ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 14, 2022

Mahabharata Tatparya Nirnaya Kannada 24-31-37

 

ಗತ್ವಾ ದುರ್ಯ್ಯೋಧನಾಹೂತೋ ಭಗದತ್ತೋsಪಿ ತಂ ಯಯೌ ।

ಸಪುತ್ರಪೌತ್ರೋ ಬಾಹ್ಲೀಕೋ ಭೀಷ್ಮದ್ರೋಣಕೃಪಾ ಅಪಿ ॥೨೪.೩೧॥

 

ಪ್ರೀತ್ಯರ್ತ್ಥಂ ಧೃತರಾಷ್ಟ್ರಸ್ಯ ಬಭೂವುಸ್ತತ್ಸುತಾನುಗಾಃ ।

ಪಾಣ್ಡ್ಯಶ್ಚ ವೀರಸೇನಾಖ್ಯಃ ಪಾಣ್ಡವಾನೇವ ಸಂಶ್ರಿತಃ ॥೨೪.೩೨॥

 

ಶಲ್ಯಂ ಚ ಪಾಣ್ಡವಾನೇವ ಯಾನ್ತಂ ಜ್ಞಾತ್ವಾ ಸುಯೋಧನಃ ।

ಸುಸಭಾಃ ಕಾರಯಾಮಾಸ ಸರ್ವಭೋಗಸಮನ್ವಿತಾಃ ॥೨೪.೩೩॥

 

ದುರ್ಯೋಧನನಿಂದ ಆಹ್ವಾನಕ್ಕೆ ಒಳಪಟ್ಟ ಭಗದತ್ತನೂ ಕೂಡಾ ದುರ್ಯೋಧನನನ್ನು ಹೊಂದಿದನು. ಸೋಮದತ್ತ, ಭೂರಿಶ್ರವಸ್ಸು, ಮೊದಲಾದ ಮಕ್ಕಳು, ಮೊಮ್ಮಕ್ಕಳಿಂದ ಕೂಡಿಕೊಂಡ ಬಾಹ್ಲೀಕ; ಭೀಷ್ಮ- ದ್ರೋಣ, ಕೃಪ ಇವರೆಲ್ಲರೂ, ಧೃತರಾಷ್ಟ್ರನ ಪ್ರೀತಿಗಾಗಿ ದುರ್ಯೋಧನನನ್ನು ಅನುಸರಿಸಿದವರಾದರು.

ಅರ್ಜುನನ ಮಾವ, ಚಿತ್ರಾನ್ಗದೆಯ ಅಪ್ಪ, ಪಾಂಡ್ಯ ದೇಶದ ರಾಜ ವೀರಸೇನ ಪಾಂಡವರನ್ನು ಅನುಸರಿಸಿದನು. ಪಾಂಡವರನ್ನು ಕುರಿತು ತೆರಳುತ್ತಿರುವ ಶಲ್ಯನನ್ನು ತಿಳಿದ ದುರ್ಯೋಧನನು ಎಲ್ಲಾ ಭೋಗಗಳಿಂದ ಕೂಡಿದ ಶಿಬಿರಗಳನ್ನು ಅವನಿಗಾಗಿ ಮಾಡಿಸಿದನು.

 

ತಾ ಯುಧಿಷ್ಠಿರಕ್ಲೃಪ್ತಾಃ ಸ ಮತ್ವಾ ಶಲ್ಯೋSಬ್ರವೀದಿದಮ್ ।

ಯ ಏತಾಃ ಕಾರಯಾಮಾಸ ತದಭೀಷ್ಟಂ ಕರೋಮ್ಯಹಮ್ ॥೨೪.೩೪॥

 

ಶಲ್ಯನು ತನಗೆ ಶಿಬಿರಗಳ ವ್ಯವಸ್ಥೆ ಮಾಡಿಸಿದವನು ಯುಧಿಷ್ಠಿರ ಎಂದು ತಿಳಿದು, ‘ಯಾರು ಈ ಸಭೆಗಳನ್ನು  ಮಾಡಿಸಿದನೋ ಅವನ ಅಭೀಷ್ಟವನ್ನು ಈಡೇರಿಸುತ್ತೇನೆ’ ಎನ್ನುವ ವಚನವನ್ನು ಹೇಳಿದನು.

 

ಲೀನಃ ಶ್ರುತ್ವಾ ಧಾರ್ತ್ತರಾಷ್ರಃ ಸತ್ಯಂ ಕುರ್ವಿತ್ಯಭಾಷತ ।

ದೇಹಿ ಮೇ ಯುದ್ಧಸಾಹಾಯ್ಯಮಿತಿ ಸೋSಪಿ ಯಶೋSರ್ತ್ಥಯನ್ ॥೨೪.೩೫॥

 

ರಕ್ಷಾರ್ತ್ಥಮಾತ್ಮವಾಕ್ಯಸ್ಯ ತಥೇತ್ಯೇವಾಭ್ಯಭಾಷತ ।

ಸ ಪಾಣ್ಡವಾಂಸ್ತತೋ ಗತ್ವಾ ತೈರನುಜ್ಞಾತ ಏವ ಚ ॥೨೪.೩೬॥

 

ತೇಜೋವಧಾರ್ತ್ಥಂ ಕರ್ಣ್ಣಸ್ಯ ಧನಞ್ಜಯಕೃತೇSರ್ತ್ಥಿತಃ ।

ತಥೇತ್ಯುಕ್ತ್ವಾ ಯಯೌ ಧರ್ಮ್ಮನನ್ದನಂ ಕೌರವಾನ್ ಪ್ರತಿ ॥೨೪.೩೭॥

 

ಅಡಗಿಕೊಂಡಿದ್ದು ಶಲ್ಯನ ವಚನವನ್ನು ಕೇಳಿದ ದುರ್ಯೋಧನನು, ‘ಹಾಗಾದರೆ ಇದನ್ನು(ನಿನ್ನ ವಚನವನ್ನು) ಸತ್ಯಮಾಡು, ಯುದ್ಧದಲ್ಲಿ ನಿನ್ನ ಸಹಾಯವನ್ನು ನನಗೆ ಕೊಡು   ಎಂದು ಕೇಳಿದ. ಯಶಸ್ಸನ್ನು ಇಚ್ಛಿಸುವವನಾದ ಶಲ್ಯ, ಆಡಿದ ಮಾತಿನಂತೆ ‘ಹಾಗೆಯೇ ಆಗಲಿ’ ಎಂದ.  

ತದನಂತರ ಶಲ್ಯನು ಪಾಂಡವರ ಬಳಿಗೆ ತೆರಳಿ, ಅವರಿಂದ ಅನುಜ್ಞೆಗೆ ಒಳಗಾಗಿ, ಯುಧಿಷ್ಠಿರನಿಂದ  ಅರ್ಜುನನ ಜಯಕ್ಕಾಗಿ ಕರ್ಣನ ತೇಜೋವದೆ ಮಾಡುವುದಕ್ಕಾಗಿ ಪ್ರಾರ್ಥಿಸಲ್ಪಟ್ಟನು. ‘ಹಾಗೆಯೇ ಆಗಲಿ ಎಂದ ಶಲ್ಯನು ಕೌರವರ ಬಳಿ ತೆರಳಿದನು.

No comments:

Post a Comment