ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 2, 2018

Mahabharata Tatparya Nirnaya Kannada 11.97-11.102


ಯಶೋ ಭೀಷ್ಮಸ್ಯ ದತ್ವಾ ತು ಸೋsಮ್ಬಾಂ ಚ ಶರಣಾಗತಾಮ್ ।
ಉನ್ಮುಚ್ಯ ಭರ್ತ್ತೃದ್ವೇಷೋತ್ಥಾತ್ ಪಾಪಾತ್ ತೇನಾsಶ್ವಯೋಜಯತ್ ॥೧೧.೯೭

ಅನನ್ತರಂ ಶಿಖಣ್ಡಿತ್ವಾತ್ ತದಾ ಸಾ ಶಾಙ್ಕರಂ ತಪಃ ।
ಭೀಷ್ಮಸ್ಯ ನಿಧನಾರ್ತ್ಥಾಯ ಪುಂಸ್ತ್ವಾರ್ತ್ಥಂ ಚ ಚಕಾರ ಹ ॥೧೧.೯೮

ಭೀಷ್ಮೋ ಯಥಾ ತ್ವಾಂ ಗೃಹ್ಣೀಯಾತ್ ತಥಾ ಕುರ್ಯ್ಯಾಮಿತೀರಿತಮ್ ।
ರಾಮೇಣ ಸತ್ಯಂ ತಚ್ಚಕ್ರೇ ಭೀಷ್ಮೇ ದೇಹಾನ್ತರಂ ಗತೇ ॥೧೧.೯೯


ಪರಶುರಾಮನು ಭೀಷ್ಮನಿಗೆ ಯಶಸ್ಸನ್ನು ಕೊಟ್ಟು, ಶರಣಾಗತಳಾಗಿರುವ ಅಂಬೆಯನ್ನು ‘ಗಂಡನನ್ನು ದ್ವೇಷಮಾಡಿದ’ ಪಾಪದಿಂದ ಬಿಡಿಸಿದನು. ‘ಭೀಷ್ಮನು ಹೇಗೆ ನಿನ್ನನ್ನು ಸ್ವೀಕರಿಸಬಲ್ಲನೋ,  ಹಾಗೇ ಮಾಡುತ್ತೇನೆ’ ಎನ್ನುವ ಹೇಳಿಕೆಯೂ ರಾಮನಿಂದ ಸತ್ಯವಾಗಿ ನಡೆಸಲ್ಪಟ್ಟಿತು.
ಅಂಬೆ ಮೊದಲು ಗಂಡನ ದ್ವೇಷದಿಂದಾದ ಉಂಟಾದ ಪಾಪದಿಂದಾಗಿ ಭೀಷ್ಮರನ್ನು ಸೇರಲಾಗಲಿಲ್ಲಾ. ತದನಂತರ ಅವಳು ಶಿಖಂಡಿಯಾದ್ದರಿಂದ ಹೊಂದಲಿಲ್ಲಾ. ಆದರೆ ಮುಂದೆ ಭೀಷ್ಮಾಚಾರ್ಯರು ತನ್ನ ದೇಹವನ್ನು ಬಿಟ್ಟು ಮೂಲರೂಪವನ್ನು (ದ್ಯುವಸು ರೂಪವನ್ನು) ಹೊಂದಿದಾಗ, ಪರಶುರಾಮನ ಅನುಗ್ರಹದಿಂದ, ತನ್ನೆಲ್ಲಾ ಪಾಪವನ್ನು ಕಳಚಿಕೊಂಡ ಆಕೆ, ತಾನೂ ಮೂಲರೂಪವನ್ನು ಹೊಂದಿ, ಆತನ(ದ್ಯುವಸುವಿನ) ಪತ್ನಿಯಾಗಿ  ಸೇರುತ್ತಾಳೆ. [ಒಟ್ಟಿನಲ್ಲಿ ಹೇಳಬೇಕೆಂದರೆ: ಪರಶುರಾಮ, ಭೀಷ್ಮನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಿ, ಅವನಿಗೆ ಕೀರ್ತಿಯನ್ನು ನೀಡಿದ.  ಗಂಡನನ್ನು ದ್ವೇಷಿಸಿದ ಅಂಬೆಯ ಪಾಪವನ್ನು ನಾಶ ಮಾಡಿ, ಆಕೆ ಮುಂದೆ ತನ್ನ ಮೂಲರೂಪದಲ್ಲಿ ಮರಳಿ ಗಂಡನನ್ನು ಸೇರುವಂತೆ ಮಾಡಿದ]

ಇತ್ತ ಭೀಷ್ಮನಿಂದ ದೂರಾದ ಅಂಬೆ, ‘ಭೀಷ್ಮ ಸಾಯಬೇಕು’ ಮತ್ತು ‘ತಾನು ಪುರುಷನಾಗಿ ಹುಟ್ಟಬೇಕು’ ಎಂದು ಬಯಸಿ, ಶಂಕರನನ್ನು ಕುರಿತಾಗಿ ತಪಸ್ಸನ್ನು ಮಾಡುತ್ತಾಳೆ.

ರುದ್ರಸ್ತು ತಸ್ಯಾಸ್ತಪಸಾ ತುಷ್ಟಃ ಪ್ರಾದಾದ್ ವರಂ ತದಾ
ಭೀಷ್ಮಸ್ಯ ಮೃತಿಹೇತುತ್ವಂ ಕಾಲಾತ್ ಪುಂದೇಹಸಮ್ಭವಮ್೧೧.೧೦೦

ಮಾಲಾಂ ಚ ಯ ಇಮಾಂ ಮಾಲಾಂ ಗೃಹ್ಣೀಯಾತ್ ಸ ಹನಿಷ್ಯತಿ ।
ಭೀಷ್ಮಮಿತ್ಯೇವ ತಾಂ ಮಾಲಾಂ ಗೃಹೀತ್ವಾ ಸಾ ನೃಪಾನ್ ಯಯೌ ॥೧೧.೧೦೧

ತಾಂ ನ ಭೀಷ್ಮಭಯಾತ್ ಕೇsಪಿ ಜಗೃಹುಸ್ತಾಂ ಹಿ ಸಾ ತತಃ ।
ದ್ರುಪದಸ್ಯ ಗೃಹದ್ವಾರಿ ನ್ಯಸ್ಯ ಯೋಗಾತ್ ತನುಂ ಜಹೌ ॥೧೧.೧೦೨


ಅಂಬೆಯ ತಪಸ್ಸಿಗೆ ಪ್ರೀತನಾಗಿ ರುದ್ರನು, ಆಕೆಗೆ ವರವನ್ನು ನೀಡುತ್ತಾನೆ. ‘ಭೀಷ್ಮನ ಸಾವಿಗೆ ನೀನೇ ಕಾರಣಳಾಗುವೆ ಎಂದೂ, ಕಾಲಕ್ರಮೇಣ ಪುರುಷ ದೇಹ ಪ್ರಾಪ್ತಿಯಾಗುತ್ತದೆ ಎಂದೂ  ಶಿವ ವರವನ್ನು ನೀಡಿ,  ಆಕೆಗೆ  ಮಾಲೆಯೊಂದನ್ನು ಕೊಟ್ಟು, “ಯಾರು ಈ ಮಾಲೆಯನ್ನು ಸ್ವೀಕರಿಸುತ್ತಾನೋ, ಅವನು ಭೀಷ್ಮನನ್ನು ಕೊಲ್ಲುತ್ತಾನೆ”  ಎಂದು ಹೇಳುತ್ತಾನೆ. ಅವಳಾದರೋ, ಆ ಮಾಲೆಯನ್ನು ಹಿಡಿದುಕೊಂಡು ರಾಜರ ಬಳಿ ತೆರಳುತ್ತಾಳೆ.
ಆದರೆ  ಆ ಮಾಲೆಯನ್ನು ಭೀಷ್ಮರ ಮೇಲಿನ ಭಯದಿಂದ ಯಾವ ರಾಜರೂ ಕೂಡಾ ಸ್ವೀಕರಿಸುವುದಿಲ್ಲಾ.  ಆಗ  ಅಂಬೆ ಆ  ಮಾಲೆಯನ್ನು ದ್ರುಪದನ ಮನೆಯ ಬಾಗಿಲಲ್ಲಿ ಇಟ್ಟು, ಯೋಗ ಶಕ್ತಿಯಿಂದ ತನ್ನ ದೇಹವನ್ನು ತ್ಯಜಿಸುತ್ತಾಳೆ.

No comments:

Post a Comment