ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 15, 2022

Mahabharata Tatparya Nirnaya Kannada 22-266-272

 

ಮೋಚಯಿತ್ವಾSನಿರುದ್ಧಂ ಚ ಯಯೌ ಬಾಣೇನ ಪೂಜಿತಃ ।

ಏವಮಗ್ನೀನಙ್ಗಿರಸಂ ಜ್ವರಂ ಸ್ಕನ್ದಮುಮಾಪತಿಮ್             ॥೨೨.೨೬೬॥

 

ಬಾಣಂ ಚಾಯತ್ನತೋ  ಜಿತ್ವಾ ಪ್ರಾಯಾದ್ ದ್ವಾರವತೀಂ ಪುನಃ ।

ಯೇನಾಯತ್ನೇನ ವಿಜಿತಃ ಸರ್ವಲೋಕಹರೋ ಹರಃ                 ॥೨೨.೨೬೭॥

 

ಕಿಂ ಜ್ವರಾದಿಜಯೋ ವಿಷ್ಣೋಸ್ತಸ್ಯಾನನ್ತಸ್ಯ ಕತ್ಥ್ಯತೇ ।

ಈದೃಶಾನನ್ತಸಙ್ಖ್ಯಾನಾಮ್ ಶಿವಾನಾಂ ಬ್ರಹ್ಮಣಾಮಪಿ             ॥೨೨.೨೬೮॥

 

ರಮಾಯಾ ಅಪಿ ಯದ್ವೀಕ್ಷಾಂ ವಿನಾ ನ ಚಲಿತುಂ ಬಲಮ್ ।

ನಚ ಜ್ಞಾನಾದಯೋ ಭಾವಾ ನಚಾಸ್ತಿತ್ವಮಪಿ ಕ್ವಚಿತ್                 ॥೨೨.೨೬೯॥

 

ಅನನ್ತಶಕ್ತೇಃ ಕೃಷ್ಣಸ್ಯ ನ ಚಿತ್ರಃ ಶೂಲಿನೋ ಜಯಃ ।

ಚಿತ್ರಲೇಖಾಸಮೇತೋಷಾನ್ವಿತಪೌತ್ರಸಮನ್ವಿತಃ                     ॥೨೨.೨೭೦॥

 

ಸರಾಮಃ ಸಸುತೋ ವೀನ್ದ್ರಮಾರು̐ಹ್ಯ ದ್ವಾರಕಾಂ ಗತಃ ।

ರೇಮೇ ತತ್ರ ಚಿರಂ ಕೃಷ್ಣೋ ನಿತ್ಯಾನನ್ದೋ ನಿಜೇಚ್ಛಯಾ             ॥೨೨.೨೭೧॥

 

ಶ್ರೀಕೃಷ್ಣನು ಅನಿರುದ್ಧನನ್ನು ಬಂಧನದಿಂದ ಬಿಡುಗಡೆಗೊಳಿಸಿ, ಬಾಣನಿಂದ ಸತ್ಕಾರಕ್ಕೆ ಒಳಗಾಗಿ ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಈರೀತಿಯಾಗಿ ಶ್ರೀಕೃಷ್ಣ ಅಗ್ನಿಗಳನ್ನೂ, ರುದ್ರನ ಭೃತ್ಯನಾಗಿರುವ ಅಂಗಿರಸನನ್ನೂ, ಜ್ವರನನ್ನೂ, ಷಣ್ಮುಖನನ್ನೂ, ಸದಾಶಿವನನ್ನೂ, ಬಾಣನನ್ನೂ, ಹೀಗೆ ಎಲ್ಲರನ್ನೂ ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಯಾವ ಪರಮಾತ್ಮನಿಂದ ಯಾವುದೇ ಯತ್ನವಿಲ್ಲದೆ ಪ್ರಳಯಕಾಲದಲ್ಲಿ ಎಲ್ಲಾ ಲೋಕವನ್ನು ನಾಶಮಾಡುವ ಸದಾಶಿವನು ಗೆಲ್ಲಲ್ಪಟ್ಟನೋ, ಅಂತಹ ನಾರಾಯಣನಿಗೆ ಜ್ವರ ಮೊದಲಾದವರ ಮೇಲಿನ ವಿಜಯವು  ಏನು ಆಶ್ಚರ್ಯ?

ಅನಂತ ಕಾಲದಲ್ಲಿ ಅನಂತ ಸಂಖ್ಯೆಯಲ್ಲಿರುವ ಬ್ರಹ್ಮ-ರುದ್ರಾದಿಗಳಿಗಾಗಲೀ, ಅಷ್ಟೇ ಅಲ್ಲದೇ ಲಕ್ಷ್ಮೀದೇವಿಗೂ ಕೂಡಾ, ಯಾರ ಕಡೆಗಣ್ಣ ನೋಟವು ಇಲ್ಲದೇ ಅಲುಗಾಡಲೂ ಕೂಡಾ ಬಲವಿಲ್ಲವೋ, ಜ್ಞಾನ ಮೊದಲಾಗಿರುವ ಸಂಗತಿಗಳು ಇರುವುದಿಲ್ಲವೋ, ಅಸ್ತಿತ್ವ ಕೂಡಾ ಸಾಧ್ಯವಾಗುವುದಿಲ್ಲವೋ, ಅಂತಹ  ಎಣೆಯಿರದ ಕಸುವಿರುವ ಶ್ರೀಕೃಷ್ಣ ಸದಾಶಿವನನ್ನು ಗೆಲ್ಲುವುದು ಆಶ್ಚರ್ಯಕರವಾದುದ್ದೇ ಅಲ್ಲ.

ಹೀಗೆ ಶ್ರೀಕೃಷ್ಣ ಚಿತ್ರಲೇಖೆಯೊಂದಿಗಿರುವ ಉಷಾದೇವಿಯಿಂದ ಕೂಡಿರುವ ಮೊಮ್ಮಗನಾದ ಅನಿರುದ್ಧನಿಂದ ಕೂಡಿಕೊಂಡು, ಬಲರಾಮ, ಪ್ರದ್ಯುಮ್ನನಿಂದಲೂ ಕೂಡಿಕೊಂಡು, ಗರುಡನನ್ನೇರಿ ದ್ವಾರಕೆಗೆ ತೆರಳಿದನು. ಅಲ್ಲಿ ಸದಾ ಆನಂದವನ್ನು ಹೊಂದಿರುವ ಶ್ರೀಕೃಷ್ಣನು ತನ್ನ ಬಯಕೆಯಂತೆ ಕ್ರೀಡಿಸಿದನು.

 

ಏವಂವಿಧಾನ್ಯಗಣಿತಾನಿ ಯದೂತ್ತಮಸ್ಯ ಕರ್ಮ್ಮಾಣ್ಯಗಣ್ಯಮಹಿಮಸ್ಯ ಮಹೋತ್ಸವಸ್ಯ ।

ನಿತ್ಯಂ ರಮಾಕಮಲಜನ್ಮಗಿರೀಶಶಕ್ರಸೂರ್ಯ್ಯಾದಿಭಿಃ ಪರಿನುತಾನಿ ವಿಮುಕ್ತಿದಾನಿ ॥೨೨.೨೭೨॥

 

ಎಣೆಯಿರದ ಮಹಿಮೆಯುಳ್ಳ, ಉತ್ಕೃಷ್ಟ ಆನಂದ ಸ್ವರೂಪನಾದ,  ಯಾವಾಗಲೂ ಕೂಡಾ ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಇಂದ್ರ, ಸೂರ್ಯ, ಇವರೇ ಮೊದಲಾಗಿರುವ ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವ ಪರಮಾತ್ಮನ ಕರ್ಮಗಳ ಸ್ತೋತ್ರ - ಮುಕ್ತಿಯನ್ನು ಕೊಡತಕ್ಕವುಗಳಾಗಿವೆ.

No comments:

Post a Comment