ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 14, 2019

Mahabharata Tatparya Nirnaya Kannada 12.120-12.125


ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ ಸಿಂಹಸ್ಥಯೋರ್ಗ್ಗುರುರವ್ಯೋಃ ಪರೇಶಃ ।
ಉದೈತ್ ತತಃ ಫಾಲ್ಗುನೇ ಫಲ್ಗುನೋsಭೂದ್ ಗತೇ ತತೋ ಮಾದ್ರವತೀ ಬಭಾಷೇ ॥೧೨.೧೨೦

ಜಾತಾಃ ಸುತಾಸ್ತೇ ಪ್ರವರಾಃ ಪೃಥಾಯಾಮೇಕಾsನಪತ್ಯಾsಹಮತಃ ಪ್ರಸಾದಾತ್ ।
ತವೈವ ಭೂಯಾಸಮಹಂ ಸುತೇತಾ ವಿಧತ್ಸ್ವ ಕುನ್ತೀಂ ಮಮ ಮನ್ತ್ರದಾತ್ರೀಮ್ ॥೧೨.೧೨೧॥


ಯಾವ ವರ್ಷದಲ್ಲಿ,  ಭಾದ್ರಪದ ಮಾಸದಲ್ಲಿ,  ಸಿಂಹರಾಶಿಯಲ್ಲಿ ಗುರು ಮತ್ತು ಸೂರ್ಯ ಇರುತ್ತಿರಲು ಕೃಷ್ಣನು ಆವಿರ್ಭವಿಸಿದನೋ, ಅಲ್ಲಿಂದ  ಮುಂದಿನ ಫಲ್ಗುಣ ಮಾಸದಲ್ಲಿ ಅರ್ಜುನನ ಜನನವಾಯಿತು. (ಅಂದರೆ ಅರ್ಜುನ ಶ್ರೀಕೃಷ್ಣ ಜನಿಸಿದ ಆರು ತಿಂಗಳುಗಳ ನಂತರ ಜನಿಸಿದ).
ಅರ್ಜುನನ ಜನನಾನಂತರ ಮಾದ್ರಿಯು ಪಾಂಡುವನ್ನು ಕುರಿತು ಈರೀತಿ ಹೇಳುತ್ತಾಳೆ: ‘ನಿನಗೆ ಕುಂತಿಯಲ್ಲಿ ಉತ್ಕೃಷ್ಟರಾದ ಮಕ್ಕಳು ಹುಟ್ಟಿದ್ದಾರೆ. ಆದರೆ ನಾನೊಬ್ಬಳೇ ಮಕ್ಕಳಿಲ್ಲದವಳು. ಆಕಾರಣದಿಂದ ನಿನ್ನ ಅನುಗ್ರಹದಿಂದಲೇ ನಾನು ಮಕ್ಕಳೊಂದಿಗಳಾಗುತ್ತೇನೆ. ಅದರಿಂದ ಕುಂತಿಯನ್ನು ನನಗೆ ಮಂತ್ರವನ್ನು ಕೊಡುವವಳನ್ನಾಗಿ ಮಾಡು’ ಎಂದು.

ಇತೀರಿತಃ ಪ್ರಾಹ ಪೃಥಾಂ ಸ ಮಾದ್ರ್ಯೈ ದಿಶಸ್ವ ಮನ್ತ್ರಂ ಸುತದಂ ವರಿಷ್ಠಮ್
ಇತ್ಯೂಚಿವಾಂಸಂ ಪತಿಮಾಹ ಯಾದವೀ ದದ್ಯಾಂ ತ್ವದರ್ತ್ಥೇ ತು ಸಕೃತ್ ಫಲಾಯ ॥೧೨.೧೨೨॥      

ಈರೀತಿಯಾಗಿ ಮಾದ್ರಿಯಿಂದ ಹೇಳಲ್ಪಟ್ಟ ಪಾಂಡುವು ಕುಂತಿಯನ್ನು ಕುರಿತು ಹೇಳುತ್ತಾನೆ: ‘ಮಾದ್ರಿಗೆ ಉತ್ಕೃಷ್ಟವಾದ ಮಕ್ಕಳನ್ನು ಕೊಡುವ ಮಂತ್ರವನ್ನು ಕೊಡು’ ಎಂದು.
ಈ ರೀತಿಯಾಗಿ ಪತಿಯಿಂದ ಹೇಳಲ್ಪಟ್ಟ ಯದುಕುಲೋತ್ಪನ್ನಳಾದ ಕುಂತಿಯು  ‘ನಿನಗಾಗಿ ಒಮ್ಮೆಮಾತ್ರ ಫಲ ಬರುವಹಾಗೆ ಮಂತ್ರವನ್ನು ಕೊಡುತ್ತೇನೆ’ ಎನ್ನುತ್ತಾಳೆ.

ಉವಾಚ ಮಾದ್ರ್ಯೈ ಸುತದಂ ಮನುಂ ಚ ಪುನಃ ಫಲಂ ತೇ ನ ಭವಿಷ್ಯತೀತಿ ।
ಮನ್ತ್ರಂ ಸಮಾದಾಯ ಚ ಮದ್ರಪುತ್ರೀ ವ್ಯಚಿನ್ತಯತ್ ಸ್ಯಾಂ ನು ಕಥಂ ದ್ವಿಪುತ್ರಾ ॥೧೨.೧೨೩॥

ಹೀಗೆ ಮಾದ್ರಿಗೆ ಮಕ್ಕಳನ್ನು ಕೊಡುವ ಮಂತ್ರವನ್ನು ಉಪದೇಶಿಸಿದ ಕುಂತಿ,  ‘ನಿನಗೆ ಇನ್ನೊಮ್ಮೆ ಫಲವು ಆಗಲಾರದು(ಒಮ್ಮೆ ಮಾತ್ರ ಈ ಮಂತ್ರ ನಿನಗೆ ಫಲಪ್ರದವಾಗಲಿದೆ, ಇನ್ನೊಮ್ಮೆ ಆಗಲಾರದು)’  ಎಂದು ಹೇಳಿದಳು. ಕುಂತಿಯಿಂದ ಮಂತ್ರವನ್ನು ಪಡೆದ ಮಾದ್ರಿಯು ‘ಹೇಗೆ ತಾನು ಇಬ್ಬರು ಮಕ್ಕಳನ್ನು ಹೊಂದಿಯೇನು’ ಎಂದು ಯೋಚನೆ ಮಾಡಲಾರಂಭಿಸಿದಳು.

ಸದಾsವಿಯೋಗೌ ದಿವಿಜೇಷು ದಸ್ರೌ ನಚೈತಯೋರ್ನ್ನಾಮಭೇದಃ ಕ್ವಚಿದ್ಧಿ।
ಏಕಾ ಭಾರ್ಯ್ಯಾ ಸೈತಯೋರಪ್ಯುಷಾ ಹಿ ತದಾಯಾತಃ ಸಕೃದಾವರ್ತ್ತನಾದ್ ದ್ವೌ ॥೧೨.೧೨೪

‘ದೇವತೆಗಳಲ್ಲಿ ಅಶ್ವೀದೇವತೆಗಳು ಯಾವಾಗಲೂ ಬೇರ್ಪಡಲಾರರು. ಅವರಿಗೆ ನಾಮಭೇದವೂ ಇಲ್ಲಾ.  ಯಾವಾಗಲೂ ಒಂದಿಗೇ ಇರುವ ಅವರಿಬ್ಬರಿಗೆ ಉಷಾ ಒಬ್ಬಳೇ ಹೆಂಡತಿ. ಆ ಕಾರಣದಿಂದ ಒಂದಾವರ್ತಿ  ಮಂತ್ರವನ್ನು ಹೇಳುವುದರಿಂದ ಅವರಿಬ್ಬರೂ ಬರುತ್ತಾರೆ’.

ಇತೀಕ್ಷನ್ತ್ಯಾssಕಾರಿತಾವಶ್ವಿನೌ ತೌ ಶೀಘ್ರಪ್ರಾಪ್ತೌ ಪುತ್ರಕೌ ತತ್ಪ್ರಸೂತೌ ।
ತಾವೇವ ದೇವೌ ನಕುಲಃ ಪೂರ್ವಜಾತಃ ಸಹದೇವೋsಭೂತ್ ಪಶ್ಚಿಮಸ್ತೌ ಯಮೌ ಚ ॥೧೨.೧೨೫

ಈರೀತಿಯಾಗಿ ಯೋಚನೆ ಮಾಡಿದ ಅವಳಿಂದ  ಕರೆಯಲ್ಪಟ್ಟ ಅಶ್ವಿನೀದೇವತೆಗಳು, ಶೀಘ್ರದಲ್ಲಿಯೇ ಬಂದು, ಪುತ್ರೋತ್ಪತ್ತಿ ಮಾಡುವವರಾಗಿ, ತಾವೇ ಮಾದ್ರಿಯಲ್ಲಿ  ಹುಟ್ಟಿ ಬಂದರು. ಮೊದಲು ಹುಟ್ಟಿದವ ನಕುಲ, ನಂತರ ಸಹದೇವ. ಅವರು ಅವಳಿಗಳೂ ಕೂಡಾ.
[ವಿಶೇಷವಾಗಿ ಅವಳಿಗಳಲ್ಲಿ ಮೊದಲು ಹುಟ್ಟುವವನು ಚಿಕ್ಕವನು ಹಾಗು ನಂತರ ಹುಟ್ಟುವವನು ದೊಡ್ಡವನು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸಹದೇವ ಅಣ್ಣ ಹಾಗು ನಕುಲ ತಮ್ಮ.
ಸಂಸ್ಕೃತ ಭಾಷೆಯಲ್ಲಿ ‘ಅಲ್ಪಾsಚಿತರಂ ಪೂರ್ವಂ’ ಎಂಬ ನಿಯಮದಂತೆ  ಅಲ್ಪ ಅಚ್ಚು ಯಾವುದಕ್ಕಿದೆಯೋ ಅದನ್ನು ಪೂರ್ವದಲ್ಲಿ ಉಚ್ಛಾರ ಮಾಡಬೇಕು.  (ಉದಾಹರಣೆಗೆ : ಕೃಷ್ಣಾರ್ಜುನ)  ಹಾಗಾಗಿ ಇವರನ್ನು ನಕುಲಸಹದೇವ ಎಂದು ಕರೆಯುತ್ತಾರೆ.] 

No comments:

Post a Comment