕ್ಕಾಗಿ ತಾನೇ ನೇರವಾಗಿ ಅರ್ಜುನನಿಗೆ ಉಪದೇಶಿಸಲಿಲ್ಲ.

 

ಭೀಷ್ಮದ್ರೋಣಾದಿವಿಜಯ ಏತಾವದ್ ವೀರ್ಯ್ಯಮೇವ ಹಿ ।

ಅಲಂ ನಾತೋSಧಿಕಂ ಕಾರ್ಯ್ಯಮೇತಾವದ್ ಯೋಗ್ಯಮಸ್ಯ ಚ ॥೨೨.೧೩೦॥

 

ಭೀಷ್ಮಾಚಾರ್ಯರನ್ನಾಗಲೀ, ದ್ರೋಣಾಚಾರ್ಯರನ್ನಾಗಲೀ ಗೆಲ್ಲಬೇಕಾದರೆ ಇಷ್ಟು ಸಾಕು. ಇವನಿಗೆ ಭೀಷ್ಮದ್ರೋಣಾದಿಗಳ ವಿಜಯಕ್ಕಿಂತ ಅಧಿಕವಾದ ಕಾರ್ಯವು  ಇಲ್ಲ.

 

ಫಲ್ಗುನಸ್ಯೇತಿ ಭಗವಾನ್ ನ ಸ್ವಯಂ ಹ್ಯವದನ್ಮನುಮ್ ।

ಗತೇ ವ್ಯಾಸೇ ಭಗವತಿ ಸರ್ವಜ್ಞೇ ಸರ್ವಕರ್ತ್ತರಿ ॥೨೨.೧೩೧॥

 

ಧರ್ಮ್ಮರಾಜೋSದಿಶನ್ಮನ್ತ್ರಂ ಫಲ್ಗುನಾಯ ರಹಸ್ಯಮುಮ್ ।

ತಮಾಪ್ಯ ಫಲ್ಗುನೋ ಮನ್ತ್ರಂ ಯಯೌ ಜ್ಯೇಷ್ಠೌ ಪ್ರಣಮ್ಯ ಚ  ॥೨೨.೧೩೨॥

 

ಯಮಜೌ ಚ ಸಮಾಶ್ಲಿಷ್ಯ ಗಿರಿಮೇವೇನ್ದ್ರಕೀಲಕಮ್ ।

ತಪಶ್ಚಚಾರ ತತ್ರಸ್ಥಃ ಶಙ್ಕರಸ್ಥಂ ಹರಿಂ ಸ್ಮರನ್ ॥೨೨.೧೩೩॥

 

ಈರೀತಿಯಾಗಿ ಯಾರಿಗೆ ಎಷ್ಟು ಫಲವನ್ನು ಕೊಡಬೇಕು ಎಂದು ತಿಳಿದಿರುವ ಸರ್ವಜ್ಞರಾದ ವೇದವ್ಯಾಸರು ಅರ್ಜುನನಿಗೆ ತಾವೇ ಮಂತ್ರವನ್ನು ಉಪದೇಶ ಮಾಡಲಿಲ್ಲ. ಎಲ್ಲಾ ಜಗದ ಕಜ್ಜವನ್ನು ನಡೆಸುವ, ಎಲ್ಲವನ್ನೂ ಬಲ್ಲ  ವೇದವ್ಯಾಸರು ತೆರಳಲು, ಧರ್ಮರಾಜನು ರಹಸ್ಯವಾಗಿ ಅರ್ಜುನನಿಗೆ ಮಂತ್ರವನ್ನು ಉಪದೇಶ ಮಾಡಿದ. ಆ ಮಂತ್ರವನ್ನು ಪಡೆದ ಅರ್ಜುನನು ಹಿರಿಯರಿಬ್ಬರಿಗೆ ನಮಸ್ಕರಿಸಿ, ನಕುಲ ಸಹದೇವರನ್ನು ಆಲಿಂಗಿಸಿ, ಇಂದ್ರಕೀಲಕವೆಂಬ ಪರ್ವತವನ್ನು ಕುರಿತು ತೆರಳಿದನು. ಅಲ್ಲಿ ರುದ್ರನ ಅಂತರ್ಯಾಮಿ ಹರಿಯನ್ನು ಸ್ಮರಣೆ ಮಾಡುತ್ತಾ ತಪಸ್ಸನ್ನು ಮಾಡಿದನು.

[ಮಹಾಭಾರತದಲ್ಲಿ ಈ ವಿವರ ಕಾಣಸಿಗುತ್ತದೆ.  ಹಿಮವನ್ತಮತಿಕ್ರಮ್ಯ ಗನ್ಧಮಾದನಮೇವ ಚ । ಅತ್ಯಕ್ರಾಮತ್ ಸ ದುರ್ಗಾಣಿ ದಿವಾರಾತ್ರಮತನ್ದ್ರಿತಃ । ಇಂದ್ರಕೀಲಂ ಸಮಾಸಾಧ್ಯ ತತೋSತಿಷ್ಠದ್ ಧನಞ್ಜಯಃ’ (ವನಪರ್ವ ೩೭.೪೧-೪೨)  ಶುಶುಭೇ ಹಿಮವತ್ಪೃಷ್ಠೇ ವಸಮಾನೋSರ್ಜುನಸ್ತದಾ’ (೩೮.೧೮) ‘ತೋಶಿತವ್ಯಸ್ತ್ವಯಾ ರುದ್ರೋ ವಿಷ್ಣುರ್ಲೋಕನಮಸ್ಕೃತಃ’ ಎಂದು ಪುರಾಣ ವಚನ. ಮಹಾಭಾರತದಲ್ಲಿ ಅರ್ಜುನನನ್ನು ತಪಸ್ಸುಮಾಡುವಾಗ ಯಾವ ಮಂತ್ರದಿಂದ ಸ್ತುತಿಸಿದ ಎನ್ನುವುದನ್ನೂ ಹೇಳಿದ್ದಾರೆ: ‘ಶಿವಾಯ ವಿಷ್ಣುರೂಪಾಯ  ವಿಷ್ಣವೇ ಶಿವರೂಪಿಣೇ । ದಕ್ಷಯಜ್ಞವಿನಾಶಾಯ ಹರಿರೂಪಾಯ ತೇ ನಮಃ’(ವನಪರ್ವ ೩೯.೭೬).  ವಿಷ್ಣುವಿನ ರೂಪವನ್ನು ಪಡೆದ ಶಿವನಿಗೆ, ಶಿವನ ರೂಪವನ್ನು ಪಡೆದ ವಿಷ್ಣುವಿಗೆ, ದಕ್ಷನ ಯಜ್ಞವನ್ನು ನಾಶ ಮಾಡಿದ ನಿನಗೆ ನಮಸ್ಕಾರ. ಇಲ್ಲಿ ಅರ್ಜುನ ರುದ್ರನ ಅಂತರ್ಯಾಮಿ ನರಸಿಂಹನನ್ನು  ಸ್ಮರಣೆ ಮಾಡುತ್ತಿದ್ದ ಎನ್ನುವುದು ನಿರ್ಣಯ. ವರಹಾಪುರಾಣ ಹೀಗೆ ಹೇಳುತ್ತದೆ: ‘ನಾರಾಯಣಃ ಶಿವೋ ವಿಷ್ಣುಃ ಶಙ್ಕರಃ ಪುರುಷೋತ್ತಮಃ । ಏತೈಸ್ತು ನಾಮಭಿರ್ಬ್ರಹ್ಮ ಪರಂ ಪ್ರೋಕ್ತಂ ಸನಾತನಮ್’ (೭೨.೧೨) ]


No comments:

Post a Comment