ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, February 6, 2019

Mahabharata Tatparya Nirnaya Kannada 11.226-11.229


ತತ್ ತ್ವಂ ಭವಸ್ವಾsಶು ಚ ದೇವಕೀಸುತಸ್ತಥೈವ ಯೋ ದ್ರೋಣನಾಮಾ ವಸುಃ ಸಃ
ಸ್ವಭಾರ್ಯ್ಯಯಾ ಧರಯಾ ತ್ವತ್ಪಿತೃತ್ವಂ ಪ್ರಾಪ್ತುಂ ತಪಸ್ತೇಪ ಉದಾರಮಾನಸಃ ॥೧೧.೨೨೬

ಕಾಶ್ಯಪನ  ಕುರಿತು ವಿವರಿಸಿದ ಚತುರ್ಮುಖ ಭಗವಂತನಲ್ಲಿ  ‘ನೀನು ಕೂಡಲೇ ದೇವಕಿಯ ಮಗನಾಗಿ ಆವಿರ್ಭವಿಸು’ ಎಂದು ಪ್ರಾರ್ಥಿಸುತ್ತಾನೆ.
[ಭಗವಂತ ವಸುದೇವ-ದೇವಕಿಯ ಮಗನಾಗಿ ಹುಟ್ಟಿದರೂ ಕೂಡಾ,  ಬೆಳೆಯಬೇಕಾಗಿರುವುದು ಬೇರೆಡೆ. ಏಕೆ ಹೀಗೆ? ಇದರ ಹಿನ್ನೆಲೆಯ ಕಥೆಯನ್ನೂ ಇಲ್ಲಿ ಚತುರ್ಮುಖ ನಾರಾಯಣನಿಗೆ ವಿವರಿಸುತ್ತಾನೆ:]
ದ್ರೋಣ ಎಂಬ ಹೆಸರುಳ್ಳ ವಸುವು ತನ್ನ ಹೆಂಡತಿಯಾದ ಧರೆಯೊಂದಿಗೆ ಕೂಡಿಕೊಂಡು ನಿನ್ನ ಅಪ್ಪನಾಗಬೇಕೆಂದು ಉತ್ಕೃಷ್ಟನಾದ ಮನಸ್ಸುಳ್ಳವನಾಗಿ ತಪಸ್ಸನ್ನು ಮಾಡಿರುವನು.
[ಈ ಕುರಿತಾದ ವಿವರವನ್ನು ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ(೧೩.೧೪೭) ಕಾಣುತ್ತೇವೆ: ‘ನಂದೋ ದ್ರೋಣಃ  ಸಮಾಖ್ಯಾತೋ ಯಶೋದಾsಥ ಧರಾsಭವತ್    ಬ್ರಹ್ಮಾಂಡಪುರಾಣದಲ್ಲೂ (ಉಪೋದ್ಘಾತಪಾದೇ-೨೩೮-೨೩೯) ಈ ವಿವರ  ಕಾಣಸಿಗುತ್ತದೆ: ‘ಪುರುಷಃ ಕಾಶ್ಯಪಸ್ತವಾಸಿದದಿತಿಸ್ತತ್ಪ್ರಿಯಾ  ತಥಾ ಕಾಶ್ಯಪೋ ಬ್ರಹ್ಮಣೋಂsಶಾಶ್ಚ ಪೃಥಿವ್ಯಾ ಅದಿತಿಸ್ತಥಾ ನಂದೋ ದ್ರೋಣಃ ಸಮಾಖ್ಯಾತೋ ಯಶೋದಾ ಚ ಧರಾsಭವತ್’]

ತಸ್ಮೈ ವರಃ ಸ ಮಯಾ ಸನ್ನಿಸೃಷ್ಟಃ ಸ ಚಾsಸ ನನ್ದಾಖ್ಯ ಉತಾಸ್ಯ ಭಾರ್ಯ್ಯಾ
ನಾಮ್ನಾ ಯಶೋದಾ ಸ ಚ ಶೂರತಾತಸುತಸ್ಯ ವೈಶ್ಯಾಪ್ರಭವೋsಥ ಗೋಪಃ ॥೧೧.೨೨೭   

ಈರೀತಿ ತಪಸ್ಸನ್ನಾಚರಿಸಿದ ದ್ರೋಣನಿಗೆ (ವಸುದಂಪತಿಗಳಿಗೆ) ನನ್ನಿಂದ ವರವು ಕೊಡಲ್ಪಟ್ಟಿದೆ. ಅವನಾದರೋ, ರಾಜಾಧಿದೇವನ^  ವೈಶ್ಯಪತ್ನಿಯಲ್ಲಿ  ಹುಟ್ಟಿ   ನಂದನೆಂಬ ಹೆಸರಿನ ಗೋಪನಾಗಿ ಭೂಮಿಯಲ್ಲಿದ್ದಾನೆ. ಅವನ ಹೆಂಡತಿ ‘ಧರೆ’ ಯಶೋದೆ ಎಂಬ ಹೆಸರಿನಿಂದ ಭೂಮಿಯಲ್ಲಿ ಹುಟ್ಟಿದ್ದಾಳೆ.
[^ಇಲ್ಲಿ ಆಚಾರ್ಯರು ‘ಶೂರತಾತಸುತಸ್ಯ’ ಎನ್ನುವ ಪ್ರಯೋಗ ಮಾಡಿರುವುದನ್ನು ಕಾಣುತ್ತೇವೆ. ಶೂರಸೇನನ ತಂದೆಯ ಇಬ್ಬರು ಗಂಡುಮಕ್ಕಳಲ್ಲಿ, ಶೂರನ ತಮ್ಮನಾದ ರಾಜಾಧಿದೇವನ ಮಗನೇ ನಂದ’. ಇದು ಈ ಮಾತಿನ ಅರ್ಥವಿರಬಹುದು.  ಬ್ರಹ್ಮಾಂಡಪುರಾಣದಲ್ಲಿ(ಉಪೋದ್ಘಾತಪಾದೇ ೭೧.೧೩೭) ಈ ಕುರಿತು ಒಂದು ಸುಳಿವು ಸಿಗುತ್ತದೆ. ಅಲ್ಲಿ ‘ರಾಜಾಧಿದೇವಃ  ಶೂರಶ್ಚ  ವಿಡೂರಥಸುತೋsಭವತ್’ ಎಂದು ಹೇಳಿದ್ದಾರೆ. ರಾಜಾಧಿದೇವ ಮತ್ತು ಶೂರಸೇನ ವಿಡೂರಥನ ಮಕ್ಕಳಾಗಿದ್ದಾರೆ ಎಂದು ಅಲ್ಲಿ ಹೇಳಿರುವುದರಿಂದ, ಶೂರನ ತಂದೆ ವಿಡೂರಥ, ಅವನ ಮಗ ಎಂದರೆ-ರಾಜಾಧಿದೇವ, ಈ ರಾಜಾಧಿದೇವನ ವೈಶ್ಯಪತ್ನಿಯಲ್ಲಿ ಹುಟ್ಟಿದವನೇ ನಂದ ಎಂದು ನಾವು ತಿಳಿಯಬಹುದು. ಆದ್ದರಿಂದ ವಸುದೇವ ಮತ್ತು ನಂದಗೋಪ ಸೋದರಸಂಬಂಧಿ (cousins) ]    

ತೌ ದೇವಕೀವಸುದೇವೌ ಚ ತೇಪತುಸ್ತಪಸ್ತ್ವದೀಯಂ ಸುತಮಿಚ್ಛಮಾನೌ
ತ್ವಾಮೇವ ತಸ್ಮಾತ್ ಪ್ರಥಮಂ ಪ್ರದರ್ಶ್ಯ ತತ್ರ ಸ್ವರೂಪಂ ಹಿ ತತೋ ವ್ರಜಂ ವ್ರಜ ॥೧೧.೨೨೮

ಆ ದೇವಕಿ ಮತ್ತು ವಸುದೇವರು ನಿನ್ನನ್ನೇ ಮಗನಾಗಿ  ಪಡೆಯಲು ಬಯಸಿ, ನಿನ್ನ ಸಂಬಂಧಿಯಾದ ತಪಸ್ಸನ್ನು ಮಾಡಿರುವರು.  ಆ ಕಾರಣದಿಂದ ಮೊದಲು ನೀನು  ದೇವಕೀ-ವಸುದೇವರಲ್ಲಿ ಪ್ರಾದುರ್ಭಾವಗೊಂಡು ನಂತರ ವ್ರಜಕ್ಕೆ(ನಂದಗೋಪನ ಮನೆಗೆ) ತೆರಳು. 

ಇತೀರಿತೇ ಸೋsಬ್ಜಭವೇನ ಕೇಶವಸ್ತಥೇತಿ ಚೋಕ್ತ್ವಾ ಪುನರಾಹ ದೇವತಾಃ
ಸರ್ವೇ ಭವನ್ತೋ ಭವತಾsಶು ಮಾನುಷೇ ಕಾರ್ಯ್ಯಾನುಸಾರೇಣ ಯಥಾನುರೂಪತಃ ॥೧೧.೨೨೯    

ಈರೀತಿಯಾಗಿ ಬ್ರಹ್ಮನಿಂದ ಹೇಳಲ್ಪಡುತ್ತಿರಲು, ಆ ಕೇಶವನು ‘ಹಾಗೇ ಆಗಲಿ’ ಎಂದು ಹೇಳಿ, ಮತ್ತೆ ದೇವತೆಗಳನ್ನು ಕುರಿತು ‘ನೀವೆಲ್ಲರೂ ಕೂಡಾ ನಿಮಗೆ ವಹಿಸಿರುವ ಕಾರ್ಯಕ್ಕೆ ಅನುಗುಣವಾಗಿ ಮತ್ತು ಅದಕ್ಕನುರೂಪವಾಗಿ ಮನುಷ್ಯರಾಗಿ ಹುಟ್ಟಿ’  ಎಂದು ಹೇಳಿದನು. 

No comments:

Post a Comment