ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 24, 2021

Mahabharata Tatparya Nirnaya Kannada 21: 07-11

                        ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।

ವಸಿಷ್ಠವೃಷ್ಣಿನನ್ದನಂ ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥

 

ಯಾರು ಪರಮಾತ್ಮನಿಗೆ ಪ್ರಿಯರಾಗಿದ್ದಾರೋ(ಯಾರು ಭಗವದ್ಭಕ್ತರೋ), ಅವರೆಲ್ಲರೂ ವಸಿಷ್ಠ ವಂಶದಲ್ಲಿ ಬಂದಿರುವ ವೇದವ್ಯಾಸರು, ಯಾದವ ವಂಶದಲ್ಲಿ ಬಂದಿರುವ ವಾಸುದೇವ(ಶ್ರೀಕೃಷ್ಣ) ಮತ್ತು ಭೃಗು ವಂಶದಲ್ಲಿ ಬಂದಿರುವ ಪರಶುರಾಮ- ಈ ಮೂರು ರೂಪದಲ್ಲಿರುವ ಪರಮಾತ್ಮನನ್ನು ಹೊಂದಿ ಚೆನ್ನಾಗಿ ಪೂಜಿಸಿದರು.

 

ಕೃತಾರ್ತ್ಥತಾಂ ಚ ತೇ ಯಯೂ ರಮೇಶಪಾದದರ್ಶನಾತ್ ।

ರವಿಗ್ರಹೇ ಸಮಾಪ್ಲುತಾ ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥

 

ಪರಶುರಾಮನಿಂದ ನಿರ್ಮಿತವಾದ ತೀರ್ಥದಲ್ಲಿ(ಸಮಂತಪಂಚಕದಲ್ಲಿ) ಸ್ನಾನಮಾಡಿದ ಅವರೆಲ್ಲರೂ, ಪರಮಾತ್ಮನ ಪಾದ ದರ್ಶನದಿಂದ ಧನ್ಯತೆಯನ್ನು ಹೊಂದಿದರು.

 

ಅನುಗ್ರಹಂ ವಿಧಾಯ ಸಸ್ವಕೇಷು ಕೇಶವಸ್ತ್ರಿವೃತ್ ।

ಅಯಾಜಯಚ್ಚ ಶೂರಜಂ ಮಖೈಃ ಸಮಾಪ್ತದಕ್ಷಿಣೈಃ ॥೨೧.೦೯॥

 

ಆ ಕೇಶವನು ಮೂರು ರೂಪಗಳಿಂದ ಕೂಡಿದವನಾಗಿ, ತನ್ನವರಿಗೆ ಅನುಗ್ರಹವನ್ನು ಮಾಡಿ, ಶೂರಸೇನ ಪುತ್ರನಾದ ವಸುದೇವ ಪರಿಪೂರ್ಣವಾದ ದಕ್ಷಿಣೆಯುಳ್ಳ ಯಾಗಗಳನ್ನು ಮಾಡಲು ಕಾರಣನಾದನು.

 

ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ ಸಃ ।

ಸುಕಾಲದರ್ಶನಾತ್ ಪರಂ ವ್ಯಧಾದನುಗ್ರಹಂ ಹರಿಃ ॥೨೧.೧೦॥

 

ಪರಮಾತ್ಮನು ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆ, ಈ ಪುಣ್ಯಕಾಲದಲ್ಲಿ ದರ್ಶನವನ್ನು ನೀಡಿ  ವಿಶೇಷವಾದ ಅನುಗ್ರಹವನ್ನು ಮಾಡಿದನು.

 

ತತೋ ಯಯೌ ಸ್ವಕಾಂ ಪುರೀಂ ಪೃಥಾಸುತೈಃ ಸಹಾಚ್ಯುತಃ ।

ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥

 

ತದನಂತರ, ಕುಂತಿಯ ಮಕ್ಕಳಾದ ಪಾಂಡವರಿಂದ ಕೂಡಿಕೊಂಡು ತನ್ನ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣ, ತನ್ನ ಪಟ್ಟಣದಲ್ಲಿ ಒಂದು ದಿನದ ಅಶ್ವಮೇಧ ಎನ್ನುವ ಯಾಗವನ್ನು ಮಾಡಿದನು.

[ಭಾಗವತ ಮತ್ತು ಹರಿವಂಶದಲ್ಲಿ ಈ ಅಶ್ವಮೇಧಯಾಗದ ಕುರಿತು ಹೇಳಿರುವುದನ್ನು ಕಾಣಬಹುದು:   ಕದಾಚಿದ್ ವಾಜಿಮೇಧೇನ ಯಷ್ಟುಮುದ್ಯಮ್ಯ ಕೇಶವಃ । ಮಹೀಮ್ ಪ್ರದಕ್ಷಿಣಂ ಕರ್ತುಂ ಪ್ರಾಹಿಣೋತ್ ಪ್ರೋಕ್ಷಿತಂ  ಹಯಂ’ [ಭಾಗವತ ೧೦.೧೦೦.೧] ಶ್ರೀಕೃಷ್ಣನು ಅಶ್ವಮೇಧಯಾಗ ಮಾಡಲು ಸಿದ್ಧನಾಗಿ, ಇಡೀ ಭೂಮಿಯನ್ನು ಸುತ್ತಿ ಬರಲು, ಮಂತ್ರದಿಂದ ಸಂಸ್ಕೃತವಾದ ಕುದುರೆಯನ್ನು ಕಳುಹಿಸಿದ.  ತತಃ ಕದಾಚಿದ್ ಧರ್ಮಾತ್ಮಾ ದೀಕ್ಷಿತೋ ಮಧುಸೂದನಃ । ಏಕಾಹೇನ ಮಹಾಬಾಹುಃ ಶಾಸ್ತ್ರೇ ದೃಷ್ಟೇನ ಕರ್ಮಣಾ’ (ಹರಿವಂಶ-ವಿಷ್ಣುಪರ್ವ ೧೧೧.೭) ಇಲ್ಲಿ ಏಕಾಹೇನ ಎಂದಿದೆ. ಅಂದರೆ ಅದು ಒಂದು ದಿನದ ಯಾಗವಾಗಿತ್ತು].

No comments:

Post a Comment