ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 11, 2019

Mahabharata Tatparya Nirnaya Kannada 1392_1395


ಸಂಸ್ಥಾಪ್ಯತೌ ರಥವರೇ ಜಗತಾsಭಿವನ್ದ್ಯೌ ಶ್ವಾಫಲ್ಕಿರಾಶ್ವವತತಾರ ಯಮಸ್ವಸಾರಮ್ ।
ಸ್ನಾತ್ವ ಸ ತತ್ರ ವಿಧಿನೈವ ಕೃತಾಘಮರ್ಷಃ ಶೇಷಾಸನಂ ಪರಮಪೂರುಷಮತ್ರ ಚೈಕ್ಷತ್ ೧೩.೯೨

ಜಗತ್ತಿನಿಂದ ನಮಸ್ಕಾರ್ಯರಾದ ಅವರಿಬ್ಬರನ್ನು  ಶ್ರೇಷ್ಠವಾದ ಆ ರಥದಲ್ಲಿ ಕುಳ್ಳಿರಿಸಿ, ಶ್ವಫಲ್ಕಪುತ್ರ ಅಕ್ರೂರನು ಕೂಡಲೇ ಯಮುನಾನದಿಗಿಳಿದನು. ಅವನು ಅಲ್ಲಿ ಶಾಸ್ತ್ರಪೂರ್ವಕವಾಗಿ ಅಘಮರ್ಷಣ ಸೂಕ್ತವನ್ನು ಪಠಿಸುತ್ತಾ, ಸ್ನಾನಮಾಡಿ, ಅಲ್ಲಿಯೇ(ಜಲದಲ್ಲಿರುವಾಗಲೇ) ಶೇಷಾಸನನಾದ ಪರಮಾತ್ಮನನ್ನು ಕಂಡನು.

ನಿತ್ಯಂ ಹಿ ಶೇಷಮಭಿಪಶ್ಯತಿ ಸಿದ್ಧಮನ್ತ್ರೋ ದಾನೇಶ್ವರಃ ಸ ತು ತದಾ ದದೃಶೇ ಹರಿಂ ಚ ।
ಅಗ್ರೇ ಹಿ ಬಾಲತುನುಮೀಕ್ಷ್ಯ ಸ ಕೃಷ್ಣಮತ್ರ ಕಿಂ ನಾಸ್ತಿ ಯಾನ ಇತಿ  ಯಾನಮುಖೋ ಬಭೂವ॥೧೩.೯೩॥

ಅಘಮರ್ಷಣ ಮಂತ್ರದ ಸಿದ್ಧಿಯನ್ನು ಮಾಡಿಕೊಂಡಿದ್ದ ಅಕ್ರೂರನು ಯಾವಾಗಲೂ ಶೇಷನನ್ನು ಕಾಣುತ್ತಿದ್ದ. ಆದರೆ ಈ ಸಂದರ್ಭದಲ್ಲಿ ಆತ ಭಗವಂತನ ದರ್ಶನವನ್ನೂ ಪಡೆದ. ತನ್ನ ಮುಂದೆ ಬಾಲಕ ಶರೀರವುಳ್ಳ ಶ್ರೀಕೃಷ್ಣನನ್ನು ನದಿಯಲ್ಲೇ  ಕಂಡ ಅಕ್ರೂರ,  ರಥದಲ್ಲಿ ಕೃಷ್ಣ ಇರುವನೋ-ಇಲ್ಲವೋ ಎಂದು ರಥದತ್ತ ನೋಡುತ್ತಾನೆ.

ತತ್ರಾಪಿ ಕೃಷ್ಣಮಭಿವೀಕ್ಷ್ಯ ಪುನರ್ನ್ನಿಮಜ್ಜ್ಯ ಶೇಷೋರುಭೋಗಶಯನಂ ಪರಮಂ ದದರ್ಶ ।
ಬ್ರಹ್ಮೇಶಶಕ್ರಮುಖದೇವಮುನೀನ್ದ್ರವೃನ್ದಸಂವನ್ದಿತಾಙ್ಘ್ರಿಯುಗಮಿನ್ದಿರಯಾ ಸಮೇತಮ್ ॥೧೩.೯೪

ರಥದಲ್ಲೂ  ಕೂಡಾ ಕೃಷ್ಣನನ್ನು ಕಂಡ ಅಕ್ರೂರ,  ಮತ್ತೆ ಯಮುನೆಯಲ್ಲಿ ಮುಳುಗಿ, ಶೇಷನ ಉತ್ಕೃಷ್ಟವಾದ ಶರೀರದ ಮೇಲೆ  ಮಲಗಿರುವ, ಬ್ರಹ್ಮ-ರುದ್ರ-ಇಂದ್ರ ಮೊದಲಾದ ದೇವತೆಗಳು, ಮುನಿಶ್ರೇಷ್ಠರು, ಇವರೆಲ್ಲರ ಸಮೂಹಗಳಿಂದ ವಂದಿತವಾದ ಪಾದಗಳೆರಡನ್ನು  ಹೊಂದಿರುವ, ಲಕ್ಷ್ಮಿಯಿಂದ ಕೂಡಿರುವ, ಉತ್ಕೃಷ್ಟನಾದ ಪರಮಾತ್ಮನನ್ನು ಕಾಣುತ್ತಾನೆ.

ಸ್ತುತ್ವಾ ವರಸ್ತುತಿಭಿರವ್ಯಯಮಬ್ಜನಾಭಂ ಸೋsನ್ತರ್ಹಿತೇ ಭಗವತಿ ಸ್ವಕಮಾರುರೋಹ ।
ಯಾನಂ ಚ ತೇನ ಸಹಿತೋ ಭಗವಾನ್ ಜಗಾಮ ಸಾಯಂ ಪುರೀಂ ಸಹಬಲೋ ಮಧುರಾಮನನ್ತಃ ೧೩.೯೫

ಆ ಅಕ್ರೂರನು ಉತ್ಕೃಷ್ಟವಾದ ಸ್ತೋತ್ರಗಳಿಂದ, ಎಂದೂ ನಾಶವಾಗದ, ಪದ್ಮನಾಭನಾಗಿರುವ ಪರಮಾತ್ಮನನ್ನು ಸ್ತೋತ್ರಮಾಡಿ, ಪರಮಾತ್ಮ ಕಾಣದಂತಾಗಲು ನದಿಯಿಂದ ಮೇಲೆಬಂದು ತನ್ನ ರಥವನ್ನು ಏರಿದ.
ಹೀಗೆ ಅಕ್ರೂರ ಹಾಗೂ ಬಲರಾಮನಿಂದ ಕೂಡಿಕೊಂಡ,  ಗುಣಗಳಲ್ಲಿ ಎಣಿಯಿರದ ನಾರಾಯಣನು ಸಂಜೆಯ ಸುಮಾರಿಗೆ  ಪಟ್ಟಣವನ್ನು ತಲುಪಿದ.

No comments:

Post a Comment