ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 22, 2021

Mahabharata Tatparya Nirnaya Kannada 21: 01-06

 

೨೧. ಪಾಣ್ಡವವನಪ್ರವೇಶಃ

ಓಂ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

 

ಮಯನು ಕೃಷ್ಣನ ಆಜ್ಞೆಯಂತೆ ಎಲ್ಲಾ ರೀತಿಯ ಅಚ್ಚರಿಯಿಂದ ಕೂಡಿರುವ,  ಎಲ್ಲಕ್ಕೂ ಮಿಗಿಲಾಗಿರುವ ಸಭೆಯನ್ನು ಯುಧಿಷ್ಠಿರನಿಗಾಗಿ ನಿರ್ಮಿಸಿಕೊಟ್ಟು, ಭೀಮಸೇನನಿಗೆ ಗದೆಯನ್ನು ಒಪ್ಪಿಸಿದನು.

 

[ಇಲ್ಲಿ ‘ವೃಕೋದರಾಯ ಗದಾಂ ದದೌ’ ಎಂದು ಚತುರ್ಥೀ ವಿಭಕ್ತಿಯಲ್ಲಿ ಹೇಳಬೇಕಿತ್ತು. ಆದರೆ ಹಾಗೇ ಹೇಳದೇ  ಸಪ್ತಮೀ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆ ಹೀಗೆ ಎನ್ನುವುದರ ಹಿನ್ನೆಲೆ ನಮಗೆ ಮಹಾಭಾರತವನ್ನು ನೋಡಿದಾಗ ತಿಳಿಯುತ್ತದೆ. ‘ಅಸ್ತಿ ಬಿನ್ದುಸರಸ್ಯುಗ್ರಾ ಗದಾ ಚ ಕುರುನನ್ದನ । ನಿಹಿತಾ ಯೌವನಾಶ್ವೇನ ರಾಜ್ಞಾ ಹತ್ವಾ ರಣೇ ರಿಪೂನ್’ (ಸಭಾಪರ್ವ: ೩.೬) ಬಿನ್ದುಸರಸು ಎನ್ನುವ ಸರೋವರದಲ್ಲಿ ಯೌವನಾಶ್ವನ(ಮುಚುಕುನ್ದನ) ಗದೆ ಇತ್ತು. (ಯುವನಾಶ್ವ ಎನ್ನುವ ರಾಜನ ಮಗ ಮಾನ್ಧಾತ. ಮಾನ್ಧಾತನ ಮಗ ಮುಚುಕುನ್ದ). ಅದನ್ನು ಮಯ ಭೀಮಸೇನನಿಗೆ ಕೊಟ್ಟ. ಆದರೆ ಇಲ್ಲಿ ಸಪ್ತಮಿ ವಿಭಕ್ತಿ ಪ್ರಯೋಗ ಏಕೆ ಎನ್ನುವುದು ಮುಂದಿನ ಶ್ಲೋಕದಲ್ಲಿ ತಿಳಿಯುತ್ತದೆ:]

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

 

ಮುಚುಕುನ್ದ ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನ ಅನುಗ್ರಹದಿಂದ ಧರಿಸಿದ್ದ. ಆ ತನ್ನ ಗದೆಯನ್ನು ಭೀಮಸೇನ ಮಯನ ಮೂಲಕ ಪಡೆದು ಸಂತಸವನ್ನು ಹೊಂದಿದ.

[ಹೀಗಾಗಿ ಆ ಗದೆ ಭೀಮಸೇನನಿಗೆ ಮಯನ ಕಾಣಿಕೆ ಅಲ್ಲ. ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನಿಗೆ(ಭೀಮನಿಗೆ) ಮಯ ಒಪ್ಪಿಸಿದ್ದು ಅಷ್ಟೇ. ಹೀಗಾಗಿ ಆಚಾರ್ಯರು ಸಪ್ತಮೀ ವಿಭಕ್ತಿ ಪ್ರಯೋಗ ಮಾಡಿರುವುದು]. 

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥


ಮತ್ತೆ (ಖಾಣ್ಡವದಾಹ ಆದಮೇಲೆ) ಎರಡು ವರ್ಷಗಳ ಕಾಲ ಇಂದ್ರಪ್ರಸ್ಥದಲ್ಲಿಯೇ ವಾಸಮಾಡಿದ ಶ್ರೀಕೃಷ್ಣನು, ತನ್ನಿಂದ ದೂರದಲ್ಲಿರುವುದನ್ನು ಸಹಿಸುವುದರಲ್ಲಿ ಅಸಮರ್ಥರಾದ ಪಾಂಡವರಿಂದ ಚೆನ್ನಾಗಿ ಅರ್ಚಿಸಲ್ಪಟ್ಟವನಾಗಿ, ತನ್ನ ಪಟ್ಟಣವಾದ ದ್ವಾರಕೆಗೆ ತೆರಳಿದನು.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

 

ತದನಂತರ, ಎಂದೂ ಹುಟ್ಟದ ಶ್ರೀಕೃಷ್ಣನು, ತನ್ನ ಪಟ್ಟಣದಲ್ಲಿ ವಾಸಮಾಡುತ್ತಾ, ಒಂದಾನೊಂದು ಸೂರ್ಯಗ್ರಹಣದ ಸಂದರ್ಭದಲ್ಲಿ ತನ್ನ ಬಾಂಧವರು, ಮಕ್ಕಳು ಮತ್ತು ಹೆಂಡತಿಯರೊಡಗೂಡಿ ಸಮಂತಪಂಚಕಕ್ಕೆ (ಕುರುಕ್ಷೇತ್ರಕ್ಕೆ) ಬಂದನು.  

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

 

ಪೃಥೆಯ ಮಕ್ಕಳಾದ ಪಾಂಡವರೂ ಕೂಡಾ ತಮ್ಮ ಹೆಂಡತಿ, ಮಕ್ಕಳು ಮತ್ತು ತಾಯಿಯೊಂದಿಗೆ ಅಲ್ಲಿಗೆ ಬಂದರು. ಪರಮಾತ್ಮನಿಗೆ ಪ್ರಿಯರಾದವರು, ಅಪ್ರಿಯರಾದವರು, ಹೀಗೆ ಎಲ್ಲಾ ರಾಜರೂ ಕೂಡಾ ಅಲ್ಲಿಗೆ ಬಂದರು.

 

ತಥೈವ ನನ್ದಗೋಪಕಃ ಸದಾರಗೋಪಗೋಪಿಕಃ ।

ಮುನೀಶ್ವರಾಶ್ಚ ಸರ್ವತಃ ಸಮೀಯುರತ್ರ ಚ ಪ್ರಜಾಃ ॥೨೧.೦೬॥

 

ಹಾಗೆಯೇ ನಂದಗೋಪನೂ ಕೂಡಾ ತನ್ನ ಹೆಂಡತಿ, ಗೋಪ-ಗೋಪಿಕೆಯರಿಂದ ಒಡಗೂಡಿ ಅಲ್ಲಿಗೆ ಬಂದ. ಮುನೀಶ್ವರರೂ ಕೂಡಾ ಬಂದರು. ಪರಮಾತ್ಮನ ಭಕ್ತರಾಗಿರುವ ಪ್ರಜೆಗಳೂ ಕೂಡಾ ಅಲ್ಲಿಗೆ ಬಂದರು.

No comments:

Post a Comment