ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 20, 2019

Mahabharata Tatparya Nirnaya Kannada 1307_1313


ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದದ್ಧ್ಯಮತ್ರಕಮ್ ॥೧೩.೦೭॥

ಒಮ್ಮೆ ಶ್ರೀಕೃಷ್ಣ ತಾಯಿಯ ಮೊಲೆಯನ್ನುಣ್ಣುತ್ತಿರುವಾಗ, ಒಲೆಯಮೇಲೆ ಇಟ್ಟ ಹಾಲು ಉಕ್ಕಿತೆಂದು  ಯಶೋದೆ ಆತನನ್ನು ನೆಲದಮೇಲಿಟ್ಟು,  ಹಾಲಿನ ಪಾತ್ರೆಯನ್ನು ಒಲೆಯಿಂದ ಇಳಿಸಲು ಹೋಗುತ್ತಾಳೆ. ಆಗ ನೆಲದಲ್ಲಿ ಇಡಲ್ಪಟ್ಟವನಾದ ಕೃಷ್ಣ ಅಲ್ಲಿದ್ದ  ಮೊಸರಿನ ಪಾತ್ರೆಯನ್ನು ಒಡೆಯುತ್ತಾನೆ.

ಸ ಮತ್ಥ್ಯಮಾನದದ್ಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥

ಮಥಿಸಲ್ಪಟ್ಟ ಮೊಸರಿನಿಂದ ಉಕ್ಕಿಬಂದಿರುವ, ಚಂದ್ರನಿಗೆ ಸದೃಶವಾದ, ಆಗಷ್ಟೇ ಕಡೆದಿಟ್ಟಿರುವ  ಬೆಣ್ಣೆಯನ್ನು ತೆಗೆದುಕೊಂಡ ಶ್ರೀಕೃಷ್ಣ,  ಏಕಾಂತದಲ್ಲಿ ಅದನ್ನು ತಿನ್ನುತ್ತಾನೆ ಕೂಡ.

ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥


ಇತಿ ಸ್ವಧರ್ಮ್ಮಮುತ್ತಮಂ ದಿವೌಕಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥

ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥

ಯಾವ ಕುಲದಲ್ಲಿ ಹುಟ್ಟುತ್ತಾನೋ, ಯಾವ ಯುಗದಲ್ಲಿ ಹುಟ್ಟುತ್ತಾನೋ, ಯಾವ ವಯಸ್ಸಿನಲ್ಲಿ ತೋರಿಸಿಕೊಳ್ಳುತ್ತಾನೋ, ಹಾಗೇ ದೇವತೆಗಳ ಹುಟ್ಟಿನಲ್ಲಿ ಆರೀತಿಯ ಪ್ರವೃತ್ತಿಗಳು ಇರಬೇಕು ಎಂಬ  ಉತ್ಕೃಷ್ಟವಾದ ಧರ್ಮವನ್ನು ದೇವತೆಗಳಿಗೆ ತೋರಿಸುತ್ತಾ, ಅಧರ್ಮಕ್ಕೆ ಬೆಂಕಿಯಂತಿದ್ದರೂ ಜನಾರ್ದನನು ಎಲ್ಲವನ್ನೂ ಅನುಕರಿಸಿ ತೋರಿದನು.
ಅಂದರೆ: ದೇವರು ಮನುಷ್ಯ, ಪ್ರಾಣಿ ಮೊದಲಾದ ರೂಪಗಳನ್ನು ತಳೆದಾಗ,  ಆ ಕಾಲದ, ಆ ಯುಗದ, ಆ ಯೋನಿಗೆ ಅನುಗುಣವಾದ ಬಾಲ್ಯ-ಯೌವನ ಮೊದಲಾದವುಗಳನ್ನು ತೋರಿಸುತ್ತಾ, ಆಯಾ ಯೋನಿಯಲ್ಲಿ ಉಂಟಾದ ಕ್ರಿಯೆಗಳನ್ನು ಮಾಡಿ ತೋರುತ್ತಾನೆ. ವಸ್ತುತಃ ಭಗವಂತ  ನಿತ್ಯನಾದವನು(ಒಂದೇರೀತಿ ಇರುವವನು). ಆದರೆ ಅವತಾರದಲ್ಲಿ  ಬಾಲ್ಯಬಂದಾಗ ಬಾಲ್ಯದ ಚೇಷ್ಟೆಗಳು, ಯೌವನ ಬಂದಾಗ ಯೌವನದ ಚೇಷ್ಟೆಗಳು ಈರೀತಿ ಕ್ರಿಯೆಯ ಬದಲಾವಣೆಯನ್ನು ಅವನು ಮಾಡಿ ತೋರುತ್ತಾನೆ.

ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥

ಅವನು ಬ್ರಾಹ್ಮಣನಾಗಿ, ರಾಜನಾಗಿ, ಗೋಪಸ್ವರೂಪವುಳ್ಳವನಾಗಿ, ಆಯಾಯೋನಿಗಳಲ್ಲಿ ಉಂಟಾದ ಕ್ರಿಯೆಗಳನ್ನು ದೇವತಾ ಶಿಕ್ಷಣಕ್ಕಾಗಿ ಭಗವಂತ ಮಾಡುತ್ತಾನೆ(ದೇವರ ಕ್ರಿಯೆಗಳು ದೇವತೆಗಳಿಗೆ ಶಿಕ್ಷಣ ರೂಪದಲ್ಲಿರುತ್ತವೆ).

ತಥಾsಪ್ಯನನ್ಯದೇವತಾಸಮಂ ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥

ಹೀಗೆ ಮಾಡುತ್ತಿದ್ದಾಗಲೂ, ಎಲ್ಲ ದೇವತೆಗಳಿಗಿಂತಲೂ ಮಿಗಿಲಾದ, ತನ್ನ ಬಲವನ್ನು ಮತ್ತೆ ಮತ್ತೆ ತೋರಿಸುತ್ತಾ, ತನ್ನ ಅಸಾದಾರಣವಾದ ಗುಣಗಳನ್ನು ತೋರಿಸುತ್ತಾನೆ.
[ದೇವರು ತೀರ ಸಾಮಾನ್ಯನಾಗಿ ಕಂಡರೂ ನಮಗೆ ಅದರಿಂದ ಪ್ರಯೋಜನವಿಲ್ಲ. ಯಾವಾಗಲೂ ಅಸಾಮಾನ್ಯನಾಗಿ ಕಂಡರೂ ಕೂಡಾ ನಮಗೆ ಪ್ರಯೋಜನವಿಲ್ಲ. ಹಾಗಿದ್ದಲ್ಲಿ ನಾವು ಅವನನ್ನು ಅನುಸರಿಸುವುದಿಲ್ಲ. ಆದ್ದರಿಂದ ಭಗವಂತ ಸಾಮಾನ್ಯನಾಗಿಯೂ, ಅಲ್ಲಲ್ಲಿ ಶ್ರೇಷ್ಠ ಬಲವನ್ನು ತೋರಿಸುತ್ತಾ ಅಸಾಮಾನ್ಯನಾಗಿಯೂ  ಕಾಣುತ್ತಾನೆ.  ಈರೀತಿಯಾದ ಮಿಶ್ರಣ ಇರುವುದರಿಂದಲೇ ನಮಗೆ ದೇವರ ಮೆಲಿನ ಭಕ್ತಿ ಹೆಚ್ಚುತ್ತದೆ.  ದೇವರಿಂದ ಶಿಕ್ಷಣವೂ ದೊರೆಯುತ್ತದೆ.]  

No comments:

Post a Comment