ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 7, 2018

Mahabharata Tatparya Nirnaya Kannada 11.124-11.130


ವಿಚಿತ್ರವೀರ್ಯ್ಯಃ ಪ್ರಮದಾದ್ವಯಂ ತತ್ ಸಮ್ಪ್ರಾಪ್ಯ ರೇಮೇsಬ್ದಗಣಾನ್ ಸುಸಕ್ತಃ ।
ತತ್ಯಾಜ ದೇಹಂ ಚ ಸ ಯಕ್ಷ್ಮಣಾsರ್ದ್ದಿತಸ್ತತೋsಸ್ಯ ಮಾತಾsಸ್ಮರದಾಶು ಕೃಷ್ಣಮ್ ॥೧೧.೧೨೪

ಇತ್ತ ವಿಚಿತ್ರವೀರ್ಯನು ಅಂಬಿಕೆ ಹಾಗು ಅಂಬಾಲಿಕೆಯರನ್ನು ಹೊಂದಿ, ಅತ್ಯಂತ ಆಸಕ್ತನಾಗಿ ಸುಮಾರು ವರ್ಷಗಳ ಕಾಲ ಅವರೊಂದಿಗೆ ಕ್ರೀಡಿಸಿದ. ಆದರೆ ನಂತರ ಅವನು ಕ್ಷಯದಿಂದ ಪೀಡಿತನಾಗಿ ದೇಹವನ್ನು ಬಿಟ್ಟನು. ವಿಚಿತ್ರವೀರ್ಯನ ಸಾವಿನ ನಂತರ ತಕ್ಷಣ ತಾಯಿ ಸತ್ಯವತಿಯು ವೇದವ್ಯಾಸರನ್ನು ಸ್ಮರಣೆ ಮಾಡಿಕೊಳ್ಳುತ್ತಾಳೆ.

ಆವಿರ್ಬಭೂವಾsಶು ಜಗಜ್ಜನಿತ್ರೋ ಜನಾರ್ದ್ದನೋ ಜನ್ಮಜರಾಭಯಾಪಹಃ ।
ಸಮಸ್ತ ವಿಜ್ಞಾನತನುಃ ಸುಖಾರ್ಣ್ಣವಃ ಸಮ್ಪೂಜಯಾಮಾಸ ಚ ತಂ ಜನಿತ್ರೀ ॥೧೧.೧೨೫

ಜಗತ್ತಿನ ಹುಟ್ಟಿಗೆ ಕಾರಣನಾದ, ಮುದಿತನ-ಅಳುಕುಗಳನ್ನು ಪರಿಹಾರ ಮಾಡುವ, ಅರಿವೇ ಮೈವೆತ್ತು ಬಂದಿರುವ, ಸುಖಕ್ಕೆ ಕಡಲಿನಂತೆ ಇರುವ ವ್ಯಾಸರೂಪಿ ನಾರಾಯಣನು  ತತ್ ಕ್ಷಣದಲ್ಲಿ ಸತ್ಯವತಿಯ ಮುಂದೆ ಆವಿರ್ಭವಿಸುತ್ತಾನೆ. ಸತ್ಯವತಿಯು  ವೇದವ್ಯಾಸರನ್ನು ಭಕ್ತಿಪೂರ್ವಕವಾಗಿ ಗೌರವಿಸುತ್ತಾಳೆ.

ತಂ ಭೀಷ್ಮಪೂರ್ವೈಃ ಪರಮಾದರಾರ್ಚ್ಚಿತಂ ಸ್ವಭಿಷ್ಟುತಂ ಚಾವದದಸ್ಯ ಮಾತಾ ।
ಪುತ್ರೌ ಮೃತೌ ಮೇ ನತು ರಾಜ್ಯಮೈಚ್ಛದ್ ಭೀಷ್ಮೋ ಮಯಾ ನಿತರಾಮರ್ತ್ಥಿತೋsಪಿ॥೧೧.೧೨೬

ಕ್ಷೇತ್ರೇ ತತೋ ಭ್ರಾತುರಪತ್ಯಮುತ್ತಮಮುತ್ಪಾದಯಾಸ್ಮತ್ಪರಮಾದರಾರ್ತ್ಥಿತಃ ।
ಇತೀರಿತಃ ಪ್ರಣತಶ್ಚಾಪ್ಯಭಿಷ್ಟುತೋ ಭೀಷ್ಮಾದಿಭಿಷ್ಚಾsಹ ಜಗದ್ಗುರುರ್ವಚಃ         ॥೧೧.೧೨೭

ಭೀಷ್ಮಾಚಾರ್ಯರೇ ಮೊದಲಾದವರಿಂದ ಅತ್ಯಂತ ಆದರದಿಂದ ಪೂಜಿಸಲ್ಪಟ್ಟ, ತನ್ನಿಂದಲೂ ಸ್ತುತಿಸಲ್ಪಟ್ಟ ವ್ಯಾಸರನ್ನು ಕುರಿತು  ಸತ್ಯವತಿಯು ಮಾತನಾಡುತ್ತಾಳೆ:
“ನನ್ನ ಮಕ್ಕಳು ಸತ್ತಿದ್ದಾರೆ. ಭೀಷ್ಮನು ನನ್ನಿಂದ ಚನ್ನಾಗಿ ಪ್ರಾರ್ಥಿಸಲ್ಪಟ್ಟರೂ ಕೂಡಾ ರಾಜ್ಯವನ್ನು ಬಯಸಲಿಲ್ಲಾ. ಈ  ಕಾರಣದಿಂದ, ನಮ್ಮಿಂದ ಚನ್ನಾಗಿ ಪೂಜೆಗೊಂಡ ನೀನು, ನಮ್ಮಿಂದ ಬೇಡಲ್ಪಟ್ಟವನಾದ ನೀನು,  ನಿನ್ನ ಸಹೋದರನ ಹೆಂಡತಿಯಲ್ಲಿ ಉತ್ಕೃಷ್ಟವಾದ ಮಗುವನ್ನು ಹುಟ್ಟಿಸು”.
ಈರೀತಿ ಹೇಳಲ್ಪಟ್ಟ, ಭೀಷ್ಮಾದಿಗಳಿಂದ ಸ್ತೋತ್ರಮಾದಲ್ಪಟ್ಟವರಾಗಿರುವ ವೇದವ್ಯಾಸರು ತಾಯಿಯನ್ನು ಕುರಿತು  ಮಾತನ್ನು ಹೇಳಿದರು:

ಋತೇ ರಮಾಂ ಜಾತು ಮಮಾಙ್ಗಯೋಗಯೋಗ್ಯಾsಙ್ಗನಾ ನೈವ ಸುರಾಲಯೇsಪಿ ।
ತಥಾsಪಿ ತೇ ವಾಕ್ಯಮಹಂ ಕರಿಷ್ಯೇ ಸಾಂವತ್ಸರಂ ಸಾ ಚರತು ವ್ರತಂ ಚ ॥೧೧.೧೨೮

ಸಾ ಪೂತದೇಹಾsಥ ಚ ವೈಷ್ಣವವ್ರತಾನ್ಮತ್ತಃ ಸಮಾಪ್ನೋತು ಸುತಂ ವರಿಷ್ಠಮ್ ।
ಇತೀರಿತೇ ರಾಷ್ಟ್ರಮುಪೈತಿ ನಾಶಮಿತಿ ಬ್ರುವನ್ತೀಂ ಪುನರಾಹ ವಾಕ್ಯಮ್ ೧೧.೧೨೯

ಸೌಮ್ಯಸ್ವರೂಪೋsಪ್ಯತಿಭೀಷಣಂ ಮೃಷಾ ತಚ್ಚಕ್ಷುಷೋ ರೂಪಮಹಂ ಪ್ರದರ್ಶಯೇ ।
ಸಹೇತ ಸಾ ತದ್ ಯದಿ ಪುತ್ರಕೋsಸ್ಯಾ ಭವೇದ್ ಗುಣಾಢ್ಯೋ ಬಲವೀರ್ಯ್ಯಯುಕ್ತಃ ॥೧೧.೧೩೦

“ಲಕ್ಷ್ಮೀ ದೇವಿಯನ್ನು ಹೊರತುಪಡಿಸಿ ನನ್ನ ಅಂಗ-ಸಂಗವನ್ನು ಪಡೆಯುವ ಭಾಗ್ಯವುಳ್ಳ ಹೆಣ್ಣು ಸ್ವರ್ಗದಲ್ಲೂ (ಯಾವ ಲೋಕದಲ್ಲೂ) ಕೂಡಾ ಇಲ್ಲಾ. ಆದರೂ ಕೂಡಾ, ನಿನ್ನ ಮಾತನ್ನು ನಾನು ನಡೆಸಿಕೊಡುತ್ತೇನೆ.  ಅವಳು (ನಿನ್ನ ಸೊಸೆ) ಒಂದು ವರ್ಷದ ಕಾಲ ಇರುವ ವ್ರತವನ್ನು ನಡೆಸಲಿ.
ಈ ರೀತಿ ವೈಷ್ಣವ ವ್ರತ ಮಾಡಿಯಾದಮೇಲೆ, ಪವಿತ್ರವಾದ ದೇಹವುಳ್ಳ ಅವಳು, ನನ್ನಿಂದ ಶ್ರೇಷ್ಠನಾದ ಮಗನನ್ನು ಹೊಂದಲಿ”  ಎಂದು ಹೇಳಲ್ಪಡುತ್ತಿರಲು, “ದೇಶವು ರಾಜನಿಲ್ಲದೇ ನಾಶ ಹೊಂದುತ್ತದೆ. ಹಾಗಾಗಿ ಈಗಲೇ ಅವರು ಗರ್ಭಧರಿಸುವಂತೆ ಮಾಡು” ಎಂದು ಹೇಳುತ್ತಿರುವ ತನ್ನ ತಾಯಿಯನ್ನು ಕುರಿತು, ಮತ್ತೆ ಹೇಳುತ್ತಾರೆ: “ನಾನು ಸುಂದರವಾದ ರೂಪವುಳ್ಳವನಾದರೂ, ಸುಮ್ಮನೆ ಅವಳ ಕಣ್ಣಿಗೆ ಮಾತ್ರ ಅತಿಭಯಂಕರವಾದ ರೂಪವನ್ನು ತೋರಿಸುತ್ತೇನೆ.  ಒಂದು ವೇಳೆ ಅವಳು ಅದನ್ನು ಸಹಿಸಿದರೆ, ಅವಳಿಗೆ ಬಲವೀರ್ಯದಿಂದ ಹಾಗು ಯುಕ್ತವಾದ ಗುಣಗಳಿಂದ ತುಂಬಿದ ಮಗನು ಹುಟ್ಟುತ್ತಾನೆ” ಎಂದು. 

No comments:

Post a Comment