ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 28, 2021

Mahabharata Tatparya Nirnaya Kannada 21: 17-22

ನ ಕೃಷ್ಣರಾಮಕಾರ್ಷ್ಣಿಭಿಃ ಸುತಾ ನು ಮೇsತ್ರ ಪಾಲಿತಾಃ ।

ಕ್ವ ತೇsತ್ರ ಶಕ್ತಿರಿತ್ಯಮುಂ ಜಗಾದ ಸೋsರ್ಜ್ಜುನಮ್  ದ್ವಿಜಃ ॥೨೧.೧೭॥

 

ಯಾವಾಗ ಅರ್ಜುನ ತಾನು ರಕ್ಷಿಸುತ್ತೇನೆಂದು ಹೇಳಿದನೋ, ಆಗ ಆ ಬ್ರಾಹ್ಮಣನು ಅವನನ್ನು ಕುರಿತು: ‘ಕೃಷ್ಣನಿಂದಲೂ, ಬಲರಾಮನಿಂದಲೂ, ಪ್ರದ್ಯುಮ್ನರಿಂದಲೂ ನನ್ನ ಮಕ್ಕಳು ರಕ್ಷಿಸಲ್ಪಡಲಿಲ್ಲ(ರಕ್ಷಿಸುತ್ತೇವೆ ಎಂದು ಅವರು ಹೇಳಿಲ್ಲ), ಹೀಗಿರುವಾಗ ನಿನಗೆ ಈ ವಿಚಾರದಲ್ಲಿ ಎಲ್ಲಿದೆ ಶಕ್ತಿ’ ಎಂದು ಕೇಳಿದ.

 

ತದಾ ಜಗಾದ ಫಲ್ಗುನೋsಸುರೈರ್ವಿದೂಷಿತಾತ್ಮನಾ ।

ನ ವಿಪ್ರ ತಾದೃಶೋsಸ್ಮ್ಯಹಂ ಯಥೈವ ಕೇಶವಾದಯಃ ॥೨೧.೧೮॥

 

ಆಗ ಅರ್ಜುನನು ಅಸುರರಿಂದ ಕದಡಿದ ಮನಸ್ಸುಳ್ಳವನಾಗಿ(ಅಸುರಾವೇಶದಿಂದ) ಹೇಳುತ್ತಾನೆ: ‘ಹೇ ಬ್ರಾಹ್ಮಣ, ನಾನು ಕೃಷ್ಣ ಮೊದಲಾದವರಂತಲ್ಲ ಎಂದು.

 

ಮಯಾ ಜಿತಾ ಹಿ ಖಾಣ್ಡವೇ ಸುರಾಸ್ತಥಾsಸುರಾನಹಮ್ ।

ನಿವಾತವರ್ಮ್ಮನಾಮಕಾನ್  ವಿಜೇಷ್ಯ ಉತ್ತರತ್ರ ಹಿ ॥೨೧.೧೯॥

 

‘ನನ್ನಿಂದ ಖಾಣ್ಡವದಾಹ ಪ್ರಸಂಗದಲ್ಲಿ ಎಲ್ಲಾ ದೇವತೆಗಳೂ ಗೆಲ್ಲಲ್ಪಟ್ಟಿದ್ದಾರೆ. ಅದೇ ರೀತಿ ಮುಂದೆ ನಿವಾತವರ್ಮ ಹೆಸರಿನವರನ್ನೂ  (ನಿವಾತಕವಚ ಎನ್ನುವ ಹೆಸರಿನ ದೈತ್ಯರನ್ನೂ) ನಾನು ಗೆಲ್ಲುತ್ತೇನೆ

[ಭಾಗವತದಲ್ಲಿ ಅರ್ಜುನನ ಮಾತು ‘ಈಗಾಗಲೇ ಗೆದ್ದಿದ್ದೇನೆ’ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಮುಂದೆ ನಡೆಯುವುದು ನಿಶ್ಚಿತವಾಗಿದ್ದರೆ ಅದನ್ನು ‘ಭೂತಕಾಲದಲ್ಲೇ ಆಗಿ ಹೋಗಿದೆ ಎಂಬಂತೆ  ಹೇಳುವುದು ಪುರಾಣದ ಪರಿಭಾಷೆ. ‘ ನಾಹಂ ಸಙ್ಕರ್ಷಣೋ` ಬ್ರಹ್ಮನ್ ನ ಕೃಷ್ಣಃ ಕಾರ್ಷ್ಣಿರೇವ ಚ  । ಅಹಂ ಧನಞ್ಜಯೋ  ನಾಮ ಗಾಣ್ಡೀವಂ ಯಸ್ಯ ಕಾರ್ಮುಕಮ್’ (ಭಾಗವತ ೧೦.೧೦೦.೨೭)ನಿವಾತಕವಚಾಶ್ಚೈವ ವಾಸವೇನಾಪಿ ದುರ್ಜಯಾಃ ।  ಮಯೈವ ನಿಹತಾಃ ಸಙ್ಖೇ ಹಿರಣ್ಯಪುರವಾಸಿನಃ (೧೦.೧೦೦.೩೩) ಇಲ್ಲಿ ‘ನಿಹತಾಃ ಎನ್ನುವುದು ಖಂಡಿತ ಕೊಲ್ಲಲ್ಪಡುತ್ತಾರೆ ಎನ್ನುವ ಅಭಿಪ್ರಾಯ ಅಷ್ಟೇ. ಆದರೆ ಈ ರೀತಿ ವಿಶ್ಲೇಷಣೆ ಮಾಡಿದಾಗ ‘ಈ ವಿಷಯ ಅರ್ಜುನನಿಗೆ ನಿಶ್ಚಿತವಾಗಿ ಹೇಗೆ ಗೊತ್ತಿತ್ತು’ ಎನ್ನುವ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಮಹಾಭಾರತದಲ್ಲೇ(ಆದಿಪರ್ವ-೧೩೨.೧೨) ಕಾಣಸಿಗುತ್ತದೆ:  ‘ಸೂತಕೇ ವರ್ತಮಾನಾಂ ತಾಂ ವಾಗುವಾಚಾಶರೀರಿಣೀ’ ಕುಂತಿಗೆ ಅಶರೀರವಾಣಿಯಿಂದ ಇದೆಲ್ಲವೂ ಮೊದಲೇ ತಿಳಿದಿತ್ತು. ‘ಏತಸ್ಯ ಭುಜವೀರ್ಯೇಣ ಖಾಣ್ಡವೇ ಹವ್ಯವಾಹನಃ ಮೇದಸಾ ಸರ್ವಭೂತಾನಾಂ ತೃಪ್ತಿಂ ಯಾಸ್ಯತಿ ವೈ ಪರಾಮ್’ (೨೩) ‘ನಿವಾತಕವಚಾ ನಾಮ ದೈತ್ಯಾ ವಿಬುಧವಿದ್ವಿಷಃ । ಶಕ್ರಾಜ್ಞಯಾ ಮಹಾಬಾಹುಸ್ತಾನ್ ವಧಿಷ್ಯತಿ ತೇ ಸುತಃ’ (೨೭). ಅಶರೀರವಾಣಿ ಹೇಳಿರುವುದನ್ನು ಕುಂತಿ ಅರ್ಜುನನಿಗೆ ಹೇಳಿದ್ದಳು. ಆದ್ದರಿಂದ ಅವನಿಗೆ ‘ನಾನು ಕೊಂದೇ ಕೊಲ್ಲುತ್ತೇನೆ’ ಎಂದು ತಿಳಿದಿತ್ತು. ನಿಶ್ಚಿತವಾದ್ದರಿಂದ ಪುರಾಣ ಈ ರೀತಿ ಅನುವಾದ ಮಾಡಿದೆ. ಆಚಾರ್ಯರ ನಿರ್ಣಯ ಇದನ್ನು ಸ್ಪಷ್ಟಪಡಿಸುತ್ತದೆ].

 

ಉದೀರ್ಯ್ಯ ಚೇತಿ ಕೇಶವಂ ಸ ಊಚಿವಾನ್ ವ್ರಜಾಮ್ಯಹಮ್ ।

ಇತೀರಿತೋsವದದ್ಧರಿಸ್ತವಾತ್ರ ಶಕ್ಯತೇ ನು ಕಿಮ್ ॥೨೧.೨೦॥

 

ಕೃಷ್ಣನನ್ನು ಕುರಿತು ಈರೀತಿಯಾಗಿ ಮಾತನಾಡಿದ ಅರ್ಜುನ ‘ನಾನು ತೆರಳುತ್ತೇನೆ’ ಎಂದ.  ಅರ್ಜುನನಿಂದ ಈರೀತಿಯಾಗಿ ಹೇಳಲ್ಪಟ್ಟ ಕೃಷ್ಣನು ‘ನಿನಗೆ ಸಾಮರ್ಥ್ಯವಿದೆಯೇ‘ ಎಂದು ಕೇಳಿದ.

[ಭಾಗವತದಲ್ಲಿ(೧೦.೧೦೦.೩೧) ‘ಅಹಮೇವ ಗಮಿಷ್ಯಾಮಿ ನ ತ್ವಯಾ ಶಕ್ಯತೇsರ್ಜುನ’ ‘ನಾನೇ ಹೋಗುತ್ತೇನೆ, ನಿನ್ನಿಂದ ಆಗುವುದಿಲ್ಲ’ ಎಂದು ಕೃಷ್ಣ ಅರ್ಜುನನಿಗೆ ಹೇಳಿದ ಎಂದಿದ್ದಾರೆ. ಇನ್ನು ಹರಿವಂಶದಲ್ಲಿ ಹೇಳುವಂತೆ: ‘ರಕ್ಷಸೀತ್ಯೇವಮುಕ್ತಸ್ತು  ವ್ರೀಡಿತೋsಸ್ಮಿ ನರಾಧಿಪ(ವಿಷ್ಣುಪರ್ವ ೧೧೧.೧೫)- ‘ರಕ್ಷಣೆ ಮಾಡುತ್ತೇನೆ ಎನ್ನುವ ನಿನ್ನ ಮಾತನ್ನು ಕೇಳಿ ನನಗೆ ನಾಚಿಕೆಯಾಗುತ್ತಿದೆ’ ಎಂದು ಅರ್ಜುನ ಹೇಳಿದ  ಎಂದಿದ್ದಾರೆ. ಈ ಮೇಲಿನ ಎರಡೂ ಮಾತನ್ನೂ ಸಮನ್ವಯ ಮಾಡಿ ನೋಡಿದಾಗ ವ್ಯಂಗ್ಯವಾಗಿ (ತಮಾಷೆಗಾಗಿ) ಶ್ರೀಕೃಷ್ಣ ‘ರಕ್ಷಸಿ’ ಎಂದು ನುಡಿದಿದ್ದ ಎನ್ನುವುದು ತಿಳಿಯುತ್ತದೆ].

 

ವಿಲಜ್ಜಮಾನಮೀಕ್ಷ್ಯ ತಂ ಜಗಾದ ಕೇಶವೋsರಿಹಾ ।

ವ್ರಜೇತಿ ಸ ಪ್ರತಿಶ್ರವಂ ಚಕಾರ ಹಾಪ್ಯರಕ್ಷಣೇ ॥೨೧.೨೧॥

 

ವಹ್ನಿಂ ಪ್ರವೇಕ್ಷ್ಯೆsಶಕ್ತಶ್ಚೇದಿತ್ಯುಕ್ತ್ವಾ ಸರ್ವಯಾದವೈಃ ।

ಯಯೌ ನ ರಾಮಪ್ರದ್ಯುಮ್ನಾವನಿರುದ್ಧಂ ಚ ಕೇಶವಃ ೨೧.೨೨

 

ಭಗವಂತನ ಮಾತನ್ನು ಕೇಳಿ ನಾಚಿಕೊಳ್ಳುತ್ತಿರುವ ಅರ್ಜುನನನ್ನು ಕಂಡು, ಶತ್ರುಗಳನ್ನು ನಿಗ್ರಹಿಸುವ ನಾರಾಯಣನು ‘ಹೊರಡು’ ಎಂದು ಹೇಳಿದನು. ಅರ್ಜುನನಾದರೋ, ‘ನಾನು ಬ್ರಾಹ್ಮಣನ ಮಕ್ಕಳನ್ನು ರಕ್ಷಿಸದೇ ಹೋದರೆ, ಈ ಕಾರ್ಯದಲ್ಲಿ ನಾನು ಆಶಕ್ತನಾದರೆ ಅಗ್ನಿಪ್ರವೇಶ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ. ಈರೀತಿಯಾಗಿ ಹೇಳಿ, ಎಲ್ಲಾ ಯಾದವರಿಂದ ಕೂಡಿ ಅರ್ಜುನ ಹೊರಟ. (ಆದರೆ ಕೆಲವರು ಮಾತ್ರ ಅವನ ಜೊತೆಗೆ ಹೋಗಿರಲಿಲ್ಲ).  ಕೃಷ್ಣನು ಬಲರಾಮ-ಪ್ರದ್ಯುಮ್ನರನ್ನು ಹಾಗೂ ಅನಿರುದ್ಧನನ್ನೂ ಕೂಡಾ  ಅರ್ಜುನನಿಗೆ ಸಹಾಯಮಾಡಿ ಎನ್ನುವ ವಿಚಾರದಲ್ಲಿ ನಿಯೋಜಿಸಲಿಲ್ಲ.

[ಹರಿವಂಶದಲ್ಲಿ ಈ ಮಾತು ಬರುತ್ತದೆ: ‘ ತ್ವತ್ಪುರೋಗಾಶ್ಚ ರಕ್ಷನ್ತು ವೃಷ್ಣ್ಯನ್ಧಕಮಹಾರಥಾಃ  ಋತೇ ರಾಮಂ ಮಹಾಬಾಹುಂ ಪ್ರದ್ಯುಮ್ನಂ ಚ ಮಹಾಬಲಮ್’(೧೭). ಇಲ್ಲಿ ರಾಮನನ್ನು, ಪ್ರದ್ಯುಮ್ನನನ್ನೂ ಕೂಡಾ ಎಂದಿದ್ದಾರೆ. ಇಲ್ಲಿ ಬಳಕೆಯಾದ ಚ-ಕಾರ ಅನಿರುದ್ಧನನ್ನು ಸೂಚಿಸುತ್ತದೆ ಎನ್ನುವುದು ಆಚಾರ್ಯರ ನಿರ್ಣಯದಿಂದ ತಿಳಿಯುತ್ತದೆ.] 

No comments:

Post a Comment